ಮಹಿಳಾ ಸಾಹಿತ್ಯ ಕನ್ನಡದಲ್ಲಿ ಕಂತಿಯಿಂದ ಮೊದಲ್ಗೊಂಡು ದುಗ್ಗಳೆ, ಅಕ್ಕಮಹಾದೇವಿ, ಅಕ್ಕನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ನೀಲಲೋಚನೆ, ಸೂಳೆ ಸಂಕವ್ವ, ಬೊಂತಾದೇವಿ, ಮಹಾದೇವಿ ಮುಂತಾದ ಹಲವು ವಚನಗಾರ್ತಿಯರು ಇದ್ದಾರೆ. ನಂತರ ಬಂದ ಸಂಚಿ ಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ಶೃಂಗಾರಮ್ಮ, ಚೆಲುವಾಂಬೆ ಹೀಗೆ ಹಲವಾರು ತಾಯಂದಿರು ಕನ್ನಡದ ದೀವಿಗೆಯನ್ನು ಬೆಳಗುತ್ತ ಬಂದಿದ್ದಾರೆ.
ಅದರಲ್ಲೂ 20 ನೇ ಶತಮಾನದಲ್ಲಿ ಲೇಖಕಿಯರ ದಂಡೆ ಪ್ರಭೆಯಾಗಿ ಹರಿದುದನ್ನು ಕಾಣುತ್ತೇವೆ. ತನ್ನ ನೋವು ನಲಿವುಗಳನ್ನು, ಶೋಷಣೆ, ಮೌಢ್ಯಗಳನ್ನೆಲ್ಲಾ ಲೇಖನಿಯ ಮೂಲಕ ಹರಿಬಿಟ್ಟಿದ್ದಾಳೆ.
ಇದರಲ್ಲಿ ಪ್ರಮುಖ ಲೇಖಕಿ ಎಂದರೆ ಮಂಗಳಾಸತ್ಯನ್. ಕಥೆ ಹಾಗೂ ಕಾದಂಬರಿ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಮಂಗಳಾಸತ್ಯನ್ ಕನ್ನಡ ಸಾಹಿತ್ಯದ ಅಮೂಲ್ಯ ಮಹಿಳಾ ಬರಹಗಾರ್ತಿ.
ಇವರು 1940 ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು. ತಂದೆ ಸಾಲಗಾಮೆ ಸುಬ್ಬರಾಯರು. ತಾಯಿ ಗುಂಡಮ್ಮ. ಮಾಧ್ಯಮಿಕ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೇ ಕಥೆ ಹೇಳುವ, ಕಥೆ ಕೇಳುವ ಹವ್ಯಾಸ. ಪ್ರತಿನಿತ್ಯದ ನೀತಿ ಕಥೆಗಳು, ಚಂದಮಾಮ, ಬಾಲಮಿತ್ರ ಮುಂತಾದ ಮಕ್ಕಳ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳನ್ನು ಓದುತ್ತಾ ಜೊತೆಗೆ ಮನೆಯಲ್ಲಿ ಹಿರಿಯರಿಂದ ಕಥೆ ಹೇಳಿಸಿಕೊಂಡು ತರಗತಿಯಲ್ಲಿ ರಂಜನೀಯವಾಗಿ ಹೇಳುವ ಪರಿಪಾಠ ಇವರದು. ಇವರಲ್ಲಿದ್ದ ಸುಪ್ತಕಥಾ ಪ್ರತಿಭೆಯನ್ನು ಪತ್ತೆ ಹಚ್ಚಿದ ಶಿಕ್ಷಕಿ ಲಕ್ಷ್ಮೀದೇವಮ್ಮ ಹೊಸ ಹೊಸ ಕಥೆಗಳನ್ನು ಬರೆಯಲು ಪ್ರೇರೇಪಿಸಿದರು. ಅಂದಿನಿಂದ ಬರವಣಿಗೆ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಮಂಗಳಾಸತ್ಯನ್ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.
ಕನ್ನಡ ಕಾದಂಬರಿ ಲೋಕದಲ್ಲಿ ಅ.ನ.ಕೃ, ಎಸ್.ಎಲ್.ಬೈರಪ್ಪರಂತಹ ಶ್ರೇಷ್ಠ ಲೇಖಕರನ್ನು ನೀಡಿದ ಹಾಸನ ಮಂಗಳಾಸತ್ಯನ್ ಎಂಬ ಅದ್ಭುತ ಮಹಿಳಾ ಕಾದಂಬರಿಗಾರ್ತಿಯನ್ನು ನೀಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ಒದಗಿಸಿಕೊಟ್ಟ ಹಾಗೂ ಆಧುನಿಕ ವಚನ ಸಾಹಿತ್ಯದ ದಿಗ್ಗಜರಾದ ಎಸ್.ವಿ.ರಂಗಣ್ಣನವರು ಮಂಗಳಾಸತ್ಯನ್ ಅವರ ಚಿಕ್ಕಪ್ಪ ಎಂಬುದು ವಿಶೇಷ. ವಂಶ ಪರಂಪರಿಕವಾಗಿ ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಇವರಿಗೆ ವಕೀಲರಾದ ತನ್ನ ತಂದೆಯ ಕಛೇರಿಗೆ ಬರುತ್ತಿದ್ದ ಕಕ್ಷಿದಾರರ ವ್ಯಾಜ್ಯದ ಘಟನೆಗಳು, ತಂದೆಯೊಡನೆ ಕೋರ್ಟಿಗೆ ಹೋಗಿ ವೀಕ್ಷಿಸುತ್ತಿದ್ದ ವಾದ ವಿವಾದಗಳು ಸಾಮಾಜಿಕ ಕಥೆ ಬರೆಯಲು ಪ್ರೇರಣೆ ನೀಡಿದವು.
ಚಿಕ್ಕಂದಿನಿಂದಲೆ ಚಂದಮಾಮ, ತಾಯಿನಾಡು, ಪ್ರಜಾಮತ ಹಾಗೂ ಮಂಡ್ಯದಿಂದ ಪ್ರಕಾಶಿತವಾಗುತ್ತಿದ್ದ ‘ಜನಮನ’ ಎಂಬ ವಾರಪತ್ರಿಕೆಯಲ್ಲಿ ಇವರು ಕಥೆಗಳನ್ನು ಬರೆದು ಓದುಗರೆದುರಿಗೆ ಕಥಾ ಪ್ರಪಂಚವನ್ನು ತೆರೆದಿಟ್ಟರು. ಹೀಗೆ ಮೊದಮೊದಲು ಬರೆದ ಇವರ ಸಣ್ಣಕಥೆಗಳೆಲ್ಲ ‘ಸೋತುಗೆದ್ದವಳು’ ಎಂಬ ಕಥಾಸಂಕಲನದಲ್ಲಿ ಪ್ರಕಟಗೊಂಡಿವೆ.
ಮಂಗಳಾ ಸತ್ಯನ್ ಬೆಳೆದಂತೆಲ್ಲಾ ಕಥಾಪ್ರಪಂಚದಿಂದ ಕಾದಂಬರಿ ಲೋಕದ ಕಡೆಗೆ ವಾಲಿದರೆನ್ನಬಹುದು. ಪರಿಣಾಮವಾಗಿ 1968ರಲ್ಲಿ ‘ಹಣದ ಮಗಳು’ ಎಂಬ ಪ್ರಥಮ ಕಾದಂಬರಿ ಪ್ರಕಟಗೊಂಡಿತು. ನಂತರ ಅರಸಿ ಬಂದವಳು, ವಂಚಿತೆ, ನಿನಗಾಗಿ, ಆದರ್ಶಪುರುಷ, ಭಾಗ್ಯಜ್ಯೋತಿ, ಸ್ವರ್ಗಸನ್ನಿಧಿ, ಅಮೃತಮಯಿ , ಪ್ರೇಮದುಂಬಿ, ವಿಷದೊಡಲು, ಆ ಮುಖ, ಮುಗ್ಧಮಾನವ , ಬಂಗಾರ ಭೂಷಿತೆ, ಉದಾರಶೀಲ, ಅತಿಮಧುರ ಅನುರಾಗ, ನವವಸಂತ, ಮುರುಳಿಗಾನ ಅಮೃತಪಾನ, ಕುಲದೀಪಿಕ ಮುಂತಾದ 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಶ್ರೀಮಂತಗೊಳಿಸಿದ್ದಾರೆ. ಇದರಲ್ಲಿ ಹಲವು ಕಾದಂಬರಿಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಧಾರವಾಹಿಗಳಾಗಿ ಪ್ರಕಟಗೊಂಡಿವೆ.
ಇವುಗಳಲ್ಲಿ ಭಾಗ್ಯಜ್ಯೋತಿ, ಮುಗ್ಧಮಾನವ, ಆ ಮುಖ(ಬಿಸಿಲು ಬೆಳದಿಂಗಳು), ಮುರುಳಿಗಾನ ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಖ್ಯಾತಿ ಪಡೆದಿವೆ. ಇದಲ್ಲದೆ ಫಣಿರಾಮ ಚಂದ್ರರವರ ನಿರ್ದೇಶನದ ‘ಹೂವೊಂದು ಬೇಕು ಬಳ್ಳಿಗೆ’ ಮತ್ತು ಶಿವಮಣಿ ನಿರ್ದೇಶನದ ‘ಸ್ವಾತಿ’ ಚಲನಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ಇವರ ದೇವಮಂದಿರ ಪ್ರೇಮಸಾಗರ, ಅತಿಮಧುರ ಅನುರಾಗ ಕಾದಂಬರಿಗಳು ಮೈಸೂರು ಆಕಾಶವಾಣಿಯಲ್ಲಿ ಧಾರವಾಹಿಗಳಾಗಿ ಭಿತ್ತರಗೊಂಡಿವೆ.
ಜೊತೆಗೆ ನೂರಾರು ಸಣ್ಣಕಥೆಗಳನ್ನು ಬರೆದ ಮಗಳಾ ಸತ್ಯಾನ್ ಕನ್ನಡ ನಾಡಿನಾದ್ಯಂತ ಅಪಾರ ಓದುಗ ವೃಂದವನ್ನು ಹೊಂದಿದ್ದಾರೆ.
ಕಾದಂಬರಿ, ಕಥೆಗಳ ಜೊತೆಗೆ ನಾಟಕ ರಚನೆಯಲ್ಲಿಯೂ ಸಿದ್ದ ಹಸ್ತರಾಗಿದ್ದ ಮಂಗಳಾರವರು ಅಮೂಲ್ಯ ನಾಟಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮದ್ವೆಮಸಲತ್, ಧೀರೊದ್ಧಾತ ಕಂಸ, ಭೊಜ ಕಾಳಿದಾಸ, ಸಂಬಂಧ, ದೇವರ ಕೂಗು, ಸಹಚರ್ಯ, ಪಾಲಿಗೆ ಬಂದ ಪಂಚಾಮೃತ ಮುಂತಾದ ನಾಟಕಗಳು ಪ್ರಮುಖವಾದವುಗಳು. ಇವುಗಳಲ್ಲಿ ಹಲವಾರು ಮೈಸೂರು ಆಕಾಶವಾಣಿಯಿಂದ ಪ್ರಸಾರಗೊಂಡಿರುವುದು. ಮಂಗಳಾಸತ್ಯನ್ ಅವರ ಸಾಹಿತ್ಯ ದೀವಿಗೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇವರ ‘ಸಂಬಂಧ’ ನಾಟಕ ಹಿಂದಿ ಭಾಷೆಗೆ ಅನುವಾದಗೊಂಡು ದೆಹಲಿಯ ರಾಷ್ಟ್ರೀಯ ಜಾಲದಲ್ಲಿಯೂ ಪ್ರಸಾರವಾಗಿ ದೇಶದಾದ್ಯಂತ ಕನ್ನಡಿಗರ ಮನಸೂರೆಗೊಂಡಿದೆ.
ಸಾಹಿತ್ಯಕ್ಕಷ್ಟೇ ಸೀಮಿತಗೊಳ್ಳದ ಮಂಗಳಾರವರು ಬಹುಮುಖ ವ್ಯಕ್ತಿತ್ವದವರು. ಸಂಘಟನೆ, ಚಳವಳಿ, ಜಾಗೃತ ಶಿಬಿರಗಳ ಮೂಲಕ ಸಮಾಜವನ್ನು ಎಚ್ಚರಿಸುವಂತಹ ಕೈಂಕರ್ಯ ಮಾಡಿದ ಇವರು ಸಮಾಜದಲ್ಲಿನ ಜಾತಿ ಪದ್ದತಿ ಮತ್ತು ಸ್ತ್ರೀ ಸಮಸ್ಯೆಗಳು, ಶೋಷಣೆ, ಭ್ರಷ್ಟಾಚಾರ ವಿರುದ್ದ ತಮ್ಮ ಬರವಣಿಗೆಯಲ್ಲಷ್ಟೇ ಅಲ್ಲದೇ ಸ್ತ್ರೀಶಕ್ತಿ ಸಂಘಟನೆಗಳು ‘ಸಮಾಜಕಲ್ಯಾಣ’ ಕಾರ್ಯಕ್ರಮಗಳನ್ನು ಮಾಡುತ್ತಾ ಸ್ತ್ರೀ ಜಾಗೃತಾ ಆಂದೋಲಗೈದಿದ್ದಾರೆ.
ಶ್ರೀ ಗಣೇಶ ಡ್ರಮ್ಯಾಟಿಕ್ಸ್, ರಂಜನಾ ಕಲಾರಂಗ, ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಮುಂತಾದ ಸಾಮಾಜಿಕ ಸಂಘಟನೆಗಳನ್ನು ಹುಟ್ಟುಹಾಕಿ, ಸ್ಥಾಪಕರಾಗಿ, ನಿರ್ದೇಶಕಿಯಾಗಿ, ಅಧ್ಯಕ್ಷೆಯಾಗಿ ಕಾಯಕಮಾಡಿ, ಬಾಲ ಪ್ರತಿಭೆಗಳಿಗೆ ಮಾರ್ಗದೀವಿಗೆಯಾಗಿ, ಹಲವಾರು ಸ್ತ್ರೀಯರ ಸಮಸ್ಯೆಗಳನ್ನು ಸಾಂಘಿಕ ಹಾಗೂ ವೈಯಕ್ತಿಕ ಶ್ರಮದಿಂದ ಪರಿಹಾರ ದೊರಕಿಸಿಕೊಟ್ಟ ಕೀರ್ತಿ ಮಂಗಳಾಸತ್ಯನ್ ಅವರದು.
ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಕೇಂದ್ರ ಗ್ರಂಥಾಲಯ ಪ್ರಾಧಿಕಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂತಾದವುಗಳ ಸದಸ್ಯೆಯಾಗಿ ಗೌರವ ಪೂರ್ಣವಾಗಿ ದುಡಿದಿದ್ದಾರೆ.
ಹಾಸನ ಇವರ ಮಾತೃಜಿಲ್ಲೆಯಾದರೂ ಇವರು ಸಾಹಿತ್ಯದ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು ಮೈಸೂರು ಜಿಲ್ಲೆಯಿಂದ ಎಂದರೆ ಅತಿಶಯೋಕ್ತಿಯಾಗಲಾರದು. ಮೈಸೂರು ಇವರ ಕರ್ಮ ಭೂಮಿಯಾಯಿತು. ಮುಂದೆ ಮೈಸೂರು ದಸರಾ ಸ್ಮಾರಕ ಸಂಚಿಕೆ, ಇಳಾ, ಯಶಸ್ವಿನಿ, ಸ್ತ್ರೀಶಕ್ತಿ, ಸಾಹಿತ್ಯ ಪರಿಷತ್ತು, ಜಿಲ್ಲಾ ಲೇಖಕಿಯ ಸಂಘ, ಮಹಿಳಾ ಸಂಘಟನೆ ಹೀಗೆ ಹಲವು ಸಂಘ ಸಂಸ್ಥೆಗಳ ಸ್ಮರಣ ಸಂಚಿಕೆಗಳನ್ನು ಸಂಪಾದಿಸಿಕೊಟ್ಟ ಪಾಂಡಿತ್ಯ ಮಂಗಳಾ ಅವರದು.
ಕನ್ನಡ ನಾಡು ಕಂಡ ಅತ್ಯದ್ಭುತ ಪ್ರತಿಭಾನ್ವಿತೆ ಮಂಗಳಾ ಸತ್ಯನ್ ಅವರು. ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೇಷ್ಟ ಬರಹಗಾರ್ತಿಯರಿಗೆ ಸಲ್ಲುವ ಅತ್ಯುನ್ನತ ಪ್ರಶಸ್ತಿಯಾದ ದಾನಚಿಂತಾಮಣಿ ಅತತಿಮಬ್ಬೆ ಪ್ರತಿಷ್ಠಾನದ ಪುರಸ್ಕಾರ, ಸಾಹಿತ್ಯ ರತ್ನ, ಕಾದಂಬರಿ ರತ್ನ, ಮೈಸೂರು ರತ್ನ, ಸಾಹಿತ್ಯ ಕಲಾ ಪ್ರಪೂರ್ಣಿ, ಹೊಯ್ಸಳ ಪ್ರಶಸ್ತಿ, ಸಾಹಿತ್ಯ ಕಲಾ ಶಾರದೆ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅಲ್ಲದೇ ಅನೇಕಾನೇಕ ಸಾಹಿತ್ಯ ಸಮ್ಮೇಳನ, ಸಮಾವೇಶಗಳ ಅಧ್ಯಕ್ಷತೆ ವಹಿಸಿದ ಹಿರಿಮೆ ಮಂಗಳ ಸತ್ಯನ್ ಅವರದು.
ಆದ್ದರಿಂದಲೇ ನಾಡಿನಾದ್ಯಾಂತ ಮಂಗಳ ಸತ್ಯನ್ ಅವರಿಗಿರುವ ಅಭಿಮಾನಿಗಳು 2003ರಲ್ಲಿ ‘ಸತ್ಯ ಮಂಗಳಾ’ ಎಂಬ ಅಭಿನಂದನ ಗ್ರಂಥ ಸಮರ್ಪಿಸಿದ್ದಾರೆ.
ಕೊಟ್ರೇಶ್ ಎಸ್. ಉಪ್ಪಾರ್. ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ