ಮಂಗಳವಾರ, ಮೇ 5, 2015

ಕವಿ, ಪ್ರಕಾಶಕ, ಪ್ರಾಧ್ಯಾಪಕ – ಎಂ.ಬಿ.ನಟರಾಜು



ಕವಿ, ಪ್ರಕಾಶಕ, ಪ್ರಾಧ್ಯಾಪಕ – ಎಂ.ಬಿ.ನಟರಾಜು
ಭಾಷೆಯನ್ನು ಬಳಸುವ ವೈಖರಿಯಲ್ಲೇ ನಮ್ಮ ಕಾಳಜಿಗಳು ಕೂಡ ಇರುವುದು. ಕಾವ್ಯದಂತಹ ತೀವ್ರ ಜೀವನ ಸ್ಪರ್ಶದ ಪ್ರಕ್ರಿಯೆಯಲ್ಲಿ ನಮ್ಮ ಅಂತರಾಳದ ಇಷ್ಟಗಳು ಹೊರಬೀಳುವುದು ಕುತೂಹಲಕರವಾಗಿರುತ್ತದೆ.- ಪಿ.ಲಂಕೇಶ್.
 ಕಾವ್ಯದಲ್ಲಿ ಅನುಭವ ಕಾವ್ಯರತಿಯಾಗಿ ಹೊರಹೊಮ್ಮಬೇಕು. ಭಾವಾಭಿವ್ಯಕ್ತಿಗೆ ಕಾವ್ಯಕ್ಷೇತ್ರ ಸುಲಭವೆಂದು ಭಾವಿಸಿ ಅನೇಕರು ಕವಿಗಳಾಗ ಹೊರಟು ಕಾವ್ಯದ ರೂಪ, ರಚನೆ, ಸ್ವರೂಪ ಸ್ಪಷ್ಟವಾಗಿ ಅರ್ಥವಾಗದೆ ಸೋತ ಕವಿಗಳೇ ಹೆಚ್ಚು. ಕಾವ್ಯ ಸಾಹಿತ್ಯವನ್ನು ಸೂತ್ರಿಕರಿಸುವ ಕಾರ್ಯ ಕವಿಯಿಂದಾಗಬಾರದು, ಸಾರ್ವತ್ರಿಕಗೊಳಿಸುವ ಕ್ರಿಯೆಯಾಗಬೇಕು. ಕವಿತೆ ಓದುಗನ, ಜನ ಸಾಮಾನ್ಯನ ಆಸೆ, ಅಭಿರುಚಿ, ಆಕಾಂಕ್ಷೆ ಮನೋಧರ್ಮಗಳಿಗೆ ತಕ್ಕುದ್ದಾಗಿರಬೇಕು.
ಗಿಲ್ವಾರ್ಸೆರ್ ಎಂಬ ಫ್ರಾನ್ಸ್ ಕವಿ ಓಂದು ಕಡೆ  ‘ಗದ್ಯ ಮಾತನಾಡುತ್ತದೆ-ಪದ್ಯ ಹಾಡುತ್ತದೆ’ ಎಂದು ಹೇಳಿದ್ದಾರೆ. ಅಂತೆಯೇ ಗದ್ಯ ಹಾಗೂ ಪದ್ಯಗಳೆರಡರ ಮೂಲಕವೂ ಸಮಾಜದೊಂದಿಗೆ ಸಂವಾದಿಸುತ್ತಲೇ ಬಂದು ಸಾಮಾಜವಾದಿ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಕಳೆದ ನಾಲ್ಕೈದು ದಶಕಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಕಾವ್ಯ, ಲಲಿತ ಪ್ರಬಂಧ, ಜಾನಪದ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಎಂ.ಬಿ.ನಟರಾಜುರವರು.
ಶ್ರೀಯುತ ಎಂ.ಬಿ.ನಟರಾಜುರವರು ಕ್ರಿ.ಶ.1943 ಅಕ್ಟೋಬರ್ 27 ರಂದು ಹಾಸನ ನಗರದಲ್ಲಿ ಶ್ರೀ ಎಂ.ಬೊಬ್ಬಯ್ಯ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರರಾಗಿ ಜನಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ 1949 ರಿಂದ 1967 ರವರೆಗೂ ಹಾಸನದಲ್ಲೇ ಪೂರೈಸಿದ ನಟರಾಜುರವರು 1967 ರಿಂದ 1969 ರವರೆಗೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವು ಮುಗಿಸಿದರು.
ವೃತ್ತಿ ಃ ಕ್ರಿ.ಶ.1969-70 ರಲ್ಲಿ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಒಂದು ವರ್ಷ ಪೂರೈಸಿ 1970 ರಲ್ಲಿ ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ 2001 ರವರೆಗೂ ಇಲ್ಲಿಯೇ ಸೇವೆ ಸಲ್ಲಿಸಿ ನವೃತ್ತಿಯಾಗಿದ್ದಾರೆ. ಬೋಧನೆಯ ಜೊತೆ-ಜೊತೆಗೆ ಸಾಹಿತ್ಯ, ವಿಚಾರ ಹಾಗೂ ಸಾಮಾಜಿಕ ತಲ್ಲಣಗಳತ್ತಲೂ ತಮ್ಮ ದೃಷ್ಠಿ ಹಾಯಿಸಿದರು.
ಸಾಹಿತ್ಯ ಕ್ಷೇತ್ರ ಃ ನಸುಕು ಕರಗುವ ಮುನ್ನ-1974(ಕಾವ್ಯ), ನೋಟಕ(ಸಣ್ಣ ಕಥೆಗಳು), ಮಲೆನಾಡಿನ ಕಥೆಗಳು(ಸಂಪಾದಿತ ಕೃತಿ), ಹಾಡಾಕೆ ಬೈಗುಂಟೆ ಬೆಳಕುಂಟೆ(ಸಂಪಾದಿತ ಜನಪದ ಗೀತೆಗಳು).
ಇವರ ‘ನಸುಕು ಕರಗುವ ಮುನ್ನ’ ಮೊದಲ ಕವನ ಸಂಕಲನವು 1974 ರಲ್ಲಿ ಪ್ರಥಮಾವೃತ್ತಿಯಾಗಿ ಸಾಗರದ ಅಕ್ಷರ ಪ್ರಕಾಶನದಿಂದ ಪ್ರಟಗೊಂಡಿತು. 68 ಪುಟಗಳ ಈ ಕೃತಿಯು ಆಗ 5 ರೂಪಾಯಿಗಳ ಮುಖಬೆಲೆ ಹೊಂದಿದೆ. ಡಾ.ಕೆ.ಎಸ್.ನಿಸ್ಸಾರ್ ಅಹಮದ್ ಅವರ ಮುನ್ನುಡಿಯ ತೋರಣ ಈ ಕೃತಿಗೆ ಕಳೆ ಕಟ್ಟಿದೆ.
‘ಸ್ವಗತ’ ಕವಿತೆಯಿಂದ ‘ಚಿತ್ರಗಳು’ ಕವಿತೆಯವರೆಗೆ ಒಟ್ಟು 28 ಕಾವ್ಯ ಕುಸುಮಗಳಿಲ್ಲಿ ಅರಳಿವೆ. ಇವರ ಕವಿತೆಯಲ್ಲಿ ವೈಚಾರಿಕ ಹೊಳವಿದೆ. ಸಾಮಾಜಿಕ ಜಂಜಾಟಗಳ ಆರ್ತನಾದವಿದೆ. ಪರಿಸರದ ಅಗಮ್ಯ ನೋಟವಿದೆ. ವಸ್ತು ಸ್ಥಿತಿಯ ಪರಾಮರ್ಶೆಯಿದೆ. ಬದುಕಿನ ಬವಣೆ ಅನಾವರಣಗೊಂಡಿದೆ. ಹಸಿವಿನ ಆಕ್ರಂದನದ ಕೂಗು ಧ್ವನಿಸಿದೆ. ಮಾನವನ ಸಾರ್ಥಕ ಜೀವನಕ್ಕೆ ಬೇಕಾದ ಮೌಲ್ಯಗಳ ಹುಡುಕಾಟವನ್ನು ಕವಿಯಿಲ್ಲಿ ಮಾಡಿದ್ದಾರೆ.

..ಕತ್ತರಿಸಿದ ಕಬ್ಬು ಕೂಳೆ ನಾನು
ಕರಗಲಾರೆ..
ಕೆಸರಾದರೂ
ದಿನಗಳೆದಂತೆ
ನಾನಿಲ್ಲದಿದ್ದರೂ
ಹೊತ್ತು ಬಂದೀತು ನನ್ನ ತನಿ
ರಸಪುಷ್ಠಿಯಲ್ಲಿ
ಕಂದು ಹಳದಿ ಪಟ್ಟೆ ಪಟ್ಟೆಗಳಲ್ಲಿ
ಗೆಣ್ಣು ಕುಚ್ಚುಗಳಲ್ಲಿ…(ಸ್ವಗತ)
ಕವಿ ತನ್ನಲ್ಲಿರುವ ಆಂತರಿಕ ಶಕ್ತಿ ಚೈತನ್ಯದ ಉತ್ಕøಷ್ಟತೆ ಕುರಿತು ಕಬ್ಬಿನ ರೂಪಕದ ಮೂಲಕ ಸೊಗಸಾಗಿ ಚತ್ರಿಸಿದ್ದಾರೆ. ಇದು ಕೇವಲ ವ್ಯಕ್ತಿಚಿತ್ರಣವನ್ನು ಮಾತ್ರ ಕಟ್ಟಿಕೊಡದೆ ಜೈವಿಕ ಕುಲದ ಸಾರ್ವತ್ರಿಕ ಬದುಕಿನ ಹಿನ್ನೆಲೆಯಲ್ಲಿ ಛಲಗಾರಿಕೆಯನ್ನು ತೋರಿಸುತ್ತದೆ.
ಕನ್ನಡದ ಖ್ಯಾತ ಕವಿ ಡಾ.ಕೆ.ಎಸ್.ನಿಸ್ಸಾರ್ ಅಹಮದ್ ರವರು ‘ನಸುಕು ಕರಗುವ ಮುನ್ನ’ ಕೃತಿಯ ಮುನ್ನುಡಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ “ಸಾಮಾನ್ಯವಾಗಿ ನಟರಾಜುರವರ ಪದ್ಯ ಬೆಳೆಯುವುದು ಚಿತ್ರಗಳಿಂದ. ಹೇಳಿಕೆಗಳೇನಿದ್ದರೂ ಈ ಚಿತ್ರಗಳನ್ನು ಬೆಸೆದು ಏಕತೆಯನ್ನು ಸಾಧಿಸಲು ತುಡಿಯುತ್ತವೆ. ಕೆಲವು ಪದ್ಯಗಳಲ್ಲಿ ಚಿತ್ರಗಳ ಉದ್ದೇಶ ಕೇವಲ ತಮ್ಮ ಪ್ರತ್ಯೇಕ ಮೋಹಕತೆ, ಚೆಲ್ವಿಕೆಗಳಲ್ಲೇ ಮುಗಿಯದೇ ಒಟ್ಟು ಪದ್ಯದ ಬೆಳವಣಿಗೆಗೆ ಶ್ರಮಿಸುವುದರಿಂದ ಅವು ಅರ್ಥಪೂರ್ಣವಾಗುವ ದಾರಿ ಹಿಡಿಯುತ್ತವೆ. ಇಲ್ಲಿನ ಬಹುತೇಕ ಪದ್ಯಗಳಲ್ಲಿ ಮೇಲುನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ಕಾಣುವ ಚಿತ್ರಗಳು, ಕವಿಯ ಅನುಭವದ ಚೌಕಟ್ಟಿನಲ್ಲಿ ಅತಾರ್ಕಿಕ ಸಂಬಂಧವನ್ನು ರೂಢಿಸಿಕೊಂಡು ವಸ್ತುವಿನ ವಿವಿಧ ಹಂತಗಳನ್ನು ಸಂಕೇತಿಸಲು ಪ್ರಯತ್ನಿಸುವ ವಿಧಾನವನ್ನು ಕಾಣುತ್ತೇವೆ. ಇದಕ್ಕಿಂತ ಭಿನ್ನವಾದ ವಿಧಾನವೂ ಉಂಟು. ಒಂದೇ ಚಿತ್ರ ತನ್ನ ಹಲವಾರು ವಿವರಗಳೊಂದಿಗೆ ಪದ್ಯದುದ್ದಕ್ಕೂ ಹರಡಿ ಕವಿಯ ಮನೋಗತಕ್ಕೆ ಉಚಿತ ಪ್ರತೀಕವಾಗುವುದು.
ಉದಾಹರಣೆಗೆ ಗಾಳಿಪಟ, ರೋಗದ ಮಕ್ಕಳು ಈ ಎರಡು ವಿಧಾನ ಹೇಗೆ ಸಾಧಿಸುತ್ತವೆ? ಅವಿಗಳ ಯಶಸ್ಸು, ಅಪಯಶಸ್ಸು ಎಲ್ಲಿ? ಎನ್ನುವುದನ್ನು ಗುರುತಿಸುವುದರಿಂದ ನಟರಾಜರ ಕಾವ್ಯ ಸಾಮಾಥ್ರ್ಯವನ್ನು ನಾವೂ ಪರೋಕ್ಷವಾಗಿ ಅರ್ಥ ಮಾಡಿಕೊಂಡಂತಾಗುದರಿಂದ ಪ್ರಾತಿನಿಧಿಕವಾಗಿ ಅವನ್ನಿಲ್ಲಿ ವಿವೇಚಿಸಬಹುದು”.
ಪ್ರಕಾಶನ ಕ್ಷೇತ್ರ ಃ ಎಂ.ಬಿ.ನಟರಾಜರು ಕೇವಲ ಪಾಠ-ಪ್ರವಚನ, ಕಾವ್ಯ-ಬರಹಕ್ಕೆ ಮಾತ್ರ ಸೀಮಿತಗೊಳ್ಳದೆ ಅವರ ಅಭಿರುಚಿಯನ್ನು ಪ್ರಕಾಶನದತ್ತಲೂ ವಿಸ್ತರಿಸಿಕೊಂಡವರು. ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿಕೊಂಡು 1975 ರಲ್ಲಿ ‘ಪರಿಸರ ಸಾಹಿತ್ಯ ಪ್ರಕಾಶನ’ವನ್ನು ಶಿವಮೊಗ್ಗದಲ್ಲಿ  ಆರಂಭಿಸಿ ನಾಡಿನ ಗಣ್ಯ ಸಾಹಿತಿಗಳ ಸಾಕಷ್ಟು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುವ ಕಾರ್ಯ ಮಾಡಿದರು.
ಶಾಂತಿನಾಥ ದೇಸಾಯಿ, ಕೆ.ಪಿ.ಪೂರ್ಣಚಂದ್ರ ತೇಜಸ್ವೀ, ಡಾ.ಎಲ್.ಬಸವರಾಜು ಮುಂತಾದ ಹಿರಿಯರ 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವುದರ ಮೂಲಕ ಕನ್ನಡ ಪುಸ್ತಕ ಪ್ರಕಾಶನದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ ಕೀರ್ತಿ ನಟರಾಜುರವರದ್ದು ಎಂದರೆ ಅತಿಶಯೋಕ್ತಿಯಾಗಲಾರದು. ಸಮಾಜವಾದಿ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟಿದ್ದ ಇವರು ಅಂತಹ ತತ್ತ್ವ ಸಿದ್ಧಾಂತಗಳಡಿಯಲ್ಲೇ ಪುಸ್ತಕ ಪ್ರಕಟಣೆ ಮಾಡಿದುದು ಸ್ತುತ್ಯಾರ್ಹವಾದುದು.
ನಿವೃತ್ತಿ ಜೀವನ ಃ 2001 ರಲ್ಲಿ ತಮ್ಮ ಉಪಧ್ಯಾಯ ವೃತ್ತಿಯಿಂದ ನಿವೃತ್ತಿಗೊಂಡನಂತರ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಕೃಷಿ ಹಾಗೂ ತೋಟಗಾರಿಕೆಯತ್ತ ಹೆಚ್ಚು ಗಮನ ನೀಡಿದ್ದಾರೆ. ಸದ್ಯ ಶಿವಮೊಗ್ಗದ ಶರಾವತಿ ನಗರದ ಬಾಲ ಯೇಸು ಚರ್ಚ್ ಹತ್ತಿರವಿರುವ ನಂ-49, ಸ್ನೇಹ ನಿಲಯದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ 72 ವಯೋಮಾನದ ಎಂ.ಬಿ.ನಟರಾಜುರವರು ನಮ್ಮೆಲ್ಲರಿಗೂ ಆದರ್ಶಪ್ರಿಯರಾದವರೆಂದರೆ ತಪ್ಪಾಗಲಾರದು. ಅವರ ಸರಳ ನಡೆ ನುಡಿ ಹಿರಿಯ-ಕಿರಿಯರೆನ್ನದೇ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ, ಪ್ರತಿಕ್ರಿಯಿಸುವ ಮನೋಭಾವ ಅಪ್ಯಾಯಮಾನವಾದುದು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ