( ಕೃತಿ ವಿಶ್ಲೇಷಣೆ)
ಅಶ್ವಘೋಷ, ಭಾಸ, ಶೂದ್ರಕ, ಕಾಳಿದಾಸ, ಹರ್ಷ ಮತ್ತು ಭವಭೂತಿಯರು ಭಾರತ ಕಂಡಂತಹ ಶ್ರೇಷ್ಠ ಪ್ರಾಚೀನ ಪ್ರತಿಭಾವಂತ ನಾಟಕಕಾರರು. ಮಧ್ಯ ಯುಗದಲ್ಲಿ ಶ್ರೇಷ್ಠ, ಶಾಸ್ತ್ರೀಯ ರಂಗ ಕಲೆಯು ರಾಜ, ಮಹಾರಾಜರಿಂದ ಪೋಷಿಸಲ್ಪಟ್ಟು ಜನರ ಬೆಂಬಲದೊಂದಿಗೆ ವಿವಿಧ ಪ್ರಾದೇಶಿಕ ಶೈಲಿಗಳಿಗೆ ಪರಿವರ್ತನೆಹೊಂದಿತು.
ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಜಾತ್ರಾ, ಬಂಗಾಳ, ತಮಾಷಾ, ಭವಾಯಿ, ಮಹಾರಾಷ್ಟ್ರ, ಗುಜರಾತ್, ನೌತಾಂಕಿ, ಉತ್ತರ ಪ್ರದೇಶ, ಮಾಚ್ ಪ್ರದೇಶ, ಖಚಾಲ, ರಾಜಸ್ಥಾನ, ಯಕ್ಷಗಾನ, ಇವು ಸ್ಥಳೀಯ ನಾಟಕ ಶೈಲಿಗಳಾಗಿ ಉಳಿದುಕೊಂಡವು.
ಇನ್ನು ಕರ್ನಾಟಕ ರಂಗ ಚಳುವಳಿ ವಿಷಯಕ್ಕೆ ಬಂದರೆ 1918ರಲ್ಲಿಯೇ ಆಧುನಿಕ ರಂಗಚಳುವಳಿ ಆರಂಭವಾಯಿತು. 1930-40ರ ಅವಧಿಯಲ್ಲಿ ಟಿ.ಪಿ. ಕೈಲಾಸಂ, ಕುವೆಂಪು, ಅನಕೃ, ಕೆ. ಶಿವರಾಮ ಕಾರಂತ, ಗೋವಿಂದಪೈ ಮುಂತಾದವರು ನಾಟಕಗಳನ್ನು ಬರೆದರು. ಈ ಸ್ವಾತಂತ್ರ್ಯ ನಂತರ ಗಿರೀಶ್ ಕಾರ್ನಾಡ್, ಲಂಕೇಶ್, ಚಂಪಾ, ಕಂಬಾರ, ಬೇಲೂರು ಕೃಷ್ಣಮೂರ್ತಿ ಕನ್ನಡನಾಡಿನ ರಂಗಭೂಮಿಗೆ ತಮ್ಮ ಕೊಡುಗೆ ನೀಡಿದರು. ಬಿ.ಬಿ.ಕಾರಾಂತ, ಕೆ.ವಿ.ಸುಬ್ಬಣ್ಣ, ಪ್ರಸನ್ನ, ಗುಡಿಗೇರಿನಾಗರಾಜ್, ಚಿಂದೋಡಿಲೀಲಾ, ಗುಬ್ಬಿ ವೀರಣ್ಣನಂತಹ ಮಹಾನ್ ನಿರ್ದೇಶಕರು ಕನ್ನಡ ರಂಗಭೂಮಿಯ ಬೆಳವಣಿಗೆಗೆ ಶ್ರಮಿಸಿದರು.

ಕಳೆದ ಮೂರು ದಶಕಗಳಿಂದಲೂ ಹಲವಾರು ನಾಟಕಗಳನ್ನು ರಚಿಸುತ್ತಾ ರಂಗಸಜ್ಜಿಕೆಯ ಮೇಲೆ ಪಾತ್ರವಾಗುತ್ತಾ, ಅನೇಕ ಯುವಕರಿಗೆ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಬರವಣಿಗೆಯೆಂಬುದೊಂದು ಸಾಗರವಿದ್ದಂತೆ, ಖತ್ತಿ ಮಸೆದಷ್ಟು ಹೇಗೆ ಹರಿತವಾಗುತ್ತದೋ ಹಾಗೆಯೇ ಬರವಣಿಗೆ ಮಾಗಿದಷ್ಟು ಪಕ್ವಗೊಳ್ಳುತ್ತದೆ. ಅಂತೆಯೇ ಅನಂತರಾಜುರವರು ಕಥೆ, ಕವನ, ಕ್ಷೇತ್ರ ಪರಿಚಯ, ವ್ಯಕ್ತಿ ಪರಿಚಯ, ವೈಚಾರಿಕ ಲೇಖನಗಳು, ನಾಟಕ ರಚನೆ ಹಾಗೂ ನಾಟಕ ವಿಮರ್ಶೆಗಳು ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಮಿಂದು ಯಶ ಕಂಡಿದ್ದಾರೆ.
ಪ್ರಸ್ತುತ ಇವರ ‘ಅಭಿನಯ ಅಭಿವ್ಯಕ್ತಿ’ ಕೃತಿಯನ್ನು ಓದಲು ಕೈಗೆತ್ತಿಕೊಂಡಾಗ ಕುತೂಹಲಭರಿತವಾಗಿ ಕಂಡಿತು.
ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಇದರಲ್ಲಿ ನಾಟಕಕಾರರು, ರಂಗಭೂಮಿ ಕಲಾವಿದರು, ನಾಟಕ ನಿರ್ದೇಶಕರು, ಸಂಚಾಲಕರು ಹೀಗೆ ನಾಟಕ ಕ್ಷೇತ್ರದ ಅನೇಕ ಸ್ತರಗಳಲ್ಲಿ ಗುರ್ತಿಸಿಕೊಂಡ, ಕಾರ್ಯನಿರ್ವಹಿಸಿದ ಸುಮಾರು 150ಕ್ಕೂ ಹೆಚ್ಚು ಗಣ್ಯಾತಿಗಣ್ಯರನ್ನು ಸೂಕ್ಷ್ಮವಾಗಿ ಲೇಖಕರು ಪರಿಚಯಿಸಿದ್ದಾರೆ.
ಎಸ್.ವಿ. ರಂಗಣ್ಣ, ಡಾ|| ಎಸ್.ಕೆ. ಕರೀಂಖಾನ್, ಡಾ|| ಹೆಚ್.ಕೆ. ಲಕ್ಕಪ್ಪಗೌಡ, ಕೆ.ಎಸ್. ಅಶ್ವಥ್, ಮತಿಘಟ್ಟ ಕೃಷ್ಣಮೂರ್ತಿ, ಡಾ|| ಮಳಲಿ ವಸಂತಕುಮಾರ್, ಬೇಲೂರು ಕೃಷ್ಣ ಮುಂತಾದ ಮಹಾನ್ ರಂಗಭೂಮಿ ಸೇವಾಕೈಂಕರ್ಯದ ಮೇಲೆ ಅನಂತರಾಜು ರವರು ಬೆಳಕು ಚೆಲ್ಲಿದ್ದಾರೆ. ಹಾಗೆಯೇ ಸಮಕಾಲೀನ ರಂಗಭೂಮಿ ಕಲಾವಿದರ ಕುರಿತು ಪರಿಚಯಿಸಿದ್ದಾರೆ.
ಪ್ರಸ್ತುತ ಕೃತಿಯಲ್ಲಿ ಕಲಾವಿದರು ಹಾಸನ ಜಿಲ್ಲೆಗೆ ಮಾತ್ರ ನಿಲುಗೊಳ್ಳದೇ ರಾಜ್ಯವ್ಯಾಪಿಯಾಗಿ ವ್ಯಾಪಿಸಿದ್ದಾರೆ. ಇಲ್ಲಿ ಲೇಖಕರು ಕಲಾವಿದರ ಕಾಲಘಟ್ಟಗಳನ್ನು ನಿರ್ಣಯಿಸಿ ಶ್ರೇಣಿಕೃತಗೊಳಿಸಿದ್ದರೆ ಕೃತಿ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು. ನಾಟಕಕಾರರು, ಕಲಾವಿದರು, ನಿರ್ದೇಶಕರು, ಪೋಷಕರು ಹೀಗೆ ವಿಂಗಡಿಸಿ ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ಸಾಧನೆಗೈದವರ ವಯೋಮಾನದ ಶ್ರೇಣಿಕರಣಗೊಳಿಸುವಲ್ಲಿ ಲೇಖಕರು ಶ್ರಮವಹಿಸಿಬೇಕಾಗಿತ್ತು ಅನಿಸುತ್ತದೆ.
ಈಗತಾನೆ ರಂಗಭೂಮಿಗೆ ಪಾದರ್ಪಣೆ ಮಾಡುವವರು ಮೊದಲಾರ್ಧದಲ್ಲಿ, ಎಸ್.ವಿ ರಂಗಣ್ಣ, ಕರೀಂಖಾನ್, ಮತಿಘಟ್ಟ ಕೃಷ್ಣಮೂರ್ತಿಯಂತಹ ದ್ವಿತಿಯಾರ್ಧದ ಕೊನೆಯಲ್ಲಿ ಕಾಣಸಿಗುತ್ತಾರೆ. ಈ ಮುಂಚೆಯೇ ತಿಳಿಸಿದಂತೆ ವಿಭಾಗಿಸಿ ಸಾಧನಾ ಶ್ರೇಣಿಕೃತಗೊಳಿಸಿದ್ದರೆ, ಇದೊಂದು ಅದ್ಭುತ ಗ್ರಂಥ, ನೂರಾರು ರಂಗಕಲಾವಿದರ ಪರಿಚಯ ಒಂದೇ ಕೃತಿಯಲ್ಲಿ ನಮಗೆ ಕಟ್ಟಿಕೊಟ್ಟ ಅನಂತರಾಜುರವರಿಗೆ ಕೃತಜ್ಞತೆಗಳನ್ನು ಅರ್ಪಿಸಲೇಬೇಕು. ನಿಜಕ್ಕೂ ಹಲವಾರು ರಂಗಕರ್ಮಿಗಳ ಪರಿಚಯವನ್ನು ಕುತ್ತು ಬಾರದಂತೆ ಸಂದರ್ಶಿಸಿ, ಸಂಗ್ರಹಿಸಿ ಬರವಣಿಗೆಯ ಲಯದಲ್ಲಿ ತರುವುದು ಒಂದು ಸಾಧನೆಯೇ ಸರಿ. ಅದರಲ್ಲಿ ಹಾಸನ ಜಿಲ್ಲೆಯ ರಂಗಭೂಮಿ ಕೈಪಿಡಿಯಂತಿರುವ ಈ ಕೃತಿಯು ಜಿಲ್ಲೆಯಲ್ಲಿ ರಂಗಚಳುವಳಿ ಬೆಳೆದು ಬಂದ ಬಗೆಯನ್ನು ತಿಳಿಸುವಲ್ಲಿ, ಹಾಗೆಯೇ ಅದರ ಹಿಂದಿನ ಸಾಧಕರ ಪರಿಚಯವನ್ನು ವೂಡಿಸುತ್ತದೆ. ಪ್ರಸ್ತುತ ಕೃತಿಯು ರಂಗಭೂಮಿ ಅಧ್ಯಾಯನಾಸಕ್ತರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಹೀಗೆ ಪ್ರತಿಯೊಬ್ಬರಿಗೂ ವರದಾನದಂತಿದೆ. ಇಂತಹ ಕೃತಿಯನ್ನು ನೀಡಿದಂತಹ ಅನಂತರಾಜುರವರಿಗೆ ಧನ್ಯವಾದಗಳು, ಹಾಗೆಯೇ ಇವರ ಸಾಹಿತ್ಯಾ ಸೇವಾ ಕೈಂಕರ್ಯ ಇನ್ನಷ್ಟು ಹೊಳಪು ಕಾಣಲೆಂದು ಆಶಿಸುತ್ತೇನೆ.
- ಕೊಟ್ರೇಶ್ ಎಸ್. ಉಪ್ಪಾರ್
ಆಲೂರು - 9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ