ಕೊಟ್ರೇಶ್ ಎಸ್ ಉಪ್ಪಾರ್ರವರು ಸಹೃದಯಿಗಳು ಮತ್ತು ಸೃಜನಶೀಲರು. ಇವರು ಈಗಾಗಲೇ ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಐದು ಕೃತಿಗಳನ್ನು ನೀಡಿ ಸಾಹಿತಿಗಳಾಗಿದ್ದಾರೆ. ಕವನ ಸಂಕಲನದ ಜೊತೆಗೆ ವಚನ ಸಂಕಲನಗಳನ್ನು ಬರೆದು ಪ್ರಕಟಿಸುವ ಮೂಲಕ ತಮ್ಮ ಅನುಭವ ಸಾರವನ್ನು ಓದುಗರಿಗೆ ಧಾರೆ ಎರೆದು ಅಪ್ಪಟ ವಚನ ಪ್ರಿಯರೂ ಹೌದು. ಈಗಾಗಲೇ ಮುದ್ರಣದಾತುರದಲ್ಲಿದ್ದ ಇವರ ಇತ್ತೀಚಿನ ವಚನ ಸಂಕಲನ ``ವಚನ ಸಾನಿಕಾ'' ವಾಚಕರ ಹೃದಯ ತಟ್ಟುವಂತಿದೆ. ಈ ಕುರಿತು ಒಂದಿಷ್ಟು ವಿವೇಚನೆ.
ಇವತ್ತಿನ ಪರಿಸರದಲ್ಲಿ ಮನುಷ್ಯ ಸ್ವಾರ್ಥಿಯಾಗಿಹನು. ತಾನಾಯಿತು. ತನ್ನ ಲೋಕವಾಯಿತು. ಅಷ್ಟೇ ಪ್ರೀತಿಸುವವರ ಕುರಿತು ವಚನಕಾರರು ಹೀಗೆ ತಮ್ಮ ವಚನಗಳಲ್ಲಿ ಉಲ್ಲೇಖಿಸುತ್ತಾರೆ.
ಸ್ವಾರ್ಥಕ್ಕಾಗಿ ಸ್ವಾಭಿಮಾನ
ಕಳಚಿದವರ ಕಂಡೆನೆಯ್ಯಾ
ಸ್ಥಾನಕ್ಕಾಗಿ ಸತ್ಯವ
ಮರೆಮಾಚಿದವರ ಕಂಡೆನಯ್ಯಾ
ಶಾಂತಿ, ನೆಮ್ಮದಿಗಾಗಿ ಹಂಬಲಿಸುವ
ಸೌಹಾರ್ದತೆಯ ಹೃದಯ ಬೆಸೆಯುವ
ಪ್ರೀತಿ ಮಮತೆ ಚಿಮ್ಮಿಸುವ
ಮನಸ್ಸುಗಳನ್ನೇ ಕಾಣದಾದೆನು
ನೋಡಾ ಶ್ರೀ ಗುರು ಕೊಟ್ಟುರೇಶ
ಜನರು ಸ್ವಾರ್ಥಕ್ಕಾಗಿ ಸ್ವಾಭಿಮಾನ, ಸತ್ಯಗಳನ್ನೆಲ್ಲಾ ಗಾಳಿಯಲ್ಲಿ ತೂರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಈ ವಚನದ ಮೂಲಕ ಕವಿ ತನ್ನ ಅಂತರಂಗದ ಹೊಯ್ದಾಟವನ್ನು ತೋಡಿಕೊಳ್ಳುತ್ತಿದ್ದಾನೆ. ಇಂತಹ ಸ್ವಾರ್ಥಿ ಜನಗಳ ಬಗ್ಗೆ ಕವಿಗೆ ನೋವಿದೆ. ಸ್ವಾರ್ಥಕ್ಕಾಗಿ ಏನೆಲ್ಲಾ ತ್ಯಾಗಿಸುವ ಸ್ವಾರ್ಥಿ ಮನೋಭಾವದವರಲ್ಲಿ ಶಾಂತಿ, ನೆಮ್ಮದಿ ಏಕಿಲ್ಲ ಎಂಬ ಪ್ರಶ್ನೆ ಕಾಡಿದೆ. ಅಂತಲೆ ಇಂತಹ ಉತ್ತಮ ಗುಣ ಸೌಹಾರ್ದತೆ ಬೆಸೆಯುವ, ಪ್ರೀತಿ ಮಮತೆಗಳ ಚಿಮ್ಮಿಸುವ ಮನಸ್ಸುಗಳ ಕಾಣದಾದೆನಲ್ಲ ಎಂದು ಪರಿತಪಿಸುತ್ತಾರೆ.
ಗುಡಿ, ಚರ್ಚು, ಮಸೀದಿಗಳಲ್ಲಿ
ಬಂದೂಕು, ಬಾಂಬು, ಚಾಕು, ಚೂರಿಗಳದ್ದೇ
ಅಟ್ಟಹಾಸವಯ್ಯ
ದೇವರು, ಧರ್ಮದ ಹೆಸರಿನಲಿ
ನಿತ್ಯ ಕಚ್ಚಾಡಿ, ಕಿತ್ತಾಡಿ, ಕಡಿದಾಡಿ,
ಸಾಯುವವರೇ ಹೆಚ್ಚಯ್ಯಾ
ಹೀಗೆ ................
ಭೇದ, ಭಾವಗಳ ಬಿತ್ತುವವರು
ನಿನಗ್ಹೇಗೆ ಪ್ರಿಯವಯ್ಯಾ
ಶ್ರೀ ಗುರು ಕೊಟ್ಟುರೇಶ
ಈ ಜನಕೆ, ಈ ಮನಕೆ,
ಕೇಡೆಣಿಸದಾ ಚಿತ್ತ ನೀಡೋ ಪ್ರಭು
ಎನ್ನುವ ವಚನಕಾರರು ನಮಗೆ ವಾಸ್ತವ ಜಗತ್ತಿನ ಅರಿವು ಮೂಡಿಸುತ್ತಾರೆ. ಹೌದು ಇವತ್ತು ಒಂದು ಸಲ ನಾವು ಸಮಾಜದ ಒಳ ಹೊಕ್ಕು ನೋಡಿದರೆ ಧರ್ಮ, ದೇವರುಗಳ ಹೆಸರಿನಲ್ಲಿ ಜನರು
ಕಚ್ಚಾಡುವುದು ಕಂಡರೆ ನಿಜಕ್ಕೂ ಮನಮಿಡಿಯುತ್ತದೆ. ಇವತ್ತಿನ ಪರಿಸರದಲ್ಲಿ ಜನರಿಗೆ ಯಾವ ಧರ್ಮ, ದೇವರುಗಳು ಬೇಕಿಲ್ಲ. ಆದರೆ ಈ ಧರ್ಮಗಳ ಹೆಸರಿನಲ್ಲಿ ಮಾತ್ರ ಅವರು ಸ್ವ-ಸ್ವಾಭಿಮಾನಕ್ಕಾಗಿ ಜಗಳವಾಡುತ್ತಿದ್ದಾರೆ. ಮಾನವಕುಲ ಒಂದೇ ಎಂಬುದನ್ನು ಮರೆತು ಮನುಷ್ಯ ಮನುಷ್ಯರ ಮಧ್ಯೆ ಭೇದವನ್ನು ಬಿತ್ತುತ್ತಿದ್ದಾರೆ. ತಮ್ಮ ಸ್ವಾರ್ಥ ಸಾಧನೆಗಾಗಿ ಗುಡಿ, ಚರ್ಚು, ಮಸೀದಿಗಳನ್ನು ಕಟ್ಟಿ ತಮ್ಮ ಧರ್ಮ ಹೆಚ್ಚು ಎಂಬ ಸ್ವ-ಪ್ರತಿಷ್ಠೆಯಲ್ಲಿ ಮೆರೆದು ಸಮಾಜದಲ್ಲಿ ಅಸಮಾನತೆ ಸೃಷ್ಟಿಸುತ್ತಿದ್ದಾರೆ. ಅಂತಲೆ ವಚನಕಾರರು ಈ ಜನರಲ್ಲಿ ಅವರ ಮನಗಳಲ್ಲಿ ಕೇಡಿಲ್ಲದ ಚಿತ್ತ ನೀಡೆಂದು ಶ್ರೀ ಗುರು ಕೊಟ್ರೇಶನಲ್ಲಿ ಬೇಡುತ್ತಾರೆ.
ಕಚ್ಚೆ, ಕೈ, ಬಾಯಿಗಳು
ಇಚ್ಛೆಯಲ್ಲಿದ್ದವನ ಬಾಳ
ಬಿಡದಯ್ಯಾ ಸಮಾಜ,
ಈ ಮೂರು ಬಿಟ್ಟವನೇ
ಆಧುನಿಕ ಯುಗದ
ಶ್ರೇಷ್ಠ ವ್ಯಕ್ತಿ ನೋಡೋ
ಶ್ರೀ ಗುರು ಕೊಟ್ಟುರೇಶ!
ಈ ವಚನಕಾರರ ಸೂಕ್ಷ್ಮ ದೃಷ್ಟಿಯಲ್ಲಿ ಕಂಡಂತೆ ಕಚ್ಚೆ, ಕೈ, ಬಾಯಿಗಳು ಮೂರನ್ನೂ ಇಚ್ಛೆಯಲ್ಲಿಟ್ಟು ಬಾಳಿದರೆ ಇಂದು ಅವನು ಶ್ರೇಷ್ಠ ವ್ಯಕ್ತಿಯಾಗಲಾರ. ಅರ್ಥಾತ್ ಪ್ರಾಮಾಣಿಕನಾಗಿ ಬಾಳಲು ಸಮಾಜ ಇಂದು ಬಿಡಲಾರದು. ಅವನು ಅವುಗಳನ್ನು ನಂಬಿ ಸ್ವಾರ್ಥಪರನಾಗಿ ಬಾಳಿದರೆ ಮಾತ್ರ ಎಲ್ಲರಿಂದ ಸೈ ಎನಿಸಿಕೊಂಡು ಬಾಳುತ್ತಾನೆ. ಏಕೆಂದರೆ ಇಂದು ಶಿಷ್ಟರ ಕಾಲವಿಲ್ಲ, ದುಷ್ಟರ ಕಾಲವಾಗಿದೆ ಎಂದು ಆಧುನಿಕ ವಚನಕಾರ ವ್ಯಂಗವಾಗಿ ಹೀಗೆ ಉಲ್ಲೇಖಿಸುತ್ತಾರೆ.
ವಚನಕಾರರಿಗೆ ಸಮಾಜದ ಬಗ್ಗೆ ಅನುಕಂಪವಿದೆ, ಪ್ರೀತಿಯಿದೆ, ಕಾಳಜಿಯಿದೆ. ಸುತ್ತಲಿನ ಪರಿಸರ ಕಂಡಾಗಲೆಲ್ಲಾ ಕವಿಗೆ ನೋವಾಗುತ್ತಿದೆ. ವಚನಗಳು ರಚಿಸಬೇಕೆಂದಾಗಲೆಲ್ಲ ಸುತ್ತಲೂ ನಡೆಯುತ್ತಿರುವ ಸ್ವಾರ್ಥ, ವಂಚನೆ, ಸ್ವ-ಪರ ಕಾಳಜಿ, ಸಂಕುಚಿತ ಮನೋಭಾವಗಳೆಲ್ಲ ಕಂಡಾಗ ಲೆಕ್ಕಣಿಕೆ ಕೈಯ್ಯಲ್ಲಿ ಹಿಡಿದು ಹೀಗೆ ಯೋಚಿಸುತ್ತಾರೆ.
ಏನೆಂದು ಬರೆಯಲಯ್ಯಾ
ಸತ್ತ ಮನೆ-ಮಠದೊಳಗೆ
ಏನೆಂದು ಸ್ತುತಿಸಲಯ್ಯಾ
ಮೂಕವಾದ ಬದುಕಿನೊಳಗೆ
ಏನೆಂದು ಹೊಗಳಲಯ್ಯಾ
ಶೋಷಣೆಗಳ ಶೂಲದೊಳಗೆ
ಏನೆಂದು ಹೇಳಲಯ್ಯಾ
ಚಿತೆಯಲ್ಲಿರುವ ಎದೆಯೊಳಗೆ
ಶ್ರೀ ಗುರು ಕೊಟ್ಟುರೇಶ!
ಜೀವನವೇ ಸಮೃದ್ಧಿಯನ್ನು ಕಳೆದುಕೊಂಡು ಶೂನ್ಯವಾಗಿರುವ, ಬರಡಾದ ಎದೆಯೊಳಗೆ ನಾನೆಂತು ಬರೆಯಲಿ ಎಂದು ವಚನಕಾರರು ಕೊರಗುತ್ತಾರೆ. ಇವರ ವಚನಗಳಲ್ಲಿ ಜೀವನಾನುಭವವಿದೆ. ತನ್ನೊಂದಿಗೆ ಇನ್ನೊಬ್ಬರು ಬಾಳಲೆಂಬ ಕಳಕಳಿಯಿದೆ. ಇಂದು ಶಿವಶರಣರ ವಚನಗಳಿಗಿಂತ ಭಿನ್ನವಾಗಿರುವ ಆಧುನಿಕ ವಚನಕಾರರ ವಚನಗಳಲ್ಲಿ ಸಮಕಾಲಿನ ಸಮಸ್ಯೆಗಳತ್ತ ಪ್ರಜ್ಞೆ ಇದೆ, ವಿಶ್ಲೇಷಣೆಯಿದೆ. ದೇವರು ಧರ್ಮಗಳಿಗಿಂತ ಹೆಚ್ಚಾಗಿ ವಾಸ್ತವ ಚಿತ್ರಣ ನಾವು ಕಾಣುತ್ತೇವೆ. ಅಂದಿನ ಶಿವಶರಣರಲ್ಲಿ ಭಕ್ತಿ ಪರಾಕಾಷ್ಠೆ, ಜೀವನ ವಿಧಾನಗಳ ಕಂಡರೆ ಇಂದಿನವರಲ್ಲಿ ನೇರವಾಗಿ ಸಮಾಜದತ್ತ ಬೆರಳು ತೋರಿಸಿ ವಾಸ್ತವ ಚಿತ್ರಣಗಳನ್ನು ವಚನಗಳಲ್ಲಿ ಬಿಂಬಿಸುತ್ತಾರೆ.
ವಚನಕಾರರು ಜೀವನದಲ್ಲಿ ಸಮಸ್ಯೆಗಳಿರಬೇಕು ಎನ್ನುತ್ತಾರೆ. ಕಷ್ಟಗಳು ಬಂದಾಗ ಮಾತ್ರ ಅವುಗಳ ಎದುರಿಸುವ ಶ್ರಮ ನಮ್ಮಲ್ಲಿ ಉದಯಿಸುತ್ತದೆ. ಆ ಶ್ರಮವೇ ನಮ್ಮ ಪ್ರಗತಿಗೆ ಇಂಬಾಗುತ್ತದೆ. ಅಂತಹ ಪರಿಶ್ರಮ ನಮ್ಮಲ್ಲಿ ಇಲ್ಲದಾಗ ನಮ್ಮ ಬದುಕು ಕೆಳಸ್ತರಕ್ಕೆ ಜಾರುತ್ತದೆ. ಅರ್ಥಾತ್ ಹಿನಾಯಕ ಸ್ಥಿತಿಗೆ ನಾವು ತಲಪುತ್ತೇವೆ. ಪರಿಶ್ರಮವಿಲ್ಲದ ಬಾಳಿಗೆ ಅರ್ಥವಿಲ್ಲ. ಗೃಹಸ್ಥ ನಾದವನು ಅಂತಹ ಸಮಸ್ಯೆ, ಸವಾಲುಗಳಿಗೆ ಎದೆಯೊಡ್ಡಿ ದುಡಿದು ಬಾಳುವುದೇ ಲೇಸು. ಈ ಸಹಜ ಬದುಕು. ಇಲ್ಲದಿದ್ದರೆ ಅದು ಸನ್ಯಾಸ ಪ್ರಕೃತಿಯಾಗಿ ಬಿಡುತ್ತದೆ ಎಂದು ಈ ಕೆಳಗಿನ ವಚನದಲ್ಲಿ ವಚನಕಾರರು ಹೇಳುತ್ತಾರೆ.
ಸಮಸ್ಯೆಗಳೇ ಸವಾಲುಗಳಯ್ಯಾ
ಸವಾಲುಗಳಿದ್ದರೆ ಪರಿಶ್ರಮವಯ್ಯಾ
ಪರಿಶ್ರಮವಿದ್ದರೆ ಪುರೋಗತಿಯಯ್ಯಾ
ಇಲ್ಲವಾದರೆ ಅಧೋಗತಿಯೇ ನೋಡಾ
ಸಂಸಾರ ಪ್ರಕೃತಿ ಸಹಜವಯ್ಯಾ
ಸನ್ಯಾಸ ಪ್ರಕೃತಿ ವಿರುದ್ಧವಯ್ಯಾ
ಶ್ರೀ ಗುರು ಕೊಟ್ಟುರೇಶ!
ಅವರ ಇನ್ನೊಂದು ವಚನ ಅತ್ಯಂತ ಮಾರ್ಮಿಕವಾಗಿದೆ. ಅದು ಈ ಕೆಳಗಿನಂತಿದೆ.
ಪೂರ್ತಿ ಪೂಜೆ, ಭಜನೆಗಳು
ತಾತ್ಕಾಲಿಕ ಆನಂದ ಮಾರ್ಗಗಳಯ್ಯಾ
ಪ್ರೀತಿ, ದಯೆ, ಹೃದಯ ವೈಶಾಲ್ಯತೆ
ಶಾಶ್ವತ ಆನಂದದ ನೆಲೆಗಳಯ್ಯಾ
ಮನುಜ ತನ್ನ ಮುಕ್ತಿಗಾಗಿ
ಶಾಶ್ವತ ಆನಂದವರಸಬೇಕು
ನೋಡು ಶ್ರೀ ಗುರು ಕೊಟ್ಟುರೇಶ!
ಹೀಗೆ ಶ್ರೀ ಕೊಟ್ರೇಶರು ಅನೇಕ ವಚನಗಳನ್ನು ಬರೆಯುತ್ತಾ ಇಲ್ಲಿ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಚೆಲ್ಲಿದ್ದಾರೆ. ಜನರು ಮಾಡುವ ಮೂರ್ತಿ ಪೂಜೆ, ಭಜನೆಗಳೆಲ್ಲಾ ಡಾಂಭೀಕ ಭಕ್ತಿಯ ಮೂಲಗಳಾಗಿದೆ. ಪೂಜೆ, ಭಜನೆಗಳಿಂದ ಕೇವಲ ಕ್ಷಣಿಕ ಸುಖ, ಆನಂದ. ಆದರೆ ಪ್ರೀತಿ, ದಯೆ, ಹೃದಯ ವೈಶಾಲ್ಯತೆಗಳು ಬೆಳೆಸಿಕೊಂಡಾಗ ಅವುಗಳು ನಮಗೆ ಶಾಶ್ವತ ಸುಖವನ್ನು ನೀಡುತ್ತವೆ. ಅಂತಲೆ ಮನುಜನು ತನ್ನ ಮುಕ್ತಿಗಾಗಿ ಶಾಶ್ವತ ಆನಂದಕ್ಕಾಗಿ ಹುಡುಕಬೇಕು ಎಂದು ಅಭಿಪ್ರಾಯ ಪಡುತ್ತಾರೆ.
ಒಟ್ಟಿನಲ್ಲಿ ಶ್ರೀ ಕೊಟ್ರೇಶ್.ಎಸ್. ಉಪ್ಪಾರ್ರವರ ಈ ವಚನ ಸಾನಿಕಾ ಗ್ರಂಥದಲ್ಲಿ ವಚನಗಳ ಮೂಲಕ ಇಂದಿನ ಸಮಾಜದ ಚಿತ್ರಣ ಚಿತ್ರಿಸಲಾಗಿದೆ. ಈ ವಚನಗಳಲ್ಲಿ ಸಾಮಾಜಿಕ ಚಿಂತನೆ ಇದೆ. ಮೂಢನಂಬಿಕೆಗಳ ವಿರುದ್ಧ ಬಂಡೆದ್ದಿದೆ. ಜನರ ಕುಹಕ ಬುದ್ಧಿ ಪ್ರದರ್ಶಿಸಲಾಗಿದೆ. ಇವರು ಜಾತಿ, ಅಸಮಾನತೆ, ಸ್ವಾರ್ಥಪರ ಜನರ ಅಂತರಂಗ ಬಹಿರಂಗ ಮತ್ತು ದುರ್ಜನ ಕುರಿತ ಅನೇಕ ವಚನಗಳೂ ಇಲ್ಲಿವೆ. ನೈಜ ಬಾಳುವ ಕಲೆಯನ್ನು ತೋರ್ಪಡಿಸುತ್ತಾರೆ. ಅಧರ್ಮಿ, ಅತ್ಯಾಚಾರಿಗಳ ವಿರುದ್ಧ ಖಂಡ-ತುಂಡವಾಗಿ ವಚನಗಳನ್ನು ಹೆಣೆದಿದ್ದಾರೆ. ಹೀಗೆ ಶ್ರೀ ಕೊಟ್ರೇಶರು ವಚನಗಳ ಮೂಲಕ ಸಮಾಜ ತಿದ್ದಲು ಹೊರಟಿರುವುದು ಸ್ವಾಗತಾರ್ಹ. ಇತ್ತೀಚಿನ ದಿನಗಳಲ್ಲಿ ಆಧುನಿಕ ವಚನಕಾರರು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿ ಅತ್ಯಂತ ಅನುಭವಪೂರ್ಣವಾಗಿ ವಚನಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಈ ಪರಿಸರದಲ್ಲಿ ಶ್ರೀಯುತರು ಇನ್ನಷ್ಟು ಅಧ್ಯಯನ, ಪರಿಶ್ರಮಗಳ ಮೂಲಕ ಇನ್ನೂ ಉತ್ತಮ ರೀತಿಯ ವಚನ ಸಂಕಲನಗಳನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಲೆಂದು ಹಾರೈಸುವೆನು.
***********
* ಎಂ. ಜಿ. ದೇಶಪಾಂಡೆ
ಹಿರಿಯ ಸಾಹಿತಿಗಳು
ಬೀದರ್.
ಮೊ: 8971067233
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ