ಬುಧವಾರ, ಜುಲೈ 23, 2014

‘ರಸಋಷಿ’ಯ ಎರಡು ಕವಿತೆಗಳು- ಕೊಟ್ರೇಶ್ ಎಸ್. ಉಪ್ಪಾರ್



 ಕುವೆಂಪು ಎಂಬ ಹೆಸರಿನಲ್ಲೇನೋ ಅತ್ಯದ್ಭುತ ಐಂದ್ರಜಾಲಿಕ ಶಕ್ತಿಯಿದೆ. ಪುಂಗಿಯ ನಿನಾದಕ್ಕೆ ಮೈದೂಗುವ ಹಾವಿನಂತೆ, ಮುಂಗಾರು ಮಳೆಯ ಎಳೆಮಿಂಚನ್ನು ಆಸ್ವಾದಿಸಿ ಕುಣಿಯುವ ನವಿಲಿನಂತೆ ಆ ಹೆಸರು ಕೇಳಿದಾಕ್ಷಣ ಕೋಟಿ ಕೋಟಿ ಕನ್ನಡಿಗರು ರೋಮಾಂಚಕರಾಗಿ ಕುಣಿಯುತ್ತಾರೆ, ಮೈಮರೆಯುತ್ತಾರೆ. ಕೋಟಿ ಹೃದಯಗಳನ್ನು ಮೀಟಿದ ಎಲ್ಲ ಭಾವದ ಹೊತೋಟವೇ  ಕುವೆಂಪು.
      ಕವಿಗಳು ಹುಟ್ಟಬಹುದು, ಸಾಯಬಹುದು ಇದು ನಿಸರ್ಗನಿಯಮ, ಆದರೆ ಅಮರರಾಗುವುದು ಅಮೂಲ್ಯಕರ ಕನ್ನಡದಲ್ಲಿ ಕುವೆಂಪುರವರಂಥ ಕೋಟಿ, ಕೋಟಿ ಹೃದಯಗಳನ್ನಾಳಿದ ಲಕ್ಷೋಪಲಕ್ಷ ನರನಾಡಿಗಳನ್ನು ವಿದ್ಯುತ್ ಚೈತನ್ಯದ ಪ್ರವಾಹವನ್ನುಂಟು ಮಾಡಿದ ವೈಚಾರಿಕ ಕ್ರಾಂತಿಕಾರರು ಅಪರೂಪ.
      ಇಪ್ಪತ್ತನೇ ಶತಮಾನ ಕರ್ನಾಟಕದ ಪಾಲಿಗೊಂದು ಪುಣ್ಯಮಂಗಳ ಮನ್ವಂತರವಾಗಿ ಪರಿಣಮಿಸಿತು. ರೋಮಾಂಚನಕಾರಿಯಾದ ಸರ್ವೋದಯ ಸಂಕ್ರಾಂತಿಯೊಂದನ್ನು ದರ್ಶಿಸುವ ಭಾಗ್ಯ ಈ ಶತಮಾನದ್ದು. ಮಾನವೀಯ ಧರ್ಮದ ನೆಲೆಯಲ್ಲಿ ಆಧ್ಯಾತ್ಮಿಕ ಪ್ರಜಾಪ್ರಭುತ್ವ ಹಾಗೂ ಸಾಹಿತ್ಯಿಕ ಪ್ರಜಾಪ್ರಭುತ್ವವೆರಡನ್ನು ಭದ್ರವಾಗಿ ನೆಲೆಯೂರಿಸಿದವರು ಕುವೆಂಪು.
ಇವರು ಆಧು£ಕ ಕನ್ನಡ ಸಾಹಿತ್ಯದ ಅಥ್ವರ್ಯವೂ ಹೌದು, ಪ್ರತಿನಿಧಿಯೂ ಹೌದು.
     ಮಲೆನಾಡಿನ ನಿಸರ್ಗ ರಮ್ಯ ಪರಿಸರದಲ್ಲಿ ಬೆಳೆದವರು ಕುವೆಂಪು. ಅವರು ನಿಸರ್ಗದ ಆರಾಧಕರು. ನಿಸರ್ಗದ ರಮಣೀಯ ಭಾಗವನ್ನು ಭಯಾನಕ ಭಾಗವನ್ನು ಅನುಭವಿಸಿದವರು. ರಮಣೀಯತೆಯಲ್ಲಿ ರಸಾವೇಶದಿಂದ ದೇವರನ್ನು ಕಂಡರೆ ರುದ್ರಭಯಾನಕ ಸೌಂದರ್ಯದಲ್ಲಿ ನಿಸರ್ಗದ ಪ್ರಳಯಾಂತಕವನ್ನು ಕಾಣುತ್ತಾರೆ.
    ನಾನು ಇತ್ತೀಚೆಗೆ ರಸಋಷಿಯ ‘ದೇವರು ರುಜುಮಾಡಿದನು’ ಹಾಗೂ ‘ವರ್ಷಭೈರವ’ ಎಂಬ ಎರಡು ಕವಿತೆಗಳನ್ನು ಓದುವಾಗ ಮಲೆನಾಡಿನ ಸೆರಗಲ್ಲಿ ಮಿಂದೆದ್ದ ಅನುಭವ ಸ್ಮರಣೀಯ.

ಸಿಬ್ಬಲು ಗುಡ್ಡೆಯ ಹೊಳೆಯಲ್ಲಿ ಮೀಯುತ
ಕವಿ ಮನ ನಾಕದಿ ನೆಲಸಿತ್ತು
ಬೆಳ್ಳಕ್ಕಿಯ ಹಂತಿಯ ಆನೆವದಿ 
ದೇವರು ರುಜು ಮಾಡಿದನು
                      ರಸವಶನಾಗುತ ಕವಿ ಅದ ನೋಡಿದನು  
                                                                       (ದೇವರು ರುಜುಮಾಡಿದನು)

     ಮಲೆನಾಡಿನ ಗರ್ಭದಲ್ಲಿ ಹುಟ್ಟಿ ಬೆಳೆದ ಕುವೆಂಪು ದೇವರನ್ನು ಕಲ್ಲು, ಮಣ್ಣುಗಳ ಮೂರ್ತಿಗಳಲ್ಲಿ ಕಾಣದೇ ನಿಸರ್ಗದಲ್ಲಿ ಕಂಡವರು. ಪ್ರಕೃತಿಯ ಚೇತನಾಚೇತನಗಳಲ್ಲಿ ಕಂಡವರು. ಪ್ರಕೃತಿಯೇ ಅವರಿಗೆ ದೇವರು, ಗುರು, ತಾಯಿ ಹೀಗಾಗಿಯೇ ಎತ್ತನೋಡಿದರತ್ತತ್ತ ಅವರಿಗೆ ಹೊಸತನ ಕಾಣುತ್ತಿತ್ತು.
     ಕುವೆಂಪು ಪ್ರಕೃತಿಯನ್ನು ನೋಡುತ್ತ ಹರ್ಷ ತುಂದಿಲರಾದಾಗ ಹಕ್ಕಿಗಳ ಹಿಂಡು ಸಾಲು-ಸಾಲಾಗಿ ಹಾರುವುದನ್ನು ಕಂಡು ದೇವರು ನಿಸರ್ಗದ ಸೌಂದರ್ಯಕ್ಕೆ ಮಾರುಹೋಗಿ ತನ್ನ ರುಜು ಹಾಕಿದ್ದಾನೆ ಎಂದು ಹಾಡುತ್ತಾರೆ.
      ಅದನ್ನು ಕವಿ ರಸವಶನಾಗುತ್ತಾ ನೋಡುತ್ತ ನಿಲ್ಲುತ್ತಾರೆ. ವಿಸ್ತಾರವಾದ ಆಗಸ ಹಿನ್ನಲೆಯಾಗಿದೆ. ಪರ್ವತದ ಎತ್ತರಗಳು ಸಾಲಾಗಿ ಬೆಳೆದಿವೆ. ಕಿಕ್ಕಿರಿದ ಅಡವಿಯ ಮಧ್ಯ ತುಂಗಾನದಿ ಭಯಭಕ್ತಿ ಹುಟ್ಟಿಸುತ್ತ ಹರಿಯುತ್ತದೆ. ಅದೆಲ್ಲಾ ನೋಡುತ್ತಾ ನಿಂತ ಕುವೆಂಪು ಪರವಶರಾಗುತ್ತಾರೆ. ಆಗ ಸೃಷ್ಠಿಯೇ ಸ್ತಬ್ದವಾದ ಅನುಭವ. ನದಿ ಹರಿಯುತ್ತ್ತಿತ್ತು ಜನ ಅದನ್ನು ನೋಡುತ್ತನಿಂತಿದ್ದಾರೆ.
       ನಿರ್ಜನ ದೇಶದ ನೀರವ ಕಾಲಕ್ಕೆ ಪಕ್ಷಿಗಳ ಕಲರವ ಪುಳಕಗೊಳಿಸುತ್ತದೆ. ಹೂ ಬಿಸಿಲಿನಲ್ಲಿ ಸಿರಿವೊನಲು ಮಿಂಚುತ್ತಿದೆ. ಬಂಡೆಗಳ ನಡುವೆ ಮಂಜುಳ ಕಲರವ ಮಾಡುತ್ತ ಪ್ರವಾಹಗಳು ಹರಿಯುತ್ತಿವೆ. ಪ್ರವಾಹದ ಎರಡು ದಂಡೆಗಳಲ್ಲಿ ಹೊಮ್ಮಳಲು ರಾಜಾಜಿಸುತ್ತಿವೆ. ಸಿಬ್ಬಿಲು ಗುಡ್ಡೆಯ ಹೊಳೆಯಲ್ಲಿ ಮೀಯುತ್ತ ಕವಿಯ ಮನಸ್ಸು ಸ್ವರ್ಗದಲ್ಲಿ ನೆಲೆಸಿದೆ. ಮಧು ಸೌಂದರ್ಯದ ಮಧುರ ಜಗತ್ತು ಹೃದಯ ನಾಲಗೆಗೆ ಜೇನಾಗಿದೆ. ಇಂಥ ಸಮಯದಲ್ಲಿ ದೃಶ್ಯ ದಿಗಂತದಿಂದ ಒಮ್ಮಿಂದೊಮ್ಮ್ಮೆಲೇ ಗಿರಿ ವನ ಪಟದಾಕಾಶದಲ್ಲಿ ಬಲಾಕ ಪಂಕ್ತಿ ತೇಲುತ್ತಾ ಬರುವುದನ್ನು ಕಂಡು ಮೈಮರೆಯುವುದನ್ನು ಕಾಣುತ್ತೇವೆ.

ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು
ಮೈದೋರಲು ಮರೆಯಾಗಿವೆ
ಭಯದಲಿ ಶಶಿ, ತಾರೆ,
ಮಳೆ ಎಂಬುದು ಬರಿ ಸುಳ್ಳಿದು
ಮಳೆಯಲ್ಲಿದು | ಮಳೆಯಲ್ಲಿದು
ಪ್ರಲಯದ ಆವೇಶ.  (ವರ್ಷ ಭೈರವ)

         ಕವಿ ಇಲ್ಲಿ ಮುಸಲಧಾರೆ ಮಳೆಯ ವರ್ಣನೆ ಮಾಡಿದ್ದಾರೆ. ಕದ್ದಿಂಗಳು, ಕಗ್ಗತ್ತಲು, ಕಾರ್ಗಾಲದ ರಾತ್ರಿಯನ್ನು  ಕುವೆಂಪುರವರು ಭಿನ್ನವಾಗಿಯೇ ಕಂಡಿದ್ದಾರೆ. ಪರ್ವತ ವನಧಾತ್ರಿ ಸಿಡಿಲು ಮಿಂಚಿಗೆ ನಡುಗುವ ಭಾವ ಲಹರಿ ಹರಿದಿರುವುದನ್ನು ಕಾಣುತ್ತೇವೆ. ಮೋಡಗಳ ರಾಶಿ ತುದಿ- ಮೊದಲಿಲ್ಲದಂತೆ ಆಕಾಶವನ್ನು ಹಿಡಿದು ಕೊಂಡು ತಬ್ಬಿದೆಯೆಂದು ಪ್ರಕೃತಿಯನ್ನು ವರ್ಣಿಸುವಾಗ ಕವಿಯ ತನ್ಮಯತೆಯ ಉನ್ಮಾದತೆ ಅರಿವಾಗದಿರದು. ನಿರ್ದಿಯಾ ಕಠಿನ ಘಾತವನ್ನುಂಟು ಮಾಡುವ ಫೀಳಿಡುತ್ತ ಭೋರೆನ್ನುತ್ತ ಬಿರುಗಾಳಿ ಬೀಸುತ್ತ ಭೂಮಿಗೆ ಅಪ್ಪಳಿಸುವ ಸನ್ನಿವೇಶವನ್ನು ಹಾಗೆ ಥಳ್ಳನೆಯ ಮುಗಿಲು ಮಿಂಚು ಕತ್ತಲೆಯನ್ನು ನೆಕ್ಕುತ್ತಲಿದೆ, ಮಿಂಚು ಭುಮಿಯ ಕಣ್ಣನ್ನು ಕುಕ್ಕುತ್ತಲಿದೆ, ಇದರಿಂದ ಆಕಾಶ ನೀರಾಗಿ ಬೋಭೋರನೇ ಧಾರಾಕಾರವಾಗಿ ಸುರಿಯುತ್ತಿದೆ ಎನ್ನುವಲ್ಲಿ ಕುವೆಂಪುರವರ ಆಂತರಿಕ ಸೌಂದರ್ಯದ ಚಲವು ಹರಿಯುತ್ತದೆ.
         ಎಲ್ಲೆಲ್ಲೂ ಲಯರುದ್ರನ ಜಯ ಡಿಂಡಿಮ ಘನ ವಜ್ರದ ಧ್ವನಿ ಮೊಳಗುತ್ತಿದೆ. ಭವ ವಿಪ್ಲವಕರ ಭೈರವ ವರತಾಂಡವ ಭಾವ ಎಲ್ಲೆಲ್ಲೂ ಕಾಣುತ್ತಿದೆ. ದಿಕ್ಕು-ದಿಕ್ಕಿಗೂ ಕಾರ್ಮುಗಿಲಿನ ಕೇಶಗಳು ಪಸರಿಸಿವೆ. ಸಿಡಿಲು ಮಿಂಚಿನ ರೂಪದಲ್ಲಿ ಮಳೆ ಭೈರವನ ರೋಷ ವ್ಯಕ್ತವಾಗುವುದನ್ನು ಕವಿ ಮನೋಜ್ಞವಾಗಿ ಬಿಂಬಿಸಿದ್ದಾರೆ.
        ಅದರಲ್ಲೂ ಕನ್ನಡ ಕಾವ್ಯಕಾಶಿಯ ಪ್ರಕೃತಿಯಲ್ಲಿ ಕುವೆಂಪು ಕಂಡ ಸೊಬಗನ್ನು ಮತ್ಯಾವ ಕವಿಯೂ ಕಾಣಲಾಗಲಿಲ್ಲ. ಕುವೆಂಪು ಎಲ್ಲವನ್ನು ದರ್ಶಿಸಿದ್ದು ನಿಸರ್ಗದಲ್ಲೇ, ಎಲ್ಲವನ್ನು ಕಂಡದ್ದು ನಿಸರ್ಗದಲ್ಲೇ, ಆದ್ದರಿಂದಲೇ ಹಸಿರಿನಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಹಸಿರಾಗಿ ಸರ್ವ ಹೃನ್ಮನಗಳಲ್ಲಿಯೂ ಉಸಿರಾಡುತ್ತಿದ್ದಾರೆ.

- ಕೊಟ್ರೇಶ್ ಎಸ್. ಉಪ್ಪಾರ್, ಆಲೂರು.
 ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ