ಮಂಗಳವಾರ, ಜುಲೈ 8, 2014

ಕನ್ನಡದ ಮೇರು ಸಾಹಿತಿ ತ.ಸು.ಶಾಮರಾಯರು


ತೊಂಬತ್ತು ವರ್ಷಗಳಿಗೂ ಅಧಿಕ ಕಾಲ ಬದುಕಿ ಬಾಳಿದ ತಳುಕು ಸುಬ್ಬಣ್ಣ ಶಾಮರಾಯರು ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ತಲೆಮಾರಿನ ಲೇಖಕರು.
 ತ.ವೆಂ.ಸ್ಮಾರಕ ಗ್ರಂಥಮಾಲೆಯ ಸಂಸ್ಥಾಪಕರಾದ ಕನ್ನಡದ ಪ್ರಸಿದ್ದ ಸಾಹಿತಿ, ವಿಮರ್ಶಕರಾದ ತಳುಕಿನ ಸುಬ್ಬಣ್ಣ ಶಾಮರಾಯರು 1906 ರ ಜೂನ್ 12 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮದಲ್ಲಿ ಜನಿಸಿದರು. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮೀದೇವಮ್ಮ.
ಕನ್ನಡದ ಖ್ಯಾತ ಸಾಹಿತಿ ಬಿ.ಎಸ್.ವೆಂಕಣ್ಣಯ್ಯನವರ ಕಿರಿಯ ಸಹೋದರರಾದ ಶಾಮರಾಯರು ಬಿ.ಎಂ.ಶ್ರೀ , ತಿ.ನಂ.ಶ್ರೀ, ಕುವೆಂಪು ಅವರ ಶಿಷ್ಯರಾಗಿದ್ದರು. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಡನೆ ತೇರ್ಗಡೆಹೊಂದಿ, ಮುಂದೆ ಕುವೆಂಪುರವರ ಮಾರ್ಗದರ್ಶನದಲ್ಲಿ ‘ಕನ್ನಡ ನಾಟಕ’ ಎಂಬ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ. ನಂತರ ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡರು. ತರುವಾಯ ಮೈಸೂರು ವಿ.ವಿ.ಪ್ರಸಾರಾಂಗದ ನಿರ್ದೇಶಕ, ಮಹಾಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಶಾಮರಾಯರು ಶ್ರೀ ರಾಮಕೃಷ್ಣ ಪರಮಹಂಸರ ಅನುಯಾಯಿಗಳಾಗಿದ್ದರು. ಮಲ್ಲಾಡಿಹಳ್ಳಿ ಅನಾಥಾಶ್ರಮ ಮತ್ತು ಅಗಡಿಯ ಅನಂದಾಶ್ರಮದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಓರ್ವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಶಿಷ್ಯ ವೃಂದದ ಗಮನ ಸೆಳೆದಿದ್ದರು. ಶಾಮರಾಯರ ಸಾಹಿತ್ಯ ‘ಖಣಜ’ ವಿಸ್ತಾರವಾದುದು. ಇವರ ವಚನ ರಾಮಾಯಾಣ, ವಚನ ಭಾಗವತ ಕೃತಿಗಳು ಇಂದಿಗೂ ಬೇಡಿಕೆಯಲ್ಲಿವೆ. ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ಶಾಮರಯರು  ಉದ್ಯೋಗ ಪರ್ವ, ಸಭಾಪರ್ವ, ಆದಿಪರ್ವ,ಅರಣ್ಯಪರ್ವ,ವಿರಾಟಪರ್ವ,ಜೈಮಿನಿ ಭಾರತ ಸಂಗ್ರಹಗಳು,ಸುಕುಮಾರ ಚರಿತಂ, ಆಚಣ್ಣ ಕವಿಯ ವರ್ಧಮಾನ ಪುರಾಣಂ,ಹರಿಹರನ ಮಹಾದೇವಿಯಕ್ಕನ ರಗಳೆ ಮುಂತಾದ ಸಂಪಾದಿತ ಕೃತಿಗಳನ್ನು ನೀಡುವುದರ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಸಿರಿವಂತಗೊಳಿಸಿದ್ದಾರೆ.
‘ಕನ್ನಡ ಸಾಹಿತ್ಯ ಚರಿತ್ರೆ’ ಇವರು ಬರೆದ ಬಹು ಪ್ರಸಿದ್ದ ಕೃತಿಯಾಗಿದೆ. ಸುಮಾರು 286 ಪುಟಗಳ ಈ ಕೃತಿಯು ಕನ್ನಡ ಸಾಹಿತ್ಯದ ಆದಿಕಾಲದಿಂದಲೂ ಆಧುನಿಕ ಸಾಹಿತ್ಯದ ಇಂದಿನ ಕವಿಗಳವರೆಗೂ ಸಾಹಿತ್ಯದ ಕಾಲಘಟ್ಟಗಳು, ವಿಭಾಗ ಕ್ರಮಗಳು, ಸಾಹಿತಿ-ಸಾಹಿತ್ಯ ಪ್ರಕಾರಗಳ ಬಗ್ಗೆ ಆಳವಾದ ವಿಚಾರಧಾರೆಯನ್ನು ನಮಗೆ ಉಣಬಡಿಸುತ್ತದೆ. 
ಕಥಾವಲ್ಲರಿ, ಮಹಾವೀರ, ಶಿವಶರಣ ಕಥಾರತ್ನಕೋಶ ಮುಂತಾದ ಕೃತಿಗಳು ಪುರಾಣ, ಐತಿಹಾಸಿಕ, ಧಾರ್ಮಿಕ ಅಂಶಗಳನ್ನೊಳಗೊಂಡ ಕಥಾ ಸಂಕಲನಗಳಾಗಿವೆ. ಅಷ್ಟೇ ಅಲ್ಲದೇ ಶಾಮರಾಯರು ‘ಮಂಕನ ಮಡದಿ’ ಎಂಬ ಅತ್ಯುತ್ತಮ ಕಾದಂಬರಿಯನ್ನು ಕನ್ನಡ ನಾಡಿಗೆ ನೀಡಿದ್ದಾರೆ.
ಪಂಪ, ಮುದ್ದಣ್ಣ, ರತ್ನಾಕರವರ್ಣಿ ಇವು ವಿಮರ್ಶಾ ಕೃತಿಗಳು ‘ಕುಮಾರವ್ಯಾಸ ಭಾರತ ನಿಘಂಟು’ ಇವರ ಶ್ರೇಷ್ಠ ರಚನೆಗಳಲ್ಲೊಂದಾಗಿದೆ. ಕನ್ನಡ ನಾಟಕ, ‘ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ’, ‘ಕನ್ನಡ ಸಾಹಿತ್ಯ ಚರಿತ್ರೆ ಒಂದು ಸಮೀಕ್ಷೆ’ ಇವೂ ಸಹ ಸಾಹಿತ್ಯ ವಿಮರ್ಶಾ ಕೃತಿಗಳಾಗಿವೆ. ‘ಮೂರು ತಲೆಮಾರು’ ಶಾಮರಾಯರ ಆತ್ಮಕಥನವಾಗಿದೆ. ಇಲ್ಲಿ ಇವರು ಮೂರು ಪೀಳಿಗೆಗಳ ಕಥೆಯಳನ್ನೊಳಗೊಂಡು ಪುರಾಣ, ಭೂತವರ್ತಮಾನಗಳ ಸಂಗತಿಗಳನ್ನೊಳಗೊಂಡಂತೆ ವಿಶಿಷ್ಟವಾದ ಅನುಭವಗಳನ್ನು ಬರಹ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. 
‘ಸ್ವಸ್ತಿ’ ಶಾಮರಾಯರ ಅಭಿನಂದನಾ ಗ್ರಂಥ. ಇದನ್ನು ತ.ವೆಂ.ಸ್ಮಾರಕ ಗ್ರಂಥಮಾಲೆ ಪ್ರಕಟಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 70ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ನೀಡಿದ ಇವರಿಗೆ ಕನ್ನಡ ಸಾಹಿತ್ಯ ರತ್ನ, ಧೀಶ್ರೀ ಎಂಬ ಗೌರವ ಬಿರುದುಗಳು ಸಂದಿವೆ.
 ಇವರು ಇತರರೊಡಗೂಡಿ ಹೊರತಂದ ‘ಕರ್ನಾಟಕ ಶಬ್ದಾನು ಶಾಸನ’, ‘ಕುಮಾರವ್ಯಾಸ’, ‘ವ್ಯಾಕರಣ ಸಾರ’ ಕೃತಿಗಳು ಜನಮನ್ನಣೆಗಳಿಸಿವೆ. 1997 ರಲ್ಲಿ ಮೈಸೂರು ವಿ.ವಿ.ಶಾಮರಾಯರಿಗೆ ಗೌರವ ಡಿ.ಲಿಟ್ ನೀಡಿ ಗೌರವಿಸಿದೆ. ಅಲ್ಲದೇ ಇವರಿಗೆ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿಗಳು ಸಂದಿವೆ. 
ಕನ್ನಡ ದಿಗ್ಗಜ ಸಾಹಿತಿಗಳ ಸಾಲಿನಲ್ಲಿ ಪ್ರಮುಖರಾದ ತ.ಸು.ಶಮರಾಯರು 1998 ಆಗಸ್ಟ್ 21 ರಂದು ಅಸ್ತಂಗತರಾದರು. ಆದರೆ ಅವರು ನಮ್ಮ ನಾಡು ನುಡಿಗೆ ನೀಡಿದ ಅಭೂತಪೂರ್ವ ಮೌಲ್ಯವುಳ್ಳ ಸಾಹಿತ್ಯದ ರಸಗವಳ ನಮ್ಮೆದುರಿಗಿದೆ.
ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ 
ಹಾಸನ-573201
ಮೊ-9739878197


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ