ಶನಿವಾರ, ಮೇ 9, 2015

ಮಾನವೀಯ ಸಂವೇದನಾ ಬರಹಗಾರ – ಡಾ|| ಎಂ.ಎಸ್.ಶೇಖರ್

ಮಾನವೀಯ ಸಂವೇದನಾ ಬರಹಗಾರ – ಡಾ|| ಎಂ.ಎಸ್.ಶೇಖರ್
ಕಾಲವು ಗತಿಸಿದಂತೆ, ದಶಕಗಳು ಕಳೆದಂತೆ ಜಾಗತಿಕವಾಗಿ ಮತೀಯ ಕೊಳಕು ಭಾವನೆಗಳು, ತಾರ ತಮ್ಯ ಮನೋಭಾವನೆಗಳು ಕ್ಷೀಣಿಸಬೇಕಾಗಿತ್ತು, ಆದರೆ ಇನ್ನೂ ಜಟಲತೆ ಪಡೆಯುತ್ತಿರುವುದು ದುರಂತವೇ ಸರಿ. ಇಂತಹ ಸಾಮಾಜಿಕ  ಅಸಮಾನತೆ ವಿರುದ್ದ ಅನೇಕ ಲೇಖಕರು ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿದ್ದಾರೆ. ಜನಪರ ಚಳವಳಿಗಳ ಮೂಲಕ ಜಾಗೃತೆ ಮೂಡಿಸಲು ಶ್ರಮಿಸುತ್ತಿದ್ದಾರೆ. ಶೋಷಣೆಗೊಳಗಾದವರಿಗೆ ದನಿಯಾಗಿದ್ದಾರೆ.
ದಲಿತ ಸಂವೇದನೆಯನ್ನು ಮನೋಜ್ಞವಾಗಿ, ಸೃಜನಶೀಲವಾಗಿ ಕಟ್ಟಿಕೊಟ್ಟ ಸಂಶೋಧಕ, ಕವಿ, ಬರಹಗಾರ ಡಾ|| ಎಂ.ಎಸ್.ಶೇಖರ್ ಅವರು. ಕ್ರಿ.ಶ 1964 ರಲ್ಲಿ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನ ಮಲ್ಲಿಗೆವಾಳು ಗ್ರಾಮದ ಶ್ರೀ ಸಿದ್ದಯ್ಯ ಮತ್ತು ಶ್ರೀಮತಿ ದೇವಮ್ಮ ನವರ ಮಗನಾಗಿ ಜನಿಸಿದ ಇವರು ಆಲೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಭ್ಯಾಸ ಮಾಡಿದರು. ನಂತರ ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವಿಯನ್ನು 1988 ರಲ್ಲಿ ಮುಗಿಸಿದರು. 1992 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಇವರು 1994 ರಲ್ಲಿ ಯು.ಜಿ.ಸಿ ಶಿಷ್ಯ ವೇತನದಡಿಯಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿ ಪಡೆದರು. 2007 ರವರೆಗೂ ಹೇಮಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸಿ ನಂತರ ಮಂಡ್ಯದ ಸರ್.ಎಂ.ವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಹಾಗೂ ಮುಖ್ಯಸ್ಥರಾಗಿ 2010 ರಿಂದ 2012 ರವರೆಗೆ ಕಾರ್ಯನಿರ್ವಹಿಸಿ ಪುನಃ ಹಾಸನದ ಹೇಮಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಲಿತ ಸಾಹಿತ್ಯ ಪರಂಪರೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಇವರು ಮೊದಲ ತಲೆಮಾರಿನ ದಲಿತ ಸಾಹಿತ್ಯ ಹಾಗೂ ಮೂಲ ಜನಪದ ಸಾಹಿತ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಸಾಹಿತ್ಯದ ರೂಪದಲ್ಲಿ ಹಿಡಿದಿಟ್ಟು ಬೃಹತ್ ಕೃತಿಗಳ ಮೂಲಕ ನಾಡಿನ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ.
ಅಗಾಧ ಸಾಧನೆ ಮಾಡಿದ್ದರೂ ಎಲೆಮರೆ ಕಾಯಿಯಂತೆ ಇಂದಿಗೂ ತಮ್ಮಷ್ಟಕ್ಕೆ ತಾವು ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸದಾ ಪ್ರಗತಿಪರ ಚಿಂತನ ಮಾಡುವ ಇವರು ಮಾನವೀಯ ನೆಲೆಯಲ್ಲೇ ಬದುಕು ಸಾಗಿಸುತ್ತಿರುವುದು ಸ್ತುತ್ಯಾರ್ಹ.
ಕಾವ್ಯ, ವಿಮರ್ಶೆ, ಜಾನಪದ, ಸಂಶೋಧನೆ, ಸಂಪಾದನೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಇವರು ಇಪ್ಪತ್ತಕ್ಕೂ ಅಧಿಕ ಅಮೂಲ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
1997 ರಲ್ಲಿ ‘ನಾರಾಯಣ ಗುರುವಿನ ನಾಡಿನಲ್ಲಿ’ ಎಂಬ ಪ್ರವಾಸ ಕಥನವನ್ನು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ‘ಗ್ರಹಿಕೆ’-1997 (ವಿಮರ್ಶೆ), ‘ನಮ್ಮ ಮುಸ್ಲಿಂ ಹಿನ್ನೆಲೆಯ ಜಾನಪದ ಕಥೆಗಳು’(2001), ‘ಕಣ್ಣು ಕಂಡಷ್ಟು’(ವಿಮರ್ಶೆ-2002), ‘ಜಾನಪದ ಜಾದೂಗಾರ ಸಹೀದ್ ಹುಸೇನ್’(2002), ‘ಶ್ರೀಕೃಷ್ಣ ಆಲನಹಳ್ಳಿ ಅವರ ಸಾಹಿತ್ಯ’(ಸಂಶೋಧನೆ-2002), ‘ಅನಿಕೇತನ’(ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ-ಸಂಪಾದನೆ-2005), ‘ಹೊಯ್ಸಳ ದೀಪ್ತಿ’(ಸಂಪಾದನೆ-2006), ‘ಆಧುನಿಕಸಾಹಿತ್ಯದ ಮೊದಲ ತಲೆಮಾರಿನ ಲೇಖಕರು’(ಸಂಪಾದಿತ-2006), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಧೋರಣೆಗಳು’(ಸಂಪಾದಿತ-2006), ‘ಹೊಯ್ಸಳ ದರ್ಪಣ’(ಸಂಪಾದಿತ-2006),  ‘ಡಿ.ಗೋವಿಂದಾಸ್ ಅವರ ಸಮಗ್ರ ಸಾಹಿತ್ಯ ಸಂಪುಟ’(ಸಂಶೋಧನೆ-2007), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಜಿಗಳು’(ಸಂಪಾದಿತ-2007), ‘ಕುದ್ಮುಲ್ ರಂಗರಾಯರು’(ಜೀವನ ಚರಿತ್ರೆ-2008), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜಾನಪದ ಪ್ರಜ್ಞೆ’(ಸಂಪಾದಿತ-2008), ‘ಸಂಸ್ಕøತಿ ಮಹಿಳಾ ಮಾಲಿಕೆ ಃ ಸಂ-2(2008), ‘ಗರಿಕೆ’(ಕಾವ್ಯ-2010) ಮುಂತಾದ ಶೇಷ್ಠ ಕೃತಿ ರತ್ನಗಳನ್ನು ನೀಡಿದ್ದಾರೆ.
ಕನ್ನಡ ಸಮಾಜದ ಸಾಮರಸ್ಯಕ್ಕಾಗಿ ಒಡೆದು ಹೋಗಿರುವ ಪ್ರಗತಿಪರ ಸಂಘಟನೆಗಳು, ಭಾಷಾ ಸಂಘಟನೆಗಳು, ದಲಿತ ಮತ್ತು ಬಂಡಾಯ ಸಾಹಿತಿಗಳೆಲ್ಲಾ ತಂತಮ್ಮ ಪ್ರತಿಷ್ಟೆಗಳನ್ನು ಬಿಟ್ಟು ಸಾರ್ವತ್ರಿಕವಾಗಿ ಸ್ಪಂದಿಸಲೆಂಬುದು ಇವರ ಆಶಯವಾಗಿದೆ. ಅವರೆ ಹೇಳುವಂತೆ “ಸಾಹಿತಿಯಾದವನು ಕೇವಲ ಸಾಹಿತ್ಯದ ಬಗ್ಗೆ ಅಷ್ಟೆ ಸೀಮಿತವಾಗಬಾರದು. ನಮ್ಮ ಬದುಕನ್ನು ರೂಪಿಸುವ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ತೆರೆದ ಮನಸ್ಸಿನಿಂದ ನೋಡುವ, ಹೃದಯ ವೈಶಾಲ್ಯತೆಯಿಂದ ಕಾಣುವ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸಾಹಿತ್ಯ, ಸಂಸ್ಕøತಿ, ಕಲೆ, ವಿಚಾರ, ಧರ್ಮ, ಆಧ್ಯಾತ್ಮ, ಸಂಘಟನೆ, ಆಧುನಿಕತೆ, ವಿಜ್ಞಾನ ಮುಂತಾದವುಗಳ ಬಗೆಗಿನ ಚರ್ಚೆ, ಚಿಂತನೆ ಎಂದರೆ ಅವು ಬೇರೇನು ಅಲ್ಲದೆ ಬದುಕಿನ ಬಗೆಗಿನ ಚರ್ಚೆ, ಚಿಂತನೆ ಎಂಥಲೆ ಅರ್ಥ. ನಿಜವಾದ ಮನುಷ್ಯ ಸಂಬಂಧ ಗಟ್ಟಿಗೊಳ್ಳುವುದು ಪ್ರೀತಿ, ಪ್ರೇಮ, ಪ್ರಾಮಾಣಿಕತೆ ಹಾಗೂ ಉತ್ತಮ ನಡವಳಿಕೆಗಳಿಂದಲೇ ವಿನಃ ಅರ್ಥವಿಲ್ಲದ ಜಾತಿ, ಅಸ್ಪøಶ್ಯತೆ, ಲಿಂಗತಾರತಮ್ಯ, ಮತ, ಧರ್ಮ, ಅಂತಸ್ತು, ಐಶ್ವರ್ಯದಿಂದಲ್ಲ. ಸಾಹಿತ್ಯ ಪ್ರೀತಿಯ ಲೇಖಕ ಕುಟುಂಬದವರಾದ ನಾವೆಲ್ಲರೂ ಈ ನಿಟ್ಟಿನಲ್ಲಿ ಆತ್ಮಸಾಕ್ಷಿಯ ಬದ್ಧತೆಯಿಂದ ಚಿಂತಿಸೋಣ”.- ಅಧ್ಯಕ್ಷೀಯ ಭಾಷಣ, 13 ನೆಯ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಹೀಗೆ ಸದ್ದಿಲ್ಲದೆ ಸಾಮಾಜಿಕ ಕಳಕಳಿಗೆ ಹೋರಾಡುತ್ತಿರುವ ಡಾ|| ಎಂ.ಎಸ್.ಶೇಖರ್ ರವರು 2013 ಮಾರ್ಚಿ 30, 31 ರಂದು ನಡೆದ ಹಾಸನ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಲ್ಲದೆ ಇವರಿಗೆ 2003 ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, 2010 ರಲ್ಲಿ ದಲಿತ ಸಾಹಿತ್ಯ ಪರಿಷತ್ತು ಕಾವ್ಯ ಪ್ರಶಸ್ತಿ, 2012 ರಲ್ಲಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪ್ರಶಸ್ತಿ, 2012 ರಲ್ಲಿ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಸಂದಿವೆ. ಅಲ್ಲದೆ 2005 ರಿಂದ 2008 ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ