ಶನಿವಾರ, ಮೇ 9, 2015

ಕವಿ, ಸಾಹಿತಿ, ವೇದಮಯಿ - ಹರಿಹರಪುರ ಶ್ರೀಧರ್



ಕವಿ, ಸಾಹಿತಿ, ವೇದಮಯಿ - ಹರಿಹರಪುರ ಶ್ರೀಧರ್
ಸಮಾಜದ ಸರ್ವಹಿತ ಬಯಸುವುದೆ ಸಾಹಿತ್ಯದ ಉದ್ದೇಶ. ಸಾಹಿತ್ಯ ಇರುವುದೆ ಸಾಮಾಜದ ಹಿತಕ್ಕೋಸ್ಕರ, ಆನಂದಕ್ಕೋಸ್ಕರವಾಗಿ. ಯಾವ ಸಾಹಿತ್ಯ ಸತ್‍ಚಿಂತನೆಗೆ ಎಡೆಮಾಡಿಕೊಡತ್ತದೋ ಅದು ಸಾರ್ವಕಾಲಿಕವಾಗಿ ನೆಲೆನಿಲ್ಲುತ್ತದೆ. ಮೂಲವೇದ, ಉಪನಿಷತ್ತುಗಳು, ವಚನಗಳು, ಬೋಗ-ಸುಳಾದಿಗಳು, ಕೀರ್ತನೆಗಳು ಈ ದೆಸೆಯಲ್ಲಿ ಗುರುತಿಸಬಹುದಾದ ಸಾಹಿತ್ಯ ಸಂಗತಿಗಳು.
ವೇದವೆಂದರೆ ಮೂಗು ಮುರಿಯುವವರೆ ಅಧಿಕ! ಆದರೆ ಕಾಲಾನುಕ್ರಮೇಣ ವೇದಗಳಲ್ಲಿ ಬದಲಾವಣೆಯಾಗಿರುವುದು ಸುಳ್ಳಲ್ಲ! ಆದ್ದರಿಂದಲೇ ಹರಿಹರಪುರ ಶ್ರೀಧರ್ ಮೂಲವೇದದ ತಿರುಳನ್ನು ಪಸರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಿಸಿದ್ದಾರೆ. ವೇದಗಳು ಯಾವುದೆ ಒಂದು ಜಾತಿ, ವರ್ಗ, ಧರ್ಮಕ್ಕೆ ಸೀಮಿತವಲ್ಲ. ಅವು ಸಾರ್ವತ್ರಿಕ ಎನ್ನುವುದನ್ನು ಮನಗಂಡ ಶ್ರೀಧರ್ ಎಲ್ಲರಿಗಾಗಿ ವೇದ ಎಂಬ ಪರಿಕಲ್ಪನೆಯಲ್ಲಿ ಜಾತ್ಯಾತೀತವಾಗಿ ಅರುಹುತ್ತ ಬಂದಿದ್ದಾರೆ.
ಜನನ ಃ ಶ್ರೀಯುತ ಹರಿಹರಪುರ ಶ್ರೀಧರ್ ಕ್ರಿ.ಶ.1954 ಡಿಸೆಂಬರ್ 10 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರಿಹರಪುರದ ಶ್ರೀ ನಾಗರಾಜಯ್ಯ ಹಾಗೂ ಶ್ರೀಮತಿ ನರಸಮ್ಮ ಬ್ರಾಹ್ಮಣ ದಂಪತಿಗಳ ಉದರದಲ್ಲಿ ಜನಿಸಿದರು.
ಶಿಕ್ಷಣ ಃ ಹರಿಹರಪುರದಲ್ಲಿಯೇ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಊರಿಗೆ ಸಮೀಪವಿರುವ ಚಾಕೇನಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಸಿಖ್ಷಣವನ್ನು ಪೂರೈಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪುನಃ ಹಾಸನದಲ್ಲಿ ಒಂದು ವರ್ಷ ಐಟಿಐ ಮಾಡಿ ನಂತರ ಬೆಂಗಳೂರಿನ ಭಾರತೀಯ ದೂರವಾಣಿ ಕಾರ್ಖಾನೆ ಸಂಸ್ಥೆಯಲ್ಲಿ ನ್ಯಾಷನಲ್ ಅಪ್ರೆಂಟೀಸ್ ತರಬೇತಿ ಪಡೆದರು.
ವೃತ್ತಿ ಃ ಕ್ರಿ.ಶ.1977 ರಲ್ಲಿ ಕೋಲಾರದ ಕೆಜಿಎಫ್ ನಲ್ಲಿರುವ ಭಾರತೀಯ ಗೋಲ್ಡ ಮೇನ್ಸ್ ಲಿಮಿಟೆಡ್‍ನಲ್ಲಿ ಎಲೆಕ್ಟೀಷಿಯನ್ ಆಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕ್ರಿ.ಶ.1979 ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ವಿದ್ಯುತ್ ಪ್ರಸರಣ ನಿಗಮದಲ್ಲಿ ಮೇಲ್ವೀಚಾರಕರಾಗಿ ಕೆಲಸಕ್ಕೆ ಸೇರಿಕೊಂಡರು. ಹೊಳೆನರಸೀಪುರ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸಿ ಕ್ರಿ.ಶ 2000 ಸಾಲಿನಲ್ಲಿ ಹಾಸನದ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಿರಿಯ ಇಂಜೀನಿಯರ್ ಆಗಿ ಬಡ್ತಿಹೊಂದಿದರು.  ಹನ್ನೊಂದು ವರ್ಷಗಳ ಕಾಲ ಇಲ್ಲಿ ಸೇವೆಮಾಡಿ 2011 ರಲ್ಲಿ ಸಾಮಾಜಿಕ ಕಾರ್ಯದೊತ್ತಡ, ವೇದ ಪ್ರಸಾರ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವುದರ ಸಲುವಾಗಿ ಸ್ವಯಂ ಸೇವಾ ನಿವೃತ್ತಿ ಹೊಂದಿದರು.
ಸಾಹಿತ್ಯ ಕ್ಷೇತ್ರ ಃ ‘ತಿರುಳು’ - ಹಾಸನದ ಮನೆ ಮನೆ ಕವಿಗೋಷ್ಠಿಯ ಹಿರಿಯ ಸದಸ್ಯರಲ್ಲೊಬ್ಬರಾದ ಶ್ರೀಧರ್ ಅವರು ವೃತ್ತಿಯಲ್ಲಿದ್ದಾಗಲೇ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡವರು. 2006 ಜುಲೈ 2 ರಂದು ಶ್ರೀ ಶಂಕರಮಠದಲ್ಲಿ ನಡೆದ 116 ನೆಯ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹತ್ತು ಭಾವಗೀತೆಗಳ ‘ತಿರುಳು’ ಎಂಬ 16 ಪುಟಗಳ ಪುಟ್ಟ ಕವನ ಸಂಕಲನ ಬಿಡುಗಡೆಯಾಯಿತು. ಇದು ಕನ್ನಡ ಸಾಹಿತ್ಯಕ್ಕೆ ಶ್ರೀಧರ್ ಅವರ ಚೊಚ್ಚಲ ಕಾಣಿಕೆ. ಈ ಕೃತಿ ಕುರಿತು ವಿಚಾರ ಸಾಹಿತಿ ಚಂದ್ರಕಾಂತ ಪಡೆಸೂರ ವಿಮರ್ಶೆ ಮಾಡಿದ್ದಾರೆ. ಹಾಸನದ ಖ್ಯಾತ ಯುವ ಗಾಯಕಿ ಕುಮಾರಿ ಇಂಚರ ನಾಗೇಶ್ ಹಾಗೂ ಶ್ರೀಮತಿ ಲಲಿತರಮೇಶ್ ಹಾಡಿದ್ದಾರೆ.
ಇದ್ದಿರಬೇಕು ನಿನ್ನಂತೆ ಸದ್ದಿಲ್ಲದಂತೆ
ನೀನಿರುವ ಕಾಲದಲಿ ಪರಿಮಳವ ಹರಡಿ
ಬಹುಬೇಗ ನೀ ಬಾಡುವೆಯಲ್ಲಾ
ನಿನ್ನನಾರು ಬಹುಕಾಲ ಇರಬೇಡ ಎಂದವರು..(ಇದ್ದಿರಬೇಕು)
ಈ ಕವಿತೆಯಲ್ಲಿ ಕವಿ ಶ್ರೀಧರ್ ಗಿಡ, ಮರ, ಬಳ್ಳಿ ಹೂವುಗಳ ಮಹತ್ವವನ್ನು ಸಾರಿದ್ದಾರೆ. ಇದೆ ಕವಿತೆಯಲ್ಲಿ ಮುಂದುವರೆದು ನನ್ನನ್ನೇ ತೇಯುತ್ತಾ ಕರಗಿಹೋಗುವೆ ನೀನು, ಅಳಿಯುವಾಗಲೂ ಅಳದೆ ಕೊಡುವೆ ಶ್ರೀಗಂಧವನು, ನಿನ್ನ ಕೊರಡೆಂದ ನಾ ಕೊನೆಗಾಲದಲ್ಲಿ ಸುಟ್ಟು ಬೂದಿಯಾಗದಿರೆ ಕೊಳೆತು ನಾರುವೆನಿಲ್ಲಿ ಎನ್ನುವುದರ ಮೂಲಕ ಪರಿಸರದ ಅದರಲ್ಲೂ ಮರ ಹಾಗೂ ಹೂವಿನ ಅಗತ್ಯದ, ಮಹತ್ವದದ ಬಗ್ಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದಾರೆ.
ಅಂದು
ನನ್ನಮ್ಮ ತುತ್ತಿನೊಡೆ
ಕೊಟ್ಟಿದ್ದ ಮುತ್ತು,
ಒಣ ರೊಟ್ಟಿ-ಚಟ್ನಿ, ಸವಿಮಾತು,
ಆಹ! ಅದೆಂತ ರುಚಿ! ಎಷ್ಟು ಹಿತ !!!(ಅಮ್ಮನಾ ಕೈ ತುತ್ತು)
ಅಮ್ಮನಾ ಕೈತುತ್ತು ಕವಿತೆಯಲ್ಲಿ ಕವಿ ತನ್ನ ತಾಯಿ ನೀಡುವ ಕೈ ತುತ್ತಿನಲ್ಲಿರುವ ಮಾತೃವಾತ್ಸಲ್ಯವನ್ನು, ರುಚಿಯನ್ನು, ಆ ವಿಶೇಷ ಸವಿಯನ್ನು ಅನುಭವಿಸಿ ಬರೆದಿದ್ದಾರೆ.
ಜೀವನವೇದ ಃ 2015 ರಲ್ಲಿ ಪ್ರಕಟವಾಗಿರುವ 272 ಪುಟಗಳ ಜೀವನವೇದ ಕೃತಿಯನ್ನು ಬೆಂಗಳೂರಿನ ಸಮೃದ್ಧ ಸಾಹಿತ್ಯ ಪ್ರಕಾಶನವು ಪ್ರಕಟಣೆ ಮಾಡಿದೆ. ಇದು ಸಮೃದ್ಧ ಸಾಹಿತ್ಯ ಪ್ರಕಾಶನದ ಮೂವತ್ತೇಳನೆಯ ಪ್ರಕಟಣೆಯಾಗಿದೆ. ಇವರ ಗುರುಗಳಾದ ಸುಧಾಕರ ಶರ್ಮರವರ ತತ್ತ್ವಾದರ್ಶಗಳಿಗೆ ಪ್ರಭಾವಿತರಾದ ಶ್ರೀಧರ್ ಅವರಂತೆ ಇಲ್ಲಿಯೂ ಮೂಲವೇದದ ಉದ್ದೇಶವನ್ನು ಪಸರಿಸಬೇಕು, ವೇದ ಯಾವುದೆ ಒಂದು ಗುಂಪಿನ ಆಸ್ತಿಯಲ್ಲ! ಒಂದು ಗುಂಪಿಗೆ ಮಾತ್ರ ಸೀಮಿತವಲ್ಲ ಇದರ ಮೂಲ ಉದ್ದೇಶದಂತೆ ಇದು ಜನಸಾಮಾನ್ಯರಿಗೆ ತಲುಪಬೇಕೆಂಬ ಮಹದಾಶಯವಿಟ್ಟುಕೊಂಡು ಶ್ರೀಧರ್ ಅವರು ಹಾಸನದಲ್ಲಿ ವೇದ ಭಾರತಿಯನ್ನು ಸ್ಥಾಪಿಸಿದರು. ಆ ಮೂಲಕ  ಪ್ರತಿದಿನ ಸಂಜೆ 6 ರಂದ 7 ರವರೆಗೆ ಅವರ ವೇದಪಾಠಶಾಲೆಯಲ್ಲಿ ಪಾಠ ಪ್ರವಚನಗಳನ್ನು, ಅಗ್ನಿಹೋತ್ರಗಳನ್ನು, ಮೂಲ ಮಂತ್ರಗಳನ್ನು ಪಠಿಸುತ್ತಾ ಕಾಯಕನಿರತರಾಗಿದ್ದಾರೆ.
ರಾಜ್ಯ ಮಟ್ಟದ ವಾರಪತ್ರಿಕೆಯಾದ ವಿಕ್ರಮ, ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಹಿತ, ಜನಮಿತ್ರ, ಹಾಸನವಾಣಿ ಮುಂತಾದ ಪತ್ರಿಕೆಗಳಲ್ಲಿ ಎಲ್ಲರಿಗಾಗಿ ವೇದ, ವೇದ ಪಥ, ಸರ್ವಹಿತ ವೇದ ಮುಂತಾದ ಶೀರ್ಷಿಕೆಯಲ್ಲಿ ಮೂಲವೇದದ ತಿರುಳನ್ನು, ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಬರೆದಿದ್ದಾರೆ. ಈ ಎಲ್ಲಾ ಬರಹಗಳ ಒಟ್ಟು ಸಂಗ್ರಹವೆ ಈ ‘ಜೀವನವೇದ’ ಕೃತಿಯಾಗಿದೆ.
ಈ ಕೃತಿಯ ಬಗ್ಗೆ ಕೆಲವರ ಅಭಿಪ್ರಾಯಗಳು
‘..ವೈದಿಕ ಚಿಂತನೆಯ ಮಡುವಿನಲ್ಲಿ ಧುಮುಕಿ, ಯಥಾಶಕ್ತಿ ವಿಹರಿಸುತ್ತಾ, ಅದರ ಸವಿ-ತಂಪುಗಳನ್ನನುಭವಿಸುತ್ತಾ, ಅವನ್ನು ಇತರರೊಡನೆ ಹಂಚಿಕೊಳ್ಳಬೇಕೆಂಬ ಶ್ರೀ ಹರಿಹರಪುರ ಶ್ರೀಧರ್‍ರವರ ಮಾನವೀಯ ಕಳಕಳಿಗೆ ಇದು ಮುನ್ನುಡಿ..’ – ವೇದಾಧ್ಯಾಯೀ ಸುಧಾಕರ ಶರ್ಮಾ.
‘ಎಲ್ಲರಿಗಾಗಿ ವೇದ’ ಎಂಬ ಮಾತೇ ಎಷ್ಟು ರೋಮಾಂಚನಕಾರಿ, ವೇದ ಎಂಬುದು ಸಮಾಜದ ಒಂದು ಸಣ್ಣ ವರ್ಗಕ್ಕೆ ಮಾತ್ರ ಸೀಮಿತ ಎಂಬ ಭ್ರಮೆ ಇದೆ.  ಅದು ಸಾಮಾನ್ಯರಿಗರ ಎಟುಕದ ಅರ್ಥವಾಗದ ಜ್ಞಾನ ಎಂಬ ಭ್ರಮೆಯೂ ಇದೆ. ಹೀಗೆ ವೇದವು ವಿವಾದಕ್ಕೆ ಗುರಿಯಾಗಿರುವ ದಿನಗಳಲ್ಲಿ, ಹಾಸನದಲ್ಲಿ ಈಶಾವಾಸ್ಯಂ ಕುಟೀರದಲ್ಲಿ ಎಲ್ಲರಿಗಾಗಿ ವೇದ ತಿಳಿಸುವ, ಅದು ಸರ್ವರಿಗೂ ಸಮಾನ ಹಾಗೂ ಸಮಾನತೆಯೇ ವೇದದ ತಿರುಳು ಎಂದು ಮನಗಾಣಿಸುವ ಒಂದು ಸಾಹಸಕ್ಕೆ ಪ್ರಿಯ ಮತ್ತು ಹರಿಹರಪುರ ಶ್ರೀಧರ್ ಕೈಹಾಕಿದರು. ನೋಡುತ್ತಿದ್ದಂತೆಯೇ ಶ್ರೀಧರ್‍ಗೆ ಕೈಜೋಡಿಸುವ ಹಲವಾರು ಸಹೋದರ, ಸಹೋದರಿಯರು ಮುಂದಾದರು. ಇಂದು ಹಾಸನದ ಮಾಧ್ಯಮಗಳಿಗೆ ಇದು ಪ್ರಿಯವಾಗಿ ಹೋಗಿದೆ’ - ಸು.ರಾಮಣ್ಣ.
‘ಸಕಲ ಮಾನವರ ಹಿತಕ್ಕಾಗಿ ಒಂದು ಸ್ತಂಭವಿರುವುದಾದರೆ ಅದು ವೇದ ಮಂತ್ರವೇ ಆಗಿದೆ ಎಂಬ ಸಾರ್ವಕಾಲಿಕ ಸತ್ಯವನ್ನು ಘೋಷಿಸಿರುವ ನಿಮ್ಮನ್ನು ಅಭಿನಂದಿಸಬೇಕು. ಚತುರ್ವೇದಗಳ ಅಧ್ಯಯನದಿಂದ ಇವುಗಳ ಸಾರವನ್ನು ಹೀರಿರುವ ಇಂಥಹ ಇನ್ನೊಂದು ಗ್ರಂಥವು ಇರಲಾರದೆಂದು ನನ್ನ ನಂಬಿಕೆ.’- ಬಿ.ಎಸ್.ರಾಮಭಟ್ಟ.
‘ಶ್ರೀಧರ್‍ರವರು ವೇದದಲ್ಲಿನ ಮಂತ್ರ, ಅದರ ಶಬ್ಧಾರ್ಥ, ಭಾವಾರ್ಥ ಇವಿಷ್ಟನ್ನೇ ವಿವರಿಸುವುದಕ್ಕೆ ತಮ್ಮ ಲೇಖನವನ್ನು ಸೀಮಿತವಾಗಿಸದೆ, ಪ್ರಸ್ತುತ ಕಾಲಮಾನಕ್ಕೆ ವೇದ ರವಾನಿಸುವ ಸಂದೇಶಗಳನ್ನು ತುಲನೆ ಮಾಡಿ, ವಿಶ್ಲೇಷಿಸಿರುವುದು ಅವರ ಅಂಕಣ ಲೇಖನ ಸಾಮಯಿಕ ಹಾಗೂ ಸಕಾಲಿಕವಾಗುವುದಕ್ಕೆ ಸಾಧ್ಯವಾಗಿದೆ’. -ದು.ಗು.ಲಕ್ಷ್ಮಣ.
ಹೀಗೆ ಹರಿಹರಪುರ ಶ್ರೀಧರ್ ಕಾವ್ಯ, ವೇದ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಕಾಷ್ಟು ಉಪಯುಕ್ತ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಈಗಲೂ ಕಾರ್ಯಪ್ರವೃತ್ತರಾಗಿರುವುದು ಇವರ ಕಾಯಕನಿಷ್ಠೆಯ ಮಹತ್ವವನ್ನು ತೋರಿಸುತ್ತದೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ