ಕೃತಿ ವಿಮರ್ಶೆ
ಆತ್ಮೀಯರಾದ ಕೋಟ್ರೇಶ್ ಎಸ್.ಉಪ್ಪಾರ್ರವರು ವೃತ್ತಿಯಲ್ಲಿ ಉಪಾಧ್ಯಾಯರು. ಪ್ರವೃತ್ತಿಯಲ್ಲಿ ಬರಹಗಾರರು. ಪ್ರತಿ ಶಿಕ್ಷಣವು ಶೈಕ್ಷಣಿಕ ಕ್ಷೇತ್ರದಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಹಾಗೂ ಆ ಮೂಲಕ ವಿದ್ಯಾರ್ಥಿಗಳ ಮನದಲ್ಲಿ ನೂರಾರು ಹಣತೆಗಳನ್ನು ಹಚ್ಚುವ ಪವಿತ್ರ ಕೈಂಕರ್ಯಕ್ಕೆ ಮೀಸಲಾದವರು. ವಿಚಾರ ಸಾಹಿತ್ಯ, ವಚನ ಸಾಹಿತ್ಯ, ವೈಜ್ಞಾನಿಕ ಜಿಜ್ಞಾಸೆ ಪ್ರೇರಿತ ಲೇಖನಗಳು ಈ ಲೇಖಕರ ಆದ್ಯತೆಯ ವಸ್ತು ವಿಷಯವಾಗಿದೆ. ಹಾಗೂ ಪ್ರಚಲಿತ ಸಾಮಾಜಿಕ ಸಮಸ್ಯೆಗಳಿಗೆ ಸಂವೇದನಾ ಶೀಲವಾಗಿ ಸೂಕ್ತ ಪ್ರತಿಕ್ರಿಯೆಯನ್ನು ಸೂಚಿಸುವುದರ ಮೂಲಕ ಸಾಮಾಜಿಕವಾಗಿಯೂ ಕೂಡ ಅತ್ಯಂತ ಕ್ರಿಯಾಶೀಲವಾಗಿರುವ ಕೊಟ್ರೇಶ್ ಎಸ್.ಉಪ್ಪಾರ್ರವರು ಅತ್ಯಂತ ಉತ್ಸಾಹಪೂರ್ಣ ಸಾಹಿತ್ಯ ಕೃಷಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ.
2005ನೇ ಇಸವಿಯಿಂದ ಸಾಹಿತ್ಯ ರಚನೆ ಮಾಡುತ್ತಿರುವ ಈ ಲೇಖಕರು 2010ರ ಒಂದೇ ವರ್ಷದಲ್ಲಿ ಸುಮಾರು ಆರು ಕೃತಿಗಳನ್ನು ಜನಮನದೆದುರು ಪ್ರಕಾಶಿಸಿದ್ದಾರೆ. ಇದೀಗ “ಅವಳ ಮುಖಗಳು’ ಎಂಬ ಪ್ರಬಂಧ ಸಂಕಲನದ ಬಗ್ಗೆ ನನ್ನ ಒಂದಿಷ್ಟು ಅನಿಸಿಕೆಗಳು ಹೀಗಿವೆ, ಕೊಟ್ರೇಶ್ರವರು ಈ ಪ್ರಬಂಧ ಸಂಕಲನವನ್ನು ಮೂರು ಶೀರ್ಷಿಕೆಗಳ ಅಡಿಯಲ್ಲಿ ವಿಭಾಗಿಸಿದ್ದಾರೆ. ಶೋಷಣೆಯ ಸುಳಿಯಲ್ಲಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಇರುವ ಸುಮಾರು ಎಂಟು ಪ್ರಬಂಧಗಳಲ್ಲಿ ಮಹಿಳೆಯನ್ನು ಅಮಾನವೀಯ ಆಚರಣೆಗಳ ಮೂಲಕ ಅಧೀನತೆಗೆ ಒಡ್ಡುವ ಅನಿಷ್ಠ ಪದ್ದತಿಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಮುಂದಿಟ್ಟಿದ್ದಾರೆ. ಒಂದೊಂದು ಸಮಸ್ಯೆಯ ಮೂಲ ಮತ್ತು ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಕೆಲವೇ ಪುಟಗಳನ್ನು ಮೀಸಲಿಟ್ಟಿರುವುದರಿಂದ ಆಯಾ ಅನಿಷ್ಠ ಪದ್ದತಿಯ ಬಗ್ಗೆ ಮೇಲ್ಸ್ತರದ ಪರಿಚಯಾತ್ಮಕ ಲೇಖನವಾಗಿ ಗುರುತಿಸಲ್ಪಡುತ್ತವೆ. ಹೀಗಾಗಿ ಚಿಂತನಾಶೀಲವಾದ ಮತ್ತು ಆಳವಾಗಿ ವಿಶ್ಲೇಷಿಸಿದ ವಿಚಾರ ಪ್ರಚೋದಕವಾದ ವಿಷಯವು ಈ ಪ್ರಬಂಧಗಳ ಮೂಲಕ ದೊರಕುವುದಿಲ್ಲ. ಬದಲಿಗೆ ವಿದ್ಯಾರ್ಥಿ ಸಮುದಾಯದ ಅಗತ್ಯವನ್ನು ಪೂರೈಸುವಂತಹ ಪ್ರಾಥಮಿಕ ಮಾಹಿತಿಯಿಂದ ಕೂಡಿದೆ.
ಈ ಪ್ರಬಂಧ ಸಂಕಲನದ ಎರಡನೇ ಭಾಗವೇ ಸಾಧನೆಯ ಹಾದಿಯಲ್ಲಿ ಎಂಬ ಶೀರ್ಷಿಕೆಯಡಿ ಮೂಡಿಬಂದ ಅಧ್ಬುತ ವ್ಯಕ್ತಿಗಳ ಜೀವನ ಸಾಧನೆಯ ಕಿರು ಪರಿಚಯ. ಈ ಭಾಗದಲ್ಲಿ ಪ್ರಥಮ ಮಹಿಳಾ ಏರ್ವೈಸ್ ಮಾರ್ಷಲ್ ಪದ್ಮ ಬಂಡೋಪಧ್ಯಾಯ ಎವರೆಸ್ಟ್ ಏರಿದ ಭಾರತೀಯ ಮಹಿಳೆಯಾದ ಸಂತೋಷ್ ಯಾದವ್, ಚಂದ್ರ ಪ್ರಭ ಐತ್ವಾಲ್, ಗಾಢ ಪರಿಸರ ಪ್ರಜ್ಞೆಯ ಡಾಕ್ಟರ್ ಕುಸುಮ ಸೊರಬ, ನರ್ಮದಾ ಕಣಿವೆಯ ಹೋರಾಟ ಗಾರ್ತಿ ಮೇಧಾಪಾಟ್ಕರ್, ತಾಯಿ ಹೃದಯದ ಮದರ್ ತೆರೇಸಾ, ಬಾರತೀಯ ಕ್ರೀಡೆಯ ಚೇತನ ಅಂಜು ಮಾರ್ಕೋಸ್, ಇಂದಿರಾ ಪ್ರಿಯದರ್ಶಿನಿ, ಸ್ವಾತಂತ್ರ್ಯ ಹೋರಾಟದ ಧೀಮಂತ ಚೇತನ ಮತ್ತು ಕವಯತ್ರಿ ಸರೋಜಿನಿ ನಾಯ್ಡು, ತಾಯಂದಿರ ದಿನಾಚರಣೆಯ ಪ್ರೇರಣೆ ಮತ್ತು ಪೂರಕ ಶಕ್ತಿ ಅನ್ನ ಜಾರ್ವಿಸ್, ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಮತ್ತು ಅಸಮಾನ ಕಲಾವಿದೆ ಪಂಡರಿಭಾಯಿ ಹಾಗೂ ಪ್ರಥಮ ಮಹಿಳಾ ವಿದೇಶಾಂಗ ಕಾರ್ಯದರ್ಶಿ ಜೋಕಿಲ ಅಯ್ಯರ್ ಮೊದಲಾದವರ ಜೀವನ, ಅವರುಗಳು ಎದುರಿಸಿದ ಎಡರು ತೊಡರು ಹಾಗೂ ಸಾಧನೆಯ ಬಗ್ಗೆ ಸವಿವರವಾಗಿ ಚಿತ್ರಣವನ್ನು ನೀಡಿದ್ದಾರೆ.

ಕೊಟ್ರೇಶ್ರವರು ಸಾಮಾಜಿಕ ಬದ್ದತೆಯ ಜೀವಂತ ಉದಾಹರಣೆಯಾಗಿದ್ದಾರೆ ಅದರೊಡನೆ ಸಾಹಿತ್ಯ ರಚನೆಯ ಅಪಾರ ಶ್ರದ್ದೆ ಮತ್ತು ಶಿಸ್ತನ್ನು ಹೊಂದಿದವರಾಗಿದ್ದಾರೆ. ಹೀಗಾಗಿ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಲೇಖಕರು ಉತ್ತಮ ವಿಷಯವನ್ನು ತಮ್ಮ ಪ್ರಬಂಧ ರಚನೆಗೆ ಆಯ್ಕೆಮಾಡಿಕೊಂಡಿದ್ದಾರೆ. ಆದರೆ ಈ ¨ಗ್ಗೆ ವ್ಯಾಪಕವಾದ ಮತ್ತು ವಿಷಯ ಸಂಗ್ರಹದ ಅವಶ್ಯಕತೆ ಅವರಿಗಿದೆ ಹಾಗೂ ನಿರೂಪಣೆಯಲ್ಲಿ ಸೂಕ್ತ ಹೊಂದಾಣಿಕೆ ಮತ್ತು ಸಂವಹನದ ಶಿಸ್ತಿನ ಅಗತ್ಯ ಕೂಡ ಇದೆ. ಕೊಟ್ರೇಶ್ರವರು ಅತ್ಯಂತ ಉತ್ಸಾಹದ ಭರದಲ್ಲಿ ಅನೇಕಾನೇಕ ಸಂಖ್ಯೆಯ ಕೃತಿಗಳನ್ನು ರಚಿಸುವ ಬದಲಿಗೆ ತಮ್ಮ ಕ್ಷಿತಿಜಗಳನ್ನು ವಿಸ್ತರಿಸಿಕೊಂಡಲ್ಲಿ ಸಾಹಿತ್ಯದ ಮೈಲಿಗಲ್ಲುಗಳಾಗಿ ತಮ್ಮ ಸ್ಥಾನವನ್ನು ಪಡೆಯುವ ಕೃತಿ ರಚನೆ ಸಾಧ್ಯವಾಗಲಿದೆ. ಕನ್ನಡದ ಸೃಜನಶೀಲ ಮತ್ತು ಬೌದ್ಧಿಕ ವಲಯದ ಮೇರು ಕೃತಿಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಗುರಿ ಮಾತ್ರ ಮುಖ್ಯವಾಗಿ ಮೈಲಿಗಲ್ಲುಗಳು ಮರೆಯಾಗಲಿ ಎಂದು ಬಯಸುತ್ತೇನೆ.
ಉರ್ದು ಕವಿ ಬಶೀರ್ ಬದರ್ನ ಕವನವನ್ನು ಉದ್ಧರಿಸುವುದಾದಲ್ಲಿ
‘ಜಿಸ್ ದಿನ್ ಸೇ ಚಲಾ ಹೋಂ ಮೇರೀ ಮಂಜಿಲ್ ಪೇ ನಜರ್ ಹೈ
ಆಂಖೊಂ ನೇ ಕಭೀ ಮೈಲ್ ಕಾ ಪತ್ಥರ್ ನಹೀ ದೇಖಾ’
(ಹೊರಟಿರುವ ದಿನದಿಂದ ನನ್ನ ನೋಟ ಗುರಿಯ ಮೇಲಿದೆ
ಮೈಲಿಗಲ್ಲನ್ನು ನನ್ನ ಕಂಗಳು ನೋಡಿಲ್ಲ)
ಜಿಲ್ಲಾ ಕೇಂದ್ರದಲ್ಲಿ ಕ್ರಿಯಾಶೀಲರಾಗಿರುವ ಕೊಟ್ರೇಶ್ ಉಪ್ಪಾರರಂತಹ ಉತ್ಸಾಹಿ ಯುವ ಬರಹಗಾರರಿಗೆ ಅಧ್ಯಯನ ಮತ್ತು ಬರವಣಿಗೆಯ ದಿಗಂತಗಳನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಸೂಕ್ತ ವಾತಾವರಣ ದೊರಕಬೇಕು. ಬೌದ್ಧಿಕ ವಿಚಾರ ವಿನಿಮಯದ ಸಲುವಾಗಿ ವಿಧ್ವಾಂಸರ ಸಾಂಗತ್ಯ ದೊರಕಬೇಕು. ಬೇರು ಮಟ್ಟದ ಸಾಮಾಜಿಕ ಹಿನ್ನಲೆಯುಳ್ಳ ಕೊಟ್ರೇಶ್ರವರಿಗೆ ಅಕಾಡೆಮಿಕ್ ವಲಯದ ಸಂಪರ್ಕವಾದಲ್ಲಿ ಅವರ ಬರವಣಿಗೆಯ ಸೊಗಡು ಖಂಡಿತವಾಗಿಯೂ ವಿಭಿನ್ನವಾಗುತ್ತದೆ ಮತ್ತು ಕಾಲದ ಮೂಸೆಯಲ್ಲಿ ಪುಟವಿಟ್ಟ ಚಿನ್ನದಂತೆ ಕಂಗೊಳಿಸುತ್ತದೆ. ಅಂತಹ ಬೌದ್ಧಿಕ ಹಿನ್ನಲೆ ಕೊಟ್ರೇಶ್ ಮತ್ತು ಅವರಂತಹ ಯುವ ಬರಹಗಾರರಿಗೆ ದೊರಕಲಿ ಮತ್ತು ಅವರಿಂದ ಕನ್ನಡ ಸಾಹಿತ್ಯದಲ್ಲಿ ಕಂಗೊಳಿಸುವ ಮೇರು ಕೃತಿಗಳು ಮೂಡಿಬರಲಿ ಎಂಬ ಸದಾಕಾಂಕ್ಷೆಗಳೊಡನೆ.
ಭಾನು ಮುಷ್ತಾಕ್ ,ಖ್ಯಾತ ಲೇಖಕಿ, ಹಾಸನ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ