ಬುಧವಾರ, ಜುಲೈ 23, 2014

ವೈವಿಧ್ಯಮಯ ವಿಷಯ ಹೂರಣ-“ಹಬ್ಬಗಳು,ಜನಪದರ ನಂಬಿಕೆಗಳು”- ಕೊಟ್ರೇಶ್ ಎಸ್. ಉಪ್ಪಾರ್


ಲೇಖಕ ಒಬ್ಬ ಸಮಾಜ ಜೀವಿ, ಇತರರಂತೆ ಅವನೂ ಸಮಾಜದ ಮಧ್ಯೆ ಬದುಕುತ್ತಾನೆ. ಇತರರಿಗಾಗುವ ಅನುಭವಗಳು ಆತನಿಗೂ ಆಗುತ್ತದೆ. ಆದರೆ ಲೇಖಕ ತನ್ನಲ್ಲಿರುವ ವಿಶಿಷ್ಟ ಶಕ್ತಿಯಿಂದಲೋ ಅಥವಾ ಶಿಕ್ಷಣದಿಂದಲೋ ತನಗೆ ಅನಿಸಿದ್ದನ್ನು ಭಾಷೆಯಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಲ್ಲ. ಅಷ್ಟರ ಮಟ್ಟಿಗೆ ಅವನು ತನ್ನ ಕಾಲದ ಪರಿಸ್ಥಿತಿಗೆ ಬದ್ಧನಾಗಿರುತ್ತಾನೆ. ಕಾಲ ಕಾಲಕ್ಕೆ ಜನಜೀವನದಲ್ಲಿ ಅನೇಕ ಬದಲಾವಣೆಗಳಾಗಬಹುದು, ಸಮಾಜ ಜೀವನದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡ ಲೇಖಕನ ಕೃತಿಯಲ್ಲಿ ಆ ಸಮಾಜ ಜೀವನ ಒಂದಲ್ಲ ಒಂದು ರೀತಿಯಲ್ಲಿ ಮೂರ್ತ ಸ್ವರೂಪ ಪಡೆದಿರುತ್ತದೆ. ಒಬ್ಬ ಬರಹಗಾರನು ತನ್ನ ಬದುಕಿನ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಶಕ್ತಿಗಳನ್ನು ಕುರಿತಂತೆ ಮೊದಲೇ ಹೊಂದಿರುವ ಅಥವಾ ಕೃತಿ ರಚನೆಯ ಮೂಲಕವೇ ಕಂಡುಕೊಳ್ಳುವ ವೈಚಾರಿಕವಾದ ತಿಳುವಳಿಕೆಯನ್ನು ಆತನ ‘ಸಾಮಾಜಿಕ ಪ್ರಜ್ಞೆ’ಎಂದು ಕರೆಯಬಹುದು.
ಇಂತಹ ಸಾಮಾಜಿಕ ಪ್ರಜ್ಞೆ ಎಂಬ ಆಶೋತ್ತರಗಳನ್ನು ಹೊತ್ತುಕೊಂಡು ಕಳೆದ ಮೂರು ದಶಕಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಾದ ವ್ಯಕ್ತಿ ಚಿತ್ರಣ, ಕ್ಷೇತ್ರದರ್ಶನ, ಕಾವ್ಯ, ಹನಿಗವನ, ಕಥೆ, ಬಹುಮುಖ್ಯವಾಗಿ ನಾಟಕಗಳು, ಅಂಕಣ ಬರಹಗಳು, ನಾಟಕ ವಿಮರ್ಶೆಗಳು, ಕೃತಿ ವಿಮರ್ಶೆಗಳು ಹೀಗೆ ಅನೇಕಾನೇಕ ಸ್ತರಗಳಲ್ಲಿ ತೊಡಗಿಸಿಕೊಂಡು  ಯಶಕಂಡವರೆಂದರೆ ಗೊರೂರು ಅನಂತರಾಜುರವರು.
ಈಗಾಗಲೇ ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವದ ಲೋಕಕ್ಕೆ ನೀಡಿ ರಾಜ್ಯಾ ವ್ಯಾಪಿ ಪರಿಚಿತರಾಗಿದ್ದಾರೆ. ತಾಲ್ಲೂಕು, ಜಿಲ್ಲಾ, ದಸರಾ ಹಾಗೂ ರಾಜ್ಯ ಮಟ್ಟದ ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಖರತೆ ಪಡೆದುಕೊಂಡಿದ್ದಾರೆ.
ಪ್ರಸ್ತುತ ಕೃತಿಯು ಅನಂತರಾಜಿರವರ ಬಿಡಿ ಬರಹಗಳ ಸಂಕಲನವಾಗಿದ್ದು ಇದರಲ್ಲಿ ವ್ಯಕ್ತಿ ವಿಶೇಷತೆಗಳು, ರಂಗಪರಂಪರೆ, ವೈಚಾರಿಕತೆ, ಪರಿಸರ ಮತ್ತು ಹಬ್ಬಗಳು ಜನಪದ ವಿಷಯಗಳಿಗೆ ಸಂಬಂಧಿಸಿದ ಬರಹಗಳಿದ್ದು, ಪ್ರತಿಯೊಂದು ಲೇಖನಗಳು ಓದುಗನನ್ನು ಬೇಸರಗೊಳಿಸದೇ ಆಸಕ್ತಿದಾಯಕವಾಗಿ ಹಾಗೂ ಸಾಂಗವಾಗಿ ಓದಿಸಿಕೊಂಡು ಹೋಗುತ್ತವೆ.
ವಚನ ವಸ್ತ್ರವನ್ನು ನೇಯ್ದ ಆದ್ಯ ವಚನಕಾರ ದೇವರ ದಾಸಿಮಯ್ಯ; ನೂರರ ನೆನಪಿನಲ್ಲಿ ಮತಿಘಟ್ಟ ಕೃಷ್ಣಮೂರ್ತಿ-ಜಾನಪದ ಹಾಡುಗಳ ಸೊಗಡು; ಭಿತ್ತಿಯೊಂದಿಗೆ ಸಂಪತ್ತಯ್ಯಂಗಾರ್‍ರ ನೆನಪಿನ ಬುತ್ತಿ ; ರಂಗಸಂಗೀತ ಸಮ್ಮೇಳನಾಧ್ಯಕ್ಷ ಚೌಡಪ್ಪದಾಸರೊಂದಿಗೆ; ರಂಗಭೂಮಿ ಹಾದಿಯಲ್ಲಿ ಆರ್. ಪರಮಶಿವನ್ ; ಡಾ. ಮಳಲಿ ವಸಂತ್‍ಕುಮಾರ್‍ರವರ ಜೀವನ ಸಾಧನೆ ಇವುಗಳಲ್ಲಿ ವ್ಯಕ್ತಿ ವಿಶೇಷತೆಗಳಡಿಯಲ್ಲಿ ಬರುತ್ತವೆ.
ಬಯಲಾಟಗಳಲ್ಲಿ ರಸ ಪ್ರಸಂಗಗಳು ; ಹಾಸನ ಜಾತ್ರೆಯಲ್ಲಿ ನಾಟಕ ಕಂಪನಿಗಳು : ನಾಟಕ ನೋಡಿದ ನೆನಪಿನಲ್ಲಿ ; ಈ ಬರಹಗಳು ರಂಗಪರಂಪರೆಯಡಿಯಲ್ಲಿ ಬಿಂಬಿತವಾಗಿವೆ.
ವಿದ್ಯೆ ಕಲಿಸದಾ ತಂದೆ : ಬುದ್ಧಿ ಹೇಳದಾ...ಶುದ್ಧ ವೈರಿಗಳು-ಸರ್ವಜ್ಞ : ಬರೆದಂತೆ ನಡೆಯಲು ಸಾಧ್ಯವಿಲ್ಲ ಏಕೆಂದರೆ: ಹಬ್ಬಗಳು, ಜನಪದರ ನಂಬಿಕೆಗಳು, ವೈಜ್ಞಾನಿಕ ಚಿಂತನೆಗಳು ಇವು ವೈಚಾರಿಕ ಬರಹಗಳಡಿಯಲ್ಲಿ ಬಂದರೆ ಇನ್ನುಳಿದಂತೆ ಹಸಿರು ಹೊನ್ನ ಸಿರಿಯು, ಪಶ್ಚಿಮಘಟ್ಟ ಪರಿಸರವು ; ಶಾಂತಿಗ್ರಾಮದ ಜಾನಪದ ತಿಂಗಳ ಮಾಮನ ಹಬ್ಬ ಇವು ಪರಿಸರ ಮತ್ತು ಆಚರಣೆಗೆ ಸಂಬಂಧಿಸಿದವುಗಳಾಗಿವೆ. ಹೀಗೆ ಪ್ರಸ್ತುತ ಕೃತಿಯಲ್ಲಿನ ಹದಿನಾಲ್ಕು ಲೇಖನಗಳನ್ನು ಮೇಲಿನಂತೆ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.
ವ್ಯಕ್ತಿ ವಿಶೇಷತೆಗಳಡಿಯಲ್ಲಿ ಬರುವ ಮೊದಲ ಲೇಖನ ಆದ್ಯ ವಚನಕಾರ, ವಚನ ಸಾಹಿತ್ಯದ ಮೂಲ ಬೇರಾದ ದೇವರ ದಾಸಿಮಯ್ಯನವರು ಕನ್ನಡ ಸಾಹಿತ್ಯ ಚರಿತ್ರೆಗೆ ನೀಡಿದ ಅತ್ಯಮೂಲ್ಯ ಕಾಣಿಕೆ, ಅವರ ಸರಳ, ಆದರ್ಶನೀಯ ಬದುಕು, ಸಮಾಜಿಕ ತಲ್ಲಣಗಳ ಕುರಿತು ಕಳಕಳಿ ಬಗ್ಗೆ ಲೇಖಕರು ಚಿತ್ರಿಸಿದ್ದಾರೆ. ಆದರೆ ಈ ಕೃತಿಯಲ್ಲಿ ಬರುವ ಇತರ ವ್ಯಕ್ತಿಗಳಿಗೂ ಹಾಗೂ ಆದ್ಯ ವಚನಕಾರ ದೇವರ ದಾಸಿಮಯ್ಯಾರಿಗೂ ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ ಇಲ್ಲಿ ಬರುವ ಇತರ ಪಾತ್ರಗಳು ಹಾಸನ ಜಿಲ್ಲೆಯ ಸ್ಥಳೀಯವಾಗಿದ್ದರೆ, ಅದರಲ್ಲೂ 20 ಶತಮಾನದವರಾಗಿದ್ದಾರೆ. ಈ ಸಾಲಿನಲ್ಲಿ ಆದ್ಯರ ಲೇಖನ ಅಷ್ಟೊಂದು ಔಚಿತ್ಯವೆಸಿಸುತ್ತಿಲ್ಲ.
ಮೊದಲ ಭಾಗದಲ್ಲಿನ ದ್ವಿತೀಯ ಲೇಖನ ಮತಿಘಟ್ಟ ಕೃಷ್ಣಮೂರ್ತಿಯ ಜೀವನದ ಸ್ಥಿತ್ಯಂತರಗಳ ಮೇಲೆ ಬೆಳಕು ಚಲ್ಲುತ್ತದೆ. ಲೇಖಕರು ಒಮ್ಮೆ ಜಾವಗಲ್‍ಗೆ ಹೋಗುವಾಗ ಬೇಲೂರು ತಾಲ್ಲೂಕಿಗೆ ಸೇರಿದ ಮತಿಘಟ್ಟದ ಬಳಿ ಹಾದು ಹೋಗುವಾಗ ಕೃಷ್ಣಮೂರ್ತಿಯವರ ನೆನಪಾಗಿ, ಅದೇ ಸ್ಫೂರ್ತಿಯಿಂದ ಪ್ರಸ್ತುತ ಲೇಖನ ಮೈದಾಳಿತು. ಕೃಷ್ಣಮೂರ್ತಿಯವರ ಬಾಲ್ಯ, ಬದುಕು, ಜಾನಪದ ಸಂಗ್ರಹಕ್ಕಾಗಿ ಅವರು ಊರೂರು ಅಲೆದು ಸಂಗ್ರಹಿಸಿ ಹೊತ್ತಿಗೆಯಾಗಿಸಿದ ಪರಿಯನ್ನು ಅನಂತರಾಜುರವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.
ಇದರಲ್ಲಿ ಬರುವ ತೃತೀಯ ಲೇಖನ ಡಾ. ಗೊರೂರು ರಾಮಸ್ವಾಮಿ ಅಯ್ಯಾಂಗರ್‍ರ ಸಮಕಾಲೀನರಾಗಿದ್ದ ದಿವಂಗತ ಜಿ.ಎಸ್. ಸಂಪತ್ತಯ್ಯಂಗಾರ್. ರಾಮಯಾಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ತನ್ನದೇ ಆದ ಚಿತ್ತದಲ್ಲಿ ವಿಮರ್ಶಿಸಿ, ವಾಲ್ಮೀಕಿ ಬರೆದ ರಾಮನ ಚರಿತ್ರೆ ಗ್ರಂಥದಲ್ಲಿ ಕೈಬಿಟ್ಟ ಉಂಗುರದ ವ್ಯವಹಾರ ಸಮಸ್ಯೆಯನ್ನು ಮನೋಜ್ಞವಾಗಿ ಚಿತ್ರಿಸಿ ಹೊಸತನವನ್ನು ಮೆರೆದ ಕೀರ್ತಿ ಸಂಪತ್ತಯ್ಯಂಗಾರ್‍ರವರಿಗೆ ಸಲ್ಲುತ್ತದೆ. ಇವರ ಕುರಿತಾಗಿ ಲೇಖನ ಬರೆಯುವ ಸಂದರ್ಭದಲ್ಲಿ ಲೇಖಕರು ಸಂಪತ್ತಯ್ಯಂಗಾರ್‍ರವರ ಪುತ್ರರಾದ ಶೇಷಗಿರಿ ಅವರಿಗೆ ಪತ್ರ ಬರೆದು ಅವರ ಕೃತಿಗಳನ್ನು ತರಿಸಿಕೊಂಡು ವಿಚಾರ ಸಂಕೀರ್ಣ ಮಾಡಿ, ಅವರ ಸಂಪೂರ್ಣ ಚಿತ್ರಣವನ್ನು, ಸಾಹಿತ್ಯಿಕ ಸಾಧನೆಯನ್ನು ಕಟ್ಟಿಕೊಡುವಲ್ಲಿ ಲೇಖಕರು ತುಂಬಾ ಶ್ರಮಿಸಿದ್ದಾರೆ.
ನಂತರ 2002ರಲ್ಲಿ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಐದನೇ ರಂಗಸಂಗೀತ ಸಮ್ಮೇಳನಾಧ್ಯಕ್ಷರಾಗಿದ್ದ ಚೌಡಪ್ಪದಾಸರ ಕುರಿತಾಗಿ ಲೇಖಕರು ಬರೆದಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕೂಲಿಮಠದಲ್ಲಿ ಓದಿ ರಾಮಾಯಣ, ಮಹಾಭಾರತ, ಹರಿಭಕ್ತಸಾರ ಮುಂತಾದ ಗ್ರಂಥಗಳನ್ನು ಬಾಯ್ದರೆಯಾಗಿಯೇ ಕಲಿತು, ಕೀರ್ತನಕಾರರಾಗಿ, ಪೌರಾಣಿಕ ನಾಡಕಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಮನೆಮಾತಾಗಿರುವ ಚೌಡಪ್ಪದಾಸರ ಜೀವನಶೈಲಿ, ಬೆಳೆದು ಬಂದ ಹಾದಿ, ತೊಡಗಿಸಿಕೊಂಡ ಸಾಮಾಜಿಕ ಕೈಂಕೈರ್ಯಗಳನ್ನು, ರಂಗ ಸಂಗೀತಕ್ಕಾಗಿ ಮುಡುಪಾಗಿಟ್ಟ ಚೌಡಪ್ಪದಾಸರ ಜೀವನದ ಏಳು ಬೀಳುಗಳನ್ನು ಲೇಖಕರು ಸೂಕ್ಷ್ಮವಾಗಿ ಬಿಂಬಿಸಿದ್ದಾರೆ.          ಈ ಭಾಗದಲ್ಲಿ ಬರುವ ಮುಂದಿನ ಲೇಖನ ಆರ್. ಪರಮಶಿವನ್‍ರವರು ಕುರಿತು.
ಒಂದು ಸಾವಿರ ರಂಗಗೀತೆಗಳಿಂದ ತುಂಬಿದ ನೆನಪಿನ ಕಣಜ.
ಎಂಟು ನಾಟಕ ಸಂಘಗಳೊಡನೆ ನೆಂಟು ಹೊಂದುತ.
ಕನ್ನಡ ವೃತ್ತಿ ರಂಗಭೂಮಿಯ ವರಂಗ ಅಗ್ರಜ.
ಪರಮಶಿವನ್‍ರ ಅಮರ ಚರಿತೆಯ ಪೇಳ್ವೆ ಎನ್ನುತ್ತಾ ಲೇಖಕರು ರಂಗಗೀತೆಗಳ ಸಾರ್ವಭೌಮನೆಂದೇ ಪ್ರಸಿದ್ಧರಾದ ಆರ್. ಪರಮಶಿವನ್ ಅವರ ಹುಟ್ಟು, ಬೆಳವಣಿಗೆ, ರಂಗಪ್ರವೇಶ, ರಂಗಕರ್ಮಿಯಾಗಿ ಮಾಡಿದ ಸಾಧನೆಗಳ ಬಗ್ಗೆ ಚೆಂಬೆಳಕು ಚೆಲ್ಲುತ್ತಾ ಹೊಂಬೆಳಕು ಮೂಡಿಸಿದ್ದಾರೆ.
ಈ ಭಾಗದ ಆರನೇ ಲೇಖನ ಹಾಸನದ ಹೆಸರಾಂತ ದಾನಿ ಹಾಗೂ ಶೈಕ್ಷಣಿಕ ಚಿಂತಕರಾದ ಶ್ರೀಯುತ ಎ.ಎನ್.ವರದರಾಜುಲು ರವರ ತಂದೆಯಾದ ನಂಜುಂಡ ಶೇಷ್ಠಿಯವರ ಕಾಲದಿಂದ ಸಾಮಾಜಿಕಸೇವೆ, ಪರೋಪಕಾರದ ಗುಣ ಜೊತೆ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ  ಸುಂದರ ಸಮಾಜದ ಕನಸು ಕಾಣುತ್ತಿದ್ದಂತಹ ವಂಶ ಪಾರಂಪರ್ಯದ ಶ್ರೇಷ್ಠ ಕಾಯಕದ ಮೇಲೆ ಲೇಖಕರು ಮನೋಜ್ಞವಾಗಿ ಬೆಳಕು ಚೆಲ್ಲಿದ್ದಾರೆ. ಹಾಗೆಯೇ ಹತ್ತಿರದಿಂದ ಕಂಡಂತಹ ಲೇಖಕರು ಹಲವಾರು ಸೂಕ್ಷ್ಮ ಎಳೆಗಳನ್ನು ಓದುಗರ ಮುಂದೆ ಬಿಡಿಸಿಟ್ಟಿದ್ದಾರೆ. ಪ್ರಸ್ತುತ ಲೇಖನ ಸಾಂಆಜಿಕ ಕೈಂಕರ್ಯ ಮಾಡುವವರಿಗೆ ಉತ್ತೇಜನಕಾರಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಇನ್ನು ಕೊನೆಯದಾಗಿ ಈ ಭಾಗದಲ್ಲಿ ಕಾಣಸಿಗುವ ಲೇಖನ ಕನ್ನಡದ ಕಂಚಿನಕಂಠ, ಧೀಮಂತ ವಾಗ್ಮಿಗಳಾದ ಕವಿ, ಲೇಖಕ, ನಾಟಕಕಾರ, ವಿಮರ್ಶಕ, ಕಥೆಗಾರ ಹಾಗೆಯೇ ಗಣ್ಯ ಆಧುನಿಕ ವಚನಕಾರರಾದ ಡಾ. ಮಳಲಿ ವಸಂತ್‍ಕುಮಾರ್‍ರವರ ಜೀವನ ಚಿತ್ರಣವಾಗಿದೆ. ಮೂಲ ಜನಪದ ಸಂಸ್ಕøತಿಯ ಪ್ರತೀಕವಾದ ಡಾ. ಮಳಲಿಯವರ ಬಾಲ್ಯ, ಬದುಕು, ಶಿಕ್ಷಣ ಕ್ಷೇತ್ರದ ಸಾಧನೆಗಳು, ಸಾಹಿತ್ಯ ಕ್ಷೇತ್ರದ ಮಹತ್ಸಾಧನೆಗಳ ಮೇಲೆ ಲೇಖಕರು ಮೇಲೆ ಲೇಖಕರು ಪ್ರಸ್ತುತ ಲೇಖನದಲ್ಲಿ ಹೊಳಪು ಚೆಲ್ಲಿದ್ದಾರೆ. ಹೀಗೆ ಇಲ್ಲಿನ ಆರು ವ್ಯಕ್ತಿಗಳ ವಿಶೇಷತೆಗಳನ್ನು ಚರಿತ್ರೆಯ ರೂಪದಲ್ಲಿ ಲೇಖಕರು ಸುದೀರ್ಘವಾಗಿ ಚಿತ್ರಿಸಿದ್ದಾರೆ.
ಕೃತಿಯ ದ್ವಿತೀಯ ಭಾಗವಾದ ರಂಗಪರಂಪರೆಯಲ್ಲಿ ಲೇಖಕರು ತಮ್ಮ ಅನುಭವಕ್ಕೆ ಬಂದಂತೆ ರಂಗಪ್ರಯೋಗಗಳು, ನೋಡುವಾಗ ಅವರನ್ನು ಮನಸೆಳೆದ ರಸಘಳಿಗೆಗಳ ಮೆಲುಕಿದೆ. ಬಯಲಾಟಗಳಲ್ಲಿ ರಂಗಪ್ರಸಂಗಗಳು ಎಂಬ ಲೇಖನದಲ್ಲಿ ತಮ್ಮ ಬಾಲ್ಯದಲ್ಲಿ ಗೊರೂರು ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಸುಗ್ಗಿಯಿಂದ ಮಳೆಗಾಲ ಪ್ರಾರಂಭವಾಗುವುದರೊಳಗಾಗಿ ತಾಲೀಮುನಡೆಸಿ, ಆಡುವ ಬಯಲಾಟಗಳನ್ನು ಸುತ್ತಮುತ್ತಲಿನ ಹಳ್ಳಿಯವರು ನೋಡಲೆಂದು ಗಾಡಿಕಟ್ಟಿಕೊಂಡು ಬಂದು ನೋಡುವ ದೃಶ್ಯ ಹಳ್ಳಿ ಜಾನಪದ ಸೊಗಡಿಗೆ ಹಿಡಿದ ಕೈಗನ್ನಡಿಯಂತಿದೆ. ಕಲಾವಿದರಿಗೆ ಹಿಂದಿದ್ದ ಗೌರವ ಹಾಗೂ ಪಾತ್ರಕ್ಕೆ ತಕ್ಕಂತೆ ವ್ಯಕ್ತಿಗಳನ್ನು ಆಯ್ದು ಶಿಷ್ಠಾಚಾರದಿಂದ ನಾಟಕ ಕಲಿಸುವ ಮೇಷ್ರು ಹಾಗೆಯೇ ಗೊರೂರಿನ ಗತದ ಅನೇಕ ಕಲಾವಿದರುಗಳ ಪಾತ್ರ ಶಕ್ತಿಯ ಬಗ್ಗೆ ಲೇಖಕರು ಹೊಳಪುಸೂಸಿದ್ದಾರೆ. ಲೇಖಕರು ಚಿಕ್ಕಂದಿನಲ್ಲಿ ನೋಡಿದ ಹಲವಾರು ಬಯಲಾಟಗಳ ಮೆಲುಕು ಹಾಕಿದ್ದಾರೆ. ಅದರಲ್ಲಿ ಕೆಲವು ಪ್ರಸಂಗಗಳು ಹಾಸ್ಯಮಯವಾಗಿ ಮೂಡಿಬಂದಿವೆ.
ಮಹಾಭಾರತ ಕಥೆಯ ಒಂದು ಸನ್ನಿವೇಶದಲ್ಲಿ ಶಕುನಿಯ ಕೈಚಳಕದಿಂದ ಪಾಂಡವರು ಸೋತು, ಕಾಡಿಗೆ ಹೋಗೋ ಸಂದರ್ಭಕುರಿತು ಒಬ್ಬ ಮುಸಲ್ಮಾನ ಯುವಕನ ಹಾಡಿನ ಮೂಲಕ ಈ ಕೆಳಗಿನಂತೆ ಚಿತ್ರಿಸಿದ್ದಾರೆ.
ಶಕುನಿ ಬಾಡ್ಕೋವ್ ಬಂದ್ಬಿಡ್ತು
 ಹಂಗೂ, ಹಿಂಗೂ ಮಾಡ್ಬಿಡ್ತು
ಕೌರವರ್ಗ ಗೆಲ್ಸಿಬಿಡ್ತು, 
ಪಾಂಡವರ್ಗೆ ಸೋಲಿಸ್ಬಿಡ್ತು
ಜಾತಾ ಹೂಂ ಮೈ ಜಂಗಲ್ ಕು .......
ಇಂದು ಒಂದು ಪೌರಾಣಿಕ ನಾಟಕವಾಡಲು ತಗಲುವ ಖರ್ಚು, ಕಾಸ್ಟೂಮ್ಸ್ ಮುಂತಾದ ಪರಿಕರಗಳ ಬೆಲೆ ಗಗನ ತಲುಪಿರುವಾಗ ಪೌರಾಣಿಕ ರಂಗಭೂಮಿಯ ಬಗ್ಗೆ, ರಂಗಕಲಾವಿದರ ಬಗ್ಗೆ ಲೇಖಕರು ದುಃಖಿಸಿದ್ದಾರೆ.
ಇನ್ನು ಇದರಲ್ಲಿನ ಎರಡನೆಯ ಲೇಖನ ಹಾಸನ ಜಾತ್ರೆಯಲ್ಲಿ ನಾಟಕ ಕಂಪನಿಗಳು, ಹಾಸನ ಜಿಲ್ಲೆ ದನದ ಜಾತ್ರೆಗೆ ಹೆಸರುವಾಸಿಯಾದಂತೆ ಹಿಂದಿನಿಂದಲೂ ನಾಟಕ ಕಲೆಯಲ್ಲಿ ಸುಪ್ರಸಿದ್ಧಿಯನ್ನು ಪಡೆದಿದೆ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಗುಬ್ಬಿ ವೀರಣ್ಣ ಕಂಪನಿ, ಎಂ.ವಿ.ವರದಾಚಾರ್ಯರ ಕಂಪನಿ, ಪೀರ್‍ಸಾಹೇಬರ ನಾಟಕ ಕಂಪನಿ, ಸುಬ್ಬಯ್ಯ ನಾಯ್ದು ಮತ್ತು ನಾಗೇಂದ್ರರಾಯರ ಕಂಪನಿ, ಧಾರವಾಡದ ಸ್ತ್ರೀ ನಾಟಕ ಮಂಡಳಿ ಮುಂತಾದ ನಾಟಕ ಕಂಪನಿಗಳು ಹಾಸನದಲ್ಲಿ ತಿಂಗಳುಗಟ್ಟಲೇ ಬಿಡಾರಹೂಡಿ ಹಲವಾರು ಪೌರಾಣಿಕ ಪ್ರಯೋಗಗಳನ್ನು ಮಾಡುತ್ತಿದ್ದ ಸನ್ನಿವೇಶಗಳನ್ನು ಮತ್ತದರ ಜನರ ಪ್ರತಿಕ್ರಿಯೆಗಳನ್ನು ಪ್ರಸ್ತುತ ಲೇಖನದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.
ಈ ಭಾಗದಲ್ಲಿ ಬರುವ ಮೂರನೇ ಲೇಖನ ನಾಟಕ ನೋಡಿದ ನೆನಪಿನಲ್ಲಿ..... ಲೇಖಕರು ಇಲ್ಲಿ ಒಂದು ರೀತಿಯಲ್ಲಿ ಆತ್ಮಕಥೆಯಂತೆ ತಮ್ಮ ಊರಿನ ಕುರಿತು ಬಾಲ್ಯದಿಂದ ಪ್ರಸ್ತುತದವರೆಗೂ ಅನೇಕ ಘಟನೆ, ಸನ್ನಿವೇಶಗಳನ್ನು ಸ್ಮರಿಸಿದ್ದಾರೆ. ಗೊರೂರು ಅಣೆಕಟ್ಟುವುದಕ್ಕಿಂತ ಮುಂಚಿದ್ದ ಕಾಲಘಟ್ಟದ ರಂಗಭೂಮಿ ನಂತರದ ರಂಗಭೂಮಿಗೂ ಇರುವ ಕಾರ್ಯಕೈಂಕರ್ಯದ ನೆನಪುಗಳು ಲೇಖಕರನ್ನು ಕಾಡಿದ ರೀತಿಯನ್ನು ಮನೋಜ್ಞವಾಗಿ ಬಣ್ಣಿಸಿದ್ದಾರೆ.
ಕೃತಿಯ ತೃತೀಯ ಭಾಗ ವೈಚಾರಿಕತೆ ಇದರಲ್ಲಿ ಮೊದಲನೇ ಲೇಖನ ವಿದ್ಯೆ ಕಲಿಸದಾ ತಂದೆ ಬುದ್ಧಿ ಹೇಳದು....ಶುದ್ಧ ವೈರಿಗಳೆಂದು ಸರ್ವಜ್ಞ. ಪ್ರಸ್ತುತ ಲೇಖನದಲ್ಲಿ ಗುರು ಎಂಬ ಪದವನ್ನು ಶೀರ್ಷಿಕೆಯಲ್ಲಿ ಓದುಗರ ಪಾಲಿಗೆ ಬಿಟ್ಟಿರುವುದನ್ನು ವಿವೇಚಿಸಿದರೆ, ಎಲ್ಲೋ ಒಂದು ಕಡೆ ಗುರುವಿನ ಬಗ್ಗೆ ಇರುವ ಅಭಿಮಾನ ಅಡ್ಡಬಂದಿರಬಹುದೇನೋ ಅನಿಸುತ್ತೆ. ಈ ಲೇಖನದಲ್ಲಿ ಸರ್ವಜ್ಞನ ಒಂದು ವಚನವನ್ನು ಆಯ್ದು ಪ್ರತಿಯೊಬ್ಬ ವ್ಯಕ್ತಿ ತಂದೆ ಮತ್ತು ಗುರುವಿನ ತಪೋಬಲದಂತೆ ಇಚ್ಛಾಬಲದಂತೆ ಅವರುಗಳ ಪ್ರೋತ್ಸಾಹಗಳಿಂದ ಸಮಾಜದ ಉತ್ತಮ ಸಚ್ಛಾರಿತ್ರ್ಯನನ್ನಾಗಿ ಬೆಳೆಸುವುದು ನೇಮ. ಆದರೆ ಅವರುಗಳಿಂದಲೇ ಅನ್ಯಾಯ, ಅನಾಚರಣೆಗಳಾದರೆ ಮಗುವಿನ ಬಾಳಿನ ಬೆಳಕು ಇನ್ನಿಲ್ಲವಾಗಿ ಕತ್ತಲು ಮುಸುಕುತ್ತದೆ. ಪರಸ್ಪರ ಮನಸ್ಸುಗಳ ಅರ್ಥೈಸಿಕೊಂಡು ಜೊತೆ ಜೊತೆಯಾಗಿ ಹೋಗಬೇಕು ಅಂದಾಗ ಮಾತ್ರ ಸಂತಸ ನೆಲೆಯೂರಲು ಸಾಧ್ಯವೆಂಬುದನ್ನು ಅನೇಕ ನಿದರ್ಶನಗಳನ್ನು ನೀಡುವುದರ ಮೂಲಕ ಬಿಂಬಿಸಿದ್ದಾರೆ.
ಮೂರನೇ ಭಾಗದಲ್ಲಿ ಬರುವ ಎರಡನೇ ಲೇಖನ ‘ಬರೆದಂತೆ ನಡೆಯಲು ಸಾಧ್ಯವಿಲ್ಲ ಏಕೆಂದರೆ ಎಂಬುದರಲ್ಲಿ ಇವರದೇ ಆದ ಚುಟುಕುಗಳನ್ನು ತೆಗೆದುಕೊಂಡು ಸ್ವವಿಮರ್ಶಿಸಿದ್ದಾರೆ. ಅವರ ಕವಿತೆಗಳಲ್ಲಿ ಹಾಸ್ಯಗಳು ಮೇಳೈಸುತ್ತಾ ಸಾಗುವುದನ್ನು ಕಾಣಬಹುದು.
ನನ್ನ ಕವಿತೆ ಆರು ಮಾತ್ರೆಗಳ ಮೂರು ಗಣ
ಮರು ನುಡಿದ ಚುಟುಕು ಕವಿ ತಕ್ಷಣ
ನನ್ನ ಚುಟುಕಕ್ಕೆ ಒಂದೇ ಮಾತ್ರೆ
ತಲೆನೋವು ಕೂಡಲೇ ಗುಣ.
ಹಾಗೆಯೇ ನಮ್ಮ ಭಾರತೀಯ ಸಂಸ್ಕøತಿ ಇತ್ತೀಚೆಗೆ ಏಕೆ ವಿಮುಖವಾಗಿ ಅನ್ಯರ ಸಂಸ್ಕøತಿ ಬೆಂಬತ್ತಿದ್ದೇವೆ ಎನ್ನುವುದನ್ನು ತಿಳಿಸಲು ಇದೊಂದು ಉತ್ತಮ ಉದಾಹರಣೆ ಎನಿಸುತ್ತದೆ.
ನೀರೆಯರ
ಸೌಂದರ್ಯ ಸ್ಫರ್ಧೆಯಲ್ಲಿ 
ಆಕರ್ಷಿಸುವುದು
ಸೀರೆಯಲ್ಲ ಸಾರ್
ಮಿನಿ ಸ್ಕರ್ಟ್!
ಚುಟುಕುಗಳಲ್ಲಿ ಹಾಸ್ಯ ಚಟಾಕಿಯಂತೆ ಸಾಮಾಜಿಕ ಸೂಕ್ಷ್ಮತೆಗಳು ಅಡಕಗಳಾಗಿವೆ. ಹಾಗೆಯೇ ವಿಡಂಬನೆಗಳೂ ಸಹ ಮೈದೋರಿವೆ.
ಪ್ರಸ್ತುತ ಭಾಗದ ಮೂರನೇ ಲೇಖನ ‘ಹಬ್ಬಗಳು, ಜನಪದ, ನಂಬಿಕೆಗಳು, ವೈಜ್ಞಾನಿಕ ಚಿಂತನೆಗಳು’ ಭಾರತ ಒಂದು ಜಾತ್ಯಾತೀತ ರಾಷ್ಟ್ರ. ಆದ್ದರಿಂದಲೇ ಇಲ್ಲಿ ಅನೇಕ ಧರ್ಮಗಳ ಸಂಸ್ಕøತಿಗಳು ಮೇಳೈಸಿವೆ. ಆಯಾಯ ಧರ್ಮಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ನೆಲೆಗಟ್ಟಿನಲ್ಲಿರುವ ಆಚರಣೆ, ಹಬ್ಬ, ಹರಿದಿನಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ವಿಶ್ವದಲ್ಲಿಯೇ ವಿವಿಧತೆಯಲ್ಲಿ ಏಕತೆಯನ್ನು ಮೆಟ್ಟಿನಿಂತು ಭಾವೈಕ್ಯತೆಯನ್ನು ಪ್ರಖರ್ಷಿಸುವುದೆಂದರೆ ಭಾರತದೇಶ ಮಾತ್ರ ಇಲ್ಲಿನ ಜನಪದರ ಬದುಕು ಅನನ್ಯವಾದುದು, ಅತ್ಯಮೋಘವಾದುದು. ದಾರ್ಶನಿಕತೆಯನ್ನು ಬಿತ್ತಿ ಬೆಳೆದಂತಹ ಪುಣ್ಯ ಭೂಮಿಯ ವಿವಿಧ ಸಾಂಸ್ಕøತಿಕ ಮಜಲುಗಳನ್ನು ಲೇಖಕರು ಎಳೆ ಎಳೆಯಾಗಿ ಸೊಗಸಾಗಿ ನಿರೂಪಿಸಿದ್ದಾರೆ.
ಈ ಕೃತಿಯ ಅಂತಿಮ ಭಾಗ ಪರಿಸರ ಮತ್ತು ಆಚರಣೆ. ಇದರಲ್ಲಿ ಮೊದಲು ಬರುವ ಲೇಖನ ಹಸಿರು ಹೊನ್ನ ಸಿರಿಯು, ಪಶ್ಚಿಮ ಘಟ್ಟ ಶ್ರೇಣಿಯ ಪರಿಸರವು. ಕೇಸರಿ ಹರವು ನಿರ್ದೇಶನದ ‘ನಗರ ಮತ್ತು ನದಿ ಕಣಿವೆ’ ಎಂಬ ಸಾಕ್ಷ್ಯ ಚಿತ್ರ ಹಾಗೆಯೇ ದಿವಂಗತ ಇತಿಹಾಸಕಾರರಾದ ಚಂದ್ರಶೇಖರ್ ಧೂಳೇಕರ್‍ರವರ ‘ಜಗಾಟ’ ಪ್ರವಾಸಿ ಲೇಖನಗಳು ಲೇಖಕರ ಮೇಲೆ ಅತೀವ ಪ್ರಭಾವ ಬೀರಿದ್ದರಿಂದಲೇ ಪ್ರಸ್ತುತ ಲೇಖನದ ಜನನ.
ಪಶ್ಚಿಮ ಘಟ್ಟದ ಉಳಿವಿಗಾಗಿ ಬರವಣಿಗೆ, ಚಳುವಳಿ, ಸಂಘಟನೆಗಳ ಮೂಲಕ ಹೋರಾಟ ಮಾಡಿದ ಗಿರಿಮನೆ ಶ್ಯಾಮರಾವ್,ಹೆಚ್.ಎ. ಕಿಶೋರ್‍ಕುಮಾರ್ ಮುಂತಾದವರ ಪ್ರಯತ್ನಗಳು ಹಾಗೆಯೇ ಈ ಪರಿಸರದಲ್ಲಿ ಲೇಖಕರು ವಿಹರಿಸುವಾಗ ಅತ್ತಿಹಳ್ಳಿ, ಹೊಂಗಡಹಳ್ಳ, ಬಿಸಿಲೆಘಾಟ್ ಮುಂತಾದ ಸ್ಥಳಗಳಲ್ಲಿ ಆದ ಅನುಭವಗಳನ್ನು ಮನ ಮುಟ್ಟುವಂತೆ ಬಣ್ಣಿಸಿದ್ದಾರೆ.
ಇನ್ನುಳಿದಂತೆ ಈ ಕೃತಿಯ ಕೊನೆಯ ಲೇಖನ ಹಾಗೂ ಅತಿ ಚಿಕ್ಕ ಲೇಖನ ‘ಶಾಂತಿಗ್ರಾಮ ಜಾನಪದ ತಿಂಗಳ ಮಾಮನ ಹಬ್ಬ’ ಲೇಖಕರು ತಮ್ಮ ಮಾವ ರಾಜಶೇಖರ್ ಅವರ ಊರಾದ ಶಾಂತಿಗ್ರಾಮದ ಹಬ್ಬಕ್ಕೆ ಹೋದಾಗ ಅಲ್ಲಿನ ಸ್ಥಳೀಯ ಗ್ರಾಮ ಸಂಸ್ಕøತಿ ಅಧ್ಯಯನ ಕೇಂದ್ರದಿಂದ ಬೆಳದಿಂಗಳಲ್ಲಿ ತಿಂಗಳ ಮಾಮನಹಬ್ಬವನ್ನು ಆಚರಿಸುವ ಪರಿಯನ್ನು ಪ್ರಸ್ತುತ ಲೇಖನ ಓದುಹರ ಮುಂದೆ ತೆರೆದಿಡುತ್ತದೆ.
ಬಹುಪಾಲು ರಂಗಭೂಮಿ ಮತ್ತು ಜಾನಪದವನ್ನೇ ಚಿತ್ರಿಸುವ ಈ ಕೃತಿಯು ಸೊಗಸಾಗಿ ಮೂಡಿ ಬಂದಿದೆ. ಅದರಲ್ಲೂ ಹಾಸನ ಜಿಲ್ಲೆಯ ಕಿರು ಚಿತ್ರಣವನ್ನು ಇದರಲ್ಲಿ ಕಾನಬಹುದಾಗಿದೆ. ಹಳ್ಳಿ ಸೊಗಡನ್ನು ಹೊರಸೂಸುವ ಮೂಲ ಜನಪದ ಶೈಲಿಯನ್ನು ಮಾರ್ಧನಿಸಿದೆ.
ಅನಂತರಾಜುರವರ ಸಾಹಿತ್ಯಿಕ ಕೈಂಕರ್ಯ ಇನ್ನ ಪುಷ್ಠಿಗೊಳ್ಳಲಿ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂ ಹಲವಾರು ಮೌಲಿಕ ಕೃತಿಗಳು ಇವರಿಂದ ಸಮರ್ಪಣೆಗೊಳ್ಳಲಿ. ಇವರ ಚಿಂತನಾ ಶೀಲತೆ ಇನ್ನಷ್ಟು ಪಡೆಯಲಿ ಎಂದು ಆಶಿಸುತ್ತೇನೆ.
                                   
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ