‘ವಚನ ದುಂದುಭಿ’, ‘ವಚನ ದೀಪಿಕಾ’ ಮತ್ತು ‘ವಚನ ಮಾಣಿಕ್ಯ’ ವಚನ ಸಂಕಲನಗಳ ನಂತರ ಆಧುನಿಕ ವಚನಕಾರ ಕೊಟ್ರೇಶ್ ಎಸ್. ಉಪ್ಪಾರ್ ಅವರು ಈ ಮೂರನೆಯ ‘ವಚನ ಸಾನಿಕಾ’ ಸಂಕಲನವನ್ನು ಸಹೃದಯರಿಗೆ ತಲುಪಿಸುತ್ತಿದ್ದಾರೆ. ಆಧುನಿಕ ವಚನಗಳು ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವುಗಳ ನಿವಾರಣೆಯ ಕಡೆಗೆ ಓದುಗರ ಮನಸ್ಸನ್ನು ಹೊರಳಿಸುವ ಕ್ರಿಯಾಶಕ್ತಿಯ ಮೂಲಕ ಮಾತ್ರ ಸಾರ್ಥಕತೆಯನ್ನು ಹೊಂದಬಲ್ಲವು. ಕೊಟ್ರೇಶ್ ಅವರ ವಚನಗಳು ಅಂಥ ಮಾನವೀಯ ಸ್ಪಂದನದಿಂದ ಕೂಡಿವೆ.
ಕೋಮುಗಲಭೆ, ಜಾತೀಯತೆ, ಅಸ್ಪøಶ್ಯತೆ, ಮೂಢನಂಬಿಕೆ, ಭ್ರಷ್ಟಾಚಾರ, ಸ್ವಾರ್ಥ ಮತ್ತು ಮನುಷ್ಯರೊಳಗಿನ ಸಣ್ಣತನಗಳು ಅವರಿಗೆ ಕಾಡಿದ ಸಮಸ್ಯೆಗಳಾಗಿವೆ. ಈ ಸಮಸ್ಯೆ ಆಧುನಿಕ ಸಮಾಜವನ್ನು ರೋಗಿಷ್ಠ ಸಮಾಜವನ್ನಾಗಿಸುವಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸಿವೆ. ಅಂತೆಯ ಧರ್ಮಗಳ ಅನುಯಾಯಿಗಳನೇಕರು ತಮ್ಮ ಧರ್ಮಗಳೊಳಗಿನ ಸ್ಪಿರಿಚುವಲ್ ಅಂದರೆ ಅನುಭಾವದ ನೆಲೆಗಳನ್ನು ಗುರುತಿಸುವಲ್ಲಿ ಸೋಲುತ್ತಿದ್ದಾರೆ. ಎಲ್ಲ ಧರ್ಮಗಳ ಮೂಲ ದಯವೇ ಆಗಿರುವುದನ್ನು ಮರೆತಿದ್ದಾರೆ. ಧರ್ಮಗಳನ್ನು ಅಹಂಕಾರದ ಪ್ರತೀಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವು ರಾಜಕಾರಣಕ್ಕೆ ರಹದಾರಿಗಳಾಗುತ್ತಿವೆ. ಧರ್ಮಗಳ ಜೊತೆ ಪಿತೂರಿ ನಡೆಸುವಾಗ ಆಯಾ ಧರ್ಮಗಳ ಜನಸಾಮಾನ್ಯರು ಆ ಪಿತೂರಿಗೆ ಬಲಿಯಾಗುತ್ತಲೇ ಇರುತ್ತಾರೆ. ಜನಸಮಾನ್ಯರನ್ನು ಧರ್ಮದ ಒಳಗಡೆಯಿಂದ ಅಸ್ಪøಶ್ಯತೆ, ಜಾತಿ ಮತ್ತು ಅಂತಸ್ತುಗಳಿಂದ ನಿಯಂತ್ರಿಸುತ್ತಾರೆ. ಪರಧರ್ಮೀಯರ ಮೇಲೆ ದಾಳಿ ಮಾಡಲು ಅವರನ್ನು ಬಳಸಿಕೊಳ್ಳುವುದಕ್ಕಾಗಿ ಒಗ್ಗಟ್ಟಿನ ಭ್ರಮೆ ಹುಟ್ಟಿಸುತ್ತಾರೆ. ಜಾತಿವಾದಿಗಳು, ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಆ ಭ್ರಮೆಯ ಮೂಲಕ, ಆ ಭ್ರಮೆಗೆ ಒಳಗಾದವರನ್ನು ಹಿಂಸೆಯ ಕಡೆಗೆ ಹೊರಳುವಂತೆ ಮಾಡುತ್ತಾರೆ. ಕೋಮುಸೌಹಾರ್ದವನ್ನು ಕೆಡಸುತ್ತಾರೆ. ಅದರ ಪರಿಣಾಮವಾಗಿ ಸಹಸ್ರ ಸಹಸ್ರ ಜನ ಜೀವ ಕಳೆದುಕೊಳ್ಳುತ್ತಾರೆ.
ದೇಶ ಸ್ವತಂತ್ರವಾದ ಮೇಲೆ 35 ಸಾವಿರಕ್ಕೂ ಹೆಚ್ಚು ಕೋಮುಗಲಭೆಗಳು ನಡೆದಿವೆ. ಕೋಮುವಾದಿ ರಾಜಕೀಯ ನಾಯಕರು ರಾಜಸತ್ತೆಯನ್ನು ದುರುಪಯೋಗ ಮಾಡಿಕೊಂಡು ಸ್ಟೇಟ್ ಟೆರರಿಸಂ ಮೂಲಕ ಕೊಲೆ ಸುಲಿಗೆ ಮಾಡುತ್ತ ಬೇರೆ ಧರ್ಮದವರನ್ನು ಹತಾಶ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ರಾಜ್ಯಶಕ್ತಿಯನ್ನು ಹೊಂದಿರದ ಕೋಮುವಾದಿಗಳು ಭಯೋತ್ಪಾದಕರನ್ನು ಉತ್ಪಾದಿಸುತ್ತಿದ್ದಾರೆ. ಹೀಗೆ ಭಾರತ ಧರ್ಮಗಳ ಹೆಸರಿನಲ್ಲಿ ದುಷ್ಟಶಕ್ತಿಗಳ ಆಡುಂಬೊಲ ಆಗುತ್ತಿರುವುದನ್ನು ಕೊಟ್ರೇಶ್ ಗಮನಿಸಿದ್ದಾರೆ. ಧರ್ಮಗಳು, ತೋರಿಕೆಯ ದೇವರುಗಳು, ಅವಕಾಶವಾದಿಗಳ ರಾಜಕೀಯ ಭರವಸೆಗಳು ಮತ್ತು ಗೋಮುಖವ್ಯಾಘ್ರರ ಧಾರ್ಮಿಕ ಸಾಂತ್ವನದ ಮಾತುಗಳು ನಿರುಪಯುಕ್ತವಾದವುಗಳು ಎಂಬದು ಅವರ ಅರಿವಿಗೆ ಬಂದಿದೆ. ಇಂಥ ವಿಷಮ ಸ್ಥಿತಿಯಲ್ಲಿ ಮಾನವೀಯತೆ ನಲುಗುತ್ತಿರುವುದನ್ನ ಅವರು ಗಮನಿಸಿದ್ದಾರೆ. ಅವರ ವಚನಗಳು ಇಂಥ ಸಮಸ್ಯೆಗಳ ಕಡೆಗೆ ಬೆಳಕು ಚೆಲ್ಲುವಲ್ಲಿ ಸಫಲವಾಗಿವೆ.
“ಆ ಜಾತಿ ಈ ಜಾತಿಗಳೆಂಬ
ಆ ಧರ್ಮ, ಈ ಧರ್ಮಗಳೆಂಬ
ಪೊರೆಹೊತ್ತ ದೃಷ್ಟಿಹೀನರೇ
ಎಲ್ಲೆಡೆಯೂ ನೆಲೆಸಿಹರಯ್ಯಾ.’’
ಇಂದು ಮಾನವರು ಮಾನವೀಯ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಏಕೆಂದರೆ ಅವರ ಕಣ್ಣುಗಳಿಗೆ ಜಾತಿ ಧರ್ಮಗಳ ಪೊರೆ ಬಂದ ಕಾರಣ ದೃಷ್ಟಿಹೀನರಾಗುತ್ತಿದ್ದಾರೆ. ಮಾನವರಾಗಿ ಬಾಳುವ ದೃಷ್ಟಿ ಕೊಡಬೇಕಾದ ಧರ್ಮಗಳಿಗೆ ಜಾತಿ, ಅಂತಸ್ತು ಮತ್ತು ಪರಧರ್ಮಗಳ ಬಗ್ಗೆ ಅಸಹನೆಯ ರೋಗಗಳು ಅಂಟಿಕೊಂಡಿರುವುದರಿಂದ ಅವು ದೃಷ್ಟಿಹೀನರನ್ನು ಸೃಷ್ಟಿಸುತ್ತಿವೆ. ಇಂಥವರೇ ವಿವಿಧ ಧರ್ಮಗಳ ಮುಂದಾಳುಗಳಾಗಿದ್ದಾರೆ. ತಮ್ಮ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ. ತಮ್ಮ ತಮ್ಮ ಧರ್ಮಗಳು ಗಂಡಾಂತರವನ್ನು ಎದುರಿಸುತ್ತಿವೆ ಎಂದು ಕೂಗು ಹಾಕುತ್ತಾರೆ. ಮುಗ್ಧಜನರಲ್ಲಿ ಧರ್ಮದ ಅಮಲು ಏರುವಂತೆ ಮಾಡುತ್ತಾರೆ. ಅವರು ಹುಚ್ಚೆದ್ದು ತಮ್ಮ ಜೀವವನ್ನೂ ಕಳೆದುಕೊಳ್ಳಲು ಸಿದ್ಧರಾಗುತ್ತಾರೆ. ಇದು ಇಂದಿನ ಭಾರತದ ಚಿತ್ರಣವಾಗಿದೆ. ಧರ್ಮಗಳಲ್ಲಿನ ಇಂಥ ಸ್ವಾರ್ಥಿ ರಾಜಕೀಯ ನಾಯಕರು ಮತ್ತು ಧಾರ್ಮಿಕ ನಾಯಕರಿಂದಾಗಿಯೆ ವಿವಿಧ ಧರ್ಮಗಳ ಜನರು ಬೀದಿ ಹೆಣಗಳಾಗುತ್ತಿದ್ದಾರೆ.
“ಗುಡಿ, ಚರ್ಚು, ಮಸೀದಿಗಳಲ್ಲಿ
ಬಂದೂಕು, ಬಾಂಬು, ಚಾಕು, ಚೂರಿಗಳದ್ದೇ
ಅಟ್ಟಹಾಸವಯ್ಯಾ.’’
ಧಾರ್ಮಿಕ ಕೇಂದ್ರಗಳಲ್ಲಿ ಮಾನವರ ಮನಸ್ಸುಗಳು ಚಾಕು, ಚೂರಿಗಳಾಗುತ್ತಿವೆ. ಬಂದೂಕುಗಳಾಗಿ ಕೊನೆಗೆ ಬಾಂಬುಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಬೀದಿಗೆ ಬಂದು ಸಾವಿನ ನರ್ತನ ಮಾಡುತ್ತಿವೆ. ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿವೆ. ಮಾನವರನ್ನು ಒಂದು ಮಾಡುವ ಹೊಣೆ ಹೊತ್ತ ಧರ್ಮಗಳನ್ನು ಈ ರೀತಿ ದುರ್ಬಳಕೆ ಮಾಡುವಲ್ಲಿ ದುಷ್ಟಶಕ್ತಿಗಳು ಸಫಲವಾಗುತ್ತಿವೆ.
“ಗುಡಿ, ಚರ್ಚು, ಮಸೀದಿಗಳೆಲ್ಲೆಗಳ
ಮೀರಿ ಸಾಗಬೇಕಯ್ಯಾ.
ರಾಮ, ರಾಬರ್ಟ್, ರಹೀಮರ
ಜೀವಗಳೊಂದೇ ಆಗಬೇಕಯ್ಯಾ.’’
ಎಂಬುದು ಈ ಆಧುನಿಕ ವಚನಕಾರರ ಆಶಯವಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಆಶಯವಾದಾಗ ಮಾತ್ರ ಭಾರತ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ. ಗುಡಿ, ಚರ್ಚು ಮತ್ತು ಮಸೀದಿಗಳ ಎಲ್ಲೆಗಳನ್ನು ಮೀರುವುದೆಂದರೆ ಅವುಗಳ ನಿಜವಾದ ಆಶಯಗಳ ಕಡೆಗೆ ಹೋಗುವುದು ಎಂದೇ ಅರ್ಥ. ಮಾನವ ಏಕತೆಯನ್ನು ಸಾಧಿಸುವುದೇ ಧರ್ಮಗಳ ಗುರಿಯಾಗಿರುವುದರಿಂದ ಈ ಮೀರುವ ಕ್ರಿಯೆ ರಾಮ, ರಾಬರ್ಟ್ ಮತ್ತು ರಹೀಮರನ್ನು ಒಂದಾಗಿಸುವುದೇ ಆಗಿದೆ.
“ಗುಡಿ, ಚರ್ಚು, ಮಸೀದಿ
ಬಸದಿ, ವಿಹಾರಗಳಲ್ಲಿ
ನಿನ್ನ ನೆಲೆ ನಿಜವೇನಯ್ಯಾ?’
ಎಂದು ದೇವರನ್ನು ಪ್ರಶ್ನಿಸುವಲ್ಲಿ ‘ಇಲ್ಲ’ ಎಂಬ ಉತ್ತರವಿದೆ. ದೇಹವೇ ದೇಗುಲವಾದಾಗ ದೇವರು ಸಕಲ ಜೀವಾತ್ಮರ ದೇಹಗಳಲ್ಲೇ ಇರುವಂಥವನಾಗಿದ್ದಾನೆ. ಅವನನ್ನು ಕಲ್ಲು ಮಣ್ಣುಗಳ ಪೂಜಾ, ಪ್ರಾರ್ಥನೆ ಮತ್ತು ಧ್ಯಾನಗಳ ಸ್ಥಾನಗಳಲ್ಲಿ ಹುಡುಕಲು ಸಾಧ್ಯವೆ? ನಮ್ಮೊಳಗಿನ ದೇವರನ್ನು ಹುಡುಕುವುದೇ ಸಾಹಸದ ಕಲೆಯಾಗಿರುವಾಗ ಅದನ್ನೆಲ್ಲ ಬಿಟ್ಟು ಮಾನವ ದಾರಿ ತಪ್ಪುತ್ತಿದ್ದಾನೆ ಎಂಬ ಆತಂಕವನ್ನು ಈ ಸಾಲುಗಳು ಹೊಂದಿವೆ.
“ಏಕತಾನತೆಯಿಂದ ದೂರಾಗು
ಏಕತೆಯನ್ನು ತೊರೆಯದಿರಯ್ಯಾ.’’
ಏಕತೆಯನ್ನು ಸಾಧಿಸಬೇಕಾದರೆ ಏಕತಾನತೆಯಿಂದ ದೂರಾಗಲೇ ಬೇಕಾಗಿದೆ. ಧಾರ್ಮಿಕ ಸಂಪ್ರದಾಯಗಳು ಆಯಾ ಧರ್ಮಗಳ ಅನುಯಾಯಿಗಳಲ್ಲಿ ಏಕತಾನತೆಯನ್ನು ಮೂಡಿಸಿವೆ. ಹೀಗಾಗಿ ಅವರು ತಮ್ಮ ಧರ್ಮಗಳ ನಿಜಸ್ವರೂಪವನ್ನು ಅರ್ಥೈಸಿಕೊಳ್ಳದ ಕಾರಣ ಸ್ವರೂಪಗೊಂದಲಕ್ಕೀಡಾಗಿದ್ದಾರೆ. ಏಕತೆಯನ್ನು ಸಾಧಿಸದ ಕಾರಣ ಏಕತಾನತೆಯಿಂದ ಬಳಲುತ್ತಿದ್ದಾರೆ. ಏಕತೆಯನ್ನು ಸಾಧಿಸದ ಮನಸ್ಸು ವಿಚ್ಛಿದ್ರಕಾರಿ ಕೃತ್ಯಗಳಿಗೆ ಮಾರುಹೋಗುತ್ತದೆ. ಅದುವೇ ಧರ್ಮ ರಕ್ಷಣೆಯ ಮಾರ್ಗವೆಂದು ಭಾವಿಸುತ್ತದೆ. ಈ ಮನಸ್ಥಿತಿಯು ಎಂಥ ವಿಧ್ವಂಸಕ ಕೃತ್ಯಗಳಿಗೂ ಹೇಸುವುದಿಲ್ಲ. ಇಂಥ ಮನಸ್ಸುಳ್ಳವರು ಹಿಂಸೆಯಿಂದ ವಿಜಯೋನ್ಮಾದಕ್ಕೆ ಒಳಗಾಗುತ್ತಾರೆ. ಕೊನೆಗೆ ಹಿಟ್ಲರ್ನ ಪ್ರತಿರೂಪವಾಗುತ್ತಾರೆ. ಇಂಥವರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಎಲ್ಲ ಧರ್ಮಗಳ ಮಾನವತಾವಾದಿಗಳು ಒಂದುಗೂಡಿ ಇಂಥ ದುಷ್ಟಶಕ್ತಿಗಳ ವಿರುದ್ಧ ಹೋರಾಡದಿದ್ದರೆ ಜೀವನದುದ್ದಕ್ಕೂ ಅಂಥವರ ಗುಲಾಮರಾಗಿಯೇ ಬದುಕಬೇಕಾಗುತ್ತದೆ.
“ಪರರ ಕುಶಲವ ಕೇಳುವುದೇ
ನಿತ್ಯದ ಪಥವಯ್ಯಾ.
ಪರರ ಬಾಳ ಏಳ್ಗೆ ಬಯಸುವುದೇ
ನಿತ್ಯದ ಧರ್ಮವಯ್ಯಾ.”
ಹೀಗೆ ಕೊಟ್ರೇಶ್ ಧರ್ಮವನ್ನು ವ್ಯಾಖ್ಯಾನಿಸುತ್ತಾರೆ. ಪರರ ಏಳ್ಗೆಯನ್ನು ಬಯಸುವುದೇ ಧರ್ಮವಾದಾಗ ಪರರ ಕುಶಲವನ್ನು ಕೇಳುವುದೇ ಧರ್ಮಪಥವಾಗುತ್ತದೆ. ಇಂಥ ಧರ್ಮಪಥವೇ ಬಸವಾದಿ ಶರಣರ ಸಲ್ಲಲಿತ ಸನ್ಮಾರ್ಗವಾಗಿತ್ತು. ಅಂತೆಯೆ ಬಸವಣ್ಣನವರು ‘ದೇವರು ಧರ್ಮದ ಮೂಲ’ ಎಂದು ಹೇಳಲಿಲ್ಲ. “ದಯವೇ ಧರ್ಮದ ಮೂಲ” ಎಂದು ಹೇಳಿದರು. ದಯೆಯೆ ದೇವರಾಗುವುದು. ಪರರ ಬಾಳ ಏಳ್ಗೆಯನ್ನು ಬಯಸುವುದೇ ಬಸವಣ್ಣನವರ “ದಯೆ” ಆಗಿದೆ. ಹೀಗೆ ಸಕಲ ಜೀವಾತ್ಮರಿಗೆ ಲೇಸನೆ ಬಯಸುತ್ತ, ಸಕಲ ಜೀವ ದಯಾ ಅಪಾರಿ ಆಗಿ ಮಾನವನನ್ನು ಪರಿವರ್ತಿಸುವುದೇ ಧರ್ಮಗಳ ಕಾರ್ಯವಾಗಿದೆ. ನಿಜವಾದ ಅರ್ಥದಲ್ಲಿ ಇಂಥ ಅರಿವಿನ ಧರ್ಮ ಒಂದೇ ಆಗಿದೆ. ಮಾನವರು ತಮ್ಮ ದೇಶ ಕಾಲಕ್ಕನುಗುಣವಾಗಿ ವಿವಿಧ ಧರ್ಮಗಳನ್ನು ಪಡೆದಿದ್ದರೂ ಆ ಧರ್ಮಗಳ ಸಾರ ಒಂದೇ ಆಗಿದೆ. ಆ ಸಾರವೇ ಅಂತಃಕರಣ. ಆದರೆ ಇಂದು ಸ್ವಾರ್ಥಿಗಳು ಧರ್ಮದ ಬೆಳಕು ಹೊರಹೊಮ್ಮದಂತೆ ಅಜ್ಞಾನದ ಪರದೆಯನ್ನು ಅಡ್ಡ ಹಿಡಿದಿದ್ದಾರೆ. ಅಂತೆಯೆ ಎಲ್ಲೆಡೆ ಗಾಢಾಂಧಕಾರ ಆವರಿಸುತ್ತಿದೆ.
“ಈ ಅಂಧಕಾರದ ಬೀಡಿನಲಿ
ಬೇಲಿಯ ಮೇಲಿನ
ಮಿಣುಕು ಹುಳದಂತಿಕ್ಕಯ್ಯಾ”
ಎಂದು ಈ ವಚನಕವಿ ತಮ್ಮ ಆರಾಧ್ಯ ದೈವವಾದ ಕೊಟ್ಟೂರೇಶ್ವರನಲ್ಲಿ ಬೇಡಿಕೊಳ್ಳುತ್ತಾರೆ. ಈ ಬೇಡಿಕೊಳ್ಳುವಿಕೆಯಲ್ಲಿ ಆಶಾಭಾವವಿದೆ. ಹೊಸ ಮಾನವೀಯತೆಯ ಉದಯಕ್ಕಾಗಿ ಕಾಯುವ ಛಲವಿದೆ. ಸ್ವಯಂಪ್ರಕಾಶವಾಗಿ ಮುನ್ನಡೆಯುವ ಹಂಬಲವಿದೆ. ಮನುಷ್ಯತ್ವವನ್ನು ನಂಬಿದವರು ಎಂಥ ವಿಷಮ ಪರಿಸ್ಥಿತಿಯಲ್ಲೂ ಎದೆಗುಂದುವುದಿಲ್ಲ. ಅವರು ಮಾನವೀಯವಾದುದನ್ನೇ ಸಾಧಿಸುವಲ್ಲಿ ನಿರತರಾಗಿರುತ್ತಾರೆ. ಅದಕ್ಕಾಗಿ ಎಂಥ ಅಡೆತಡೆಗಳು ಕೂಡ ಅವರನ್ನು ಧೃತಿಗೆಡಿಸುವುದಿಲ್ಲ.
“ಮೂರ್ತಿಪೂಜೆ, ಭಜನೆಗಳು
ತಾತ್ಕಾಲಿಕ ಆನಂದದ ಮಾರ್ಗಗಳಯ್ಯಾ.
ಪ್ರೀತಿ. ದಯೆ. ಹೃದಯವೈಶಾಲ್ಯ
ಶಾಶ್ವತ ಆನಂದದ ನೆಲೆಗಳಯ್ಯಾ.”
ಬಾಹ್ಯದ ಧಾರ್ಮಿಕ ಕ್ರಿಯೆಗಳು ಅಂತಃಸತ್ವದ ಸಂಬಂಧವನ್ನು ಕಳಚಿಕೊಂಡಾಗ ಯಾಂತ್ರಿಕವಾಗುತ್ತವೆ. ಇಡೀ ಧರ್ಮದ ಆಚರಣೆಗಳೆಲ್ಲ ಯಾಂತ್ರಿಕ ಕ್ರಿಯೆಗಳಾಗುತ್ತ ಮಾನವೀಯತೆ ಎಂಬುದು ನಾಲಗೆಯ ಮೇಲೆ ಶಬ್ದ ರೂಪ ತಾಳಿ ಉದುರತ್ತ ಹೋಗುತ್ತದೆ. ಹೀಗಾಗಿ ಧರ್ಮಗಳು ಹೃದಯವನ್ನು ತಟ್ಟದೆ ಹೋಗುತ್ತವೆ. ಪ್ರೀತಿ, ದಯೆ ಮತ್ತು ಹೃದಯವೈಶಾಲ್ಯ ಮಾತ್ರ ಶಾಶ್ವತ ಆನಂದದ ನೆಲೆಗಳಾಗುವವರೆಗೆ ಮಾನವ ಬಳಲುತ್ತಲೇ ಸಾಗಬೇಕಾಗಿದೆ.
“ಸ್ವಾರ್ಥಕ್ಕಾಗಿ ಸ್ವಾಭಿಮಾನವ
ಕಳಚಿದವರ ಕಂಡೆನಯ್ಯಾ.
ಸ್ಥಾನಕ್ಕಾಗಿ ಸತ್ಯವ ಮರೆಮಾಚಿದವರ ಕಂಡೆನಯ್ಯಾ.’’
ಸ್ವಾರ್ಥಕ್ಕಾಗಿ ಸ್ವಾಭಿಮಾನವನ್ನು ಬಿಟ್ಟವರು ಮತ್ತು ಅಧಿಕಾರ ಸ್ಥಾನಕ್ಕಾಗಿ ಸತ್ಯವನ್ನು ಮರೆಮಾಚಿದವರು ಬೇರೆಯವ ಬಗ್ಗೆ ಮಾನವೀಯವಾಗಿ ವರ್ತಿಸಲು ಸಾಧ್ಯವೇ ಇಲ್ಲ. ಅವರು ಧರ್ಮವನ್ನು ತಮ್ಮ ಕೈಯಲ್ಲಿನ ಖಡ್ಗವಾಗಿಸುತ್ತಾರೆ. ಧರ್ಮದ ಹೆಸರಿನಲ್ಲೇ ಎಲ್ಲ ತೆರನಾದ ಅನ್ಯಾಯಗಳನ್ನು ಮಾಡುತ್ತ ಸಾಗುತ್ತಾರೆ. ಕೊನೆಗೆ ಅವರೇ ಧರ್ಮರಕ್ಷಕರೆಂದು ಜನ ಭಾವಿಸುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಅಂತೆಯೆ “ವೇದಕ್ಕೆ ಒರೆಯ ಕಟ್ಟುವೆ’’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಒರೆ ಎಂದರೆ ಖಡ್ಗಕೋಶ. ವೇದವೆಂಬ ಖಡ್ಗವನ್ನು ಖಡ್ಗಕೋಶದಲ್ಲಿ ಇಡುವೆ ಎಂದರೆ ‘ಧರ್ಮವನ್ನು ಶಸ್ತ್ರವಾಗಿ ಬಳಸಲು ಬಿಡುವುದಿಲ್ಲ’ ಎಂದು ಬಸವಣ್ಣನವರು ಹೇಳುತ್ತಾರೆ. ಹೀಗೆ ದುಷ್ಟರು ಶಾಸ್ತ್ರವನ್ನು ಶಸ್ರ್ರವನ್ನಾಗಿಸಿ ಅಟ್ಟಹಾಸ ಮೆರೆಯುತ್ತಾರೆ. ಮಾನವರಿಗೆ ನಿಜವಾದ ಮಾನವೀಯ ಧರ್ಮದ ದರ್ಶನ ಮಾಡಿಸುವವರೆಗೆ ಇಂಥ ನೀಚಕೃತ್ಯಗಳು ಮುಂದುವರಿಯುತ್ತಲೇ ಇವೆ. ಅಂತೆಯೆ “ನಿನ್ನ ಸುತ್ತಿಪ್ಪುದು ಡಂಬಾಚಾರದ ಭಕ್ತಿಯಯ್ಯಾ.” ಎಂದು ಕವಿ ತಿಳಿಸುತ್ತಾರೆ.
“ಮನದಾಳದಿ ಕೈಯ ಮುಗಿವೆನಯ್ಯಾ
ಮಾನವತೆಯುಳ್ಳ ಮುನುಜರಿಗೆ
...
ದುಡಿದು ತಿನ್ನುವ ಜೀವಿಗಳಿಗೆ
ಮನಸಾರೆ ಮಿಡಿಯುವೆನಯ್ಯಾ.”
ಎಂಥ ಪ್ರಸಂಗದಲ್ಲೂ ಮಾನವೀಯತೆ ಸಾಯುವುದಿಲ್ಲ ಎಂಬ ಆಶಾಭವ ಕವಿಗೆ ಇದೆ. ದುಡಿದು ತಿನ್ನುವ ಜೀವಿಗಳು ನಿಜವಾದ ಧರ್ಮವಂತರಾಗಿರುತ್ತಾರೆ. ಅಂಥವರು ದೈನಂದಿನ ಕಷ್ಟಕಾರ್ಪಣ್ಯಗಳಿಂದಾಗಿ ಬಳಲಿದರೂ ನಮ್ಮಲ್ಲಿ ಮತ್ತೆ ಮತ್ತೆ ಆಶಾಭಾವ ಮೂಡಿಸುವಂಥವರಾಗಿರುತ್ತಾರೆ. “ಬಳಲಿದವರ ಬಾಯಿಗೆ ನೀರಾಗಿಸಯ್ಯಾ.” ಎಂದು ಬಯಸುವಲ್ಲಿ ಕವಿ ಮಾನವೀಯತೆ ಉತ್ತುಂಗವನ್ನು ತಲಪುತ್ತಾನೆ.
ಕೊಟ್ರೇಶ್ ಅವರು 12ನೇ ಶತಮಾನದ ವಚನಕಾರರ ವಚನಗನ್ನಡ ಶಕ್ತಿಯನ್ನು ತಮ್ಮದಾಗಿಸಿಕೊಂಡು ಇನ್ನೂ ಹೆಚ್ಚಿನ ವಚನಗಳನ್ನು ಬರೆಯಲಿ ಎಂದು ಆಶಿಸುವೆ.
ರಂಜಾನ್ ದರ್ಗಾ
ಬೆಂಗಳೂರು
03. 11. 2013
(ಬೆಳಕಿನ ಹಬ್ಬ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ