ಶನಿವಾರ, ಮೇ 9, 2015

ಸಮ ಸಮಾಜದ ಬರಹಗಾರ – ಚಂದ್ರಕಾಂತ ಪಡೆಸೂರ

ಸಮ ಸಮಾಜದ ಬರಹಗಾರ – ಚಂದ್ರಕಾಂತ ಪಡೆಸೂರ
ಮೂಲ ಶಿಕ್ಷಣ, ಸ್ವ ಮೌಲ್ಯಮಾಪನ, ಭಾಷಾ ಶಿಕ್ಷಣ, ಲೇಖನ ಕಲೆ, ಕಾವ್ಯ ಪ್ರಭೆ, ವಿಮರ್ಶೆಯ ಸ್ವರೂಪ ಹೀಗೇ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿ ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಗಳೆರಡರಲ್ಲಿಯೂ ವಿಶೇಷ ಸಾಧನೆ ಮಾಡಿದ ಕನ್ನಡದ ಪ್ರಬುದ್ಧ ಸಾಹಿತಿ ಮಿರ್ಜಿ ಅಣ್ಣರಾಯರಂತೆ ಪ್ರಸ್ತುತ ಸಂದರ್ಭದಲ್ಲಿ ಇವೆರಡೂ ಕ್ಷೇತ್ರದಲ್ಲಿ ಸದ್ದು-ಗದ್ದಲವಿಲ್ಲದೆ ಕೈಂಕರ್ಯ ಮಾಡುತ್ತಿರುವ ಕಾಯಕಯೋಗಿ ಚಂದ್ರಕಾಂತ ಪಡೆಸೂರರೆಂದರೆ ಅತಿಶಯೋಕ್ತಿಯಾಗಲಾರದು.
ಪ್ರಗತಿಶೀಲ ಸಾಹಿತ್ಯದ ನೆಲೆಗಟ್ಟಿನಲ್ಲಿ ಆಲೋಚಿಸುವ ಇವರು ಸಾಹಿತ್ಯ ನಿಂತ ನೀರಾಗದೇ ಸದಾ ಚಲನಶೀಲವಾಗಿರಬೇಕೆಂಬುದು ಇವರ ಆಶಯ. ಸಾಹಿತ್ಯದಲ್ಲಿ ಬರಿ ಸಂಪ್ರದಾಯ, ನಂಬಿಕೆಗಳು ಇರುವ ಬದಲು ಜನತೆಯ ಮನೋವಿಕಾಸಕ್ಕೆ, ನಾವಿನ್ಯತೆಯ ವಿಚಾರಪರತೆಗೆ ಇಂಬು ಕೊಡಬೇಕೆಂಬುದು ಪಡೆಸೂರರ ತುಡಿತವಾಗಿದೆ. ಸಾಹಿತ್ಯವೆಂಬುದು ಸಂಪ್ರದಾಯದ ನಿಯಮಗಳನ್ನು ಬಿಟ್ಟು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮಾನವೀಯ ಮೌಲ್ಯಗಳನ್ನು ಉನ್ನತೀಕರಿಸುವಂತಿರಬೇಕು. ವಿಚಾರ ಕ್ರಾಂತಿಯನ್ನು ಪ್ರತಿಯೊಬ್ಬ ಸಾಹಿತಿಯೂ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಾಮಾನ್ಯ ಮನುಷ್ಯನ ಭಾವನೆಗಳಿಗೆ ನಾವು ಸ್ಪಂದಿಸಬಹುದು. ಈ ನೆಲೆಗಟ್ಟಿನಲ್ಲಿಯೇ ಪಡೆಸೂರರು ಬದುಕು ಸಾಗಿಸುತಿದ್ದಾರೆ. ಇಂತಹ ಒಬ್ಬ ಲೇಖಕರು ನಮ್ಮ ನಡುವೆ ಇರುವುದು ಹೆಮ್ಮೆಯ ಸಂಗತಿ.
ಶ್ರೀ ಚಂದ್ರಕಾಂತ ಪಡೆಸೂರರು ಕ್ರಿ.ಶ.1960 ಜುಲೈ 01 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಶ್ರೀ ಗಂಗಪ್ಪ ಹಾಗೂ ಶ್ರೀಮತಿ ನಾಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಎಂ.ಎ, ಬಿ.ಇಡಿ ಪದವಿದರರಾದ ಇವರು ಕಳೆದ ಮೂರು ದಶಕಗಳಿಂದ ಹಾಸನದ ಆನಂದ ಭಾರತಿ ಪ್ರೌಢ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1984 ರಿಂದ 1987 ರತನಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೆ ಅವಧಿಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಕನ್ನಡ-ಕನ್ನಡ ನಿಘಂಟುವಿನ ಸಂಪಾದಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
1996 ರಿಂದಲೂ ಹಾಸನ ಜಿಲ್ಲೆಯ ಮನೆ-ಮನೆ ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂದಿಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಪ್ರೌಢ ಶಾಲಾ ಮುಖ್ಯಸ್ಥರಾಗಿ, ಕವಿಯಾಗಿ, ಗದ್ಯ ಲೇಖಕರಾಗಿ, ವಿಮರ್ಶಕರಾಗಿ, ಎಲ್ಲಕ್ಕಿಂತ ಉತ್ತಮ ಚಾಲಾಕಿತನದ ಸಂಘಟಕರಾಗಿ, ಆಡಳಿತಗಾರರಾಗಿ ಹೆಸರಾಗಿರುವ ಪಡೆಸೂರರು ಸೂಕ್ಷ್ಮ ಸಂವೇದನೆಯ ಬರಹಗಾರರು. ಸಮಾಜದ ತವಕ, ತಲ್ಲಣ, ಆತಂಕಗಳನ್ನು, ಜೈವಿಕ ಪ್ರೀತಿಯ ಎಳೆಗಳನ್ನು ಗೇಯತೆ, ಛಂದಸ್ಸುಗಳಲ್ಲಿ ಸುಂದರವಾಗಿ ಕಟ್ಟಿ ಕೊಟ್ಟಿರುವುದು ಅಪ್ಯಾಯಮಾನವಾದುದು. ಸಾಮಾಜಿಕ ಮೌಢ್ಯತೆ, ಬದುಕಿನ ವಿರೋಧಾಬಾಸಗಳು ಇವರ ಸಾಹಿತ್ಯದಲ್ಲಿ ಮೇಳೈಸಿವೆ.
ಸಾಹಿತ್ಯ ಕ್ಷೇತ್ರ ಃ ‘ಇದಿಮಾಯಿ’ ಇವರ ಚೊಚ್ಚಲ ಸ್ವತಂತ್ರ ಸಾಹಿತ್ಯ ಕೃತಿ. ಈ ನಾಟಕ ಹಲವಾರು ಪ್ರದರ್ಶನಗಳನ್ನು ಕಂಡು ಜನ ಮನ್ನಣೆ ಗಳಿಸಿದೆ. ‘ಭಾವ ದೇಹ’(2013) ಇವರ ಕವನ ಸಂಕಲನ. 50 ಕವಿತೆಗಳ 80 ಪುಟಗಳ ಈ ಕೃತಿಗೆ ಕನ್ನಡದ ಪೂಜಾರಿ ಹಿರೆಮಗಳೂರು ಕಣ್ಣನ್ ಅವರ ಮುನ್ನುಡಿ ಕಳೆಕಟ್ಟಿದೆ. ಪ್ರಸ್ತುತ ಪ್ರಾಪಂಚಿಕ ಮೌಲ್ಯಗಳು ದಮನಿತರ ವ್ಯಥೆಗಳು, ಅಜ್ಞಾನದ ಅಟ್ಟಹಾಸಗಳು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತಿಬಿಂಬಿತವಾಗಿರುವುದು ಸ್ತುತ್ಯಾರ್ಹ. ಈ ಕವಿತೆಗಳ ಸಂಕಲನದಲ್ಲಿ ಪ್ರತಿಯೊಂದು ಕವನವನ್ನು ಓದುತ್ತಾ ಹೋದ ಹಾಗೆ ರಸಾನಂದದ ಆಳಕ್ಕೆ ಇಳಿಯುತ್ತಾ ರಸ ಸ್ವಾದದ ಮಧುರತೆಯನ್ನು ಹೆಚ್ಚೆಚ್ಚು ಕಂಡುಕೊಳ್ಳುತ್ತಾ ಹೋಗಬಹುದು.
ಪಡೆಸೂರರ ಕವಿತೆಗಳಲ್ಲಿ ಕಸುವಿದೆ, ಕಾಂತಿಯಿದೆ, ನಾದವಿದೆ, ಬನಿ ತುಂಬಿದೆ, ಭಾಷೆಗೆ ಎದೆ ತುಂಬಿದ ಭಾವದ ಹೆಪ್ಪು ಇದೆ. ಶೈಲಿ ಸರಳ ಆದರೆ ತುಂಬಾ ಪರಿಣಾಮಕಾರಿಯಾಗಿ ಮನಸೂರೆಗೊಳ್ಳುತ್ತದೆ.
‘ಮನದೊಳಗೆ...’(2013) ಇದು ಚಿಂತನ ಬರಹಗಳ ಸಂಕಲನ. 22 ರೇಡಿಯೋ ಚಿಂತನಗಳನ್ನೊಳಗೊಂಡ 80 ಪುಟಗಳ ಈ ಕೃತಿಗೆ ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರರು ಬರೆದ ಮುನ್ನುಡಿ ಸಾರ್ಥಕತೆ ಪಡೆದುಕೊಂಡಿದೆ. ತತ್ತ್ವ, ಪ್ರಾಣೀಯತೆ, ದಯೆ-ಧರ್ಮ, ಜೀವನ-ಮರಣ, ಓಂಕಾರ, ಒಳ್ಳೆಯತನ, ಶುದ್ಧಿ, ತಾಯಿ-ಗುರು, ಚಿಂತೆ-ಚಿಂತನ ಮುಂತಾದ ಮೌಲಿಕ ವಿಷಯಗಳ ಬಗೆಗಿನ ಚಿಂತನಗಳು ಈ ಕೃತಿಯಲ್ಲಿವೆ.
‘ಕಮಲಾಭಿನಂದನ’, ‘ನೆನಪು’, ‘ಕಿಡ್ನಿ ವಿಫಲ ರೋಗಿಗಳ ಕಹಿ ಅನುಭವಗಳು’ ಈ ಮೂರು ಸಂಪಾದಿತ ಕೃತಿಗಳಾಗಿವೆ.
ಅಲ್ಲದೆ ಆಕಾಶವಾಣಿಯಲ್ಲಿ ಹಲವಾರು ಚಿಂತನ, ನಾಟಕಗಳನ್ನು ಪ್ರಸ್ತುತ ಪಡಿಸಿರುವ ಪಡೆಸೂರರು ಸಾವಿರಾರು ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ‘ಇದಿಮಾಯಿ’, ‘ಹೋಳಿ ಕಾಮಣ್ಣ’, ‘ವೀರ ದುರ್ಯೋಧನ’ ಮುಂತಾದ ನಾಟಕಗಳು ಅಪಾರ ಜನಪ್ರಿಯವಾಗಿವೆ. ಅಲ್ಲದೆ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿವೆ. ಪ್ರತಿ ವರ್ಷ ಜಿಲ್ಲಾಡಳಿಯದಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯ ದಿನಾಚರಣೆ ಕಾರ್ಯಕ್ರಮಗಳಿಗೆ ಪ್ರಸಿದ್ಧ ರಾಜ ವಂಶಗಳನ್ನು ಕುರಿತ ಬೃಹತ್ ರೂಪಕಗಳನ್ನು ಬರೆದು ನಿರ್ದೇಶನ ಮಾಡುತ್ತಿರುವುದು ಶ್ಲಾಘನೀಯವಾದುದು. ಒಂದೊಂದು ರೂಪಕದಲ್ಲೂ ಸಾವಿರಾರು ಮಕ್ಕಳು ಪಾಲ್ಗೊಂಡು ಅಭಿನಯ ಮಾಡುವುದು ಸಾಮಾನ್ಯದ ವಿಷಯವಲ್ಲ. ಯಾವಾಗಲೂ ನಾವಿನ್ಯತೆಗೆ ಒತ್ತು ನೀಡುವ ಪಡೆಸೂರರು ಹೊಸ ಪರಿಕಲ್ಪನೆಗಳ ಕಡೆಗೆ ತುಡಿಯುತ್ತಿರುತ್ತಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ