ಶನಿವಾರ, ಮೇ 9, 2015

ಜಾನಪದ ಖಣಜ ಡಾ|| ಹಂಪನಹಳ್ಳಿ ತಿಮ್ಮೇಗೌಡರು

ಜಾನಪದ ಖಣಜ ಡಾ|| ಹಂಪನಹಳ್ಳಿ ತಿಮ್ಮೇಗೌಡರು

ಒಂದು ಕಡೆ ಇಂಗ್ಲೀಷ್, ಒಂದು ಕಡೆ ಕನ್ನಡ ಹಾಗೇ ಇನ್ನಿತರ ಭಾಷೆಗಳ ರಮ್ಯ ಸಾಹಿತಿಗಳು ಕಲಾವಿದರು ಒಪ್ಪುವಂತೆ, ಕಲೆ ಜನಸಾಮಾನ್ಯನ ಬಗ್ಗೆ ಇರಬೇಕು. ಮತ್ತೆ ಕಲೆ ಜನ ಸಾಮಾನ್ಯನಿಗೆ ತಿಳಿಯಬೇಕು. ನಿಜ ಅದಕ್ಕೆ ತಕ್ಕಂತೆ ಜನ ಸಾಮಾನ್ಯರೂ ಸಹ ಸ್ಪಂದಿಸಬೇಕು. ಇದು ಕೇವಲ ಆಸ್ಥಾನ ಪಂಡಿತರಿಗೆ ಎನ್ನುವಂತೆ ಮಾತ್ರ ಆಗಬಾರದು. ಆದರೆ ಇನ್ನೊಂದು ಕಡೆ ಕಲೆಯಲ್ಲಿ ನಾವಿನ್ಯತೆ ಇರಬೇಕು. ಈ ನಾವಿನ್ಯತೆ ಕಾರಣವಾಗಿ ಕಲೆ ಕೇವಲ ಪ್ರತಿಷ್ಠಿತರ ಸೊತ್ತಾದರೆ ಅದನ್ನು ಜನ ಸಾಮಾನ್ಯರ ಬಳಿಗೆ ಒಯ್ಯತಕ್ಕಂತ ಆ ಒಂದು ಉದ್ದೇಶ ಎಲ್ಲಿ ಸಾರ್ಥಕವಾಗುತ್ತೆ ? ಇದೇ ಪ್ರಶ್ನೆ ಕಾಡಿದ್ದು ಹಾಸನ ಜಿಲ್ಲೆಯ ಅತ್ಯಂತ ವಿಶಿಷ್ಟವಾದ ಹಾಗೂ ಅತ್ಯಂತ ಶ್ರೇಷ್ಠ ಕೆಲಸ ಮಾಡುತ್ತಿರುವ ಡಾ|| ಹಂಪನಹಳ್ಳಿ ತಿಮ್ಮೇಗೌಡರಿಗೆ.
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪಾರಂಪರಗತವಾದ ಜ್ಞಾನಿ-ಅಜ್ಞಾನಿಗಳು, ಅಕ್ಷರಸ್ಥರು-ನಿರಕ್ಷರಕುಕ್ಷಿಗಳೂ ಕೂಡ ಸ್ಪಂದಿಸತಕ್ಕಂತಹ ಜಾನಪದ ಕಲೆಯನ್ನು ಸುಧಾರಿಸಿ, ಅದರ ಬಗ್ಗೆ ಒಂದು ಅದ್ಭುತ ಕಲ್ಪನೆ ಮಾಡಿಸಿದ್ದು ತಿಮ್ಮೇಗೌಡರು. ಪ್ರಾಯಶಃ ನನಗೆ ತಿಳಿದ ಹಾಗೆ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜನಪದ ಕ್ಷೇತ್ರದಲ್ಲಿ ಗ್ರಂಥ ರಚಿಸಿದವರೆಂದರೆ ಜಾನಪದ ಜಂಗಮ       ಡಾ|| ಎಸ್.ಕೆ ಕರೀಂಖಾನ್ ಹಾಗೂ ಡಾ|| ರಾಜೇಗೌಡ ಹೊಸಳ್ಳಿ ಇವರ ನಂತರ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಜೊತೆ ಜೊತೆಗೆ ಜಾನಪದದ ಸೊಗಡನ್ನ ಉಣಬಡಿಸುವಂತ ಕೃತಿಗಳನ್ನು ರಚಿಸಿದವರೆಂದರೆ ತಿಮ್ಮೇಗೌಡರು. ಇವರು ಜನಿಸಿದ್ದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಹಂಪನಹಳ್ಳಿಯಲ್ಲಿ, 1957 ಮೇ-18 ರಂದು. ಇವರ ತಂದೆ ಮೂಡಲಗಿರಿಗೌಡ, ತಾಯಿ ಶ್ರೀಮತಿ ಚನ್ನಮ್ಮ. ನಿರಕ್ಷರ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ಹೋರಾಟದ ಬದುಕಿನೊಂದಿಗೆ ಬೆಳೆದು ಬಂದವರು. ಹುಟ್ಟೂರಾದ ಹಂಪನಹಳ್ಳಿಯಲ್ಲಿ ಕಿರಿಯ ಪ್ರಾಥಮಿಕ, ಹೆರಗುನಲ್ಲಿ ಹಿರಿಯ ಪ್ರಾಥಮಿಕ ಹಾಗೂ 12 ಕಿ.ಮೀ ದೂರದಲ್ಲಿದ್ದ ಶಾಂತಿಗ್ರಾಮಕ್ಕೆ ದಿನಾಲೂ ಕಾಲುನಡಿಗೆಯಲ್ಲೇ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಹಾಸನದ ಕಲಾ ಕಾಲೇಜಿನಲ್ಲಿ ಪಿ.ಯು.ಸಿ ಯಿಂದ ಬಿ.ಎ ಪದವಿ ಪಡೆದು ಮೈಸೂರು ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ಪದವಿ ಪಡೆದರು. ನಂತರ ತಾವು ಓದಿದ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಇಷ್ಟೇ ಅಲ್ಲದೇ ಜಾನಪದ ಸಾಹಿತ್ಯ, ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
ಹಾಸನ ಜಿಲ್ಲಾ ಸಾಂಸ್ಕøತಿಕ ವೇದಿಕೆ ಪ್ರಾರಂಭ ಮಾಡಿದವರಲ್ಲಿ ಅಗ್ರಮಾನ್ಯರಾಗಿದ್ದಾರೆ. ಜೊತೆಗೆ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ವರ್ಷ ಕಾರ್ಯೋನ್ಮುಖಗೊಂಡು ಸುಮಾರು 36 ಅದ್ದೂರಿ ಹಾಗೂ ಅರ್ಥಗರ್ಭಿತ ಸಮಾರಂಭಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಜಾನಪದ ಅಕಾಡೆಮಿಯಿದೆಯೆಂದು ಇಡೀ ಜಿಲ್ಲೆಗೆ ತೋರಿಸಿ ಕೊಟ್ಟವರೆಂದರೆ ತಿಮ್ಮೇಗೌಡರು. ಮೂಲ ಜಾನಪದ ಸೊಗಡನ್ನು ಬಿಂಬಿಸುವಂತಹ ತಂಬೂರಿ ಕಲಾವಿದರಾದ ಲಕ್ಷ್ಮಯ್ಯ, ಕೀಲು ಕುದುರೆ ಬಂಗಾರಿ, ಅರಸೀಕೆರೆ ಕೊಮಾರಯ್ಯ, ಇಬ್ಬೀಡು ಚನ್ನಪ್ಪ ಇವರುಗಳಿಗೆ ಅಕಾಡೆಮಿಯ ಬೆಳ್ಳಿಹಬ್ಬ ಸಂದರ್ಭದಲ್ಲಿ ಅಕಾಡೆಮಿ ರಾಜ್ಯ ಪ್ರಶಸ್ತಿ ಬರುವಲ್ಲಿ ಶ್ರಮಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದ ಮತ್ತು ಒಬ್ಬ ವಿದ್ವಾಂಸರನ್ನು ಗೌರವಿಸುವ ಅವಕಾಶವಿದ್ದಾಗ ಹಾಸನ ಜಿಲ್ಲೆಗೆ ಬೆಳ್ಳಿಹಬ್ಬದ ಪ್ರಶಸ್ತಿಯನ್ನು ಹೆಚ್.ಜೆ. ಲಕ್ಕಪ್ಪಗೌಡ, ಹಿ.ಶಿ ರಾಮಚಂದ್ರೇಗೌಡ, ಡಾ|| ರಾಜೇಗೌಡ ಹೊಸಹಳ್ಳಿ, ಮೇಟಿಕೆರೆ ಹಿರಿಯಣ್ಣ, ಕಬ್ಬಳಿ ವೆಂಕಟರಾಮು ಹಾಗೂ ಶಿವನಗೌಡ ಪಾಟೀಲ್ ಹೀಗೆ ಆರು ಜನರಿಗೆ ಸಂದಲು ಇವರೇ ಕಾರಣಕರ್ತರೆನ್ನುವುದು ಹೆಮ್ಮೆಯ ಸಂಗತಿ.
ದೇಶದಾದ್ಯಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿರ್ದೇಶಕರಾಗಿ ದುಡಿದಿದ್ದಾರೆ. ಜಾನಪದ ಸಾಹಿತ್ಯ ಅಕಾಡೆಮಿಯ ಸಹ ಯೋಗದಲ್ಲಿ ಜಾನಪದ ಶಿಬಿರ ಏರ್ಪಡಿಸಿ,  ಅದರ ನಿರ್ದೇಶಕರಾಗಿಯೂ  ಕೆಲಸ ಮಾಡಿದರು. ನಿಜಕ್ಕೂ ವಿವಿಧ ಅನ್ನಿಸುವ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ, ಭಿನ್ನ ಮಗ್ಗಲುಗಳಿಂದ ವಿವೇಚಿಸಿ, ವಿಶ್ಲೇಷಿಸಿ, ವಿಮರ್ಶಿಸಿ ಸಾರಭೂತವಾಗಿ ಅಡಕಗೊಳಿಸಿ ಬರೆದ ಜಾನಪದ ಸೊಗಡಿನ ಬರಹಗಳು ಸಂಕ್ಷೇಪ ಅನ್ನಿಸಿದರೂ ನಿಕ್ಷೇಪದಂಥವು. ಅದರಲ್ಲಿಯೂ ಅವರ ಗದ್ಯ ಬರವಣಿಗೆ ಶೈಲಿ ಅದ್ಭುತ. ನಿಷ್ಠ್ಟುರ ವ್ಯಕ್ತಿತ್ವ ಹೊಂದಿದ ತಿಮ್ಮೇಗೌಡರು ಒಬ್ಬ ನೇರವಾದಿ. ತಮ್ಮದೇ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿ ಬಾಳಿದವರು, ಹಾಗೆಯೇ ಬಾಳುವವರೂ ಸಹ. ಜಾತಿ ವ್ಯವಸ್ಥೆಯ ಬಗ್ಗೆ ಸಿಡಿದೆದ್ದವರು. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹಗಲಿರುಳು ದುಡಿದವರೆಂದರೆ ಅತಿಶಯೋಕ್ತಿಯಾಗಲಾರದು.
ಸದಾ ವೈಚಾರಿಕ ಚಿಂತನೆ ನಡೆಸುವ ಇವರು ಅದೆಷ್ಟೋ ಎಲೆ-ಮರೆ ಕಾಯಿಗಳನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಸಹಸ್ರಾರು ಶಿಷ್ಯ ವೃಂದವನ್ನು ಹೊಂದಿರುವ ಇವರು ಸಾಂಸ್ಕøತಿಕ ಪರವಾದ ಚಿಂತಕರು. ನೂರಾರು ಕಲಾವಿದರನ್ನು ಮುಂಬೈ, ದೆಹಲಿ ಮುಂತಾದ ಅನೇಕ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕೊಡಿಸುವುದರ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಜೊತೆ ಜೊತೆಗೆ ನನ್ನಂತಹ ಅನೇಕ ಯುವ ಸಾಹಿತಿಗಳಿಗೂ ಮಾರ್ಗದರ್ಶನ ಕೊಟ್ಟು ಮುನ್ನಡೆಸಿದ್ದಾರೆ. ದೇಶದ ವಿವಿಧೆÉಡೆಯಲ್ಲಿ ಅಂದರೆ ದೆಹಲಿ, ಇಂಧೂರ್, ಮುಂಬೈಯಲ್ಲಿ ನಡೆದ ಅನೇಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಕೀರ್ತಿ ಇವರದು. ಕರ್ನಾಟಕದ ಬಹುಶಃ ಎಲ್ಲಾ ಜಿಲ್ಲೆಗಳಲ್ಲೂ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದು. ಇವರ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಹಾಗೂ ಅನೇಕ ಸಂಚಿಕೆಗಳಲ್ಲಿಯೂ ಪ್ರಕಟಗೊಂಡಿವೆ.
ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಗೋಷ್ಠ್ಟಿಯಲ್ಲಿ ಪಾಲ್ಗೊಂಡಿದ್ದರು.
ಬೀದರ್‍ನಲ್ಲಿ ನಡೆದ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನದ ಆಹ್ವಾನಿತರಾಗಿ ಹಾಗೂ ‘ಲೋಕಸಿರಿ’ ನೆನಪಿನ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ.
ಬೆಳಗಾವಿಯಲ್ಲಿ ನಡೆದ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜೀವನಾವರ್ತನ ಗೀತೆಗಳು’ ಎನ್ನುವ ಇವರ ಕೃತಿ ಬಿಡುಗಡೆಯಾಗಿದೆ.
ಸಿರಿಗೆರೆಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸ್ವಾಮೀಜಿಯವರಿಂದ ಸನ್ಮಾನಗೊಂಡಿದ್ದಾರೆ.

ಇವರ ಪ್ರಕಟಿತ ಕೃತಿಗಳು
ಗದ್ಯ ಕೃತಿಗಳು :-
ಮನನ, ಗುರುಮುಖ, ಹಿರಿಮೆಯ ಹಾಸನ, ಹಾಸನ ಜಿಲ್ಲೆಯ ಜಾನಪದ ಕಲಾವಿದರು, ಕದಿರು

ವ್ಯಕ್ತಿ ಪರಿಚಯಗಳು :-
ಮತಿಘಟ್ಟ ಕೃಷ್ಣಮೂರ್ತಿ, ಡಾ|| ಹೆಚ್.ಜೆ ಲಕ್ಕಪ್ಪಗೌಡ, ಡಾ|| ರಾಜೇಗೌಡ ಹೊಸಳ್ಳಿ.
ಸಂಪಾದಿತ ಕೃತಿಗಳು :-
ಜಾನಪದ ತಲೆಮಾರು -4, ಜಾನಪದ ಅಡುಗೆ ಉದ್ಯಮೀಕರಣ, ಜಾನಪದ ಜೀವನಾವರ್ತನ ಗೀತೆಗಳು.
ಇತರರೊಂದಿಗೆ ಸಂಪಾದಿತ ಕೃತಿಗಳು :-
ಜಾನಪದ ಸಮಾಚಾರ, ವಜ್ರಮುಖಿ. ಸಾಹಿತ್ಯ ಮಾರ್ಗ-1, ಸಾಹಿತ್ಯ ಮಾರ್ಗ-2, ಕಾವ್ಯ ಸಂಚಯ-5, ಕಾವ್ಯ ಸಂಚಯ-6, ಆಯ್ದ ಕವನಗಳು, ಸಾಹಿತ್ಯ ಸಂಪದ-1, ಸಾಹಿತ್ಯ ಸಂಪದ-2.
ಸಂಪಾದಿತ ಸಂಚಿಕೆಗಳು :- ಹೇಮಸಿರಿ, ಬೆಳ್ಳಿಬೆಳಕು, ಕಲಾಶ್ರೀ.
ಒಟ್ಟಾರೆ ಹೇಳುವುದಾದರೆ ಸೃಜನಶೀಲವಾದುದರಲ್ಲೆ ಶೋಧವೂ ನಿಹಿತವಿರುತ್ತದೆ-ಅರ್ಥದ ಶೋಧ, ತತ್ವದ ಶೋಧ, ಸತ್ಯದ ಶೋಧ, ಶಾಸ್ತ್ರೀಯ ನೆಲೆಯ ಸಂಶೋಧನೆಗೂ ಇವೇ ಗಮ್ಯವಾಗಿವೆ. ಹುಡುಕುವುದು, ಕಂಡುಹಿಡಿಯುವುದು, ಸೋಸುವುದು, ಶುದ್ಧಿ ಮಾಡುವುದು ಶೋಧನೆಯ ಪ್ರಕ್ರಿಯೆಗಳು. ಸಾಹಿತ್ಯದಲ್ಲಿ ಸಂಸ್ಕøತಿಯ ಶೋಧನೆಯೂ ನಡೆಯುತ್ತದೆ. ಸಾಹಿತ್ಯ ಮತ್ತು ಸಂಶೋಧನೆ ಭಿನ್ನ ಶಿಸ್ತಿನ ವಿಷಯವಾಗಬಹುದಾಗಿಯೂ ಪರಸ್ಪರವಾದವು, ಸೃಜನಶೀಲ ಲೇಖಕರಾದ ಡಾ|| ಹಂಪನಹಳ್ಳಿ ತಿಮ್ಮೇಗೌಡರಲ್ಲಿ ಇವು ಮೇಳೈಸಿವೆ. ಅಭ್ಯಾಸ ಎನ್ನುವುದು ಸವಿನಯ ಅಧ್ಯಯನ, ಶ್ರದ್ಧೆಯ ಮಾತು. ಸತ್ಯಮುಖಿಯಾದವರಿಗೆ ಇಂಥ ವಿನಯ ಅಧ್ಯಯನದಲ್ಲಿ ಸಹಜವಾಗಿರುತ್ತದೆ. ವಿಷಯ, ವಿಶೇಷತೆಗಳನ್ನು ಪರಿಚಯಿಸಿಕೊಳ್ಳುವ ಪರಿಯನ್ನು ಇವರ ಗ್ರಂಥಗಳಲ್ಲಿ ಗಮನಿಸಬಹುದಾಗಿದೆ. ಇವರ ಸಾಹಿತ್ಯ ಸೇವೆ ಹಾಸನಕ್ಕೆ ಮಾತ್ರ ಮೀಸಲಾಗಿರದೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೂ ಹರಡಿ ಧೀಮಂತವಾಗಲಿ ಎಂದು ಆಶಿಸುತ್ತೇನೆ.


ಕೊಟ್ರೇಶ್. ಎಸ್. ಉಪ್ಪಾರ್
        ಲೇಖಕರು
ಆಲೂರು.
  : 9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ