ಶನಿವಾರ, ಮೇ 9, 2015

ಜಾನಪದ ಜೀವಾಳ ಡಾ|| ರಾಜೇಗೌಡ ಹೊಸಹಳ್ಳಿ

ಜಾನಪದ ಜೀವಾಳ ಡಾ|| ರಾಜೇಗೌಡ ಹೊಸಹಳ್ಳಿ
ಕನ್ನಡ ಸಾಹಿತ್ಯದ ಇತಿಹಾಸ ಸಹಸ್ರ ವರ್ಷಗಳಿಗಿಂತಲೂ ಹೆಚ್ಚು ವಿಸ್ತಾರವಾಗಿದೆ. ಸಹಸ್ರಾರು ಕವಿಗಳು ತಮ್ಮ ಕೃತಿಗಳಿಂದ ನಮ್ಮ ಸಾಹಿತ್ಯವನ್ನು ತಮ್ಮ ಕೃತಿಗಳಿಂದ ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಈ ಕೃತಿಗಳು ವಸ್ತು, ರೀತಿಗಳಲ್ಲಿ ವಿಪುಲವಾದ ವೈವಿಧ್ಯತೆಯಿಂದ ಕೂಡಿವೆ. ಆದ್ದರಿಂದ ಈ ಸಾಹಿತ್ಯರಾಶಿಯನ್ನು ಯಾವುದಾದರೊಂದು ಬಗೆಯ ವಿಭಾಗಕ್ಕೆ ಒಳಪಡಿಸಿ, ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗೆಯೇ ಸಂಬಂಧಿಸಿದ ಸಾಹಿತ್ಯ ಪ್ರಕಾರಗಳ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳಬೇಕಿದೆ. ಈ ಅಕ್ಷರ ಸಾಹಿತ್ಯಕ್ಕಿಂತಲೂ ಪುರಾತನವಾಗಿ ನಮಗೆ ಕಂಡುಬರುವುದು ನಮ್ಮ ಪೂರ್ವಜರು ತಲತಲಾಂತರಗಳಿಂದ ಸಂರಕ್ಷಿಸಿಕೊಂಡುಬಂದ ಜಾನಪದ ಸಾಹಿತ್ಯ. ಗ್ರಾಮೀಣ ಸೊಗಡಿನ ಬದುಕನ್ನು, ವೈವಿಧ್ಯತೆಯನ್ನು, ಸಾಂಸ್ಕøತಿಕ ನೆಲೆಗಟ್ಟುಗಳನ್ನು ಅನಾವರಣಗೊಳಿಸುವುದೇ ಈ ಜಾನಪದ ಸಾಹಿತ್ಯ.
ಇಂತಹ ಜಾನಪದದ ಮೂಲಸೆಲೆಯನ್ನು ಕಳೆದ ನಾಲ್ಕೈದು ದಶಕಗಳಿಂದ ಸಂಶೋಧಿಸುತ್ತಾ, ಬರೆಯುತ್ತಾ, ವಿವಿಧ ಆಯಾಮಗಳಲ್ಲಿ ವಿಮರ್ಶಿಸುತ್ತಾ, ದಾಖಲಿಸುತ್ತಾ ಬಂದವರು ಜಾನಪದ ತಜ್ಞ ಡಾ|| ರಾಜೇಗೌಡ ಹೊಸಳ್ಳಿಯವರು.
ಡಾ|| ರಾಜೇಗೌಡ ಹೊಸಳ್ಳಿಯವರು ಕ್ರಿ.ಶ.1949 ಜುಲೈ 6 ರಂದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದ ಶ್ರೀ ರಂಗಪ್ಪ ಹಾಗೂ ಶ್ರೀಮತಿ ರಂಗಮ್ಮ ಅವರ ಗರ್ಭಾಂಬುಧಿಯಲ್ಲಿ ಜನಿಸಿದರು. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಹೊಸಳ್ಳಿಯಲ್ಲಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆಲೂರಿನಲ್ಲಿ ಮುಗಿಸಿದ ರಾಜೇಗೌಡರು ಹಾಸನದ ಸರಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಸರಕಾರಿ ಕಲಾ ಕಾಲೇಜಿನಲ್ಲಿ ಪದವಿ ಪಡೆದು ನಂತರ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವೃತ್ತಿಯಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಆಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸದ್ಯ ನಿವೃತ್ತಿ ಜೀವನದಲ್ಲಿರುವ ರಾಜೇಗೌಡರು ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರವನ್ನು ತಮ್ಮ ಜೀವನದ ಒಂದು ಭಾಗವಾಗಿಯೇ ಸ್ವೀಕರಿಸಿದವರೆಂದರೆ ಅತಿಶಯೋಕ್ತಿಯಾಗಲಾರದು.
ಮೂಲತಹಃ ಮಲೆನಾಡ ಸೆರಗಲ್ಲಿ ಹುಟ್ಟಿ ಬೆಳೆದ ರಾಜೇಗೌಡರು ಇಲ್ಲಿ ಜನ ಜೀವನದ ಶೈಲಿ, ಸಂಸ್ಕøತಿ, ಭಾಷೆ, ಆಚಾರ, ವಿಚಾರಗಳ ಮೇಲೆ ತಮ್ಮ ಸತ್ವಯುತ ಬರವಣಿಗೆಯಲ್ಲಿ ಬೆಳಕು ಚೆಲ್ಲಿದ್ದಾರೆ.
1974 ರಲ್ಲಿ ಪ್ರಕಟವಾದ ‘ಸತ್ಯ ಭೋಜರಾಜ’ ಇವರ ಮೊದಲ ಜಾನಪದ ಕೃತಿಯಾಗಿದೆ. ಇದು ಮೂಲ ಜಾನಪದೀಯ ಬದುಕನ್ನು ಅನಾವರಣಗೊಳಿಸಿದೆ. ಈ ಕೃತಿಯ ಬಗ್ಗೆ ಖ್ಯಾತ ಚಿಂತಕ ಹಾಗೂ ಸಾಹಿತಿಗಳಾದ ರಾಗೌ ಅವರು ಈ ರೀತಿ ಹೇಳಿದ್ದಾರೆ “ಪ್ರಸ್ತುತ ಕೃತಿ ;ಸತ್ಯ ಭೋಜರಾಜ’ ಜಾನಪದ ಕ್ಷೇತ್ರಕ್ಕೆ ಒಂದು ಹೊಸ ಸೇರ್ಪಡೆ. ಸರಳ ಆಶಯಗಳಿಂದ ರೂಪುಗೊಂಡಿರುವ ಒಂದು ಸರಳ ಕಥನ. ಇದೇ ಮೊದಲ ಬಾರಿಗೆ ಹೊಸದಾಗಿ ಪ್ರಕಟವಾಗುತ್ತಿರುವ ಗಮನಾರ್ಹ ಲಾವಣಿ... ಇಂತಹ ಗಮನಾರ್ಹ ಕಾವ್ಯವೊಂದನ್ನು ದೊರಕಿಸಿಕೊಟ್ಟು ರಾಜೇಗೌಡರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಜಾನಪದ ಸಂಬಂಧವಾಗಿ ಅವರು ಇರಿಸಿಕೊಂಡಿರುವ ಶ್ರದ್ದಾನುರಕ್ತಿ ಮತ್ತು ಕಾರ್ಯತತ್ಪರತೆಗಳು ಅಭಿನಂದನೀಯವಾಗಿವೆ”.
 1989 ರಲ್ಲಿ ಬಂದ ‘ಮಗನ ತಿಂದ ಮಾರಾಯನ ದುರ್ಗ’ ಕೃತಿಯು ಆಲೂರು ತಾಲ್ಲೂಕಿನ ಮಗನ ತಿಂದ ಮಾರಾಯನ ದುರ್ಗದ ಬಗ್ಗೆ ಹಾಗೂ ಆ ರಾಜನ ಗುಣಾವಗುಣಗಳನ್ನು ಭಿತ್ತರಿಸುತ್ತದೆ.  186 ಪುಟಗಳ ಈ ಕೃತಿಗೆ ನಾಡು ಕಂಡ ಖ್ಯಾತ ಜಾನಪದ ಸಾಹಿತಿ ಎಚ್.ಎಲ್.ನಾಗೇಗೌಡರ ಹಾರೈಕೆಯ ನುಡಿಗಳಿವೆ. ಈ ಕೃತಿಯಲ್ಲಿ ಹಾಸನ ಜಿಲ್ಲೆಯ ಜನಪದ ಕಲೆಗಳು-ಒಂದು ಸಮೀಕ್ಷೆ, ತೊಡಕಿನ ಕಲ್ಲು-ಒಂದು ಕಥಾ ವಿಚಾರ, ಯಾರೀ ಸತ್ಹೇಳು ದೇವಪ್ಪ ಹೆಗ್ಗಡೆ?, ಮಗನ ತಿಂದ ಮಾರಾಯನ ದುರ್ಗ, ಚಿಕ್ಕಯ್ಯ ಹೇಳಿದ ಮೂರು ಪುರಾಣ ಕಥೆಗಳು, ಗಾದೆ ಒಗಟುಗಳಲ್ಲಿ ಲೈಂಗಿಕತೆ, ಮಲೆನಾಡಿನ ಪ್ರಾಣಿ ಪಕ್ಷಿಗಳ ಕೆಲವು ಜಾನಪದೀಯ ಅಂಶಗಳು, ಕಣತೂರಮ್ಮ ಒಂದು ಅಧ್ಯಯನ, ಬೇಲೂರು ಅಥವಾ ಕೋವಿಪೇಟೆ ದುರ್ಗಮ್ಮ-ಒಂದು ಅಧ್ಯಯನ, ಜಾನಪದದ ಸಂರಕ್ಷಣೆ ಹೇಗಾಗಬೇಕು? ಕೆಲವು ಅಭಿಪ್ರಾಯಗಳು ಹೀಗೆ ಹತ್ತು ಲೇಖನಗಳು ಕೃತುಯ ಮುಖ್ಯ ಭಾಗದಲ್ಲಿದ್ದರೆ ಹೊಗಳಿಕೆ ಪದಗಳು, ಕಣತೂರಮ್ಮನ ಹಾಡುಗಳು, ಬಿಷ್ಟಮ್ಮ-ಒಂದು ಹಾಡ್ಗತೆ, ದುರ್ಗಮ್ಮನ ಹಾಡುಗಳು, ಬಲ್ಲವರು ನುಡಿದಾರೆ ಎಂಬ ಐದು ಪ್ರತ್ಯೇಕ ಸಂಗ್ರಹ ಪದಗಳು ಅನುಬಂಧ ಎನ್ನುವ ಶೀರ್ಷಿಕೆಯಡಿಯಲ್ಲಿ ಅನಾವರಣಗೊಂಡಿವೆ.
ರಾಜೇಗೌಡರ ಜಾನಪದ ಸಾಹಿತ್ಯಿಕ ಕೃಷಿಯ ಬಗ್ಗೆ ಶ್ರೀ ಎಚ್.ಎಲ್.ನಾಗೇಗೌಡರು ಈ ರೀತಿ ಹೇಳಿದ್ದಾರೆ “ಹಲವಾರು ವರ್ಷಗಳಿಂದ ರಾಜೇಗೌಡರ ಪ್ರವೃತ್ತಿಯನ್ನು ಅವಲೋಕಿಸುತ್ತಾ ಬಂದಿರುವ ನನಗೆ ಇವರ ವೃತ್ತಿಯಿಂದ ತೀರಾಭಿನ್ನವಾದ ಜಾನಪದ ಪ್ರೇಮವನ್ನು ಬೆಳೆಸಿಕೊಂಡು ಬರುತ್ತಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿದೆ. ಗ್ರಾಮೀಣ ಬದುಕಿನಿಂದ ಬೇರೆಯಾಗಿ ಪಟ್ಟಣವಾಸಿಯಾದರೂ ಹಳ್ಳಿಯ ನಡೆ-ನುಡಿ ನಂಬಿಕೆ, ಐತಿಹ್ಯ ಮುಂತಾದವುಗಳನ್ನು ತೀರಾ ಆಸಕ್ತಿಯಿಂದ ನೋಡಿ ಅವುಗಳನ್ನು ಬರೆಯುವ ಸ್ವಭಾವ ತುಂಬಾ ಮೆಚ್ಚುವಂಥದ್ದು. ಇವರ ಮಾತಿನಲ್ಲಿ ಬರುವ ಕೆಲವು ಪದಗಳು ಬರವಣಿಗೆಯಲ್ಲಿ ಹೇರಳವಾಗಿ ಬರುತ್ತವೆ”.
‘ಮಗನ ತಿಂದ ಮಾರಾಯನ ದುರ್ಗ’ ಕೃತಿಯು ಆಲೂರಿನ ಸಾಂಸ್ಕøತಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹಾಸನ ಜಿಲ್ಲೆಯ ಜನಪದ ಕಲೆಗಳ ಬಗ್ಗೆ, ಇಲ್ಲಿನ ವಿಶಿಷ್ಠ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರಿಗೆ ಈ ಕೃತಿಯು ತುಂಬಾ ಪ್ರಯೋಜನಕಾರಿಯಾಗಿದೆ.
ಇವರ ಇತರೆ ಕೃತಿಗಳೆಂದರೆ ‘ಕೋಳಿ ಮತ್ತು ತುಳಸೀಕಟ್ಟೆ’-1995, ‘ಜಾನಪದ ಸಂಕಥನ’-1999, ‘ಅಕ್ಕಯ್ಯಮ್ಮನ ಸಂಸಾರ’-1999, ‘ತಾಳ ಬಂದೋ ತಂಬೂರಿ ಬಂದೋ’ ಮಹಾಪ್ರಬಂಧ-2002, ‘ನೋಂದಣಿ ಕೈಪಿಡಿ’-2006, ‘ಮಲೆನಾಡ ಸೆರಗಲ್ಲಿ ನಿಂತು’-2006, ‘ಉದರದೊಳು ಹಸಿರುಕ್ಕಿ’ ಕಾದಂಬರಿ(ಅಚ್ಚಿನಲ್ಲಿ) ಹೀಗೆ ಹಲವು ಮೌಲಿಕ ಕೃತಿಗಳನ್ನು ನಾಡಿಗೆ ನೀಡಿದ ಕೀರ್ತಿ ರಾಜೇಗೌಡರದ್ದು.
ಇವರ ‘ತಾಳ ಬಂದೋ ತಂಬೂರಿ ಬಂದೋ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಬಂದಿದೆ.
ರಾಜೇಗೌಡರ ಇನ್ನೊಂದು ಪ್ರಮುಖ ಕೃತಿಯೆಂದರೆ 2006 ರಲ್ಲಿ ಪ್ರಕಟವಾದ ‘ಮಲೆನಾಡ ಸೆರಗಲ್ಲಿ ನಿಂತು’. 188 ಪುಟಗಳುಳ್ಳ ಈ ಕೃತಿಯನ್ನು ಬೆಂಗಳೂರಿನ ಪ್ರಸ್ತುತ ಪ್ರಕಾಶನವು ಪ್ರಕಟಿಸಿದೆ. ಈ ಕೃತಿಯಲ್ಲಿ ಜಾನಪದ ಗ್ರಹಿಕೆ, ಗ್ರಾಮೀಣ ಸಂಸ್ಕøತಿ : ಇಂದು ಮತ್ತು ನಾಳೆ, ಕುವೆಂಪು : ಜನ ಜೀವನದಲ್ಲಿ ಏಕೆ ಪದೇ ಪದೇ ಪ್ರಸ್ತುತವಾಗುತ್ತಾರೆ?, ಈಡಿಗರು ಮಾತೃ ಮಕ್ಕಳು, ಹಡಪದ ಅಪ್ಪಣ್ಣ-ಹೆಂಡದ ಮಾರಯ್ಯ, ಜಗದಂಬೆ : ಒಂದು ಸಾಂಸ್ಕøತಿಕ ಚರ್ಚೆ, ಆಡುಗಳನ್ನು ನಂಬಿದರೆ ಬೋಳು ಈ ನಾಡು : ಗ್ರಾಮೀಣ ಪರಿಸರದ ಅರಿವು, ಪರಿಸರ-ಸಮಾಜ-ರೋಗ, ದೇವರು ದೆವ್ವ ಗಿವ್ವ-ನಮ್ಮ ಸುತ್ತಮುತ್ತ, ಕಂಡು ಕೇಳಿದ ಕಥೆಗಳ ಸುತ್ತಮುತ್ತ : ನಗರ ಜಾನಪದ, ಕರ್ನಾಟಕದ ಆಚರಣೆಗಳು-ಹಬ್ಬಗಳು, ಬಡಗಿ ವೃತ್ತಿ, ಒಕ್ಕಲಿಗರ ಕುಲಾವಳಿಗಳು, ಒಕ್ಕಲಿಗರ ಮನೆಗಳು, ಅಡ್ಡ ಹೆಸರುಗಳು, ಜನಪದ ಸಾಹಿತ್ಯದಲ್ಲಿ ಹೆಣ್ಣು ಮತ್ತು ಸಮಾನತೆ, ಹಾಸನ ಜಿಲ್ಲೆಯ ಜಾನಪದ ಕೊಡುಗೆ, ಮಹಾತ್ಮ ಗಾಂಧಿ ಕಾಲದವರೊಡನೆ : ಒಂದು ಸಂಸ್ಕøತಿಯ ಅವಲೋಕನ, ಕೃತಿಕಾರ ಮತ್ತು ಅವರ ಕೃತಿಗಳನ್ನು ಕುರಿತು : ಡಾ|| ಚಕ್ಕರೆ ಶಿವಶಂಕರ್ ಹೀಗೆ ವಿಭಿನ್ನ ರೀತಿಯ ಬಿಡಿ ಲೇಖನಗಳಿವೆ.
ಈ ಕೃತಿಯ ಬಗ್ಗೆ ಖ್ಯಾತ ಜಾನಪದ ಚಿಂತಕರಾದ ಡಾ|| ಹಿ.ಶಿ.ರಾಮಚಂದ್ರೇಗೌಡರು ಈ ರೀತಿ ಹೇಳಿದ್ದಾರೆ “ ಗೌಡರಿಗೆ ಮಾತೃ-ಪಿತೃ ಪ್ರಾಧಾನ್ಯತೆಯ ಸಾಂಸ್ಕøಥಿಕ ಹೋರಾಟ ಅವರ ಅಂತರಂಗದ ಸಂಘರ್ಷವಾಗಿಯೇ ಕಾಡುತ್ತಿರುವಂತಿದೆ. ಆ ಮಾಪಿತೃಗಳ ಮಾತು ಇಲ್ಲದೆ ಅವರ ಯಾವುದೇ ಬರಹ ಪೂರ್ಣವಾಗುವುದಿಲ್ಲ. ದಬ್ಬಾಳಿಕೆಯನ್ನು ಒಂದು ಸ್ಥಿತಿಯಾಗಿಯೂ, ಮೌಲ್ಯವಾಗಿಯೂ ಒಪ್ಪಿಕೊಳ್ಳಲು ತಯಾರಿಲ್ಲದ ಮಾತೃಹೃದಯದ ರಾಜೇಗೌಡರು ಪಿತೃಪ್ರಧಾನ ಸಮಾಜದ ಮೌಲ್ಯಗಳ ಇತಿ ವೃತ್ತಾಂತವನ್ನು ಹಿಡಿದು ಜಾಲಾಡುತ್ತಲೆ ಬರೆಯುತ್ತಾರೆ. ‘ಜಗದಂಬೆ-ಒಂದು ಸಾಂಸ್ಕøತಿಕ ಚರ್ಚೆ; ಎಂಬ ಲೇಖನ ಇದಕ್ಕೆ ಉತ್ತಮ ನಿದರ್ಶನ. ‘ಕರ್ನಾಟಕದ ಆಚರಣೆಗಳು-ಹಬ್ಬಗಳು’ ಲೇಖನವನ್ನು ಓದಿ ಪೂರೈಸುವ ಹೊತ್ತಿಗೆ ಲೇಖಕರು ನಮ್ಮನ್ನು ಯಾವ ಜಗತ್ತಿನ ಕಡೆ ಎಳೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಹೋಗುತ್ತದೆ”.
ಡಾ|| ಬಸವರಾಜ ಕಲ್ಗುಡಿ ಅವರು ಹೇಳುವಂತೆ “ಡಾ.ರಾಜೇಗೌಡ ಹೊಸಹಳ್ಳಿ ಇವರ ಚಿಂತನಶೀಲ ಮನಸ್ಸಿನೊಳಗೆ ಸೃಜನಶೀಲ ಬಳ್ಳಿ ಅದೆಷ್ಟು ಚೆನ್ನಾಗಿ ಹಾಸು ಹೊಕ್ಕಾಗಿದೆ! ಜಾನಪದ ಗ್ರಹಿಕೆಯನ್ನು ಇವರಷ್ಟು ನವನವೀನವಾಗಿ, ಹೌದೆಂದು ತಲೆದೂಗುವಂತೆ ವಿಸ್ತರಿಸಿಕೊಂಡ ಬಗೆಯನ್ನು ನಾನು ಈವರೆಗೆ ಕಂಡಿಲ್ಲ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ನಮ್ಮ ಸಮುದಾಯವು ತನ್ನೆಲ್ಲಾ ಸಂಘರ್ಷಗಳ ನಡುವೆ ಆರೋಗ್ಯಕರ ಮನಃಸ್ವಾಸ್ಥ್ಯವನ್ನು ಗಳಿಸಿಕೊಳ್ಳುವ ಅವಕಾಶದಿಂದ ತಪ್ಪಿಸಿಕೊಂಡಿತೇ? ಈ ಪ್ರಶ್ನೆಯೇ ಇವರ ಚಿಂತನೆಯಾಗಿ, ಜನಪದ ಸತ್ವದ ದ್ರವ್ಯವಾಗಿ ರಾಜೇಗೌಡರ ಇಲ್ಲಿನ ಲೇಖನಗಳಲ್ಲಿ ಶೃತಿಯಾಗಿ ಮಿಡಿದಿದೆ”.
ಹೀಗೆ ಕನ್ನಡ ಜಾನಪದ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ರಾಜೇಗೌಡರಿಗೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗೌರವ ಪುರಸ್ಕಾರ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. 1998 ರಲ್ಲಿ ನಡೆದ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ಜಾನಪದ ಪರಿಷತ್ತಿನ ಹಾಲಿ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಗೌಡರು ಜಾನಪದ ಕ್ಷೇತ್ರಕ್ಕೆ ಮೀಸಲಾಗಿರುವ “ಜಾನಪದ ಜಗತ್ತು” ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ