ಶನಿವಾರ, ಮೇ 9, 2015

ಮಾನವೀಯ ಸಂವೇದನೆಯ ಕವಯತ್ರಿ - ಭಾಗೀರಥಿ ಆಲೂರು

ಮಾನವೀಯ ಸಂವೇದನೆಯ ಕವಯತ್ರಿ - ಭಾಗೀರಥಿ ಆಲೂರು
    ಕನ್ನಡ ಸಾಹಿತ್ಯ ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡಿದ್ದು, ವಿಶಿಷ್ಟ, ವಿಭಿನ್ನ, ವೈವಿಧ್ಯಮಯವಾದ ಆಳ-ವಿಸ್ತಾರಗಳನ್ನು ನಿರಂತರವಾಗಿ ಪ್ರವಹರಿಸುತ್ತಲೇ ಬಂದಿದೆ. ಸದಾ ಮೌಲಿಕವಾದ ಕೃತಿರತ್ನಗಳನ್ನು ತನ್ನ ಒಡಲಿಗೆ ತುಂಬಿ ಕೊಳ್ಳುತ್ತಲೇ ಬಂದಿದೆ. ಸಾಹಿತ್ಯವೆಂಬುದು ನಿರಂತರ ಪ್ರಕ್ರಿಯೆ. ಇದರಲ್ಲಿ ಹಲವು ಪ್ರಕಾರಗಳ ಸಾಹಿತ್ಯಿಕ ಮಜಲುಗಳು ಝಳಪಿಸಿವೆ.
    ಇದರಲ್ಲಿ ಓದುಗನ ಹೃದಯವನ್ನು ಬಹು ಬೇಗನೆ ತಟ್ಟುವ ಕಾವ್ಯ ರೋಮಾಂಚನಭರಿತವಾದದ್ದು ಎಂದರೆ ಅತಿಶಯೋಕ್ತಿಯಾಗಲಾರದು. ಕವಿ ತನ್ನ ಅನುಭಾವದ ಪರಾಕಾಷ್ಠೆ ತಲುಪಿದಾಗ ಹೊಮ್ಮಿ ಬರುವ ಭಾವ ಚಿಲುಮೆಗಳೆ ಕಾವ್ಯ ತರಂಗಗಳು. ಅವುಗಳನ್ನು ಅಕ್ಷರ ರೂಪದಲ್ಲಿ ಬಂಧಿಸಿ, ಓದುಗನ ಮುಂದಿಟ್ಟು ಆ ಮೂಲಕ ಅವನ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜೀವಂತಿಕೆ ತುಂಬುವುದೇ ಕವಿಯ ಆಧ್ಯ ಕರ್ತವ್ಯ.
    ಇಂತಹ ಅನುಭಾವದ ಮೂಸೆಯಲ್ಲಿ ಕಳೆದ ಎರಡು – ಮೂರು ದಶಕಗಳಿಂದ ಕಾವ್ಯ ರಚನೆಯನ್ನೇ ಒಂದು ವ್ರತದಂತೆ ಸ್ವೀಕರಿಸಿರುವ ಲೇಖಕಿ ಭಾಗೀರಥಿ ಆಲೂರುರವರೆಂದರೆ ಅತಿಶಯೋಕ್ತಿಯಾಗಲಾರದು.
ಗಂಗಾ ಆಲೂರು ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಶ್ರೀಮತಿ ಎ.ಎಸ್.ಭಾಗೀರಥಿಯವರು ಕ್ರಿ.ಶ.1956 ರ ನವಂಬರ್ 11 ರಂದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಆಲೂರು ಪಟ್ಟಣದ ಸಿದ್ದಪ್ಪಶೆಟ್ಟಿ ಮತ್ತು ಶ್ರೀಮತಿ ಗಿರಿಜಾ ದಂಪತಿಗಳ ಪುತ್ರಿಯಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಆಲೂರಿನಲ್ಲೇ ಮುಗಿಸಿದ ಇವರು ಪಿ.ಯು.ಸಿ ನಂತರ ಶಿಕ್ಷಕ ತರಬೇತಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆಗೈದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾಗಲೇ ಹಿಂದಿ ಬಿ.ಇ.ಡಿ ಮಾಡಿಕೊಂಡು ಪ್ರಾವಢ ಶಾಲಾ ಶಿಕ್ಷಕಿಯಾಗಿ ಬಡ್ತಿ ಪಡೆದರು. ಶಿಕ್ಷಕಿ ವೃತ್ತಿಯ ಜೊತೆಗೆ ಸಾಹಿತ್ಯ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಬಹುಮುಖಿಯಾಗಿ ಗುರ್ತಿಸಿಕೊಂಡ ಕೀರ್ತಿ ಭಾಗೀರಥಿಯವರದು.
ಚೇತನ ಬಳಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಚನ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಶ್ರೇಷ್ಠತೆ ಇವರದು.
     ಈ ಊರ್ಮಿಳೆಯ ಸ್ವಗತ ಸಂಕಲನವು 30 ಕವಿತೆಯೊಳಗೊಂಡ 44 ಪುಟಗಳನ್ನು ಒಳಗೊಂಡಿದೆ. ಒಂದು ಗಾಢವಾದ ವೈಚಾರಿಕ ಶ್ರದ್ಧೆಯಿಂದ ಬದುಕಿನ ವ್ಯವಹಾರಗಳನ್ನೆಲ್ಲಾ ಪರಿಭಾವಿಸುವ, ವ್ಯಾಖ್ಯಾನಿಸುವ, ಬೆಲೆ ಕಟ್ಟುವ ಸಾತ್ವಿಕ ಕವಿ ಮನಸ್ಸು ಎ.ಎಸ್.ಭಾಗೀರಥಿಯವರದು. ಕಾವ್ಯದಲ್ಲಿ ತಳೆಯುವ ಅನುಭವಗಳನ್ನು ನಿಯಂತ್ರಿಸುತ್ತಿರುವಂತೆ, ನಿರ್ದೇಶಿಸುತ್ತಿರುವಂತೆ ಬೋಧೆಯಾಗುತ್ತದೆ. ಪರಂಪರಾಗತ ಸಂಸ್ಕøತಿಯ ಜೀವಸತ್ವವನ್ನು, ಅದರ ತಾಳಿಕೆಯ ಗುಣವನ್ನು, ಅದರ ಹರಿಗಡಿಯದ ಸೋಜಿಗವನ್ನು ನಿಷ್ಠುರವಾದ ಭಾಷಿಕ ನೆಲೆಗಟ್ಟಿನಲ್ಲಿ ಕವಯತ್ರಿ ಇಲ್ಲಿ ಭಾವನಾತ್ಮಕವಾಗಿ ಪಲ್ಲವಿಸಿದ್ದಾರೆ.
   ಮುಖ್ಯವಾಗಿ ಇಲ್ಲಿ ಮಹಿಳಾ ಸಂವೇದನಾಶೀಲ ಭಾವನೆಗಳು ಪಡಿಮೂಡಿವೆ. ಕವಯತ್ರಿಯ ತುಡಿತ ಮಿಡಿತಗಳು ಸಾಮಾಜಿಕವಾಗಿಯೂ ಅನ್ವಯವಾಗುವಂತಹ ಚಾಕಚಕ್ಯತೆ ಇಲ್ಲಿ ಸೊಗಸಾಗಿ ಮೈದಾಳಿವೆ. ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ ದ್ರೌಪದಿ. ನಾವೆಲ್ಲಾ ತಿಳಿದ ಹಾಗೆ ಪಂಚ ಪಾಂಡವರ ಸತಿಯಾಗಿದ್ದ ದ್ರೌಪತಿಗೆ ಅದರಾಚೆಗೂ ಸಾಗಿ...
...ಸಾತ್ವಿಕನಾದ ಧರ್ಮರಾಯ
ಹಿರಿಯ ನೆಂದೆನಿಸಿದರೆ,
ಭೀಮನ ದುಡುಕು
ಒರಟೆಂದೆನಿಸಿದರೆ,
ಅರ್ಜುನನ ಚಂಚಲತೆ
ಅಸ್ಥಿರತೆ ಮೂಡಿಸಿದರೆ,
ನಕುಲ-ಸಹದೇವರು
ಎಳೆಸೆಂದೆನಿಸಿದರೆ
ಮಹಾಸತಿಯಾದದ್ದು ಯಾರಿಗೆ ?
ಹೃದಯದ ಮೂಲೆಯಲ್ಲಿ ಇಣುಕುವ
ಧೀರ ಕರ್ಣನ ವ್ಯಕ್ತಿತ್ವ ಕಂಡಾಗ
ಇಂತಹ ವೀರನ ಏಕಪತ್ನಿಯಾಗಬಾರದಿತ್ತೆ
ಎಂಬ ಭಾವನೆ ಬಲವಂತವಾಗಿ ತಳ್ಳಲಿಲ್ಲವೇ ?
ಹೀಗೆ ಅವಳ ಮನಸ್ಸಿನಲ್ಲಿ ಅವಿತಿದ್ದ ಇನ್ನೋರ್ವ ವ್ಯಕ್ತಿ ಕರ್ಣ ಎಂಬುದನ್ನು ಕವಯತ್ರಿ ಇಲ್ಲಿ ಚಿತ್ತಾಕರ್ಷಕವಾಗಿ ಚಿತ್ರಿಸಿದ್ದಾರೆ. ಈ ಹೊಸತನ ಕವಿತ್ವದ ಶಕ್ತಿಯ ಕಾಂತಿಯನ್ನು ಇಮ್ಮಡಿಗೊಳಿಸಿದೆ ಎನ್ನಬಹುದು.
ಇಲ್ಲಿ ಪುರಾಣ ಮಾತನಾಡಿದೆ, ಇತಿಹಾಸ ಇಣುಕಿ ನೋಡಿದೆ, ಪ್ರಚಲಿತ ಚರ್ಚಿತವಾಗಿದೆ. ಸಾಮಾಜಿಕ ಮೌಢ್ಯಗಳು ಖಂಡಿಸಲ್ಪಟ್ಟಿವೆ. ಕವಯತ್ರಿ ಬಳಸಿದ ಭಾಷೆ ಪ್ರೌಢವಾಗಿದೆ. ಮಾನವೀಯ ಸಂಬಂಧಗಳಿಲ್ಲಿ ಮಾತನಾಡಿದಂತೆ ಭಾಸವಾಗುತ್ತದೆ. ಸ್ವ ಅನುಭವದ ಸವಿಯನ್ನು ಕವಯತ್ರಿ ಕಾವ್ಯಮಯವಾಗಿಸಿರುವುದು ಹಾಗೂ ಹೃದಯಮಯವಾಗಿಸಿರುವುದು ಗಟ್ಟಿತನ ಮತ್ತು ಧೀಶಕ್ತಿಗೆ ಸಾಕ್ಷಿಯಾಗಿದೆ.
ಪ್ರೌಢಶಾಲಾ ಹಿಂದಿ ಶಿಕ್ಷಕಿಯಾಗಿರುವ ಎ.ಎಸ್.ಭಾಗೀರಥಿಯವರು ಈಗಾಗಲೇ ಗದ್ಯ ಹಾಗೂ ಪದ್ಯಗಳೆರಡರಲ್ಲೂ ತಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಸಾಹಿತ್ಯ ಕೃಷಿ ಮಾಡುತ್ತಿರುವ ನಮ್ಮ ನಡುವಿನ ಉದಯೋನ್ಮುಖ ಕವಯತ್ರಿ. ಸೂಕ್ಷ್ಮ ಸಂವೇದನೆಯ ಕಾವ್ಯ ಕೃಷಿಗೆ ಇರಬೇಕಾದ ಎಲ್ಲ ತವಕ, ತಲ್ಲಣ, ಆತಂಕ, ಜೀವ ಪ್ರೀತಿಯ ಲಕ್ಷಣಗಳು ಇಲ್ಲಿನ ಕವಿತೆಗಳಲ್ಲಿ ಎದ್ದು ಕಾಣುತ್ತವೆ.
ಗದ್ಯ ಮಾತನಾಡುತ್ತದೆ, ಕಾವ್ಯ ಹಾಡುತ್ತದೆ ಎಂದು ಫ್ರಾನ್ಸ್ ಕವಿ ಗಿಲ್ವಾರ್ಸೆರ್ ಒಂದು ಕಡೆ ಹೇಳಿದ್ದಾರೆ. ಅಂತೆಯೇ ತಮ್ಮ ಕಥೆಗಳ ಮೂಲಕ ಓದುಗರನ್ನು ತನ್ನತ್ತ ಸೆಳೆದು ಹಾಗೆಯೇ ಪದ್ಯದ ಮೂಲಕ ಮನ ಕರಗಿಸುವ ಮನೋವಾಂಛಲ್ಯ ಹೊಂದಿದ ಕವಿ ಹೃದಯ ಭಾಗಿರಥಿಯವರದು ಎಂದರೆ ಅತಿಶಯೋಕ್ತಿಯಾಗಲಾರದು.
ಚೀಪುವ ಮೊಲೆಯ
ಬೆರಳ ತುದಿಯಲಿ ಬಿಡಿಸಿ
ಮುಂಗುರುಳು ತೀಡಿ ಮುತ್ತಿಟ್ಟು
ತೆರೆದ ತುಟಿಗೆ ನಿಪ್ಪಲ್ ಇಟ್ಟು
ಹೊರಟಿಹಳೀ ತಾಯಿ
ಅವರ ನಿಶೆಗೆ ಕರಗಲು...(ಹೀಗೊಬ್ಬ ತಾಯಿ)
ಯೌವನದ ಹೊಸ್ತಿಲಲ್ಲಿ ತಿಳಿದೋ.. ತಿಳಿಯದೆಯೋ ಮಾಡಿದ ತಪ್ಪಿಗಾಗಿ ಕಾಲುಜಾರಿದ ಫಲವಾಗಿ ಹೆತ್ತ ಮಗುವ ಸಾಕಲು ಅದನ್ನೇ ಕಸುಬಾಗಿಸಿಕೊಂಡವರು ಹಲವರು. ಅಂತಹ ಪರಿಸ್ಥಿತಿಯ ಒಬ್ಬ ಮಹಿಳಾ ಮನೋತುಡಿತವನ್ನು ಈ ಕವಿತೆಯಲ್ಲಿ ಕಾಣಬಹುದು. ಆ ಮಗುವನ್ನು ಸಾಕಲಿಕ್ಕಾಗಿ ಇಷ್ಟವಿಲ್ಲದಿದ್ದರೂ ಹೇಯ ಕೆಲಸಕ್ಕೆ ಇಳಿಯುವ ಧೈರ್ಯ ಮಾಡುವ ತಾಯಿ ಅಲಗಿನ ಮೇಲೆ ನಡೆದಾಡಿದಂತಹ ಸಂಕಟವನ್ನು ಇಲ್ಲಿನ ಸಾಲುಗಳಲ್ಲಿ ಅರ್ಥಮಾಡಿಕೊಳ್ಳಬಹುದು.
ಅಪ್ಪನ ಮೂರೆಕೆರೆ ಹೊಲ
ಪದವಿ ಪತ್ರಕ್ಕಾಗಿ,
ಅವ್ವನ ಅಳಿದುಳಿದ ಚಿನ್ನ
ಡಿ.ಡಿ. ಗಳಿಗಾಗಿ...
ಹಣವಿಲ್ಲದೇ ವಶೀಲಿ ಇಲ್ಲದೆ
ಪದವಿ ಪತ್ರಕ್ಕಿಲ್ಲ ಬೆಲೆ
ನಿರುದ್ಯೋಗಿಗಿಲ್ಲ ನೆಲೆ
ಕನ್ಯಾ ಪಿತೃವು ಕಟ್ಟನು ಬೆಲೆ
ಮಾರಾಟಕ್ಕಿದೆ ಪದವಿ ಪತ್ರ ಕೊಳ್ಳುವಿರಾ ?
( ಪದವಿ ಪತ್ರ ಮಾರಾಟಕ್ಕಿದೆ ಕೊಳ್ಳುವಿರಾ ? )
ಇಲ್ಲಿನ ಕವಿತೆಯಲ್ಲಿ ಪ್ರಸ್ತುತ ಸಂದರ್ಭದ ಸಮಸ್ಯೆ, ಶಿಕ್ಷಣ ವ್ಯವಸ್ಥೆಯ ಅರಾಜಕತೆ, ಅಮೌಲ್ಯಗಳು ಅರಿವಿಗೆ ಬಾರದೆ ಇರವು. ಎಲ್.ಕೆ.ಜಿ, ಯು.ಕೆ.ಜಿ ಹಂತವನ್ನೇ ಓದಿಸಲು ಪೋಷಕರಿಂದು ಹರಸಾಹಸ ಪಡಬೇಕಾಗಿದೆ. ಇಂಜೀನಿಯರ್, ಮೆಡಿಕಲ್‍ಗಳಿಗೆ ಖರ್ಚು ಮಾಡುವಷ್ಟು ಹಣವನ್ನು ಇಂದು ಪೂರ್ವ ಪ್ರಾಥಮಿಕ ಹಂತಕ್ಕೆ ವ್ಯಯಿಸುತ್ತಿರುವುದು ಬಹು ದೊಡ್ಡ ದುರಂತವೇ ಸರಿ. ಈಗಿನ ಕಾನ್ವೆಂಟ್‍ಗಳೆಲ್ಲಾ ಹಣವಂತರ ಸ್ವತ್ತಾಗುತ್ತಿವೆ. ಬಡ ಕುಟುಂಬದ ಜನ ಸಮುದಾಯ ಇದನ್ನೆಲ್ಲಾ ಗಮನಿಸಿಯೂ ಅನಿವಾರ್ಯವಾಗಿ ಸರಕಾರಿ ಶಾಲೆಯ ಕಡೆ ಮುಖಮಾಡಿದ್ದರೆ, ಅದರಲ್ಲೂ ಆರ್ಥಿಕವಾಗಿ ಸಬಲರಾದವರೂ ದೂರದ ಕಾನ್ವೆಂಟ್ ಹುಚ್ಚು ಹಿಡಿಸಿಕೊಂಡು ದುಂದು ವೆಚ್ಚ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಪೋಷಕರೂ ಓದಿಸಿದರೂ ಮುಂದೆ ಆ ಮಗು ಹಂತ ಹಂತವಾಗಿ ಬಂದ ಅಂಕಪಟ್ಟಿಗಳ ಕಡತ ಮಾಡಿ ಜೋಪಾನವಾಗಿ ಜತನಮಾಡಿದರೂ ನೌಕರಿ ದೊರಕುವುದು ದೂರದ ಮಾತೇ ಸರಿ. ಕೊನೆಗೆ ಆ ಪದವಿ ಪತ್ರಗಳನ್ನು ಮಾರಾಟ ಮಾಡೋಣವೆಂದರೆ ಕೊಳ್ಳುವವರಿಲ್ಲ, ಸಾಲ-ಸೋಲ ಮಾಡಿ ಓದಿದಂತ ವಿದ್ಯಾವಂತನಿಗೆ ತನ್ನ ಓದಿಗೆ ತಕ್ಕ ಬೆಲೆ ಸಿಗದೆ ಹೋದಾಗ ನೈತಿಕತೆ ದೂರಾಗಿ ಬೇರೆಯೇ ಮಾರ್ಗಗಳು ಕಾಣಿಸುದುಂಟು. ಅಂತಹ ಪ್ರಸಂಗವನ್ನು ಕವಯತ್ರಿ ಭಾಗೀರಥಿ ಈ ಕವನದಲ್ಲಿ ಮನ ಮುಟ್ಟುವಂತೆ ಕಟ್ಟಿ ಕೊಟ್ಟಿದ್ದಾರೆ.
ಇದರಲ್ಲಿ ಬರುವ ಇನ್ನೊಂದು ಮಹತ್ವದ ಕವಿತೆಯೆಂದರೆ ‘ನನ್ನ ಹಳೆಯ ಕೌದಿ’. ಇಂದು ನಾವುಗಳೆಲ್ಲಾ ಆಧುನಿಕ ಭರಾಟೆಯಲ್ಲಿ ಕಳೆದುಹೋಗುತ್ತಿದ್ದೇವೆ. ಹಿಂದಿನವರ ಚಿನ್ನದಂತಹ ಬದುಕಿನಿಂದ ದೂರಾಗುತ್ತಿದ್ದೇವೆ. ಗ್ರಾಮೀಣ ಸೊಗಡಿನಿಂದ ದೂರೀಕರಿಸಿ ಪಾಶ್ಚಾತ್ಯ ಸಂಸ್ಕøತಿಯತ್ತ ಮುಖಮಾಡಿ ನಿಂತಿದ್ದೇವೆ. ಇಂತಹ ಸಂದರ್ಭದಲ್ಲಿ ಭಾಗೀರಥಿ ನಮ್ಮನ್ನು ತಾತ ಮುತ್ತಾತಂದಿರ ಬದುಕಿನ ಅರಿವಿನ ಕಡೆಗೆ ಕೊಂಡೊಯ್ಯುತ್ತಾರೆ.
ಅವ್ವನ ಬೆಚ್ಚನೆಯ ಸ್ಪರ್ಶ
ಹಿರಿ ಅಕ್ಕನ ಕೈಗಳ ತಂಪು
ಅಜ್ಜಿಯ ಬಿಸಿ ಉಸಿರು
ನನ್ನ ಹಳೆಯ ಕೌದಿಯಲ್ಲಿದೆ.. (ನನ್ನ ಹಳೆಯ ಕೌದಿ )
ಕೌದಿಯ ಮಹತ್ವ ಅದನ್ನು ಹೊದ್ದು ಮಲಗಿದವರಿಗೆ ಗೊತ್ತು. ಇಂದಿನ ಹೈಟೆಕ್ ಹೊದಿಕೆಗಳಿಗೆ ಅಡಾಪ್ಟ್ ಆಗಿರೋ ಬಹುಸಂಖ್ಯಾತ ಮಂದಿಗಳಿಗೆ ಈ ಹಳೆಯ ಸೀರೆ, ಬಟ್ಟೆಗಳಿಂದ ತಯಾರಿಸಿದ ಕೌದಿಯ ಅರಿವಾದರೂ ಹೇಗೆ ಆದೀತು ಅಲ್ಲವೇ ? ಎಂಥ ಚಳಿಯನ್ನು ದೂರವಿಡುವ ಸಾಮಾಥ್ರ್ಯ ಹೊಂದಿರುವ ಕೌದಿ ಕೇವಲ ಬೆಚ್ಚಗೆ ಮಾತ್ರ ಇಡುವುದಿಲ್ಲ, ಅದು ಅವ್ವ, ಅಕ್ಕ, ಅಜ್ಜಿ-ಅಜ್ಜನ ನೆನಪಿನ ಸಂಕೇತವಾಗಿ ನಮ್ಮೊಡನಿದ್ದು ಆ ಎಲ್ಲಾ ಸುಮಧುರ ನೆನಪುಗಳನ್ನು ತಂದು ಕೊಡುತ್ತದೆ ಎಂಬುದು ಕವಯತ್ರಯ ಆಶಯವಾಗಿದೆ.
ಪ್ರಬುದ್ಧ ಬರವಣಿಗೆಯೊಂದಿಗೆ ಸಂವಾದಿಸುವ ಎ.ಎಸ್.ಭಾಗೀರಥಿಯವರು ಇಲ್ಲಿ ಹೆಣ್ಣಿನ ತಾಯ್ತನ, ಆಸೆ, ಸ್ವಾತಂತ್ಯ್ರ, ಅಭಿವ್ಯಕ್ತಿ, ನೋವು-ಸಂಕಟಗಳ ಬಗ್ಗೆ ವಿಶ್ಲೇಸಿದ್ದಾರೆ. ಅಲ್ಲದೆ ಪ್ರಸ್ತುತ ಸಂದರ್ಭದ ಸಾಮಾಜಿಕ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ. ಇವರ ಆಲೋಚನಾ ರೀತಿ ವಿಭಿನ್ನವಾದದ್ದು, ಬದುಕನ್ನು ಬವಣಿಕೆಯಿಂದ ಮಾತ್ರ ನೋಡದೇ ಒಳಹೊಕ್ಕು ಆವಿಷ್ಕರಿಸುವ ಗುಣ ಇವರದು. ಇವರ ಬರವಣಿಗೆ ಹೀಗೆ ಸದಾ ಪ್ರಗತಿಪರವಾಗಿ ಸಾಗಲಿ, ಇನ್ನೂ ಉತ್ತಮೋತ್ತಮ ಕಾವ್ಯ ಕೃಷಿ ಇವರಿಂದಾಗಲಿ ಎಂದು ಆಶಿಸುತ್ತೇನೆ.
- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ