ಸೋಮವಾರ, ಜುಲೈ 21, 2014

ಡೈನೋಸಾರಸ್ ನಿರ್ವಂಶವಾಗಿದ್ದು ಕ್ಷುದ್ರಗ್ರಹ ಢಿಕ್ಕಿಯಿಂದಲೇ ? - ಕೊಟ್ರೇಶ್ ಎಸ್.ಉಪ್ಪಾರ್

   


ಪುಟ್ಟ ಶಾಲಾ ಬಾಲಕರಿಗೂ ಗೊತ್ತು .65 ಮಿಲಿಯ ವರ್ಷಗಳ ಹಿಂದೆ ಜರುಗಿದ ಬೃಹತ್ ಕ್ಷುದ್ರಗ್ರಹದ ಪ್ರಬಲ ಡಿಕ್ಕಿಯಿಂದಾಗಿ ಎದ್ದ ಧೂಳಿನ ಸಾಮ್ರಾಜ್ಯದಲ್ಲಿ ಅಂದೊಮ್ಮೆ ಭೂಗೋಳದ ಮೇಲೆ ಓಡಾಡಿಕೊಂಡಿದ್ದ ದೈತ್ಯ ಡೈನೋಸರ್‍ಗಳನ್ನು ನುಂಗಿಹಾಕಿತ್ತು.  ಆಗ ಸೂರ್ಯನ ಕಿರಣಗಳು ಭೂಮಿಗೆ ಬೀಳದಂತೆ ಧೂಳಿನ ರಾಶಿಯು ಕತ್ತಲರೂಪದ ಕೊಡೆ ಹಿಡಿದುದರಿಂದ ಹಿಮಯುಗವು ಪ್ರಾರಂಭವಾಗಿತ್ತು. ಆದರೆ ಈ  ವಿಷಯದ ಬಗ್ಗೆ ಇದೀಗ ತಗಾದೆ ಎತ್ತಲಾಗಿದೆ. ಹೀಗೆ ವಿರೋಧದ ಧ್ವನಿ ಎತ್ತಿದವರು ಮೇರಿ ಲ್ಯಾಂಡ್‍ನ ವಿಜ್ಞಾನಿ ಕೆವಿನ್ ಪೊಪೆ. ಅವರ ಪ್ರಕಾರ 6 ಮೈಲುಗಳಷ್ಟು ವಿಸ್ತೀರ್ಣವಿದ್ದು ಕ್ಷದ್ರಗ್ರಹ ಅಪ್ಪಳಿಸಿದ್ದರೂ ಆ ಪರಿಣಾಮ ಉಂಟಾಗಲು ಸಾಧ್ಯ. ಮೆಕ್ಸಿಕೋದ ಯುಕಟನ್ ಪೆನಿಸ್ಸುಲಾದ ಅಗ್ರ ಪ್ರದೇಶದಲ್ಲೊಂದು ದೈತ್ಯ ಕುಳಿಯಿದೆ.  ಈ ಕುಳಿ ಒಂದೊಮ್ಮೆ ದೈತ್ಯ ಡೈನೋಸರ್‍ಗಳ ವಂಶವನ್ನೇ ನಿರ್ವಂಶ ಗೊಳಿಸಿತೆನ್ನಲಾಗುವ ಆ ಬೃಹತ್ ಕ್ಷುದ್ರಗ್ರಹದ ಡಿಕ್ಕಿಯಿಂದಾಗಿರುವುದು ಎನ್ನಲಾಗಿದೆ.  ಅದರ ಧೂಳಿನ ಬಗ್ಗೆ ಧೀರ್ಘ ಅಧ್ಯಯನನಿರತ ಕೆವಿನ್‍ರವರು ಇದೀಗ ಅವರ ವರದಿಯನ್ನು ಬಿಡುಗಡೆ ಮಾಡಿದ್ದಾರೆ.  ಅವರ ಪ್ರಕಾರ, ಆ ದೈತ್ಯ ಸಂಘಟನೆಯು ಅಗಾಧ ಧೂಳನ್ನು ಎಬ್ಬಿಸಿದ್ದು ನಿಜ, ಆದರೆ ಇಂದಿನ ವೈಜ್ಞಾನಿಕ ವಲಯ ತರ್ಕಿಸುವಂತೆ ಆ ಧೂಳು ಸಾಮ್ರಾಜ್ಯ ಅತಿ ಸೂಕ್ಷ್ಮ ತೆಳುವಾದ ಧೂಳಿನ ಕಣಗಳಿಂದ ಕೂಡಿರಲಿಲ್ಲ.  ಅಂದರೆ ಆ ಧೂಳು ಮೈಕ್ರಾನ್‍ಗಿಂತಲೂ ತೆಳುವಾಗಿರಲಿಲ್ಲ. ಅದು ದಪ್ಪ ಧೂಳಿನ ಕಣಗಳನ್ನು ಹಾಗೂ ಗಾಜಿನ ಸೂಕ್ಷ್ಮ ಗೋಲಗಳನ್ನು ಒಳಗೊಂಡಿತ್ತು.  ಅಲ್ಲದೆ ಇಡಿಯ ಭೂಮಂಡಲದಲ್ಲೆ ಧೂಳೆಬ್ಬಿಸಿ ಅಂಧಕಾರ ಉಂಟುಮಾಡುವಷ್ಟು ಧೂಳಂತೂ  ಅಲ್ಲಿರಲೇ ಇಲ್ಲ ಎನ್ನುವುದು ಕೆವಿನ್‍ರವರ ಅಭಿಪ್ರಾಯ.  ಅಲ್ಲಿನ ಧೂಳಕಣಗಳ ಮಾದರಿಯನ್ನು ಕಂಪ್ಯೂಟರ್ ಮೂಲಕ ಅಧ್ಯಯನ ಮಾಡಿದ್ದ ಕೆವಿನ್‍ರವರು ಈ ಫಲಿತಾಂಶವನ್ನು ಹೊರಹಾಕಿದ್ದಾರೆ.  ಆ ಕ್ಷುದ್ರಗ್ರಹ ಅಪ್ಪಳಿಸುವಿಕೆಯ ಪರಿಣಾಮ ಹೆಚ್ಚೆಂದರೆ 600 ಮೈಲಿಗಳಷ್ಟು ಮಾತ್ರ ಇದ್ದಿರಬಹುದು ಎಂದಿದ್ದಾರೆ ಕೆವಿನ್.  ಆದರೆ ದೈತ್ಯ ಡೈನೋಸರ್‍ಗಳ ಅಳಿವಿನ ಹಿಂದೆ ಈ ಢಿಕ್ಕಿಯ ಪರಿಣಾಮದ ಸಂಬಂಧ ಇದ್ದಿರಬಹುದು ಎಂಬುದನ್ನು ಕೆವಿನ್‍ರವರು ಸಾರಾಸಗಟಾಗಿ ನಿರಾಕರಿಸುವುದಿಲ್ಲ.  ಆದರೆ ಧೂಳಿನ ಕಾರಣದಿಂದ ಹಾಗಾಗಿದೆ ಎಂಬುದನ್ನಷ್ಟೇ ಕೆವಿನ್ ಒಪ್ಪುವುದಿಲ್ಲ. ‘ಏಕೆಂದರೆ ಯುಕಟನ್ ಪ್ರದೇಶವು ಸಲ್ಪೇಟ್ ಕಲ್ಲುಗಳ ಪ್ರದೇಶ’. ಹಾಗಾಗಿ ಈ ಪ್ರದೇಶದಲ್ಲಿ ಡಿಕ್ಕಿ ಹೊಡೆದ ಕ್ಷುದ್ರಗ್ರಹವು ಸಲ್ಫರ್ ಅನ್ನು ಬಿಡುಗಡೆ ಮಾಡಿರಬಹುದು. ಢಿಕ್ಕಿಯಾದಾಗ ಉಂಟಾದ ಬಿಸಿಯಿಂದಾಗಿ ಅದು ಆವಿಯಾಗಿ ಸಲ್ಫ್ಯೂರಿಕ್ ಆಮ್ಲದ ಮೋಡಗಳು ಭೂಮಂಡಲದ ಮೇಲೆ ಹಬ್ಬಿರಬಹುದು. ಸುಮಾರು ಒಂದು ವರ್ಷದ ಕಾಲ ಅದು ಅದೇ ಸ್ಥಿತಿಯಲ್ಲಿದ್ದುದರಿಂದ ದ್ಯುತಿ ಸಂಶ್ಲೇಷಣಾ ಕ್ರಿಯೆಗಳು ಸ್ತಬ್ಧವಾಗಿದ್ದಿರಬೇಕು.  ಅದರ ಪರಿಣಾಮ ಜಾಗತಿಕ ಶೈತೀಕರಣ” ಎಂದಿದ್ದಾರೆ ಕೆವಿನ್.  ಅವರ ಪ್ರಕಾರ, ಭೂಮಿಯ ಮೇಲೆ ವಿಜ್ಞಾನಿಗಳೀಗ ಊಹೆ ಮಾಡಿರುವಂತಹ ಪರಿಣಾಮವನ್ನು ಮಧ್ಯಮ ಗಾತ್ರದ ಕ್ಷುದ್ರ ಗ್ರಹಗಳು ಮಾಡಲು ಸಾಧ್ಯವೇ ಇಲ್ಲ.

ಯಾವ ಕ್ಷುದ್ರಗ್ರಹಗಳು ಅಪಾಯಕಾರಿ?

ಸಂಪೂರ್ಣ ಜಾಗತಿಕ ಸುಸ್ಥಿತಿಯನ್ನು ದುಸ್ಥಿತಿ ಮಾಡಬಲ್ಲಂತಹ ಪರಿಸ್ಥಿತಿ ನಿರ್ಮಾಣ ಮಾಡಲು, ಸಣ್ಣ ಪುಟ್ಟ ಕ್ಷುದ್ರ ಗ್ರಹಗಳಿಂದಂತೂ ಸಾಧ್ಯವಿಲ್ಲ.  ಅಂತಹ ಮಾರಕ ಹಾನಿ ಸಂಭವಿಸಬೇಕಾದರೆ, ಆ ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ಕನಿಷ್ಟ ಒಂದು ಮಿಲಿಯ ಮೆಗಾಟನ್  ನಷ್ಟಾದರೂ ಶಕ್ತಿ ಬಿಡುಗಡೆಯಾಗಿರಬೇಕು.  ಅಂತಹ ಶಕ್ತಿ ಬಿಡುಗಡೆ ಮಾಡಬಲ್ಲ ಸಾಮಥ್ರ್ಯ ಇರುವುದು ಒಂದರಿಂದ ಎರಡು ಕಿಲೋಮೀಟರ್ ಗಾತ್ರವಿರುವ ಕ್ಷುದ್ರ ಗ್ರಹಗಳಿಗೆ ಮಾತ್ರ.

ಗಂಡಾಂತರಕಾರಿ ಕ್ಷುದ್ರಗ್ರಹ ಅಸ್ಟೆರಾಯ್ಡ್ 1950 ಡಿಎ

ಬಾಹ್ಯಾಕಾಶದೆಡೆಗೆ ದೂರದರ್ಶಕ ಯಂತ್ರಗಳನ್ನು ತಿರುಗಿಸಿ, ಸದಾ ತನ್ಮಯರಾಗಿ ಶೋಧನೆಗೆ ತೊಡಗಿರುತ್ತಾರೆ.  ಸಾವಿರಾರು ಖಗೋಳ ವಿಜ್ಞಾನಿಗಳು ಆದರೂ ಅವರೆಲ್ಲರ ವೀಕ್ಷಣಾವಲಯದಿಂದ ಬಹುಕಾಲ ತಪ್ಪಿಸಿಕೊಂಡಿದ್ದ ಕ್ಷುದ್ರ ಗ್ರಹವೊಂದು ಇದೀಗ ಮರು ಪತ್ತೆಯಾಗಿದೆ.  ಅದೂ 50 ವರ್ಷಗಳ ನಂತರ 1950ರ ಫೆ. 23 ರಿಂದ 17 ದಿನಗಳುÀ ಕಂಡು ಬಂದಿದ್ದು, ನಂತರ ಮಸುಕಾಗಿ ಕಣ್ಮರೆಯಾಗಿದ್ದ ಕ್ಷುದ್ರಗ್ರಹವೊಂದು 2000 ಡಿ. 31ರ ಹೊಸ ವರ್ಷದ ರಾತ್ರಿಯೆಂದು ಮರುಪತ್ತೆಯಾಯ್ತು.  ದೀರ್ಘಕಾಲ ಕಳೆದು ಹೋಗಿದ್ದ ಅದರ ಹೆಸರೇ ಅಸ್ಟೆರಾಯ್ಡ್ 1950 ಡಿಎ ಗೋಲ್ಡ್‍ಸ್ಟೋನ್ ಅರೆಸಿಬೋದಲ್ಲಿ ರಾಡಾರ್ ಮೂಲಕ ನಭೋಮಂಡಲವನ್ನು ಜಾಲಾಡುತ್ತಿದ್ದಾಗ, ಕಳೆದ ವರ್ಷ ಮಾರ್ಚ್ 3ರಿಂದ 7ರವರೆಗೆ ಅದು ಮತ್ತೆ ಅಧ್ಯಯನಕ್ಕೂ ಲಭ್ಯವಾಗಿತ್ತು.  ಆಗ ಖಗೋಳ ವಿಜ್ಞಾನಿಗಳು ಹೆಚ್ಚಿನ ಅಧ್ಯಯನಗೈದರು.  ಅಸ್ಟೆಯಾಯ್ಡ್ 1950 ಡಿಎ ಭೂಮಿಯಿಂದ 78 ಮಿಲಿಯ ಕಿಲೋಮೀಟರ್ ದೂರದಲ್ಲಿದೆ ಎಂದು ಆಗ ತಿಳಿದುಬಂತು.  ಅಂದರೆ ಈ ದೂರವು, ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 21 ಪಟ್ಟು ಹೆಚ್ಚು ಅಸಮಾನ ಗೋಲಾಕಾರದಲ್ಲಿರುವ ಈ ಕ್ಷುದ್ರಗ್ರಹ 1.1 ಕಿ.ಮೀ. ವಿಸ್ತೀರ್ಣ ಹೊಂದಿದೆ.  ತನ್ನ ಕಕ್ಷೆಯ ಸುತ್ತ ಪರಿಭ್ರಮಿಸಲು ಅದು ಕೇವಲ 2.1 ಗಂಟೆಯಲ್ಲಿ ತೆಗೆದುಕೊಳ್ಳುತ್ತದೆ.  ಇದು ಇವರಿಗೆ ವೀಕ್ಷಣೆಗೆ ಲಬ್ಯವಿರುವ, ಈ ಗಾತ್ರದ ಕ್ಷುದ್ರಗ್ರಹಗಳ ಪೈಕಿ ಎರಡನೆಯ ಅತೀ ಹೆಚ್ಚಿನ ವೇಗ ಅಪಾಯಕಾರಿ ಕ್ಷುದ್ರಗ್ರಹ;  ಈ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಿದ್ದ ಗಿಯಾರಿನಿ ಎಟ್ ಅಲ್ ರವರು ಇದು ಕ್ರಿ.ಶ. 2880 ರಲ್ಲಿ ಭೂಮಿಯನ್ನು ಹಾದು ಹೋಗುತ್ತದೆ ಎಂದು ಅಂದಾಜು ಮಾಡಿದ್ದರು.  ನಂತರ ಅದು ಮಾರ್ಚ್ 16, 2880ರಂದು ಎಂದು ಖಚಿತವಾಯ್ತು.  ಅಸ್ಟೆರಾಯ್ಡ್ 1950 ಡಿಎ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ಅಧಿಕ. ಅಂದರೆ ಈ ಸಾಧ್ಯತೆ 300ರಲ್ಲಿ ಒಂದರಷ್ಟು.  ಈ ಸಾಧ್ಯತೆಯು ಸಂಪೂರ್ಣ ನಿಖರವೇನಲ್ಲ.  ಏಕೆಂದರೆ ಮುಂದಿನ ‘ರಿಸ್ಟ್’ನ ಸಂಭವನೀಯತೆಗಳು ಹೆಚ್ಚು ಕಡಿಮೆ ಆಗಲು ಸಾಧ್ಯ.  ಸಂಪೂರ್ಣ ಅಧ್ಯಯನದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ.  ಆದಾಗ್ಯೂ ಈವರೆಗೆ ಮಾಡಲಾದ ಭೂಮಿಯ ಮೇಲೆ ಅಪ್ಪಳಿಸಬಹುದಾದ ಕ್ಷುದ್ರಗ್ರಹಗಳ ಅಧ್ಯಯನದ ಪ್ರಕಾರ ‘ಅಸ್ಟೆರಾಯ್ಡ್ 1950 ಡಿಎ’ ಅತ್ಯಂತ ಅಪಾಯಕಾರಿ.  ಸರಳವಾಗಿ ಹೇಳಬೇಕೆಂದರೆ 1950 ಡಿಎ ಕ್ಷುದ್ರ ಗ್ರಹವು ಭೂಮಿಗಪ್ಪಳಿಸುವ ಸಾಧ್ಯತೆಗಳು ಶೇ.0 ಯಿಂದ ಶೇಕಡಾ 0.33 ದಷ್ಟು, ಈಗಾಗಲೇ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ತೆಗೆದ ಅಂಕಿ ಅಂಶವಿದು.  ಮುಂದೆ ಕ್ಷುದ್ರಗ್ರಹದ ಭೌಗೋಳಿಕ ಪರಿಸ್ಥಿತಿಯ ಬಗ್ಗೆ ಹೊಸ ಮಾಹಿತಿಗಳು ಅನಾವರಣಗೊಂಡಂತೆಲ್ಲಾ ಅಸಲಿ ‘ರಿಸ್ಕ್ ಎಷ್ಟು ಎಂದು ಗೊತ್ತಾಗಲಿದೆ.  ಅಪಾಯ ಉಂಟಾಗಲು ಇನ್ನೂ 878 ವರ್ಷಗಳು ಅಂದರೆ ಸುಮಾರು 35 ತಲೆಮಾರುಗಳ ಸಾಲವಿದೆ.  ಆ ವೇಳೆಗೆ ಮಾನವನ ಜ್ಞಾನ, ವಿಜ್ಞಾನದ ಸಾಮಥ್ರ್ಯ ಎರಡೂ ಇನ್ನಷ್ಟು ಬೆಳೆದಿರುತ್ತದೆ.  ಆಗ ಆ ಕ್ಷುದ್ರಗ್ರಹವನ್ನು ಭೂಮಿಗೆ ಢಿಕ್ಕಿ ಹೊಡೆಯದೆ ಮರಳಿ ಹೋಗುವಂತೆ ಮಾಡುವಲ್ಲಿ ಮಾನವ ಸಮರ್ಥನಾಗಿರುತ್ತಾನೆ.  ಆಗಷ್ಟೇ ಏಕೆ, ಈಗಿನ ತಂತ್ರಜ್ಞಾನದ ಮೂಲಕವೂ ಕೂಡಾ ಅದು ಸಾಧ್ಯವಿದೆ. ಉದಾ:  ಆ ಕ್ಷುದ್ರಗ್ರಹದ ಮೇಲೆ ಬಿಳಿಯ ಸುಣ್ಣದ ಕಲ್ಲು ಅಥವಾ ಇದ್ದಲಿನ ಪುಡಿಗಳನ್ನು ಹರಡುವುದರಿಂದ ಅಥವಾ ಸೂರ್ಯನನ್ನು ಬಣ್ಣಗಳಿಂದ ಮೋಸಗೊಳಿಸುವ ಅಕಾಶನೌಕೆಯನ್ನು ಇಳಿಸುವುದರಿಂದ ಕ್ಷುದ್ರಗ್ರಹದ ಪಥ ಬದಲಾವಣೆ ಮಾಡಲು ಸಾಧ್ಯ.  ಏಕೆಂದರೆ ಅವೆಲ್ಲವೂ ಈ ಕ್ಷುದ್ರಗ್ರಹವನ್ನು ಪಥದಿಂದ ಹಿಂದಕ್ಕೆ ಒತ್ತುವಂತೆ ಸೂರ್ಯನ ಕಿರಣಗಳು ಪ್ರತಿಫಲನ ಉಂಟುಮಾಡುತ್ತವೆ.  ಹೀಗಾಗಿ 1950 ಡಿಎ ಭವಿಷ್ಯದಲ್ಲಿ ಅಪಾಯ ತರಬಹುದಾದರೂ ಅದರ ಸಾಧ್ಯತೆಗಳನ್ನು ಇಲ್ಲವಾಗಿಸಲು ಸಾಧ್ಯವಿದೆ.


ಕೊಟ್ರೇಶ್ ಎಸ್ ಉಪ್ಪಾರ್
ಆಲೂರು






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ