ಶನಿವಾರ, ಮೇ 9, 2015

ಬಹುಮುಖ ಪ್ರತಿಭಾ ಸಾಧಕಿ – ಎಂ.ಆರ್.ಕಮಲ

ಬಹುಮುಖ ಪ್ರತಿಭಾ ಸಾಧಕಿ – ಎಂ.ಆರ್.ಕಮಲ
ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಹಾಸನ ಜಿಲ್ಲೆ ತನ್ನದೆಯಾದ ಅಗಾಧ ಕೊಡುಗೆ ನೀಡುತ್ತಾ ಬಂದಿದೆ. ಕಾವ್ಯ, ಕಥೆ, ಕಾದಂಬರಿ, ನಾಟಕ, ಅನುವಾದ, ಜಾನಪದ, ಪ್ರಬಂಧ ಹೀಗೆ ನಾನಾ ಪ್ರಕಾರಳಲ್ಲಿ ದುಡುದವರು ಸಾಕಷ್ಟು ಜನ ಇಲ್ಲಿದ್ದಾರೆ. ಇಲ್ಲಿ ಪುರುಷರೆಷ್ಟು ಸಾಧಿಸಿದ್ದಾರೋ ಅಷ್ಟೇ ಮಹಿಳಾ ಸಾಹಿತಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಪಾರ್ವತಿ ಕೃ.ನ.ಮೂರ್ತಿ, ಬಿ.ಕೆ.ಸುಬ್ಬಲಕ್ಷ್ಮಿ, ಮಂಗಳಾ ಸತ್ಯನ್, ವಿಜಯಾ ದಬ್ಬೆ, ಬಾನು ಮುಸ್ತಾಕ್, ವೈ.ಸಿ.ಭಾನುಮತಿ ಮುಂತಾದವರು ಕನ್ನಡ ಸಾಹಿತ್ಯದಲ್ಲಿ ಅವರದೇ ಆದ ಛಾಪು ಮೂಡಿಸಿದವರು.ಇವರ ಸಾಲಿಗೆ ಸೇರುವ ಇನ್ನೋರ್ವ ಲೇಖಕಿಯೆಂದರೆ ಎಂ.ಆರ್.ಕಮಲರವರು.
ಇವರು ಕ್ರಿ.ಶ.1959 ಮಾರ್ಚಿ 27 ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿ ಕುರ್ಕೆಯಲ್ಲಿ ಶ್ಯಾನುಭೋಗ ಮನೆತನದ ಶ್ರೀ ಎಂ.ಎಚ್.ರಾಮಸ್ವಾಮಿ ಹಾಗೂ ಶ್ರೀಮತಿ ವಿಶಾಲಾಕ್ಷಿ ದಂಪತಿಗಳ ಪುತ್ರಿಯಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಮೇಟಿ ಕುರ್ಕೆಯಲ್ಲೇ ಮುಗಿಸಿದ ಕಮಲರವರು ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲೇ ಸ್ನಾತಕೋತ್ತರ ಹಾಗೂ ಎಲ್.ಎಲ್.ಬಿ ಪದವಿ ಪಡೆದರು.
ಪ್ರಾಥಮಿಕ ಹಂತದಿಂದಲೂ ಸಹಪಠ್ಯ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಸಂಗೀತ, ನೃತ್ಯ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತೊಟಗಿಸಿಕೊಂಡು ಹಂತ ಹಂತವಾಗಿ ಬೆಳೆದು ರಾಜ್ಯಾದ್ಯಂತ ಹೆಸರಾದರು. ಭರತ ನಾಟ್ಯ ಪ್ರವೀಣೆ ಎಂದ ಬಿಂಬಿತವಾದ ಇವರು ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆನ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಹಾಗೆಯೇ ಕಮಲರವರು ಅದ್ಭುತ ವೀಣಾವಾದಕಿಯೂ ಹೌದು.
ಸ್ನಾತಕೋತ್ತರ ಶಿಕ್ಷಣದ ನಂತರ ಇವರು ಬೆಂಗಳೂರಿನ ರಾಜಾಜಿನಗರದಲ್ಲಿರುವ ಶಿವನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಬೋಧನಾ ವೃತ್ತಿಯ ಜೊತೆ-ಜೊತೆಗೆ ಸಂಗೀತ, ನಾಟ್ಯ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರವೃತ್ತಿಯಾಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ವಿಕಾಸಹೊಂದುತ್ತಾ ಸಾಗಿದರು.
ಮಹಿಳಾ ಸಂವೇದನೆಯ ಅದರಲ್ಲೂ ವರ್ಣಬೇಧದಿಂದ ತತ್ತರಿಸಿದ ಜನಾಂಗದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ದಾಖಲಿಸಿದ್ದಾರೆ. ಆಫ್ರಿಕನ್ ಹಾಗೂ ಅಮೆರಿಕನ್ ಮಹಿಳೆಯರು ಗುಲಾಮ ಗಿರಿಯ ವಿರುದ್ದ ಮಾಡಿದ ಹೋರಾಟಗಳ ಮೇಲೆ ಬೆಳಕು  ಚೆಲ್ಲಿದ್ದಾರೆ.
‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಇವರ ಸುಪ್ರಸಿದ್ಧ ಕೃತಿಯಾಗಿದೆ. ಇದು ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಗುಲಾಮಗಿರಿಯಲ್ಲಿ ಬೆಂದು ನರಳಿದ ವ್ಯಥೆಗಳನ್ನು ಆಫ್ರಿಕನ್ ಲೇಖಕಿಯರು ದಾಖಲಿಸಿದ್ದನ್ನು ಕನ್ನಡಕ್ಕೆ ತಂದಿದ್ದಾರೆ. ‘ಉತ್ತರ ನಕ್ಷತ್ರ’, ‘ನನ್ನ ಕಥೆ’ ಇತರ ಪ್ರಮುಖ ಕೃತಿಗಳು.
ಇವರು ಹೆಚ್ಚು ಗಮನ ಹರಿಸಿದ್ದು ಅನುವಾದ ಸಾಹಿತ್ಯದೆಡೆಗೆ. ಉರ್ದುವಿನಿಂದ, ಆಂಗ್ಲಭಾಷೆಯಿಂದ, ಬೆಂಗಾಲಿಯಿಂದ ನೂರಾರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಅನೇಕ ಉರ್ದು ಮತ್ತು ಬೆಂಗಾಲಿ ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಅವರ ಅನೇಕ ಕವಿತೆಗಳು ಮರಾಠಿ, ಮಲೆಯಾಳಂ, ಗುಜರಾತಿ, ಬಂಗಾಲಿ ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡಿರುವುದು ಇವರ ವಿದ್ವತ್‍ಗೆ  ಹಿಡಿದ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
‘ಶಕುಂತಲೋಪಾಖ್ಯಾನ’ ಇವರ ಮೊದಲ ಕಾವ್ಯ ಸಂಗ್ರಹವಾಗಿದೆ. ಇವರ ಇನ್ನೊಂದು ಪ್ರಸಿದ್ಧ ಕವನ ಸಂಕಲನ ‘ಜಾಣೆ ಮತ್ತು ಇತರ ಕವಿತೆಗಳು’.  ‘ಕತ್ತಲೆ ಹೂವಿನ ಹಾಡು’ ಎಂ.ಆರ್.ಕಮಲರವರ ಪ್ರಮುಖ ಅನುವಾದ ಕೃತಿಯಾಗಿದೆ. ಹೀಗೆ ಇವರ ಸಾಹಿತ್ಯ ದೀನ-ದಲಿತರ ನೋವುಗಳಿಗೆ ಬೆಳಕಾಯಿತು. ಇವರ ಅನುವಾದ ಎಷ್ಟೋ ಮಹಿಳೆಯರ ಕೂಗು, ಸಂಕಟಗಳನ್ನು ಅನಾವೃಣಗೊಳಿಸಿದವು. ಮಹಿಳಾ ಪರ, ದಮನಿತರ ಪರ ದ್ವನಿಗಳು ಇವರ ಬರವಣಿಗೆಗಳಲ್ಲಿ ಪಲ್ಲವಿಸಿದವು.
ಎಂ.ಆರ್.ಕಮಲರವರು ಒಬ್ಬ ಹೋರಾಟಗಾರ್ತಿಯರಿಗೆ ಬೆಳಕಾಗಿ, ಕವಯತ್ರಿಯಾಗಿ, ಅನುವಾದಕಿಯಾಗಿ, ಭರತನಾಟ್ಯ ಕಲಾವಿದೆಯಾಗಿ, ವೀಣಾ ವಾದಕಿಯಾಗಿ ನಮ್ಮೆದುರಿಗೆ ನಿಲ್ಲುವುದರೊಂದಿಗೆ ಬಹುಮುಖ ಪ್ರತಿಭಾಶಕ್ತಿಯಾಗಿ ಗೋಚರಿಸುತ್ತಾರೆ.
ಇವರ ಸಾಹಿತ್ಯ, ಸಂಗೀತ ಹಾಗೂ ನಾಟ್ಯ ಕಲೆಗೆ ಸಾಕಷ್ಟು ಬಹುಮಾನ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಬಿ.ಎಂ.ಶ್ರೀ ಸ್ವರ್ಣ ಪದಕ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿಗಳು ಪ್ರಮುಖವಾಗಿವೆ. ಇವರ ಭಾವಗೀತೆಗಳ ಧ್ವನಿ ಸುರುಳಿಯಾದ ‘ಭಾವ ವೀಣೆ’ ಆಧುನಿಕ ಕವಯತ್ರಿಯರ ಮೊಟ್ಟ ಮೊದಲ ಧ್ವನಿ ಸುರುಳಿ ಎಂಬುದಕ್ಕೆ ಸಾಕ್ಷಿಯಾಗಿದೆ.


ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ