ಶನಿವಾರ, ಮೇ 9, 2015

ಧನಾತ್ಮಕ ಚಿಂತನೆಯ ಚುಟುಕು ಸಾಹಿತಿ ಡಾ|| ಕೆ.ಕೆ.ಜಯಚಂದ್ರ ಗುಪ್ತ

ಧನಾತ್ಮಕ ಚಿಂತನೆಯ ಚುಟುಕು ಸಾಹಿತಿ ಡಾ|| ಕೆ.ಕೆ.ಜಯಚಂದ್ರ ಗುಪ್ತ
ಸಾಹಿತ್ಯ ಸೃಜಿಸುವುದೇ ಸಕಾರಾತ್ಮಕ ಚಿಂತನೆಗಳಿಂದ. ಆದರೂ ಒಮ್ಮೊಮ್ಮೆ ವ್ಯತಿರಿಕ್ತ ಭಾವಗಳು ಸಾಹಿತ್ಯದಲ್ಲಿ ಮೊಳೆಯುವುದೂ ಉಂಟು, ಅವು ಕಡಿಮೆ ಪ್ರಮಾಣವೆನ್ನಬಹುದು. ಎಪ್ಪತ್ತಾರು ವಯೋಮಾನದ ಯುವ ಮನಸ್ಸಿನ ವ್ಯಕ್ತಿ ಡಾ || ಗುಪ್ತರವರು. ಸದಾ ಹೊಸ ಚಿಂತನೆಗಳೊಂದಿಗೆ ಪರಾಮರ್ಶಿಸುವ ಇವರು ನೇರವಾದಿಗಳು. ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ವಲಯದಲ್ಲೂ ಸಂಚಲನ ಮೂಡಿಸಿದ ಕೀರ್ತಿ ಇವರದು ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಯುತ ಜಯಚಂದ್ರಗುಪ್ತರವರು ಕ್ರಿ.ಶ.1938 ಮೆ 04 ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ವಾಸಿ ಶ್ರೀ ಕೃಷ್ಣಶೆಟ್ಟಿ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೊಣನೂರು ಹಾಗೂ ಅರಕಲಗೂಡಿನಲ್ಲಿ ಮುಗಿಸಿದರು. ನಂತರ ಇಂಟರ್ಮೀಡಿಯೇಟ್‍ನ್ನು ಕೊಣನೂರಿನ ಬಿ.ಎಂ.ಶೆಟ್ಟಿ ಕಾಲೇಜಿನಲ್ಲಿ ಮುಗಿಸಿದ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು 1964 ರಲ್ಲಿ ಪೂರೈಸಿ, ನಂತರ ಡಾ|| ಜಯಚಂದ್ರ ಗುಪ್ತರವರು 1965 ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ವೈದ್ಯ ವೃತ್ತಿ ಜೀವನವನ್ನು ಆರಂಭಿಸಿದರು.
ಇಷ್ಟಕ್ಕೆ ಮಿತಿಗೊಳ್ಳದ ಇವರ ಓದಿನ ಆಸಕ್ತಿ ವೃತ್ತಿ ಜೀವನದಲ್ಲೂ ಮುಂದುವರೆಯಿತು. ವೈದ್ಯಕೀಯ ಇಲಾಖೆ ಇವರ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಿದ್ದರ ಫಲವಾಗಿ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ಪದವಿ(ವೃತ್ತಿ ನಿರತ) ಪೂರೈಸಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜ್‍ನಲ್ಲಿ ಕರ್ತವ್ಯ ನಿರ್ವಹಿಸಿದರು.
ದಾಂಪತ್ಯ ಜೀವನ ಃ 1973 ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಜೇಶ್ವರಿಯವರನ್ನು ವರಿಸುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾ || ಗುಪ್ತರವರ ಜೀವನದಲ್ಲಿ ಅನುರಾಧ, ಆಶಾರಾಣಿ ಹಾಗೂ ಅಭಿಷೇಕ ಅವರು ವಾಂಶಿಕÀವಾಗಿ ಹೊಸ ಬೆಳಕಾಗಿ ಬಂದರು. ಮೊದಲೆರಡು ಪುತ್ರಿಯರು ಇಂಜಿನಿಯರ್‍ಗಳಾದರೆ, ಪುತ್ರ ಅಭಿಷೇಕ್ ವೈದ್ಯರು.
ವೈದ್ಯಕೀಯ ಕ್ಷೇತ್ರ ಃ ಡಾ|| ಜಯಚಂದ್ರಗುಪ್ತರವರು 1980 ರಿಂದ 1983 ರ ಅವಧಿಯಲ್ಲಿ ತವರು ಜಿಲ್ಲೆಯಾದ ಹಾಸನದಲ್ಲಿ ಕೆಲಸ ಮಾಡಿದ್ದಾರೆ. 1985 ರಿಂದ 1990 ರ ಅವಧಿಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣಗಳಲ್ಲಿ ಉಪ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಕರ್ತವ್ಯ ನಿರ್ವಹಿಸಿ 1996 ಮೆ ಮಾಹೆಯಲ್ಲಿ ನಿವೃತ್ತಿಯಾದರು.
ಸಾಹಿತ್ಯ ಕ್ಷೇತ್ರ ಃ ಸುಧಾ, ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಸಾಹಿತ್ಯ ಹಾಗೂ ವಿಮರ್ಶಾತ್ಮಕ ಲೇಖನಗಳನ್ನು ಓದುತ್ತಿದ್ದ ಡಾ || ಗುಪ್ತರವರು ಸಾಹಿತ್ಯ ಕ್ಷೇತ್ರದತ್ತ ಹೊರಳಲು ಕಾರಣವಾಯಿತೆನ್ನಬಹುದು. ಅವರೇ ಹೇಳುವಂತೆ ಕಾಲೇಜು ದಿನಗಳಿಂದಲೂ ಚಿಕ್ಕ ಪುಟ್ಟ ಚುಟುಕುಗಳನ್ನು ಬರೆಯುವ ಹವ್ಯಾಸವಿತ್ತಾದರೂ ಅದು ಪ್ರಖರಗೊಂಡದ್ದು ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಹಾಗೂ ಸಾಹಿತ್ಯಿಕ ಸ್ನೇಹಿತರಿಂದ.
2007 ರಲ್ಲಿ ಪ್ರಕಟವಾದ ‘ನೆನಪಿನ ಪುಟಗಳು’ ಇವರ ಚೊಚ್ಚಲ ಕೃತಿಯಾಗಿದೆ.  2010 ರಲ್ಲಿ ಪ್ರಕಟವಾದ ‘ಚುಚ್ಚುಮದ್ದು’ ಚುಟುಕು ಸಂಕಲನ.
ನೆನಪಿನ ಪುಟಗಳು ಃ ಸುಮಾರು 80 ಪುಟಗಳ ಈ ಕೃತಿಯು 1957 ರಲ್ಲಿ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಸೇರಿದ ಆ ಸಾಲಿನ ಗೆಳೆಯರೊಂದಿಗೆ ಅನುಭವಿಸಿದ ಮಧುರ ಕ್ಷಣಗಳ ಹೊತ್ತಿಗೆಯ ಬುತ್ತಿ ಎಂದರೆ ತಪ್ಪಾಗಲಾರದು. ಅಂದಹಾಗೆ ಕೇವಲ ಕಾಲೇಜಿನ ಅನುಭವಗಳು ಮಾತ್ರ ಇದರಲ್ಲಿಲ್ಲ, ಹಾಗೆಯೇ ವೃತ್ತಿ ಜೀವನದ ಅನುಭವಗಳು, ವೈದ್ಯಕೀಯ ಲೇಖನಗಳು, ಬೇರೆ ಬೇರೆ ಸಂದರ್ಭಗಳಲ್ಲಿ ನಡೆದ ಲೇಖಕರ ವೈಯಕ್ತಿಕ ಅನುಭವಗಳು ಈ ಕೃತಿಯಲ್ಲಿ ಸಮ್ಮಿಲನಗೊಂಡಿವೆ.
ಚುಚ್ಚು ಮದ್ದು ಃ 108 ಪುಟಗಳ ಈ ಕೃತಿಯು ಗುಪ್ತ ರವರನ್ನು ನಿಜಕ್ಕೂ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಕೃತಿಯೆನ್ನಬಹುದು. ಈ ಕೃತಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಆರ್.ಕೆ.ನಲ್ಲೂರ್ ಪ್ರಸಾದ್ “ ‘ ಚುಚ್ಚು ಮದ್ದು’ ಡಾ|| ಜಯಚಂದ್ರ ಗುಪ್ತ ಅವರ ವಿಶಿಷ್ಟ ಕೃತಿ. ವೈದ್ಯಕೀಯ ಕ್ಷೇತ್ರದ ಹೆಸರನ್ನು ಹೊತ್ತ ಈ ಕೃತಿ ತನ್ನ ಹೆಸರು ಸಾರ್ಥಕವಾಗುವಂತೆ ಸೃಷ್ಠಿಯಾಗಿದೆ. ಇಲ್ಲಿಯ ಚುಟುಕುಗಳಿಗೆ ಸೂಜಿ ಮೊನಯಿದೆ. ಅಭಿವ್ಯಕ್ತಿಯಲ್ಲಿ ಕಟಕಿ, ವ್ಯಂಗ, ವಿಡಂಬನೆ, ಹಾಸ್ಯ ಸೂಚಿಸಿದರೂ ಆಂತರ್ಯದಲ್ಲಿ ಸಾಮಾಜಿಕ ಕಳಕಳಿಯಿದೆ. ಸಮಾಜದ ಪಿಡುಗನ್ನು ಹೋಗಲಾಡಿಸಿ, ಆರೋಗ್ಯವನ್ನು ಪುನಃ ಸ್ಥಾಪಿಸುವ ವೈದ್ಯ ಕಾಳಜಿ ಎಲ್ಲ ಕವನಗಳಲ್ಲಿಯೂ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.
ಈ ಕೃತಿಯಲ್ಲಿ ಲೇಖಕರು ಮುಖ್ಯವಾಗಿ ಮೂರು ಭಾಗಗಳನ್ನು ಇಟ್ಟಿದ್ದಾರೆ. ಮೊದಲನೆಯದು ‘ಸಿಹಿ ಗುಳಿಗೆ’ ಇದರಲ್ಲಿ ವೇಷ ದಿಂದ ಬೋಧನೆ ವರೆಗೆ 31 ಚುಟುಕುಗಳಿವೆ. ಎರಡನೆಯದು ‘ಕಹಿ ಗುಳಿಗೆ’ ಇದರಲ್ಲಿ ಶ್ರಮ ದಿಂದ ರಹಸ್ಯ ದವರೆಗೆ 53 ಚುಟುಕುಗಳಿವೆ. ಮೂರನೆಯದು ‘ಚುಚ್ಚುಮದ್ದು’ ಇದರಲ್ಲಿ ಟೆಂಡರ್ ನಿಂದ ಬೆನ್ನು ಎನ್ನುವ ವರೆಗೆ 48 ಚುಟುಕುಗಳಿವೆ. ಒಟ್ಟು 132 ಚುಟುಕುಗಳ ಕಣಜವಾದ ಈ ಕೃತಿಯು ಮೌಲ್ಯಭರಿತವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನಿವೃತ್ತಿ ಜೀವನ ಃ 1996 ರಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಜಯಚಂದ್ರಗುಪ್ತರವರನ್ನು ಸಮಾಜ ಸುಮ್ಮನೆ ಕೂರಲು ಬಿಡಲಿಲ್ಲ. ನಿವೃತ್ತಿ ಹಂತದಲ್ಲೂ ವೈದ್ಯಕೀಯ ವೃತ್ತಿ ಮಾಡುವಂತೆ ಪ್ರಚೋದಿಸಿತು. ಸದಾ ಕ್ರಿಯಾಶೀಲ ಮನಸ್ಸಿನ ಡಾ||ಗುಪ್ತರವರು ಹಾಸನದ ಸಂಜೀವಿನಿ ಹಾಗೂ ಇತರ ಆಸ್ಪತ್ರೆಗಳಲ್ಲಿ ಸಾಕಷ್ಟು ಕಾಲ ಕಾರ್ಯನಿರ್ವಹಿಸಿ ಕಳೆದ ಐದಾರು ವರ್ಷಗಳಿಂದ ಆರ್.ಸಿ ರಸ್ತೆಯಲ್ಲಿರುವ ಮಿಷನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತದ್ದಾರೆ.
ಗೌರವ, ಪುರಸ್ಕಾರಗಳು ಃ 1996 ರಲ್ಲಿ ಚಿಕ್ಕಮಗಳೂರಿನಲ್ಲಿ ಕಾಯ್ ನಿರ್ವಹಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಲ ಸಂಘವು ಇವರ ಕರ್ತವ್ಯ ನಿಷ್ಠೆ ಪರಿಗಣಿಸಿ ಸನ್ಮಾನಿಸಿ ಗೌರವಿಸಿದೆ.
2001 ರಲ್ಲಿ ಭಾರತೀಯ ವೈದ್ಯ ಶಾಖೆ ಹಾಸನ ಘಟಕವು ಡಾ|| ಗುಪ್ತರವರ ಅನುಪಮ ಸೇವೆಯನ್ನು ಮನಗಂಡು ಸನ್ಮಾನಿಸಿ ಗೌರವಿಸಿದೆ.
2012 ರಲ್ಲಿ ಹಾಸನದಲ್ಲಿ ನಡೆದ ವೈದ್ಯ ತಜ್ಞರ ರಾಜ್ಯ ಸಮ್ಮೇಳನದಲ್ಲಿ ಇವರನ್ನು ಗೌರವಿಸಿ ಪುರಸ್ಕರಿಸಲಾಗಿದೆ.
2014 ರಲ್ಲಿ ಶ್ರೀಭವಾನಿ ಶಂಕರಿ ಚಾರಿಟಬಲ್ ಟ್ರಸ್ಟ್ ಕೊಣನೂರು ಸಂಸ್ಥೆಯು ಡಾ|| ಕೆ.ಕೆ.ಜಯಚಂದ್ರ ಗುಪ್ತ ಅವರ ಜೀವನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ಹೀಗೆ ಡಾ|| ಗುಪ್ತರವರ ವೈದ್ಯಕೀಯ ಹಾಗೂ ಸಾಹಿತ್ಯಿಕ ಬದುಕು ಒಟ್ಟೊಟ್ಟಿಗೆ ಸಾಗುತ್ತಿದೆ. ಇವರ ಸಾಧನೆ ಇನ್ನೂ ಪ್ರಖರವಾಗಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197



ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದ ಮೇರು ಲೇಖಕಿ – ಡಾ|| ವೈ.ಸಿ.ಭಾನುಮತಿ

ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದ ಮೇರು ಲೇಖಕಿ – ಡಾ|| ವೈ.ಸಿ.ಭಾನುಮತಿ
ಕನ್ನಡ ಸಾಹಿತ್ಯದಲ್ಲಿ ಪುರುಷರು ಎಷ್ಟು ಸಾಧನೆ ಮಾಡಿರುವರೋ ಅಷ್ಟೇ ಸಾಧನೆಯನ್ನು ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಮಾಡಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಲೇಖಕಿಯರ ದಂಡೇ ಇದೆಯೆನ್ನಬಹುದು. ಪಾರ್ವತಿ ಕೃ.ನ.ಮೂರ್ತಿ, ಮಂಗಳಾ ಸತ್ಯನ್, ಸುಬ್ಬ ಲಕ್ಷ್ಮಿ, ವಿಜಯಾ ದಬ್ಬೆ, ಬಾನು ಮುಸ್ತಾಕ್ ಮುಂತಾದವರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಸಾಹಿತ್ಯ, ಜಾನಪದ ಸಾಹಿತ್ಯ, ಜನಾಂಗೀಯ ಅಧ್ಯಯನಗಳÀ ಸಂಶೋಧಕಿಯಾಗಿ, ಅಳಿವಿನ ಅಂಚಿನಲ್ಲಿರುವ ಹಲವಾರು ಕೃತಿಗಳನ್ನು ಸಂಪಾದಿಸಿ ಜೀವ ತುಂಬುವ ಕಾಯಕದಲ್ಲಿ ತೊಡಗಿರುವ ಕನ್ನಡ ಸಾಹಿತ್ಯದ ಪ್ರಭುದ್ದ ಲೇಖಕಿ ಡಾ|| ವೈ.ಸಿ.ಭಾನುಮತಿಯವರು.
 ವೈ.ಸಿ.ಭಾನುಮತಿಯವರು ಕ್ರಿ.ಶ. 1953 ಜನವರಿ 14 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದ ವೈ.ಬಿ.ಚನ್ನೇಗೌಡ ಹಾಗೂ ಶ್ರೀಮತಿ ಎಚ್.ಎಸ್.ಜಯಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
ಬೇಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರೌಢ ಶಾಲೆಯಲ್ಲಿ ಒಂದರಿಂದ ಹತ್ತನೆಯ ತರಗತಿವರೆಗೆ ವ್ಯಾಸಾಂಗ ಮಾಡಿದ ಭಾನುಮತಿಯವರು ಹಾಸನದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ನಂತರ ಮೈಸೂರಿನ ಮಹಾರಾಣಿ ಕಲೇಜಿನಲ್ಲಿ ಬಿ.ಎಸ್.ಸಿ ಪದವಿ ಮುಗಿಸಿದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಭಾನುಮತಿಯವರಿಗೆ ಸಾಹಿತ್ಯದ ಬಗ್ಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. ಆ ಸಂದರ್ಭದಲ್ಲಿ ಸ್ನೇಹಿತೆಯೊಬ್ಬಳು ಬರೆದ ಪತ್ರದಿಂದ ಪ್ರಭಾವಿತರಾದ ಇವರು ಕನ್ನಡ ಸಾಹಿತ್ಯದ ಕಡೆಗೆ ಒಲವು ತೋರಿಸಿದರು. ಈ ಕಾಲ ಘಟ್ಟವೇ ಭಾನುಮತಿಯವರನ್ನು ಕನ್ನಡ ಸಾಹಿತ್ಯದತ್ತ ಕರೆದುಕೊಂಡು ಬಂದಿತೆನ್ನಬಹುದು. ತದನಂತರ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಮಂಡಿಸಿದ ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಮಹಾಪ್ರಬಂಧಕ್ಕೆ ವಿಶ್ವ ವಿದ್ಯಾಲಯವು ಆ.ನೆ.ಉಪಾದ್ಯೆ ಚಿನ್ನದ ಪದಕದೊಂದಿಗೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಡಾ|| ವೈ.ಸಿ.ಭಾನುಮತಿಯವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗ್ರಂಥ ಸಂಪಾದನಾ ವಿಭಾಗದ ಪ್ರಥಮ ದರ್ಜೆಯ ಸಂಶೋಧನಾ ಸಹಾಯಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಇದೇ ಅವರಿಗೆ ವರದಾನವಾಯಿತೆನ್ನಬಹುದು. ಮೊದಲೇ ಸಾಹಿತ್ಯಿದ ಬಗ್ಗೆ ಆಸಕ್ತಿಯಿದ್ದ ಭಾನುಮತಿಯವರು ಇಲ್ಲಿ ಗ್ರಂಥ ಅಧ್ಯಯನದಲ್ಲಿ ನಿರತರಾಗಿ ಪ್ರಾಚೀನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ಮಾಡಿದರು.
ಡಾ|| ವೈ.ಸಿ.ಭಾನುಮತಿಯವರು ಮೂಲತಃ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದರೂ ಆಯ್ಕೆಮಾಡಿಕೊಂಡದ್ದು ಸಂಶೋಧನಾ ಕ್ಷೇತ್ರವನ್ನು. ಅಳಿವಿನ ಅಂಚಿನಲ್ಲಿದ್ದ ಹಲವಾರು ಹಳಗನ್ನಡ ಕೃತಿಗಳಿಗೆ ಜೀವ ತುಂಬಿ ಹೊಸ ರೂಪದಲ್ಲಿ ಕನ್ನಡ ಸಾಹಿತ್ಯಾಸಕ್ತರಿಗೆ ನೀಡಿದ್ದಾರೆ.
ಜಾನಪದ ಕಾವ್ಯ ಭಾಷೆಯನ್ನು ಸಮರ್ಥವಾಗಿ ರೂಢಿಸಿಕೊಂಡು ವಸಾಹತುಶಾಹಿ ಅನುಭವದಿಂದಾಗಿ ಕಳೆದು ಹೋಗಿರುವ ದೇಸೀ ವ್ಯಕ್ತಿತ್ವದ ಮೂಲಗಳ ಹುಡುಕಾಟದಲ್ಲಿ ತೊಡಗಿರುವ ಡಾ||ವೈ.ಸಿ.ಭಾನುಮತಿಯವರು ಇಬ್ಬೀಡಿನ ಜನಪದ ಕಥೆಗಳು, ಜಾನಪದ ಭಿತ್ತಿ, ಚಂದ್ರಹಾಸನ ಕಥೆ, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ಮಕ್ಕಳ ಹಾಡುಗಳು, ಜಾನಪದ ಅಡುಗೆ ಮುಂತಾದ ಹನ್ನೊಂದು ಕೃತಿಗಳನ್ನು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ.
ನವ್ಯ ಧೋರಣೆ ಮತ್ತು ಅಭಿವ್ಯಕ್ತಿ ತಂತ್ರವನ್ನು ಜನಪದ ಭಾಷೆಯಾಗಿ ಭಾನುಮತಿಯವರು ಬಳಸಿದ ರೀತಿ ಅದ್ವತೀಯವಾದುದು ಎಂದರೆ ಅತಿಶಯೋಕ್ತಿಯಾಗಲಾರದು. ತರೀಕೆರೆ ಪಾಳೇಗಾರರ ವಿಚಾರವಾಗಿ ತಿಳಿಸುವ ಐತಿಹಾಸಿಕ ವಸತುಗಳನ್ನೊಳಗೊಂಡ ಕೃಷ್ಣಶರ್ಮರವರು ವಿರಚಿತ ‘ಸರಜಾಹನುಮೇಂದ್ರ ಯಶೋವಿಲಾಸಂ’ ;  ವೀರಶೈವ ಕವಿಗಳಲ್ಲಿ ಪ್ರಮುಖನಾಗಿದ್ದ ಕುಮಾರ ಚೆನ್ನಬಸವನು ನವೀನ ಹಾಗೂ ಪುರಾಣ ಕಾಲದ ಕುರಿತು ವಾರ್ಧಕ ಷಟ್ಪದಿಯಲ್ಲಿ ಬರೆದ ‘ಪುರಾತನರ ಚರಿತೆ’ ; ಹರದನಹಳ್ಳಿಯ ನಂಜಣಾಚಾರ್ಯ ಕವಿಯು ವಾರ್ಧಕ ಷಟ್ಪದಿಯಲ್ಲಿ ಬರೆದ ‘ಏಕೋ ರಾಮೇಶ್ವರ ಪುರಾಣ’ ; ಜೈನ ಸಾಹಿತ್ಯದ ಕವಿ ಶೃತಕೀರ್ತಿಯು ಸ್ತ್ರೀ ಕುರಿತಾಗಿ ಬರೆದ ಮೊದಲ ಜೈನ ಕೃತಿ ‘ವಿಜಯ ಕುಮಾರಿ ಚರಿತೆ’ ; ಜೈನ ಕವಿ ಆದಿದೇವನು ಸಾಂಗತ್ಯದಲ್ಲಿ ಬರೆದ ‘ಸುಕುಮಾರ ಚರಿತೆ’ ; ಕಳ್ಳತನ ಮಾಡಿಯೇ ಜೀವನ ಸಾಗಿಸುತಿದ್ದ ಚಿಕ್ಕಣ್ಣ ವೈಚಾರಿಕ ಹಾಗೂ ಧಾರ್ಮಿಕ ಹರಿಕಾರ ಜಗಜ್ಯೋತಿ ಬಸವಣ್ಣನವರ ಪ್ರಭಾವದಿಂದ ಕಳ್ಳತನ ತೊರೆದು ಪರಿಶುದ್ದ ಜೀವನ ಸಾಗಿಸಿದ ಪ್ರಸಂಗವನ್ನು ಕುರಿತು ಕುಮಾರಚೆನ್ನಬಸವನು ಬರೆದ ‘ನಿಜಚಿಕ್ಕಲಿಂಗಯ್ಯ ಸಾಂಗತ್ಯ’ ; ಮುಖಬೋಳು ಸಿದ್ದರಾಮ ಬರೆದ ‘ಷಟ್ಸ್ಥಲ ತಿಲಕ’ ; ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನನ್ನು ಕುರಿತು ಚಿಕ್ಕ ಪದ್ದಣ್ಣಶೆಟ್ಟಿ ಬರೆದ ‘ಅನಂತನಾಥ ಚರಿತೆ’ ; ಮಡಿವಾಳೇಶ್ವರನ ಲಘು ಕೃತಿಗಳು ; ವಿಕ್ರಮ ಸಿಂಹಾಸನದ ಮೆಟ್ಟಿಲುಗಳಲ್ಲಿದ್ದ ಮೂವತ್ತೆರಡು ಗೊಂಬೆಗಳು ಹೇಳುವ ‘ಬತ್ತೀಸ ಪುತ್ಥಳಿ ಕಥೆ’ ; ಕನ್ನಡದ ಶ್ರಾವಕಾಚಾರ ಗ್ರಂಥಗಳು ; ಮಡಿವಾಳೇಶ್ವರ ಕಾವ್ಯ ; ಬಸವ ಮಹತ್ವದ ಸಾಂಗತ್ಯ ; ಸೌಂದರ್ಯ ಕಾವ್ಯ, ಅರಸರ ಚರಿತ್ರೆಗಳು ಹೀಗೆ ಮೂವತ್ತಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಸಂಪಾದಿಸಿ ಜೀವ ತುಂಬಿದ್ದಾರೆ.
ಗ್ರಂಥ ಸಂಪಾದನೆಯ ಕೆಲವು ಅಧ್ಯಯನಗಳು, ಗ್ರಂಥ ಸಂಪಾದನೆಯ ಎಳೆಗಳು, ಆಲಿ ನುಂಗಿದ ನೋಟ, ಸಮಾಗತ ಮುಂತಾದ ಅತ್ಯಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ‘ವಿಕ್ರಮಾದಿತ್ಯನ ಸಿಂಹಾಸನ’ ಎಂಬ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಯನ್ನು ರಚಿಸಿದ್ದಾರೆ.
ಹೀಗೆ ಡಾ|| ವೈ.ಸಿ.ಭಾನುಮತಿಯವರು ಸಂಶೋಧನೆ, ಸಂಪಾದನೆ ಹಾಗೂ ಕೃತಿ ರಚನೆಗಳಲ್ಲಿ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದ ಜಾನಪದ ವಿಶ್ವಕೋಶದ ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಮತ್ತು ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಹಸ್ತ ಪ್ರತಿ ವರ್ಣನಾತ್ಮಕ ಸೂಚಿಯ ಐದು ಸಂಪುಟಗಳಲ್ಲಿ ಕೆಲಸ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೌಲ್ಯಭರಿತ ಕಾಯಕ ಮಾಡುವುದರ ಮೂಲಕ ತವರು ಜಿಲ್ಲೆಯಾದ ಹಾಸನದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೇವಲ ಕಥೆ, ಕಾದಂಬರಿ, ಕಾವ್ಯ, ನಾಟಕ ಮಾತ್ರ ಸಾಹಿತ್ಯಿಕ ಕೆಲಸವಲ್ಲ . ಅದರಾಚೆಗೂ ಚಾಚಿದ ಸಂಶೋಧನೆ, ಸಂಪಾದನೆ, ಜಾನಪದ ಅದ್ಯಯನ ಮುಂತಾದ ಅಪರೂಪದ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಹುದೆಂದು ವೈ.ಸಿ.ಭಾನುಮತಿಯವರು ಸಾಧಿಸಿ ತೋರಿಸಿದ್ದಾರೆ.
1984 ರಲ್ಲಿ ‘ಸಹ್ಯಾದ್ರಿ ಖಂಡ’ ಹಾಗೂ 1989 ರಲ್ಲಿ ‘ಬತ್ತೀಸ ಪುತ್ಥಳಿ ಕಥೆ’ ಸಂಪಾದನೆಗಾಗಿ ಆಯಾ ವರ್ಷದ ಶ್ರೇಷ್ಠ ಗ್ರಂಥಗಳೆಂದು ಪರಿಗಣಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿವೆ. ಇವರ ಸುಪ್ರಸಿದ್ದ ಸಂಶೋಧನಾ ಗ್ರಂಥವಾದ ‘ಮಲೆನಾಡು ಶೈವ ಒಕ್ಕಲಿಗರು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’ , ಹಾಗೂ ತಿ.ನಂ.ಶ್ರೀ ಸಂಶೋಧನಾ ಪ್ರಶಸ್ತಿ ದೊರೆತಿದೆ. ಗ್ರಂಥ ಸಂಪಾದನೆಯ ಕೆಲವು ಅದ್ಯಾಯನ ಮತ್ತು ಬತ್ತೀಸ ಪುತ್ಥಳಿ ಕೃತಿಗಳಿಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ ಹಾಗೂ ತಿ.ನಂ.ಶ್ರೀ ಸಂಶೋಧನಾ ಪ್ರಶಸ್ತಿಗಳು ದೊರೆತಿವೆ. ಇವರ ‘ಪುಟ್ಟ ಮಲ್ಲಿಗೆ ಹಿಡಿತುಂಬ’ ಕೃತಿಗೆ ಕನ್ನಡ ಸಾಹಿತ್ಯದ ದತ್ತಿ ಬಹುಮಾನ ದೊರೆತಿದೆ. ಇವರ ಇನ್ನೊಂದು ಪ್ರಮುಖ ಕೃತಿಯಾದ ‘ಇಬ್ಬೀಡಿನ ಜನಪದ ಕಥೆಗಳು’ ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೆ ಕರ್ನಾಟಕ ವಿದ್ಯಾವರ್ಧಕ ಪ್ರಶಸ್ತಿ, ಫ.ಗು.ಹಳಕಟ್ಟಿ ಸಂಶೋಧನಾ ಪ್ರಶಸ್ತಿ, ಹ.ಕ.ರಾಜೇಗೌಡ ಸಂಪಾದನಾ ಪ್ರಶಸ್ತಿ, ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿಗಳು ಸೇರಿದಂತೆ ನೂರಾರು ಸಂಘ, ಸಂಸ್ಥೆಗಳು ಭಾನುಮತಿಯವರನ್ನು ಸನ್ಮಾನಿಸಿ ಗೌರವಿಸಿವೆ.
ತವರು ತಾಲ್ಲೂಕಿನ ಹಲ್ಮಿಡಿಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಇವರ ಸಾಧನೆಗೆ ಸಂದಿರುವುದು ಶ್ಲಾಘನೀಯವಾದುದು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕನ್ನಡ ಮತ್ತು ಉರ್ದು ಸಾಹಿತ್ಯದ ಸೇತುಬಂಧ - ಪ್ರೊ.ಸೈಯದ್ ಶಹಬುದ್ದೀನ್

ಕನ್ನಡ ಮತ್ತು ಉರ್ದು ಸಾಹಿತ್ಯದ ಸೇತುಬಂಧ - ಪ್ರೊ.ಸೈಯದ್ ಶಹಬುದ್ದೀನ್
ಸಾಹಿತ್ಯದ ಬೆಳವಣಿಗೆಯಲ್ಲಿ ರಚನಾತ್ಮ
ಕತೆ ಎಷ್ಟು ಮುಖ್ಯವೋ ಭಾಷಾನುವಾದವೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಕನ್ನಡದಿಂದ ಆಂಗ್ಲಭಾಷೆಗೆ, ಆಂಗ್ಲಭಾಷೆಯಿಂದ ಇತರೆ ಭಾಷೆಗೆ ಭಾಷಾಂತರವಾಗುದು ಅಧಿಕ, ಆದರೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳು ಉರ್ದು ಅಥವಾ ಹಿಂದಿ ಭಾಷೆಗೆ ಭಾಷಾಂತರವಾಗಿರುವುದು ವಿರಳ. ಈ ನಿಟಿನಲ್ಲಿ ಪ್ರೊ.ಸೈಯದ್ ಶಹಬುದ್ದೀನ್ ಅವರು ಕನ್ನಡದ ಶ್ರೇಷ್ಠ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಿ ಮುಸ್ಲಿಂ ಓದುಗರನ್ನೂ ಕನ್ನಡದ ಕೃತಿಗಳನ್ನು ಓದುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಶ್ರೀಯುತ ಸೈಹದ್ ಶಹಬುದ್ದೀನ್ ಅವರು 1951 ಏಪ್ರಿಲ್ 16 ರಂದು ಹಾಸನ ಜಿಲ್ಲೆಯ ಆಲೂರು ಪಟ್ಟಣದ ಶ್ರೀ ಸೈಹದ್ ಮಹಮೂದ್ ಹಾಗೂ ಶ್ರೀಮತಿಸೈದಾನಬೀ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದರು.

 ಇವರ ತಂದೆ 1956 ರಲ್ಲಿ ಆಲೂರು ಮುನಿಸಿಪಾಲಿಟಿಯಉಪಾಧ್ಯಕ್ಷರಾಗಿದ್ದರು. ಶ್ರೀಯುತ ಶಹಬುದ್ದೀನ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಆಲೂರಿನಲ್ಲೇ ಮುಗಿಸಿದರು. ಮುಂದಿನ ವಿದ್ಯಾಭ್ಯಾಸವನ್ನು ಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ನಂತರ 1979 ರಲ್ಲಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ತರುವಾಯ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಉರ್ದು ಉಪನ್ಯಾಸಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು.
ಆದರೆ ಇವರು ಶಕ್ಷಣದ ಯಾವ ಹಂತದಲ್ಲಿಯೂ ಕನ್ನಡವನ್ನು ಕಲಿತವರಲ್ಲ ! ಏಕೆಂದರೆ ಅವರ ಮಾತೃ ಭಾಷೆ ಉರ್ದು. ಕನ್ನಡದ ಕಟ್ಟಾಳು ಡಾ|| ಹಾ. ಮಾ. ನಾಯಕ ಮುಂತಾದವರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತರಾಗಿ ಉಪನ್ಯಾಸಕರಾದ ಮೇಲೆ ಕನ್ನಡ ವರ್ಣಮಾಲೆಯಿಂದ ಅಕ್ಷರ ಕಲಿತು ಇಂದು ಯಾವ ಕನ್ನಡ ಸಾಹಿತಿಗಿಂತಲೂ ಕಡಿಮೆ ಇಲ್ಲದಂತೆ ಪ್ರಬುದ್ಧರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಹುಟ್ಟಿನಿಂದ ಕನ್ನಡ ಮಾತನಾಡುತ್ತಿದ್ದರಾದರೂ ಓದಲು, ಬರೆಯಲು ಕಲಿತದ್ದು ಮಾತ್ರ ಹರೆಯದಲ್ಲಿ !
ಮೊದಮೊದಲು ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಾಂಗರ್, ಗೊರೂರು ರಾಮಸ್ವಾಮಿ ಅಯ್ಯಾಂಗರ್, ಎಸ್.ಎಲ್.ಭೈರಪ್ಪ, ಅ.ನ.ಕೃ, ತ.ರಾ.ಸು ಮುಂತಾದ ಕನ್ನಡದ ಶ್ರೇಷ್ಠ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಅಧ್ಯಯನ ಮಾಡಿದ ಇವರು ನಂತರ ಇಂತಹ ಅಮೂಲ್ಯ ಸಾಹಿತ್ಯವನ್ನು ಏಕೆ ಉರ್ದು ಭಾಷೆಗೆ ಭಾಷಾಂತರ ಮಾಡಿ ಉರ್ದು ಓದುಗರಿಗೂ ಈ ಸವಿಪಾಕವನ್ನು ಉಣಬಡಿಸಬಾರದು ಎಂಬ ಆಲೋಚನೆ ಮನೆ ಮಾಡಿತು. ಅದರ ಫಲವಾಗಿ ಡಾ|| ಎಸ್.ಎಲ್.ಭೈರಪ್ಪನವರ ‘ವಂಶ ವೃಕ್ಷ’ ಕಾದಂಬರಿಯನ್ನು ‘ಶಜರ-ಎ-ನಸಬ್’ ಎಂಬ ಹೆಸರಿನಲ್ಲಿ ಉರ್ದು ಭಾಷೆಗೆ ಭಾಷಾಂತರಿಸಿದರು. ಈ ಕೃತಿಯು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಉರ್ದು ವಿಭಾಗದ ಪಠ್ಯವಾಗಯಿತು. ಬಹುಶಃ ಈ ಕೃತಿಯು ಶಹಬುದ್ದೀನ್ ಅವರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿತೆನ್ನಬಹುದು.
ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ವಿಚಾರಗಳಿಗೆ ಮಾರು ಹೋಗಿದ್ದ ಇವರು ಹಲವಾರು ಬಾರಿ ಕುವೆಂಪು ಅವರನ್ನು ಸಂದರ್ಶಿಸಿ, ಸಾಹಿತ್ಯಿಕವಾಗಿ ಚರ್ಚಿಸಿ ವೈಶಾಲ್ಯತೆಯನ್ನು ಪಡೆದವರು. ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಬರವಣಿಗೆಯ ಮೂಲಕ ಹಾಗೂ ಭಾಷಣಗಳ ಮೂಲಕ ಪಲ್ಲವಿಸಿದ್ದಾರೆ. ಮುಂದೆ ‘ಶಾಯಿರ್-ಎ-ಅಜಮ್ ಕುವೆಂಪು’ ಎಂಬ ಕುವೆಂಪುರವರ ಜೀವನ ಚರಿತ್ರೆಯನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಆ ಮೂಲಕ ಎಲ್ಲಾ ಇಸ್ಲಾಂ ಬಂಧುಗಳಿಗೆ ಅವರ ಮಾತೃಭಾಷೆಯಲ್ಲಿ ಕುವೆಂಪು ಬಗ್ಗೆ ಅರಿಯಲು ದಾರಿಯಾಗಿದ್ದಾರೆ.
ಅಲ್ಲದೆ ಶರಣರ ಮುನ್ನೂರು ವಚನಗಳನ್ನು ಕನ್ನಡದಿಂದ ಉರ್ದುವಿಗೆ ಅನುವಾದಿಸಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಂಸ್ಕøತಿಕವಾಗಿ ವಿಶ್ವಮಾನವ ಸಂದೇಶ ಬೀರಿ ಆ ಮೂಲಕ ಸಮಸಮಾಜದ ಕನಸು ಕಂಡ ಅಮೂಲ್ಯ ಸಾಹಿತ್ಯವನ್ನು ಅನ್ಯ ಭಾಷಿಗರಿಗೂ ಉಣಬಡಿಸಿದ ಕೀರ್ತಿ ಶಹಬುದ್ದೀನ್ ಅವರದು ಎಂದರೆ ಅತಿಶಯೋಕ್ತಿಯಾಗಲಾರದು.
‘ಇಸ್ಲಾಂ ಅಂಡ್ ಸೊಸೈಟಿ’ ಎಂಬ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಉರ್ದುವಿನ ನೂರು ವಚನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅಲ್ಲದೆ ಕುವೆಂಪುರವರ ‘ನನ್ನ ದೇವರು ಮತ್ತು ಇತರ ಕಥೆಗಳು’ ಕೃತಿಯನ್ನು ಉರ್ದುವಿಗೆ ಅನುವಾದಿಸಿದ್ದಾರೆ. ಹೀಗೆ ಕನ್ನಡದಿಂದ ಉರ್ದುವಿಗೆ, ಉರ್ದುವಿನಿಂದ ಕನ್ನಡಕ್ಕೆ, ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುದರ ಮೂಲಕ ಬಹುಭಾಷಾ ಪಂಡಿತರಾಗಿಯೂ ನಮ್ಮ ಮುಂದೆ ನಿಂತಿದ್ದಾರೆ.
ಆಗಾಗ ಕನ್ನಡದ ಶ್ರೇಷ್ಠ ಲೇಖಕರ ಕಥೆಗಳನ್ನು ಓದಿದ ಇವರು ಅಷ್ಟಕ್ಕೆ ಸುಮ್ಮನಾಗದೆ ಅವುಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ಅವುಗಳಲ್ಲಿ ಬಿ.ಟಿ.ಲಲಿತ ನಾಯಕ್, ಅಬ್ದುಲ್ ಮಜೀದ್ ಖಾನ್, ಪೂರ್ಣಚಂದ್ರ ತೇಜಸ್ವಿ ಮತ್ತು ಬಾನುಮುಸ್ತಾಕ್ ಕಥೆಗಳು ಪ್ರಮುಖವಾಗಿವೆ.
ಉರ್ದು ಹಾಗೂ ಕನ್ನಡ ಭಾಷಾಭಿಮಾನಿಗಳಿಗಾಗಿ ಈ ಎರಡೂ ಭಾಷೆಗೂ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಉರ್ದು ಹಾಗೂ ಕನ್ನಡ ಗಾದೆ ಮತ್ತು ನುಡಿಗಟ್ಟುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಹೆಸರಾಂತ ವೈಚಾರಿಕ ಹಾಗೂ ಪ್ರಗತಿಪರ ಚಿಂತಕರಾದ ಜ.ಹೊ.ನಾ ರವರ ‘ಅದಮ್ಯ’  ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಡಾ|| ರಾಜೇಗೌಡ ಹೊಸಳ್ಳಿಯವರ ‘ಮಹಾರಾಯನ ದುರ್ಗ’ ಎಂಬ ಆಲೂರು ತಾಲ್ಲೂಕಿನ ಖ್ಯಾತ ಜಾನಪದ ಕೃತಿಯ ಕಥೆಯನ್ನಾಧರಿಸಿದ ನಾಟಕವನ್ನು ರಚಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಹೊರತರುವ ‘ಅಧ್ಯಯನ’ ಸಂಚಿಕೆಯಲ್ಲಿ ‘ಅನುವಾದ ನನ್ನ ಅನುಭವ’ ಮತ್ತು ‘ಉರ್ದುವಿನಲ್ಲಿ ಕನ್ನಡ ಸಾಹಿತ್ಯ’ ಎಂಬ ಎರಡು ಅಮೂಲ್ಯ ಲೇಖನಗಳು ಪ್ರಕಟವಾಗಿವೆ.
ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ಆಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಲ್ಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಪ್ರೊ.ಸೈಯದ್ ಶಹಾಬುದ್ದೀನ್ ಅವರಿಗೆ ಗೌರವ ಸಲ್ಲಿಸಿತು. ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿದ್ದರೂ ಪೂರ್ನ ಸಮಯವನ್ನು ಸಾಹಿತ್ಯಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಹಾಸನದ ಷರೀಫ್ ಕಾಲೋನಿಯಲ್ಲಿ ನೆಲೆಯಾಗಿರುವ ಇವರು ಸಾಹಿತ್ಯಿಕವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಸರಳ ನಡೆ-ನುಡಿಯ ಇವರು ಸದಾ ಹಸನ್ಮುಖಿ. ಸದಾ ಸಾಮಾಜಿಕ ಭಾಂಧವ್ಯ ಚೆನ್ನಾಗಿರಬೇಕು, ಎಲ್ಲರಲ್ಲೂ ವಿಶ್ವ ಮಾನವೀಯ ಮೌಲ್ಯಗಳು ಮನೆ ಮಾಡಬೇಕು ಎಂಬ ಮನೋತುಡಿತವನ್ನು ಹೊಂದಿದ ಶಹಾಬುದ್ದೀನ್ ಸಮಾಜಕ್ಕೆ ಒಡ್ಡಿಕೊಂಡ ಧೀಮಂತ ಚಿಂತಕರೆಂದರೆ ಅತಿಶಯೋಕ್ತಿಯಾಗಲಾರದು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕನ್ನಡದ ಶ್ರೇಷ್ಠ ಲೇಖಕಿ – ವಿಜಯಾದಬ್ಬೆ

ಕನ್ನಡದ ಶ್ರೇಷ್ಠ ಲೇಖಕಿ – ವಿಜಯಾದಬ್ಬೆ
ಕಟ್ಟುಪಾಡು, ಸಂಪ್ರದಾಯ, ಜಾತಿ, ಸಂಬಂಧ ಎಲ್ಲದಕ್ಕೂ ಅತೀತವಾಗಿ ಒಬ್ಬ ಹೆಣ್ಣು ಕುಟುಂಬ ಮತ್ತು ಸಮಾಜಿಕ ಜಂಜಡಗಳನ್ನು ತೂರಿ ಆಚೆ ಬಂದು ತನ್ನದೇ ನಿಲುವು ತಾಳಿ ಬದ್ಧತೆ ಮೆರೆಯುವುದು ಸಾಮಾನ್ಯದ ವಿಷಯವಲ್ಲ. ಅವಳ ತ್ಯಾಗ, ಬಲಿದಾನ, ಚಾರಿತ್ರ್ಯ, ಸಹನೆಗಳು ಸದಾ ಮನುಕುಲಕ್ಕೆ ಸ್ಫೂರ್ತಿಯಾದುದು. ಕಲೆ, ಸಾಹಿತ್ಯ, ಸಂಸ್ಕøತಿಗಳಲ್ಲಿ ಹುಡುಕ ಹೊರಟ ಅವಳ ಅಸ್ಮಿತೆಯ ಹೆಜ್ಜೆಗಳು ಅವಿಸ್ಮರೆಣೀಯ.
ಅಂತಹ ಒಂದು ದಿಟ್ಟ ಮನಸ್ಸಿನ ಕೆಲವೆ ಕೆಲವು ಲೇಖಕಿಯರಲ್ಲಿ ನಮ್ಮ ಹಾಸನ ಜಿಲ್ಲೆಯ ವಿಜಯದಬ್ಬೆಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು. ನೇರ ನಡೆ-ನುಡಿಯ ದಿಟ್ಟ ನಿರ್ಧಾರದ ವ್ಯಕ್ತಿತ್ವದ ಮನೋಧರ್ಮಿಯಾದ ವಿಜಯಾದಬ್ಬೆಯವರು ಎಪ್ಪತ್ತು-ಎಂಬತ್ತರ ದಶಕದಲ್ಲಿ ವೈಚಾರಿಕ ಹಾಗೂ ಸ್ತ್ರೀ ಸಂವೇದಿ ಲೇಖನಗಳ ಮೂಲಕ ಇಡಿ ಕನ್ನಡ ಸಾರಸ್ವತ ಲೋಕವನ್ನು ಹಾಸನ ಜಿಲ್ಲೆಯತ್ತ ಸೆಳೆದವರು. ಕನ್ನಡದ ಮೊದಲ ಸ್ತ್ರೀವಾದಿ ಲೇಖಕಿ ಎಂಬ ಹೆಗ್ಗಳಿಕೆಯೂ ಇವರದು.
ವಿಜಯ ದಬ್ಬೆಯವರು ಕ್ರಿ.ಶ.1951 ಜೂನ್ 1 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದಬ್ಬೆ ಗ್ರಾಮದಲ್ಲಿ ಜನಿಸಿದರು. ನಡೆ-ನುಡಿಯಲ್ಲಿ ತೀವ್ರತೆಯಿರುವಂತೆ ಅವರ ಬರವಣಿಗೆಯಲ್ಲಿಯೂ ಹರಿತವಾದ ವಿಚಾರ ಲಹರಿಗಳಿವೆ.
ಕಾವ್ಯ, ಪ್ರವಾಸ ಕಥನ, ಸಂಶೋಧನೆ, ವಿಮರ್ಶಾ ಸಾಹಿತ್ಯ, ಸಂಪಾದನೆ, ಅನುವಾದ ಹೀಗೆ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಛಾಪು ಮೂಡಿಸಿದ ಕೀರ್ತಿ ವಿಜಯಾದಬ್ಬೆಯವರದು. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಇವರು ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿಜಯ ದಬ್ಬೆಯವರನ್ನು ವಿಧಿಯ ಆಟವೆಂಬಂತೆ ಇನ್ನೇನು ಸಾವು ನುಂಗಿಹಾಕಿತು ಅನ್ನುವಷ್ಟರಲ್ಲಿ ದಿಟ್ಟ ಹೆದೆಗಾರಿಕೆಯಿಂದ ಸಾವಿಗೆ ಉತ್ತರಕೊಟ್ಟು ಸಮಾಜಕ್ಕೆ ಮಾದರಿಯಾದರು. ಅವರ ಆತ್ಮ ವಿಶ್ವಾಸ, ಅಚಲ ನಂಬಿಕೆಗಳೇ ಅವರನ್ನು ಪುನಃ ನಮ್ಮೆದುರಿಗೆ ನಿಲ್ಲಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂತಹ ಸದೃಢ ಮನಸ್ಸಿನ ಲೇಖಕಿ ವಿಜಯ ದಬ್ಬೆಯವರು.
ಸಾಹಿತ್ಯಿಕ ಕೊಡುಗೆ :
‘ಇರುತ್ತವೆ’ (1975), ‘ನೀರು ಲೋಹದ ಚಿಂತೆ’ (1985), ‘ತಿರುಗಿ ನಿಂತ ಪ್ರಶ್ನೆ’ (1995), ‘ಇತಿಗೀತಿಕೆ’ ಮುಂತಾದ ಕವನ ಸಂಕಲನಗಳು; ‘ಉರಿಯ ಚಿಗುರು ಉತ್ಕಲೆಯಲ್ಲಿ’ - ಪ್ರವಾಸ ಕಥನ ; ‘ನಯಸೇನ’, ‘ನಾಗಚಂದ್ರ ಒಂದು ಅಧ್ಯಯನ’, ‘ಹಿತೈಷಿಯ ಹೆಜ್ಜೆಗಳು’, ‘ಸಾರ ಸರಸ್ವತಿ’, ‘ಶ್ಯಾಮಲಾ ಸಂಚಯ’ ಮುಂತಾದ ಸಂಶೋಧನಾ ಕೃತಿಗಳು; ‘ಸಂಪ್ರತಿ’, ‘ಅನುಪಮಾ ನಿರಂಜನ’, ‘ಮಹಿಳೆ, ಸಾಹಿತ್ಯ, ಸಮಾಜ’, ‘ನಾರಿ ದಾರಿ ದಿಗಂತ’, ‘ಮಹಿಳೆ ಮತ್ತು ಮಾನವತೆ’ ಮುಂತಾದ ವಿಮರ್ಶಾ ಕೃತಿಗಳು; ‘ಮೇರಿ ಮೆಕ್ಲಿಯಾದ್ ಬೆಥೂನೆ’, ‘ವಿಮೋಚನೆಯೆಡೆಗೆ’, ‘ಗುರುಜಾಡ’ ಮುಂತಾದ ಅನುವಾದ ಕೃತಿಗಳು. ಹೀಗೆ ವಿಜಯ ದಬ್ಬೆಯವರು ತಮ್ಮ ದಿಟ್ಟ ಬರವಣಿಗೆಯ ಮೂಲಕ ನಾಡಿನ ಸಾಕ್ಷಿ ಪ್ರಜ್ಞೆಯನ್ನು ಕಲಕಿ ಒಂದು ರೂಪು ನೀಡಿದವರು. ಇವರೊಬ್ಬ ಮಾನವೀಯ ಚಿಂತನೆಗಳ ಪ್ರಗತಿದಾಯಕ ಆಶಾ ಲೇಖಕಿ. ಕಂದಾಚಾರ, ಮೌಢ್ಯಗಳ ವಿರುದ್ದ ಹೋರಾಡುತ್ತಲೇ ಬೆಳೆದವರು.
ಇವರ ಅತ್ಯುಪಯುಕ್ತ ಸಾಹಿತ್ಯಿಕ ಕಾಯಕಕ್ಕಾಗಿ 1979 ರಲ್ಲಿ‘ಉದಯೋನ್ಮುಖ ವರ್ಧಮಾನ ಪ್ರಶಸ್ತಿ’, ಧಾರವಾಡದ ಕರ್ನಾಟಕ ವಿದ್ಯಾ ವರ್ಧಕ ಸಂಘದ 1996 ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿ ಪ್ರಶಸ್ತಿ, 2008 ರಲ್ಲಿ ಕರ್ನಾಟಕ ಸರ್ಕಾರದ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, 2008 ರಲ್ಲಿ ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 2012 ರಲ್ಲಿ ‘ಡಾ|| ಎಲ್.ಬಸವರಾಜು ಪ್ರಶಸ್ತಿ’ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು ಸಂದಿವೆ.
ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197

ಬಹುಮುಖ ಪ್ರತಿಭಾ ಸಾಧಕಿ – ಎಂ.ಆರ್.ಕಮಲ

ಬಹುಮುಖ ಪ್ರತಿಭಾ ಸಾಧಕಿ – ಎಂ.ಆರ್.ಕಮಲ
ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಹಾಸನ ಜಿಲ್ಲೆ ತನ್ನದೆಯಾದ ಅಗಾಧ ಕೊಡುಗೆ ನೀಡುತ್ತಾ ಬಂದಿದೆ. ಕಾವ್ಯ, ಕಥೆ, ಕಾದಂಬರಿ, ನಾಟಕ, ಅನುವಾದ, ಜಾನಪದ, ಪ್ರಬಂಧ ಹೀಗೆ ನಾನಾ ಪ್ರಕಾರಳಲ್ಲಿ ದುಡುದವರು ಸಾಕಷ್ಟು ಜನ ಇಲ್ಲಿದ್ದಾರೆ. ಇಲ್ಲಿ ಪುರುಷರೆಷ್ಟು ಸಾಧಿಸಿದ್ದಾರೋ ಅಷ್ಟೇ ಮಹಿಳಾ ಸಾಹಿತಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಪಾರ್ವತಿ ಕೃ.ನ.ಮೂರ್ತಿ, ಬಿ.ಕೆ.ಸುಬ್ಬಲಕ್ಷ್ಮಿ, ಮಂಗಳಾ ಸತ್ಯನ್, ವಿಜಯಾ ದಬ್ಬೆ, ಬಾನು ಮುಸ್ತಾಕ್, ವೈ.ಸಿ.ಭಾನುಮತಿ ಮುಂತಾದವರು ಕನ್ನಡ ಸಾಹಿತ್ಯದಲ್ಲಿ ಅವರದೇ ಆದ ಛಾಪು ಮೂಡಿಸಿದವರು.ಇವರ ಸಾಲಿಗೆ ಸೇರುವ ಇನ್ನೋರ್ವ ಲೇಖಕಿಯೆಂದರೆ ಎಂ.ಆರ್.ಕಮಲರವರು.
ಇವರು ಕ್ರಿ.ಶ.1959 ಮಾರ್ಚಿ 27 ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿ ಕುರ್ಕೆಯಲ್ಲಿ ಶ್ಯಾನುಭೋಗ ಮನೆತನದ ಶ್ರೀ ಎಂ.ಎಚ್.ರಾಮಸ್ವಾಮಿ ಹಾಗೂ ಶ್ರೀಮತಿ ವಿಶಾಲಾಕ್ಷಿ ದಂಪತಿಗಳ ಪುತ್ರಿಯಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಮೇಟಿ ಕುರ್ಕೆಯಲ್ಲೇ ಮುಗಿಸಿದ ಕಮಲರವರು ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲೇ ಸ್ನಾತಕೋತ್ತರ ಹಾಗೂ ಎಲ್.ಎಲ್.ಬಿ ಪದವಿ ಪಡೆದರು.
ಪ್ರಾಥಮಿಕ ಹಂತದಿಂದಲೂ ಸಹಪಠ್ಯ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಸಂಗೀತ, ನೃತ್ಯ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತೊಟಗಿಸಿಕೊಂಡು ಹಂತ ಹಂತವಾಗಿ ಬೆಳೆದು ರಾಜ್ಯಾದ್ಯಂತ ಹೆಸರಾದರು. ಭರತ ನಾಟ್ಯ ಪ್ರವೀಣೆ ಎಂದ ಬಿಂಬಿತವಾದ ಇವರು ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆನ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಹಾಗೆಯೇ ಕಮಲರವರು ಅದ್ಭುತ ವೀಣಾವಾದಕಿಯೂ ಹೌದು.
ಸ್ನಾತಕೋತ್ತರ ಶಿಕ್ಷಣದ ನಂತರ ಇವರು ಬೆಂಗಳೂರಿನ ರಾಜಾಜಿನಗರದಲ್ಲಿರುವ ಶಿವನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಬೋಧನಾ ವೃತ್ತಿಯ ಜೊತೆ-ಜೊತೆಗೆ ಸಂಗೀತ, ನಾಟ್ಯ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರವೃತ್ತಿಯಾಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ವಿಕಾಸಹೊಂದುತ್ತಾ ಸಾಗಿದರು.
ಮಹಿಳಾ ಸಂವೇದನೆಯ ಅದರಲ್ಲೂ ವರ್ಣಬೇಧದಿಂದ ತತ್ತರಿಸಿದ ಜನಾಂಗದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ದಾಖಲಿಸಿದ್ದಾರೆ. ಆಫ್ರಿಕನ್ ಹಾಗೂ ಅಮೆರಿಕನ್ ಮಹಿಳೆಯರು ಗುಲಾಮ ಗಿರಿಯ ವಿರುದ್ದ ಮಾಡಿದ ಹೋರಾಟಗಳ ಮೇಲೆ ಬೆಳಕು  ಚೆಲ್ಲಿದ್ದಾರೆ.
‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಇವರ ಸುಪ್ರಸಿದ್ಧ ಕೃತಿಯಾಗಿದೆ. ಇದು ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಗುಲಾಮಗಿರಿಯಲ್ಲಿ ಬೆಂದು ನರಳಿದ ವ್ಯಥೆಗಳನ್ನು ಆಫ್ರಿಕನ್ ಲೇಖಕಿಯರು ದಾಖಲಿಸಿದ್ದನ್ನು ಕನ್ನಡಕ್ಕೆ ತಂದಿದ್ದಾರೆ. ‘ಉತ್ತರ ನಕ್ಷತ್ರ’, ‘ನನ್ನ ಕಥೆ’ ಇತರ ಪ್ರಮುಖ ಕೃತಿಗಳು.
ಇವರು ಹೆಚ್ಚು ಗಮನ ಹರಿಸಿದ್ದು ಅನುವಾದ ಸಾಹಿತ್ಯದೆಡೆಗೆ. ಉರ್ದುವಿನಿಂದ, ಆಂಗ್ಲಭಾಷೆಯಿಂದ, ಬೆಂಗಾಲಿಯಿಂದ ನೂರಾರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಅನೇಕ ಉರ್ದು ಮತ್ತು ಬೆಂಗಾಲಿ ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಅವರ ಅನೇಕ ಕವಿತೆಗಳು ಮರಾಠಿ, ಮಲೆಯಾಳಂ, ಗುಜರಾತಿ, ಬಂಗಾಲಿ ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡಿರುವುದು ಇವರ ವಿದ್ವತ್‍ಗೆ  ಹಿಡಿದ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
‘ಶಕುಂತಲೋಪಾಖ್ಯಾನ’ ಇವರ ಮೊದಲ ಕಾವ್ಯ ಸಂಗ್ರಹವಾಗಿದೆ. ಇವರ ಇನ್ನೊಂದು ಪ್ರಸಿದ್ಧ ಕವನ ಸಂಕಲನ ‘ಜಾಣೆ ಮತ್ತು ಇತರ ಕವಿತೆಗಳು’.  ‘ಕತ್ತಲೆ ಹೂವಿನ ಹಾಡು’ ಎಂ.ಆರ್.ಕಮಲರವರ ಪ್ರಮುಖ ಅನುವಾದ ಕೃತಿಯಾಗಿದೆ. ಹೀಗೆ ಇವರ ಸಾಹಿತ್ಯ ದೀನ-ದಲಿತರ ನೋವುಗಳಿಗೆ ಬೆಳಕಾಯಿತು. ಇವರ ಅನುವಾದ ಎಷ್ಟೋ ಮಹಿಳೆಯರ ಕೂಗು, ಸಂಕಟಗಳನ್ನು ಅನಾವೃಣಗೊಳಿಸಿದವು. ಮಹಿಳಾ ಪರ, ದಮನಿತರ ಪರ ದ್ವನಿಗಳು ಇವರ ಬರವಣಿಗೆಗಳಲ್ಲಿ ಪಲ್ಲವಿಸಿದವು.
ಎಂ.ಆರ್.ಕಮಲರವರು ಒಬ್ಬ ಹೋರಾಟಗಾರ್ತಿಯರಿಗೆ ಬೆಳಕಾಗಿ, ಕವಯತ್ರಿಯಾಗಿ, ಅನುವಾದಕಿಯಾಗಿ, ಭರತನಾಟ್ಯ ಕಲಾವಿದೆಯಾಗಿ, ವೀಣಾ ವಾದಕಿಯಾಗಿ ನಮ್ಮೆದುರಿಗೆ ನಿಲ್ಲುವುದರೊಂದಿಗೆ ಬಹುಮುಖ ಪ್ರತಿಭಾಶಕ್ತಿಯಾಗಿ ಗೋಚರಿಸುತ್ತಾರೆ.
ಇವರ ಸಾಹಿತ್ಯ, ಸಂಗೀತ ಹಾಗೂ ನಾಟ್ಯ ಕಲೆಗೆ ಸಾಕಷ್ಟು ಬಹುಮಾನ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಬಿ.ಎಂ.ಶ್ರೀ ಸ್ವರ್ಣ ಪದಕ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿಗಳು ಪ್ರಮುಖವಾಗಿವೆ. ಇವರ ಭಾವಗೀತೆಗಳ ಧ್ವನಿ ಸುರುಳಿಯಾದ ‘ಭಾವ ವೀಣೆ’ ಆಧುನಿಕ ಕವಯತ್ರಿಯರ ಮೊಟ್ಟ ಮೊದಲ ಧ್ವನಿ ಸುರುಳಿ ಎಂಬುದಕ್ಕೆ ಸಾಕ್ಷಿಯಾಗಿದೆ.


ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಸಮ ಸಮಾಜದ ಬರಹಗಾರ – ಚಂದ್ರಕಾಂತ ಪಡೆಸೂರ

ಸಮ ಸಮಾಜದ ಬರಹಗಾರ – ಚಂದ್ರಕಾಂತ ಪಡೆಸೂರ
ಮೂಲ ಶಿಕ್ಷಣ, ಸ್ವ ಮೌಲ್ಯಮಾಪನ, ಭಾಷಾ ಶಿಕ್ಷಣ, ಲೇಖನ ಕಲೆ, ಕಾವ್ಯ ಪ್ರಭೆ, ವಿಮರ್ಶೆಯ ಸ್ವರೂಪ ಹೀಗೇ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿ ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಗಳೆರಡರಲ್ಲಿಯೂ ವಿಶೇಷ ಸಾಧನೆ ಮಾಡಿದ ಕನ್ನಡದ ಪ್ರಬುದ್ಧ ಸಾಹಿತಿ ಮಿರ್ಜಿ ಅಣ್ಣರಾಯರಂತೆ ಪ್ರಸ್ತುತ ಸಂದರ್ಭದಲ್ಲಿ ಇವೆರಡೂ ಕ್ಷೇತ್ರದಲ್ಲಿ ಸದ್ದು-ಗದ್ದಲವಿಲ್ಲದೆ ಕೈಂಕರ್ಯ ಮಾಡುತ್ತಿರುವ ಕಾಯಕಯೋಗಿ ಚಂದ್ರಕಾಂತ ಪಡೆಸೂರರೆಂದರೆ ಅತಿಶಯೋಕ್ತಿಯಾಗಲಾರದು.
ಪ್ರಗತಿಶೀಲ ಸಾಹಿತ್ಯದ ನೆಲೆಗಟ್ಟಿನಲ್ಲಿ ಆಲೋಚಿಸುವ ಇವರು ಸಾಹಿತ್ಯ ನಿಂತ ನೀರಾಗದೇ ಸದಾ ಚಲನಶೀಲವಾಗಿರಬೇಕೆಂಬುದು ಇವರ ಆಶಯ. ಸಾಹಿತ್ಯದಲ್ಲಿ ಬರಿ ಸಂಪ್ರದಾಯ, ನಂಬಿಕೆಗಳು ಇರುವ ಬದಲು ಜನತೆಯ ಮನೋವಿಕಾಸಕ್ಕೆ, ನಾವಿನ್ಯತೆಯ ವಿಚಾರಪರತೆಗೆ ಇಂಬು ಕೊಡಬೇಕೆಂಬುದು ಪಡೆಸೂರರ ತುಡಿತವಾಗಿದೆ. ಸಾಹಿತ್ಯವೆಂಬುದು ಸಂಪ್ರದಾಯದ ನಿಯಮಗಳನ್ನು ಬಿಟ್ಟು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮಾನವೀಯ ಮೌಲ್ಯಗಳನ್ನು ಉನ್ನತೀಕರಿಸುವಂತಿರಬೇಕು. ವಿಚಾರ ಕ್ರಾಂತಿಯನ್ನು ಪ್ರತಿಯೊಬ್ಬ ಸಾಹಿತಿಯೂ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಾಮಾನ್ಯ ಮನುಷ್ಯನ ಭಾವನೆಗಳಿಗೆ ನಾವು ಸ್ಪಂದಿಸಬಹುದು. ಈ ನೆಲೆಗಟ್ಟಿನಲ್ಲಿಯೇ ಪಡೆಸೂರರು ಬದುಕು ಸಾಗಿಸುತಿದ್ದಾರೆ. ಇಂತಹ ಒಬ್ಬ ಲೇಖಕರು ನಮ್ಮ ನಡುವೆ ಇರುವುದು ಹೆಮ್ಮೆಯ ಸಂಗತಿ.
ಶ್ರೀ ಚಂದ್ರಕಾಂತ ಪಡೆಸೂರರು ಕ್ರಿ.ಶ.1960 ಜುಲೈ 01 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಶ್ರೀ ಗಂಗಪ್ಪ ಹಾಗೂ ಶ್ರೀಮತಿ ನಾಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಎಂ.ಎ, ಬಿ.ಇಡಿ ಪದವಿದರರಾದ ಇವರು ಕಳೆದ ಮೂರು ದಶಕಗಳಿಂದ ಹಾಸನದ ಆನಂದ ಭಾರತಿ ಪ್ರೌಢ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1984 ರಿಂದ 1987 ರತನಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೆ ಅವಧಿಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಕನ್ನಡ-ಕನ್ನಡ ನಿಘಂಟುವಿನ ಸಂಪಾದಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
1996 ರಿಂದಲೂ ಹಾಸನ ಜಿಲ್ಲೆಯ ಮನೆ-ಮನೆ ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂದಿಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಪ್ರೌಢ ಶಾಲಾ ಮುಖ್ಯಸ್ಥರಾಗಿ, ಕವಿಯಾಗಿ, ಗದ್ಯ ಲೇಖಕರಾಗಿ, ವಿಮರ್ಶಕರಾಗಿ, ಎಲ್ಲಕ್ಕಿಂತ ಉತ್ತಮ ಚಾಲಾಕಿತನದ ಸಂಘಟಕರಾಗಿ, ಆಡಳಿತಗಾರರಾಗಿ ಹೆಸರಾಗಿರುವ ಪಡೆಸೂರರು ಸೂಕ್ಷ್ಮ ಸಂವೇದನೆಯ ಬರಹಗಾರರು. ಸಮಾಜದ ತವಕ, ತಲ್ಲಣ, ಆತಂಕಗಳನ್ನು, ಜೈವಿಕ ಪ್ರೀತಿಯ ಎಳೆಗಳನ್ನು ಗೇಯತೆ, ಛಂದಸ್ಸುಗಳಲ್ಲಿ ಸುಂದರವಾಗಿ ಕಟ್ಟಿ ಕೊಟ್ಟಿರುವುದು ಅಪ್ಯಾಯಮಾನವಾದುದು. ಸಾಮಾಜಿಕ ಮೌಢ್ಯತೆ, ಬದುಕಿನ ವಿರೋಧಾಬಾಸಗಳು ಇವರ ಸಾಹಿತ್ಯದಲ್ಲಿ ಮೇಳೈಸಿವೆ.
ಸಾಹಿತ್ಯ ಕ್ಷೇತ್ರ ಃ ‘ಇದಿಮಾಯಿ’ ಇವರ ಚೊಚ್ಚಲ ಸ್ವತಂತ್ರ ಸಾಹಿತ್ಯ ಕೃತಿ. ಈ ನಾಟಕ ಹಲವಾರು ಪ್ರದರ್ಶನಗಳನ್ನು ಕಂಡು ಜನ ಮನ್ನಣೆ ಗಳಿಸಿದೆ. ‘ಭಾವ ದೇಹ’(2013) ಇವರ ಕವನ ಸಂಕಲನ. 50 ಕವಿತೆಗಳ 80 ಪುಟಗಳ ಈ ಕೃತಿಗೆ ಕನ್ನಡದ ಪೂಜಾರಿ ಹಿರೆಮಗಳೂರು ಕಣ್ಣನ್ ಅವರ ಮುನ್ನುಡಿ ಕಳೆಕಟ್ಟಿದೆ. ಪ್ರಸ್ತುತ ಪ್ರಾಪಂಚಿಕ ಮೌಲ್ಯಗಳು ದಮನಿತರ ವ್ಯಥೆಗಳು, ಅಜ್ಞಾನದ ಅಟ್ಟಹಾಸಗಳು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತಿಬಿಂಬಿತವಾಗಿರುವುದು ಸ್ತುತ್ಯಾರ್ಹ. ಈ ಕವಿತೆಗಳ ಸಂಕಲನದಲ್ಲಿ ಪ್ರತಿಯೊಂದು ಕವನವನ್ನು ಓದುತ್ತಾ ಹೋದ ಹಾಗೆ ರಸಾನಂದದ ಆಳಕ್ಕೆ ಇಳಿಯುತ್ತಾ ರಸ ಸ್ವಾದದ ಮಧುರತೆಯನ್ನು ಹೆಚ್ಚೆಚ್ಚು ಕಂಡುಕೊಳ್ಳುತ್ತಾ ಹೋಗಬಹುದು.
ಪಡೆಸೂರರ ಕವಿತೆಗಳಲ್ಲಿ ಕಸುವಿದೆ, ಕಾಂತಿಯಿದೆ, ನಾದವಿದೆ, ಬನಿ ತುಂಬಿದೆ, ಭಾಷೆಗೆ ಎದೆ ತುಂಬಿದ ಭಾವದ ಹೆಪ್ಪು ಇದೆ. ಶೈಲಿ ಸರಳ ಆದರೆ ತುಂಬಾ ಪರಿಣಾಮಕಾರಿಯಾಗಿ ಮನಸೂರೆಗೊಳ್ಳುತ್ತದೆ.
‘ಮನದೊಳಗೆ...’(2013) ಇದು ಚಿಂತನ ಬರಹಗಳ ಸಂಕಲನ. 22 ರೇಡಿಯೋ ಚಿಂತನಗಳನ್ನೊಳಗೊಂಡ 80 ಪುಟಗಳ ಈ ಕೃತಿಗೆ ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರರು ಬರೆದ ಮುನ್ನುಡಿ ಸಾರ್ಥಕತೆ ಪಡೆದುಕೊಂಡಿದೆ. ತತ್ತ್ವ, ಪ್ರಾಣೀಯತೆ, ದಯೆ-ಧರ್ಮ, ಜೀವನ-ಮರಣ, ಓಂಕಾರ, ಒಳ್ಳೆಯತನ, ಶುದ್ಧಿ, ತಾಯಿ-ಗುರು, ಚಿಂತೆ-ಚಿಂತನ ಮುಂತಾದ ಮೌಲಿಕ ವಿಷಯಗಳ ಬಗೆಗಿನ ಚಿಂತನಗಳು ಈ ಕೃತಿಯಲ್ಲಿವೆ.
‘ಕಮಲಾಭಿನಂದನ’, ‘ನೆನಪು’, ‘ಕಿಡ್ನಿ ವಿಫಲ ರೋಗಿಗಳ ಕಹಿ ಅನುಭವಗಳು’ ಈ ಮೂರು ಸಂಪಾದಿತ ಕೃತಿಗಳಾಗಿವೆ.
ಅಲ್ಲದೆ ಆಕಾಶವಾಣಿಯಲ್ಲಿ ಹಲವಾರು ಚಿಂತನ, ನಾಟಕಗಳನ್ನು ಪ್ರಸ್ತುತ ಪಡಿಸಿರುವ ಪಡೆಸೂರರು ಸಾವಿರಾರು ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ‘ಇದಿಮಾಯಿ’, ‘ಹೋಳಿ ಕಾಮಣ್ಣ’, ‘ವೀರ ದುರ್ಯೋಧನ’ ಮುಂತಾದ ನಾಟಕಗಳು ಅಪಾರ ಜನಪ್ರಿಯವಾಗಿವೆ. ಅಲ್ಲದೆ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿವೆ. ಪ್ರತಿ ವರ್ಷ ಜಿಲ್ಲಾಡಳಿಯದಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯ ದಿನಾಚರಣೆ ಕಾರ್ಯಕ್ರಮಗಳಿಗೆ ಪ್ರಸಿದ್ಧ ರಾಜ ವಂಶಗಳನ್ನು ಕುರಿತ ಬೃಹತ್ ರೂಪಕಗಳನ್ನು ಬರೆದು ನಿರ್ದೇಶನ ಮಾಡುತ್ತಿರುವುದು ಶ್ಲಾಘನೀಯವಾದುದು. ಒಂದೊಂದು ರೂಪಕದಲ್ಲೂ ಸಾವಿರಾರು ಮಕ್ಕಳು ಪಾಲ್ಗೊಂಡು ಅಭಿನಯ ಮಾಡುವುದು ಸಾಮಾನ್ಯದ ವಿಷಯವಲ್ಲ. ಯಾವಾಗಲೂ ನಾವಿನ್ಯತೆಗೆ ಒತ್ತು ನೀಡುವ ಪಡೆಸೂರರು ಹೊಸ ಪರಿಕಲ್ಪನೆಗಳ ಕಡೆಗೆ ತುಡಿಯುತ್ತಿರುತ್ತಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಮಾನವೀಯ ಸಂವೇದನಾ ಬರಹಗಾರ – ಡಾ|| ಎಂ.ಎಸ್.ಶೇಖರ್

ಮಾನವೀಯ ಸಂವೇದನಾ ಬರಹಗಾರ – ಡಾ|| ಎಂ.ಎಸ್.ಶೇಖರ್
ಕಾಲವು ಗತಿಸಿದಂತೆ, ದಶಕಗಳು ಕಳೆದಂತೆ ಜಾಗತಿಕವಾಗಿ ಮತೀಯ ಕೊಳಕು ಭಾವನೆಗಳು, ತಾರ ತಮ್ಯ ಮನೋಭಾವನೆಗಳು ಕ್ಷೀಣಿಸಬೇಕಾಗಿತ್ತು, ಆದರೆ ಇನ್ನೂ ಜಟಲತೆ ಪಡೆಯುತ್ತಿರುವುದು ದುರಂತವೇ ಸರಿ. ಇಂತಹ ಸಾಮಾಜಿಕ  ಅಸಮಾನತೆ ವಿರುದ್ದ ಅನೇಕ ಲೇಖಕರು ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿದ್ದಾರೆ. ಜನಪರ ಚಳವಳಿಗಳ ಮೂಲಕ ಜಾಗೃತೆ ಮೂಡಿಸಲು ಶ್ರಮಿಸುತ್ತಿದ್ದಾರೆ. ಶೋಷಣೆಗೊಳಗಾದವರಿಗೆ ದನಿಯಾಗಿದ್ದಾರೆ.
ದಲಿತ ಸಂವೇದನೆಯನ್ನು ಮನೋಜ್ಞವಾಗಿ, ಸೃಜನಶೀಲವಾಗಿ ಕಟ್ಟಿಕೊಟ್ಟ ಸಂಶೋಧಕ, ಕವಿ, ಬರಹಗಾರ ಡಾ|| ಎಂ.ಎಸ್.ಶೇಖರ್ ಅವರು. ಕ್ರಿ.ಶ 1964 ರಲ್ಲಿ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನ ಮಲ್ಲಿಗೆವಾಳು ಗ್ರಾಮದ ಶ್ರೀ ಸಿದ್ದಯ್ಯ ಮತ್ತು ಶ್ರೀಮತಿ ದೇವಮ್ಮ ನವರ ಮಗನಾಗಿ ಜನಿಸಿದ ಇವರು ಆಲೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಭ್ಯಾಸ ಮಾಡಿದರು. ನಂತರ ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವಿಯನ್ನು 1988 ರಲ್ಲಿ ಮುಗಿಸಿದರು. 1992 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಇವರು 1994 ರಲ್ಲಿ ಯು.ಜಿ.ಸಿ ಶಿಷ್ಯ ವೇತನದಡಿಯಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿ ಪಡೆದರು. 2007 ರವರೆಗೂ ಹೇಮಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸಿ ನಂತರ ಮಂಡ್ಯದ ಸರ್.ಎಂ.ವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಹಾಗೂ ಮುಖ್ಯಸ್ಥರಾಗಿ 2010 ರಿಂದ 2012 ರವರೆಗೆ ಕಾರ್ಯನಿರ್ವಹಿಸಿ ಪುನಃ ಹಾಸನದ ಹೇಮಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಲಿತ ಸಾಹಿತ್ಯ ಪರಂಪರೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಇವರು ಮೊದಲ ತಲೆಮಾರಿನ ದಲಿತ ಸಾಹಿತ್ಯ ಹಾಗೂ ಮೂಲ ಜನಪದ ಸಾಹಿತ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಸಾಹಿತ್ಯದ ರೂಪದಲ್ಲಿ ಹಿಡಿದಿಟ್ಟು ಬೃಹತ್ ಕೃತಿಗಳ ಮೂಲಕ ನಾಡಿನ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ.
ಅಗಾಧ ಸಾಧನೆ ಮಾಡಿದ್ದರೂ ಎಲೆಮರೆ ಕಾಯಿಯಂತೆ ಇಂದಿಗೂ ತಮ್ಮಷ್ಟಕ್ಕೆ ತಾವು ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸದಾ ಪ್ರಗತಿಪರ ಚಿಂತನ ಮಾಡುವ ಇವರು ಮಾನವೀಯ ನೆಲೆಯಲ್ಲೇ ಬದುಕು ಸಾಗಿಸುತ್ತಿರುವುದು ಸ್ತುತ್ಯಾರ್ಹ.
ಕಾವ್ಯ, ವಿಮರ್ಶೆ, ಜಾನಪದ, ಸಂಶೋಧನೆ, ಸಂಪಾದನೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಇವರು ಇಪ್ಪತ್ತಕ್ಕೂ ಅಧಿಕ ಅಮೂಲ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
1997 ರಲ್ಲಿ ‘ನಾರಾಯಣ ಗುರುವಿನ ನಾಡಿನಲ್ಲಿ’ ಎಂಬ ಪ್ರವಾಸ ಕಥನವನ್ನು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ‘ಗ್ರಹಿಕೆ’-1997 (ವಿಮರ್ಶೆ), ‘ನಮ್ಮ ಮುಸ್ಲಿಂ ಹಿನ್ನೆಲೆಯ ಜಾನಪದ ಕಥೆಗಳು’(2001), ‘ಕಣ್ಣು ಕಂಡಷ್ಟು’(ವಿಮರ್ಶೆ-2002), ‘ಜಾನಪದ ಜಾದೂಗಾರ ಸಹೀದ್ ಹುಸೇನ್’(2002), ‘ಶ್ರೀಕೃಷ್ಣ ಆಲನಹಳ್ಳಿ ಅವರ ಸಾಹಿತ್ಯ’(ಸಂಶೋಧನೆ-2002), ‘ಅನಿಕೇತನ’(ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ-ಸಂಪಾದನೆ-2005), ‘ಹೊಯ್ಸಳ ದೀಪ್ತಿ’(ಸಂಪಾದನೆ-2006), ‘ಆಧುನಿಕಸಾಹಿತ್ಯದ ಮೊದಲ ತಲೆಮಾರಿನ ಲೇಖಕರು’(ಸಂಪಾದಿತ-2006), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಧೋರಣೆಗಳು’(ಸಂಪಾದಿತ-2006), ‘ಹೊಯ್ಸಳ ದರ್ಪಣ’(ಸಂಪಾದಿತ-2006),  ‘ಡಿ.ಗೋವಿಂದಾಸ್ ಅವರ ಸಮಗ್ರ ಸಾಹಿತ್ಯ ಸಂಪುಟ’(ಸಂಶೋಧನೆ-2007), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಜಿಗಳು’(ಸಂಪಾದಿತ-2007), ‘ಕುದ್ಮುಲ್ ರಂಗರಾಯರು’(ಜೀವನ ಚರಿತ್ರೆ-2008), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜಾನಪದ ಪ್ರಜ್ಞೆ’(ಸಂಪಾದಿತ-2008), ‘ಸಂಸ್ಕøತಿ ಮಹಿಳಾ ಮಾಲಿಕೆ ಃ ಸಂ-2(2008), ‘ಗರಿಕೆ’(ಕಾವ್ಯ-2010) ಮುಂತಾದ ಶೇಷ್ಠ ಕೃತಿ ರತ್ನಗಳನ್ನು ನೀಡಿದ್ದಾರೆ.
ಕನ್ನಡ ಸಮಾಜದ ಸಾಮರಸ್ಯಕ್ಕಾಗಿ ಒಡೆದು ಹೋಗಿರುವ ಪ್ರಗತಿಪರ ಸಂಘಟನೆಗಳು, ಭಾಷಾ ಸಂಘಟನೆಗಳು, ದಲಿತ ಮತ್ತು ಬಂಡಾಯ ಸಾಹಿತಿಗಳೆಲ್ಲಾ ತಂತಮ್ಮ ಪ್ರತಿಷ್ಟೆಗಳನ್ನು ಬಿಟ್ಟು ಸಾರ್ವತ್ರಿಕವಾಗಿ ಸ್ಪಂದಿಸಲೆಂಬುದು ಇವರ ಆಶಯವಾಗಿದೆ. ಅವರೆ ಹೇಳುವಂತೆ “ಸಾಹಿತಿಯಾದವನು ಕೇವಲ ಸಾಹಿತ್ಯದ ಬಗ್ಗೆ ಅಷ್ಟೆ ಸೀಮಿತವಾಗಬಾರದು. ನಮ್ಮ ಬದುಕನ್ನು ರೂಪಿಸುವ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ತೆರೆದ ಮನಸ್ಸಿನಿಂದ ನೋಡುವ, ಹೃದಯ ವೈಶಾಲ್ಯತೆಯಿಂದ ಕಾಣುವ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸಾಹಿತ್ಯ, ಸಂಸ್ಕøತಿ, ಕಲೆ, ವಿಚಾರ, ಧರ್ಮ, ಆಧ್ಯಾತ್ಮ, ಸಂಘಟನೆ, ಆಧುನಿಕತೆ, ವಿಜ್ಞಾನ ಮುಂತಾದವುಗಳ ಬಗೆಗಿನ ಚರ್ಚೆ, ಚಿಂತನೆ ಎಂದರೆ ಅವು ಬೇರೇನು ಅಲ್ಲದೆ ಬದುಕಿನ ಬಗೆಗಿನ ಚರ್ಚೆ, ಚಿಂತನೆ ಎಂಥಲೆ ಅರ್ಥ. ನಿಜವಾದ ಮನುಷ್ಯ ಸಂಬಂಧ ಗಟ್ಟಿಗೊಳ್ಳುವುದು ಪ್ರೀತಿ, ಪ್ರೇಮ, ಪ್ರಾಮಾಣಿಕತೆ ಹಾಗೂ ಉತ್ತಮ ನಡವಳಿಕೆಗಳಿಂದಲೇ ವಿನಃ ಅರ್ಥವಿಲ್ಲದ ಜಾತಿ, ಅಸ್ಪøಶ್ಯತೆ, ಲಿಂಗತಾರತಮ್ಯ, ಮತ, ಧರ್ಮ, ಅಂತಸ್ತು, ಐಶ್ವರ್ಯದಿಂದಲ್ಲ. ಸಾಹಿತ್ಯ ಪ್ರೀತಿಯ ಲೇಖಕ ಕುಟುಂಬದವರಾದ ನಾವೆಲ್ಲರೂ ಈ ನಿಟ್ಟಿನಲ್ಲಿ ಆತ್ಮಸಾಕ್ಷಿಯ ಬದ್ಧತೆಯಿಂದ ಚಿಂತಿಸೋಣ”.- ಅಧ್ಯಕ್ಷೀಯ ಭಾಷಣ, 13 ನೆಯ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಹೀಗೆ ಸದ್ದಿಲ್ಲದೆ ಸಾಮಾಜಿಕ ಕಳಕಳಿಗೆ ಹೋರಾಡುತ್ತಿರುವ ಡಾ|| ಎಂ.ಎಸ್.ಶೇಖರ್ ರವರು 2013 ಮಾರ್ಚಿ 30, 31 ರಂದು ನಡೆದ ಹಾಸನ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಲ್ಲದೆ ಇವರಿಗೆ 2003 ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, 2010 ರಲ್ಲಿ ದಲಿತ ಸಾಹಿತ್ಯ ಪರಿಷತ್ತು ಕಾವ್ಯ ಪ್ರಶಸ್ತಿ, 2012 ರಲ್ಲಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪ್ರಶಸ್ತಿ, 2012 ರಲ್ಲಿ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಸಂದಿವೆ. ಅಲ್ಲದೆ 2005 ರಿಂದ 2008 ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197