ಬುಧವಾರ, ಜುಲೈ 30, 2014

‘ಆಕಸ್ಮಿಕ’


“ರೇಣು, ಶೇವಿಂಗ್ ಮಾಡ್ಕೋಳೋ ಹೀಗಿದ್ರೆ ನೀನು ನಿಜಕ್ಕೂ ಚೆನ್ನಾಗಿ ಕಾಣೋಲ್ಲ” ಎಂದು ಪುಚ್ಚಂಗಪ್ಪ ಕೇಳಿದ. ಪುಚ್ಚಂಗಪ್ಪ್ಪನಂತೆ ನಾನು, ತ್ರಿಶಾಂತ್ ಅನೇಕ ಬಾರಿ ಕೇಳಿ ಪ್ರತಿಫಲಸಿಗದೇ ಸುಮ್ಮನಾಗಿದ್ದೆವು. ಆದ್ರೆ ರೇಣುನಿಂದ ಯಾವುದೇ ಉತ್ತರ ಬರಲಿಲ್ಲ. ದೇವದಾಸನಂತೆ ಗಡ್ಡಬಿಟ್ಟು. ಮೀಸೆ ಬಿಟ್ಟು, ಹುಚ್ಚನಂತೆ ವರ್ತಿಸುತ್ತಿದ್ದ. ಆದ್ರೆ  ಅವನ ಮನಸ್ಸಿನ ಗಾಯಬಲ್ಲವರಂದ್ರೆ ಇಡೀ ಕಾಲೇಜಿನಲ್ಲಿ ನಾನು ಮತ್ತು ತ್ರಿಶಾಂತ್ ಇಬ್ರೆ! ಅಷ್ಟೊತ್ತಿಗೆ ರೇಣು ಕೈ ಬೆರಳುಗಳ ಮಧ್ಯೆ ಕಿಂಗ್ ಬಂದು ಕೂತಾಗಿತ್ತು. ಅವನು ಸಿಗರೇಟ್ ಹೊಗೆ ಬಿಡುವುದೇ ಸೊಗಸು, ಚಿತ್ತ ಚಿತ್ತಾರದ ಸುರುಳಿಗಳು, ವಿವಿಧ ಭಂಗಿಗಳಲ್ಲಿ ಸೇದುವ ರೀತಿ ನಿಜಕ್ಕೂ ಸೊಗಸು, ಆದ್ರೆ ಸದ್ಯ ಅವನ ಸೇದುವಿಕೆ ಸಾದವಾಗಿತ್ತು. ಆದ್ದರಿಂದಲೇ ಪುಚ್ಚಂಗಪ್ಪ, ಮಹೇಶ್ ನೀನಾದ್ರೂ ಹೇಳು ಇವನಿಗೆ ಏನಾಯ್ತು ಎಂದ. ಈಗಬೇಡ ಇನ್ನೊಮ್ಮೆ ಫ್ರೀಯಾಗಿ ಹೇಳ್ತೀನಿ ಟೈಮ್ ಆಯ್ತು. ಇಲ್ಲಾಂದ್ರೆ ಪೈಯದ್ ಸರ್ ಹತ್ರ ಸರಿಯಾಗಿ ಉಗಿಸ್ಕೋಬೇಕಾಗುತ್ತೆ ಬೇಗ ಹೋಗೋಣ” ಎಂದು  ಎಬ್ಬಿಸ್ಕೊಂಡು ಕಾಲೇಜ್ ಕಡೆ ಹೆಜ್ಜೆ ಹಾಕಿದ್ವಿ. ಆದ್ರೆ ಮೂರ್ನಾಲ್ಕು ತಿಂಗಳ ಹಿಂದಿನ ಘಟನೆ ನನ್ನನ್ನು ಕಾಡುತ್ತಲೇಯಿತ್ತು.
ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಕಾಲವದು. ಜನವರಿ ಮಾಹೆಯ ಧಗೆಯುಕ್ಕಿಸುವ ರಾತ್ರಿ ! ಎಕ್ಸಾಮ್ ಬ್ಯಾರೆ ಸಮೀಪಿಸುತ್ತಿದ್ದವು. ಕಾಲೇಜಿನಲ್ಲಿ ಸಿಲ್ಲಾಬಸ್ ಪÀÇರ್ತಿ ಮಾಡಿರಲಿಲ್ಲ. ಅರ್ಥವಾಗದ ಪಾಠಗಳು, ಚಿಂತೆಗೆ ನಿದ್ರೇನೇ ಬರ್ತಾಯಿರ್ಲಿಲ್ಲ. ನಮ್ಮ ಮಾತೃಭಾಷೆಯಾಗಿದ್ರೆ ಯಾರ ಹೆಲ್ಪು ಬೇಕಿರಲಿಲ್ಲ. ಆದರೆ ನಮ್ಮದು ರಾಷ್ಟ್ರ ಭಾಷೆಯಾಗಿತ್ತು. ! ಅಂದು ಮಧ್ಯರಾತ್ರಿ ಒಂದು ಗಂಟೆ ಸುಮಾರಿರಬಹುದು. ಹತ್ತು ಹಲವು ಯೋಚನೆಗಳಿಂದ ನಿದ್ರೆ ಹತ್ತಿರವೇ ಸುಳಿಯಲಿಲ್ಲ, ಪುಸ್ತಕ ಕೈಲಿಡಿದರೂ ಮಸ್ತಕಕ್ಕೆ ಹೋಗ್ತಾಯಿಲ್ಲ, ಟಾಯ್ಲೆಟ್ ಬಂದಂಗಾಯ್ತು, ನಾನು ಎದ್ದು  ಹಿಂದಿನ ಬಾಗಿಲು ತೆಗೆದು  ಟಾಯ್ಲೆಟ್ ರೂಮಿನೊಳಗೆ ಹೋಗುವ ಘಳಿಗೆಯಲ್ಲಿ ಇದ್ದಕ್ಕಿದ್ದಂತೆ ಹುಡುಗಿಯ ಚೀರಾಟ ಕೇಳಿಸಿತು. ನಾವಿರುವ ಮೂರನೇ ಮಹಡಿಯಿಂದಲೇ ಸುತ್ತಲೂ ಇಣುಕಿದೆ ಎಲ್ಲೂ ಕಾಣುತ್ತಿಲ್ಲ, ಧ್ವನಿ ಮಾತ್ರ ಕಾಪಾಡಿ.. ಕಾಪಾಡಿ . . ಎಂದು ಕೇಳ್ತಾಯಿದೆ. ತಕ್ಷಣ ಒಳಗಡೆ ಬಂದು ನಿದ್ರಾಸ್ವರ್ಗದಲ್ಲಿದ್ದ ನನ್ನ ಸ್ನೇಹಿತನಾದ ರೇಣು ಮತ್ತು ತ್ರಿಶಾಂತನನ್ನು ಎಬ್ಬಿಸಿದೆ. ರೇಣು ಅಪರೂಪಕ್ಕೊಮ್ಮೆ ನಮ್ಮ ರೂಮಿಗೆ ಬರುತ್ತಿದ್ದ. ಒಳ್ಳೆಯ ಸ್ನೇಹಿತ. ಅವನ ವಾಸ್ತವ್ಯ ಒಂಟಿಕೊಪ್ಪಲಲ್ಲಿ. ಅವನು ನಿದ್ರೆಯಲ್ಲಿ ಮಾತ್ರ ಕುಂಭಕರ್ಣ ! ಅದರಲ್ಲೂ ರೇಣು ಮಲಗಿದರೆ ಎಬ್ಬಿಸುವುದೇ ಕಷ್ಟಸಾಧ್ಯವಾಗುತ್ತಿತ್ತು. ತಕ್ಷಣಕ್ಕೆ ಎದ್ದ ತ್ರಿಶಾಂತನ ಮುಂದೆ ಎಲ್ಲಾ ವಿವರಿಸಿದೆ. ಅವನು ಕಷ್ಟಕ್ಕೆ ಮಿಡಿವ ಹೃದಯ. ಎಲ್ಲೀ “ಬಾ. . ನೋಡೋಣ” ಎಂದು ಇಬ್ಬರೂ ತಕ್ಷಣ ಹೊರಗಡೆ ಬಂದೆವು. ಅವನೂ ಗಾಬರಿಯಾದ. ಆ ಧ್ವನಿ ಗಣೇಶ ದೇವಸ್ಥಾನದ ಆಸುಪಾಸಿರಬಹುದು ಎಂದೆ. ಕೂಡಲೆ ರೇಣುನನ್ನು ಹರಸಾಹಸದಿಂದ ಎಬ್ಬಿಸಿಕೊಂಡು ಬರಬರನೆ  ಮೆಟ್ಟಿಲುಗಳನ್ನು ಇಳಿಯುತ್ತಾ ಕೆಳಗೆ ಶೆಟರ್ ತೆಗೆದು ಹೊರಬಂದೆವು, ಕೂಡಲೇ ಆ ಧ್ವನಿಯ ಹಿಂಬಾಲಿಸುತ್ತಾ ಸಾಗಿದೆವು. ಅಲ್ಲಿ ಒಂದಿಬ್ಬರು ಮಧ್ಯಮವಯಸ್ಕರು ಕುಡಿದ ಅಮಲಿನಲ್ಲಿ ಆ ಹುಡುಗಿಯನ್ನು ಎಳೆದಾಡುತ್ತಿದ್ದರು. ಕೂಡಲೇ ಅವರೀರ್ವರನ್ನು ಎಳೆದು ಬಡಿದೆವು. ಮೈಸೂರಿನಲ್ಲಿ ನಾವಿರೋ ಬೆಂಕಿ ನವಾಬ್ ರಸ್ತೆ ಒಂದು ರೀತಿಯ ರೆಡ್ ಲೈಟ್ ಏರಿಯಾ ಇದ್ದಂಗೆ, ಆದ್ದರಿಂದಲೇ ದಿನಾ ವಿರಾಮ ನೀಡದೇ ಗಸ್ತು ಹೊಡಿತ್ತಿದ್ದ ಪೋಲಿಸ್ನೋರು ಅವತ್ತು ಸುಳಿಯದಿದ್ದದ್ದು ದುರದೃಷ್ಟ. ಈ ರಸ್ತೆ ಮಹಿಮೆಯ ಬಗ್ಗೆ ನಿಮಗೆ ಹೇಳಲೇಬೇಕು. ಸಯ್ಯಾಜಿರಾವ್ ರಸ್ತೆಯ ಪಕ್ಕದಲ್ಲಿರುವುದೇ ಈ ರಸ್ತೆ, ಹೆಜ್ಜೆ-ಹೆಜ್ಜೆಗೂ ಬಾರ್ ಅಂಡ್ ರೆಸ್ಟೋರೆಂಟ್ಸ್, ಮಿಲ್ಟ್ರಿ ಹೋಟೆಲ್‍ಗಳ ಅಟ್ಟಹಾಸ, ಇಲ್ಲಿನ ಗಣೇಶ ವೈನ್ಸ್ ಇಡೀ  ಮೈಸೂರಲ್ಲಿ ಫೇಮಸ್ಸು. ಸಂಜೆ ಏಳು ಗಂಟೆಯಾಯಿತೆಂದರೆ ಇಲ್ಲಿ ಹೆಂಗಸರು ತಿರುಗಾಡುವುದು  ಅಪರೂಪ. ಸುಳಿದಾಡಿದರೂ ಅವರು ಚರ್ಮದಂಧೆಯಲ್ಲಿ ಸಿಲುಕಿದವರೇ ಎಂದು ಭಾವಿಸುವವರೇ ಅನೇಕ ! ಈ ಏರಿಯಾದಲ್ಲಿ ನಪÀÅಂಸಕಲಿಂಗದವರೂ ಬಹಳ ಹೆಚ್ಚು, ಆದ್ದರಿಂದಲೇ ಇದು ಮೈಸೂರಲ್ಲೇ ಡೇಂಜರ್ ಏರಿಯಾ ಎಂದು ಗುರ್ತಿಸಿಕೊಂಡಿದೆ. ಬೆಳ-ಬೆಳಿಗ್ಗೆ ಕಾಫಿ ಹೀರಲು ಕೆಳಗಿಳಿದು ಬಂದರೆ ಅದಾಗಲೇ ಐದಾರು ವಿಕೆಟ್‍ಗಳು ಬೀದಿಯ ಗಲ್ಲಿ-ಗಲ್ಲಿಯಲ್ಲಿ ಉರುಳಿರುತ್ತಿದ್ದವು. ಎಲ್ಲೆಮೀರಿ ಕುಡಿದು ಗಟಾರದಲ್ಲಿ ಬಿದ್ದ ಆ ದೇಹಗಳನ್ನು ನೋಡಿದರೆ ಶವಗಳಂತೆಯೇ ತಿಳಿಯಬೇಕಿತ್ತು. ಆದರೆ ಬಿಸಿಲು ಹತ್ತುತ್ತಿದ್ದಂಗೆ ಎದ್ದು ಮಾಯವಾಗುತ್ತಿದ್ದವು. ದಿನಾ ಸಾಯೋರಿಗೆ ಅಳೋರ್ಯಾರು ಎಂಬ ಗಾಧೆಯಂತೆ ಇಂತಹ ದೃಶ್ಯಗಳಿಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಇತ್ತ ಆ ಹುಡುಗಿ ಅಳುತ್ತಲೇಯಿತ್ತು. ನಾವೆಲ್ಲಾ ಅನುಮಾನದಿಂದಲೇ ಆ ಹುಡುಗಿಯತ್ತ ನೋಡಿದೆವು. ಯಾಕೆಂದ್ರೆ ಅಷ್ಟೊತ್ನಲ್ಲಿ ಆ ಏರಿಯಾದಲ್ಲಿ ತಿರುಗಾಡುವವರೇ ಅಂತಹವರು ! ಆದ್ದರಿಂದ ಸಹಜವಾಗಿಯೇ ನಮ್ಮಗಳ ಮನಸ್ಸು ಅಂತೆಯೇ ಯೋಚಿಸಿತು. ಹತ್ತಿರದಿಂದ ನೋಡಿದಾಗ ನಮ್ಮ ನಿರ್ಧಾರಬೇರೆಯಾಗಿರಬಹುದೆಂದೆನಿಸಿತು. ಸುಂದರವಾದ, ವಿದ್ಯಾವಂತೆಯಂತೆ ಕಾಣುತಿದ್ಲು. ಹಳದಿ ಚೂಡಿದಾರ ಧರಿಸಿದ, ಅವಳು ಮುಸು ಮುಸು ಎಂದು ಅಳುತ್ತಲೇ ಇದ್ಲು, ನಿಮ್ಮ ಹೆಸರೇನೆಂದು ಎಲ್ರೂ ಒಮ್ಮೆಲೇ ಕೇಳಿದೆವು. ಮಾತನಾಡದೇ ಬರೀ ದುಃಖಿಸುತ್ತಿದ್ದಳು.
ಸ್ವಲ್ಪ ಸಾವಾರಿಸಿಕೊಳ್ಳಲಿ ಎಂದು ತುಸು ಸಮಯದ ನಂತರ ನಾನೇ ಮುಂದುವರೆದು ನಿಮ್ಮ ಮನೆ ಯಾವ ಕಡೆ ಬರತ್ತಮ್ಮಾ ಎಂದೆ. ಅಳುತ್ತಲೇ ಒಂಟಿಕೊಪ್ಪಲು ಎಂದಳು. ತಕ್ಷಣಕ್ಕೆ ತ್ರಿಶಾಂತ “ರೇಣು ಹೇಗೂ ನಿನ್ನ ಗಾಡಿಯಿದೆ. ನಮ್ಮ ರೂಮಲ್ಲಿ ಉಳಿಸಿಕೊಳ್ಳೋದು ಸೂಕ್ತ ಎನಿಸಲ್ಲ. ನಿನ್ನ ರೂಮು ಅಲ್ಲೇ ಇರೋದು. ಈ ಹುಡುಗಿ ಮನೆಗೆ ಡ್ರಾಪ್ ಮಾಡಿಬಿಡು. ಇಷ್ಟೊತ್ನಲ್ಲಿ ಅವರ ಮನೆಗೆ ಸೇರಿಸುವುದೇ ಒಳ್ಳೆಯದು” ಎಂದ, ನಂಗೂ ಅದೇ ಸರಿ ಅನ್ನಿಸ್ತು. “ಇಲ್ಲೇ ನಮ್ಮ ರೂಮಿದೆ ಬಾರಮ್ಮ. ಅಲ್ಲಿಂದ ನಿಮ್ಮನಿಗೆ ಹೋಗುವಂತೆ” ಎಂದು ಹೇಳಿದೆ. ಅವಳು ಹಿಂದೇನೇ ಬಂದಳು.  ಎಲ್ರೂ ರೂಮತ್ರ ಬಂದ್ವಿ, “ ರೇಣು ನೀನು ಗಾಡಿ ಕೀ ತಗೊಂಡು ರೆಡಿಯಾಗಿ ಬಾ” ಎಂದು ತ್ರಿಶಾಂತ ಹೇಳಿದ, ನಮ್ಮ ರೂಮು ಮೂರನೇ ಮಹಡಿಯಲ್ಲಿದ್ದರಿಂದ ರೇಣು ಬೇಗ ಬೇಗನೇ ಮೇಲೇರಿದ. ಇತ್ತ ಬಹುಶಃ ಆ ಹುಡುಗಿಗೆ ನಮ್ಮ ಮೇಲೆ ನಂಬಿಕೆ  ಮತ್ತು ವಿಶ್ವಾಸ ಬಂದಿತ್ತು ಅನ್ನಿಸುತ್ತೆ. ಅಣ್ಣ ನಿಮ್ಮೆಸರೇನು ? ಎಂದು ಮೌನ ಮುರಿದ್ಲು, ಆಗ ನಾನೇ ಪರಿಚಯಿಸಿಕೊಂಡೆ ನಾನು ಮಹೇಶ್, ಇವನು ನನ್ನ ಸ್ನೇಹಿತ ತ್ರಿಶಾಂತ್, ನಾವೆಲ್ಲ ಬಿ.ಎಡ್ ಮಾಡ್ತಾ ಇದಿವಿ. ನಮ್ಮದು ಹಾಸನ, ಇವನ್ದು ದಾವಣಗೆರೆ ಎಂದೆ. ಮತ್ತೆ ಅವರು ಎಂದು ಪ್ರಶ್ನಿಸಿದಳು. ಅಷ್ಟೊತ್ತಿಗೆ ತ್ರಿಶಾಂತ “ಅವ್ನ ಪರಿಚಯಾನೇ ಮಡ್ಲಿಲ್ಲ. ಅವ್ನ ಹೆಸರು. . . . ಅನ್ನುವಷ್ಟರಲ್ಲಿ ಅವಳೇ ‘ರೇಣು’ ಎಂದಳು.  ಯಾಕಂದ್ರೆ ಅವನ ಹೆಸರನ್ನ ನಾವಾಗ್ಲೇ ಅವಳ ಮುಂದೇನೇ ಬಳಸಿದ್ದನ್ನ ಗ್ರಹಿಸಿದೆ. ತ್ರಿಶಾಂತ ಮುಂದುವರೆದು “ಅವನ ಊರು ಬಂದು ಭದ್ರಾವತಿ, ನಿನ್ನ ಪರಿಚಯವನ್ನು ಮಾಡ್ಕೊಳಿಲ್ವಲ್ಲಮ್ಮ” ಎಂದ. ಅವಳೇ ಮುಂದುವರಿದು ನನ್ನ ಹೆಸರು ಸುಮ. ಬೆಂಗಳೂರಲ್ಲಿ ಫೋರ್ತ್ ಸೆಮ್ ಇಂಜಿನಿಯರಿಂಗ್ ಮಾಡ್ತಾಯಿದೀನಿ. ರಾಜಾಜಿನಗರದಲ್ಲಿ ಪೀಜೀಲಿ ಇದೀನಿ. ಒಂದು ತಿಂಗಳು ರಜೆಯಿದೆ ಎಂದು ಊರಿಗೆ ಬಂದೆ. ನನ್ನ ದುರಾದೃಷ್ಟ ಎಂಬಂತೆ ಆಟೋಗಳು ಸಿಗ್ಲಿಲ್ಲ. ಇಷ್ಟೋತ್ನಲ್ಲಿ ಸಿಟಿ ಬಸ್ಸಂತೂ ಇಲ್ಲ. ರೈಲ್ವೇ ಸ್ಟೇಷನ್‍ಗೆ ಹೋದ್ರೆ ಅಲ್ಲಿ ಯಾವಾಗ್ಲೂ ಆಟೋಗಳುಯಿರ್ತವೆ. ಅಲ್ಲಿಂದ ಹೋದ್ರಾಯ್ತು ಎಂದು ಅಲ್ಲಿಗೆ ಹೊರಟಿದ್ದೆ.  ಅಷ್ಟೊತ್ತಿಗೆ ಅವರು ನನ್ನ ಹಿಂಬಾಲಿಸಿದರು. ನಾನು ಹೆದರಿ ಓಡಲಾರಂಭಿಸಿದೆ.  ಅವರಿಂದ ತಪ್ಪಿಸಿಕೊಳ್ಳಲು ಮೈನ್ ರೋಡ್ ಬಿಟ್ಟು ಈಕಡೆ ಬಂದೆ.  ಆದ್ರೂ ಅವರ ಕೈಗೆ ಸಿಕ್ಕಿಬಿಟ್ಟೆ.  ದೇವರು ದೊಡ್ಡವನು, ನೀವುಗಳು  ದೇವ್ರು ಬಂದಂಗ ಬಂದು ಕಾಪಾಡಿದ್ರಿ. ಒಂದು ವೇಳೆ ನೀವು ಬರ್ಲಿಲ್ಲ ಅಂದಿದ್ದರೆ ನೆನಸ್ಕ್ಕೊಳ್ಳೋಕೆ ಆಗ್ತಾಯಿಲ್ಲ!  ತುಂಬಾ ಥ್ಯಾಂಕ್ಸ್ ಅಂದ್ಲು.  ಅಷ್ಟೊತ್ತಿಗೆ ರೇಣು ಕೆಳಗಿಳಿದು ಬಂದ.  ಗಾಡಿ ಮೇಲೆ ಕೂತು ಸ್ಟಾರ್ಟ್ ಮಾಡಿದ.  ಅವಳು ಹಿಂಬದಿ ಸೀಟಿನಲ್ಲಿ ಕುಳಿತ್ಲು, ರೇಣು ಹುಷಾರಾಗಿ ಕರ್ಕೊಂಡು ಹೋಗಿ ಮನೆ ತಲುಪಿಸು ಎಂದು ಬೀಳ್ಕೊಟ್ಟೆವು.

ಹೀಗೆ ಮೂರ್ನಾಲ್ಕು ತಿಂಗಳು ಕಳೆದವು.  ಬರ ಬರುತ್ತಾ ರೇಣುವಿನ ವರ್ತನೆ ವಿಚಿತ್ರವಾಯಿತು.  ಒಂಟಿಯಾಗಿ ಕಾಲಕಳೆಯುತ್ತಿದ್ದ, ಅವನ ನಗು ಮೊಗದ ಕಳೆ ಮಾಯವಾಗಿತ್ತು.  ಮುಂಚಿನ ಉತ್ಸಾಹ ಕುಂದಿಹೋಗಿತ್ತು.  ನಾನು, ತ್ರಿಶಾಂತ ಅವನÀ ಬಗ್ಗೆ ಬಹಳ ತಲೆ ಕೆಡಿಸಿಕೊಂಡೆವು.  ಏಪ್ರಿಲ್‍ನಲ್ಲಿ ಅವನ ಮದುವೆ ನಿಶ್ಚಯವಾಗಿತ್ತು.  ಒಂದು ದಿನ ನಾನು ತ್ರಿಶಾಂತ ಒಂಟಿಕೊಪ್ಪಲಿಗೆ ಹೋದೆವು.  ಅವನದು ಬಹಳ ಚಿಕ್ಕ ರೂಮು.  ಅಂದು ಭಾನುವಾರ.  ಒಬ್ಬನೇ ಪಿಳಿ, ಪಿಳಿ ಕಣ್ ಬಿಟ್ಕೊಂಡ್ ಮಲಗಿದ್ದ. ಯಾವಾಗ್ಲೂ ಲ್ಯಾಪ್‍ಟಾಪ್‍ನಲ್ಲಿ ಟೈಮ್‍ಪಾಸ್ ಮಾಡ್ತಾಯಿದ್ದ, ಆದ್ರೆ ಅಂದು  ಲ್ಯಾಪ್‍ಟಾಪ್ ಅನಾಥವಾಗಿತ್ತು.  ಅವನನ್ನು ಹೇಗೋ ಪುಸಲಾಯಿಸಿ ಒಬ್ಬನೇ ಇರೋದು ಸರಿಯಲ್ಲ ಎಂದು ಲಗೇಜು ಸಮೇತ ರೂಂ ಖಾಲಿ ಮಾಡಿಸಿ ನಮ್ಮ ರೂಮಿಗೆ ಕರೆತಂದೆವು.  ಅಂದು ರಾತ್ರಿ ಅವನೇ ಅಣ್ಣಾ, ಏನೋ  ಬೇಜಾರು, ಅಭ್ಯಂತರಯಿಲ್ಲಾಂದ್ರೆ ಎಣ್ಣೆ ತರೋಣ್ವೇ ಎಂದು ಮೌನ ಮುರಿದ.  ನಾವಿಬ್ಬರೂ ಇಷ್ಟ ಇಲ್ದೆ ಇದ್ರೂನೂ ಅವನಿಗೋಸ್ಕರ ಒಪ್ಪಿಕೊಂಡೆವು. ಪಕ್ಕದಲ್ಲೇ ಇದ್ದ ಗಣೇಶ ವೈನ್ಸ್‍ಗೆ ಹೋಗಿ ಆಫ್ ಬಾಟಲ್ ಎಂಸೀಬಿ, ಸೈಡ್ಸ್, ಎರಡು ಲೀ. ಸೆವೆನಪ್‍ನ್ನು ತಂದೆವು. ಹಾಗೆಯೇ ಪಕ್ಕದಲ್ಲಿದ್ದ ಕೇರಳಾಪುರ ಮಿಲ್ಟ್ರಿ ಹೋಟಲಲ್ಲಿ ಮೂರು ಊಟ ಆರ್ಡರ್ ಮಾಡಿದ್ವಿ. ಎಣ್ಣೆ ಹೀರುವಷ್ಟರಲ್ಲಿ ಊಟವೂ ಬಂದಿತು. ಊಟ ಸವಿಯುತ್ತ ತ್ರಿಶಾಂತ ‘ರೇಣು’ ಏನಾಯ್ತು ಅಂತ ಹೇಳು, ಯಾಕೆ ಇತ್ತೀಚೆಗೆ ಡಲ್ ಆಗಿದೀಯಾ ಎಂದು ಕೇಳಿದ. ಬಹುಶಃ ಅಷ್ಟು ದಿನದ ದುಃಖದ ಉನ್ಮಾದವನ್ನು ಹೊರಸೂಸಲೆಂದೇ ಆ ದಿನ ಕಾದಿತ್ತೋ ಎನ್ನುವಂತೆ ರೇಣುನೇ ತನ್ನ ಕಥೆಯನ್ನು ಹೇಳಲಾರಂಭಿಸಿದ.
ನಾನು ಆವತ್ತು ನಿಮ್ಮ ರೂಮಿನಿಂದ ಆ ಹುಡುಗಿಯನ್ನು ಒಂಟಿಕೊಪ್ಪಲಿಗೆ ಕರ್ಕೊಂಡ್ ಹೋದ್ನಲ್ಲಾ, ಅವತ್ತು ಅವರ ಮನೇಲಿ ಯಾರೂ ಇರ್ಲಿಲ್ಲ.  ಆದ್ದರಿಂದ ನಮ್ಮ ರೂಮಿಗೆ ಬನ್ನಿ, ಇವತ್ತು ಉಳ್ಕೊಂಡು ಬೆಳಿಗ್ಗೆ ಹೋಗುವಿರಂತೆ ಎಂದು ರೂಮಿಗೆ ಕರೆದೆ.  ಅವಳು ಊಂ ಎಂದ್ಲು.  ರೂಮಲ್ಲಿ ಅವಳನ್ನು ದಿವಾನ್ ಮೇಲೆ ಮಲಗಿಸಿ, ನಾನು ಕೆಳಗೆ ಚಾಪೆ ಹಾಸಿಕೊಂಡು ಮಲಗಿದೆ. ಅರ್ಧಗಂಟೆ ಕಳೆದಿರಬಹುದು, ನನಗೆ ನಿಧಾನವಾಗಿ ನಿದ್ರೆ ಆವರಿಸ್ತಾಯಿತ್ತು.  ಅಷ್ಟೊತ್ತಿಗೆ ಡಭ ಡಭ ಬಾಗಿಲು ಬಡಿದ ಶಬ್ದ,  ತಕ್ಷಣ ಎದ್ದು ಬಾಗಿಲು ತೆರೆದೆ.  ನನ್ನ ಮಾವ ಬಾಗಿಲಲ್ಲಿ ಪ್ರತ್ಯಕ್ಷ!  ಏನೂ ಮಾತನಾಡಲೂ ಹೊಳೆಯಲಿಲ್ಲ, ಒಳಗಡೆ ಕರೆದು ಛೇರಲ್ಲಿ ಕೂರಿಸಿದೆ.  ಏನ್ ಮಾವ ಇದ್ದಕಿದ್ದಂಗೆ ಇಷ್ಟೊತ್ತಲ್ಲಿ ಎಂದೆ.  “ಚಾಮರಾಜನಗರಕ್ಕೆ ಹೋಗಿದ್ದೆ, ಕೆಲ್ಸ ಇತ್ತು, ಬರುವಾಗ ಲೇಟಾಯ್ತು, ಹೇಗೂ ಬೆಳಿಗ್ಗೆ ಆರು ಗಂಟೆ ಶಿವಮೊಗ್ಗ ಟ್ರೇನ್‍ಗೆ ಹೋದ್ರಾಯ್ತು ಎಂದು ಬಂದೆ” ಎಂದರು.  ಆಗ ಒಂದು ಫೋನ್ ಮಾಡೋದ್ ಅಲ್ವ, ನಾನೇ ಕರ್ಕೊಂಡು ಬರ್ತಿದ್ದೆ ಎಂದೆ.  ಫೋನ್ ಮಾಡ್ದೆ, ನಿಮ್ಮ ಸ್ನೇಹಿತರು ಎತ್ತಿದ್ರು! ಅವರ ರೂಮಲ್ಲೇ ಬಿಟ್ಟಿದಿಯಂತಲ್ಲಾ ಎಂದಾಗಲೇ ನಿಮ್ಮ ರೂಮಲ್ಲಿ ಚಾರ್ಜಿಗೆ ಹಾಕಿದ್ದು ನೆನಪಿಗೆ ಬಂತು.
ಮಾವನೇ ಮಾತು ಮುಂದುವರಿಸ್ತಾ ಹೌದು ರೂಂ ನಲ್ಲಿ ಒಬ್ಬನೇ ಇರೋದು ಎಂದಿದ್ದೆ.  ಇವರ್ಯಾರು ಎಂದು ತುಂಬು ಬೆಡ್‍ಶೀಟ್ ಹೊದ್ದು ಮಲಗಿದ್ದ ಆ ಹುಡುಗಿ ಕಡೆ ಕೈಮಾಡಿ ತೋರಿಸಿದ.  ಇವನು ನನ್ ಫ್ರೆಂಡ್, ನನ್ನ ಕ್ಲಾಸ್ ಮೆಟ್, ಇವನೂ ನಮ್ಮ ಕಾಲೇಜಲ್ಲೇ ಬಿ.ಎಡ್. ಮಾಡ್ತಾ ಇರೋದು.  ಕಂಬೈನ್ಡ್ ಸ್ಟಡಿಗೋಸ್ಕರ ಬಂದಿದ್ದಾನೆ ಎಂದು, ಅವರಿಗೂ ಚಾಪೆ ಹಾಸಿ ಮಲಗಿಸಿದೆ.  ಇನ್ನೇನು ಲೈಟ್ ಆಫ್ ಮಾಡಬೇಕೆನ್ನುವಷ್ಟರಲ್ಲಿ ಬಹುಶಃ ಸೊಳ್ಳೆ ಕಡಿದಿರಬಹುದೇನೋ. . ಆ ಹುಡುಗಿ ಕಾಲುಗಳನ್ನು ಒಂದಕ್ಕೊಂದು ಉಜ್ಜಿದಳೆನಿಸುತ್ತೆ.  ಕಾಲ್ಗೆಜ್ಜೆಯ ಸಪ್ಪಳ ಮಾವನ ಕಿವಿಗೆ ಕೇಳಿಸುವುದೊಂದೇ ತಡ, ಸಡನ್ನಾಗಿ ಎದ್ದು ಬೆಡ್ ಶೀಟ್ ತೆಗೆದು, ಯಾರು ಈ ಹುಡುಗಿ?  ನನ್ನ ಮುಂದೆ ಡ್ರಾಮಾ ಮಾಡ್ತೀಯಾ, ನನ್ಮಗಳು ಹುಟ್ಟಿದಾಗ್ಲೆ ನಿಮ್ಮವ್ವ, ನನ್ನ ತಂಗಿ. . . ಹೆಸರು ಜೋಡಿಸಿದ್ದರಿಂದ ನಿಂಗೆ  ಕೊಟ್ಟು ಮದುವೆ ಮಾಡ್ಬೇಕಂತ ಮಾಡಿದ್ದೆ.  ಆದ್ರೆ ಇಲ್ಲಿ ನೀನು ಈ ರೀತಿಯಾಡ್ತಿಯಂತ ನಾನು ಕನಸೂ ಕಂಡಿರಲಿಲ್ಲ.  ಯಾರೇನೂ  ಮಾಡಕ್ಕಾಗುತ್ತೆ.  ಅವಳು ಅಲ್ಲಿ ನಿನ್ನ ಮ್ಯಾಲೆ ಜೀವ ಇಟ್ಕೊಂಡು ಶಬರಿ ಕಾದಂಗ ಕಾಯ್ತಾಯಿದಾಳಾ, ಇತ್ತ ನೀನು ಸಿಕ್ಕ ಸಿಕ್ಕೋರ ಜೊತೆಗೆ ಚಕ್ಕಂದ ಆಡು” ಎಂದು ಸಿಟ್ಟಿಗೆದ್ದು ತನ್ನ ಬ್ಯಾಗ್‍ನೆಲ್ಲಾ ತಗೊಂಡ್ ಹೊರಟೇಬಿಟ್ಟ.  ಎಷ್ಟು ಪರಿಪರಿಯಾಗಿ ಹೇಳಿದರೂ ನನ್ನ ಮಾವ ಕೇಳುವ ಸ್ಥಿತಿಯಲ್ಲಿರಲಿಲ್ಲ.  ಏನು ಮಾಡೋದ್ ಎಂದು ತೋಚದೇ ಸುಮ್ಮನಾಗಿಬಿಟ್ಟೆ.  ಡೋರ್ ಹಾಕಿ ಮಲಗಿದೆ, ನನ್ನ ಮಾವ ತರ್ಲೆ ಮನುಷ್ಯ, ಊರಿಗೆ ಹೋಗಿ ಏನೇನು ರಾದ್ಧಾಂತ ಮಾಡ್ತಾನೋ ಅಂತ ಚಿಂತೇಲಿ ಬೇಗ ನಿದ್ರೇನೆ ಬರ್ತಾಯಿಲ್ಲ.  ತಡವಾಗಾದರೂ ಹೇಗೋ ನಿದ್ರೆಗೆ ಜಾರಿದೆ.
ಬೆಳಿಗ್ಗೆ ಎಚ್ಚರವಾದಾಗ ಎಂಟು ಗಂಟೆಯಾಗಿತ್ತು.  ತಕ್ಷಣ ದಿವಾನ್ ಕಡೆ ನೋಡಿದೆ.  ಅವಳು ಕಾಣಿಸಲಿಲ್ಲ, ಡೋರ್ ತೆಗೆದೇಯಿತ್ತು, ಗಾಬರಿಯಾದೆ.  ಇನ್ನೇನು ಅವಳ ಮನೆಗೆ ಹೋಗಿರ್ತಾಳೆ ಅಂತ ತಿಳಿದು ಹೊರಗಡೆ ಬಂದು ಟಾಯ್ಲೆಟ್‍ಗೆ ಹೋಗೋಣ ಎಂದು ಮುಚ್ಚಿದ ಡೋರನ್ನು ತೆಗೆಯಲು ಚಿಲಕಕ್ಕೆ ಕೈ ಹಾಕಿದೆ, ಅಷ್ಟರಲ್ಲಿ ಒಳಗಡೆ ನಾನಿದಿನಿ ಎಂದು ಆ ಹುಡುಗಿಯ ದನಿ ಕೇಳಿಸಿತು. ಓಹೋ ನೀವು ಇಲ್ಲಿದೀರ ಎಂದು ಪುನಃ ರೂಮಿನೊಳಗೆ ಬಂದೆ, ಆದರೂ ರಾತ್ರಿಯಾದ ಯಡವಟ್ಟು ಇನ್ನೂ ನನ್ನ ಕಾಡುತ್ತಲೇಯಿತ್ತು.  ಅಷ್ಟೊತ್ತಿಗೆ ಆ ಹುಡುಗಿ ಬಂದಳು.  ಒಳಗೆ ಬರುತ್ತಲೇ, “ಸಾರಿ ಕಣ್ರಿ, ನಿಮಗೆ ನಾನು ಬಹಳ ತೊಂದ್ರೆ ಕೊಟ್ಟೆ, ಬಹಳ ಪಜೀತಿ ಪಟ್ರಿ” ಅಂದ್ಲು.  ನಾನು ಹಾಗೇನಿಲ್ಲ ಬಿಡಿ ಎಂದೆ.  ಅವಳೇ ಮಾತು ಮುಂದುವರಿಸ್ತಾ ನಿಮ್ಮ ಮಾವ ರಾತ್ರಿ  ರೂಂ ಗೆ ಬಂದಾಗ ನಾನು ಎಚ್ಚರವಾಗಿದ್ದೆ.  ನಿಮ್ಮಾವ ಸಿಟ್ಟು ಮಾಡ್ಕೊಂಡು ಹೋದಾಗ ನಿಮಗೆ ನಾನು ಎಂತಹ ತೊಂದ್ರೆ ಕೊಟ್ನೆಲ್ಲಾ ಎಂದು ನೊಂದುಕೊಂಡೆ ಗೊತ್ತಾ? ಎಂದು ತಲೆ ತಗ್ಗಿಸಿದಾಗ ಆ ಹುಡುಗಿಯ ಮೇಲೆ ಮತ್ತಷ್ಟು ಕರುಣೆ ಬಂತು. ಅಲ್ಲಿವರೆಗೆ ಅವಳೆಸರನ್ನೂ ಸಹ ಕೇಳಿರಲಿಲ್ಲ.  ಆವಾಗ ಹೌದು ನಿನ್ನೆಸರೇನು? ಏನ್ ಮಾಡ್ತಾ ಇದೀರಿ ಎಂದು ಕೇಳಿದೆ. ಆಗ ಅವಳ ಪುರಾಣ ಹೇಳಿದ್ಲು.  ನಂತರ ಬ್ರಷ್ ಮಾಡಿ ಸ್ನಾನ ಮಾಡಿಕೊಂಡು ರೆಡಿಯಾದೆ. ಅವಳೂ ಲ್ಯಾಪ್‍ಟ್ಯಾಪಲ್ಲಿ ಗೇಮ್ ಆಡ್ತಾಯಿದ್ಲು, ನಂತರ ನಾವಿಬ್ಬರೂ ಹೊರಟೆವು. ಟೈಮಾಗಿದೆ, ನೀವಿನ್ನು ಹೊರಡಿ.  ನಾನು ಕಾಲೇಜಿಗೆ ಹೋಗ್ಬೇಕು, ಅಲ್ಲಿ ನಮ್ಮ ಸ್ನೇಹಿತರು ಕಾಯ್ತಾಯಿರ್ತಾರೆ ಎಂದೆ. ಆದ್ರೆ ಅವಳು ಇಲ್ಲ ನಮ್ಮನಿಗೆ ಬಂದೇ ಹೋಗ್ಬೇಕು, ಇಲ್ಲೇ ತಾನೆ . . ಬನ್ನಿ ಎಂದು ಬಲವಂತ ಮಾಡಿದ್ಲು.  ನಾನು ಊಂ . . ಅನ್ಕೊಂಡು ಹೋದೆ.
ಮನೆ ಹತ್ತಿರ ಬಂತು, ಹೊರಗಡೆ ಪೊಟ್ಯಾಕಲ್ಲಿ ಒಬ್ರು ಛೇರ್ ಹಾಕ್ಕೊಂಡು ಪೇಪರ್ ಓದ್ತಾಯಿದ್ರು, ಬಹುಶಃ ಅವರೇ ಇವಳ ತಂದೆ ಇರಬಹುದು ಎಂದು ಮನದಲ್ಲಿಯೇ ಅಂದುಕೊಂಡೆ.  ಇಬ್ಬರೂ ಗಾಡಿ ಇಳಿದು ಕಾಂಪೌಂಡ್ ಒಳಹೋಗುತ್ತಿದ್ದಂತೆ. .  ಸುಮ ಏನ್ ದಿಢೀರನೆ ಬಂದುಬಿಟ್ಟಿಯಲ್ಲ, ಒಂದು ಫೋನ್ ಮಾಡಾಕಾಗ್ತಾಯಿರ್ಲಿಲ್ವ ಎಂದರು.  ಇಲ್ಲ ಮಾವ ಮೊನ್ನೆ ಸೆಟ್ ಕಳೆದೋಯ್ತು, ಆದ್ರಿಂದ ಯಾರ್ಗೂ ಫೋನ್ ಮಾಡೋಕೆ ಆಗ್ತಿಲ್ಲ ಎಂದ್ಲು.  ಬೆಂಗಳೂರು ಎಷ್ಟು ಗಂಟೆಗೆ ಬಿಟ್ಟೆ, ಇವರು ನಿನ್ನ ಫ್ರೆಂಡಾ . . . ಬಾರಪ್ಪಾ ಕೂರು ಎಂದು ನನ್ನ ಪ್ರೀತಿಯಿಂದ ಕರೆದು ಕೂರಿಸಿದರು.  ಅಷ್ಟೊತ್ತಿಗೆ ಅವರಮ್ಮ . . ಹೊರ ಬರುತ್ತಲೇ ಓ . . ಸುಮ ಈಗ ಬಂದೆಯಾ ಬಾ ಅಂತ ಸ್ವಾಗತಿಸಿದರು.
ನಂತರ ಆ ಹುಡುಗಿ ಇವರು ಚನ್ನಕೇಶವ ಅಂತ ನನ್ನ ಮಾವ . . , ಇವರು ಲಲಿತಾಂಬ ನಮ್ಮ ತಾಯಿ . ., ಇನ್ನೂ ನಮ್ಮನೇಲಿ ಇರೋದು ಸೌಜನ್ಯ ನನ್ನ ತಂಗಿ, ಟ್ಯೂಷನ್‍ಗೆ ಹೋಗಿರ್ಬೇಕು ಎಂದು ತನ್ನ ಫ್ಯಾಮಿಲಿಯನ್ನು ಸುಮ ಪರಿಚಯಿಸಿದಳು.  ತಕ್ಷಣಕ್ಕೆ ಅವಳ ತಂದೆಯ ಬಗ್ಗೆ ಕೇಳಬೇಕೆನಿಸಿತು.  ಅಷ್ಟೊತ್ತಿಗೆ ಎಲ್ರೂ ಒಳಗೆ ಹೋದೆವು.  ಸುಮನೇ ಮಾತು ಮುಂದುವರಿಸ್ತಾ . . ಒಂದು ಫೋಟೋಕ್ಕೆ ಹಾರ ಹಾಕಿದ್ದನ್ನು ತೋರಿಸಿ ಇವರೇ ನನ್ನ ತಂದೆ, ಮಾನಸ ಗಂಗೋತ್ರೀಲಿ ಕನ್ನಡ ಪ್ರೊಫೆಸರ್ ಆಗಿದ್ರು, ಅವರ ಹೆಸರು ರಾಮಮೂರ್ತಿ ಅಂತ ದಿವಂಗತ ತಂದೆಯನ್ನು ಪರಿಚಯಿಸಿದಳು.  ಆ ಕ್ಷಣ ನಿಜಕ್ಕೂ ನನಗೆ ಬೇಜಾರಾಯಿತು.
ಅವರ ಮಾವ ಇವರು ಯಾರೂ ಅಂತ ಪರಿಚಯವನ್ನೇ ಮಾಡ್ಲಿಲ್ವಲ್ಲ ಸುಮ ಎಂದಾಗ ರಾತ್ರಿಯ ಘಟನೆಯನ್ನೆಲ್ಲಾ ವಿವರಿಸಿ ಹೇಳಿದಳು.  ನನ್ನ ರೂಮಿನ ವಿಷಯವನ್ನೊಂದು ಬಿಟ್ಟು!  ಅವರು ದಿಗ್ಭ್ರಾಂತರಾಗಿ ಕೇಳಿದರು.  ಕೊನೆಗೆ ಇವರ ಹೆಸರು ‘ರೇಣು’ ಅಂತ ಪಕ್ಕದ ಬೀದೀಲಿ ರೂಂ ಮಾಡ್ಕೊಂಡಿದ್ದಾರೆ.  ಬಿ.ಎಡ್. ಮಾಡ್ತಾಯಿದ್ದಾರೆ ಎಂದು ಪರಿಚಯಿಸಿದಳು.  ಅವರ ಮಾವ ಹಾಗೂ ಅಮ್ಮನ ಕಣ್ಣುಗಳು ತೇವಗೊಂಡವು.  ಇಬ್ಬರೂ ಒಮ್ಮೆಲೇ ನಿಮ್ಮಿಂದ ಬಹಳ ಉಪಕಾರವಾಯಿತಪ್ಪಾ, ದೇವರು ನಿನ್ನ ರೂಪದಲ್ಲಿ . .  ನಮಗೆ ಸಹಾಯ ಮಾಡ್ದ . . ಒಸಿ ಇರು ಕಾಫಿ ಮಾಡ್ಕೊಂಡು ಬರ್ತೀನಿ . .ಎಂದು ಅವರಮ್ಮ ಒಳನಡೆದ್ರು.  ಇಲ್ಲ ತುಂಬಾ ಲೇಟಾಗಿದೆ ನಾನು ಬರ್ತೀನಿ ಎಂದು ಎದ್ದು ನಿಂತೆ.  ಇಲ್ಲ ಕಾಫಿ ಕುಡ್ಕೊಂಡು ಹೋಗಿ ಪ್ಲೀಜ್ ಎಂದು ಗೆರೆ ಹಾಕಿದ್ಲು.  ಚನ್ನಕೇಶವ ಮಾತು ಮುಂದುವರಿಸ್ತಾ ಈಗಿನ ಕಾಲದಲ್ಲಿ ನಿಮ್ಮಂತಹ ಹುಡುಗರು ಸಾವಿರಕ್ಕೆ ಒಬ್ಬರು ಸಿಗೋದು ಅಪರೂಪ, ನೀವು ನಮ್ಮ ಸುಮನ ಕಾಪಾಡ್ದೆ ಇದ್ದಿದ್ರೆ ಏನು ಅನಾಹುತವಾಗ್ತಿತ್ತೋ  ಏನೋ? ಎನ್ನುವÀಷ್ಟರಲ್ಲಿ ಅವಳ ತಾಯಿ ಕಾಫಿ ಸಮೇತ ಆಗಮಿಸಿದರು.  ಎಲ್ರೂ ಕಾಫಿ ಸವಿದೆವು.  ನಾನು ಹೊರಡಲು ಸಿದ್ಧವಾಗುತ್ತಿದ್ದಂತೆ ಅವರ ತಾಯಿ ನಿಮ್ಮ ಸಹಾಯ ಏಳೇಳು ಜನ್ಮದಲ್ಲಿ ಮರೆಯಲ್ಲ ಕಣಪ್ಪಾ ಎಂದು ಕಣ್ತುಂಬಿ ಕಳಿಸುವಾಗ ನಾನು ನಿಜಕ್ಕೂ ಧನ್ಯ ಎಂದುಕೊಂಡೆ.  ಇಂತಹ ಫ್ಯಾಮಿಲಿ ಒಂದು ಕಡೆ, ನನ್ನ ಮನೆಯ  ಅನುಮಾನ ಪಿಶಾಚಿ ಮಾವ ಇನ್ನೊಂದು ಕಡೆ, ಮನುಷ್ಯನ ಮನಸ್ಸುಗಳಲ್ಲಿ ಇಷ್ಟೊಂದು ಅಗಾಧ ವ್ಯತ್ಯಾಸಗಳು ಇರ್ತಾವಾ?  ಎಂದು ಪ್ರಶ್ನೆ ಮೂಡಿತು.
ಸುಮ ಬಹಳ ಸುಂದರವಾದ ಹುಡುಗಿ, ತುಂಬಾ ಚಲುವೆಯಾಗಿದ್ದಳು.  ಇಂತಹ ನಂದನವನ ಮನೆಗೆ ಇವಳನ್ನು ಕೈ ಹಿಡಿದು ಬರುವ ಅದೃಷ್ಟ ಯಾವ ಪುಣ್ಯಾತ್ಮನಿಗೆ ಇದೆಯೋ ಎಂದು ಅಲ್ಲಿಂದ ಹೊರಟು ಬಂದೆ.  ನೇರವಾಗಿ ನಿಮ್ಮ ರೂಮಿಗೆ ಬಂದಾಗ ನೀವಾಗಲೇ ಹೊರಟು ಹೋಗಿದ್ರಿ.  ಕಾಲೇಜಿಗೆ ಬಂದಾಗ ಅಷ್ಟೊತ್ತಿಗೆ ಪ್ರಾಕ್ಟಿಕಲ್ ಪ್ರಾಕ್ಟೀಸ್ ಟೀಚಿಂಗ್ ಹಾಕಿದ್ರು, ಆ ಟೆನ್ಷನಲ್ಲಿ ನೀವೂ ಕೇಳಲಿಲ್ಲ, ನಾನೂ ಈ ಘಟನೆ ಹೇಳೋದನ್ನ ಮರೆತುಬಿಟ್ಟೆ.
ಅಂದು ಸಂಜೆ ರೂಂಗೆ ಹೋದ ಮೇಲೆ ಅವಳ ನೆನಪೇ ಕಾಡ್ತಾಯಿತ್ತು.  ಸುಂದರವಾದ ಮನೆ, ಮನೆಯಲ್ಲಿ ಅಮ್ಮಾ, ಇಬ್ಬರು ಮಕ್ಕಳು, ಆವಾಗೀವಾಗ ಬಂದು ಹೋಗುವ ಮಾವ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಕುಟುಂಬದಲ್ಲಿದ್ದ ಸೌಜನ್ಯ, ಪ್ರೀತಿ, ಸ್ನೇಹ, ನಂಬಿಕೆ, ಅವಳು ಇಂಜಿನಿಯರ್ ಪದವೀಧರೆಯಾಗ್ತಾಯಿದ್ರೂ ಸ್ವಲ್ಪ ಅಹಂಕಾರವೂ ಇರಲಿಲ್ಲ.  ಅವಳ ಅಂದವಾದ ಮೊಗ ನನ್ನ ಹೃನ್ಮನದಲ್ಲಿ ಹಾಗೆಯೇ ಮೂಡಿತು.  ತಕ್ಷಣ ನನ್ನ ಫೋನ್ ರಿಂಗಣಿಸಿತು.  ಕೂಡಲೇ ಕೈ ತೆಗೆದಾಗ ನನ್ನ ತಂದೆ, ರಿಸೀವ್ ಮಾಡಿ ಮಾತನಾಡಿದೆ.  ಚೆನ್ನಾಗಿದೀರಾ . . ಅಮ್ಮಾ ಹೇಗಿದಾರೆ ಎಂದೆ.  ಆ ಕಡೆಯಿಂದ ಎಲ್ರೂ ಬದುಕಿದ್ವಿ, ನೀನು ಅರ್ಜೆಂಟ್ ಊರಿಗೆ ಬಾ . . ಎಂದು ಕಟ್ ಮಾಡಿದ್ರು.  ಆಗ್ಲೇ ನನ್ನ ಮಾವನ ತರ್ಲೆ ಅಲ್ಲೂ ಹರಡಿದೆ ಎಂದು ಅರ್ಥವಾಯ್ತು.
ಊರಿಗೆ ಹೋಗಿ ಎಲ್ಲಾ ಹೇಳಿದರಾಯ್ತು ಅಂತ ಊರಿಗೆ ಹೋದೆ.  ಮನೆಯಲ್ಲಿ ಶೃಂಗಸಭೆ ಸೇರಿಯಾಗಿತ್ತು.  ನಾನು ಎಂಟ್ರಿ ಕೊಡುತ್ತಲೇ ಮಾವ ಮಂಗಳಾರತಿ ಶುರು ಮಾಡಿದ.  ಪಡಸಾಲೆ ಕಂಬ ತಬ್ಬಿಕೊಂಡು ರತ್ನ ಕಂಬನಿ ಇಳಿಸುತ್ತಲೇ ಮುಸು ಮುಸು ಅಂತ ಅಳ್ತಿದ್ಲು  ಅಪ್ಪನೂ ಸಹ ಅವರಂತೆಯೇ ಎಗರಾಡಿದರು. ಅಮ್ಮನೂ ಫುಲ್‍ಸ್ಟಾಪ್ ನೀಡದೇ ಬೈಯ್ದರು. ನಾನು ನಿಜ ಹೇಳಿದರೂ ಯಾರೂ ನಂಬಲಿಲ್ಲ.  ಎಲ್ರೂ ಉಗಿತಾನೇ ಇದ್ರು, ನಂಗೂ ತಡಕೊಳ್ಳಕಾಗ್ಲಿಲ್ಲ. . ! ಸಹನೆ ಮೀರಿ ಹೌದು ಅದೇ ನಿಜ ಅಂದ್ಕೊಳ್ಳಿ ಏನ್ ಈವಾಗ? ಎಂದೆ.  ತಕ್ಷಣ ನಮ್ಮಾವ ಎದ್ದೋನೆ ರತ್ನಳನ್ನು ಕೈ ಹಿಡ್ಕೊಂಡು” ಬಾ ಮಗಳೇ ಯಾವಾಳ್ನಾದ್ರೂ ಕಟ್ಕೊಳ್ಳಿ. . ಈ ಮಾನನ್ ಗೇಡಿ ಮನಿಗೆ ಸೊಸೆಯಾಗಿ ಬರೋದ್ಕಿಂತ ಹಾಗೇ ಇರೋದ್ ನೂರು ಪಾಲು ಉತ್ತಮ” ಎಂದು ಹೊರಟೇ ಬಿಟ್ಟ.  ಮುಂಚಿನಿಂದಲೂ ನಮ್ಮ ಮಾವಂಗೆ ನನ್ನ ಕಂಡ್ರೆ ಅಷ್ಟಕ್ಕಷ್ಟೇ!  ಈ ಒಂದು ಘಟನೆ ನಮ್ಮ ಮಾವಂಗೆ ಹಾಸಿಗೆ ಹಾಸಿ ಕೊಟ್ಟಂಗಾಯ್ತು”, ನಮ್ಮ ತಂದೆ-ತಾಯಿಯು ಈ ವಿಷಯದಲ್ಲಿ ಮಾವನಿಗೆ ಬಲವಂತ ಮಾಡಲಿಲ್ಲ ಅದುವೇ ನಂಗೆ ದಿಗ್ಭ್ರಮೆಯಾಯ್ತು, ಎರಡು ದಿವಸದಲ್ಲಿ ನನ್ನ ಫ್ಯಾಮಿಲಿಗೆ ಅಂತಹ ಮಂಕುಬೂದಿ ಎರಚಿದ್ದ ನಮ್ಮಾವ.  ತುಂಬಾ ಬೇಜಾರಾಗಿ ಅಲ್ಲಿಂದ ತಕ್ಷಣ ಮೈಸೂರಿಗೆ ಹೊರಟು ಬಂದೆ.
ನಮ್ಮ ಮಾವನ ಮಗಳು ರತ್ನ ಬಹಳ ಒಳ್ಳೆಯ ಹುಡುಗಿ, ಅಷ್ಟೇ ಸುಂದರಿ, ನಾನೆಂದರೆ ಅವಳಿಗೆ  ಪಂಚಪ್ರಾಣ, ನನ್ನನ್ನೇ ನಿತ್ಯ ಆರಾಧಿಸುವ ಆ ಹುಡುಗಿಯ ಬಾಳ ಸಂಗಾತಿಯಾಗುವ ಪುಣ್ಯ ನನ್ನ ಹಣೆಬರಹದಲ್ಲಿಲ್ಲ ಅನ್ನಿಸುತ್ತೆ. ಮಾವನ ಮೇಲಿನ ಸಿಟ್ಟಿಗಾಗಿ, ಅವನು ಮಾಡಿದ ರಾದ್ಧಾಂತಕ್ಕಾಗಿ ಅವರ ಸಂಬಂಧವೇ ಬೇಡವೆಂದು ನಿರ್ಧರಿಸಿ ಚೆನ್ನಾಗಿ ಓದಲು ಪ್ರಯತ್ನಪಟ್ಟೆ.
ಒಂದು ದಿನ ಇದ್ದಕ್ಕಿದ್ದಂತೆ ಸುಮಳ ಮೆಸೇಜ್ ಬಂತು. ಹೀಗೆ ಮುಂದುವರಿದು ಚಾಟಿÉಂಗ್, ಫೇಸ್ ಬುಕ್‍ನಲ್ಲಿ ಹರಟೆಹೊಡೆಯಲಾರಂಬಿಸಿದೆವು. ಸುಮಳ ಸ್ನೇಹ, ಮತ್ತವಳ ಕುಟುಂಬದ ಪ್ರೀತಿ ನÀನ್ನಲ್ಲಿನ ದುಃಖವನ್ನೆಲ್ಲಾ ಮರೆಸಿತು. ಆಗಾಗ ಸುಮಾಳ ಮನೆಗೆ ಹೋಗಿ ಬರುತ್ತಿದ್ದೆ. ಇಬ್ಬರೂ ಕೂಡ ಬಹಳ ಹತ್ತಿರವಾದೆವು. ಕ್ಯಾಂಟೀನ್, ಸಿನೆಮಾ, ಪಾರ್ಕು ಅಂತ ಸುತ್ತಾಡಿದೆವು. ಭಾನುವಾರ ನಿಮ್ಮ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ನಾವಿಬ್ಬರೂ ಪಿಕ್‍ನಿಕ್‍ನಂತೆ ಸುತ್ತುತ್ತಿದ್ದೆವು. ನನಗೆ ತಿಳಿಯದಂತೆ ನಾನು ಸುಮಾಳನ್ನು ಪ್ರೀತಿಸಲು ಶುರುಮಾಡಿದೆ.
ಅಂದಿನಿಂದ ಕುಳಿತರು, ನಿಂತರೂ ಅವಳದೇ ನೆನಪು, ಮಿರಿಮಿರಿ ಮಿಂಚುವ ಕೆಂಪು ವರ್ಣದ ತುಂಬು ಕೆನ್ನೆಗಳು, ದಾಳಿಂಬೆ ಬೀಜದಂತೆ ಹಲ್ಲುಗಳು ಅವಳ ಸೌಂದರ್ಯಕ್ಕೆ ಒಂದು ಮೆರಗು, ಹರಿತವಾದ ಕುಡಿನೋಟ, ಕಾಮನ ಬಿಲ್ಲಿನಂತೆ ಹುಬ್ಬು, ತೇಜಸ್ಸು ತುಂಬಿದ ನಯನಗಳು ನನ್ನನ್ನು  ಮಾಯಾ ಲೋಕಕ್ಕೆ ಕರೆದೋಯ್ದವು ಎಂದು ಹೇಳುತ್ತಿದ್ದಂತೆ, ಇತ್ತ ತ್ರಿಶಾಂತ್ ನೀನು ಕವಿಯಾಗಿ ಬಿಟ್ಟೆಯಲ್ಲೋ ಅಂದ. ಅಷ್ಟೊತ್ತಿಗೆ ನಾನು ಇದನ್ನೆಲ್ಲಾ ಸುರೇಶನ ಮುಂದೆ ಹೇಳಿದ್ರೆ ಒಳ್ಳೆ ಕಥೆ ಬರಿಯೋನು ಅಂದೆ. ಇನ್ನೊಮ್ಮೆ ಕವಿಗಳಿಗೆ ಫ್ರೀಯಗಿ ಹೇಳಿದ್ರಾಯ್ತು ನಿನ್ನ ಕಥೆ ಮುಂದುವರಿಸು ರೇಣು ಅಂತ ತ್ರಿಶಾಂತ್ ಹೇಳಿದ.
‘ರೇಣು’ ಮಾತು ಮುಂದುವರಿಸ್ತಾ ಮೆಸೇಜ್, ಫೇಸ್‍ಬುಕ್‍ನಲ್ಲಿ  ತಿಳಿಸುವುದು ಬೇಡ ಹಳೇ ಲವ್ ಸ್ಟೋರಿಗಳಂತೆ ಕಷ್ಟ ಪಟ್ಟು ಹತ್ತಾರು ಪೇಪರ್ ಹರಿದ್ಹಾಕಿ ಕೊನೆಗೆ ಹರಸಾಹಸ ಮಾಡಿ ಲವ್ ಲೆಟರ್ ಬರೆದೆ. ಅಷ್ಟೊತ್ತಿಗೆ ಫೋನ್ ರಿಂಗಣಿಸಿತು. ಅದೂ ಸುಮಾಳ ಕಾಲೇ..! ಹಲೋ ಎನ್ನುತ್ತಿದ್ದಂತೆ. . . “ರೇಣು ಸಂಜೆ ಐದು ಗಂಟೆಗೆ ಇಲ್ಲೊ ಒಂಟಿಕೊಪ್ಪಲ್ ಪಾರ್ಕ್ ಬಳಿ ಬರ್ತೀರಾ ಅಂದ್ಲು, ನಾನು ಸಂತಸದಿಂದಲೇ ಊಂ ಗುಟ್ಟಿದೆ.
ಕಾಲೇಜಿಗೆ ಬಂದೆ. . . ಅವತ್ತೆ ಪ್ರಿನ್ಸಿ ಮೇಡಂ ಹನ್ನೆರಡು ಪುಟದ ಟೈಪಿಂಗ್ ಮಾಡುವಂತೆ ಸೂಚಿಸಿದ್ರು, ಮೇಡಂ ನಾಳೆ ಮಾಡ್ತೀನಿ ಅಂದೆ, ಇಲ್ಲ ರೇಣು ಅರ್ಜೆಂಟ್‍ಯಿದೆ. ಇವತ್ತೆ ಆಗ್ಬೇಕು ಅಂದ್ರು. ಆದಷ್ಟು ವೇಗವಾಗಿ ಮಾಡಿ ಜೊತೆ ಜೊತೆಗೆ ಕ್ಲಾಸನ್ನೂ ಕೇಳಿ ಬೇಗ ಹೊರಟೆ. ಲೆಟರನ್ನು ಜೋಪಾನವಾಗಿ ಎದೆ ಜೇಬಿನಲ್ಲಿಯೇ ಇಟ್ಟಿದ್ದೆ. ಗಾಡಿ ಏರಿ ಸೀದಾ ಒಂಟಿಕೊಪ್ಪಲು ಪಾರ್ಕ್‍ಗೆ ಹೋದೆ. ಅಂದು ಏನೋ ಸಂತಸ, ಸಡಗರ, ಉನ್ಮಾದ ಮನೆಮಾಡಿತ್ತು. ಅಷ್ಟೊತ್ತಿಗಾಗಲೇ ಸುಮ ಒಂಟಿಯಾಗಿ ಗಸ್ತು ಹೊಡೀತಾಯಿದ್ಲು. ನಾನು ಹೋಗ್ತಿದ್ದಂಗೆ ಹಾಯ್ ಅಂದ್ಲು. ಅವಳೇ ಮಾತು ಮುಂದುವರಿಸ್ತಾ ಏನು ಸಾಹೇಬರು ಬಹಳ ಮಿಂಚ್ತಾಯಿದಿರಲ್ಲಾ ಅಂದು,್ಲ ನನ್ನ ಮನಸ್ಸು ಇನ್ನೂ ಪುಳಕಗೊಂಡಿತು. ಅಲ್ಲೆ ಪಾರ್ಕ್ ಬೆಂಚಮೇಲೆ  ಕೂತಿದ್ದ ಒಬ್ಬ ಹ್ಯಾಂಡ್‍ಸಮ್ ಬಾಯ್‍ನನ್ನು ಕರೆದು. ’ರೇಣು’ ಇವರು ಸುನೀಲ್ ಅಂತ ನನ್ನ ಬಾವಿ ಸಂಗಾತಿ, ಗೌವರ್ನಮೆಂಟ್  ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ಪ್ರೊಫೆಸರ್ ಆಗಿ ಎರಡು ತಿಂಗಳ ಹಿಂದೆ ಅಪಾಯಿಂಟ್ ಆಗಿದೆ, ಸುನೀಲ್ ಇವರು ‘ರೇಣು’ ಅಂತ ನನ್ನ ಬೆಸ್ಟ್ ಫ್ರೆಂಡ್ ಅಂದಾಗ ಇಡೀ ಆಕಾಶವೇ ಕಳಚಿ ನನ್ನ ಮೇಲೆ ಕುಸಿದುಬಿದ್ದಂಗಾಯ್ತು, ಹೃದಯ ನುಚ್ಚುನೂರಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಸುನೀಲ್ ಕೈಕುಲಿಕಿದೆ.
“ರೇಣು ನಾಳೆ ನಿಶ್ಚಿತಾರ್ಥಯಿದೆ ಮಹೇಶಣ್ಣ ಮತ್ತು ತ್ರಿಶಾಂತಣ್ಣನ್ನೂ ಕರ್ಕೊಂಡು ಬನ್ನಿ, ಖಂಡಿತಾ ಬರ್ಬೇಕು ನಿಮಗಾಗಿ ಕಾಯ್ತಾ ಇರ್ತೀವಿ” ಅಂತ ಹೇಳಿ ಸುನೀಲನೊಂದಿಗೆ ಹೊರಟು ಹೋದ್ಲು. ನಾನು ನಿಂತಲ್ಲೇ ಕುಸಿದು ಬಿಟ್ಟೆ, “ಆ ಕಡೆ ನನ್ನನ್ನೇ ಆರಾಧಿಸುವ ರತ್ನ ನನಗೆ ಸಿಗಲಿಲ್ಲ, ಈ ಕಡೆ ನಾನು ಪ್ರೀತಿಸಿದ ಸುಮ ಎಟಕಲಿಲ್ಲ” ಎಂದು ರೇಣು ಮೂಕವಿಸ್ಮಿತನಾದ!.
ಲೇಖಕರ ವಿಳಾಸ: ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ಲೇಖಕರು, ಶಿಕ್ಷಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ