ಓಬಳಾಪುರ ಎಂಬ ಪುರಾತನ ಗ್ರಾಮ. ಅಲ್ಲಿ ಬಡ್ಡಿ ಬಸಣ್ಣ ಎಂಬುವನು ಹೇರಳವಾಗಿ ಹಣ ಸಂಪಾದನೆ ಮಾಡಿದ್ದನು. ಅವನು ಗಳಿಸಿದ ಸಂಪತ್ತಿನಲ್ಲಿ ಅವನಿಂದ ಬೆವರು ಹರಿದು ಬಂದ ಒಂದು ನಯಾ ಪೈಸೆನೂ ಕೂಡ ಅದರಲ್ಲಿರಲಿಲ್ಲ. ಧೀನ ಧಲಿತರ ವಡವೆ-ವಸ್ತುಗಳನ್ನು ಒತ್ತೆ ಇರಿಸಿಕೊಂಡು ದುಬಾರಿ ಬಡ್ಡಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದ. ಒಂದು ಪಕ್ಷ ಗೊತ್ತು ಮಾಡಿದ ಸಮಯ ಮೀರಿದರೆ ಸಾಲಗಾರರೊಡನೆ ಕಟುಕನಂತೆ ವರ್ತನೆ ಮಾಡುತ್ತಿದ್ದ. ಬಿಕ್ಷಕರಿಗೂ ಕೂಡ ಒಂದಾಣಿನೂ ಸಹ ದಾನಮಾಡುವ ಕೈ ಅವನದಲ್ಲ. ಆದರೆ ಸುತ್ತೂರಿನಲ್ಲಿಯೇ ಹೆಸರು ಮಾಡಿಕೊಂಡಿದ್ದ. ಅವನ ತಂದೆ-ತಾಯಿ ಗಳಿಸಿಕೊಟ್ಟ ಆಸ್ತಿ-ಸಂಪತ್ತನ್ನು ಸಹ ಜವಾಬ್ಧಾರಿಯುತವಾಗಿ ನೋಡಿಕೊಳ್ಳದೇ ಹೊಲಗಳನ್ನೆಲ್ಲಾ ಬೀಳುಕೆಡವಿ ಸಂಗ್ರಹ ಸಂಪತ್ತನ್ನು ಹೇರಳ ಬಡ್ಡಿಯ ರೂಪದಲ್ಲಿ ನೀಡಿ ಬಡವರ ಹೊಟ್ಟೆ ಒಡೆದು ತಾನು ಬದುಕುವ ಶೈಲಿಯನ್ನು ಮಾತ್ರ ಮನಮೋಹಕವಾಗಿ ಅರಿತಿದ್ದ.
ಒಂದು ದಿನ ಬೆಳಗಿನ ಜಾವ ಕಾಡುಸಿದ್ದನೊಬ್ಬ ಭಿಕ್ಷೆಗೆ ಬರುತ್ತಾ ಬಸವಣ್ಣನ ಬಾಗಿಲಿಗೆ ಬಂದು ‘ಶಂಖ’ ಊದಿದ. ಬೆಳಬೆಳಗ್ಗೆ ಏನು ಮುಂದಕ್ಕೆ ಹೋಗಿ ಬಾರಯ್ಯ ಎಂದ ಬಸಣ್ಣ. ಸ್ವಾಮಿ ನಿಮ್ಮದು ಮೊದಲನೇ ಮನೆ ಹೀಗೆನ್ನಬೇಡಿ ನಾನು ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುತ್ತಿದ್ದೇನೆ. ಅದು ಹಲವಾರು ದಿನಗಳಾಗಬಹುದು. ಸ್ವಲ್ಪ ಉದಾರ ಮನಸ್ಸು ಮಾಡಿ ಧನಸಹಾಯ ಮಾಡಿ ನಿಮಗೆ ದೇವರೊಳ್ಳೆಯದು ಮಾಡುತ್ತಾನೆ.
ಬಸಣ್ಣ ಕಣ್ಣು ಕೆಂಪಗೆ ಮಾಡಿ “ಹೋಗು-- ಹೋಗು-- ಪುಕ್ಕಟೆ ಧರ್ಮದ ರೂಪದಲ್ಲಿ ಕೊಡುವವರಾದರೆ ತಿಪ್ಪೆಯ ನಾಯಿಗೂ ಹಣ ಬೇಕಾದೀತು” ಬಂದು ಬಿಟ್ಟ ದೊಡ್ಡದಾಗಿ ಇದನ್ನು ಸಂಪಾದನೆ ಮಾಡಿ ನಾನು ಈ ಸ್ಥಿತಿಯಲ್ಲಿರಬೇಕಾದರೆ ಎಷ್ಟು ಬೆವರು ಸುರುಸಿ ಗಳಿಸಿದ್ದೇನೆ ಎಂದು ತಿಳಿದಿದ್ದೀಯಾ ? ನಿನ್ನ ಹಾಗೆ ಕಾಡಿ ಬೇಡಿ ದಯ್ಯ ದಪ್ಪಾ ಎಂದು ಸಂಗ್ರಹಿಸಿದ್ದರೆ ನೀರಿನಂತೆ ಬಾಚಿ ಬಾಚಿ ದಾನ ಮಾಡುತ್ತಿದ್ದೆ ಎಂದು ಹೇಳಿದ.
ಸಿದ್ದಯ್ಯ ಜೋರಾಗಿ ಗಹ-ಗಹಿಸಿ ನಗತೊಡಗಿದ. ಬಸಣ್ಣ “ಏ ಮೂರ್ಖ ಏಕೆ ಹಾಗೆ ಹುಚ್ಚನಂತೆ ನಗುತ್ತೀಯಾ ?”
ಸಿದ್ದಯ್ಯ ನಾನಲ್ಲಯ್ಯ ಹುಚ್ಚ ಇನ್ನು ಕೆಲವೇ ಕ್ಷಣದಲ್ಲಿ ನೀನಾಗುತ್ತೀ ಇಂದು ರಾತ್ರಿ 12.00 ಕ್ಕೆ ನಿನ್ನ ಹಣೆ ಬರಹ ಮುಗೀತು. ನಂತರ ನೀನು ಗಳಿಸಿದ ಸಂಪತ್ತನ್ನು ನಿನ್ನ ಹಿಂದೇನೆ ಒಯ್ಯುವೆಯಾ ? ಇಲ್ಲವೇ ಪಾಪ, ಪುಣ್ಯ ಬಡ್ಡಿ ಒಯ್ಯುತ್ತೀಯಾ ಎಂದು ಪ್ರಶ್ನೆ ಮಾಡಿದ.
ಸಾವಿನ ಹೆಸರು ಕೇಳುತ್ತಿದ್ದಂತೆಯೇ ಬಸಣ್ಣ ಸಿಡಿಲೊಡೆದ ಮರದಂತಾದ ! ಅವನ ಎದೆ ಒಳಗೊಳಗೆ ಬೆವೆಯತೊಡಗಿತು. ಎರಡು ಸಾಗರಗಳಂತೆ ಕಣ್ಣುಗಳಲ್ಲಿ ನೀರು ಭಿತ್ತರಿಸಿ ಬಂದವು. ಕೂಡಲೇ ಸಿದ್ದಯ್ಯನ ಕಾಲು ಹಿಡಿದು “ಮಹಾತ್ಮನೇ ನನ್ನನ್ನು ಕ್ಷಮಿಸಿ ಬಿಡಿ. ಈಗ ನನ್ನ ಪಾಲಿನ ದೇವರು ನೀವೇ. ಹಣ, ಸಂಪತ್ತೆಲ್ಲ ಧಾರೆ ಎರೆಯುತ್ತೇನೆ. ನನ್ನ ಪ್ರಾಣ ಉಳಿಯುವ ಬಗೆ ಇದ್ದರೆ ತಿಳಿಸಿ” “ನನ್ನನ್ನು ಪ್ರಾಣ ಭೀತಿಯಿಂದ ಕಾಪಾಡುವಿರೆನ್ನುವ ತನಕ ನಿಮ್ಮ ಪಾದಗಳಿಂದ ಎನ್ನಯ ಕರಗಳನ್ನು ಮೇಲೆತ್ತಲಾರೆ” ಎಂದು ಗೊಗೆರೆಯ ತೊಡಗಿದ.
ಸಿದ್ದಯ್ಯನ ಬೆಂಕಿಯಂತಾದ ಮನಸ್ಸು ಕರಗಿ ತಣ್ಣಗಾಯಿತು. ನೋಡು ಇಷ್ಟೊಂದು ಬೇಡಿಕೊಳ್ಳುತ್ತೀ ಎಂದು ಪ್ರಾಣ ಭಿಕ್ಷೆಯ ಒಂದು ಸಲಹೆ ನೀಡುವೆ, ಹೊತ್ತು ಮುಳುಗುವುದರೊಳಗಾಗಿ ನೀನು ಸಾಕಿದ ಪ್ರಾಣಿ, ಪಕ್ಷಿಯೋ, ಬಂಧುಗಳೋ ಯಾರಾದರೂ ಸಿಕ್ಕರೆ ಊರಾಚೆ ಇರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಬಂದು ಬಿಡು. ಇದಲ್ಲದೇ ಬೇರೆ ಮಾರ್ಗ ನನ್ನಲ್ಲಿಲ್ಲ. ಎಂದು ಹೇಳಿ ಹೆಜ್ಜೆ ಕಿತ್ತÀ.
ಇತ್ತ ಬಸಣ್ಣನು ತನಗಾಗಿ ಯಾರಾದರೂ ಜೀವ ತ್ಯಾಗ ಮಾಡುವವರಿದ್ದಾರೆಯೇ ಎಂದು ತಿಳಿಯಲು ಅಣಿಯಾದ. ತಕ್ಷಣ ತಾನು ಪ್ರೀತಿಯಿಂದ ಸಾಕಿದ ಹುಂಜವನ್ನು ಕೇಳಿದ. ಹುಂಜವೇ ಇಷ್ಟು ದಿನ ನಿನಗೆ ಕಾಳು- ನೀರು ಹಾಕಿ ವಿನಯದಿಂದ ಸಾಕಿ ಬೆಳಸಿದ್ದೇನೆ. ಆದರೆ ನನಗೀಗ ಮರಣ ಕಾಲ ಸಮೀಪಿಸಿದೆ. ನಾನು ಇಲ್ಲಿ ಬದುಕಿ ಸಾಧಿಸುವ ಮಾರ್ಗಗಳು ಹಲವಾರಿವೆ. ಆದಕಾರಣ ನೀನು ನನ್ನ ಬದಲಿ ಜೀವ ತೆತ್ತು ಸಹಾಯ ಮಾಡಿವೆಯಾ ? ಅದಕ್ಕೇನೆಂತೆ ಒಡೆಯಾ ನನ್ನನ್ನು ಸಾಕಿ ಸಲಹಿದವರೇ ನೀವು. ಇಂದಲ್ಲ ನಾಳೆ ಯಾರಿಗಾದರೂ ಮಾರಿದರೆ ನನ್ನನ್ನು ಅವರು ಕತ್ತರಿಸಿ ತಿನ್ನುವುದಿಲ್ಲವೇ ? ಮರಣ ನನ್ನ ಪಾಲಿಗೆ ಎಂದಿಗೂ ಹೇಳಿ ಬರುವುದಿಲ್ಲ. ಆದರೆ ಇಂದೇ ಸಾಯಲು ಅಡ್ಡಿಯೇನು? ನನಗೀಗ ನಿಮಗೆ ಮರು ಜನ್ಮ ನೀಡಿದ ಪುಣ್ಯವಾದರೂ ನನಗೆ ಸಿಗಲಿ ಎಂದು ಹುಂಜು ಹೇಳಿತು.
ಅಷ್ಟರಲ್ಲಿ ಬಾನಿಂದ ಅಶರೀರ ವಾಣಿ ಕೇಳಿ ಬಂತು ? “ಹುಂಜವೇ ಆ ನರ ಮಾನವನಿಗೋಸ್ಕರ ನೀನು ಪ್ರಾಣ ಕಳೆದು ಕೊಳ್ಳಲು ಹೊರಟೆಯಾ ? ನನ್ನ ಗತಿ ಏನು ? ನೀನು ನನಗೆ ಅವಶ್ಯಕವಾಗಿ ಬೇಕೇ ಬೇಕು. ನೀನಿಲ್ಲದಿದ್ದರೆ ಬೆಳಗಾಗಿದೇ ಎದ್ದೇಳು ‘ದಿನಕರ’ ಎಂದು ಯಾರು ನನ್ನನ್ನು ಕೂಗಿ ಎಬ್ಬಿಸುತ್ತಾರೆ ? ಊರಿನಲ್ಲಿನ ಹುಳ-ಉಪ್ಪಟೆಗಳನ್ನು ಯಾರು ತಿಂದು ಶುಚಿ ಮಾಡುತ್ತಾರೆ ? ನಿನ್ನ ಸಂತತಿಯನ್ನು ಯಾರು ಬೆಳೆಸುತ್ತಾರೆ. ನಿನ್ನ ಸತಿ-ಮಕ್ಕಳ ಕಷ್ಟಕ್ಕೆ ಪಾರವೇ ಇಲ್ಲವೇ. ಆದಕಾರಣ ನೀನು ಸಾಯಬೇಡ” ಎಂದು “ಎಲವೋ ನರ ಮಾನವ ನಿನ್ನ ಸ್ವಾರ್ಥಕ್ಕೆ ಮೂಕ ಪ್ರಾಣಿಗಳನ್ನು ಬಲಿಪಶುಗಳನ್ನಾಗಿ ಮಾಡುವೆಯಾ ?” ಎಂದು ಬಸಣ್ಣನಿಗೆ ಕೇಳಿತು.
ಇದರಿಂದ ಕುಪಿತಗೊಂಡ ಬಸಣ್ಣ ಮನೆಯೊಳಗೆ ಹೋಗುತ್ತಲೇ ತಾನು ಸಾಕಿದ ‘ಮನೆಚಿರತೆ’ ರಾಜನಂತೆ ಬಾಲ ಅಲ್ಲಾಡಿಸುತ್ತಾ ಒಡೆಯನ ಕಾಲುಗಳನ್ನು ನೇವರಿಸಹತ್ತಿತ್ತು. ಅದನ್ನು ಕುರಿತು ಬಸಣ್ಣ ಅಲ್ಲಿಯೂ ಸಹ ತನ್ನ ವಿಚಾರ ಧಾರೆಯನ್ನು ಸ್ಪಷ್ಟ ಪಡಿಸಿದ ಅವನಿಂದಲೇ ಬೀದಿಯಲ್ಲಿರಬೇಕಾದುದು ಮನೆಯಲ್ಲಿ ತೋಳವಾಗಿ ಬೆಳೆದ ಬೆಕ್ಕು ಚಿಂತಿಸಿ ತನ್ನ ಒಡೆಯನಿಗೋಸ್ಕರ ತನ್ನ ಪ್ರಾಣವನ್ನು ತ್ಯಜಿಸುವುದಾಗಿ ಹೇಳಿತು.
ಕೂಡಲೇ ‘ಧರಿತ್ರಿ’ ಬೇಡ ಮಾರ್ಜಾಲ ನೀನು ಸಾಯಲು ಮುಂದಾಗಬೇಡ ? ನೀನೇನಾದರೂ ಸತ್ತರೆ ನಮ್ಮ ಗತಿ ಏನು ? ಆ ಇಲಿಗಳು ನನ್ನ ಮೈಯನ್ನೆಲ್ಲಾ ತೂತು ಮಾಡಿ ನನಗೆ ಚಿತ್ರ ಹಿಂಸೆ ಕೊಟ್ಟಾವು ? ನೀನಿಲ್ಲವಾದರೆ ನನ್ನ ಮಡಿಲಲ್ಲಿ ವಿಷ ಜಂತುಗಳೇ ಅಧಿಕವಾಗಿಹವು. ಈ ಸ್ವಾರ್ಥಿ ನರಮಾನವನ ಮಾತಿನ್ನು ನಂಬಬೇಡ? ಎಂದಿತು.
ಹಾಗೆಯೆ ಆಲೋಚನಾ ಗ್ರಸ್ತನಾಗಿ ಬಸಣ್ಣ ಚಿಂತಿಸÀತೊಡಗಿದ. ದನಕೊಟ್ಟಿಗೆಯಿಂದ ಅಂಬಾ--- ಎಂದು ಅವನ ಅಚ್ಚು ಮೆಚ್ಚಿನ ಮೋಬಳಿ ಆಕÀಳು ಒದರಿತ್ತು. ತಕ್ಷಣವೇ ಎದ್ದು ಗೌರಿ ಬಳಿಗೆ ಬಂದು “ಗೌರಿ ನಿನಗೆ ದಿನಾಲು ಸಾಕಾಗುವಷ್ಡು ಇಂಡಿ, ಮೇವನ್ನು ಹಾಕಿ ತೋಳವಾಗಿ ಬೆಳೆಸಿದ್ದೇನೆ. ಆದರೆ ನನಗೀಗ ಯಮಧರ್ಮನಿಂದ ಕರೆಯೋಲೆ ಬಂದಿದೆ. ನಾನು ಇನ್ನು ನಿಮ್ಮಂತ ಹಲವಾರು ಹಸುಗಳನ್ನು ಸಾಕಿ ಸಲಹಬೇಕೆಂದುಕೊಂಡಿದ್ದೇನೆ. ಆದಕಾರಣ ನನ್ನ ಬದಲೀ ನೀನು ಹೋಗಿ ನನಗೆ ಪ್ರಾಣ ಭಿಕ್ಷೆ ನೀಡುವೆಯಾ ?” ಎಂದು ದೀನಸ್ಥನಾಗಿ ಭಿನ್ನವಿಸಿಕೊಂಡ. ತಕ್ಷಣವೇ ಗೌರಿ ಸೂಕ್ಷ್ಮವಾಗಿ ಯೋಚಿಸಿ ಒಡೆಯಾ. ನಾನು ಹೀಗೆ ಬೆಳೆಯಲು ಸುಖವಾಗಿರಲು ನೀವೇ ಕಾರಣ ನಿಮಗೋಸ್ಕರ ನನ್ನ ಕೈಯಿಂದ ಅಷ್ಟು ಮಾಡಲಾಗದೇ ಇದರಿಂದಾದರೂ ಸಂತೋಷವಾಗಿ ಪ್ರಾಣ ತೆತ್ತು ಕಿಂಚಿತ್ತಾದರೂ ನಿಮ್ಮ ಖುಣ ತೀರಿಸುವ ಭಾಗ್ಯ ಒದಗಿ ಬಂತಲ್ಲಾ ! ತುಂಬಾ ಆನಂದವಾಗ್ತಾ ಇದೆ.
ತಾಳು – ತಾಳು – ಜನನಿ ಆ ನರ ಮಾನವನಿಗೆ ಭಾಷೆ ಕೊಡಬೇಡ ನೀನಿಲ್ಲದಿದ್ದರೆ ನಮ್ಮ ಗತಿ ಏನು ? ಹೈನ ಊಟ ಮಾಡುವವರ ಪಾಡೇನು ? ನಮ್ಮಲ್ಲಿರುವ ಪೌಷ್ಠಿಕಾಂಶವನ್ನೆಲ್ಲಾ ಈ ನರರು ಹೀರಿ ಬಿಟ್ಟಿದ್ದಾರೆ. ಆಹಾರ ರೂಪದಲ್ಲಿ ನಿನ್ನಯ ಕಾಯಕ ಅಪಾರ. ನೀನಿದ್ದರೆ ನಮಗೆ ಆಹಾರ, ನಮ್ಮ ಚೈತನ್ಯಕ್ಕೆ ಮುಂದಾರು ಗತಿ ? ಎಂದು ಪಕ್ಕದ ಹೊಲ ಮತ್ತು ಸಸ್ಯ ಸಂಕುಲ ಕೂಗಿ ಕೇಳಿದವು. “ಈ ನರ ಮಾನವ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅನ್ಯರ ಜೀವ ತಿನ್ನುವುದು ತನ್ನ ಕಸುಬು ಮಾಡಿಕೊಂಡಿದ್ದಾನೆ’ ಎಂದು ಬಸಣ್ಣನನ್ನು ಕುರಿತು ಹಂಗಿಸಿದವು. ನಂತರ ಬಸಣ್ಣ ತಾನು ಸಾಕಿ ಸಲುಹಿದ ಮುದ್ದು ಗಿಳಿಯ ಪಂಜರದ ಬಳಿ ಬಂದು “ಮುದ್ದು ಗಿಳಿಯೆ ನಿನ್ನನ್ನು ಸುಂದರವಾಗಿ ಈ ಪಂಜರದಲ್ಲಿ ಸಾಕಿ ಬೆಳಸಿದ್ದೇನೆ. ಆದರೆ ನನಗೀಗ ಕೊನೆಗಾಲ ಬಂದಿದೆ. ನಿನಗೆ ದುಃಖವೆನಿಸುವುದಿಲ್ಲವೇ ? ನಿನ್ನ ಜೀವ ಕೊಟ್ಟು ನನ್ನನ್ನು ಕಾಪಾಡುವೆಯಾ ?” ಎಂದು ಪರಿಪರಿಯಾಗಿ ಬೇಡಿಕೊಂಡನು. ಗಿಳಿಯ ನೀನೆಲ್ಲ್ಲಿ ಸುಂದರವಾಗಿ ಸಾಕಿರುವೆ ? ನನ್ನ ತಂದೆ, ತಾಯಿ, ಅಕ್ಕ, ತಂಗಿಯರನ್ನು ಅಗಲಿಸಿದ ಮಹಾಪಾಪಿ ನೀನು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಯೋಚಿಸಿ “ಒಡೆಯಾ ನನ್ನ ಚೆಲುವಾದ ಸೌಂದರ್ಯಕ್ಕೆ ನೀವೇ ಕಾರಣ ನಿಮಗೋಸ್ಕರ ಅದನ್ನಾದರೂ ಮಾಡಿ ತೃಣ ಹಂಗನ್ನು ಇಳಿಸಿಕೊಳ್ಳುವೆ ನಾನು ಸಾಯಲು ಸಿದ್ದನಿದ್ದೇನೆ” ಎನ್ನುತ್ತಿದ್ದಂತೆಯೇ ನಿಲ್ಲು ನಿಲ್ಲು ಗಿಳಿಯೇ ಎಲ್ಲಿಯೋ ಗುಡುಗಿದಂತಾಯ್ತು! “ನಮ್ಮ ದೇಹದಲ್ಲಿ ಪಾಪದ ಹಣವನ್ನು ತುಂಬಿಕೊಂಡು ಅದರ ರಕ್ತದ ಮಡುವಿನಲ್ಲಿ ಜೀವಿಸಿ ಸಾಕಗಿದೆ. ಇಷ್ಟು ದಿವಸ ನಿನ್ನ ಚಿಲಿ ಪಿಲಿ ಧ್ವನಿಯ ಕೇಳಿ ಸ್ವಲ್ಪ ನೆಮ್ಮದಿಯಿಂದಿದ್ದೆವು. ನೋಡುಗರಿಗೆ ಆಕರ್ಷಸಿ ಮತ್ತು ಸುಂದರವಾಗಿ ಕಾಣುತ್ತಿದ್ದ್ದೆವು. ನೀನಿಲ್ಲದಿದ್ದರೆ ನಾನು ಮಸಣದಂತಾಗಿಬಿಡುವೆನು ದಯವಿಟ್ಟು ನನ್ನನ್ನು ತೊರೆಯಬೇಡ”À ಎಂದು ಬಸಣ್ಣನ ಜೀವಿತ ಮನೆಯ ಹೇಳಿತು.
ಬಸಣ್ಣ ಬಸವಳಿದು ಮೂಲೆ ಹಿಡಿದು ಊಟ, ನೀರು ದೂರಮಾಡಿ ಚಿಂತನಾಲೋಕದ ಡೊಳ್ಳುರಿಯಲ್ಲಿ ಮನವ ಬೇಗುದಿಯಾಗಿಸಿಕೊಂಡ ಬಸಣ್ಣಾ ಎಂಬ ಮುಗಿಲ ಮಧುರ ಧ್ವನಿಯು ಅವನ ಕಿವಿಯಲ್ಲಿ ಊಂಕರಿಸಿತು. ಒಮ್ಮಲೇ ಬೆಚ್ಚು ಬಿದ್ದು ದಿಗ್ಬ್ರಮೆಗೊಂಡು ಯಾರು ನೀನು ? ನನಗಿನ್ನು ರಾತ್ರಿ 12ರ ತನಕ ಸಮಯವಿದೆ ಹತ್ತಿರ ಬರಬೇಡ ? ಎಂದು ಹಿಂದೆ ಸರಿಯ ತೊಡಗಿದ. ಹೆದರಬೇಡ ನಾನೇನು ಮೃತ್ಯುವಲ್ಲ. ನೀನು ಸಂಗ್ರಹಿಸಿದ ನಿಧಿದೇವತೆ ಮಾತನಾಡುತ್ತಿದ್ದೇನೆ. ನೀನು ಒಪ್ಪಿಗೆ ನೀಡುವುದಾದರೆ ನಾನು ನಿನಗೋಸ್ಕರ ಸಾಯಲು ಸಿದ್ಧ. ಈ ರಕ್ತ ಪಿತಾಪಿ ವಾಸನೆಯಿಂದ ಮುಕ್ತಿ ಹೊಂದಬೇಕೆಂದು ನಿರ್ಧರಿಸಿ ಬಿಟ್ಟಿದ್ದೇನೆ. ಇಲ್ಲಿಂದ ಜೀವ ತೆತ್ತು ಸ್ವತಂತ್ರವಾಗಲು ನಿಶ್ಚಯಿಸಿದ್ದೇನೆ. ಧನ್ಯನಾದೆ ತಾಯೆ, ನೀನಾದರೂ ನನ್ನ ಪ್ರಾಣ ಕಾಪಾಡಲು ಮುಂದೆ ಬಂದೆಯಲ್ಲ. ಇಷ್ಟು ದಿನ ನಿನ್ನ ಸಾಕಿ ಸಲುಹಿದ್ದಕ್ಕೆ ಸಾರ್ಥಕವಾಯಿತು. ಎಂದ ಬಸಣ್ಣ. ಇನ್ನೊಂದು ತುದಿಯಿಂದ ಕರ್ಕಶವಾಗಿ ಎಲವೋ ಮೂಢ ಅಷ್ಟು ಸುಲಭವಾಗಿ ನೀನು ಬದುಕಲು ಸಾಧ್ಯವಿಲ್ಲ. ಅವಳನ್ನು ನಾನು ಬಿಟ್ಟು ಕೊಡುವುದಿಲ್ಲ. ಅವಳು ನನ್ನ ಜೀವ ಸಂಗಾತಿ ಎಂದಿತು. ಸಿಟ್ಟಿನಿಂದ ಬಸಣ್ಣ ಯಾರು ನೀನು ? ನಾನು ನಿನ್ನ ಪಾಪದೇವತೆ. ನಿನ್ನ ಪಾಪದ ಕೊಡ ತುಂಬಿದೆ. ಆದಕಾರಣ ಅವಳನ್ನು ಈ ಮನೆಯಿಂದ ಬೀಳ್ಕೊಡಲು ನಾನು ಸಿದ್ದವಿಲ್ಲ. ಎಲೇ ಭಾಗ್ಯ ಲಕ್ಷ್ಮಿಯೇ ದಯವಿಟ್ಟು ನನ್ನನ್ನು ಬಿಟ್ಟು ತೊಲಗಬೇಡ. ಈ ರಕ್ತ ದಾಹಿ ನರ ಮಾನವ ಬಾಳದಿರಲಿ ಎಂದು ಗುಡುಗಿತು ಪಾಪದೇವತೆ. ಇದÀರಿಂದ ಬಸಣ್ಣ ನಿರಾಸೆಗೊಂಡ.
ಅಷ್ಟೊತ್ತಿಗಾಗಲೇ ಸೂರ್ಯ ತನ್ನ ಮಾತೆಯ ಮಡಿಲ ಸೇರಿ ಸಮಯ ಕಳೆದಿದ್ದ. ಬಸಣ್ಣ ಕಂಡ ಆಸೆಗಳೆÀಲ್ಲವೂ ಮೇಣದಂತೆ ಕರಗಿಹೋದವು. ಬಸಣ್ಣ ನಿರಾಸೆಯಿಂದ ಅಳತೊಡಗಿದ. ಎಲ್ಲಾ ಯೋಚಿಸಿ ವಿಧಿ ಇಲ್ಲದೇ ಊರಾಚೆಯಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿಗೆ ಧಾವಿಸಿದ. ಅವನನ್ನು ಬರುವಿಕೆಯ ನೋಡುತ್ತಿದ್ದಂತೆಯೇ ಸಿದ್ದಯ್ಯ ಎಲ್ಲ ಅರಿತುಕೊಂಡ. ಬಸಣ್ಣ ಬಂದವನೆ ಸಿದ್ಧಯ್ಯ ನ ಕಾಲಿಡಿದ. ನನಗೆ ಜೀವ ದಾನ ಮಾಡುವವರು ನನ್ನವರೆಂದು ಯಾರು ಉಳಿಯಲಿಲ್ಲ ಸ್ವಾಮಿ. ನೀವೇ ನನ್ನನ್ನು ಕಾಪಾಡಬೇಕೆಂದು ಬೇಡಿಕೊಂಡನು. ಮುಗುಳ್ನಗುತ್ತಾ ಸಿದ್ಧಯ್ಯ “ನೋಡಿದೆಯಾ ಬಸಣ್ಣ, ನಾನು ಸ್ವಲ್ಪ ಹಣ ಸಹಾಯ ಮಾಡು ಎಂದರೆ ನೀನು ಎಷ್ಟೊಂದು ಮಾತಾಡಿಬಿಟ್ಟೆ ? ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವ ಸಂಗತಿಗಳು ಒಂದಿಲ್ಲೊಂದು ರೀತಿಯಲ್ಲಿ ಅವಶ್ಯಕವಾಗಿವೆÉ. ಅವುಗಳ ಸಹಾಯ ಸಿಗುತ್ತದೆ. ಆದರೆ ಈ ನರ ಮಾನವನಿಂದ ಏನು ಸಿಗುತ್ತದೆ ? ನಿನ್ನನ್ನು ನೀನೇ ಮನವರಿತು ಆತ್ಮ ವಿಮರ್ಶೆ ಮಾಡಿಕೋ, ನಿನ್ನಿಂದ ಉಪಕಾರವಾಗಿದೆ. ನೀನು ಬೇಕು ಎಂದು ನಿನ್ನ ಯಾವ ಜೀವ ಸಂಗತಿಗಳಿಗೂ ಕೂಡ ಮನಸ್ಸು ಬರಲಿಲ್ಲ. ದೀನ ದಲಿತರ ರಕ್ತ ಹೀರಿ ಇಷ್ಟು ದಿವಸ ಬದುಕಿ ಜೀವನ ಸಾಗಿಸಿದೆಯಲ್ಲಾ ಯಾರಿಗಾಗಿ ? ಏತಕ್ಕಾಗಿ ? ಈಗ ನಿನಗೆ ಮರಣ ಬಂದಾಗ ಉಪಯೋಗಕ್ಕಾಗಿ ಬಾರದಿದುದು ಎಷ್ಟು ಗಳಿಸಿದರೇನು? ಎಂದು ಪ್ರಶ್ನಿಸಿದ.
“ಹೌದು ಸ್ವಾಮಿಗಳೆ ಗಳಿಕೆ ನಶ್ವರ, ನಿಮ್ಮಿಂದ ಜ್ಞಾನೋದಯವಾಯಿತು. ನೀವು ಮಹಾತ್ಮರೇ ನಾನು ನನ್ನ ಜೀವನದಲ್ಲಿ ಹಣ ಗಳಿಸುವ ನಿಟ್ಟಿನಲ್ಲಿಯೇ ತಲ್ಲೀನನಾದೆ. ಅದರ ಬದಲು ಕಿಂಚಿತ್ತಾದÀರೂ ಪುಣ್ಯ ಎಂಬುದನ್ನು ಪಡೆದು ಕೊಂಡಿದ್ದರೆ ಈಗ ಅದಾದರೂ ನನಗೆ ಜೀವ ಸಂಕಟದಿಂದ ಪರಾಗಲೂ ಸಹಾಯವಾಗುತ್ತಿತ್ತೇನೋ ?” ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು “ನಾನು ಇನ್ನು ಬದುಕಿದ್ದು ಸಾರ್ಥಕವಿಲ್ಲ ಬದುಕಿರಬಾರದು, ಏತಕ್ಕಾಗಿ ಬದುಕಬೇಕು? ಯಾರಿಗಾಗಿ ಬದುಕಬೇಕು ? ಈ ಪಾಪ ದುರಾಸೆಗಾಗಿ ಬದುಕಲೇ ?” ಎಂಬಿತ್ಯಾದಿಯಾಗಿ ನೊಂದುಕೊಳ್ಳುತ್ತಾ ಕುಸಿದು ಬಿದ್ದ. ಸಿದ್ಧಯ್ಯ “ಅದಕ್ಕೆ ಇನ್ನು ಕಾಲ ಮಿಂಚಿಲ್ಲ ಬಸಣ್ಣ! ನಿನಗೆ ಇನ್ನು ಅವಕಾಶವುಂಟು. ನೀನು ಸಾಕಿದ ಆ ನಶ್ವರವಾದ ಸಂಪತ್ತನ್ನು ಈಗಲಾದರೂ ಜಗದ ಪುಣ್ಯಕಾರ್ಯಗಳಿಗೆ, ಕಷ್ಠದಲ್ಲಿರುವವರಿಗೆ, ಭಿಕ್ಷುಕರಿಗೆ ವಿನಿಯೋಗಿಸಲು ಅರೆಘಳಿಗೆ ಕಾಲಾವಕಾಶವಿದೆ. ಅಷ್ಟು ಮಾಡಿದರೆ ಈ ಘಳಿಗೆಯಲ್ಲಿ ಗಳಿಸಿದ ಪುಣ್ಯವಾದರೂ ಸಾಕು ನಿನ್ನನ್ನು ರಕ್ಷಿಸಲು” ಎಂದನು ಸಿದ್ಧಯ್ಯ.
ಇದ ಕೇಳುತ್ತಿದ್ದಂತೆಯೇ ಕುರುಡನಿಗೆ ಕಣ್ಣುಗಳು ಬಂದಂತಾದವು. ತನ್ನ ಜಿಪುಣತನದಿಂದ ಸಂಗ್ರಹಿಸಿದ ಎಲ್ಲಾ ಸಂಪತ್ತನ್ನು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗ ಮಾಡಿ, ನೀರಿನಂತೆ ದಾನಮಾಡಿ ಸಾವಿನ ದಡದಿಂದ ತಪ್ಪಿಸಿಕೊಂಡು ಕೊನೆಗೆ ತನ್ನದೆಂಬ ಯಾವ ಸ್ವಾರ್ಥವನ್ನು ಉಳಿಸಿಕೊಳ್ಳದೇ ವಿರಾಗಿಯಾಗಿ ಬಾಳಿದ.
ಲೇಖಕರ ವಿಳಾಸ: ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ಲೇಖಕರು, ಶಿಕ್ಷಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ