ಮಂಗಳವಾರ, ಜುಲೈ 1, 2014

ಕೊಟ್ರೇಶ್ ಎಸ್. ಉಪ್ಪಾರ್ ಅವರ ಅನುಭಾವ ಸಾಹಿತ್ಯ - ಪ್ರೊ ವಸಂತಕುಷ್ಟಗಿ




ಪ್ರತಿಯೊಬ್ಬ ಮನುಷ್ಯನಿಗೆ ಅವನ ಮನಸ್ಸಿನೊಳಗಡೆ, ಅನುಭಾವಿಯ ಜೋಡು ಇದ್ದೇ ಇರುತ್ತದೆ. ಆ ಅನುಭಾವಿಯು ಮಾತ್ರ ಹೊರನೋಟಕ್ಕೆ ಕಾಣದವನು. ಅವನೊಬ್ಬ ತ್ರಿಕಾಲ ಜ್ಞಾನಿಯಾಗಿರುವ ಸತ್ಯಪ್ರಕಾಶ.  ಆತನು ವಿವೇಕದ ಬೆಳಕನ್ನು ಧಾರೆಯೆರೆಯುತ್ತ, ಆ ಮುನುಷ್ಯನ ಜೀವನವನ್ನು ಸ್ವಾವಾವಲೋಕನದಲ್ಲಿ ನಡೆಸುತ್ತಿರುತ್ತಾನೆ. ಆ ಮಧ್ಯೆ ಅವಿವೇಕವೇನಾದರೂ ಅಡ್ಡವಾದರೆ ಅವಗಢವಾಗುತ್ತದೆ. ಆ ಅವಗಢದಿಂದ ಅವನು ಪಶ್ಚಾತ್ತಾಪದ ಕುಲುಮೆಯಲ್ಲಿ ಹಾದು ಪುಟಗೊಂಡು ಬಂದಾಗ ಅಲ್ಲಿ ವಿವೇಕವು ಪ್ರಜ್ವಲಿಸಿ, ಆತ್ಮಜ್ಞಾನವು ಸತ್ಯ ಪ್ರಕಾಶವಾಗಿ ಬಿಡುತ್ತದೆ. ಅದನ್ನೇ ಅನುಭಾವದ ಮೇರು ಪ್ರಕಾಶವೆಂದು ಕರೆಯಬೇಕು. ಅದರ ಬೆಳಕಿನಲ್ಲಿ, ಅಂತರಂಗ ಪರಿಶೀಲನೆಯು ನಡೆದು ಮನುಷ್ಯನು ಮಾನವನಾಗಿ ಮಹಾಮಾನವನಾಗತೊಡುಗುತ್ತಾನೆ. ಹಾಗೆ ಮಹಾಮಾನವನಾಗಬೇಕಾದ ದಾರಿಯೇ, ಮಾನವ ಸಂಪನ್ಮೂಲದ ಪುದುಬಳಕೆಗೆ ಸಾಧ್ಯವಾಗುವ ಅನುಭಾವ ಮಾರ್ಗ
ಈ ಅನುಭಾವಮಾರ್ಗದಿಂದ ಸಾಗಿದ ಋಷಿಮುನಿಗಳು ಜೀವನ ತತ್ವಗಳನ್ನು ಜಗತ್ತಿನ ಪುದುವಾಳ್ವೆಗೆ ನೀಡಿ ಉಪಕಾರ ಮಾಡಿದ್ದಾರೆ. ಆ ತತ್ವಗಳು ಜಗದ ಮನುಷ್ಯನಲ್ಲಿ ಸ್ವಾನುಭವವಾಗುತ್ತ ನಡೆದಾಗ, ಕನ್ನಡ ಸಾಹಿತ್ಯವೂ ನೆಮ್ಮದಿಯ ಬದುಕಿಗೆ ದಾಸ್ತಾನು ಒದಗಿಸಿತು. ಒದಗಿಸುತ್ತಾ ಬಂದಿದೆಯೂ ಕೂಡ. ವಿಶೇಷತಃ ವಚನಕಾರರು, ದಾಸರು, ಸಂತರು, ತತ್ವಪದಕಾರರು ಅನುಭಾವದ ಅಮೃತಧಾರೆಯನ್ನು ನೀಡಿ ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿ, ಮಾನವ ಸಂಪನ್ಮೂಲವನ್ನು ಸನ್ನದ್ಧಗೊಳಿಸುತ್ತಾ ಬಂದಿದ್ದಾರೆ.
ಈ ದಿಸೆಯಲ್ಲಿ ಈ ರೀತಿ ಅಮೃತಧಾರೆಯಾಗಿ ಬಂದ ಅನುಭಾವ ಸಾಹಿತ್ಯದ ಬೆಳಕಿನಲ್ಲಿ ಆಧುನಿಕ ವಚನಕಾರರೂ ವರ್ತಮಾನದ ಬದುಕಿನಲ್ಲಿಯ ಅಪಮೌಲ್ಯಗಳನ್ನು ತೊಳೆಯಲು, ಆನಂದ ವಿಶ್ವದ ಬೆಳವಣಿಗೆಗೆ ಸನ್ನದ್ಧರಾದದ್ದು 20-21ನೇ ಶತಮಾನದಲ್ಲಿಯ ಕನ್ನಡ ವಿಶೇಷ. ಮಂಕುತಿಮ್ಮನು ಈ ದಿಸೆಯಲ್ಲಿ ತ್ರಿಕಾಲಾ ಬಾಧಿತವಾದ ಸತ್ಯವನ್ನು ಸಾರುತ್ತ ಆನಂದದ ಜಗತ್ತಿಗೆ ಆರೋಗ್ಯದ ತಂಗಾಳಿಯನ್ನು ಬೀಸಿರುವುದು ಮಹತ್ವದ ಪ್ರೇರಣೆಯಾದ ಘಟ್ಟ ತತ್‍ಪರಿಣಾಮವಾಗಿ ಕನ್ನಡದಲ್ಲಂತೂ ಆನಂದ ಪ್ರಾಪ್ತಿಯ ನಡೆಗೆಗೆ ನುಡಿದರ್ಶನಗಳು ಸಾಕಷ್ಟು ಅರಳಿ ನಿಲ್ಲತೊಡಗಿವೆ. ಅದೆಲ್ಲ ಅನುಭಾವ ಸಾಹಿತ್ಯ ಪ್ರಕಾರಕ್ಕೆ ಸಮೃದ್ಧತೆಯನ್ನು ತರುತ್ತ ಅನುಭಾವ ಸಾಹಿತ್ಯದ ಕಣಜವನ್ನು ಸೃಷ್ಟಿಗೊಳಿಸುವಲ್ಲಿ ಮುಂಚೂಣಿಯಲ್ಲಿದೆ.
‘ಅನುಭಾವ’ ಎಂದರೆ ವಿಸ್ಮಯದ ಆಚೆಯ ವಸ್ತುವಲ್ಲ. ನಮ್ಮ ಅನುಭವಕ್ಕೆ ಬಂದುದೆಲ್ಲ, ವೃಷ್ಟಿಸಮಸ್ಟಿಯ ವಿವೇಕದ ಕುಲುಮೆಯಲ್ಲಿ ಹದಗೊಂಡು ಅಂತಃಸಾಕ್ಷಿಯಲ್ಲಿ ಚಿಮ್ಮಿ ಬಂದ ಅಪರಂಜಿ. ಈ ಬಗೆಯು  ವಿಶ್ವದಲ್ಲಿರುವ ಜೀವಂತಿಕೆಯ ಪ್ರಗಾಥದ ಅರಿವು. ಈ ಅರಿವಿನ ದಾರಿಯ ನಡೆಯ ಸುಗಮಕ್ಕೆ, ಸುಂದರವಾದ ಪರಂಪರೆಯೇ ಅನುಸಂಧಾನಕ್ಕೆ ಸಿದ್ಧವಾದ ಪ್ರೇರಣೆಯಾಗಿ ನಮ್ಮ ಹತ್ತಿರ ಸಿದ್ಧೌಷಧಿಯಾಗಿ ಸಂಪನ್ನಗೊಂಡಿದೆ. ಶರಣರ ವಚನ, ದಾಸರ ಹಾಡು, ತತ್ವ ಪದಕಾರರ ಚಿಂತನಾರತ್ನ, ಶತಕಗಳು, ಕಾವ್ಯಗಳು ತುಂಬಿಕೊಂಡಿರುವ ಮೌಲ್ಯಧಾರಿತ ಸಂದೇಶವಾಹಿನಿಯಲ್ಲಿಯ ತುಂತುರುಗಳು, ಸರ್ವಜ್ಞನ ವಚನಗಳು ಇತ್ಯಾದಿಗಳೆಲ್ಲ ಆ ಪರಂಪರೆಯಲ್ಲಿಯ ವಿಶೇಷ ಶಕ್ತಿ ವಿಶೇಷಗಳು.
ಈ ಪ್ರಕಾರದಲ್ಲಿರುವ ಇಂತಹ ಅದ್ಭುತ ಸಾಹಿತ್ಯ ಶಕ್ತಿಯು, ಮಾನವನ ಸರ್ವತೋಮುಖ ಬದುಕಿನ ವಿಕಾಸಕ್ಕೆ  ನಿಜವಾದ ಪ್ರೇರಣೆಯೆಂಬುದನ್ನು ಅರಿತು. ಆಧುನಿಕ  ವಚನಕಾರರು, ಆ ಪರಂಪರೆಯ ಬಗೆಯನ್ನು ಇನ್ನಷ್ಟು ಇನ್ನಷ್ಟು ವಿಕಾಸಗೊಳಿಸುತ್ತ ಸಾಗಿರುವುದು, ಜಗತ್ತು ಸುಂದರವಾದದ್ದೆಂದೇ ಅವರವರ ಅರಿವಿಗೆ ಮೂಡಿಸುವ ಜೀವನ ಸೌಂದರ್ಯದ ಸೌಗಂಧವಾಗಿ ದಶದಿಕ್ಕುಗಳಲ್ಲಿ ಪರಿಜ್ಞಾನವನ್ನು ಚೆಲ್ಲುವರಿಸತೊಡಗಿರುವುದು, ಜಗದ ಒಟ್ಟು ಕಲ್ಯಾಣದ ದೃಷ್ಟಿಯಿಂದ ಶುಭ ಸೂಚನೆ.
ಈ ನಿಟ್ಟಿನಲ್ಲಿ ತರುಣಮಿತ್ರ ಶ್ರೀ ಕೊಟ್ರೇಶ್ ಎಸ್. ಉಪ್ಪಾರ್ ಅವರ ಅನುಭಾವ ಸಾಹಿತ್ಯ ರಚನಾ ತಪಸ್ಸು-ಅನುಕರಣೀಯ ಒಂದು ಮಾದರಿ. ಕ್ರಿ.ಶ. 1980 ರಲ್ಲಿ ಮಾನವ ಸಂಪನ್ಮೂಲದ ಚೇತನಗಳಲ್ಲಿ ಒಂದಾಗಿ ಬಂದ ಅವರಿಗೆ, ಈಗ ಮೂವತ್ಮೂರರ ಪ್ರಾಯ. ಆದರೆ ಈ ಚಿಕ್ಕ ಪ್ರಾಯದಲ್ಲಿ ಅವರ ದೃಷ್ಟಿಕೋನವು ಸಾಧಿಸಿರುವ ಚಿಂತನಸಂಪತ್ತು ಬೆರಳುಕಚ್ಚುವಂತಹದ್ದು. ಅವರ ಲೋಕಜ್ಞಾನ ಸಂಗ್ರಹವು ತುಂಬ ವೈವಿಧ್ಯಪೂರ್ಣ. ಆ ವೈವಿಧ್ಯತೆಗಳಲ್ಲಿ ಚಿಂತನೆಯು ಮಂಥನಗೊಂಡು, ತಮ್ಮ ಆತ್ಮಸಾಕ್ಷಿಯಲ್ಲಿ  ಕಂಡ ರತ್ನಗಳನ್ನೇ ವಚನಗಳ ರೂಪದಲ್ಲಿ ಸಾಕಾರ ಪಡೆದಿವೆ. ಅಂತಹ ರತ್ನಗಳೆಲ್ಲ ಶೇಖರಗೊಂಡ ಕರಂಡಕಗಳು ಈಗಾಗಲೇ ಸಾರಸ್ವತಲೋಕದಲ್ಲಿ ಸಂಪನ್ನಗೊಂಡು ತಮ್ಮ ಪ್ರತಿಭೆಯ ಪ್ರಭಾವದಲ್ಲಿ ಲೋಕದ ಡೊಂಕನ್ನು, ಅವರವರ ಆತ್ಮ ಸಾಕ್ಷಿಯಲ್ಲಿ ತಿದ್ದಿಕೊಳ್ಳುವ ಪ್ರಗಾಥಕ್ಕೆ ಅನುಸೂಚನೆಯಾಗಿ ಮನಸ್ಸುಗೆದ್ದಿವೆ. ಈ ಶ್ರೇಣಿಯಲ್ಲಿ ಅವರ, “ವಚನದುಂಧುಬಿ-2005”, “ವಚನದೀಪಿಕಾ-2009”, ಮತ್ತು “ವಚನ ಮಾಣಿಕ್ಯ-2013” ಚೇತೋಹಾರಿಯಾಗಿ ಬೆಳಕು ಬೀರುತ್ತಿವೆ. ಇದೀಗ ಲೋಕಾರ್ಪಣೆಯಾಗಿರುವ ಅವರ  ‘ವಚನ ಸಾನಿಕ – 2013’ ನನ್ನ ಕೈಯಲ್ಲಿದೆ.
ಈ ‘ವಚನಸಾನಿಕ’ ಕರಂಡದಲ್ಲಿರುವ ವಚನಗಳು ಮನುಷ್ಯನ ಮನಸ್ಸನ್ನು ಸ್ವಾಸ್ಥ್ಯದ ಹಿಡಿತಕ್ಕೆ ತರುವ ಅನುಸಂಧಾನದಲ್ಲಿ ಪ್ರಯತ್ನಶೀಲವಾಗಿವೆ. ವೃಷ್ಟಿ ಮತ್ತು ಸಮಷ್ಟಿಗಳಲ್ಲಿ, ಹಾಲು-ಬೆಲ್ಲದ ಸಾಮರಸ್ಯ ಸಂಭ್ರಮವನ್ನು ಉಂಟುಮಾಡಿ ನೆಮ್ಮದಿ ಜಗತ್ತಿನ ಸೊಬಗನ್ನು ದಾಂಗುಡಿಗೊಳಿಸುವ ಕಡೆಗೆ ಚಿÉಂತಾರತ್ನಗಳಾಗಿ ಹೊರಹೊಮ್ಮಿವೆ.
ಶ್ರೀ ಕೊಟ್ರೇಶ್ ಅವರು, ಬಳುವಳಿಯಾಗಿ ಬಂದ ಕನ್ನಡದಲ್ಲಿಯ ಅನುಭಾವ ಸಾಹಿತ್ಯವನ್ನು ಪೂರ್ವಸಂಪತ್ತಾಗಿ ಸ್ವೀಕರಿಸಿ, ಅಲ್ಲಿರುವ ನಾಡಿಗಳ ಧ್ವನಿತಗಳನ್ನೆಲ್ಲ ತಮ್ಮ ಅನುಭಾವಕ್ಕೆ ಇಳಿಸಿಕೊಂಡು ಇಂದಿನ ಪರಿಸರವನ್ನು ಆತ್ಮವಿಮರ್ಶೆಗೆ ತೊಡಗಿಸಿ ಶೀಲಸೌಗಂಧವನ್ನು ಹರಡಿಸುವಲ್ಲಿ ತಮ್ಮ ಸ್ವಯಂಶೀಲದ ಪ್ರಭೆಯನ್ನು ವಿಶಿಷ್ಟರೂಪದಲ್ಲಿ ಮಿಡಿಸಿ ಅರ್ಥೈಸಿದ್ದಾರೆ. ಹೀಗಾಗಿ ಇಂದಿನ ತಲ್ಲಣಗಳ ವಿದ್ಯಮಾನದಲ್ಲಿ ಸಮಾಧಾನವನ್ನು ಬಿತ್ತಿ ಬೆಳೆಯಲು ಈ ಕ್ರಮದಲ್ಲಿ ಅವರು ಮುಂದಾಗಿರುವುದು ಅಭಿನಂದನೀಯ. ಅವರಲ್ಲಿ ಈ ಬಗೆಯ ಆತ್ಮವಿವೇಚನಾ ಚಿಂತನ ದೃಷ್ಟಿಯು ಬಂದಿರಲು ಕಾರಣವು ಅವರೊಬ್ಬ ಯಶಸ್ವಿ ವಿಜ್ಞಾನದ ವಿದ್ಯಾರ್ಥಿಯಾಗಿರುವುದರಿಂದ, ವೈಚಾರಿಕನೆಲೆಗಳನ್ನೆಲ್ಲಾ ಅರಿತುಕೊಂಡಿರುವುದರಿಂದ, ಪರಿಸರ  ಚಿತ್ತಿಯಾಗಿರುವುದರಿಂದ, ಸ್ವಾಸ್ಥ್ಯಗಳಿಗಾಗಿ ಚೆಲುವು ಶಿಕ್ಷಣನೀಡುವ ಶಿಕ್ಷಕರಾಗಿರುವುದರಿಂದ - ಎಲ್ಲಕ್ಕೂ ಹೆಚ್ಚಾಗಿ ಇವರಲ್ಲಿ ಸಹಿತನೀಡುವ ಸಾಹಿತಿಯ ನಿತ್ಯ ಬೆಳಕಾಗಿರುವುದು ಮುಖ್ಯ. ಹಾಗಾಗಿ ಅವರ ವಚನಗಳಲ್ಲಿ ಅವರ ಅನುಭವದಲ್ಲಿರುವ ಪ್ರಾಮಾಣಿಕತೆಯು ಚಿಂತನ ಮಂಥನಗೊಂಡು ಅನುಭಾವದ ನವನೀತದ ಕರಂಡಕಗಳಾಗಿ ರೂಪುಗೊಂಡಿದೆ.
ಶ್ರೀ ಕೊಟ್ರೇಶ್ ಅವರ ‘ವಚನ ಸಾನಿಕ’ದಲ್ಲಿ 101ವಚನಗಳಿವೆ. ಇಲ್ಲಿರುವ ತುಡಿತ, ನಾವೆಲ್ಲ ಮೊದಲು ಮಾನವರಾಗಬೇಕೆಂಬ ಏಕತಾರಿ ನಾದದೊಡನೆ (ಸೂರಿನೊಡನೆ) ಜೀವನಗೀತೆಯ ಪಲ್ಲವಿಯಾಗಿ ಮನಸ್ಸುಗಳನ್ನೆಲ್ಲಾ ಒಂದುಗೂಡಿಸುತ್ತವೆ. ಭ್ರಷ್ಟಾಚಾರದ ಅಸಹ್ಯ ಚಟವನ್ನು ಮೂಲ ಸಹಿತ ನಿರ್ನಾಮ ಮಾಡುವ ಕಡೆಗೆ ಇಲ್ಲಿರುವ ಚಿಂತನಗಳು ಸಾಮಹಿಕ ಪ್ರಜ್ಞೆಗೆ ಇತ್ತ ಚುರುಕುಗಳು - ಚಾವಟಿಯ ಏಟುಗಳು ತುಂಬ ಅಮೂಲ್ಯ. ಜ್ಞಾನ-ಅಜ್ಞಾನ, ಸುಖ-ದುಃಖ, ಸಮಾಸಮತೋಲ, ಏರುಪೇರು, ರಸ-ವಿರಸಗಳ ತಾಣ ಬಿನ್ನಾಣಗಳ ಹೊಯ್ದಾಟಗಳ ಮಧ್ಯೆ ನುಗ್ಗಿ ಬರುವ ಮಾನವ ಜನ್ಮವು  ಪೂರ್ಣ ಸಾರ್ಥಕ್ಯ ಪಡೆಯಬೇಕಾದರೆ ಪ್ರತಿಯೊಬ್ಬರೂ, ತಮ್ಮ ತಮಗೆ, ‘ಆಪ್ಪದೀಪೋಭವ’ ಆಗಬೇಕಾಗುತ್ತದೆ. ತಮ್ಮ ತಮ್ಮ ಅರಿವಿನ ಬೆಳಕಿನಲ್ಲಿ ಸಾಗಿ ಅರಿವಾಗಬೇಕಾಗುತ್ತದೆ. ಆತ್ಮ ಸಾಕ್ಷಿಯಾಗಿ ಬದುಕು ಸಾಗಿಸಬೇಕಾಗುತ್ತದೆ. ಆ ಬದುಕೇ ಆತ್ಮಜ್ಞಾನ ತುಂಬಿ ಬಂದ ಬದುಕು. ಆ ಬೆಳಕೆಲ್ಲ ಇಲ್ಲಿಯ ವಚನಗಳಲ್ಲಿ ದೀಪ್ತವಾಗಿರುವುದು ಸೌಭಾಗ್ಯ. ಈ ನಿಟ್ಟಿನಲ್ಲಿ ವಚನಕಾರರ ವಚನ ಪ್ರಭೆ ಸಾರವನ್ನು ನೀಡಲು ಹೀಗೆ ಸಾಗುತ್ತದೆ.
“ನಮಗೆ ನಾವೇ ಬಂಧುಗಳಯ್ಯಾ
ನಮಗೆ ನಾವೇ ಶತೃಗಳಯ್ಯಾ” (98)
“ನಿನಗೆ ನೀನೇ ದಿಕ್ಕಾಗಬೇಕಯ್ಯ” (95)
ಅದಕ್ಕಾಗಿ ಈ ವಚನಕಾರರು ನಮ್ಮ ಶರೀರ, ಮನಸ್ಸು, ಪರಿಸರಸಹಿತ ಶುಚಿಯಾಗಿರಬೇಕೆನ್ನುತ್ತಾರೆ. ದೇಹವೇ ದೇವಾಲಯವಲ್ಲವೆ ? ಇದೇ ಅನುಭಾವ. ಈ ಸಾಧನೆಗೆ ಜೀವಶಕ್ತಿಯಾಗಿರುವ ಸತ್ಯವನ್ನು ನಿಚ್ಚಳವಾಗಿ ಬೆಳಗಿಸಿನಿಂತ ಅನೇಕ ವಚನಗಳು ನಮಗಿಲ್ಲಿ ದೊರೆತಿವೆ. ಈ ಬೆಳಕನ್ನು ಅನುಭವಿಸಲು ಪ್ರತಿಯೊಬ್ಬರಿಗೂ ಶಿಕ್ಷಣವೇ ಪ್ರೇರಣೆಯಾಗಿ ನಿಂತು ಸನ್ಮಾರ್ಗ ತೋರಿಸುತ್ತದೆಯೆಂಬ ಆರ್ಯಸತ್ಯವನ್ನು  ಅವರು ಬಿಚ್ಚಿಟ್ಟಿದ್ದಾರೆ. ಈ ಎಲ್ಲ ವಚನಗಳಲ್ಲೆಲ್ಲ ಕೊಟ್ರೇಶ್ ಅವರು ಶ್ರೀಗುರು ಕೊಟ್ಟೂರೇಶ” ಎಂಬ ಅಂಕಿತದಲ್ಲಿ ‘ಆಪ್ಪದೀಪೋಭವ’ ಆಗಿ ಪ್ರತಿಬಿಂಬಿಸಿದ್ದಾರೆ. ಆ ದೀಪದ ಬೆಳಕಿನಲ್ಲಿ ದಟ್ಟೈಸಿದ ಅಂಧಕಾರವೆಲ್ಲ ದೂರ ದೂರ. ಆಗ ಅಲ್ಲಿ ಬರೀ ಬರೀ ಬೆಳಕು. ನೆಮ್ಮದಿಯ ತುತ್ತತುದಿಯಲ್ಲಿ ನಿರ್ವಯಲು.
ಈ 101 ವಚನಗಳಲ್ಲಿರುವ ಅನೇಕ ಅನುಭಾವದ ನುಡಿಗಳು ನಮ್ಮ ಮನದಾಳವನ್ನೂ ಮುಟ್ಟಿ ತಟ್ಟಿವೆ. ಅಂತಹವುಗಳಲ್ಲಿ ಹಲವಾರು ಸದಾ ನೆನಪಿನಲ್ಲಿಯೇ ಉಳಿದು ಆಗಾಗ ತುಟಿಯ ಮೇಲೆ ಸುಳಿದು ಶಬ್ದಾರ್ಥವಾಗಿ ಮಿಡಿಯುತ್ತಿರುತ್ತವೆ. ಅಂತಹ ಕೆಲವು ನುಡಿಮುತ್ತುಗಳು.
“ಜಗಕೆಲ್ಲಾ ನೆರಳಾಗಿ ಹೂವಾಗಿ
ಹಣ್ಣಾಗುವ ಮರವಾಗಿಸಯ್ಯಾ” (5)
“ದುಡಿದು ತಿನ್ನುವ ಜೀವಿಗಳಿಗೆ
ಮನವಾರೆ ಮಿಡಿವೆನಯ್ಯಾ” (8)
“ಈ ಜಗದ ಯಾವುದೂ ತೃಣವಲ್ಲ” (10)
“ನೋವು ಅನುಭವಿಸದೆ ನಲಿವಿಗೆ ಬೆಲೆಯಿಲ್ಲವಯ್ಯ” (17)
“ಎಲ್ಲರಲ್ಲಿಯೂ ನೀ ನೆಲಸಿ, ಹರಿಸಬೇಕಯ್ಯ ಬೆಳಕ: (14)
“ಜನಿಸಿದ್ದೇ ಪರಮಾನಂದವಯ್ಯಾ” (21)
ಶೋಷಿತರನೋವಿಗೆ ಧ್ವನಿಯಾಗಿಸಯ್ಯ” (22)
“ಚಿತ್ತ ನೀಡಿರುವೆಯಲ್ಲ ಮತ್ತೇನುಬೇಕು !” (33)
ನೀನರಿತು ಜಗವ ಸಾಗಿಸೋ” (71)
ಇಂತಹ ನುಡಿಮುತ್ತುಗಳನ್ನು ಗಮನಿಸುತ್ತ ಸಾಗಿದಂತೆಲ್ಲ ಆ ನೆಲೆಯ ಚಿಂತನಗಳಲ್ಲಿ ಏಕದೇವ, ಏಕಧರ್ಮ, ಏಕವಿಶ್ವದ ಚಿಂತನೆಗಳೇ ತುಂಬಿತುಳುಕುತ್ತಿರುವುದು ನಿವೇದ್ಯವಾಗುತ್ತದೆ. ಹಾಗಾಗಿ ಎಲ್ಲರ ಎಲ್ಲ ಮತಮತಗಳಲ್ಲಿಯ ಬೆಳಕು ಏಕೋ ವಿಶ್ವಧರ್ಮದ ಸಾಧನೆಗೆ ಅವೆಲ್ಲ ಸ್ಫೂರ್ತಿಯಗಿ ನಿಲ್ಲುತ್ತವೆ. ಅದಕ್ಕೆ ಸಾಕ್ಷಿಯೆಂಬಂತೆ, ಅಲ್ಲಿರುವ ಅನುಭಾವದ ಪರಿಪಕ್ವತೆಯನ್ನು ಅನುಭವಿಸಲು, ಅನುಭವಿಸಿ ಅನುಭಾವವಾಗಲು ಕೆಲವು ಮಾಗಿದ ವಚನಗಳನ್ನು ಗುರುತಿಸುವುದು ಮುಖ್ಯವಾಗುತ್ತದೆ.
“ಹಸಿಕಾಣದ ಮಾಂಸ ; ವರ್ಣವಿಲ್ಲದ ರಕ್ತ ;
ಮುಂಡವಿಲ್ಲದ ರುಂಡ ; ಸೆಲೆಯಿಲ್ಲದ ಬಾವಿ ;
ಅಲ್ಲಲ್ಲಿ ಸಾವಿರಾರು, ಲಕ್ಷ-ಲಕ್ಷ, ಕೋಟಿ ಕೋಟಿ
ಹಾಗೆಯೇ –
ನೀವಿಲ್ಲದ ಮಂದಿರಗಳೂ ಶ್ರೀಗುರುಕೊಟ್ಟುರೇಶ”
“ಸಲುಗೆಯಲಿ ಸ್ನೇಹ ಬಯಸಿ ಬಂದವರು
ಹೆಗಲಿಗೆ ಹೆಗಲು ತಾಕಿಸುವರಯ್ಯ
ನೀನೇ ಚಾಣಾಕ್ಷ – ಎಂದು ಉಸಿರುದುಂಬಿಸಿ
ಸುತ್ತಮೆತ್ತಿಗೆ ಸೌದೆ ಒಟ್ಟುವರಯ್ಯಾ
ಸಮಯ ಸಾಧಿಸಿ ಕಡ್ಡಿಯ ಗೀಚಿ
ಉರಿಯ ಬೆಂಕಿಯಲಿ ಮೈಕಾಯಿಸಿ ಕೊಳ್ಳುವರಯ್ಯಾ
ಶ್ರೀಗುರು ಕೊಟ್ಟೂರೇಶ !”
“ನಿಮ್ಮೆತ್ತರಕ್ಕೆ ನಾನೆಂದೂ ಏರೆನಯ್ಯಾ”
“ಕೋರಿಕೆಗಳಿಲ್ಲದ ಜೀವ ಜಗದಿಯಾವುದೂ ಇಲ್ಲನೋಡಾ”
ಒಟ್ಟಾರೆ ‘ವಚನಸಾನಿಕ’ ದಲ್ಲಿಯ ನೂರೊಂದು ವಚನಗಳು ಮನಸ್ಸಿಗೆ ಸಂಸ್ಕಾರ ನೀಡುತ್ತವೆ. ಏಕೆಂದರೆ ಲೋಕ ವಿಶ್ವವಿದ್ಯಾಲಯದಲ್ಲಿಯ ನಡೆನುಡಿಗಳೆಲ್ಲ ಇಲ್ಲಿ ಚಿತ್ತಗೊಂಡು, ಬದುಕಿನ ಸಾಮರಸ್ಯಕ್ಕೆ ಮೌಲ್ಯಗಳನ್ನು ತುಂಬಿಕೊÀಡುವುದರಿಂದ ಜೀವಸಂಸ್ಕಾರಿ, ವಿಶೇಷತಃ ಭಾರತ ಸಂವಿಧಾನದ ಮೂಲ ಸಂವೇದನಾ ಸೂತ್ರಗಳೆಲ್ಲ ಇಲ್ಲಿ ಧ್ವನಿಪಡೆದಿರುವುದು ವಿಶ್ವಸಂಸ್ಥೆಗೆ ಗೌರವ ತರುವಂತಹದ್ದು. ಅಷ್ಟೇ ಅಲ್ಲದೆ ಈ ದ್ವನಾರ್ಥದ ವ್ಯಾಪ್ತಿಯಲ್ಲಿ ಕನ್ನಡದ ವ್ಯಷ್ಟಿ ವ್ಯಷ್ಟಿಯಿಂದಲೂ ಸಮಷ್ಟಿ ಭಾರತವೂ ವಿಶ್ವಶಾಂತಿಯ ವನದಲ್ಲಿ ಕಾಯಕ ನಿಷ್ಠೆಯ ಆಲದ ಮರದ ಪರಂಪರೆಯನ್ನು ಬೆಳೆಸುವ ಬಿಳಿಲು ಬಿಳಿಲಾಗಿ ಸಂಭ್ರಮಿಸುತ್ತದೆ. ಈ ಆಶಯವನ್ನು ಇಟ್ಟುಕೊಳ್ಳಬೇಕೆಂಬವರಿಗೆ ಇಲ್ಲಿರುವ ಚಿಂತನಗಳು ಪ್ರೇರಣೆಯಾದ ಹೊಳಲಾಗುತ್ತವೆ. ಹೀಗೆ ‘ವಚನ ಸಾನಿಕ’ವು ನನ್ನ ದೃಷ್ಟಿಯಲ್ಲಿ ಸತ್‍ಚಿತ್‍ಗಳಿಗೆ ಆನಂದವನ್ನು ನೀಡುವ ಕೃತಿ ಸಚ್ಚಿದಾನಂದ ಪ್ರಾಪ್ತಿಗೆ ಎಣೆ.
ಮೂವತ್ಮೂರು ವರ್ಷಗಳ ತಾರುಣ್ಯದಲ್ಲಿರುವ ಕೊಟ್ರೇಶ್ ಎಸ್. ಉಪ್ಪರ್ ಅವರಿಗೆ ಶೀಲದ ಮನಸ್ಸು ಸಮಜೋಡಿಯಾಗಿರುವುದರಿಂದ ಅವರು ಮುಂದಿನ ವಸಂತಗಳಲ್ಲಿ ಸಾವಿರದ ಸಾವಿರಾರು ಅನುಭಾವದ ವಚನ ಸಂಪತ್ತು ನೀಡುವ ಕೊಡುಗೈ ಶರಣರಾಗುತ್ತಾರೆಂಬ ಆಶೆಯನ್ನು ನನ್ನಲ್ಲಿ ಹುಟ್ಟಿಸಿದ್ದಾರೆ. ಆ ಆಶೆಯನ್ನು ಅವರ ತಪಸ್ಸು ಈಡೇರಿಸಿಕೊಡುವುದೆಂಬ ಅಚ್ಛೋದ ಮನಸ್ಸು ನನ್ನದು.


- ಪ್ರೊ ವಸಂತಕುಷ್ಟಗಿ
ಎಂ.ಎ, ಡಿ-ಲಿಟ್
# ಎಂ. ಆಯ್. ಜಿ 26
ಆದರ್ಶನಗರ, ಮೊದಲಹಂತ
ಗುಲಬರ್ಗಾ 585105
ಮೊ : ನಂ. 9448400218



















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ