ಮಂಗಳವಾರ, ಡಿಸೆಂಬರ್ 9, 2014

‘ಛದ್ಮವೇಷ’ ವೆಂಬ ಕಾವ್ಯ ಪ್ರಪಂಚದೊಳಗೆ


ಕಾವ್ಯ ಒಂದು ಸ್ವಯಂಪೂರ್ಣದರ್ಶನ. ‘ದರ್ಶನ’ ಎಂದಾಕ್ಷಣಾ ಆಧ್ಯಾತ್ಮಿಕತೆಯ ಸಂಕೇತ ಎಂದು ಭಾವಿಸಬೇಕಿಲ್ಲ, ‘ದರ್ಶನ’ ಎಂದರೆ ಕವಿಯ ಅಂತರ್ ಶಕ್ತಿ, ಪ್ರತಿಭೆ, ಆಂತರಿಕ ಸೌಂದರ್ಯ ಎನ್ನಬಹುದು. ಕಾವ್ಯ ನಾವು ಜಗತ್ತನ್ನು ಹೊಸ ರೀತಿಯಲ್ಲಿ ಆಣುವಂತೆ ಮಾಡತ್ತದೆ. ನಮ್ಮ ವಾಸ್ತವಿಕ ಜಗತ್ತನ್ನು ಬಿಡದೆ, ಕನಸಿನ ಲೋಕಕ್ಕೆ ಹಾರದೇ ನಮ್ಮ ಸಂವೇದನೆಗಳನ್ನು ಸೂಕ್ಷ್ಮಗೊಳಿಸಿ ಹೊಸ ಪ್ರಾಪಂಚಿಕ ಅನುಭವವನ್ನು ತಂದೊಡ್ಡುತ್ತದೆ, ಭಾಷೆ, ಪದಗಳ ನಾದ, ಪ್ರತಿಮೆ, ಸಂಕೇತ, ಛಂದಸ್ಸು ಎಲ್ಲಾ ಕೂಡಿ ಕವನದ ಅವತಾರವಾಗುತ್ತದೆ. ಕಾವ್ಯದೊಡಲ ಬಸಿರಲ್ಲಿ ಭಾವನಾತ್ಮಕದ ನವೀನ ಒತ್ತಡ ನೆಲೆಸಿರುತ್ತದೆ.
ಒಂದು ಕಡೆ ಬೇಂದ್ರೆ ಹೀಗೆನ್ನುತ್ತಾರೆ.....
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿನಮರ ಸಾಕ!
ಹೀಗೆ ಕವಿಯು ಕಂಡುಂಡ ಆಕಸ್ಮಿಕ ಅನುಭವಗಳು, ಹೊಸ ಹೊಳಪುಗಳು ಭಾವನೆಯ ಲಯದಲ್ಲಿ ಸಿಲುಕಿ ಕಾವ್ಯವಾಗಿ ಲಿಖಿತಗೊಳ್ಳುತ್ತವೆ.
ಆದ್ದರಿಂದಲೇ ಅಸಗನಿಂದ ಪ್ರಾರಂಭವಾದ ಕಾವ್ಯಾ ಪ್ರಭೆ, ಪಂಪನಿಂದ ಪಕ್ವಗೊಂಡು ರನ್ನ, ಪೊನ್ನ, ನಾಗವರ್ಮ, ಮೂಲಕ ಹೊಳೆದು; ನಯಸೇನ, ನೇಮಿಚಂದ್ರ, ರುದ್ರಭಟ್ಟರ ಮೂಲಕ ಬೆಳೆದು; ಹನ್ನೆರಡನೇ ಶತಮಾನದ ದೇವರ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಸಿದ್ದರಾಮ, ಅಕ್ಕಮಹಾದೇವಿಯರ ಕಾವ್ಯದಲ್ಲಿ ಹೊಸರೂಪತಾಳಿ, ಹರಿಹರ, ರಾಘವಾಂಕ, ಜನ್ನ, ಆಂಡಯ್ಯ, ಕೇಶಿರಾಜರ ಮೂಲಕ ಮಗದೊಂದು ಪ್ರಬೇಧಗಳು ಜನಿಸಿ, ಕುಮಾರವ್ಯಾಸ, ಬೊಮ್ಮರಸ, ನಿಜಗುಣ ಶಿವಯೋಗಿಗಳಿಂದ ಕಾವ್ಯಾ ಪ್ರಖರತೆ ಕಂಡು; ಕನಕದಾಸ, ಪುರಂದರದಾಸ, ರಾಮದಾಸರಿಂದ ಸರಳೀಕರಣಗೊಂಡ; ಭಟ್ಟಾಕಳಂಕ, ಲಕ್ಷ್ಮೀಶ, ಷಡಕ್ಷರದೇವ, ತಿರುಮಲಾರ್ಯ, ಸರ್ವಜ್ಞರಿಂದ ಜನಮನಕ್ಕಿಳಿದು; ಸಂಚಿಹೊನ್ನಮ್ಮ, ಶೃಂಗಾರಮ್ಮ, ಹೆಳವನಕಟ್ಟೆ ಗಿರಿಯಮ್ಮ, ಚೆಲುವಾಂಬೆಯರ ಮೂಲಕ ಮಹಿಳಾ ಹೃದಯದ ಪಡಿಗನ್ನಡಿಯಾಗಿ ಅರಳಿನಿಂತಿದೆ. ಇನ್ನು ಆಧುನಿಕ ಕನ್ನಡ ಸಾಹಿತ್ಯದ ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ ಕಾಲಘಟ್ಟಗಳಲ್ಲಿ ಕಾವ್ಯ ಮಿಂದೆದ್ದು ಬಂದಿದೆ.
ಕಾವ್ಯ ನಿಂತ ನೀರಲ್ಲ ಸದಾ ಹರಿಯುವ ಜಲದಂತೆ ನಿತ್ಯಚಲನ ಶೀಲವಾದುದು. ಇಂತಹ ಕಾವ್ಯ ಕಟ್ಟುವ ನಿಟ್ಟಿನಲ್ಲಿ ಸಾಂದ್ರವಾದ ಅನುಭವವನ್ನು ಸಂಕೀರ್ಣವಾದ ಅಭಿವ್ಯಕ್ತಿಯಲ್ಲಿ ಇಡಿಕಿರಿದ ಅರ್ಥ ಪರಂಪರೆಗಳೊಂದಿಗೆ ಹೇಳುತ್ತಾ ಹೋಗುವ ಗೂಢ ರಚನೆಗಳನ್ನು ಕೊಡುವುದು ಸುಲಭದ ಕೆಲಸವೇನೂ ಅಲ್ಲ. ಇಂತಹ ಕಾವ್ಯ ಪ್ರಭೆ ಮೈಗೂಡಿಸಿಕೊಂಡು ಸೃಜನಾತ್ಮಕ ಕವಿತೆಗಳನ್ನು ಬರೆಯುವಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಎಂ.ಕುಸುಮರವರು ಈ ದಿಶೆಯಲ್ಲಿ ಸಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಇವರ ಎರಡನೇ ಕವನ ಸಂಕಲನವಾದ ‘ಛದ್ಮವೇಷ’ ಕೃತಿಯನ್ನು ನನ್ನ ಕಪಾಟಿನಿಂದ ಓದಲು ಕೈಗೆತ್ತಿಕೊಂಡೆ. ಮೈಸೂರಿನ ರಚನ ಪ್ರಕಾಶನ ಹೊರತಂದಿರುವ ಈ ಕೃತಿಗೆ ವಿಚಾರವಾದಿ ಹಾಗೂ ಗಣ್ಯವಾಗ್ಮಿಗಳಾದ ಡಾ|| ರಾಜಶೇಖರಯ್ಯ ಮಠಪತಿಯವರು ಉಡಿಯಲ್ಲಿದ್ದ ಕಾವ್ಯದ ಕಿಡಿಯನ್ನು ಪ್ರಖರ ಗೊಳಿಸಿ ಹೊಳಪು ನೀಡಿ ಮುನ್ನುಡಿಯ ಮೂಲಕ ಕವಯಿತ್ರಿಗೆ ಪ್ರೋತ್ಸಾಹಿತ ನುಡಿಗಳನಿತ್ತಿದ್ದಾರೆ. ಇಲವಾಲದ ಕಿರಣ್‍ರವರಿಂದ ಮುಖಪುಟ ಸೊಗಸಾಗಿ ಮೂಡಿಬಂದಿದೆ.
‘ಛದ್ಮವೇಷವು’ ‘ದಂಡಯಾತ್ರೆಯಿಂದ’ ‘ತುತ್ತತುದಿ’ದಿಯವರೆಗೆ ಎಪ್ಪತ್ತೈದು ಕವಿತೆಗಳನ್ನು ಗರ್ಭೀಕರಿಸಿಕೊಂಡಿದೆ. ಕೃತಿಯ ಶೀರ್ಷಿಕೆಯೇ ಅರ್ಥೈಸುವಂತೆ ಸಾಮಾಜಿಕ ತುಮುಲಗಳು. ಮುಖವಾಡಗಳು ಸಮಸ್ಯೆಯ ಸುಳಿಗಳು, ವೈರುಧ್ಯಗಳು, ವಿಡಂಬನೆಗಳು, ಭ್ರಷ್ಟಚಾರ ಅನೇಕ ವಿಚಾರಗಳನ್ನು ತೆರೆದಿಡುವಲ್ಲಿ ಸಫಲವಾಗಿದೆ.
ಇವರ ಹಲವಾರು ಕವಿತೆಗಳಲ್ಲಿ ಮೌಢ್ಯದಿಕ್ಕರಿಸಲ್ಪಟ್ಟಿದೆ, ವೈಚಾರಿಕತೆ ಮೊಳೆದಿದೆ ಎನ್ನುವುದಕ್ಕೆ ಈ ಕೆಳಗಿನ ಉದಾಹರಣೆಗಳನ್ನು ಕಾಣಬಹುದು.
ದಿನನಿತ್ಯದ ಪೂಜೆ, ಮಂತ್ರಗಳೆಲ್ಲಾ
ದಿಕ್ಕೆಟ್ಟಿ, ಓಟಕಿತ್ತಾಗ
ಬಟಾಬಯಲಾಗಿ ನಿಂತಿತವನ
ಆಷಾಢಭೂತಿ ತಿಕ್ಕಲುತನ.(ವಿಪರ್ಯಾಸ)
*
ದೇವರ ನೀಲಾಂಜನಕೆ
ಬೆಳ್ಳಿ-ಕವಚ ಹೊದಿಸಿ,
ಮನದ ಅಳುಕ ಮೀರಿದ
‘ಆಧುನಿಕ’ ಜನ. (ಈ ಜನರು)
ಇವರ ಕವಿತೆಗಳಲ್ಲಿ ಜೀವನ ಸಂಪ್ರೀತಿ ಹೆಚ್ಚೆಚ್ಚು ಪಲ್ಲವಿಸಿದೆ. ತಂದೆ, ತಾಯಿ, ಬಂಧು, ಬಳಗ, ಸಂಸಾರ, ಸಮಾಜ ಹೀಗೆ ಸಂಕುಚಿತತೆಯಿಂದ ವಿಶಾಲತೆಯೆಡೆಗೆ ಕವಯಿತ್ರಿಯ ಮನ ತುಡಿತಗೊಳ್ಳುತ್ತಾ ಸಾಗಿದೆ. ಉಳಿ ಏಟಿನಿಂದ ಕಗ್ಗಲ್ಲು ಶಿಲೆಯಾಗಿ ರೂಪುಗೊಂಡಂತೆ ಅನುಭವದ ತಿದಿಯೊತ್ತಿ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಜೀವನ ಪಾಠ ಕಲಿಸುತ್ತದೆ ಎಂಬುದನ್ನು ತಮ್ಮನ್ನೇ ತಾವು..........
ಅಮ್ಮನಾಗದೇ ಅಮ್ಮನನ್ನು 
ಅರ್ಥೈಸಿಕೊಳ್ಳುವುದು
ಅಸಹಜವಲ್ಲವೇ? (ಕೊಂಡಿ)
ಎಂದು ಗೆಳತಿಯ ಪ್ರಶ್ನೆಗೆ ಮರು ಪ್ರಶ್ನಿಸಿ. ಉತ್ತರವಾಗಿಸುತ್ತಾ ಸಾಗುವ ರೀತಿ ಸೋಜಿಗದ ಸೊಗಸು.
ತನ್ನ ಮಗುವಿಗೋಸ್ಕರ ಮಾತೃ ಮಡಿಲಿನ ತ್ಯಾಗ ಅನನ್ಯವಾದುದು. ಹೆತ್ತ ಕರುಳಿನ ಸಂತಸಕ್ಕೋಸ್ಕರ ಎಷ್ಟೆಲ್ಲಾ ಕಷ್ಟ-ಕೋಟಲೆಗಳನ್ನು ಅನುಭವಿಸಿ ಮಗುವಿನ ಒಂದು ಚಿಕ್ಕ ಮುದ್ದಾದ ನಗುವಿನ ಅಲೆಯಲ್ಲಿ ತೇಲಿ ಎಲ್ಲವನ್ನು ಮರೆತು ಬಿಡುತ್ತಾಳೆ. ಅದಕ್ಕಾಗಿಯೇ, ಹಿರಿಯರು ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ್ತ ತಾಯಿಯನ್ನು ಪೂಜಿಸು, ತಾಯಿಗಿಂತ ಬಂಧುವಿಲ್ಲ. ಜನನಿ ತಾನೆ ಮೊದಲ ಗುರು ಎಂದು ಸ್ತುತಿಸಿದ್ದಾರೆ. ಹೀಗೆ ಅವಳ ಹೊರ-ಒಳವುಗಳ ಲೀಲೆ ಅತ್ಯದ್ಭುತವಾದುದು.
ಮುದ್ದು ಮಗು
ಸ್ನಿಗ್ದ ನಗು
ನನ್ನೆಲ್ಲಾ ಒಲವಧಾರೆ
ನಿನ್ನ ಬಾಲಲೀಲೆಗಳಿಗೆ. (ಹಾರೈಕೆ)
‘ಕಿಚ್ಚು’ ಕವಿತೆಯ ಅಂಧಕಾರದೊಳಗಿನ ಬೆಳಕನ್ನು, ನಿದ್ರೆಯೊಳಗಿನ ಎಚ್ಚರವನ್ನು, ಸೋಲಿನಲ್ಲಡಗಿದ ಗೆಲುವನ್ನು ಎನ್ನುವ ಸಾಲುಗಳು ಮರದೊಳಡಗಿದ ಕಿಚ್ಚಿನಂತೆ, ಹಾಲನೊರೆಯೊಳಡಗಿದ ತುಪ್ಪದಂತೆ, ಎಂಬ ಶರಣರ ವಚನದ ಪಂಕ್ತಿಯನ್ನು ನೆನಪಿಸುತ್ತದೆ.
ಛದ್ಮ ಲೋಕವ ಛೇದಿಸುತ್ತಾ..ಎಂಬ ಅವರದೇ ಋಣಭಾರದ ನುಡಿಗಳನ್ನಾಡಿದ ಪುಟಗಳ ಕೊನೆಯಲ್ಲಿ ಸಹೃದಯ ಓದುಗರ ವಿಮರ್ಶೆಗಾಗಿ ಸದಾ ಸ್ವಾಗತ ಎಂದು ಹೇಳುವ ಕವಯಿತ್ರಿ ತಮ್ಮ ಹದಿನೇಳನೇ ಕವಿತೆ ‘ಕೋರಿಕೆ’ ಯಲ್ಲಿ
ಆಚೆ ದಡದಲ್ಲಿ ನಿಂತು
ಎನ್ನ ವಿಮರ್ಶಿಸುವ
ಯಾತ್ರಿಯೇ, ತೀರಾ ಕಟುವಾಗಬೇಡ
ನನ್ನ ಈಜಾಟದ ಮೊದಲ
ಭಂಗಿಗಳಿಗೆ....’
.ಎಂದು ಎಚ್ಚರಿಕೆ ನೀಡುವ ಕವಯಿತ್ರಿ ಮುಂದುವರೆದು ನೆನಪಿರಲಿ ನೀನೂ ಹೀಗೆ ತಿಣುಕಾಡಿ, ಮುಳುಗಿ, ನಂತರವೇ ಕಲಿತೆ ಆ ದಡಕ್ಕೆ ಸರಾಗವಾಗಿ ಸಾಗಿಹೋಗುವುದನ್ನು ಎನ್ನುತ್ತಾ ವಿಮರ್ಶಕನನ್ನು ಪ್ರಾರಂಭಿಕ ಬರವಣೆಗೆಯ ಹಂತಕ್ಕೆ ಕರೆದೊಯ್ದು ಮತ್ತೆ ವಿನಯದಿಂದ....
ನಾನಿನ್ನೂ  ಕಲಿಕೆಯ ಮೊದಲ
ಪಾಠದಲ್ಲಿದ್ದೇನೆ.
ಏಳು-ಬೀಳು ಸಹಜವಲ್ಲವೇನು?
ಎಂದು ಪ್ರಶ್ನಿಸುತ್ತಾ ಪ್ರೋತ್ಸಾಹಿತ ಮೆಚ್ಚುಗೆಯ ಮಾತುಗಳನ್ನು ನಿರೀಕ್ಷಿಸುತ್ತಾರೆ.
ಕಾವ್ಯ ಬದುಕಿನ ಪ್ರತಿಬಿಂಬ, ಬದುಕು-ಸಮಾಜ ಬದಲಾದಂತೆ ಅದೂ ಬದಲಾಗುತ್ತಲೇ ಸಾಗುತ್ತದೆ. ನವ್ಯ ಕಾವ್ಯ ತನ್ನ ಸಂಕೀರ್ಣತೆ ಹಾಗೂ ಕ್ಲಿಷ್ಟತೆಗಳಿಂದಾಗಿ ಜನರಿಂದ ದೂರ ಉಳಿಯುವಂತಾದಾಗ ಇತ್ತ ನವ್ಯವೂ ಅಲ್ಲದ ಅತ್ತ ರಮ್ಯವೂ ಅಲ್ಲದ ಇವೆರಡೂ ಕಾವ್ಯಾಮಾರ್ಗಗಳ ಉತ್ತಮಗುಣಗಳನ್ನು ಒಳಗೊಂಡ ಸಮನ್ವಯ ಮನೋಧರ್ಮದ ಕಾವ್ಯ ಮಾರ್ಗವೊಂದು ಮೂಡಿ ಬಂದಿತು. ಅದೇ ‘ಸಮನ್ವಯ ಕಾವ್ಯ’ ಪ್ರಸ್ತುತ ಕೃತಿಯಲ್ಲಿನ ಬಹುತೇಕ ಕವಿತೆಗಳು ಈ ಸಾಲಿಗೆ ಸೇರುತ್ತವೆ.
‘ಛದ್ಮವೇಷ’ ದಲ್ಲಿ ಕವÀಯಿತ್ರಿ ಬದುಕಿನ ವಾಸ್ತವತೆಗೆ ಮಿಮುಖರಾಗದೆ ನಿಸರ್ಗ ಪ್ರೇಮವನ್ನು ಕೈಬಿಡದೆ ಕ್ಲಿಷ್ಟತೆ, ಸಂಕೀರ್ಣತೆಗಳನ್ನು ತ್ಯಜಿಸಿ ಕಾವ್ಯ ರಚಿಸಿದ್ದಾರೆ. ಇಲ್ಲಿನ ಕವಿತೆಗಳ ಧ್ವನಿ, ಮಾಧುರ್ಯವನ್ನು ನಾಚಿಸುವಷ್ಟು ಗಾಢವೋ ಗಟ್ಟಿಯೋ ಎಂಬ ದ್ವಂದ್ವವನ್ನು ಮುಂದಿಡುತ್ತದೆ. ಇಲ್ಲಿನ ಪ್ರತಿಯೊಂದು ಕವಿತೆಗಳಲ್ಲಿ ಏನೋ ಒಂದು ರೀತಿಯ ದಾವಂತ, ಹಾರಿ ಕುಪ್ಪಳಿಸುವ ಗತಿ, ನಿಂತು, ಕುಳಿತು, ಆನಂದಿಸುವ ವ್ಯವಧಾನದಿಂದ ದೂರವೆನ್ನುವ ಹೊಳವು. ಶಬ್ದಗಳನ್ನು ಎಳೆದೆಳೆದು ರಾಶಿಮಾಡುತ್ತಾ ಬೊಗಸೆಯಲ್ಲಿಟ್ಟು ಚಿಮ್ಮುತ್ತ, ಅವುಗಳೊಂದಿಗೆ ಆಟವಾಡುವ ಕವಯತ್ರಿಯ ಮನೋಧರ್ಮ ಶ್ಮಾಘನೀಯ. ವಸ್ತುವಿನ ಸುತ್ತ ಗಿರಕಿ ಹೊಡೆದು ಶಬ್ಧಗಳು ಸುಸ್ತಾದ ಅನುಭವ ಆಗದೇಯಿರದು. ಎಂ. ಕುಸುಮ ರವರ ಪ್ರಯೋಗಶೀಲ ಮನಸ್ಸು ನವ ನವೀನ ತುಡಿತಗಳೆಡೆ ಮಿಡಿತಗೊಳ್ಳುತ್ತಾ ವಿಜೃಂಭಿಸಲಿ ಎಂದು ಆಶಿಸುತ್ತೇನೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ