ಚುಟುಕು ಸಹಿತ್ಯ ಪ್ರಕಾರವಾಗಿ ಕಂಡದ್ದು ಅಥವಾ ಗುರುತಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ, ಹಾಗೆ ನೋಡಿದರೆ ಚುಟುಕುಗಳ ಹೊಳಹು ಪ್ರಾಚೀನ ಸಾಹಿತ್ಯದಿಂದಲೂ ಕಾಣುತ್ತದೆ. ವಚನ ಸಾಹಿತ್ಯ, ಜಾನಪದ ತ್ರಿಪದಿ, ಸರ್ವಜ್ಞನ ವಚನ, ನವೋದಯ ಕಾಲದ ಕವಿಗಳ ಚೌಪದಿ ,ತ್ರಿಪದಿ, ತೀರ ಇತ್ತೀಚಿನ ಹನಿಗವನ-ಮಿನಿಗವನಗಳೆಲ್ಲ ಚುಟುಕಿನ ರೂಪವೆನ್ನಬಹುದೇನೋ ? ಕುವೆಂಪುರವರ ಪಕ್ಷಿ ಕಾಶಿಯಲ್ಲಿಯ ‘ಗುಲಾಭಿ’ ಯಂಥ ಕವನವೂ ನಿಶ್ಚಿತವಾಗಿ ಒಂದು ಉತ್ತಮ ಚುಟುಕಾಗಿದೆ.
ಕಳೆದ ಶತಮಾನದ ಆದಿಯಲ್ಲಿ ತೀ.ನಂ ಶ್ರೀಯವರು ಗಥಾಶಸಪ್ತಸತಿಯಿಂದ ಮತ್ತು ಪ್ರಾಕೃತ ಮೂಲಗಳಿಂದ ಮುಕ್ತಕಗಳನ್ನು ಬಿಡಿಮುತ್ತುಗಳೆಂದು ಕನ್ನಡಕ್ಕೆ ತಂದರು. ಪಂಜೆಯವರಿಂದ ಸ್ಪೂರ್ತಿಪಡೆದ ಜಿ.ಪಿ.ರಾಜರತ್ನಂ ಕೂಡ ಹಾಸ್ಯ ಚುಟುಕುಗಳನ್ನು ರಚಿಸಿದರು. ಸಿ.ಪಿ.ಕೆಯವರು ಕೂಡ ಹಲವು ಮೂಲಗಳಿಂದ ಮುಕ್ತಕಗಳನ್ನು ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ ಇದ್ದಾರೆ. ಆಗಿನ ಹಾಸ್ಯ ಲೇಖಕರು ಹಲವಾರು ಕಿರುಗವನಗಳನ್ನು ಚುಟುಕುಗಳನ್ನು ವ್ರತವೆಂಬಂತೆ ಬರೆದರು.
ದಿನಕರ ದೇಸಾಯಿ, ಎಂ,ಅಕ್ಬರ್ ಆಲಿ, ಪರಮೇಶ್ವರ ಭಟ್ಟ, ವಿಡಂಬಾರಿ ಅರಾಸೆ, ಹಾರಾ, ಮೊದಲಾದ ಹಿರಿಯರು ಚುಟುಕು ಪ್ರಕಾರವನ್ನು ಗಟ್ಟಿಗೊಳಿಸಿದರು. ಮುಕ್ತಕ, ರುಬಾಯಿ, ಶಾಯಿರಿ, ಗಜಲ್, ಹಾಯಿಕು, ಲಿಮರಿಕ್, ರೈಮ್ಸ್ ಇಂದು ಚುಟುಕುಗಳಲ್ಲಿ ಬೆರೆತು ಹೋಗಿವೆ.
ಬದುಕಿನ ಬದಲಾವಣೆ ಸಾಹಿತ್ಯದಲ್ಲಿಯೂ ಕಾಣುತ್ತದೆ. ಇಂದಿನ ಬದುಕು ತುಂಬ ವೇಗದ್ದು ಬದುಕಿನ ಯಾವುದೇ ಕ್ಷೇತ್ರಗಳಲ್ಲಿ ನಿಧಾನ, ದೀರ್ಘ ಎಂಬುದಿಲ್ಲ. ಅದರ ಪರಿಣಾಮವಾಗಿಯೇ ಸಾಹಿತ್ಯದಲ್ಲಿಯೂ ಚುಟುಕುಗಳು ಅನಿವಾರ್ಯವಾಗಿವೆ ಎನ್ನಬಹುದು. ಡಾ.ಎಲ್.¨ಸವರಾಜರಂತಹ ಗಂಭೀರ ಸಾಹಿತಿಗಳೂ, ಸಂಶೋಧಕರು ಇಂದು ಚುಟುಕುಗಳನ್ನು ಬರೆದಿದ್ದಾರೆನ್ನುವುದು ಚುಟುಕು ಸಾಹಿತ್ಯದ ಮನ್ನಣೆಯೇ ಆಗಿದೆ. ಚದುರಂಗ, ಎಚ್.ಎಸ್.ಬಿಳಿಗಿರಿ ದೇವನಾಂಪ್ರಿಯ (ಷ.ಶೆಟ್ಟರ)ಯಂಥವರನ್ನೂ ಇಲ್ಲಿ ಹೆಸರಿಸಬಹುದು.
ಸುಗಮ ಸಂಗೀತ, ಲಘು ಸಂಗೀತವೆಂದು ಸಂಗೀತವನ್ನು ಒಪ್ಪಿಕೊಂಡಂತೆ ಚುಟುಕುಗಳನ್ನು ಸಾಹಿತ್ಯವಾಗಿ ಒಪ್ಪಿಕೊಳ್ಳಬೇಕಿದೆ. ಸಂಗೀತಶಾಸ್ತ್ರದ ಆಳವಿಲ್ಲದವನೂ ಸುಗಮ ಸಂಗೀತ ಸವಿಯುವಂತೆ ಸಾಹಿತ್ಯಾಸಕ್ತನಾದವನು ಚುಟುಕುಗಳನ್ನು ಸವಿಯುತ್ತಾನೆ. ಸ್ವಲ್ಪದರಲ್ಲಿ ಏನೆಲ್ಲಾ ಹಿಡಿದಿರುವ ಚುಟುಕುಗಳನ್ನು ಒಂದು ರೀತಿಯಲ್ಲಿ ‘ನ್ಯೂಕ್ಲಿಯಸ್’ದಂತೆ ಕಾಣುತ್ತೇವೆ. ಒಂದು ಶಬ್ದದಲ್ಲಿ, ಒಂದು ಸಾಲಿನಲ್ಲಿ ಎಷ್ಟೆಲ್ಲಾ ಕಸುವು ತುಂಬಿದ ಕವಿಗಳಿದ್ದಾರೆ. ವರ್ತಮಾನದ ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ಕೆಲವು ಸಾಲಿನಲ್ಲಿಯೇ ಹಿಡಿದಿರುವುದು ತುಂಬ ಕಷ್ಟಕರವಾದ ಕಾರ್ಯವೆನ್ನಬಹುದು. ಮುಗಿಲ ಮಡಿಲಲ್ಲಿ ಮೂಡುವ ಕಾಮನ ಬಿಲ್ಲಿನಂತೆ ವರ್ಣರಂಜಿತ ಚುಟುಕುಗಳನ್ನು ಇಂದಿನ ಅನೇಕ ಕನ್ನಡ ಕವಿಗಳು ರಚಿಸುತ್ತಿದ್ದಾರೆ.
ಚೆನ್ನವೀರ ಕಣವಿಯವರಂಥವರು ಒಂದು ಚುಟುಕಿನಲ್ಲಿ ಲಂಚ್ ಎನ್ನುವ ಶಬ್ದವನ್ನು ಎಷ್ಟೊಂದು ಚಮತ್ಕಾರಿಕವಾಗಿ ಉಪಯೋಗಿಸುತ್ತಾರೆ. ಹಳ್ಳಿಗನೊಬ್ಬ ಆಫೀಸಿಗೆ ಬಂದಾಗ ಆಫೀಸ್ ಜವಾನ ‘ಸಾಹೇಬರು ಲಂಚ್ಗೆ’ ಹೋಗಿದ್ದಾರೆ ಎಂದಾಗ- ‘ಲಂಚ್ಗೂ ಸಮಯ ಬೇರೆ ಇದೆಯೋ! ಎಂದು ಉದ್ಘರಿಸುತ್ತಾನೆ.
ದುಂಡಿರಾಜರಂತೂ ಚುಟುಕು ಬ್ರಹ್ಮರೆಂದೇ ಜನಪ್ರಿಯರಾದಂತಾಗಿದೆ. ಅವರ ಚುಟುಕುಗಳಲ್ಲಿ ಶಬ್ದಗಳು ಮೇಣದಂತಾಗಿವೆ. ಒಂದು ಶಬ್ದ ಸಂದರ್ಭಕ್ಕೆ ತಿರುಚಿ ಒಂದು ಅರ್ಥದಿಂದ ಇನ್ನೊಂದಕ್ಕೆ, ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಒಯ್ಯುತ್ತವೆ. ‘ಹೊಸದರಲ್ಲಿ ಆಯಸ್ಕಾಂತದಂತಿದ್ದ ನಲ್ಲ ಬರುಬರುತ್ತ ಐಸ್ಕಾಂತನಾಗುತ್ತಾನೆ. ಪತಿಯ ವೈಪಲ್ಯಕ್ಕೆ ಕಾರಣ ವೈಫಲ್ಯವೇ? ಇಲ್ಲಿ ಆಯಸ್ಕಾಂತ, ವೈಪಲ್ಯ ಶಬ್ದಗಳು ಏನೆಲ್ಲಾ ಮೋಜಿನ ರೂಪಗಳಾಗುತ್ತವೆ.
ಇಂದು ಚುಟುಕು ಬರೆಯುವ ಅನೇಕ ಕವಿಗಳಲ್ಲಿ ಈ ಶಬ್ದ ಚಮತ್ಕಾರ ಕಾಣುತ್ತೇವೆ. ಇಂಥವರಲ್ಲಿ ಎಸ್.ಕೆ.ವಾಸುರವರೂ ಒಬ್ಬರು. ತಮ್ಮ ಪ್ರಥಮ ಸಾಹಿತ್ಯ ಕೃತಿಯಾದ ಈ ಚುಟುಕು ಸಂಕಲನಕ್ಕೆ ಅನಿಸಿಕೆ ರೂಪದಲ್ಲಿ ನಾಲ್ಕು ಮಾತುಗಳನ್ನು ನನ್ನಿಂದ ಅಪೇಕ್ಷಿಸಿದ್ದಾರೆ. ವಾಸುರವರು ತರುಣ ಕವಿಗಳು ರಾಜ್ಯದ ಅನೇಕ ಚುಟುಕು ಕವಿಗಳ ಪ್ರಭಾವದಿಂದ ಈಗಾಗಲೇ ನೂರಾರು ಚುಟುಕುಗಳನ್ನು ನಿರಾಯಾಸವಾಗಿ ಬರೆದಿರುವ ಅವರ ಹಲವಾರು ಚುಟುಕುಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರಿಂದ ಮೆಚ್ಚುಗೆ ಪಡೆದಿವೆ.
ಓರ್ವ ವ್ಯಕ್ತಿಯಾಗಿ ವಾಸು ಅವರಲ್ಲಿರುವ ಸೌಜನ್ಯ, ವಿಧೇಯತೆ ಮತ್ತು ನಯವಿನಯಗಳು ನನ್ನನ್ನು ಸಂತೋಷಪಡಿಸಿವೆ. ಈ ದಿನಗಳಲ್ಲಿ ಅಪರೂಪವಾಗಿರುವ ಇಂತಹ ಗುಣಗಳು ವ್ಯಕ್ತಿಯನ್ನು ವಿಕಾಸ ಮಾರ್ಗದತ್ತ ಕೊಂಡುಯ್ಯುವುದರಲ್ಲಿ ಎರಡು ಮಾತಿಲ್ಲ. ನಿತ್ಯ ನೂತನವ ಸಂದರ್ಭಕ್ಕನುಸಾರವಾಗಿ ನವನವೀನ ವಿಚಾರಗಳನ್ನು ತಿಳಿಯುತ್ತಾ, ಕಲಿಯುತ್ತಾ, ಸಾಗುತ್ತಿರುವ ಜ್ಞಾನ ಹಂಬಲದ ವ್ಯಕ್ತಿ ವಾಸು ಎಂದರೆ ಅತಿಶಯೋಕ್ತಿಯಲ್ಲ. ಮೂಲತಃ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಮಾತೃ ಕಾಯಕದ ಛಾಪು ಇವರ ಚುಟುಕುಗಳ ಮೇಲೆ ಪ್ರಭಾವ ಬೀರಿವೆ. ವಿದ್ಯುತ್ ಇಲಾಖೆಯಲ್ಲಿನ ಜನರ ಮತ್ತು ಇವರ ನಡುವೆ ನಡೆಯುವ ನಿರಂತರ ಸಂಪರ್ಕ, ಸನ್ನಿವೇಶಗಳು ಹಾಸ್ಯ ಪ್ರಸಂಗಗಳಾಗಿ ಸೊಗಸಾಗಿ ಮೂಡಿ ಬಂದಿವೆ. ಅಷ್ಟಕ್ಕೆ ಮಾತ್ರ ಸೀಮಿತವಾಗದೇ ರಾಜಕೀಯ, ಸಾಮಾಜಿಕ ತಲ್ಲಣಗಳು, ಪ್ರಚಲಿತ ವಿದ್ಯಾಮಾನಗಳ ಮೇಲೆಯೂ ಇವರ ಚುಟುಕು ಕವಿತೆಗಳು ಬೆಳಕು ಚೆಲ್ಲುತ್ತವೆ.
ವೃತ್ತಿಯನ್ನೇ ಒಂದು ಕಡೆ ವಾಸುರವರು ಸೊಗಸಾಗಿ ಹಾಸ್ಯಕ್ಕೆ ವಿಡಂಬಿಸುತ್ತಾರೆ.
ನಾನು ಒಬ್ಬ ಮಾರ್ಗದಾಳು
ಕೆಲಸ ಮಾಡದೇ ಬಿಡುತ್ತಿದ್ದೆ ಬರೀ ಹೋಳು,
ನಾ ಕೇಳುತ್ತಿರಲಿಲ್ಲ ಗ್ರಾಹಕರ ಗೋಳು
ಕೊನೆಗೆ ಎಲ್ಲಾ ಸೇರಿ ಮಾಡಿದರು
ನನ್ನ ತಲೆ ಓಳು! [ಮಾರ್ಗದಾಳು]
ಇಲಾಖೆಯಲ್ಲಿ ನಿರಂತರವಾಗಿ ನಡೆಯುವ ಕೆಲವು ಕಂದಕಗಳನ್ನು ಸೂಕ್ಷ್ಮವಾಗಿ ಹಾಸ್ಯ ಲೇಪನಗೈದು ಚಿತ್ರಿಸಿರುವುದು ಮನೋಜ್ಞನವಾಗಿದೆ.
ನಾನು ಒಬ್ಬ
ವಿದ್ಯುತ್ ಅಭಿಯಂತರ
ಮೊಬೈಲ್ ಕರೆಗಳು
ಬರುತ್ತವೆ ನಿರಂತರ
ಕರೆಮಾಡಿದ ಗ್ರಾಹಕರಿಗೆ
ನಾ ನೀಡುತ್ತಿದ್ದೆ ಉಡಾಫೆ ಉತ್ತರ
ಹಿರಿಯ ಅಧಿಕಾರಿಗಳಿಗೂ
ನೀಡುತ್ತಿರಲಿಲ್ಲ ಸಮಂಜಸ ಉತ್ತರ
ಕೊನೆಗೆ ಎಲ್ಲರೂ ಸೇರಿ ತಂದಿಟ್ಟರು
ನನ್ನ ಹುದ್ದೆಗೆ ಗಂಡಾಂತರ! [ಅಭಿಯಂತರ]
*******
ಭಾಗಿದ ಕಂಬಕ್ಕೆ
ಬೇಕಿತ್ತು ಒಂದು ಗೈ
ಗೈ ಹಾಕದೆ ಕೆಲಸ ಮಾಡಲು ಹೋಗಿ
ಮುರಿದಿದೆ ನನ್ನ ಕೈ!
ಹೀಗೆ ವಿದ್ಯುತ್ ಇಲಾಖೆಗೆ ಸಂಬಂದಿಸಿದ ನಿತ್ಯ ಒಡನಾಟದ ಹಲವು ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಕಿರಿದರಲ್ಲಿ ಹಿರಿದರ್ಥ ಬರುವ ರೀತಿಯಲ್ಲಿ ಹಿಡಿದಿಟ್ಟಿದ್ದಾರೆ . ಆದರೆ ಪದಗಳ ಬಳಕೆಯಲ್ಲಿ ಅಲ್ಲಲ್ಲಿ ಸೋತಿರುವ ದೃಶ್ಯ ಓದುಗನಿಗೆ ಕಾಣಿಸದಿರದು. ಇಲ್ಲಿನ ನೂರಾರು ಚುಟುಕುಗಳಲ್ಲಿ ವಸ್ತು ವೈವಿದ್ಯವಿದೆ, ವಿಚಾರ ಮಂಡನೆಯಲ್ಲಿ ಹೊಸತನವಿದೆ. ಆದರೆ ಭಾವವನ್ನು ವಿಸ್ತರಿಸಬಹುದಿತ್ತು. ಅನುಭವದ ಸಾಂದ್ರವೂ, ಅಡಕವೂ ಆದ ನುಡಿಗಳಿಂದ ರಚನೆಯನ್ನು ಬಿಗಿಗೊಳಿಸಬಹುದಾಗಿತ್ತು ಎಂಬ ಕೊರಗು ಅಲ್ಲಲ್ಲಿ ಉಳಿದು ಬಿಡುತ್ತದೆ.
ಸಾಹಿತ್ಯ ಅಧ್ಯಯನದ ಮಹತ್ವವನ್ನು ವಾಸುರವರು ತಮ್ಮ ಪ್ರತಿಫಲ ಚುಟುಕುಗಳಲ್ಲಿ ಸೊಗಸಾಗಿ ಮನದಟ್ಟು ಮಾಡಿ ಕೊಟ್ಟಿದ್ದಾರೆ.

ನಾ ಓದುತ್ತಿದ್ದೇನೆ ಸಾಹಿತ್ಯ
ಅದಕ್ಕೆ ವೈದ್ಯರು ಹೇಳಿದರು
ನೀವು ಇರುವುದ ಬೇಡ ಪಥ್ಯ
ಮಾತು ಆಡಿದರೆ ಹೋಯಿತು, ಮುತ್ತು ಒಡದರೆ ಹೋಯಿತು ಎನ್ನುವಂತೆ ನಾಲಿಗೆ ಶುದ್ದವಾಗಿದ್ದರೆ ನಾಡೆಲ್ಲಾ ಶುದ್ದ, ಮಾತು ಮಾಣಿಕ್ಯ ಎನ್ನುತ್ತಾರೆ ಹಲವರು, ಆದರೆ ಮಾತು ವಕ್ರವಾದರೆ ಸಮಾಜದಲ್ಲಿ ಏನೆಲ್ಲಾ ಪಜೀತಿ ಅನುಭವಿಸಬೇಕಾಗುತ್ತದೆ ಎಂಬುದನ್ನು ತಮ್ಮ ‘ನಿಂದನೆ’ ಹನಿಗವಿತೆಯಲ್ಲಿ ಸೊಗಸಾಗಿ ವಿಡಂಭಿಸಿದ್ದಾರೆ.
ಭಾಷಣ ಬಿಗಿಯವಾಗ
ತಪ್ಪಾಗಿ ನಿಂದಿಸಿದೆ
ಒಂದು ಜಾತಿ
ಈಗ ಬೆಪ್ಪಾಗಿ ಹೊರಬರಲು
ನಾ ಪಡುತ್ತಿದ್ದೇನೆ ಪಜೀತಿ!
ಪ್ರಸ್ತುತ ಸಂದರ್ಭದಲ್ಲಿ ನಿತ್ಯ ದಿನ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಬಸ್ ಅಪಘಾತಗಳು, ದುರ್ಮರಣಗಳ ಸರಮಾಲೆಯನ್ನೆ ಓದುತ್ತೇವೆ, ನೋಡುತ್ತೇವೆ, ಕೇಳುತ್ತಿದ್ದೇವೆ. ಇಂತಹ ಪ್ರಚಲಿತ ಘಟನೆಗಳು ಸಾಮಾನ್ಯವಾಗಿ ಹಾಗೇ ಬಿಟ್ಟರೆ, ಕವಿಗಳನ್ನು ಸುಮ್ಮನೆ ಬಿಡುವುದಿಲ್ಲ ಚಿಂತನೆಗೆ ಹಚ್ಚುತ್ತೇವೆ. ಅದು ವಾಸುವನ್ನು ಹೊರತುಪಡಿಸುವಂತಿಲ್ಲ ಇಂತಹ ದುರಂತಗಳಿಗೆ ಸಾಕ್ಷಿ ಎಂಬಂತೆ ಇವರ ಈ ಹನಿಗವಿತೆಯನ್ನು ಲಕ್ಷಿಸಬಹುದು.
ಬಸ್ಸು ದುರಂತಗಳು ಸಂಭವಿಸಿ
ಆಗಿ ಹೋಗುತ್ತಿವೆ ಜನರ ಮರಣ
ಡಿಪೋ ಮೇನೇಜರ್ಗಳು ಹೇಳುತ್ತಿರೆ
‘ಉತ್ತಮ ಸ್ಥಿತಿಯಲ್ಲಿತ್ತು ಬಸ್ಸು’ ಎಂಬ ಕಾರಣ
ಕೆಲವರಿಗೆ ಅನಿಸುತ್ತಿದೆ
ತಿರುವು ರಸ್ತೆಗಳಲ್ಲಿ ಆಗಿಲ್ಲ ತಡೆಗೋಡೆಗಳ ನಿರ್ಮಾಣ
ಇನ್ನೂ ಆಗಲೇಬೇಕಿದೆ ರಾಜ್ಯ ಹೆದ್ದಾರಿಗಳಲ್ಲೇ
ರಸ್ತೆ ಅಗಲೀಕರಣ
ಈ ಹನಿಗವಿತೆ ಅಷ್ಟೊಂದು ಹಿತವೆನಿಸದಿದ್ದರೂ ಸಾಮಾಜಿಕ ಕಳಕಳಿ ಇಲ್ಲಿದೆ. ಮಾರ್ಮಿಕ ಸತ್ಯದ ಹೊನಲಿದೆ.
ಇಷ್ಟೆಲ್ಲಾ ಹೇಳಿಯೂ ಕಾವ್ಯ ಕುಸುರಿನ ಒಂದೆರಡು ತಿಳುವಳಿಕೆಯನ್ನು ಗೆಳೆಯ ವಾಸುರವರಿಗೆ ಕೊಡದೆ ಹೋದರೆ ಆತ್ಮವಂಚನೆಯಾದೀತು. ಅವರ ಭಾಷೆ ಇನ್ನೂ ಹುರಿಗೊಳ್ಳಬೇಕಿದೆ. ಇದಿನ್ನೂ ಅವರ ಪ್ರಥಮ ಹಂತವಾದ್ದರಿಂದ ಗಂಭೀರವಾಗಿ ಚಿಂತಿಸುವ ಅಗತ್ಯವಿಲ್ಲ. ನಡೆಯುವವನು ಎಡುವುವನಲ್ಲವೇ ನಡೆಯದವನು ಎಡವುವವನೇ ಎನ್ನುವ ಹಾಗೆ ಚಿಕ್ಕ ಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾವ ಹದವಾಗಿಸಿಕೊಳ್ಳುತ್ತಾ ಸಾಗಬೇಕಿದೆ. ಆಳವಾದ ಅಧ್ಯಯನ ಅಗತ್ಯವಿದೆ. ನಿಮ್ಮ ಸಾಹಿತ್ಯ ಕೃಷಿ ನಿರಂತರವಾಗಿ ಎಡರು ತೊಡರಿಲ್ಲದೆ ಸಾಗಲಿ, ಪಕ್ವವಾಗಲೀ, ಕನ್ನಡ ಸಾಹಿತ್ಯಕ್ಕೆ ಉತ್ತಮೋತ್ತಮ ಕೃತಿಗಳು ನಿಮ್ಮಿಂದ ಸಮರ್ಪಣೆಯಾಗಲೀ ಎಂದು ಹಾರೈಸುತ್ತೇನೆ.
ಕೊಟ್ರೇಶ್ ಎಸ್ ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ -573201
ಮೊ-9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ