ಶನಿವಾರ, ಮೇ 9, 2015

ಸೃಜನಶೀಲ ಜಾನಪದ ತಜ್ಞ ಃ ಹಿ. ಶಿ. ರಾಮಚಂದ್ರೇಗೌಡ

ಸೃಜನಶೀಲ ಜಾನಪದ ತಜ್ಞ ಃ ಹಿ. ಶಿ. ರಾಮಚಂದ್ರೇಗೌಡ
ಜಾನಪದ ಸಾಹಿತ್ಯ ಮತ್ತು ಸಂಗ್ರಹದ ಕಾರ್ಯ ಕೇವಲ ಒಂದು ಸಾಹಿತ್ಯ ಪ್ರಕಾರದ ವ್ಯಾಮೋಹವಲ್ಲ. ಪ್ರಸ್ತುತ  ಆಧುನಿಕವೆಂಬ ಜಾಗತಿಕ ಸಂಸ್ಕøತಿಯ ಸಂದರ್ಭದಲ್ಲಿ ಸ್ಥಳೀಯ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಸಂಘಟಿಸುವ ನಿಟ್ಟಿನಲ್ಲಿ ಅತಿ ಮಹತ್ವಪೂರ್ಣವಾಗುತ್ತದೆ. ಗ್ರಾಮೀಣ ಸಮುದಾಯಗಳನ್ನು ಚೇತರಿಸುವ ಮೂಲಕ ಅಖಂಡ ಭಾರತವನ್ನು ಪುನರ್ ಸಂಘಟನೆ ಮಾಡಬೇಕಿದೆ. ಇದು  ಯಾರ ಹೊಣೆ? ಎಂಬ ಪ್ರಶ್ನೆಗೆ ಅನೇಕ ವಿದ್ವಾಂಸರು ಈ ನಿಟ್ಟಿನಲ್ಲಿ ಜಾನಪದ ಸಂಶೋಧನೆ, ಸಂಗ್ರಹ ಕಾರ್ಯ, ಅಧ್ಯಯನ ಮುಂತಾದ ಕಾರ್ಯಗಳಲ್ಲಿ ತೊಡಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರಲ್ಲಿ ಎಸ್.ಕೆ.ಖರೀಂಖಾನ್, ಮತಿಘಟ್ಟ ಕೃಷ್ಣಮೂರ್ತಿ, ಎಚ್.ಎಲ್ ನಾಗೇಗೌಡ, ಹಿ.ಶಿ.ರಾಮಚಂದ್ರೇಗೌಡ, ಡಾ|| ಚಂದ್ರಶೇಖರ ಕಂಬಾರ, ಡಾ|| ದೇ.ಜ.ಗೌ, ಎಚ್.ಜೆ.ಲಕ್ಕಪ್ಪಗೌಡ, ಕೃಷ್ಣಮೂರ್ತಿ ಹನೂರ, ಡಿ.ಬಿ.ನಾಯಕ, ಚಕ್ಕೆರೆ ಶಿವಶಂಕರ್, ಮೈಲಹಳ್ಳಿ ರೇವಣ್ಣ ಮುಂತಾದವರು ಪ್ರಮುಖರಾಗಿದ್ದಾರೆ.
ದಕ್ಷಿಣ ಕರ್ನಾಟಕದಲ್ಲಿ ಹಿ.ಶಿ.ರಾ ಎಂದೆ ಖ್ಯಾತರಾದ ಹಿರಿಸಾವೆ ಶಿವನಂಜಪ್ಪ ರಾಮಚಂದ್ರೇಗೌಡರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ಕ್ರಿ.ಶ.1947 ನವಂಬರ್ 15 ರಂದು ಜನಿಸಿದರು.
ಭಾರತೀಯ ಮನೋಧರ್ಮವನ್ನು ಪಾಶ್ಚಾತ್ಯ ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಇಂದಿನ ಜಾನಪದವನ್ನು ಅಭ್ಯಾಸಿಸುವ ಸಂದರ್ಭದಲ್ಲಿ ಅದಕ್ಕಿಂತಲೂ ಭಿನ್ನವಾದ ರೂಪದಲ್ಲಿ ಅಧ್ಯಯನ ಮಾಡಬಹುದೆಂಬುದನ್ನು ತೋರಿಸಿಕೊಟ್ಟವರಿ ಹಿ.ಶಿ.ರಾ ರವರು. ಬಹುತೇಕ ಅಧ್ಯಯನ ಮರದ ಬೇರು ಬಿಟ್ಟು ಕೇವಲ ಕೊಂಬೆಯನ್ನು ಮಾತ್ರ ಆವರಿಸಿಕೊಂಡ ಸಂದರ್ಭದಲ್ಲಿ ಇದಕ್ಕೆಇಡಿ ಜನಪದವನ್ನು ಬೌದ್ಧಿಕ ನೆಲೆಗಟ್ಟಿನಲ್ಲಿ ಸಮೀಕರಿಸಿಕೊಂಡು ಗಟ್ಟಿ ವಿಮರ್ಶೆಯೊಂದಿಗೆ ವೈಚಾರಿಕವಾಗಿ ಅವಲೋಕಿಸಿದವರೆ ಹಿ.ಶಿ.ರಾಮಚಂದ್ರೇಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಒಂದು ಡಾ|| ಜಿ.ಆರ್.ತಿಪ್ಪೇಸ್ವಾಮಿಯವರು ಹೇಳುವಂತೆ “ಜನಪದ-ಜಾನಪದದ ಬಗೆಗೆ ತಮ್ಮದೇಯಾದ ನಿಲುವುಗಳಿಂದ ಪಾಳೆಯಪಟ್ಟುಗಳನ್ನು ಕಟ್ಟಿಕೊಂಡಿದ್ದರಿಂದಾಗಿ ನಮ್ಮ ಜಾನಪದವನ್ನು ಮತ್ತೊಬ್ಬರಿಗೆ ಸರಿಯಾಗಿ ಅರ್ಥೈಸಬೇಕೆಂಬ ಯೋಚನೆಗಳೇ ಬರಲಿಲ್ಲ. ಅಧ್ಯಯನ ಚಿಂತನೆಯಲ್ಲಿ ವಿಧ್ವಾಂಸರಲ್ಲಿ ಭಿನ್ನತೆ ಬೆಳೆದಂತೆ ಕರ್ನಾಟಕ ಜಾನಪದ ಹೇಗೆ ಚಲಿಸಬೇಕು? ಕೆಲಸ ಮಾಡೆಬೇಕು ಎಂಬುದು ಗೊತ್ತಾಗದ ಸಂದರ್ಭದಲ್ಲಿಜಾನಪದ ವಿದ್ವಾಂಸರ ಕೆಲಸ ದೃಷ್ಠಿ ಧೋರಣೆಗಳನ್ನು ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಹಿ.ಶಿ.ರಾಮಚಂದ್ರೇಗೌಡರು ತಮ್ಮ ಅಧ್ಯಕ್ಷತೆಯಲ್ಲಿ ಜಾನಪದ ಅಕಾಡೆಮಿವತಿಯಿಂದ ‘ಜಾನಪದ ತಲೆಮಾರು’ ಶೀರ್ಷಿಕೆಯಲ್ಲಿ ಮೂರು ಕೃತಿಗಳನ್ನು ಹೊರತಂದರು. ನಮ್ಮ ಸಂಸ್ಕøತಿ ಚಿಂತನೆ ಮತ್ತು ಬೆಳವಣಿಗೆ ಹೇಗೆ ನಡೆಯುತ್ತಿದೆ ಹೊಸ ವ್ಯಕ್ತಿತ್ವಗಳು ಹೇಗೆ ಬೆಳೆಯುತ್ತಿವೆ ಎಂಬುದನ್ನು ಅತ್ಯಂತ ಸಮರ್ಥವಾಗಿ ಭಿನ್ನ ಲೇಖಕರು ಈ ಕೃತಿಗಳಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ”.
ಸಾಹಿತ್ಯ ಕೃತಿಗಳು ಃ ಭೂಮಿ ಮತ್ತು ಹಿಂಸೆ(1979), ಜಾನಪದ ವ್ಯಕ್ತಿ ವಿಚಾರ(1982), ಜಾನಪದ ಅಂತರಂಗ(1987), ಜಾನಪದ ತಡಕಾಟ(1988), ಜಾನಪದರು ನಾವು(1993), ಜಾನಪದ ಪ್ರಕೃತಿ(2001), ಕನ್ನಡ ಜನಪದ ಕತೆಗಳ ನೆಲೆ(2002), ರಾಮ ಅಳುತ್ತಿದ್ದಾನೆ(2005), ಶೈಕ್ಷಣಿಕ ಪ್ರತಿಭೆ ಮತ್ತು ಜಾತಿ(2005), ಜನಪದ ಜೀವನ ನ್ಯಾಯ(2008) ಮುಂತಾದ ಕೃತಿಗಳು ಮಹತ್ವದ್ದಾಗಿವೆ.
1982 ರಲ್ಲಿ ರೈತ ಹೋರಾಟದ ಹಿನ್ನಲೆಯಲ್ಲಿ ಹೊರತಂದ ಹಿ.ಶಿ.ರಾಮಚಂದ್ರೇಗೌಡ, ರಂಜಾನ್ ದರ್ಗಾ, ಡಾ||ಸಿದ್ದಲಿಂಗಯ್ಯನವರು ಬರೆದ ಹಾಡುಗಳು ‘ಹಾವುಗಳು’, ‘ಹೊಂಬಾಳೆ’, ‘ಡಂಗೂರ’ ಹಾಗೂ ‘ನಮ್ಮ ನಾಯಕರು’ ಎಂಬ ನಾಲ್ಕು ಕ್ರಾಂತಿ ಗೀತೆಗಳ ಸಂಗ್ರಹ ಧ್ವನಿ ಸುರುಳಿಗಳು ಇಡಿ ರಾಜ್ಯದಲ್ಲಿಯೇ ಸಂಚಲನವನ್ನುಂಟು ಮಾಡಿತೆನ್ನಬಹುದು.
ಭೂಮಿ ಮತ್ತು ಹಿಂಸೆ ಃ 1979 ರಲ್ಲಿ ಹೊರಬಂದ ಈ ಕೃತಿಯಲ್ಲಿ ರೈತ ಸಂಸ್ಕøತಿಯು ಪುನರುಜ್ಜೀವನಗೊಂಡಿದೆ. ಇಲ್ಲಿ ಆಳುವ ಸಮಾಜ ರೈತರನ್ನು ಶೋಷಣೆ ಮಾಡುವುದನ್ನು ಉಗ್ರವಾಗಿ ಖಂಡಿಸಿದ್ದಾರೆ.
ಜನಪದರು ನಾವು ಃ 1993 ರಲ್ಲಿ ಹೊರಬಂದ 168 ಪುಟಗಳ ಈ ಕೃತಿಯನ್ನು ಮಾನಸ ಗಂಗೋತ್ರಿ ಮೈಸೂರು ಪ್ರಕಟಿಸಿದೆ. ಇದರಲ್ಲಿ ಜನಪದರು ನಾವು, ಜನಪದರ ಸಂಪತ್ತು ಜಾನಪದ ಹಾಗೂ ಜಾನಪದದಿಂದ ಜನಜೀವನಕ್ಕೆ ಎಂಬ ಮೂರು ಮುಖ್ಯ ಭಾಗಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಜನಪದದ ಅರ್ಥ, ಜನಪದಗಳ ವರ್ಗೀಕರಣಗಳ ಕುರಿತು ಆಳವಾಗಿ ಚರ್ಚೆಯಾಗಿದೆ. ಎರಡನೆಯ ಅಧ್ಯಾಯದಲ್ಲಿ ಜಾನಪದವನ್ನು ವಿವಿಧ ಕಾಲಘಟ್ಟಗಳಲ್ಲಿ ಭಾರತೀಯ ಪರಂಪರೆ ಹಾಗೂ ಪಾಶ್ಚಿಮಾತ್ಯ ಪರಂಪರೆಯೊಂದಿಗೆ ಚರ್ಚಿಸಿದ್ದಾರೆ. ಮೂರನೆಯ ಅಧ್ಯಾಯದಲ್ಲಿ ಮೌಖಿಕತೆ, ಅಲಿಖಿತತೆ ಹಾಗೂ ಉಳಿಕೆ-ಪಳೆಯುಳಿಕೆಗಳ ಆಧಾರದಲ್ಲಿ ಜಾನಪದದ ಇರುವಿಕೆ, ಕೇಳುವಿಕೆ, ಅನುಭವಿಸುವಿಕೆ, ಬಳಸುವಿಕೆಗಳ ಬಗ್ಗೆ ಚರ್ಚಿಸಲಾಗಿದೆ.
ಜನಪದ ಪ್ರಕೃತಿ ಃ 2001 ರಲ್ಲಿ ಬಂದ ಜನಪದ ಪ್ರಕೃತಿ ಕೃತಿಯನ್ನು ಕುರಿತು ಖ್ಯಾತ ಜನಪದ ಸಂಶೋಧಕರಾದ ಚಕ್ಕೆರೆ ಶಿವಶಂಕರ್‍ರವರು ಈ ರೀತಿ ಹೇಳಿದ್ದಾರೆ “ ಅನುಭವ ಹಾಗೂ ಅಭಿವ್ಯಕ್ತಿಗಳೆರಡರಲ್ಲೂ ಗಾಢವಾದ ಸಂವೇದನೆಯುಳ್ಳ ಹಿ.ಶಿ.ರಾಮಚಂದ್ರೇಗೌಡರು ಕನ್ನಡ ನಾಡಿನ ಪ್ರಗತಿಪರ ಚಿಂತಕರಲ್ಲಿ ಒಬ್ಬರು. ಸದಾ ಚಲನಶೀಲತೆಯ ಕನಸು ಕಾಣುವ ಗೌಡರ ಬರಹಗಳ ಹಿಂದಿನ ಆಶಯ ಶೋಧನೆ ಮತ್ತು ಅನ್ವಯಗೊಳಿಸುವುಕೆ. ಕೃಷೀವಲಯ ಸಂಸ್ಕøತಿಯಿಂದ ಉತ್ಪತ್ತಿಯಾದ ಜಾನಪದವನ್ನು, ಈವತ್ತಿನ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳ ಮುಖಾಂತರವೇ ಪ್ರಸ್ತುತಗೊಳಿಸಲು ಯತ್ನಿಸುವ  ಅವರ ಈ ಸಂಕಲನದ ಲೇಖನಗಳಲ್ಲಿ ಆಳವಾದ ವಿದ್ವತ್ತಿನ ಜೊತೆಗೆ ಅಸಾಧಾರಣವಾದ ಗ್ರಹಿಕೆಯೂ ಇದೆ. ಕನ್ನಡ ಜಾನಪದವನ್ನು ವೈಜ್ಞಾನಿಕವಾಗಿ ನಿರ್ಣಯಿಸಿಕೊಳ್ಳುವುದರೊಂದಿಗೆ ವರ್ತಮಾನಕ್ಕೆ ಹೊಂದಿಸಿಕೊಳ್ಳುವ ಗೌಡರ ಬಗೆ ವಿಶಿಷ್ಟವಾದುದು. ಬದಲಾಗುತ್ತಿರುವ ಅಧ್ಯಯನ ವಿಧಾನಗಳಿಗೆ ಕನ್ನಡ ಜಾನಪದವು ತನ್ನನ್ನು ಒಡ್ಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗೌಡರ ಪ್ರಸತುತ ಕೃತಿಯು ಜಾನಪದ ಕ್ಷೇತ್ರಕ್ಕೆ ಅತ್ಯಂತ ಮೌಲಿಕ ಕೊಡುಗೆಯಾಗಿದೆ”.
ಕನ್ನಡ ಜನಪದ ಕತೆಗಳ ನೆಲೆ ಃ 2002 ರಲ್ಲಿ ಹೊರಬಂದ 255 ಪುಟಗಳ ‘ಕನ್ನಡ ಜನಪದ ಕತೆಗಳ ನೆಲೆ’ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಇದರಲ್ಲಿ ಕನ್ನಡ ಜನಪದರ ಕತೆಗಳು, ಜನಪದ ಕತೆಗಳ ಅಧ್ಯಯನ ಇತಿಹಾಸ, ಜನಪದ ಕತೆಗಳ ಸ್ವರೂಪ, ಜನಪದ ಕತೆಗಳ ಸಿದ್ಧಾಂತಗಳು, ಜನಪದ ಅಧ್ಯಯನದಲ್ಲಿ ಮಾನಗಳ ಕಲ್ಪನೆ, ಕನ್ನಡ ಜನಪದ ಕಥಾವರ್ಗಗಳು ಮುಂತಾದ ಇಡಿ ಜಾನಪದ ಕ್ಷೇತ್ರದ ಮೇಲೆ ಬೆಳಕು ಚಲ್ಲುವಂತಹ ಅಮೂಲ್ಯ ಹತ್ತು ಲೇಖನಗಳಿವೆ.
ಜನಪದ ಜೀವನ ನ್ಯಾಯ ಃ 2008 ರಲ್ಲಿ ಹೊರಬಂದ ‘ಜನಪದ ಜೀವನ ನ್ಯಾಯ’ ಕೃತಿಯು 196 ಪುಟಗಳನ್ನೊಳಗೊಂಡಿದೆ. ಜನಪದ ಪ್ರದರ್ಶನ ಕಲೆಗಳು ಃ ಪ್ರಚಲಿತ ಕನ್ನಡ ಮನಸ್ಸು, ಹೆಣ್ಣಿನ ಅಧಿಕಾರ, ಪೂರ್ವಾಪರ, ಜನಪದ ಸಾಹಿತ್ಯದ ನ್ಯಾಯ, ಸೋಮ ಃ ಪ್ರದರ್ಶನದ ಆಯಾಮಗಳು, ಏಕತಾರಿ ಎಂಬ ಆಧುನಿಕ ನಾಯಕ, ಜಾನಪದ ವಿಮರ್ಶೆ, ಜನಪದ ಸಾಹಿತ್ಯದಲ್ಲಿ ಲಿಂಗಧಾರಿತ ಸಂವೇದನೆಗಳು, ನಾಡಗೌಡನ ನೆನಪು, ಅಲೆಮಾರಿಗಳ ಇರುವು ಮತ್ತು ಅರಿವು, ಜನಪದ ಕಲಾವಿದ ಎಂಬ ಅಳು ಬುರುಕ, ಜಾನಪದ ಸಂಶೋಧನೆ ಮುಂತಾದ 23 ಲೇಖನಗಳಿವೆ.
ಈ ಕೃತಿಯ ಬಗ್ಗೆ ಡಾ|| ಬಂಜಗೆರೆ ಜಯಪ್ರಕಾಶ್ ಅವರು ಬೆನ್ನುಡಿಯಲ್ಲಿ ಈ ರೀತಿ ಹೇಳಿದ್ದಾರೆ. “ಹಿ.ಶಿ.ರಾಮಚಂದ್ರೇಗೌಡರು ಸದಾ ಚಟುವಟಿಕೆಯಿಂದಿರುತ್ತಾ, ಆ ಚಟುವಟಿಕೆಗಳಿಗೆ ಸಾಮಾಜಿಕ ಅರ್ಥವಿರಬೇಕೆಂದು ಬಯಸುತ್ತಾ, ಜಾತಿ ಸೀಮಿತತೆಗಳ ನಿರÀರ್ಥಕತೆಯನ್ನು ಅರಿತವರಾಗಿ ಅದನ್ನು ಮೀರುವ ಮಾನವೀಯತೆಯನ್ನು ಅರಳಿಸುತ್ತಾ ನಮ್ಮ ನಡುವೆ ಮನುಷ್ಯ ಕಾಳಜಿಗಳ ವ್ಯಕ್ತಿಯಾಗಿ, ಹೊಸತನ್ನು ಅರಿಯಬೇಕೆಂಬ ಹಂಬಲಗಳ ಅಧ್ಯಯನಶೀಲರಾಗಿ, ಅರ್ಥಪೂರ್ಣ ಚಿಂತನೆಗಳ ವಿದ್ವಾಂಸರಾಗಿ ನಮ್ಮ ಕಾಲಘಟ್ಟದ ಸಂವೇದನೆಗಳ ಜೀವಪರ ಪ್ರತಿಪಾದಕರಲ್ಲೊಬ್ಬರಾಗಿದ್ದಾರೆ”.
ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ತತ್ತ್ವಪದಗಳನ್ನು ಓರೆಹಚ್ಚುತ್ತಾ ಬಂದ ಹಿ.ಶಿ.ರಾರವರು ಸೋಲು ಅಥವಾ ಸಾವಿನ ಅಭಿನಯವೇ ತತ್ತ್ವ ಪದದ ಮೂಲ ನೆಲೆ ಎಂದು ಭಾವಿಸಿ ನೀತಿ ಮತ್ತು ಮೌಲ್ಯದ ಪರಿಕಲ್ಪನೆಯ ಜೊತೆಗೆ ತತ್ತ್ವದ ನೆಲೆಯನ್ನು ಪರಿಶೀಲಿಸಿರುವ ರೀತಿ ಅನನ್ಯ ಎಂದು ತಿಪ್ಪೆಸ್ವಾಮಿಯವರು ಒಂದು ಕಡೆ ಹೇಳಿದ್ದಾರೆ.
ಒಟ್ಟಾರೆ ಹೇಳುವುದಾದರೆ ಡಾ|| ಹಿ.ಶಿ.ರಾಮಚಂದ್ರೇಗೌಡರು ಇಡಿ ಜಾನಪದವನ್ನು ವೈಜ್ಞಾನಿಕ ಹಾಗೂ ವೈಚಾರಿಕ ದೃಷ್ಠಿಕೋನದಲ್ಲಿ ಚಿಂತಿಸಿದ ಮೊದಲಿಗರೆನ್ನಬಹುದು. ಗತದ ಸಂಸ್ಕøತಿಗಳನ್ನು ವರ್ತಮಾನದೊಂದಿಗೆ ಸಮೀಕರಿಸುವ ಇವರ ವಿದ್ವತ್ತು ಅದ್ವಿತೀಯವಾದುದು ಎಂದರೆ ಅತಿಶಯೋಕ್ತಿಯಾಗಲಾರದು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ-573201
ಮೊ-9483470794 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ