ಕೃತಿ ವಿಮರ್ಶೆ
ಕೃತಿ ಲೇಖಕರು : ಕೊಟ್ರೇಶ್ ಎಸ್ ಉಪ್ಪಾರ್

ವಿದ್ಯಾರ್ಥಿ:- ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎಂದರೆ ಭಯ ಸಹಜ. ಅದನ್ನು ಸ್ವೀಕರಿಸುವುದು ಹೇಗೆ? ಕಲಿಕಾ ನ್ಯೂನ್ಯತೆ ಇರುವ ಮಕ್ಕಳನ್ನು ಗುರುತಿಸುವುದು ಹೇಗೆ? ಹಾಗೂ ಮಕ್ಕಳು ಕಲಿಕೆಯಲ್ಲಿ ಹಿನ್ನಡೆ ಅನುಭವಿಸಲು ಕಾರಣವೇನು? ಎಂಬಂತಹ ಪ್ರಶ್ನೆಗಳಿಗೆ ಉತ್ತರ ದೊರಕಿಸುವಲ್ಲಿ ಸಫಲರಾಗಿದ್ದಾರೆ. ವಾಯುವಿಹಾರ, ವ್ಯಾಯಾಮ, ಯೋಗ, ಕ್ರೀಡೆ ಮುಂತಾದ ಚಟುವಟಿಕೆಗಳು ಮಾನಸಿಕ ಒತ್ತಡವನ್ನು ದೂರವಿಡುತ್ತದೆಂಬುದು ಸರ್ವಸಮ್ಮತವಾದುದು. ಮನೆಯಲ್ಲಿ ಪೋಷಕರ ಕಲಹವು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಂಬ ಸೂಕ್ಷ್ಮ ಸಂದೇಶದ ಎಚ್ಚರಿಕೆಯನ್ನು ನೀಡಿದ್ದಾರೆ.
ಪೋಷಕರು:- ಮಗು ಚೆನ್ನಾಗಿ ಓದುತ್ತಿಲ್ಲವೆಂಬ ಅಭಿಪ್ರಾಯಗಳು ಕೆಲವು ಪೋಷಕರಲ್ಲಿ ಖಂಡಿತವಾಗಿಯೂ ಮೂಡುತ್ತವೆ. ಇನ್ನೂ ಕೆಲವು ಪೋಷಕರು ನಮ್ಮ ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಲಿಲ್ಲ ಎಂಬ ಹಿಂಜರಿಕೆಯೂ ಇರುತ್ತದೆ. ಆದರೆ ಮಕ್ಕಳ ಓದಿನಲ್ಲಿ ನಮ್ಮ ಪಾತ್ರವೇನು? ಎಂಬುದರ ಬಗ್ಗೆಯೇ ಯೋಚಿಸುವುದಿಲ್ಲ. ಎಂಬುದೆಲ್ಲವನ್ನು ಪೋಷಕ ಮತ್ತು ಓದುಗರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ.
ಇದೇನು! ಇವ್ನು ಕೇವಲ ಪುಸ್ತಕದಿಂದ ಏನೇನು ತಿಳಿದುಕೊಳ್ಳಬಹುದನ್ನಷ್ಟೆ ಹೇಳುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ಚರ್ಚೆ ಮಾಡುವ ಅನೇಕ ವಿಷಯಗಳಿವೆ.
ಶಿಕ್ಷಣ :- ಶಿಕ್ಷಣದಿಂದ ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿ ನಿರ್ಮಿಸಲು ಸಾಧ್ಯವೆಂಬುದನ್ನು ನಾನೂ ಸಹ ನಮ್ರವಾಗಿ ಒಪ್ಪಿಕೊಳ್ಳುತ್ತೇನೆ. ಇತ್ತೀಚಿನ ದಿನಗಳಲ್ಲಂತೂ ನನ್ನನ್ನು ಸೇರಿದಂತೆ ಕೆಲವು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ರೂಪಿಸುವುದನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಎಂದರೆ ಅತಿಶಯೋಕ್ತಿಯಾಗಲಾರದು. ಉತ್ತಮ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ದೊರೆಯುತ್ತದಾ? ಅಥವಾ ಸರ್ಕಾರಿ ಶಾಲೆಗಳಲ್ಲಾ? ಎಂಬ ಚರ್ಚೆಗೆ ನಮ್ಮ ಲೇಖಕರು ಹೋಗಿಲ್ಲವಾದರೂ ಶಿಕ್ಷಕ ಮತ್ತು ಮಗುವಿನ ಸಂಬಂಧ, ಗುಣಾತ್ಮಕ ಶಿಕ್ಷಣ ನೀಡುವುದರಿಂದ ಮಕ್ಕಳನ್ನು ಸತ್ಪ್ರಜೆಗಳಾಗಿ ನಿರ್ಮಿಸಬಬಹುದು ಎಂಬಂತಹ ಉಪಯುಕ್ತ ವಿಷಯಗಳನ್ನು ಚರ್ಚಿಸಿದ್ದಾರೆ. ಶಿಕ್ಷಣಕ್ಕೆ ಪೂರಕವಾಗಿರುವಂತಹ ಚಲನಚಿತ್ರಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳುವುದನ್ನು ಮರೆತಿಲ್ಲ. ನಾಟಕಗಳು ಮರೆಯಾಗುತ್ತಿರುವ ಕಾಲದಲ್ಲಿಯೂ ವೈಚಾರಿಕ ನಾಟಕಗಳು ಮಕ್ಕಳ ವ್ಯಕ್ತಿತ್ವ ರೂಪಿಸಬಲ್ಲವು ಉದಾ:- ಗಾಂಧೀಜಿಯವರು ಸತ್ಯಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾದಂತೆ ಎಂಬೆಲ್ಲ ವಿಷಯಗಳನ್ನು ತಿಳಿಸಿರುವುದು ಓದುಗನಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಪುಸ್ತಕವನ್ನು ಮತ್ತೊಮ್ಮೆ ಓದಬೇಕೆನಿಸುತ್ತದೆ. ಇದೇನು! ಈ ಪುಸ್ತಕ ಶಿಕ್ಷಕ-ಮಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿರುವುದರಿಂದ ಅವರಷ್ಟೆ ಓದಿದರಾಯ್ತು, ಓದುಗರಿಗೇನು ಅನುಕೂಲವಿಲ್ಲವೆಂದುಕೊಳ್ಳಬೇಡಿ.
ಓದುಗನಿಗೂ ನೆರವು:- ಓದುಗರಿಗೆ ನೆರವಾಗುವಂತೆ ಓದುವುದು ಹೇಗೆ? ಓದುವುದು ಮನಸಲ್ಲ ಮೆದುಳು! ಎಂದರೆ ನಂಬುತ್ತೀರಾ? ನಾನು ಕೂಡ ಮೊದಲಿಗೆ ಆಶ್ಚರ್ಯಪಟ್ಟೆ. ಈ ಪುಸ್ತಕವನ್ನು ಓದಿದ ಮೇಲೆ ಸುಮ್ಮನೆ ಒಪ್ಪಿಕೊಂಡೆ. ಕೆಲವರು ನಿಧಾನವಾಗಿ ಓದುತ್ತಾರೆ, ಕೆಲವರು ರಭಸವಾಗಿ ಓದುತ್ತಾರೆ. ಹಾಗಾದರೆ ಯಾವ ಓದು ಒಳ್ಳೆಯದು? ವೇಗವಾಗಿ ಓದುವುದು ಹೇಗೆ? ವೇಗವಾಗಿ ಓದುವವರ ಗುಣಲಕ್ಷಣಗಳೇನು? ಎಂಬುದನ್ನು ವೈಜ್ಞಾನಿಕವಾಗಿ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೆ ಜಾನ್ ಎಪ್ ಕೆನಡಿ, ಜಾರ್ಜ್ ಬರ್ನಾಡ್ ಷಾ, ಮ್ಯಾಗ್ಲಿಯ ಬೆಕಿ ಅತಿ ವೇಗದ ಓದುಗಾರರೆಂದು ಈ ಪುಸ್ತಕದ ಮೂಲಕ ತಿಳಿದುಕೊಂಡಿದ್ದೇನೆ.
ಮಗು ಸುಳ್ಳು ಹೇಳುವುದು ಯಾಕೆ?:- ನಾನು ಮೊದಲಿಗೆ ಮಗು ಹೋಂ ವರ್ಕ್ ಮಾಡದಿದ್ದಾಗ ಸುಳ್ಳುಹೇಳುತ್ತದೆ ಅಂದುಕೊಂಡಿದ್ದೆ. ಆದರೆ ವಿಚಾರವಂತರಾದ ನಮ್ಮ ಸಾಹಿತಿಮಿತ್ರರು ಆ ರೀತಿ ಹೇಳಿಲ್ಲ. ‘ಮಗುವನ್ನು ಅತಿಯಾದ ದಂಡನೆಗೆ ಒಳಪಡಿಸಿದಾಗ’ ಆ ಮಗು ಸುಳ್ಳು ಹೇಳುತ್ತದೆ. ‘ಶಿಕ್ಷಕರು ಶಿಕ್ಷೆಯನ್ನು ಮಗುವು ತೋರ್ಪಡಿಸುವ ಅನಪೇಕ್ಷಿತ ವರ್ತನೆ ಅಥವಾ ಕೃತ್ಯಕ್ಕೆ ಹೊರತು ಮಗುವಿಗಲ್ಲ’ ಎಂದು ಹೇಳಿರುವ ವಿಚಾರವನ್ನೊಮ್ಮೆ ನಿಧಾನವಾಗಿ ಆತ್ಮಾವಲೋಕನ ಮಾಡಿಕೊಂಡರೆ ಅವರು ಹೇಳಿರುವ ವಿಚಾರ ಉತ್ತಮ ಸಮಾಜದ ನಿರ್ಮಾಣಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.
ಚರ್ಚಿಸಬೇಕಿದ್ದುದು :- ಅಕ್ಷರದಾಸೋಹ, ಕ್ಷೀರಭಾಗ್ಯ ಯೋಜನೆಗಳು ಸರ್ಕಾರಿ ಶಾಲೆಗಳಲ್ಲಿ ಉಪಯುಕ್ತವಾಗುತ್ತಿದೆಯೇ? ಗುಣಾತ್ಮಕ ಶಿಕ್ಷಣವನ್ನು ನೀಡುವುದಕ್ಕೆ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳೇನು? ಕೆಲವರು ಸರ್ಕಾರಿ ಶಾಲೆಯ ಶಿಕ್ಷಕರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದಕ್ಕೆ ಕಾರಣಗಳೇನು? ಎಂಬೆಲ್ಲಾ ವಿಷಯಗಳನ್ನು ಚರ್ಚಿಸಬಹುದಿತ್ತೇನೊ ಅಂತ ಅನಿಸುತ್ತದೆ. ಆದರೂ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಓದುಗರಿಗೆ ಬೇಕಾದ ಉಪಯುಕ್ತ ವಿಷಯಗಳನ್ನು ಮಾತ್ರ ತಿಳಿಸಿದ್ದಾರೆ. ಇಂತಹ ಪುಸ್ತಕಗಳು ಕೊಟ್ರೇಶ್ ಎಸ್. ಉಪ್ಪಾರ್ ಸಾರ್ರಿಂದ ಇನ್ನು ಹೆಚ್ಚಾಗಿ ಬರಲೆಂಬುದು ನಮ್ಮೆಲ್ಲರ ಆಶಯ .
ವಾಸುಸಮುದ್ರವಳ್ಳಿ, ಆಲೂರು
ಮೊ : 9449311298
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ