ಬಹು ದಿನಗಳ ಹಿಂದೆ ಓಬಳಾಪುರ ಎಂಬ ಚಿಕ್ಕ ಗ್ರಾಮದಲ್ಲಿ ಚಿಕ್ಕಜ್ಜಿ ಎಂಬ ಜೀವ ಬದುಕಿ ಬಾಳಿತ್ತು. ಆ ಅಜ್ಜಿಗೆ ಮೂರು ತದ್ವಿರುದ್ದ ಲಿಂಗವುಳ್ಳ ಮಕ್ಕಳಾಗಿದ್ದವು. ಅವ್ರು ಬೆಳೆ ಬೆಳೆಯುತ್ತಾ ತಮ್ಮ ಜನನಕ್ಕೆ ಕಾರಣಕರ್ತ ಜೀವಗಳನ್ನು ದೂರಮಾಡಿಕೊಂಡಿದ್ದರು. ಗೂಳಿ, ದಿಗಂತ ಹಾಗೂ ಮಾರುತ ಅನುಕ್ರಮವಾಗಿ ಚಿಕ್ಕಜ್ಜಿ ಉದರದಿಂದ ಜಗತ್ ನೋಡಿದ್ದರು. ಅದು ನಾಮಕ್ಕೆ ಚಿಕ್ಕ ಹಳ್ಳಿಯಾದರೂ ಈ ತ್ರಿಮೂರ್ತಿಗಳಿಂದ ಸುತ್ತ ಹತ್ತಾರು ಹಳ್ಳಿಗಳಲ್ಲಿ ಹೆಸರು ಮಾಡಿಕೊಂಡಿತ್ತು.
ಹತ್ತಾರು ವರ್ಷಗಳ ಉರುಳಿಕೆಯು ಇವರಲ್ಲಿ ಹದಿಹರೆಯ ವಯಸ್ಸನ್ನು ತಂದುಕೊಟ್ಟಿತ್ತು. ಯಾವ ಕಾರ್ಯ ಕಲಾಪಗಳೇ ಆಗಲಿ ಇವರ ಕರಗಳಿಂದ ಕಾದು ಸುಸ್ತಾಗುತ್ತಿರಲಿಲ್ಲ. ಇಡೀ ವರ್ಷದ ಕಾರ್ಯಗಳು ಅರೆಕ್ಷಣದಲ್ಲಿ ಪರದೆ ಎಳೆದುಕೊಳ್ಳುತ್ತಿದ್ದವು. ಇವರಲ್ಲಿ ಹಿರಿಯ “ಗೂಳಿ” ವ್ಯವಸಾಯದ ಭಾರವನ್ನು ಹೊತ್ತರೆ, “ದಿಗಂತ” ಜಾನುವಾರುಗಳ ಮಲ, ಮೂತ್ರ ಸ್ಥಳದ ಸ್ವಚ್ಛಗೊಳಿಸುವಿಕೆ ಹಾಗೂ ಅವುಗಳಿಗೆ ಊಟ, ಉಪಹಾರ ನೀರಿನ ಸೌಕರ್ಯ ಒದಗಿಸುವುದು, ಕೊನೆಯ ಹಾಗೂ ಪ್ರೀತಿಯ ಮುದ್ದು ಕೂಸೆಂದೇ ಕರೆಸಿಕೊಂಡ “ಮಾರುತನು” ತಿನ್ನುವುದರಲ್ಲಿ ನಿಪುಣ ಹಾಗೂ ಸರ್ವ ವ್ಯಾಪಿಯಾಗಿದ್ದನು. ಮಾರುತನು ಒಂದು ಸಮಯದ ಉಪಹಾರಕ್ಕಾಗಿ ಕೇವಲ ಐದು ಕ್ವಿಂಟಾಲ್ ಅಷ್ಟೇ ಸೇವಿಸುತ್ತಿದ್ದನು. ಊಟವಾದರೆ ಒಂದ್ಹತ್ತು ಕ್ವಿಂಟಾಲ್ ಸೇವಿಸುತ್ತಿದ್ದನಷ್ಟೇ. ಆದರೆ ಇವನು ಕೇವಲ ಉರುಳಿಯಿಂದ ತಯಾರಿಸಿದ ಅಡುಗೆಯನ್ನಷ್ಠೇ ಸೇವಿಸುತ್ತಿದ್ದ. ಒಂದು ದಿವಸ ಒವರ್ ಲೋಡ್ ಆಗಿ ಊರಿನ ಆಚೆಯ ಬದಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೋಗಿ ಬೃಹಾದಾಕಾರದ ಮರದಡಿಗೆ ತಂದಿದ ಗಂಟಲತನಕದ ಬಂದ ಉರುಳಿ ಉಣ್ಣ ಮಾರುತನಲ್ಲಿ ಆಯಾಸ ಉಂಟುಮಾಡಿತ್ತು. ಉದರದೊತ್ತಡ ಅಧಿಕವಾಗಿ ಊಸು ಒತ್ತರಿಸಿ ಬಂದಿತು. ಊರ ಕಡೆ ತೊಡೆ ಎತ್ತಿ ಶಕ್ತಿ ಮೀರಿ ಬಿಟ್ಟು ಹೊಟ್ಟೆ ಹಗುರ ಮಾಡಿಕೊಂಡ, ಆರೇಳು ಹೆಲಿಕ್ಯಾಪ್ಟರ್ ಶಬ್ದ ಮೀರಿಸುತ್ತಾ . . . ! ಆದರೆ ಆ ಊಸಿನ ಗಾಳಿಗೆ ಕೆಂಗಲು ಮಣ್ಣಾದ್ದರಿಂದ ಸುಂಟರಗಾಳಿ ದೂಳೆದ್ದು ಊರಲ್ಲಿ ನುಗ್ಗಿ ಚಪ್ಪರ ಹಂಚುಗಳೆಲ್ಲಾ ಆಚೆಯ ಹೊಲ ಗದ್ದೆಗಳಿಗೆ ವಲಸೆ ಹೋದರೆ, ಕೆಲವೊಂದು ಮನೆಗಳ ಬುನಾದಿ ಸಡಿಲಗೊಂಡಿದ್ದವು. ಇನ್ನು ಕೆಲವೆಡೆ ಹೊಲಗದ್ದೆಗಳ ಬೆಳೆಗಳಿಗೆ ಅಂಟಿಕೊಂಡ ಕ್ರಿಮಿಗಳು ಈ ವಾಸನೆಗೆ ಉಸಿರುಕಟ್ಟಿ ನೇರವಾಗಿ ನೆಲಕ್ಕುರುಳಿ ಜೀವ ಕಳೆದುಕೊಂಡವು.
ಇನ್ನು ಗೂಳಿಯ ವಿಷಯಕ್ಕೆ ಬಂದರೆ, ಇವನೇ ಮನೆಯೊಡೆಯ ಕೃಷಿಕ ಬಿತ್ತನೆ ಕಾಲದಲ್ಲಿ ಸಾವಿರಾರು ಎಕರೆ ಹೊಲವನ್ನು ಒಂದೇ ದಿನದಲ್ಲಿ ಬಿತ್ತಿ ಮುಗಿಸುತ್ತಿದ್ದ. ಇರುವೆಗಳನ್ನು ಕೂರಿಗೆ ಹೂಡಿಕೊಂಡು ಹದಿನಾರು ಖಂಡ್ಗ ಉರುಳಿ ಬೀಜವ ಹುಡಿಯಲ್ಲಿ ಕಟ್ಟಿಕೊಂಡು ( ಒಂದು ಖಂಡ್ಗ ಅಂದರೆ 16 ಚೀಲ) ಐದಾರು ತಾಸಿನಲ್ಲಿ ಬಿತ್ತನೆ ಕಾರ್ಯಕ್ಕೆ ತೆರೆ ಎಳೆಯುತ್ತಿದ್ದ.
ಎರಡನೆಯ ಸುಕುಮಾರ ದಿಗಂತನು 500 ಜಾನುವಾರುಗಳಿಗೆ ಕಣದಿಂದ ಒಂದು ಹೊರೆ ಮೇವು ಹೊತ್ತು ತಂದು ಕತ್ತರಿಸಿದರೆ, ಆ ಮೇವು ವರ್ಷದ ತನಕ ತಿಂದು ಉಳಿಯುತ್ತಿತ್ತು. ಹಾಗೂ ಪಕ್ಕದ ಕೆರೆಯಿಂದ ಒಂದು ಕೊಡ ನೀರು ತಂದರೆ ವರ್ಷದುದ್ದಕ್ಕೂ ಆ ಎಲ್ಲಾ ಜಾನುವಾರುಗಳಿಗೆ ಕುಡಿದು, ಸ್ನಾನಮಾಡಿ ಉಳಿಯುತ್ತಿದ್ದವು.
ಒಂದು ಸಲ ಪಕ್ಕದ ‘ಮುತ್ತೂರು’ ರಾಜ್ಯದ ರಾಜನಾದ ‘ಸಕ್ರೇಶ್ವರ ಮಹಾರಾಜ ತನ್ನ ನೂರು ಎಕರೆಯ ಕಾಂಸಪೌಂಡಿನಲ್ಲಿ ಒಂದೇ ಒಂದು ಕುಂಬಳ ಕಾಯಿಯನ್ನು ಬೃಹದಾಕಾರವಾಗಿ ಹಲವಾರು ವರ್ಷಗಳ ಪರಿಶ್ರಮದಿಂದ ಬೆಳೆಸಿದ್ದನು. ರಾಜನು ಯಾರು ಈ ಕುಂಬಳ ಕಾಯಿಯನ್ನು ನಿರರ್ಗಳವಾಗಿ ಎತ್ತುತ್ತಾರೆಯೋ ಅವನಿಗೆ ನನ್ನ ಮಗಳನ್ನು ಹಾಗೂ ಅರ್ಧರಾಜ್ಯದ ಸಿರಿ ಸಂಪತ್ತನ್ನು ಧಾರೆಯೆರೆಯುತ್ತೇನೆ ಎಂದು ಸುತ್ತ ಸುತ್ತ ರಾಜ್ಯಗಳಲ್ಲಿ ಡಂಗೂರ ಸಾರಿಸಿದ.
ಈ ವಿಷಯ ಓಬಳಾಪುರದ ತ್ರಿಮೂರ್ತಿಗಳ ಕಿವಿಯ ಪದರಿನ ಮೇಲೆಯೂ ಸಹ ಊಂಕರಿಸಿತು. ಮೂವರೂ ಸೇರಿ ಪರಸ್ಪರ ಚರ್ಚಿಸಿ ಇದರಲ್ಲಿ ಭಾಗವಹಿಸಲು ಸನ್ನದ್ಧರಾದರು.
ಆ ದಿವಸ ಬಂದೇ ಬಿಟ್ಟಿತು. ಯಾವುದೇ ಆವಾಂತರವಿಲ್ಲದೆ ಅಸಾಮಾನ್ಯ ಸಹೋದರರ ದಾರಿ ಓಬಳಪುರ ಮತ್ತು ಮುತ್ತೂರು ರಾಜ್ಯದ ನಡುವೆ ಹಾದು ಹೋಗುವ ‘ವನ್ನಾಂಬಿಕೆ’ ಹೊಳೆಯನ್ನು ಮೀರಿ ಸಾಗಿತ್ತು. ವನ್ನಾಂಬಿಕೆಯು ಇವರ ಮೊಣಕಾಲನ್ನು ಸಹ ತೋಯಿಸಿರಲಿಲ್ಲ. ಮುತ್ತೂರು ರಾಜ್ಯ ಸಮೀಪಿಸುತ್ತಿದಂತೆಯೇ ರಾಜ ಒಡ್ಡೋಲಗದಲ್ಲಿ ವಿಜೃಂಬಣೆಯ ಕೇಕೆ ಮೊಳೆಯುತ್ತಿತ್ತು. ದೇಶ, ವಿದೇಶದಿಂದ ರಾಜಕುಮಾರಿ ‘ದುರ್ಗಾದೇವಿ’ಯನ್ನು ವರಿಸಲು ನೂರಾರು ಯುವರಾಜರು ದಾವಿಸಿದ್ದರು. ತ್ರಿಮೂರ್ತಿಗಳ ಪಾದಗಳೂ ಸಹ ಸಮಾರಂಭಕ್ಕೆ ಬಂದು ನೆಲೆನಿಂತವು. ಕುಂಬಳಕಾಯಿ ರಾಜಮರ್ಯಾದೆಯಿಂದ ಪೂಜೆಗೊಂಡು ಪಂದ್ಯ ಸಜ್ಜಾಯಿತು. ಮೊದಲು ರಾಜಕುಮಾರ ಸರದಿ, ಒಬ್ಬೊಬ್ಬರಾಗಿ ಬಂದು ಪ್ರಯತ್ನಿಸಿದರೂ, ಎಲ್ಲರ ಕರಗಳು ಊನವಾದರೂ ಕಂಬಳಕಾಯಿಯ ರೋಮ ಮಾತ್ರ ಛದುರಲಿಲ್ಲ. ಕೊನೆ ಸರದಿ ಇವರದಾಗಿತ್ತು. ಗೂಳಿಯನ್ನು ತಮ್ಮಂದಿರು ಬೆನ್ನು ಚಪ್ಪರಿಸಿ ಕಳುಹಿಸಿದರು. ಗೂಳಿ ಉಡುಪು ಕಳಚಿ ಕಾಚಾದೊಂದಿಗೆ ಕುಂಬಳ ಕಾಯಿಯೆಡೆಗೆ ಧಾವಿಸುತ್ತಿದ್ದರೆ ಭೂಮಿಯು ಮೇಲೆ ಕೆಳಗಿಳಿದಂತಾಗುತ್ತಿತ್ತು. ಕುಂಬಳಕಾಯಿ ಬೆವೆತು ನೀರಿಳಿಯುತ್ತಿತ್ತು. ನೆಲ ಗುಡುಗಿದಂತೆ ಅಲ್ಲಿನ ನೆರೆದ ಜನರಿಗೆ ಬಾಸವಾಗುತ್ತಿತ್ತು. ‘ಗೂಳಿ’ ಕೈಮುಗಿದು ಮನೆದೇವ್ರು ಆದೋನಿ ಎಲ್ಲಮ್ಮಾಳನ್ನು ನೆನೆದು ಕೈ ಹಾಕಿದೆಡೆ ಕುಂಬಳ ಕಾಯಿ ಮಂಡಕ್ಕಿ ಚೀಲದಂತೆ ಮಸ್ತಕದ ಮೇಲೆ ಎದ್ದು ನಿಂತಿತು. ಸಭಿಕರ ಚಪ್ಪಾಳೆಯ ಶಬ್ದ ಮುಗಿಲ ಮುಟ್ಟಿ, ಕಿವಿಯಲ್ಲಿ ಹಿಂಡಾನೆ ಒದರಿದಂತಾಗಿತ್ತು. ವಚನಬದ್ಧನಾದ ‘ಸಕ್ರೇಶ್ವರ’ ಮಹಾರಾಜನು ಮಾತಿನ ಪ್ರಕಾರ ತನ್ನ ಮಗಳಾದ ‘ದುರ್ಗಾದೇವಿ’ಯನ್ನು ‘ಗೂಳಿ’ಗೆ ರಾಜ ಮರ್ಯಾದೆಯೊಂದಿಗೆ ವಿಜೃಂಬಣೆಯಿಂದ ಮದುವೆ ಮಾಡಿಸಿ, ಗಜದಳ, ಅಶ್ವದಳ, ಕಾಲ್ದಳ ಹಾಗೂ ರಾಜಕುಮಾರಿಗೆ ಸಾಕಾಗುವಷ್ಟು ಸಖಿಯರನ್ನು ಹಿಂದೆ ಕಳುಹಿಸಿ ಆನಂದಭಾಷ್ಪದೊಂದಿಗೆ ಬೀಳ್ಕೊಟ್ಟನು.
ಇತ್ತ ತ್ರಿಮೂರ್ತಿಗಳ ಪರಿವಾರ, ಕುಂಬಳಕಾಯಿ ಸಮೇತವಾಗಿ ರಾಜ ವೈಭವಗಳೊಂದಿಗೆ ಓಬಳಾಪುರದ ಕಡೆಗೆ ಹೆಜ್ಜೆ ಹಾಕಿತು. ರಾಜ, ಸೈನ್ಯ ಹಾಗೂ ರಾಜಕುಮಾರಿಯರನ್ನು ‘ವನ್ನಂಬಿಕ’ ಹೊಳೆಯು ತಡೆಯಿಡಿಯಿತು. ತ್ರಿಮೂರ್ತಿಗಳೇನೋ ಸಲೀಸಾಗಿ ದಾಟುವರು. ಆದರೆ ಅವರು ಚಿಂತಿಸತೊಡಗಿದರು ತಟ್ಟನೇ ಮಾರುತನ ಮಸ್ತಕದಲ್ಲಿ ಒಂದು ಸಲಹೆ ಸುಳಿದಾಡಿತು, ತಡಮಾಡದೇಭಿತ್ತರಿಸಿದ ಕುಂಬಳ ಕಾಯಿಯ ತುತೂ ಮಾಡಿ ಒಳ ತಿರುಳನ್ನು ತೆಗೆದು ಅದರಲ್ಲಿ ಇವರನ್ನೆಲ್ಲಾ ಹಾಕಿ, ಆಚೆಯ ದಡಕ್ಕೆ ಹೋದ ಮ್ಯಾಲೆ ತೆಗೆದರಾಯಿತು ಎಂದನು. ಒಳ್ಳೆಯ ಉಪಾಯವೆಂದು ‘ದಿಗಂತ’ ಸಣ್ಣತೂತು ಮಾಡಿ ಒಳಗಿನ ತಿರುಳನ್ನೆಲ್ಲಾ ಹೊರತೆಗೆದ, ‘ಗೂಳಿ’ ಯು ಅದರೊಳಕ್ಕೆ ರಾಣಿ, ಸಖಿಯರು, ಗಜದಳ, ಅಶ್ವದಳ, ಕಾಲ್ದಳ ಹೀಗೆ ಒಬ್ಬೊಬ್ಬರನ್ನಾಗಿ ಕಳಿಸಿ ಬಾಯಿ ಮುಚ್ಚಿದ. ನಂತರ ಆ ಕುಂಬಳಕಾಯಿಯನ್ನು ಆಚೆಯ ದಡದಲ್ಲಿದ್ದ ಮಾರುತನ ಕೈಗೆ ಎಸೆದ, ಅದು ಹೊಳೆ ದಂಡೆಗೆ ಬಿದ್ದು, ಮಾರುತ ಬಂದು ಇನ್ನೇನು ತಗೋಬೇಕು ಎನ್ನುವಷ್ಟರಲ್ಲಿ ನದಿಯಲ್ಲಿ ವಾಸವಾಗಿದ್ದ ಏಡಿಯೊಂದು ನೋಡಿ ತಕ್ಷಣವೇ ಹಿಡಿದು ನುಂಗಿ ನದಿಯ ಕಡೆಗೆ ತಿರುಗಿತು. ಇದ ನೋಡಿ ‘ಗೂಳಿ’ ಭರದಿಂದ ಏಡಿಯತ್ತ ಮುನ್ನಗ್ಗಿದ, ಮಾರುತ ದಿಗ್ಬ್ರಮೆಗೊಂಡು ಚಕಿತನಾದ. ಏಡಿ ನೀರೊಳಗೆ ಇನ್ನೇನು ಇಳಯುವಷ್ಟರಲ್ಲಿ ಕಾದು ಕುಳಿತ ಗುಳ್ಳೆ ನರಿಯೊಂದು ಓಡಿಬಂದು ಆ ಏಡಿಯ ಗಬಕ್ಕನೇ ನುಂಗಿ ನೆಗೆಯಲಾರಂಭಿಸಿತು.
ತ್ರಿಮೂರ್ತಿಗಳಿಗೆ ದಿಡೀರನೇ ಸಿಡಿಲೊಡೆದಂತಾಗಿ ನರಿಯ ಹಿಡಿಯಲು ಹಿಂದೆಯೇ ಬಾಲವಾದರು. ನರಿಯ ನೂರಾರು ಮೈಲುಗಳ ಓಟ ಇವರನ್ನು ಸುಸ್ತು ಮಾಡಿತ್ತು. ಅಡವಿಯಲ್ಲಿ ದಿಕ್ಕಿಗೊಬ್ಬರಂತೆ ಹುಡುಕಿ ನರಿಯ ಕಾಣದಂತಾದರು. ಕೆಲ ಕ್ಷಣದಲ್ಲಿಯೇ ಗೂಳಿಯ ನೇತ್ರ ಪರದೆಯ ಮೇಲೆ ಆ ಗುಳ್ಳೆ ನರಿಯ ಪ್ರತಿಬಿಂಬ ಸುಳಿದಾಡಿತು. ನರಿಯನ್ನು ಕಂಡು ಮತ್ತೆ ಹಿಂಬಾಲಿಸಿದ, ಸ್ವಲ್ಪದರಲ್ಲಿಯೇ ನರಿಯು ಸುಸ್ತಾಗಿ ಬೀಳುವ ಹಂತದಲ್ಲಿರುವಾಗಲೇ ಅಲ್ಲೊಬ್ಬ 500 ಅಡಿ ಪರ್ವತವನ್ನು ನೆಲ ಸಮ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು ಕೊಡಲಿಯನ್ನು ಬದಿಗಿರಿಸಿ. ಸಮಯ ಸದುಪಯೋಗದ ನರಿಯು ಮಲಗಿದವನ ಹಿಂಬದಿಯ ಕಾಲುಗಳು ದೊಡ್ಡ ದೊಡ್ಡ ಗುಹೆಗಳಂತೆ ಬಿರುಕು ಬಿಟ್ಟದ್ದರಲ್ಲಿ ಹೋಗಿ ಅವಿತುಕೊಂಡಿತು. ಗೂಳಿ ಅವನನ್ನು ನೋಡಿ ದಿಗ್ಬ್ರಮೆಗೊಂಡು ಕಾಲ ಬಿರುಕುಗಳಲ್ಲಿ ಇಣುಕಿಹಾಕಿದ. ನರಿಯ ಕಣ್ಣುಗಳು 1000 ವ್ಯಾಟ್ ಬಲ್ಬು ಹೊಳೆವಂತೆ ಬಾಸವಾಗುತ್ತಿತ್ತು. ಅಷ್ಟೊತ್ತಿಗಾಗಲೇ ಗೂಳಿ ಕೋಪದ ತುತ್ತ ತುದಿ ತಲುಪಿದ ಏನೂ ತೋಚದೇ ಬದಿಗಿದ್ದ ದೊಡ್ಡ ಬಂಡೆಯನ್ನು ಎತ್ತಿ ಹಿಂಬದಿಯ ಮೇಲೆ ದಭಾರನೆ ಹೇರಿದ. ಆದರೆ ಕಾಲು ಸ್ವಲ್ಪವೂ ಮಿಸುಗಲಿಲ್ಲ ಮಲಗಿಕೊಂಡವನಿಗೆ ಎಲ್ಲೋ ಇರುವೆ ಕಾಲತ್ತಿದಂತಾಗಿ ತೋರಿತ್ತು. ಗೂಳಿ ಇನ್ನೊಮ್ಮೆ ಆ ಬಂಡಿಯನ್ನು ಎತ್ತಿ ಜೋರಾಗಿ ಹಾಕಿದ ಅವನಿಗೆ ಎಚ್ಚರವಾಯಿತು. ಎದ್ದವನೇ ಗೂಳಿಯನ್ನು ಕಂಡು ಕಣ್ಣ ಕೆಂಪು ವiಡಿದವನೇ ಕೊಲ್ಲಲು ಮುಂದಾದ. ಇವನು ಆ ಮುಗಿಲತನಕ ದೈತ್ಯ ದೇಹ ಕಂಡು ಗೂಳಿ ಓಡಲಾರಂಭಿಸಿದ ಆ ವ್ಯಕ್ತಿ ಹಿಂದೆಯೇ ಬೆನ್ನಟ್ಟಿದರೆ, ಬಿರುಕಿನಲ್ಲಿಯ ನರಿ ಬೆಚ್ಚಗೆ ಜೀವಹಿಡಿದಿತ್ತು.
ಮುಂದೆ ಒಬ್ಬ ಅಜ್ಜಿ ಹದಿನೈದು ಮದ್ದಾನೆಗಳನ್ನು ಮೇಯಿಸಿಕೊಂತ ಕೂತಿತ್ತು. ದೂರದಲ್ಲಿ ಬರುವ ಇವರನ್ನು ಕಂಡು ಕಳ್ಳರಿರಬೇಕೆಂದು ಭಾವಿಸಿ ಕ್ಷಣದಲ್ಲೇ ಆ ಆನೆಗಳನ್ನೆಲ್ಲಾ ತಗೊಂಡು ಹುಡಿಯಲ್ಲಿ ಕಟ್ಟಿಕೊಂಡು ಸುಮ್ಮನೇ ಕುಳಿತಳು. ಗೂಳಿ ತೇಕುತ್ತಾ ಅಜ್ಜಿಯ ಬಳಿಗೆ ಬಂದು ಅಜ್ಜಿ ನಾನೀಗ ಸಾವಿನಂಚಿನಲ್ಲಿದ್ದೇನೆ ದಯವಿಟ್ಟು ರಕ್ಷಿಸು ನಡೆದದ್ದೆಲ್ಲಾ ಅನಂತರ ಹೇಳುತ್ತೇನೆ ಎಂದು ಅಂಗಲಾಚುತ್ತಾನೆ. ಅಜ್ಜಿ ಕರುಣೆ ತೋರಿಸಿ ಬಾ ಎಂದು ಸೀರೆಯಲ್ಲಿ ಮುಚ್ಚಿಟ್ಟುಕೊಂಡಳು.
ಧೈತ್ಯ ವ್ಯಕ್ತಿ ಅಜ್ಜಿಯ ಕಡೆಗೆ ಧಾವಿಸಿ ಬೇ ಅಜ್ಜೀ ಇಲ್ಲೊಬ್ಬ ಓಡಿಬಂದಲ್ಲಾ ಎಲ್ಲೋದನವನು ? ಯಾರು ಬಂದಿಲ್ಲ. ನಾನು ನೋಡಿಲ್ಲವೆಂದು ಅಜ್ಜಿಯಿಂದ ಉತ್ತರ. ಅವನು ಸಿಟ್ಟಿನಿಂದ ಪುನಃ “ಬೇ ಹೇಳುತ್ತೀಯಾ ಅಥವಾ ಇಲ್ವಾ ? ನೆಟ್ಟಗಿರಕಿಲ್ಲ ನೋಡು ಎಂದು ಗುಡುಗಿದ. ಅಜ್ಜಿಯ ಸಹನೆಯ ಎಲ್ಲೆ ಮೀರಿ ಹುರಿಗನ್ಣಿನಿಂದ ನೋಡಿ ಮೂಗಿನಿಂದ ಜೋರಾಗಿ ಸೀಂತು ಹಸಿರು ಗೊಣ್ಣೆಯ ರಾಶಿ-ರಾಶಿಯಾಗಿ ಆ ದೈತ್ಯ ಮಾನವನ ಮೇಲೆ ಎಸೆದಳು . ಅವನು ಉಸಿರಾಡಲು ಸಹ ಸಾಧ್ಯವಾಗದೆ ಲಿಬಿ ಲಿಬಿ ಒದ್ದಾಡಿ ಕೊನೆಯುಸಿರೆಳೆದ. ನಂತರ ಅಜ್ಜಿ ಗೂಳಿಯನ್ನು ಹೊರಬರುವಂತೆ ಹೇಳಿದಾಗ ಗೂಳಿಯು ಹೊರಬಂದು ಅಲ್ಲಿಯವರೆಗೂ ನಡೆದ ಕಥೆಯನ್ನೆಲ್ಲಾ ಅಜ್ಜಿಯ ಬಳಿ ವಿವರವಾಗಿ ನಿವೇಧಿಸಿದ. ನಂತರ ಅಜ್ಜಿಯು ಜೋರಾಗಿ ಆ ಗೊಣ್ಣೆ ರಾಶಿಯ ಊದಿ ಅವನನ್ನು ಹೊರಗೆಡವಿ, ಅವನ ಹಿಂಬದಿ ಸೀಳಿ ನರಿಯನ್ನು ಹೊರಗೆಳೆದು, ಹೊಟ್ಟೆ ಸೀಳಿ ಏಡಿಯನ್ನು ಹೊರ ತೆಗೆದು, ಏಡಿ ದೇಹ ಸೀಳಿ ಕುಂಬಳ ಕಾಯಿಯ ಹೊರತೆಗೆಯುತ್ತಿದ್ದಂತೆ ! ತಮ್ಮಂದಿರಾದ “ದಿಗಂತ” ಹಾಗೂ “ಮಾರುತ” ಕಾಡೆಲ್ಲಾ ಅಲೆ ಅಲೆದು ಸುಸ್ತಾಗಿ ಅಲ್ಲಿಗೆ ಬಂದು ಸೇರಿದರು. ಕುಂಬಳ ಕಾಯಿಯ ಮುಚ್ಚಳ ತೆಗೆದು ರಾಣಿ, ಸಖಿಯರು, ಸೈನಿಕರನ್ನು ಹೊರತೆಗೆದು ಗೂಳಿ ನಡೆದ ವಿಷಯವನ್ನೆಲ್ಲಾ ಹೇಳುತ್ತಿದ್ದರೆ ... ಅವರೆಲ್ಲಾ ನಂಬದವರಂತೆ ಆಲಿಸುತ್ತಿದ್ದರು. ನಂತರ ಅಜ್ಜಿ ಹುಡಿ ಬಿಚ್ಚಿ ಹದಿನೈದು ಆನೆಗಳನ್ನು ಹೊರ ಬಿಡುತ್ತಿದ್ದಂತೆಯೇ ಘರ್ಜಿಸುತ್ತಾ ಆ ಆನೆಗಳೆಲ್ಲ ಬೆರೆತು ಆಡಿದವು.
ತ್ರಿಮೂರ್ತಿಗಳು ಅಜ್ಜಿಯನ್ನು ಜೊತೆಗೆ ಕರೆದುಕೊಂಡು ತಮ್ಮ ಪರಿವಾರದೊಂದಿಗೆ ಓಬಳಾಪುರದತ್ತ ಹೆಜ್ಜೆ ಹಾಕಿದರು.
ಲೇಖಕರ ವಿಳಾಸ: ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ಲೇಖಕರು, ಶಿಕ್ಷಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794