ಮಂಗಳವಾರ, ಜುಲೈ 1, 2014

ಕೊಟ್ರೇಶ್ ಎಸ್. ಉಪ್ಪಾರ್ ಕೈ ವಚನ ಬರೆಯುವುದರಲ್ಲಿ ಸಾಕಷ್ಟು ಪಳಗಿದೆ - ಡಾ. ವಸಂತಕುಮಾರ ಪೆರ್ಲ


‘ಶ್ರೀ ಗುರು ಕೊಟ್ಟುರೇಶ’ ಎಂಬ ಅಂಕಿತದೊಂದಿಗೆ ಆಧುನಿಕ ವಚನಗಳನ್ನು ಬರೆಯುತ್ತಿರುವ ಕೊಟ್ರೇಶ್ ಎಸ್. ಉಪ್ಪಾರ್ ಅವರು ತಮ್ಮ ನಾಲ್ಕನೆಯ ವಚನ ಸಂಕಲನ ‘ವಚನ ಸಾನಿಕಾ’ ಕೃತಿಗೆ ಹೊನ್ನುಡಿ ರೂಪದಲ್ಲಿ ನಾಲ್ಕು ಮಾತುಗಳನ್ನು ನನ್ನಿಂದ ಅಪೇಕ್ಷಿಸಿದ್ದಾರೆ. ಶ್ರೀ ಕೊಟ್ರೇಶ್ ಎಸ್ ಉಪ್ಪಾರ್ ಅವರು ತರುಣ ಕವಿಗಳು, ಹಾಸನದ ನಮ್ಮ ‘ಮನೆ ಮನೆ ಕವಿಗೋಷ್ಠಿ’ ಯ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಪರಿಚಯಿಸಲ್ಪಟ್ಟವರು. ನಮ್ಮಿಂದ ಪ್ರಭಾವ- ಪ್ರೇರಣೆ ಪಡೆದುಕೊಂಡು ಸಾಹಿತ್ಯ ಬರೆಯಲಾರಂಬಿಸಿದ ಅವರೀಗ ಸಾಹಿತ್ಯ, ಶಿಕ್ಷಣ, ವಿಜ್ಞಾನ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಪ್ರೀತಿ, ಅವರು ಸಾಗುತ್ತಿರುವ ವೇಗ ನೋಡಿ ನನಗೆ ಅಚ್ಚರಿಯಾಗಿದೆ. ಈ ಮೂವತ್ತ ಮೂರರ ವಯಸ್ಸಿಗೆ ಅವರು ಇಷ್ಟೊಂದು ಕೃತಿಗಳನ್ನು ರಚಿಸಿದ್ದಾರೆ ಎಂದರೆ ಅವರ ಸಾಹಿತ್ಯಾಸಕ್ತಿ ಮತ್ತು ಪರಿಶ್ರಮ ಯಾವ ಪರಿಯಲ್ಲಿದೆ ಎಂಬುದನ್ನು ನೀವೇ ಊಹಿಸಿ !
ಓರ್ವ ವ್ಯಕ್ತಿಯಾಗಿ ಕೊಟ್ರೇಶ್ ಅವರಲ್ಲಿರುವ ಸೌಜನ್ಯ, ವಿಧೇಯತೆ ಮತ್ತು ನಯವಿನಯಗಳು ನನ್ನನ್ನು ಸಂತೋಷಪಡಿಸಿವೆ. ಈ ದಿನಗಳಲ್ಲಿ ಅಪರೂಪವಗಿರುವ ಇಂತಹ ಗುಣಗಳು ವ್ಯಕ್ತಿಯನ್ನು ಎತ್ತರದ ಜಾಗದಲ್ಲಿ ಕೂರಿಸುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕಲಿಯುವ ಮತ್ತು ಕಲಿಸುವ ಕ್ರಿಯೆ ನಿರಂತರ ಎಂಬ ತತ್ವವನ್ನು ನಂಬಿರುವ ಅವರಲ್ಲಿ ಒಬ್ಬ ಆದರ್ಶ ಅಧ್ಯಾಪಕನಲ್ಲಿರಬೇಕಾದ ಎಲ್ಲಾ ಗುಣಗಳು ಮೇಳವಿಸಿವೆ. ಸಾಹಿತ್ಯ ಪ್ರೀತಿ ಅಂತಹ ಸದ್ಗುಣಗಳಲ್ಲಿ ಒಂದು. ಶಿಕ್ಷಕನಾದವನು ಸಾಹಿತ್ಯ ವ್ಯವಸಾಯಕ್ಕಿಳಿದರೆ ಆತ ಒಂದು ಸುಸಂಸ್ಕøತ ಸಮಾಜವನ್ನು ನಿರ್ಮಾಣಮಾಡುತ್ತಾನೆ ಎಂಬುದು ನನ್ನ ನಂಬಿಕೆ.
ಈಗಾಗಲೇ ಮೂರು ವಚನ ಸಂಕಲನಗಳನ್ನು ಬರೆದು ಪ್ರಕಟಿಸಿರುವ ಕೊಟ್ರೇಶ್‍ರ ಕೈ ವಚನ ಬರೆಯುವುದರಲ್ಲಿ ಸಾಕಷ್ಟು ಪಳಗಿದೆ. ಒಂದು ಕೇಂದ್ರ ತತ್ವವನ್ನು ಪ್ರತಿಪಾದಿಸಲು ಅದಕ್ಕೆ ಪೂರಕವಾಗಿರುವ ನುಡಿಗಳನ್ನು ಪೋಣಿಸುತ್ತ, ಕೊನೆಯಲ್ಲಿ ಪ್ರಶ್ನೆ ಅಥವಾ ಸಮಸ್ಯೆಯನ್ನು ಶ್ರೀಗುರು ಕೊಟ್ಟುರೇಶನ ಮುಂದೆ ಇಡುವಲ್ಲಿ ವಚನಗಳು ಮುಕ್ತಾಯ ಕಾಣುತ್ತವೆ. ಆ ಪ್ರಶ್ನೆಯಲ್ಲೇ ಉತ್ತರವೂ ಅಡಗಿರುವುದು ವಚನಗಳ ವಿಶೇಷತೆ. ಲಿಂಗರೂಪಿಯಾದ ಕೊಟ್ಟುರೇಶ ‘ಅಹುದಹುದೆನಬೇಕು’ ಎಂಬಂತೆ  ತಾನು ಬಾಯಿಬಿಟ್ಟು ಮಾತಾಡದೆಯೇ ಕವಿ ಉದ್ದೇಶಿತ ಪರಿಣಾಮವನ್ನು ತಂದು ಬಿಡುತ್ತಾನೆ. ಹೀಗೆ ಕಾಂತಾಸಂಹಿತೆಯಂತೆ ಉಪದೇಶವು ಪ್ರಶ್ನಾವಳಿಗಳ ರೂಪದಲ್ಲಿರುವುದೇ ಓದುಗನ ಅಥವಾ ಕೇಳುಗನ ಮನಃ ಪರಿವರ್ತನೆಗೆ ಹೇತುವಾಗುವುದನ್ನು ಇಲ್ಲಿನ ವಚನಗಳ ಹಿರಿಮೆಯಾಗಿದೆ.
‘ವಚನ’ ಎಂಬುದರ ಶಾಬ್ಧಿಕ ಅರ್ಥ ಮಾತು ಎಂದಾಗಿದೆ. ಮಾತು ಎಂದರೆ ಮನಬಂದಂತೆ ಶಬ್ದಗಳನ್ನು ಆಡುವುದು ಎಂದರ್ಥವಲ್ಲ. ಅದರ ಹಿಂದೆ ದೊಡ್ಡದೊಂದು ಕ್ರಿಯೆ ಇರುತ್ತದೆ.  ಒಂದು ನೋಟ, ಕಾಣ್ಕೆ, ಒಂದು  ಆಲೋಚನೆ ಮತ್ತು ಅದರ ಬಗೆಗಿನ ಒಂದು ಅರ್ಥಪೂರ್ಣ ಪ್ರತಿಕ್ರಿಯೆ ಸಮ್ಮಿಲನಗೊಂಡು ಮಾತಾಗಿ ಹೊಮ್ಮುತ್ತದೆ. ಅಂದರೆ ಜೀವನದ ಕುರಿತಾದ ಆತನ ಅನುಭವವು ಹರಳುಗಟ್ಟಿ ಸೂಸುತ್ತದೆ. ಹೀಗೆ ಸಾಂದರ್ಭಿಕವಾಗಿ ಹೊರಸೂಸುವ ಸ್ವಾನುಭವಪೂರಿತ ಮಾತುಗಳು ಅಯಾಚಿತವಾಗಿಯೇ ಅಡಕವಾಗಿ, ಹರಳುಗಟ್ಟಿ, ಅರ್ಥಪೂರ್ಣವಾಗಿ, ಸಾಂದ್ರವಾಗಿ, ಸಾರ್ವಕಾಲಿಕ ಮೌಲ್ಯವುಳ್ಳವುಗಳಾಗಿ ಮೂಡಿಬರುವುದು ಒಂದು ಚೋದ್ಯವೇ ಸರಿ. ಇದನ್ನು ಹಿಂದಿನವರು ಗಾದೆಗಳು ಮತ್ತು ನುಡಿಗಟ್ಟುಗಳು ಎಂದು ಹೇಳಿದ್ದುಂಟು. ಅಂತಹ ಅರ್ಥ ಹಾಗೂ ಚೆಲುವು ವಚನಗಳ ವಿನ್ಯಾಸದಲ್ಲಿ ಅಂತರ್ಗತವಾಗಿದೆ. ಆದಕಾರಣವೇ ಎಂಟುನೂರು ವರ್ಷಗಳು ಕಳೆದರೂ ವಚನಗಳ ಸ್ವರೂಪವು ಹೊಸ ಹೊಸ ಕವಿಗಳನ್ನು ಆಕರ್ಷಿಸುತ್ತಿರುವುದು. ಮಾತುಗಾರಿಕೆಯ ಸೌಲಭ್ಯ, ಸ್ವಾನುಭವ ನಿರೂಪಣೆ ಮತ್ತು ಉಪದೇಶಾತ್ಮಕತೆಯ ನಿಲುವುಗಳು ವಚನವನ್ನು ಬಹುಜನಾಕರ್ಷಣೆಯ ಕ್ಷೇತ್ರವನ್ನಾಗಿ ಮಾಡಿದೆ. ಹೀಗೆ ವಚನ ಕ್ಷೇತ್ರವನ್ನು ಪ್ರವೇಶಿಸಿದ ಕೊಟ್ರೇಶರು ಅದರ ಬಾಹ್ಯ ಮೈಲಿಗಳಿಗÀಷ್ಟೇ ಸೀಮಿತಗೊಳ್ಳದೆ ಒಳವಿನ್ಯಾಸಗಳಲ್ಲಿರುವ ಅರ್ಥವಂತಿಕೆ ಮತ್ತು ಸೌಂದರ್ಯ ಸ್ವರೂಪದ ಕಡೆÀಗೂ ದೃಷ್ಟಿ ನೆಟ್ಟಿದ್ದಾರೆ ಎಂಬುದು ಸಂತೋಷ ಕೊಡುವ ಸಂಗತಿ.
 ಉದಾಹರಣೆ 
             ನೋವು ಅನುಭವಿಸದೇ
ನಲಿವಿಗೆ ಬೆಲೆಯಿಲ್ಲವಯ್ಯಾ
ಬೇವಿನ ರುಚಿ ನೋಡದವಗೆ
ಬೆಲ್ಲದ ರುಚಿ ತಿಳಿಯುವುದಿಲ್ಲವಯ್ಯಾ
ಹಸಿವಿನ ಅನುಭವವಿಲ್ಲದವಗೆ
ಅನ್ನದ ಮಹತ್ವ ತಿಳಿಯದಯ್ಯಾ
ಆಂತರಿಕ ಭಕ್ತಿ ಇಲ್ಲದವಗೆ
ನಿನ್ನ ದಿವ್ಯತೆ ತೋರದಯ್ಯಾ
ಶ್ರೀ ಗುರು ಕೊಟ್ಟುರೇಶ | (ವಚನ - 17)
             ಈ ಮೇಲಿನ ವಚನವು ‘ಬಿಡು ಬಾಹ್ಯಾಡಂಬರ ’ ಎಂಬ ಮಾತಿನಂತೆ ಆಂತರಿಕ ಭಕ್ತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯೊಂದಿಗೆ ಆಂತರಿಕ ಭಕ್ತಿ ಇರುವವಗೆ ಮಾತ್ರ ಭಗವಂತನ ದಿವ್ಯತೆ ಕಾಣಲು ಸಾದ್ಯ ಎಂಬ ಮಾತು ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು.
ಕವಿಯ ಚಿತ್ತ ಸಮಸ್ಥಿತಿಯ ಬಗ್ಗೆ ಮೆಚ್ಚದಿರುವುದು ಹೇಗೆ ? ಸುಖಕೊಡು, ಸಂತೋಷಕೊಡು, ಸಂಪತ್ತುಕೊಡು ಎಂದು ಹೆಚ್ಚಿನವರು ಬೇಡಿಕೊಳ್ಳುವ ಈ ದಿನಗಳಲ್ಲಿ ಈ ಕವಿ . . .
ಕಷ್ಟಗಳ ಸರಮಾಲೆ ನೀಡು
ಜೊತೆಗೆ ಸಹಿಸೋಶಕ್ತಿಕೊಡಯ್ಯ,
ಸಮಸ್ಯೆಗಳ ಮಳೆ ಸುರಿಸು
ಬಗೆಹರಿಸೋ ಚಿತ್ತ ತೋರಯ್ಯಾ,
ಕೊಡು ತಂದೆ ಕೊಡು ವರವ
ದುಃಖ ದುಮ್ಮಾನಗಳಿರಲಿ
ಜೊತೆ ಏಕಾಗ್ರತೆ ನೀಡಯ್ಯ,
ಛಲದ ಕೆಚ್ಚೆದೆಯ ಹರಸಯ್ಯಾ
ಶ್ರೀ ಗುರು ಕೊಟ್ಟುರೇಶ | (ವಚನ 34) ಎಂದು ಬೇಡಿಕೊಳ್ಳುತ್ತಾರೆÉ.
ಕಷ್ಟಕೊಡು, ಸಮಸ್ಯೆಕೊಡು, ದುಃಖ ದುಮ್ಮಾನಗಳನ್ನು ಕೊಡು ಆದರೆ ಅವುಗಳನ್ನು ಎದುರಿಸುವ ಬಲ, ಛಲಕೊಡು, ಶಕ್ತಿ ಕೊಡು ಎಂದು  ಕೋರುವುದು ಅಪೂರ್ವವಾದ ವಿಚಾರವೇ ಸರಿ.
ಹೇಳಿ ಹೇಳಿ ಈಗಾಗಲೇ ಹಳತಾಗಿರುವ ವಿಚಾರಗಳ ಪುನರಪಿ ಚಿತ್ರಣ ಒತ್ತಟ್ಟಿರಿಲಿ. ಪ್ರಸ್ತುತದ ಹೊಸ ಸಂಗತಿಗಳ ಕುರಿತು ಕವಿ ಏನು ಹೇಳುತ್ತಾನೆ. ಹೆಣ್ಣು ಭ್ರೂಣಹತ್ಯೆ ಸರ್ವವ್ಯಾಪಕವಾಗಿ, ಸಾಮಾಜಿಕ ಅಸಮತೆಗೆ ಕಾರಣವಾಗಬಹುದಾದ ಒಂದು ವಿಚಾರದ ಬಗ್ಗೆ ಕವಿ ಮನದ ತುಡಿತವೇನು ? 
ಇಂದು ತುಂಡರಿಸಿ
ಬಿದ್ದಿವೆಯಯ್ಯಾ,
ನಾಳೆ ಅರಳುವ
ಅಸಂಖ್ಯ ಕುಸುಮಗಳು,
ಗಡಸು, ಸಿಡಿಮಿಡಿ
ಸೌಮ್ಯ, ಸಾಧುಗಳಾಟ
ಹೊರಳಾಟ, ಬೆದೆಯಾಟ
ಕೆರೆದಾಟಗಳ ನಡುವೆ
ಹಸುಳೆಗಳ ಪ್ರತಿಮೆಗಳು
ಛಿದ್ರವಾಗಿವೆ ನೋಡಾ
ಶ್ರೀ ಗುರು ಕೊಟ್ಟುರೇಶ (ವಚನ 57)

ಹಸುಳೆಗಳ ಪ್ರತಿಮೆಗಳು ಛಿದ್ರವಾಗಿವೆ ಮತ್ತು ನಮ್ಮ ಕನಸುಗಳೂ ಛಿದ್ರವಾಗಿವೆ ಎಂಬುದನ್ನು ಕವಿ ಮಾರ್ಮಿಕವಾಗಿ ನಿರೂಪಿಸಿದ್ದಾರೆ. ವಚನದ ಭಾಷೆಯಲ್ಲಿ ಕವಿ ಹನಿಗವನ ಬರೆದಂತೆ ತೋರಿದರೂ ಹೊಸ ವಸ್ತು ಮತ್ತು ನೋಟದಿಂದಾಗಿ ನವೀನತೆ ಕಂಡು ಬರುತ್ತದೆ. ಆದರೆ ಭ್ರೂಣಹತ್ಯೆಯ ಈ ಸಮಸ್ಯೆಗೆ ಕೊಟ್ಟುರೇಶರಲ್ಲಿ ಯಾವುದೇ  ಪರಿಹಾರವಿಲ್ಲ. ಇಲ್ಲಿ ಸೌಮ್ಯ ಸಾಧುಗಳಾಟ, ಹೊರಳಾಟ, ಬೆದೆಯಾಟ ಎಂದಾಗ ನಿತ್ಯಾನಂದ ಸ್ವಾಮಿಗಳಂಥವರು ನೆನಪಾದರೆ ಆಶ್ಚರ್ಯವೇನೂ ಇಲ್ಲ !
ಇದು ಭವಿಗಳ ಸಾಮ್ರಾಜ್ಯ, ಇದು ಭೋಗಿಗಳ ಸಾಮ್ರಾಜ್ಯ ಇಂಥಲ್ಲಿ ಸಾಯುಜ್ಯ ಅಪೇಕ್ಷಿಸುವವರಿಗೆ ಎಡೆ ಎಲ್ಲಿದೆ ? ಎಲ್ಲರಿಗೂ ಬೇಕಾಗಿರುವುದು ನೆರೆÉಕೆನ್ನೆಗಳು ಮತ್ತು ನೆರೆಗಲ್ಲಗಳು ! ಕಾಮನೆಯ ಪರ್ವತಗಳನ್ನೇ ಹೊತ್ತ ಅಗ್ನಿಶರೀರಗಳು ತುಂಬಿರಲಾಗಿ ಅಣ್ಣ ಸ್ತುತಿಸಿದ ವಚನಾಮೃತವನ್ನು ಎಲ್ಲಿ ಹುಡುಕಲಿ ಎಂದು ಕವಿ ಕೇಳುತ್ತಾನೆ :
ನೆರೆ ಕೆನ್ನೆಗಳಿಗೆ ಪರಿತಪಿಸುವ 
ನೆರೆಗಲ್ಲಕೆ ಆತೊರೆಯುವ
ಅಗ್ನಿ ಶರೀರಗಳೇ ತುಂಬಿವೆಯಯ್ಯಾ
ಮೌಲ್ಯಗಳೆಲ್ಲಾ ಕುದಿಕುದಿದು
ಇಂಗಾಲದ ಮೂಟೆಗಳಾಗಿವೆಯಯ್ಯಾ
ಮತ್ತೆಲ್ಲಿ ಹುಡುಕಲಿ ದೇವಾ
ಅಣ್ಣ ಸ್ತುತಿಸಿದ ವಚನಾಮೃತವನು
ಶ್ರೀ ಗುರು ಕೊಟ್ಟುರೇಶ | (ವಚನ 62)

ಹೇಳುವವರು ಹೇಳುತ್ತಲೇ ಇರಬೇಕು. ಕೇಳುವವರು ಕೇಳುತ್ತಲೇ ಇರಬೇಕು. ಪ್ರತಿಯೊಂದು ತಲೆಮಾರಿಗೂ ಇದು ಅನಿವಾರ್ಯ ಕರ್ಮ. ಸಮಾಜ ತಿದ್ದುತ್ತೇವೆಂಬುದು ಕೇವಲ ಭ್ರಮೆ ಎಂಬುದು ಕವಿಯ ಆಶಯ ಇರುವಂತಿದೆ.
ಈ ವಚನ ಸಂಗ್ರಹದಲ್ಲಿ ಒಟ್ಟು ನೂರಾ ಒಂದು ವಚನಗಳಿವೆ. ವಸ್ತು ವೈವಿಧ್ಯವಿದ್ದು, ವಿಚಾರಗಳ ಮಂಡನೆಯಲ್ಲಿ ಹೊಸತನವಿದೆ, ಆದರೆ ಭಾವವನ್ನು ವಿಸ್ತರಿಸಬಹುದಾಗಿತ್ತು, ಅನುಭವದ ಸಾಂದ್ರವೂ ಅಡಕವೂ ಆದ ನುಡಿಗಳಿಂದ ರಚನೆಯನ್ನು ಬಿಗಿಗೊಳಿಸಬಹುದಾಗಿತ್ತು ಎಂಬ ಕೊರೆಯೊಂದು ಉಳಿದುಬಿಡುತ್ತದೆ.
ವಚನಗಳ ಭಾಷೆಯ ಬಗೆಗೆ ಹೆಚ್ಚಿನದೇನನ್ನೂ ಹೇಳುವ ಅಗತ್ಯವಿಲ್ಲ. ‘ವಚನ’ ಎಂಬ ಶಬ್ದದಲ್ಲೇ ಅದು ದೇಸೀ ಪ್ರಕಾರ ಎಂಬ ಅರ್ಥ ಅಂತರ್ನಿಹಿತವಾಗಿದೆ. ಜಾನಪದ ಭಾಷೆಯಲ್ಲಿ ಅಭಿವ್ಯಕ್ತಿಗೊಂಡಾಗಲಷ್ಟೇ ಅದಕ್ಕೆ ಚೆಲುವು ಮತ್ತು ಬಲವು ಒದಗಿ  ಬರಲು ಸಾಧ್ಯ. ಅದನ್ನು ಕವಿ ತಿಳಿದುಕೊಂಡಂತಿದೆ. ಅವರ ಭಾಷೆಯಲ್ಲಿ ಕಷ್ಟದ ಸಂಸ್ಕಾರ ಕಂಡುಬರದೇ ಇರಲು ಬಹುಶಃ ಅಗೋಚರವಾಗಿರುವ ಈ ಅಂಶವೂ ಕಾರಣವಾಗಿರಬಹುದು. ಇಂತಹ ದೇಶೀ ಚೆಲುವಿನ, ಸರಳ ಹೊಸಗನ್ನಡವÀನ್ನು ಅಭಿವ್ಯಕ್ತಿಗೆ ಆಯ್ದುಕೊಂಡಿರುವುದರಿಂದ ಕ್ಲಿಷ್ಟತೆಗೆ ಎಡೆಯಿಲ್ಲ. ಸಮ ಸಾಮಾಯಿಕ ವಿಚಾರಗಳು ವಚನದ ರೂಪದಲ್ಲಿ ಮೈದಾಳಿರುವುದರಿಂದ ಒಮ್ಮೆ ಓದಿ ಸಂತೋಷ ಪಡಬಹುದಾದ ರಚನೆಗಳಿವು.
ಖೇದವು ಸ್ಥಾಯಿಯಾಗುಳ್ಳ ಮನಸ್ಥಿತಿಯೊಂದು ಸಮಾಜದ ಆಗುಹೋಗುಗಳನ್ನು ನೋಡಿ ಅಭಿವ್ಯಕ್ತಿ ಪಡೆದುಕೊಂಡಿದೆಯಾದ್ದರಿಂದ ಸಮಾಜ ಸುಧಾರಣೆ ಕವಿಯ ಮೂಲೋದ್ದೇಶ ಎಂದು ಭಾವಿಸಬಹುದು.
ಹನಿಗವನಗಳ ಪ್ರಭಾವದಿಂದ ನವೀನರೀತಿಯಲ್ಲಿ ವಚನಗಳನ್ನು ಬರೆಯುತ್ತಿರುವ ಕವಿ ಕೊಟ್ರೇಶ್ ಎಸ್. ಉಪ್ಪಾರ್ ಅವರಿಗೆ ಸರ್ವವಿಧದ ಯಶಸ್ಸನ್ನು ಹಾರೈಸುತ್ತೇನೆ. ಈ ಕ್ಷೇತ್ರದಲ್ಲಿ ಅವರು ಇನ್ನಷ್ಟು ಪ್ರಯತ್ನಶೀಲರಾದರೆ ಒಳ್ಳೆಯ ಬೆಳೆ ತೆಗೆಯುವರೆಂಬುದರಲ್ಲಿ ಸಂಶಯವಿಲ್ಲ. ಇಂತಹ ಕೌಮಾರ್ಯಶೈಲಿಯ ವಚನಗಳನ್ನು ಓದಲು ಅನುವು ಮಾಡಿಕೊಟ್ಟ ಕವಿಗೆ ಅಭಿನಂದನೆ ಸಲ್ಲಿಸುತ್ತ ಇನ್ನಷ್ಟು ಉತ್ತಮ ವಚನಗಳನ್ನು ಅವರು ಬರೆಯುವಂತಾಗಲಿ ಎಂದು ಆಶಿಸುತ್ತೇನೆ.


- ಡಾ. ವಸಂತಕುಮಾರ ಪೆರ್ಲ
ಭೂಮಿಗೀತ
ಕುಂಜತ್ತಬೈಲು
ಮಂಗಳೂರು – 575015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ