ವ್ಯಾಪಕ ಅಧ್ಯಾಯನದ ತಲಸ್ಪರ್ಶಿ ಚಿಂತಕ - ಶಂಕರನಾರಾಯಣ ರಾವ್
ವಸ್ತು ನಿಷ್ಠ ವಿಮರ್ಶೆಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಹಾಗೂ ಸಾಹಿತಿಗಳನ್ನು ನಿಷ್ಟುರವಾಗಿ ವಿಮರ್ಶಿಸಿ ಪ್ರಖರತೆ ಬೀರಿದವರು ಎನ್.ಪಿ.ಶಂಕರನಾರಾಯಣ ರಾಯರು. ಆಳವಾದ ಹಾಗೂ ನಿರಂತರ ಅಧ್ಯಯನದಿಂದ ಅಗಾಧ ಜ್ಞಾನ ಸಂಪಾದಿಸಿದ್ದ ಇವರು ಉತ್ತಮ ತಲಸ್ಪರ್ಶಿ ಚಿಂತಕರೂ ಆಗಿದ್ದರು ಎಂಬುದು ವಿಶೇಷವಾದುದು.
ಇವರು ಕ್ರಿ.ಶ.1928 ರ ಆಗಸ್ಟ್ 03 ರಂದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ನಿಟ್ಟೂರು ಗ್ರಾಮದ ಶ್ರೀ ಪಟ್ಟಾಬಿರಾಮಯ್ಯ ಹಾಗೂ ಶ್ರೀಮತಿ ಅಚ್ಚಮ್ಮನವರ ಮೂರು ಮಕ್ಕಳಲ್ಲಿ ಮೊದಲ ಗಂಡು ಮಗುವಾಗಿ ಜನಿಸಿದರು. ತಂದೆ ಸಬ್ರಿಜಿಸ್ಟಾರ್ ಕಛೇರಿಯಲ್ಲಿ ಕಾರ್ಯ ಮಾಡುತ್ತಿದ್ದರಿಂದ ಒಂದೆಡೆ ನೆಲೆನಿಲ್ಲದೆ ವರ್ಗಾವಣೆವಾದ ಕಡೆಯಲ್ಲೆಲ್ಲಾ ಶಂಕರನಾರಾಯಣ ರಾಯರ ಶಿಕ್ಷಣವೂ ವರ್ಗಾವಾಗುತ್ತಾ ಸಾಗಿತು.
ಇವರು ಬೆಂಗಳೂರಿನ ಶ್ರೀರಾಂಪುರದಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣವನ್ನು, ಕನಕಪುರದ ಕಾನಕಾನಹಳ್ಳಿಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆನೆಕಲ್ ಮತ್ತು ಬಸವನಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಹಾಗೆಯೇ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು.
ಹೈಸ್ಕೂಲು ಓದುತ್ತಿದ್ದಾಗಲೇ ಇಡಿ ಭಾರತದಾದ್ಯಾಂತ ಸ್ವಾತಂತ್ರ್ಯ ಚಳವಳಿಯ ಕಾವು ಎಲ್ಲೆಡೆ ಪಸರಿಸಿತ್ತು. ಈ ಬಿಸಿ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಿದ್ದ ಶಂಕರನಾರಾಯಣರಾಯರನ್ನು ತಟ್ಟಿದ ಪರಿಣಾಮ ಚಳವಳಿಯಲ್ಲಿ ಭಾಗಿಯಾಗಿ ಸೆರೆಮನೆವಾಸವನ್ನೂ ಅನುಭವಿಸುವಂತಾಯಿತು.
ಚಿಕ್ಕಂದಿನಿಂದಲೇ ಅಧ್ಯಯನ ಮತ್ತು ಅಧ್ಯಾಪನಗಳಿಂದ ಹೃದಯ ವೈಶಾಲ್ಯತೆ ಬೆಳೆಸಿಕೊಂಡ ಶಂಕರನಾರಾಯಣ ರಾಯರು ಮೈಸೂರಿನಲ್ಲಿದ್ದಾಗ ಕಮುನಿಸ್ಟ್ ಸಂಘಟಕರೊಬ್ಬರ ಪರಿಚಯದಿಂದ ವೈಚಾರಿಕ ಹಾಗೂ ವೈಜ್ಞಾನಿಕವಾಗಿ ತುಂಬಾ ಆಸಕ್ತರಾಗಿ ತಲಸ್ಪರ್ಶಿ ವಿಶ್ಲೇಷಣೆಯೊಂದಿಗೆ ಸಮಾಜವನ್ನು ತಾರ್ಕಿಕ ಚಿಂತನೆಯಡಿಯಲ್ಲಿ ಅರಿತುಕೊಂಡರು. ಇದೆ ಸಂದರ್ಭದಲ್ಲಿ ‘ಮೈಸೂರು ಸ್ಟೂಡೆಂಟ್ಸ್ ಆರ್ಗನಿಜೇಷನ್’ ಸ್ಥಾಪಿಸಿ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಪರಿಹರಿಸುವುದರ ಜೊತೆಗೆ ದೇಶಭಕ್ತಿ, ದೇಶಭಿಮಾನಗಳನ್ನು ಭಿತ್ತಿದರು. ಶಂಕರನಾರಾಯಣ ರಾಯರಿಗೆ ಈ ಹೋರಾಟ, ಚಳವಳಿಯಿಂದ ಅನೇಕ ದೊಡ್ಡ ವ್ಯಕ್ತಿಗಳ ಪರಿಚಯವಾಯಿತು.
ಬಾಲ್ಯಾವಸ್ಥೆಯಲ್ಲಿಯೇ ತಂದೆಯ ಹಿಂದೆ ವಲಸೆ ಹೋಗುತ್ತಾ ವಿವಿಧ ಊರುಗಳ ಸಂಸ್ಕøತಿ, ಆಚಾರ, ವಿಚಾರಗಳು, ಅಲ್ಲಿಯ ಸಾಂಸ್ಕøತಿಕ ಸಂಗತಿಗಳು ಇವರ ಮೇಲೆ ಬಹಳವೇ ಪರಿಣಾಮ ಬೀರಿದವು. ಆದ್ದರಿಂದಲೇ ಇವರು ಅಲ್ಲಿ ನಡೆಯುವ ರಂಗಭೂಮಿಯ ಕಡೆ ಪ್ರಭಾವಿತರಾದರು. ಸಮಾಜಿಕವಾಗಿ ಮೌಲಿಕತೆ ತುಂಬುವಂತಹ ನಾಟಕ ಹಾಗೂ ಚಲನ ಚಿತ್ರಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಭಕ್ತ ಪ್ರಹ್ಲಾದ, ಬಬ್ರುವಾಹನ, ಭಕ್ತಧೃವ, ಸತ್ಯವಾನ್ ಸಾವಿತ್ರಿ ಇವು ಶಂಕರನಾರಾಯಣ ರಾಯರು ಇಷ್ಟ ಪಡುತ್ತಿದ್ದ ಕೆಲವು ಮಹತ್ವದ ಚಲನ ಚಿತ್ರಗಳು.
ಕೇವಲ ಚಲನ ಚಿತ್ರಗಳಲ್ಲದೆ ರಂಗಭೂಮಿಯ ಕಡೆಗೂ ಇವರ ಗಮನ ಹರಿಯಿತು. ಹಳ್ಳಿಯ ಕಡೆ ನಡೆಯುವ ನಾಟಕಗಳನ್ನು ತಪ್ಪದೆ ವೀಕ್ಷಿಸುತ್ತಿದ್ದ ಶಂಕರನಾರಾಯಣ ರಾಯರು ಅವುಗಳಲ್ಲಿನ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ ಬರಹಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸುತ್ತಿದ್ದರು. ಭೀಷ್ಮ ಪ್ರತಿಜ್ಞೆ, ದಾನಶೂರ ಕರ್ಣ ಇವರ ನೆಚ್ಚಿನ ನಾಟಕಗಳು.
ಓದು, ಬರಹ ಕಲಿಯ ನಂತರ ಪ್ರಪ್ರಥಮವಾಗಿ ಓದಿದ ಪುಸ್ತಕ ಜ್ಞಾನಪೀಠ ಪ್ರಶಸ್ತಿ ಪುರಸ್ಕøರು ಹಾಗೂ ಖ್ಯಾತ ಸಣ್ಣ ಕಥೆಗಾರರಾದ ಮಾಸ್ತಿ ವೆಂಕಟೇಶ್ ಅಯ್ಯಾಂಗಾರರ ‘ಕೆಲವು ಸಣ್ಣ ಕಥೆಗಳು’. ಈ ಕೃತಿಯು ಶಂಕರನಾರಾಯಣ ರಾಯರ ಚಿಂತನಾ ಲಹರಿಯನ್ನೇ ಬದಲಾಯಿಸಿತೆನ್ನಬಹುದು. ಈ ಸಂಕಲನದಲ್ಲಿ ಬರುವ ‘ರಂಗಪ್ಪನ ದೀಪಾವಳಿ’ ಎಂಬ ಕಥೆಯಲ್ಲಿನ ವೆಂಕಟರಾಯನ ಪಿಶಾಚಿ ಇವರನ್ನು ಬಹಳ ದಿನಗಳವರೆಗೆ ಕಾಡಿದ ಭಯಾನಕ ಪಾತ್ರ.
ಮೈಸೂರಿನಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕ ವರ್ಗದ ಸಮಸ್ಯೆಗಳ ಮಹಾಪೂರವನ್ನೆ ಕಂಡ ರಾಯರು ಅವರ ಒಳಿತಿಗಾಗಿ ‘ಮೈಸೂರು ಪುರಸಭಾ ಕಾರ್ಮಿಕ ಸಂಘ’ವನ್ನು ಸ್ಥಾಪಿಸಿದರು. ಸಾವಿರಾರು ಕಾರ್ಮಿಕರನ್ನು ಒಗ್ಗೂಡಿಸಿ ಅವರ ತುಟ್ಟಿಭತ್ಯೆ ಹಾಗೂ ಅವರಿಗೆ ನೀಡುತ್ತಿದ್ದ ಕೆಳದರ್ಜೆಯ ಜೋಳ ಮತ್ತು ಅಕ್ಕಿ ಪಡಿತರ ವಿರುದ್ದ ಹೋರಾಟ ನಡೆಸಿದರು.
ದಾವಣಗೆರೆಯ ಗಿರಣಿ ಕಾರ್ಮಿಕರ ಸಂಘ, ಹರಿಹರದ ಕಿರ್ಲೋಸ್ಕರ್ ಸಂಘಗಳೊಡನೆ ನಿಕಟ ಸಂಬಂಧವಿಟ್ಟುಕೊಂಡು ಮೈಸೂರು ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡುತ್ತಿದ್ದರು. ಸಂಘಟನೆಗಳ ಕಡೆ ಹೆಚ್ಚು ಗಮನ ನೀಡಿದ್ದರಿಂದ ಸೀನಿಯರ್ ಇಂಟರ್ಮೀಡಿಯೇಟ್ನಲ್ಲಿ ಅನುತ್ತೀರ್ಣವಾಗಬೇಕಾಯಿತು.
ವೃತ್ತಿ ಃ ಶಂಕರನಾರಾಯಣ ರಾಯರು ಅವರ ಬದುಕನ್ನು ಬಹುತೇಕ ಸಾರ್ವಜನಿಕವಾಗಿಯೇ ತೆರೆದುಕೊಂಡವರು. ಹೋರಾಟ, ಚಳವಳಿಗಳ ಪರಿಣಾಮದಿಂದ ವಿದ್ಯಭ್ಯಾಸ ಮೊಟಕಾದ್ದರಿಂದ ಉದ್ಯೋಗದತ್ತ ಗಮನ ನೀಡಿದರು. ಚಿಕ್ಕಮಗಳೂರಿನ ‘ಪಬ್ಲಿಕ್ ಕನ್ವೆಯನ್ಸ್’ ಎಂಬ ಸಾರಿಗೆ ಸಂಸ್ಥೆಯಲ್ಲಿ ಉಗಾಣ ಗುಮಾಸ್ತರಾಗಿ ವೃತ್ತಿ ಆರಂಭಿಸಿದ ರಾಯರಿಗೆ ಇಲ್ಲಿನ ಪಗಾರ ಸಾಕಾಗಲಿಲ್ಲ! ನಂತರ ಮದರಾಸಿನ ಅಂಚೆ ಮತ್ತು ತಂತಿ ಕಛೇರಿಯಲ್ಲಿ ಉದ್ಯೋಗ ಆರಂಭಿಸಿದರು. ಇಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮದರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿಯಲ್ಲಿ ‘ಹಿಂದಿ ರಾಷ್ಟ್ರಭಾಷಾ’ ಪರೀಕ್ಷೆ ಬರೆದು ಉತ್ತೀರ್ಣರಾದರು. ಇದೆ ಸಮಯದಲ್ಲಿ ಅನುತ್ತೀರ್ಣಗೊಂಡಿದ್ದ ಇಂಟರ್ ಮೀಡಿಯೇಟ್ನ್ನು ಮಧ್ಯಪ್ರದೇಶದ ‘ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್’ ಮುಖಾಂತರ ಉತ್ತೀರ್ಣಗೊಂಡರು. ಓದಿಗಾಗಿಯೇ ಬಹುತೇಕ ಸಮಯವನ್ನು ರಾಯರು ತಮ್ಮ ದಿನಚರಿಯಲ್ಲಿ ನಿಗದಿಪಡಿಸಿಕೊಂಡಿದ್ದರು ಅದಕ್ಕಾಗಿಯೇ ಅವರು ಅಂದು ಕೊಂಡಂತೆ ಶೈಕ್ಷಣಿಕ ಜ್ಞಾನ ಪಡೆಯಲು ಸಹಕಾರಿಯಾಯಿತೆನ್ನಬಹುದು. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಅಂಚೆತೆರಪಿನ ಶಿಕ್ಷಣದಿಂದ ಬಿ.ಎ ಪದವಿ ಪೂರೈಸಿದರು.
ಮದರಾಸಿನಿಂದ ಪುನಃ ಮರ್ನಾಟಕಕ್ಕೆ ಬಂದ ರಾಯರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮಾನವ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಭಾರತ ಎಜುಕೇಶನ್ ಸೊಸೈಡಿಯಲ್ಲಿ ಅಧ್ಯಾಪಕರಾಗಿ ಸೇರ್ಪಡೆಗೊಂಡು ಶಿಕ್ಷಣ ಕ್ಷೇತ್ರಕ್ಕೆ ಬಂದರು.
ಅಧ್ಯಾಪಕ ವೃತ್ತಿಯಲ್ಲಿದ್ದಾಗಲೆ ದೆಹಲಿಯ ವಿಶ್ವ ವಿದ್ಯಾನಿಲಯದ ಸಮಾಜ ವಿಜ್ಞಾನ ವಿಭಾಗದ ಸಾಮಾಜಿಕ ವೈಧ್ಯ ಮತ್ತು ಸಮುದಾಯ ಸ್ವಾಸ್ಥ್ಯ ಕೇಂದ್ರಕ್ಕಾಗಿ ಕ್ಷೇತ್ರ ಕಾರ್ಯ ಕೈಗೊಂಡು ‘ಪರಿವರ್ತನೆಯ ಸುಳಿಯಲ್ಲಿ ಕಿರು ಸಮುದಾಯಗಳು’ ಎಂಬ ಸಂಶೋಧನಾ ವರದಿಯನ್ನು ನೀಡಿದರು.
ನಂತರ ಇನ್ವೆಸ್ಟಿಗೇಟರ್ ಆಗಿ ನೇಮಕಗೊಂಡ ರಾಯರು ಎರಡು ವರ್ಷಗಳ ಕಾಲ ಜನಗಣತಿ ಇಲಾಖೆಗೆ ವರ್ಗಗೊಂಡು ಅಧ್ಯಯನ ನಡೆಸಿ ‘ದಿ ಯರವಾಸ್ ಆಫ್ ಕೊಡಗು’, ‘ಪಣಿಯರ ಸಮಾಜ ಮತ್ತು ಜಾನಪದ ಇತಿಹಾಸ’, ‘ಪಂಜಿಯವರ ಸಮಾಜ ಮತ್ತು ಜಾನಪದ ಇತಿಹಾಸ’ ಎಂಬ ಶ್ರೇಷ್ಠ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ರಂಗ ಭೂಮಿ ಮತ್ತು ಚಲನ ಚಿತ್ರ ನಂಟು ಃ ಮದರಾಸಿನಲ್ಲಿದ್ದಾಗ ಇವರಲ್ಲಿ ಜಾಗೃತವಾಗಿದ್ದ ಕಲೆ ಸುಮ್ಮನೆ ಕೂರಲು ಬಿಡಲಿಲ್ಲ. ಅಲ್ಲಿನ ಕರ್ನಾಟಕ ಸಂಘವು ಏರ್ಪಡಿಸುತ್ತಿದ್ದ ನಾಟಕಗಳನ್ನು ವೀಕ್ಷಿಸುತ್ತಾ, ಪರಿಚಯವಾಗಿ ಅಭಿನಯಿಸುತ್ತಾ ಉತ್ತಮ ನಟನೆಂದು ಗುರುತಿಸಿಕೊಂಡರು. ಅಂದು ಕನ್ನಡ ಚಲನ ಚಿತ್ರಗಳು ಬಹುತೇಕ ಮದಾಸಿನಲ್ಲಿಯೇ ನಿರ್ಮಾಣವಾಗುತ್ತಿದ್ದವು. ಈ ಸಂದರ್ಭದಲ್ಲಿ ಇವರ ನಾಟಕ ಅಭಿನಯದ ಛಾಪು ಚಲನ ಚಿತ್ರ ನಿರ್ದೇಶಕ ಆರ್.ನಾಗೇಂದ್ರರಾಯರನ್ನು ಸೆಳೆಯಿತು. ಇವರಿಬ್ಬರ ಪರಿಚಯ ಶಂಕರನಾರಾಯಣ ರಾಯರನ್ನು ಕನ್ನಡ ಚಲನ ಚಿತ್ರರಂಗಕ್ಕೆ ತಂದು ನಿಲ್ಲಿಸಿತು. 1953 ರಲ್ಲಿ ತೆರೆಕಂಡ ‘ಜಾತಕ ಫಲ’ ಇವರ ಚೊಚ್ಚಲ ಸಿನಿಮಾ. 1954 ರಲ್ಲಿ ಬಂದ ‘ಜಲದುರ್ಗಾ’, 1956 ರಲ್ಲಿ ತೆರೆಕಂಡ ‘ಭಕ್ತ ಮಾರ್ಕೇಂಡೇಯ’, ‘ಭಕ್ತ ವಿಜಯ’ ಸಿನಿಮಾಗಳು ಇವರಿಗೆ ಕೀರ್ತಿತಂದುಕೊಟ್ಟವು. 1957 ರಲ್ಲಿ ಬಂದ ‘ಸ್ಕೂಲ್ ಮಾಸ್ಟರ್’ 1960 ರಲ್ಲಿ ತೆರೆಕಂಡ ‘ರಾಣಿ ಹೊನ್ನಮ್ಮ’, ‘ವಿಜಯನಗರ ವೀರ ಪುತ್ರ’, ‘ಕಂಠೀರವ’ ಇವರ ಇತರ ಪ್ರಮುಖ ಚಲನ ಚಿತ್ರಗಳಾಗಿವೆ. ಇಷ್ಟೇ ಅಲ್ಲದ ಆಕಾಶವಾಣಿಗೆ ಅನೇಕ ರೂಪಕಗಳನ್ನು ಬರೆದಿದ್ದಾರೆ.
ಸಾಹಿತ್ಯ ಕ್ಷೇತ್ರ ಃ
‘ಜೀವ ಸೆಳೆದ ಹುಡುಗಿ’ ಇವರ ಚೊಚ್ಚಲ ಪತ್ತೆದಾರಿ ಕಾದಂಬರಿ. ‘ಗಡಿಯಾಚೆಯ ಗುಡಿಗಳು’(1971), ‘ಅವತಿ ನಾಡ ಪ್ರಭುಗಳು’(1971), ಮೈಸೂರು ಹಾಗೂ ಬೆಂಗಳೂರು ವಿಶ್ವ ವಿದ್ಯಾನಿಲಯಗಳಿಗಾಗಿ ಬರೆದ ‘ಭಾರತದ ಪ್ರಚಲಿತ ಸಾಮಾಜಿಕ ಸಮಸ್ಯೆಗಳು’(1972). ‘ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ’(1987).
‘ಭಾರತೀಯ ಅಂಚೆ ಬಂಧು’, ‘ಕೌಸ್ತುಭ’, ‘ಸ್ತೋತ್ರ ಕೌಸ್ತುಭ’- ಸಂಪಾದಿತ ಕೃತಿಗಳು. ಇವರ ‘ಸ್ವಾತಂತ್ರ್ಯ ಹೋರಾಟದ ಸಾವಿರ ತೊರೆಗಳು’ ಕೃತಿಯು ಇಡಿ ಸ್ವಾತಂತ್ರ್ಯ ಚಳವಳಿಯ ವಿವಿಧ ಘಟ್ಟ್ಗಳನ್ನು ವಿಭಿನ್ನವಾಗಿ ತೋರಿಸುವ ಅಮೂಲ್ಯ ಐತಿಹಾಸಿಕ ಗ್ರಂಥವಾಗಿದೆ.
1981 ರಲ್ಲಿ ‘ಕನ್ನಡ ಪ್ರಭ’ ದಿನಪತ್ರಿಕೆಗೆ ಪ್ರಾಚೀನ ಅಮೇರಿಕನ್ ನಾಗರೀಕತೆ, ಭೂಮಿಯ ವೈಶಿಷ್ಟ್ಯಗಳು, ಆಗ್ನೇಯ ಏಷ್ಯಾದಲ್ಲಿ ವ್ಯಾಪಿಸಿರುವ ಭಾರತೀಯ ಸಾಂಸ್ಕøತಿಕ ಪ್ರಭಾವಗಳು ಎಂಬ ವಿಷಯಗಳ ಕುರಿತು ಬರೆದ ‘ವಿಚಾರ ವೇದಿಕೆ’ ಎಂಬ ಅಂಕಣವು ಇವರಿಗೆ ಬಹಳ ಪ್ರಸಿದ್ಧಿ ತಂದುಕೊಟ್ಟಿತು.
ಈ ಮಧ್ಯೆ ಕಾಲಿನ ಕಿರು ಬೆರಳಿಗೆ ಹುಣ್ಣು ತಗುಲಿ ಇಡಿ ಒಂದು ಕಾಲನ್ನೇ ಕತ್ತರಿಸಬೇಕಾಯಿತು. ಆದರೂ ಕಾಲಿಲ್ಲದವ ಎಂಬ ಯಾವುದೇ ಕೀಳಿರಿಮೆಗೆ ಒಳಗಾಗದೇ ಆತ್ಮಸ್ಥೈರ್ಯದಿಂದ ಮೊದಲಿಗಿಂತಲೂ ಚುರುಕಾಗಿ ಸಾಹಿತ್ಯಿಕ ಕೈಂಕರ್ಯ ಮಾಡಿದರು. ಈ ಅಪಘಾತದ ನಂತರ ರಾಯರು ರಚಿಸಿದ ಕೃತಿಗಳು ಬಹಳ ಮಹತ್ವ ಪಡೆದಿವೆ. ಅನುವಾದ ಪ್ರಕಾರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ರಾಯರು ಬಹುಭಾಷಾ ಪಾರಂಗತರಾಗಿದ್ದರು. ಆಂಗ್ಲಭಾಷೆ, ತೆಲುಗು ತಮಿಳು , ಹಿಂದಿ ಮುಂತಾದ ಭಾಷೆಗಳಿಂದ ಕನ್ನಡಕ್ಕೆ ಸಾಕಷ್ಟು ಕೃತಿಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ‘ಪ್ರಾಚೀನ ಭಾರತ’, ‘ಠಕ್ಕನೊಬ್ಬನ ಆತ್ಮ ಚರಿತ್ರೆ’, ‘ಮಹಾತ್ಮ ಗಾಂಧಿ ಕೃತಿ ಸಂಚಯ’, ‘ನೆಲಕಚ್ಚಿದ ಗುಬ್ಬಚ್ಚಿ’, ‘ಅಪ್ಪುವಿನ ತಾಯಿ’ ಪ್ರಮುಖವಾದ ಕೃತಿಗಳಾಗಿವೆ.
ಇಷ್ಟೆ ಅಲ್ಲದೆ ‘ಅಷ್ಫಾಕ್ ಉಲ್ಲ’, ‘ರಾಮ್ ಪ್ರಸಾದ್ ಬಿಸ್ಮಿಲ್ಲಾ’, ‘ಬಟುಕೇಶ್ವರ ದತ್ತ’ ಮುಂತಾದ ವ್ಯಕ್ತಿ ಪರಿಚಯಗಳನ್ನು ಹೊರತಂದಿದ್ದಾರೆ. ಶ್ರೇಷ್ಠ ವಿಧ್ವಾಂಸರು, ಸಂಶೋಧಕರು, ಹೋರಾಟಗಾರರು, ಪ್ರಗತಿಪರ ಚಿಂತಕರು, ಅಧ್ಯಾಪಕರು, ಅನುವಾದಕರು, ರಂಗಭೂಮಿ ಹಾಗೂ ಚಲನ ಚಿತ್ರ ನಟರಾಗಿದ್ದ ಶಂಕರನಾರಾಯಣ ರಾಯರು 2006 ನವಂಬರ್ 28 ರಂದು ಇಹಲೋಕಗೈದರು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ