ಬುಧವಾರ, ಜುಲೈ 30, 2014

ಕಲ್ಪವೃಕ್ಷ



ಅವ್ವ-ಈಟು ಹೊಟ್ತುಂಬಕಿಲ್ಲ ಇನ್ನರ್ಧ ಕೊಡವ್ವಾ, “ಇರೋ ಮೂರಲ್ಲಿ ಆರ್ಜನ ಉಣ್ಬೇಕು ಮಗಾ, ನನ್ನರ್ಧ ರೊಟ್ಟಿ ನಿನಗೆ ಕೊಟ್ಟು ಹೋಗವಂದ್ರೆ ಒತ್ತಾರೆಯಿಂದ ಹಿಡ್ಡು ಆ ಪಣ್ಯಾತ್ಮ ಅರವ್ವನ ಮಡಿಲ್ಗೆ ಹೋಗುಮಟಾ ಕೆಲ್ಸ ಮಾಡ್ಬೇಕು. ಆಗ್ಲಿ ನೀನಾ ಉಣ್ಣು ಮಗಾ ಹೊಲ್ದಾಗ ಯಾವದಾದ್ರು ಕಾಯೋ, ಸಪ್ಪೋ ತಿಂತೀನಿ, ದೇವ್ರು ಪರಪಂಚ್ದಾಗ ಯಾರ್ಗೂ ಕೊಡಬಾರ್ದ ಕಷ್ಟ ನಮ್ಗೆ ಕೊಡಬೇಕಂತ.. ಅವ್ನ ಕಣ್ಣಾಕಮಣ್ಣ ಹೊಯ್ಯಾ...!!” ಎಂದು ಚೆಲುವಕ್ಕ ಪಾರಂಪರಿಕವಾಗಿ ಬಂದಂತ ಮರದ ಕೊಣೆಗೆಯಲ್ಲಿ ಮೂರು ರೊಟ್ಟಿ ಸುಟ್ಟು ನಾಕು ಮಕ್ಕಳಿಗೆ ಪಾಲು ಮಾಡಿ ತನ್ನ ದೇವ್ರುಗೆ ಅರ್ಧ ತೆಗಿದಿಟ್ಟು, ಮಕ ತೊಕ್ಕಂಡು, ನಿನ್ನೆ ದಿನ ತಂದ ಅಕ್ಕರ್ಕಿ ಸೊಪ್ಪು ತಿಂದು ನೀರು ಕುಡ್ದು, ಹಿಡಿ ಒಡಂಕಂದ ಕುರ್ಜಿಗಿ ತಗೊಂಡು ಗೌಡ್ರು ಹೊಲ್ಕ ಕಳೆ ತಗ್ಯಾಕ ಹೋದ್ಲು.
ಇತ್ತ ಚೆನ್ನನ ಹಿರಿಮಗ ‘ಪೊಕ್ರ’ ಹಳ್ಳದ ದಂಡೀಲಿಂದ ಒಂದು ತೆಂಗಿನ ಸಸಿ ಹೊತ್ಕೊಂಡು ಬಂದು ಅವರ ಗುಡಸಲ್ಮುಂದೆ ಕುಣಿತೆಗೆದು ನೆಟ್ಟ. ಅದು ಯಾವುದೋ ಮನೆಯ ಅಂತ್ರಕಾಯಿ ಇರ್ಬೇಕು ಬಹುಶಃ ಮ್ಯಾಗಿನೂರ್ನಾರು  ಗಂಗೇಲಿ ತೇಲಿಬಿಟ್ಟರ್ಬೇಕು, ಅದು ಬಂದು ದಂಡೇ  ಮರಳಲ್ಲಿ ಹೂತು ಜಗತ್ತ ನೋಡಿರ್ಬೇಕು. ಅಣ್ಣ ನೆಟ್ಟ ಸಸಿಗೆ ‘ಪರ್ಲ’ ಒಡ್ಕು ಚಿಪ್ಪಿನಿಂದ ತಿಪ್ಪಿಗುಂಡ್ಯಾನ ನೀರ ತಂದು ಹಣಿಸುತ್ತಾ ಇದ್ದ. ಇನ್ನೊಂದೆಡೆ ಮಾಲಿ ಮರಿಯನಿಗೆ ಚಪಾತಿ, ಕೋಳಿ ಮಾಂಸದ ತುಂಡುಗಳನ್ನು ಉಣಬಡಿಸಿದಳು ! ಮರಿಯ ಚಪಾತಿ ಮುರಿದು, ತುಂಡು ಸಿಗಿದು ತಿಂದು, ಕೊನೆಗೆ ಎಲುಬುಗಳನ್ನು ಕಟಾರನೇ ಕಡಿದು ಚೀಪುವಂತೆ ನಟಿಸುತ್ತಾ ಊಟದ ಆಟದಲ್ಲಿ ಮಗ್ನರಾಗಿದ್ದರು.
ಲೇಚೆನ್ನಾ., ‘ಏನೂದೇವ್ರು...’, ‘ಆಮ್ಯಾಕ ಸೀಳ್ಯಾಂತೆ ಕೊಡ್ಲಿ ಅಲ್ಲೇ ಹಾಕಿ ಬಾ, ಸಕ್ರಿ ಚೀಲ ನಿಟ್ಟು ಮಾಡದೈತಿ ...’ ಚೆನ್ನ ಮಾದಪ್ಪ ಗೌಡ್ರ ಮನ್ಯಾಗ 20 ವರ್ಷದಿಂದ ದುಡುದ್ರು ಅವರಪ್ಪ ‘ತಿರುಕ’ ಮಾಡಿದ ಸಾಲ ಇನ್ನೂ ತೀರಿಸಿಲ್ಲ ! ಇದು ಗೌಡ್ರ ಲೆಕ್ಕ. ಗೌಡ್ರ ಹೆಂಡ್ತಿ ಮಾಲತಿ “ಚೆನ್ನಾ. ಕೆಲ್ಸ ಮುಗಿದ್ಮೇಲೆ ಉಣ್ಯಾಂತ, ಈ ಬಟ್ಟೆಗಂಟ ಹಳ್ಕ ಒಯ್ಯಿ, ಅಲ್ಲಿ ಪಾರವ್ವ ಸೆಳ್ಯಾಕ ಹೋಗ್ಯಾಳ” ಎಂದು ಅಣತಿ ಮಾಡಿದ್ಲು.
ಪರ್ಲನಿಗೆ ಅರ್ಧ ರೊಟ್ಟಿ ಸಾಕಾಗಿರಲಿಲ್ಲ. ಒಮ್ಮೆಲೇ ನೆನೆಸ್ಕೊಂಡು ಹಳ್ಳ ಬೀಳಾಮಟ ಒಂದೇ ಸವ್ನೆ ಜಿಗಿದ. ನೀರಲ್ಲಿ ದಬಾರನೆ ಬಿದ್ದ, ಹೊಟ್ಟೆ ಒಳಗೊಳಗೆ ಸುಡುತ್ತಿದ್ದರೂ ಮೇಲೆ ಗಂಗೆ ತಣ್ಣಗೆ ಮಾಡಿದ್ದಳು. ಈಸಿಕೊಂತ ಆಚೆ ದಡಕ್ಕೆ ಬಂದು... ದಿಡೀರನೆ ಸ್ವರ್ಗವೇ ಸಿಕ್ಕಷ್ಟು ಸಂತಸಪಟ್ಟ. ಕಾರಣ ಎದುರಿಗಿದ್ದ ಏಡಿಕನ್ನವ ನೋಡಿ! ತುಂತುರು ಮಣ್ಣನ್ನು ತೆಗೆದು ಕೈ ನುಗ್ಗಿಸಿದ. ತುದಿ ಬೆರಳಿಗೆ ತಗುಲುತಿದೆ, ಆದ್ರೆ ಕೈ ಇನ್ನು ಸಣ್ಣವು! ಹೊರತೆಗೆದು ದೂರದಲ್ಲಿದ್ದ ಚೂಪಾದ ಕಲ್ಲಿನ ಸಹಾಯದಿಂದ ಸುತ್ತಲೂ ಕಟೆದು ಅಗಲ ಮಾಡಿ, ಏಡಿಯ ಹೊರತೆಗೆದು ನಿಂಗೆ ಏಟೈತೆ ಸೊಕ್ಕು, ನನ್ನ ಕೈಗೆ ಸಿಗಾಕಿಲ್ಲ...? ಎಂದು ಕಾಲುಗಳನ್ನು ಕಿತ್ತೆಸೆದು, ದೊಡ್ಡ ಕಾಲುಗಳನ್ನು ಚಪ್ಪರಿಸಿದ, ಹೀಗೆ ನಾಲ್ಕೈದು ಬೇಟೆಯಾಡಿ ಹಸಿವ ನೀಗಿಸಿಕೊಂಡ.
ಇತ್ತ ಹೊಲ್ದಾಗ ಮಟ ಮಟ ಮಧ್ಯಾಹ್ನ ಧರೆಯೊಡೆÀಯನ ಸುಡಾ ಬಿಸಿಲು ಕೆಲಸಿಗರ ಬೆವರಿಳಿಸಿತ್ತು. ಆದ್ರೆ ಚಲುವಕ್ಕ ಮಾತ್ರ ಒಂದನಿ ಬೆವಯುತಿದ್ದಿಲ್ಲ ! ತಂಬಾಕ ಕಳೆ ಬೇರೆ, ಇದರ ಘಾಟ ಹಾಗೂ ಬಿಸಿಲು. ಚಲುವಕ್ಕನ ದೃಷ್ಟಿ ಮಂಜು ಕವಿದು, ತಲೆ ಸುತ್ತಿ ನೆಲಕ್ಕುರುಳಿದಳು, ಅಲ್ಲಿರೋ ಜನ ನೀರು ಚಿಮಿಸಿ, ಎಬ್ಬಿಸಿ ‘ಹುಷಾರಿದ್ದಾಂಗಿಲ್ಲ ಮನಿಗೆ ಹೋಗು ಚಲುವಿ’ ಅಂದ್ರೆ, ಚಲುವಕ್ಕ ‘ಯಾಕೋ ಒಸಿ ತಲೆ ಸುತ್ತಿದಂಗಾಯ್ತು, ನಾನು ಮನಿಗೋದ್ರೆ ನಾಳೆ ತಿನ್ನಾದ್ ಹೆಂಗೆ?’ ಎಂದು ಅದರಲ್ಲೇ ಎದ್ದು ಬಿದ್ದು ಕೆಲಸ ಮಾಡಿದ್ಲು, ಸೆರಗಿನಿಂದ ಮುಖ ಒರೆಸ್ತಾ. ಸೆರಗ ಅಂದ್ರೆ ಆ ಸೀರೆ ಕತೆ ನೆನಪಿಗೆ ಬರುತ್ತೆ, ಚಲುವಕ್ಕಾಗ ಬಿಟ್ಟು ಉಟ್ಕಾಳ್ಳಾಕ ಅದು ಒಂದೇ...  ಒಕ್ಕಲಿಗರ ಮನ್ಯಾಗ ಏಳ್ದಿಸ ಕೆಲ್ಸ ಮಾಡಿದ್ಕ ಗೌಡ ಸ್ಯಾನಿ ಕೊಟ್ಟ ಅವರ ಹಳೇ ಸೀರೆ! ಮಗ ‘ಪರ್ಲ’ ಹಾಗೂ ‘ಮರಿಯ’ ಅವರು ಬಟ್ಟೆ ಧರಿಸ್ಕೊಂಡು ಒಡಾಡಿದ್ದ ಊರಲ್ಲಿ ಯಾರ ಕಂಗಳು ಕಂಡಿರಲಿಲ್ಲ.
ಹೀಗೆ ಆರೇಳು ವರ್ಷಗಳು ಉರುಳಿದವು. ಮನೆಯ ಮುಂದಿನ ಕಲ್ಪವೃಕ್ಷ ದಿನೇ ದಿನೇ ಬೆಳೆದು ಪಸಲಿಗೆ ಬಂತು. ‘ಪೊಕ್ರು’ ಓದಬೇಕೆಂಬ ಬಲು ಆಸೆ, ತಂದೆ ತಾಯಿ ಹೇಗಾದರೂ ಓದಿಸ್ಯಾರು ಪಾಪ! ಉಣ್ಣೋಕೆ ಕೂಳಿಲ್ಲದ ಪರಿಸ್ಥಿತಿ ! ತಾನು ನೆಟ್ಟು ಬೆಳೆಸಿದ ತೆಂಗಿನ ಕಾಯಿಯ ಗುದಿಗಳ ಮೇಲೆ ಹಲವಾರು ಕನಸಿನ ಗೋಪುರ ನಿರ್ಮಿಸಿದ್ದ. ಅವುಗಳ ಮಾರಿ ಶಾಲೆಗೆ ಸೇರ್ಕೋಬೇಕು. ನಾನು ಶಾಲೆ ಓದಿ ನೌಕರಿ ತಗೊಂಡು  ಗೌಡ್ರತರ ಆಗ್ಬೇಕು ಅಂತ, ಆದ್ರೆ ಚಲುವೆಯ ದಾರಿ ಬೇರೆಯಾಗಿತ್ತು. ಅವ ಮಾರಿ ಕಾಳು - ಕಡಿ ತಂದ್ರೆ ಹೊಟ್ತುಂಬ ಉಣ್ಬೋದು. ಚೆನ್ನನ ವಿಚಾರಧಾರೆಯೇ ಬೇರೆ. “ನನ್ನೇಂತಿಗೆ ಒಂದೇ ಸೀರೆಯಿದೆ, ಆ ಕಾಯಿ ಮಾರಿ ಇನ್ನೊಂದು ತರ್ಬೇಕು” ಎಂಬ ಭಾವನೆ ಯಾಕಂದ್ರೆ ಹೊಟ್ಟೆ ಹಸಿವಾದ್ರೆ ಯಾರ್ಗೂ ಗೊತ್ತಾಗಲ್ಲ. ಆದ್ರೆ ಬಟ್ಟೆ ಹರಿದ್ರೆ ? ಅದು ಒತ್ತಟ್ಟಿಗಿರಲಿ ಮಾಲಿ, “ಯಪ್ಪಾ ಕಾಯಿ ಮಾರಿಂದ ನನ್ಗೆ ಒಂದು ಜೋಗ್ಯಾರ ಸರ ಕೊಡ್ಸು, ಎಲ್ರೂ ಸರ ಹಾಕೋತಾರೆ.”  ‘ಪರ್ಲ’ “ಯವ್ವಾ, ಅದ್ರಾಕ ಇನ್ನೂ ದೇವ್ರೂ ಹಾಲಾಕಿ ಹೋಗಿಲ್ವೇನವ್ವಾ ? ಇನ್ನೂ ಯಾವಾಗ ಹಾಕಿ ಹೊಕ್ಕಾನ... !? ನಾವಂದ್ರೆ ಅವನ್ಗೆ ಸಿಟ್ಟೇನೋ?” ಮರಿಯ....... “ಅಪ್ಪ ಅದ್ರಾಗಿನಮೊದ್ಲ ಕಾಯಿ ನನ್ಗೆ ಕೊಡ್ಬೇಕು ಕುಡಿಯಾಕೆ.......” ಅಂತ ಕೇಳಿದ್ರೆ ಚಲುವಿ ಮತ್ತು ಚೆನ್ನ ನೆರ್ಕೆಗೆ ಹಾತು ತಮ್ಮ ಪರಿಸ್ಥಿತಿ ಕಂಡು ದುಃಖಿಸುತ್ತಿದ್ದಾರೆ. ಚೆಲುವೆಯ ಕಣ್ಣೀರಿನ ಹೊಳೆ ಸದಾ ಹರಿಯುತ್ತಾ ಇದ್ದುದ್ದೇ.. ಒಂದು ದಿನ ಗೌಡರ ಪಾದ ಚೆನ್ನನ ಮನೆ ಹಾದಿ ಬೆಳಸಿ ಗುಡಸಲ್ಮುಂದೆ ನಿಲುಗಡೆಯಾಯ್ತು! ‘ಒಮ್ಮೆಲೇ ಏನ್ ದ್ಯಾವ್ರು?’ ಎಂದ ಚೆನ್ನ.
ಹೇಳಿಕಳ್ಸಿದ್ರೆ ನಾನೇ ಬರ್ತಿದ್ದೆ... “ಏನೂ ಇಲ್ಲ ಹಾಂಗ ತೋಟದ ದಿಕ್ಕ ಕಣ್ಹಾಕಿ ಬರಾವ ಅಂತೊಂಟೀನಿ” ಮಾತು ಮುಂದ್ವರಿಸುತ್ತಾ ಈ ತೆಂಗು ನಿನ್ನದೇನ್ಲಾ ಈಸ್ದಿನ ಹೇಳೇ ಇಲ್ಲಾ ? ಬಹು ಪಸಂದಾಗಿ ಬೆಳಸಿ ಕಂಡ್ಲ, ಬಾ ಇಲ್ಲೇ ಹೋಗಿ ಬರುವಾ,” ಚನ್ನ ಗೌಡರ ಕರಿನೆರಳ ತುಳಿತ ಬಾಲವಾದ, ‘ಚೆನ್ನಾ ಬಹಳ ಬಿಸಿಲು, ಒಸಿ ಎಳ್ನೀರು ಕೆಡವ್ತೀಯಾ?’ ನೀವ್ ಕೇಳಿದ್ರೆ...ಇಲ್ಲ ಅನ್ನಾಕ ಆಗ್ತದಾ ...  ಒಸಿ ತಡ್ರಿ ಐದನ್ನಾದ್ರಾಗ  ಕೆಡವಿಬಿಡ್ತೀನಿ”, ಒಸಿ ಹುಷಾರ್ಲಾ ಚೆನ್ನಾ ಗಮ್ಮಾ ಜಾಸ್ತಿ ಹಾಗೈತಿ.
ಚನ್ನ ಓತಿಕ್ಯಾತದಾಗೆ ಸರಸರ ಏರಿ ನಾಲ್ಕಾಯಿ ಉದುರಿಸ್ದ. ಆದ್ರೆ... ಇಳಿಬೇಕಾದ್ರೆ ಹಣ್ಣರ್ತ ಗರಿ ಹಿಡಿದು ಅದ್ರಮ್ಯಾಗ ಭಾರಬಿಡೋದೊಂದ ಸವ್ನ, ಸುಮಾರು ಮೂವತ್ತಡಿ ಎತ್ತರದಿಂದ ದಬಾರನೆ ಬಿದ್ದ, ಕ್ಷಣದಲ್ಲೇ ಪ್ರಜ್ಞಾಹೀನನಾದ. ಗೌಡ್ರು ಬಾಯಿಬಾಯಿ ಬಡುಕೊಂಡ ಮೇಲೆ ಸುತ್ತಲಿನ ಜನ ಬಂದು ಸೋರುತ್ತಿದ್ದ ರಕ್ತಕ್ಕೆ ಅರಿಬಿಸುತ್ತಿ ಊರಾಕ ತಂದ್ರು, ಆ ಸುದ್ದಿ ಕೇಳಿ ಚಲುವಕ್ಕಾಗ ಎದೆ ದಡಾರನೆ ಒಡೆದಂಗಾಯ್ತ ಮಾತೇ  ಹೊರಡುತ್ತಿಲ್ಲ. ನಾಲಿಗೆ ಪಸೆ ಹಾರಿದೆ, ಕಣ್ಣಲ್ಲಿ ಮಾತ್ರ ಕಂಬನಿ ಕೋಡಿಯಾಗಿದೆ. ಮಕ್ಕಳು ಲೋಬೋ ಎಂದು ಘೀಳಿಟ್ಟಿವೆ. ಊರಲ್ಲಿ ಯಾವ ದವಖಾನೆನೂ ಇಲ್ಲ ! ಪಕ್ಕದೂರಲ್ಲಿ ಇರೋದು ಐದು ಪರ್ಲಾಂಗ ಹೋಗ್ಬೇಕು. ಅದೆಂತ ಕೆಟ್ಟ ಘಳಿಗೆ. ಅದ್ರಾಗ ಬ್ಯಾರೆ ಗೌಡ್ರ ಚಕಡಿನೂ ಊರಾಗಿಲ್ಲ. ಚಲುವಿ ಹುಯ್ಯೋ... ಅಂತ ಗೋಳಿಡುತ್ತಾ ಯಾರಾದ್ರೂ ಕಾಪಾಡ್ರಿ, ನನ್ನ ತಾಳೀ ಉಳ್ಸಿಕೊಡಿ ಎಂದು ಸುತ್ತಲೂ ಅಂಗಲಾಚುತ್ತಾಳೆ. ಆದರೆ ಅಲ್ಲಿರೊರೆಲ್ಲ ಅಸಾಯಕರೇ ... ಆದ್ರೆ ಮೂಲಿ ಮನೆ ಸಂಗಣ್ಣ ಬೇಗ ಚಕ್ಕಡಿ ಕಟ್ಕೊಂಡು ಬಂದು ಚನ್ನನ ದೇಹವನ್ನ ಅದ್ರಲ್ಲಿ ಹಾಕ್ತಿದ್ದಂಗೆ ಅಲ್ಲಿ ಕೆಲ ಬಾಯಿಗಳು ದೊಡ್ಡದಾಗ್ಲೆ ಹೋದಂಗೈತಿ ಸುಮ್ನೆ ಯಾಕೆ ಒಯ್ತಿರಾ ? ಎಂದಾಗ ಚೆಲುವಿಗೆ ಆಕಾಶವೇ ತಲೆಮ್ಯಾಗ ಬಿದ್ದಂಗಾಯ್ತು. ಆದ್ರೂ ... ಗೌಡ್ರ ಪರವಾನಗಿ ಪಡೆದು ಚಕ್ಕಡಿ ಜೋರಾಗಿ ಓಡಿಸಿದ ಮರಿಗಳು ಹಿಂದೇನೇ... ಅಪ್ಪಾ... ಅಪ್ಪಾ ಎಂದು ಹಿಂಬಾಲಿಸಿದ್ವು.
ದವಖಾನೆ ತಲುಪಿ ಸಂಗಣ್ಣ ವೈದ್ಯರನ್ನ ಕರೆಯತ್ತಿದ್ದಂಗೆ, ಇದ್ದೊಂದು ಸಣ್ಣ ಜೀವ ಚೆಲುವಿಯ ತೊಡೆಮ್ಯಾಲೆ ಅಗಲಿಹೋಯ್ತು. ನಂತರ ಶವಸಂಸ್ಕಾರ ಸಂಪ್ರದಾಯಗಳೆಲ್ಲಾ ಮುಗಿದ್ಯ್ಮಾಲೆ ಬಿಳಿದಿರೇಸು ಚಲುವಿಯ ಆವರಿಸ್ತು. ಚೆಲುವೆ ಹಾಸಿಗೆ ಹಿಡಿದ್ಲು, ಮಕ್ಕಳು ಸಹ ಗೋಳೋ ಎಂತಿದ್ವು. ಮೂರ್ದಿನಾದ್ರು ಚೆಲುವಿ ಕರುಳು ನೀರ ಕಂಡಿರಲಿಲ್ಲ. ಅವ್ರು, ಇವ್ರು ತಂದು ಕೊಟ್ಟ ರೊಟ್ಟಿ, ಇಂಡಿ ಮಕ್ಕಳು ತಿಂದು ಜೀವ ಹಿಡ್ಕಂಡಿದ್ವು, ಊರಾಗ ಬಲ್ಲಂತರು ಬಂದು “ಚೆಲುವಕ್ಕ ನೀನೇ ಹಿಂಗೆ ಅತ್ಕೋಂತ ಕುಂತ್ರೆ ಮಕ್ಕಳ ಗತಿ ಏನಾಗ್ ಬೇಕು ಅಂತೀದಿ ? ನಿನ್ನೆಜಮಾನ್ರ ಸಾವಿಗೆ ಆ ಗೌಡನೇ ಕಾರಣ ಏನಾದ್ರು ಪರಿಹಾರ ಕೊಡಿ ಅಂತ ಒಸಿ ಕೇಳ್ಬಾರ್ದ ? ಅದನ್ನೇನ್ ನೀನು ಪುಕ್ಕಟೆ ಕೇಳ್ತಿಯಾ ? ಇಲ್ಲ.. ! ನಿನ್ನ ಗಂಡ ಈಸು ದಿನ ಅವರ್ಮನೇಲಿ ಜೀತಾಗಿರಲಿಲ್ಲ . . . .” ಎಂದು ಇದ್ದ ಪರಿಸ್ಥಿತಿ ತಿಳಿಸಿದ್ರೇ ಹೊರತು ಯಾರೂ ಮುಂದೆ ನಿಂತು ನ್ಯಾಯ ಒದಗಿಸಲಿಲ್ಲ.
ಮರುದಿನವೇ “ಚೆಲುವಕ್ಕ”, ಪೊಕ್ರನ್ನ ಕರ್ಕೊಂಡು ಗೌಡ್ರ ಮನೆ ಕಡೆ ಹೆಜ್ಜೆ ಹಾಕಿದಳು. ಜನ ಎಷ್ಟು ದಿವಸ ಅಂತಾ ಉಣ್ಣಾಕ ಕೊಡ್ತಾರ, ಅತ್ತ ಕಡೆ, ಅವ್ವ, ಅಣ್ಣ, ಗೌಡ್ರ ಮನೆ ಹಾದಿ ಹಿಡಿದ್ರ, ಇತ್ತ ಮರಿಯ ಹೊಟ್ಟೆ ತಾಳ ಹಾಕೋದನ್ನ ಸಹಿಸ್ಕೋನಾಕಾಗ್ತಾಯಿಲ್ಲ.. . . .  ಹಾಗೆ ಓಣಿ ದಾರಿ ಹಿಡಿದ. ಶಾನಭೋಗರ ಮನೆ ಮುಂದೆ ರುದ್ರಮ್ಮ ತಮ್ಮ “ಪಿಂಕಿ”ಗೆ ಅನ್ನ ಹಾಕ್ತಾಯಿದ್ದದ್ದು ಕಂಡು ಬಾಯಲ್ಲಿ ನೀರೂರಿತು. ಹತ್ತಿರ ಬಂದು ನಿಂತ, ಪಿಂಕಿ ಕೆಂಗಣ್ಣಿನಿಂದ ನೋಡುತ್ತಾ ಗುರ್ರ್ . . ಗುರ್ರ್. . . ಎಂದು ಗದರಿಸಿತು. ಧ್ವನಿ ಕೇಳಿ ರುದ್ರಮ್ಮ  ಹೊರಬಂದು ನೋಡಿದರೆ ಮರಿಯ. . . . ! ‘ಏ ಪರದೇಶಿ ನೀನ್ಯಾಕೋ ಇಲ್ಲಿಬಂದೆ ? ಎಲ್ಯಾದ್ರೂ ಹಾಳಾಗಿ ಹೋಗೋ’, “ಅಮ್ಮಾ ತುಂಬಾ ಹಸಿವಾಗ್ತಿದೆ, ಅದಕ್ಕಾಕಿದಿರಲ್ಲಾ ಅದು ಇನ್ನೂ ಸ್ವಲ್ಪ ಇದ್ರೆ ಕೊಡಮ್ಮಾ. ಹೊಟ್ಟೆ ಬಹಳ ಕಡಿತಾಯಿದೆ.”  ಎಂದ ಮರಿಯ. “ನಾನು ಹೇಳ್ಯೋದ್ ಕೇಳಿಸ್ತಾ ಐತಾ, ಇಲ್ಲ. . ? ನಮ್ಮ ಪಿಂಕಿಗೆ ಸಂಪೂರ್ಣ ಸಿಗಲ್ಲಾ ನಿಂದ್ ಬ್ಯಾರೆ ಕೇಡು” ಎಂದು ಕದ ಹಾಕಿದ್ಲು ರುದ್ರಮ್ಮ.
ಇತ್ತ ಗೌಡ್ರ ನಿವೇಶನ್ದಾಗ . . “ ದೇವ್ರೂ ಇಲ್ಲಾನ್ಬ್ಯಾಡಿ, ನಿಮ್ಮ ಕಾಲಿಗೆ ಬೀಳ್ತೀವಿ ದಮ್ಮಯ್ಯಾ ಅಂತೀನಿ . .  ಒಸೀ ಹಣನೋ . . ಕಾಳೋ . . ಕಡಿನೋ ಕೊಟ್ರೇ ಬದಿಕೊಂತೀನಿ, ನಾಕೂ ಮಕ್ಕಳ್ನ ಸಾಕ್ಬೇಕು, ಬಾಳ ಕಷ್ಟಾಗೈತಿ.    “ನೋಡು ಚೆಲ್ವಿ ನಿಮ್ಮ ಮಾವ ಮಾಡಿದ ಸಾಲವನ್ನೇ ನಿನ್ನೆಜಮಾನ ತೀರಿಸಿಲ್ಲ ? ನೀವೇ ಇನ್ನೂ ಜೀವನ ಪೂರ್ತಿ ನಮ್ಮೇನೇಲಿ ದುಡಿದರೂ ತೀರ್ಸಾಕ್ಕಾಗಲ್ಲ . . . .  ! ಅಂತದ್ರಾಗ . . . . ಹಣ. ಕಾಳು, ಕಡಿ ಅಂದ್ರೆ ಹೆಂಗಾಗ್ತೈತಿ, ಕೊಡಕ್ಕಾಗಲ್ಲ, ಪೊಕ್ರುನ್ನ ಮತ್ತು ಮರಿಯನ್ನ ನಮ್ಮನೇಲಿ ಕೆಲ್ಸಕ್ಕೆ ಇಟ್ಟುಬಿಡು ಸಗಣಿ, ಕಸ, ಮೇವು ಅಂದ್ಕಂತ ಇಲ್ಲೇ ಇದ್ದು ಉಣ್ಕಂತ ಇರ್ಲಿ, ಇದ್ರಮ್ಯಾಲೆ ನಿನ್ನಿಷ್ಟ, ಏನೋ ನಿನ್ಗಂಡ ನಮ್ಮನೇಲಿ ಬಹು ದಿಸದಿಂದ ದುಡಿದವ್ನೇ ಎಂದು ಅವಕಾಶ ಕೊಟ್ಟೀನಿ” ಎಂದು ಒಳ ನಡೆದ.
ಅಂದು ರಾತ್ರಿ ಚೆಲ್ವಿಗೆ ನಿದ್ರೆ ನೊರಡಿ ದೂರ! ತನ್ನ ಜೀವನದ ಬಗ್ಗೆಯೇ ಚಿಂತಿಸುತ್ತಿದ್ದಳು, ತನಗೆ ಉಣ್ಣಾಕ ಇರ್ದಿದ್ರು, ಮಕ್ಕಳ್ಗೆ ಎಲ್ಲಾದ್ರು ತಂದು ಉಣಿಸಿ ಮಲಗಿಸಿದ್ಲು. ಹೊರಗೆ ಬೋರ್ ಎಂದು ಜಡಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಗುಡಿಸಲು ನೀರು ತುಂಬಿದ್ದರೂ ಮಕ್ಕಳು ಮಕ್ಕೊಂಡ ಜಗುಲಿಯ ಹತ್ತಿರಲಿಲ್ಲ. ಚೆಲುವಕ್ಕ ಬೊಗಸೆಯಿಂದ ನೀರನ್ನು ಹೊರ ಹಾಕುತ್ತಿದ್ದರೆ, ಇನ್ನೊಂದೆಡೆ ಗುಡುಗು, ಸಿಡಿಲುಗಳು ಬೆಚ್ಚಿ ಬೀಳಿಸುವಂತ್ತಿದ್ದವು. ಅಷ್ಟರಲ್ಲಿ ಬೋರ್ ಎಂದು ಶಬ್ದ ಮಾಡುತ್ತಾ ಬಂದ ಭೀಕರ ಬಿರುಗಾಳಿ ಮನೆಯನ್ನು ನೆಲಸಮ ಮಾಡಿತು. ಚೆಲುವಕ್ಕ ಬಾಗಿಲಲ್ಲಿ ಇದ್ದುದರಿಂದ ಏನೂ ಅಪಾಯವಾಗಲಿಲ್ಲ. ಆದರೆ ಇಡೀ ಗುಡಿಸಲೇ ಕಳಚಿ ಮಕ್ಕಳ ಮೇಲೆ ಬಿದ್ದಿತ್ತು.  ಅಂತದರಲ್ಲೇ ಒದ್ದೆಯಾಗಿದ್ದರೂ ಕರಳು ಮಕ್ಕಳಿಗೋಸ್ಕರ ಕಾತರಿಸುತ್ತಿತ್ತು. ಕೂಗಿಕೊಂಡರೂ ಧ್ವನಿ ಹೊರಡುತ್ತಿಲ್ಲ. ಎದೆ ಬಡಿದುಕೊಳ್ಳುತ್ತಿದ್ದಾಳೆ ಏನೂ ಪ್ರಯೋಜನ ? ಮಕ್ಕಳ ಮೇಲೆ ಬಿದ್ದ ಮೂರ್ನಾಲ್ಕು ಬೆಲುಗುಗಳನ್ನು ಎತ್ತಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ಜನ ಸೇರಿ ಅವುಗಳನ್ನು ತೆಗೆಯುವಷ್ಟರಲ್ಲಿ ಅವರಾಗಲೇ ತಂದೆಯ ದಾರಿ ಹಿಡಿದಿದ್ದರು. ಇದನ್ನೆಲ್ಲಾ ಸಹಿಸಿಕೊಂಡು ಹೃದಯ ತಳಮಳ ಗೊಳ್ಳುತ್ತಾ ಕಣ್ಣಲ್ಲಿ ಹರಿಯುವ ಶೋಕ ಕಂಬನಿ ನಿಧಾನವಾಗಿ ಧಾರಾಕಾರವಾಗಿ ಹರಿಯುವ ಮಳೆನೀರಲ್ಲಿ ಬೆರೆತು ಲೀನವಾಯಿತು. 
ಏಳಲಾರದ ಸ್ಥಿತಿ ಆದರೂ ಮಕ್ಕಳ ಮಾರೆಯ ನೋಡುವಾಸೆ, ಭಾರವಾದ ದುಃಖ ತ್ರಪ್ತ ಹೃದಯವನ್ನು ಹೊತ್ತು ಮಕ್ಕಳ ಬದಿಗೆ ಬಂದು ಕೊಡುವ ಘಳಿಗೆಯಲ್ಲಿ ಮನೆಯ ಮುಂದಿದ್ದ ಕಲ್ಪವೃಕ್ಷ ದಢಾರನೇ ಚೆಲ್ವೆಯ ಮಸ್ತಕದ ಮೇಲೆ !


ಕೊಟ್ರೇಶ್. ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ,
 ಹಾಸನ-573201
 ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ