ಶನಿವಾರ, ಮೇ 9, 2015

ಕನ್ನಡದ ಶ್ರೇಷ್ಠ ಲೇಖಕಿ – ವಿಜಯಾದಬ್ಬೆ

ಕನ್ನಡದ ಶ್ರೇಷ್ಠ ಲೇಖಕಿ – ವಿಜಯಾದಬ್ಬೆ
ಕಟ್ಟುಪಾಡು, ಸಂಪ್ರದಾಯ, ಜಾತಿ, ಸಂಬಂಧ ಎಲ್ಲದಕ್ಕೂ ಅತೀತವಾಗಿ ಒಬ್ಬ ಹೆಣ್ಣು ಕುಟುಂಬ ಮತ್ತು ಸಮಾಜಿಕ ಜಂಜಡಗಳನ್ನು ತೂರಿ ಆಚೆ ಬಂದು ತನ್ನದೇ ನಿಲುವು ತಾಳಿ ಬದ್ಧತೆ ಮೆರೆಯುವುದು ಸಾಮಾನ್ಯದ ವಿಷಯವಲ್ಲ. ಅವಳ ತ್ಯಾಗ, ಬಲಿದಾನ, ಚಾರಿತ್ರ್ಯ, ಸಹನೆಗಳು ಸದಾ ಮನುಕುಲಕ್ಕೆ ಸ್ಫೂರ್ತಿಯಾದುದು. ಕಲೆ, ಸಾಹಿತ್ಯ, ಸಂಸ್ಕøತಿಗಳಲ್ಲಿ ಹುಡುಕ ಹೊರಟ ಅವಳ ಅಸ್ಮಿತೆಯ ಹೆಜ್ಜೆಗಳು ಅವಿಸ್ಮರೆಣೀಯ.
ಅಂತಹ ಒಂದು ದಿಟ್ಟ ಮನಸ್ಸಿನ ಕೆಲವೆ ಕೆಲವು ಲೇಖಕಿಯರಲ್ಲಿ ನಮ್ಮ ಹಾಸನ ಜಿಲ್ಲೆಯ ವಿಜಯದಬ್ಬೆಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು. ನೇರ ನಡೆ-ನುಡಿಯ ದಿಟ್ಟ ನಿರ್ಧಾರದ ವ್ಯಕ್ತಿತ್ವದ ಮನೋಧರ್ಮಿಯಾದ ವಿಜಯಾದಬ್ಬೆಯವರು ಎಪ್ಪತ್ತು-ಎಂಬತ್ತರ ದಶಕದಲ್ಲಿ ವೈಚಾರಿಕ ಹಾಗೂ ಸ್ತ್ರೀ ಸಂವೇದಿ ಲೇಖನಗಳ ಮೂಲಕ ಇಡಿ ಕನ್ನಡ ಸಾರಸ್ವತ ಲೋಕವನ್ನು ಹಾಸನ ಜಿಲ್ಲೆಯತ್ತ ಸೆಳೆದವರು. ಕನ್ನಡದ ಮೊದಲ ಸ್ತ್ರೀವಾದಿ ಲೇಖಕಿ ಎಂಬ ಹೆಗ್ಗಳಿಕೆಯೂ ಇವರದು.
ವಿಜಯ ದಬ್ಬೆಯವರು ಕ್ರಿ.ಶ.1951 ಜೂನ್ 1 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದಬ್ಬೆ ಗ್ರಾಮದಲ್ಲಿ ಜನಿಸಿದರು. ನಡೆ-ನುಡಿಯಲ್ಲಿ ತೀವ್ರತೆಯಿರುವಂತೆ ಅವರ ಬರವಣಿಗೆಯಲ್ಲಿಯೂ ಹರಿತವಾದ ವಿಚಾರ ಲಹರಿಗಳಿವೆ.
ಕಾವ್ಯ, ಪ್ರವಾಸ ಕಥನ, ಸಂಶೋಧನೆ, ವಿಮರ್ಶಾ ಸಾಹಿತ್ಯ, ಸಂಪಾದನೆ, ಅನುವಾದ ಹೀಗೆ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಛಾಪು ಮೂಡಿಸಿದ ಕೀರ್ತಿ ವಿಜಯಾದಬ್ಬೆಯವರದು. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಇವರು ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿಜಯ ದಬ್ಬೆಯವರನ್ನು ವಿಧಿಯ ಆಟವೆಂಬಂತೆ ಇನ್ನೇನು ಸಾವು ನುಂಗಿಹಾಕಿತು ಅನ್ನುವಷ್ಟರಲ್ಲಿ ದಿಟ್ಟ ಹೆದೆಗಾರಿಕೆಯಿಂದ ಸಾವಿಗೆ ಉತ್ತರಕೊಟ್ಟು ಸಮಾಜಕ್ಕೆ ಮಾದರಿಯಾದರು. ಅವರ ಆತ್ಮ ವಿಶ್ವಾಸ, ಅಚಲ ನಂಬಿಕೆಗಳೇ ಅವರನ್ನು ಪುನಃ ನಮ್ಮೆದುರಿಗೆ ನಿಲ್ಲಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂತಹ ಸದೃಢ ಮನಸ್ಸಿನ ಲೇಖಕಿ ವಿಜಯ ದಬ್ಬೆಯವರು.
ಸಾಹಿತ್ಯಿಕ ಕೊಡುಗೆ :
‘ಇರುತ್ತವೆ’ (1975), ‘ನೀರು ಲೋಹದ ಚಿಂತೆ’ (1985), ‘ತಿರುಗಿ ನಿಂತ ಪ್ರಶ್ನೆ’ (1995), ‘ಇತಿಗೀತಿಕೆ’ ಮುಂತಾದ ಕವನ ಸಂಕಲನಗಳು; ‘ಉರಿಯ ಚಿಗುರು ಉತ್ಕಲೆಯಲ್ಲಿ’ - ಪ್ರವಾಸ ಕಥನ ; ‘ನಯಸೇನ’, ‘ನಾಗಚಂದ್ರ ಒಂದು ಅಧ್ಯಯನ’, ‘ಹಿತೈಷಿಯ ಹೆಜ್ಜೆಗಳು’, ‘ಸಾರ ಸರಸ್ವತಿ’, ‘ಶ್ಯಾಮಲಾ ಸಂಚಯ’ ಮುಂತಾದ ಸಂಶೋಧನಾ ಕೃತಿಗಳು; ‘ಸಂಪ್ರತಿ’, ‘ಅನುಪಮಾ ನಿರಂಜನ’, ‘ಮಹಿಳೆ, ಸಾಹಿತ್ಯ, ಸಮಾಜ’, ‘ನಾರಿ ದಾರಿ ದಿಗಂತ’, ‘ಮಹಿಳೆ ಮತ್ತು ಮಾನವತೆ’ ಮುಂತಾದ ವಿಮರ್ಶಾ ಕೃತಿಗಳು; ‘ಮೇರಿ ಮೆಕ್ಲಿಯಾದ್ ಬೆಥೂನೆ’, ‘ವಿಮೋಚನೆಯೆಡೆಗೆ’, ‘ಗುರುಜಾಡ’ ಮುಂತಾದ ಅನುವಾದ ಕೃತಿಗಳು. ಹೀಗೆ ವಿಜಯ ದಬ್ಬೆಯವರು ತಮ್ಮ ದಿಟ್ಟ ಬರವಣಿಗೆಯ ಮೂಲಕ ನಾಡಿನ ಸಾಕ್ಷಿ ಪ್ರಜ್ಞೆಯನ್ನು ಕಲಕಿ ಒಂದು ರೂಪು ನೀಡಿದವರು. ಇವರೊಬ್ಬ ಮಾನವೀಯ ಚಿಂತನೆಗಳ ಪ್ರಗತಿದಾಯಕ ಆಶಾ ಲೇಖಕಿ. ಕಂದಾಚಾರ, ಮೌಢ್ಯಗಳ ವಿರುದ್ದ ಹೋರಾಡುತ್ತಲೇ ಬೆಳೆದವರು.
ಇವರ ಅತ್ಯುಪಯುಕ್ತ ಸಾಹಿತ್ಯಿಕ ಕಾಯಕಕ್ಕಾಗಿ 1979 ರಲ್ಲಿ‘ಉದಯೋನ್ಮುಖ ವರ್ಧಮಾನ ಪ್ರಶಸ್ತಿ’, ಧಾರವಾಡದ ಕರ್ನಾಟಕ ವಿದ್ಯಾ ವರ್ಧಕ ಸಂಘದ 1996 ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿ ಪ್ರಶಸ್ತಿ, 2008 ರಲ್ಲಿ ಕರ್ನಾಟಕ ಸರ್ಕಾರದ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, 2008 ರಲ್ಲಿ ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 2012 ರಲ್ಲಿ ‘ಡಾ|| ಎಲ್.ಬಸವರಾಜು ಪ್ರಶಸ್ತಿ’ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು ಸಂದಿವೆ.
ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ