ನಾವಿಂದು ವಿಜ್ಞಾನದ ಮತ್ತು ತಂತ್ರಜ್ಞಾನದ ಯುಗದಲ್ಲಿದ್ದೇವೆ. ದಿನ ಬೆಳಗಾದರೆ ನವ ನವೀನ ಆವಿಷ್ಕಾರಗಳತ್ತ ದಾಪುಗಾಲಿಡುತ್ತಾ , ಗ್ರಹ, ತಾರೆಗಳ, ಉಲ್ಕೆಗಳ, ವಿವಿಧ ರೀತಿಯ ಆಕಾಶಕಾಯಗಳ ಬಗ್ಗೆ ತಿಳಿಯುತ್ತಾ ಹಲವಾರು ಕೌತುಕಗಳಿಗೆ ಹುಬ್ಬೇರಿಸುತ್ತಿದ್ದೇವೆ. ವಿಸ್ಮಯಗೊಳ್ಳುತ್ತಾ ತಾರ್ಕಿಕವಾಗಿ, ಪ್ರಾಯೋಗಿಕವಾಗಿ ಪರೀಶಿಲಿಸಿ ಒಪ್ಪಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮ್ಮ ಯೋಜನೆಗಳು ಪ್ರಗತಿದಾಯಕದತ್ತ ಸಾಗಬೇಕೇ ವಿನಹ ಮೌಢ್ಯದ ಗೋರಿಯ ಕಡೆಯಲ್ಲ!
‘ಜ್ಯೋತಿಷ್ಯ’ವೆಂಬ ಪೆಡಂಭೂತದ ಬಗ್ಗೆ ತೆರೆದ ಮನಸ್ಸಿನಿಂದ ಪ್ರತಿಯೊಬ್ಬರು ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸಬೇಕಾದ ಅತ್ಯಗತ್ಯತೆ ಎದುರಾಗಿದೆ. ‘ಜನಸಾಮಾನ್ಯರಿಗೆ ಜ್ಯೋಯಿಸರು ಬೇಕು’ ಎನ್ನುವ ಹೊಸ ನಾಣ್ಣುಡಿಯನ್ನು ಸೃಷ್ಠಿಸಿಕೊಂಡಿರುವ ಈ ವಂಚಕ ಜಾಲ ಸಮಾಜವನ್ನು ಇನ್ನಿಲ್ಲದಂತೆ ಅಧೋಗತಿಗೆ ತಳ್ಳುತ್ತಿದೆ.
18-06-2014 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ಪೌರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಭಾರತದ ಪ್ರಸಿದ್ಧ ವಿಜ್ಞಾನಿ ಭಾರತ ರತ್ನ ಸಿ.ಎನ್.ಆರ್ ರಾವ್ರವರು ಮಾತನಾಡುತ್ತಾ “ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರತಿದಿನ ಪ್ರಸಾರವಾಗುವ ಮೌಢ್ಯ ಹಾಗೂ ಮೂಢನಂಬಿಕೆಯನ್ನು ಉತ್ತೇಜಿಸುವ ಜ್ಯೋತಿಷ್ಯ ಶಾಸ್ತ್ರಕ್ಕೆ ಕಡಿವಾಣ ಹಾಕಬೇಕು. ಜನರಲ್ಲಿ ವೈಜ್ಞಾನಿಕ ಮನೋಭಾವ ಬದಲು ಮೌಢ್ಯತೆಯೆಡೆಗೆ ತೆಗೆದುಕೊಂಡು ಹೋಗುತ್ತಿರುವುದು ಸರಿಯಲ್ಲ. ವಿದ್ಯುನ್ಮಾನ ಮಾಧ್ಯಮಗಳು ಸುಳ್ಳು ಜ್ಯೋತಿಷ್ಯವನ್ನು ಪ್ರಸಾರ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಜ್ಞಾನ, ಅರಿವು ನಮ್ಮದಾಗಬೇಕೆ ಹೊರತು ಮೌಢ್ಯಕ್ಕೆ ಮಾರುಹೋಗಬಾರದು. ದೇಶ ಅಭಿವೃದ್ಧಿಯಾಗಬೇಕಾದರೆ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಾಗಬೇಕು.
ಜ್ಯೋತಿಷ್ಯದ ಜ್ಞಾನ ಪ್ರಸಾರವಾಗಲಿ ಎಂಬ ಹಿನ್ನಲೆಯಲ್ಲಿ ಮೌಢ್ಯ ಸಾಮ್ರಾಜ್ಯದ ಉಳಿವಿಗಾಗಿ ಕೊಳಕು ಮನಸ್ಸುಗಳು ಚಿಂತಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಿ.ಎನ್.ಆರ್ ರಾವ್ ರವರು ಮೌಢ್ಯದ ಬೇರು ಕೀಳಲು ಕರೆಕೊಟ್ಟಿರುವುದು ಸ್ವಾಗತಾರ್ಹವಾಗಿದೆ ಮತ್ತು ಅನುಕರಣೀಯ.
ಕನ್ನಡದ ರಾಷ್ಟ್ರಕವಿ ಕುವೆಂಪುರವರು ಜ್ಯೋತಿಷ್ಯ, ಯಜ್ಞ-ಯಾಗಾದಿಗಳನ್ನು ಕುರಿತು ಒಂದು ಕಡೆ ಹೀಗೆ ಹೇಳಿದ್ದಾರೆ.
ತುಪ್ಪವನು ಬೆಂಕಿಗೆಸೆಯಲು
ಶಮನವಾಗುವೊಡೆ ಗ್ರಹದ ಪೀಡೆ
ಪುಷ್ಟಿನಪ್ಪಾ ಪುರೋಹಿತನಾಹುತಿ ಮಾಡೆ
ಮತ್ತಷ್ಟು ಪರಿಹಾರ ದೊರೆಯದೇನ್ ಕೇಡೆ....
ಯಜ್ಷ ಯಾಗಾದಿಗಳನ್ನು ಮಾಡಿದ ತಕ್ಷಣ ಗ್ರಹ ಪೀಡೆಗಳು ತೊಲಗುವುದಾದರೆ ಮಂತ್ರವಾದಿಯನ್ನೇ(ಪುರೋಹಿತ) ಬೆಂಕಿಗಾಹುತಿ ಮಾಡಿ ನಿಮ್ಮ ಸುತ್ತ ಯಾವ ಪೀಡೆಗಳು ಸುಳಿಯುವುದಿಲ್ಲವೆಂದು ಪುಟ್ಟಪ್ಪ ಕರೆ ಕೊಡುತ್ತಾರೆ
ಸಮಾಜದ ಭವ್ಯ ಭವಿಷ್ಯವನ್ನೇ ಬದಲಾಯಿಸಿ ತಮ್ಮ ಕಪಿ ಮುಷ್ಟಿಯಲ್ಲಿ ಆಡಿಸುತ್ತಿರುವ ‘ಜೋತಿಷ್ಯ’ವೆಂಬ ಸಾಂಕ್ರಾಮಿಕ ರೋಗ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ, ಗ್ರಹಗತಿ, ಗ್ರಹಣ, ಶನಿಕಾಟ, ಗ್ರಹಕಾಟ, ಮುಂತಾದವುಗಳನ್ನು ಬಂಡವಾಳ ಮಾಡಿಕೊಂಡು ತನ್ನ ಮಾಯಾಬಲೆಯಲ್ಲಿ ಜನತೆಯನ್ನು ಹಿಡಿದಿಟ್ಟುಕೊಂಡು ಮೌಢ್ಯ ಸಾಮ್ರಾಜ್ಯ ಸ್ಥಾಪಿಸಹೊರಟಿದೆ.
.ಜ್ಯೋತಿಷ್ಯವನ್ನು ಕುರಿತು ಖ್ಯಾತ ಚಿಂತಕರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಈ ರೀತಿ ಹೇಳಿದ್ದಾರೆ- “ನನಗೆ ಯಾವತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯಿಲ್ಲ. ಭಾರತೀಯರು ಅನೇಕ ಶತಮಾನಗಳಿಂದ ಈ ಶಾಸ್ತ್ರವನ್ನು ರಚಿಸಿ, ರೂಪಿಸಿ, ಪ್ರಯೋಗಿಸಿ, ಅನುಭವಿಸಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂದು ಕೇಳೀದ್ದೆನೆ. ಆದರೆ ಗ್ರಹಗಳು ತಮ್ಮ ಕೆಲಸ ಬಿಟ್ಟು ಈ ಜಗತ್ತಿನ ಜನರ ಹಿಂದೆ ತಿರುಗುತ್ತ ಅವರ ಕಾರ್ಯಗಳಲ್ಲಿ ತೊಡಗುತ್ತಿವೆಯೆಂಬುದು ನನಗೆ ಅಸಂಬದ್ದವಾಗಿ ತೋರಿದೆ”.
ನಮ್ಮ ಕಣ್ಣಿಗೆ ಕಾಣದ ಅದೆಷ್ಟೋ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ರಹ-ತಾರೆಗಳು ಇಲ್ಲಿನ ಜ್ಯೋತಿಷಿಗಳು ಹೇಳಿದಂತೆ ಕೇಳಿ ತಿಳಿಗೊಳ್ಳುವುದಿದೆಯಲ್ಲ ಇದಕ್ಕಿಂತ ಗಮಾರತನ ಮತ್ಯಾವುದು ಇರಲಾರದು. ಮೂರ್ಖತನದ ಪರಮಾವಧಿ ಎಂದರೂ ತಪ್ಪಾಗಲಾರದು.
ಕನ್ನಡ ಸಾಹಿತ್ಯದ ಜ್ಞಾನ ಕುಸುಮವಾದ ಸರ್ವಜ್ಞನ ಒಂದು ವಚನ ನೋಡೋಣ..
ತಂತ್ರ ತಾಂಬೂಲದಲ್ಲಿ, ಮಂತ್ರ ಗಾರುಡಿಯಲ್ಲಿ
ಯಂತ್ರ ಜ್ಯೋತಿಷಿಯ ಗ್ರಹಣದಲಿ ಇವು ಮೂರು
ಎಂತು ಹುಸಿಯೆಂದ ಸರ್ವಜ್ಞ||
ಜ್ಯೋತಿಷಿಗಳ ಬೊಗಳೆ ಮಾತುಗಳಿಂದ ಸಮಾಜ ನಂಬಿ ಕೆಡುತ್ತಿದೆ. ಇಂತಹವರ ಬೊಗಳೆ ಮಾತುಗಳು ಕತ್ತೆಗೆ ಜ್ವರ ಬರಿಸುವಂತಹವು. ಎಲ್ಲಿಯವರೆಗೆ ಮೋಸ ಹೋಗುವರು ಇರುತ್ತಾರೋ ಅಲ್ಲಿಯವರೆಗೂ ವಂಚನೆಯ ಖೆಡ್ಡಾದಲ್ಲಿ ಜುಟ್ಟಿಡಿದು ಅಮುಕವವರು ಇರುತ್ತಾರೆ.
ಜಾತಿ, ಒಳಜಾತಿ, ವರದಕ್ಷಿಣೆ ಮುಂತಾದ ಸಾಮಾಜಿಕ ವಿಕಲ್ಪಗಳಿಂದ ಜಟಿಲವಾಗುತ್ತಿರುವ ಹೆಣ್ಣಿನ ಮದುವೆಗಳು ಈ ಜಾತಕಗಳ ಹುಚ್ಚಾಟದಿಂದ ಇದನ್ನು ಕ್ರೂರ ಮಟ್ಟಕ್ಕೆ ಸಾಗಿ ಹೋಗುತ್ತಿವೆ.
ಹೆಣ್ಣಿನ ಗೋಳಂಟಿ ಬನ್ನಿಯ ಮರಬೆಂದೂ
ಅಲ್ಲಿ ಸನ್ಯಾಸಿ ಮಠಬೆಂದೂ, ಪುರೋಹಿತರ
ಪಂಚಾಂಗ ಹತ್ತಿ ಉರಿದಾವ|
||ಜಾನಪದ||
ಅವಿದ್ಯಾವಂತ ಜನಪದರಲ್ಲಿಯೂ ಸಹ ವೈಚಾರಿಕ ಪ್ರಜ್ಞೆಯಿತ್ತು. ಜ್ಯೋತಿಷ್ಯದ ಮೂಲವಾದ ಪಂಚಾಂಗದ ಬಗ್ಗೆ ಕೆರಳಿ ಕೆಂಡವಾಗಿದ್ದಾರೆ. ನಾವಿಂದು ಪ್ರಜ್ಞಾವಂತರು ಆದರೆ ಏಕೆ ನಮ್ಮ ಯೋಚನೆಗಳು, ಮನಸ್ಸುಗಳು ಇನ್ನೂ ಕಂದಾಚಾರದಲ್ಲಿ ಸಿಲುಕಿಕೊಳ್ಳುತ್ತವೆ. ನಾವು ಪ್ರಜ್ಞಾವಂತರಾದಂತೆಲ್ಲ ಮೌಢ್ಯ ವಿಸ್ತಾರಗೊಳ್ಳುತ್ತಿರುವುದು ಒಂದು ದುರಂತವೇ ಸರಿ.
ಪ್ರಪಂಚದ ಎಲ್ಲಾ ರಾಷ್ಟ್ರಗಳು ಅದರಲ್ಲೂ ಐರೋಪ್ಯ ರಾಷ್ಟ್ರಗಳು ಖಗೋಳ ಶಾಸ್ತ್ರದ ಬೆನ್ನತ್ತಿ ಹೋಗುತ್ತಿದ್ದರೆ. ಭಾರತ ಜ್ಯೋತಿಷ್ಯದ ಕೊಳಕಿನಲ್ಲಿ ಕೊಳೆತು ನಾರುತ್ತಿದೆ. ರಷ್ಯಾದವರು, ಅಮೇರಿಕಾದವರು ಕ್ಷಿಪಣಿಗಳನ್ನು ಅಥವಾ ರಾಕೆಟ್ಟುಗಳನ್ನು ಕಂಡು ಹಿಡಿಯಲು ಗ್ರಹ ತಾರೆಗಳ ಸ್ಥಾನಗಳನ್ನು ಗುಣಿಸಿ ಲೆಕ್ಕಿಸುತ್ತಿದ್ದರೆ, ಭಾರತದಲ್ಲಿ ಜ್ಯೋತಿಷ್ಯವೆಂಬ ಮಾಯಾ ಬಲೆಹಿಡಿದು ಹುಟ್ಟುವ, ಸಾಯುವ, ಕೂಡಿಸುವ, ವಿಚ್ಛೇಧಿಸುವ ಲೆಕ್ಕಗಳನ್ನು ಗುಣಿಸುತ್ತಿರುವುದು ವಿಪರ್ಯಾಸ. ಅದಕ್ಕೆ ಪೂರಕವಾಗಿ ಸಮಾಜವನ್ನು ತಿದ್ದಿ ಸನ್ಮಾರ್ಗದೆಡೆಗೆ ಕೊಂಡೊಯ್ಯಬೇಕಾದ ದೃಶ್ಯ ಮಾಧ್ಯಮಗಳೇ ಕುಮ್ಮಕ್ಕು ನೀಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಭವಿಷ್ಯವನ್ನು ಹೇಳುವವರೇ ತಮ್ಮ ಭವಿಷ್ಯದರಿವಿಲ್ಲದೇ ಇನ್ನೊಬ್ಬರ ಎಂಜಲು ತಿಂದು ಬದುಕು ಸಾಗಿಸುತ್ತಿರುವಾಗ ಜನ ಸಮುದಾಯ ನೈಜ ಸ್ಥತಿಯನ್ನು ಅರಿತು ಮೂಢ ನಂಬಿಕೆಗಳ ಸಂಪ್ರದಾಯದಿಂದ ಮುಕ್ತಿ ಹೊಂದಬೇಕಿದೆ. ಇದರ ಹಿನ್ನಲೆಯಲ್ಲಿ ತಾರ್ಕಿಕವಾಗಿ ಇಂತಹ ವಿಷಯಗಳಲ್ಲಿ ಚಿಂತನಾಶೀಲತೆ ಅಗತ್ಯವಾಗಿದೆ. ಪ್ರತಿಯೊಬ್ಬರು ವೈಜ್ಞಾನಿಕವಾಗಿ ತಮ್ಮ ಜೀವನದ ಮೌಲ್ಯಗಳನ್ನು ವೃದ್ಧಿಸಿಕೊಳ್ಳಬೇಕಿದೆ. ಅದರಲ್ಲೂ ದೃಶ್ಯ ಮಾಧ್ಯಮದ ಜ್ಯೋತಿಷಿಗಳ ನಡೆ, ನುಡಿ ನಮಗೆ ಅಗತ್ಯವೇ ಎಂದು ಪರಾಮರ್ಶಿಸಬೇಕಿದೆ. ಜ್ಯೋತಿಷ್ಯವನ್ನು ಧಿಕ್ಕರಿಸಿದಾಗ ಮಾತ್ರ ಮೌಢ್ಯದ ಬೇರನ್ನು ಕೀಳಲು ಸಾಧ್ಯ.
ಕೊಟ್ರೇಶ್.ಎಸ್.ಉಪ್ಪಾರ್, ಆಲೂರು.
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ