ಮಂಗಳವಾರ, ಮೇ 27, 2014

ಜಾನಪದ ಗಾರುಡಿಗ ಮತಿಘಟ್ಟ ಕೃಷ್ಣಮೂರ್ತಿ

ಹಾಸನ ಜಿಲ್ಲೆ ಬೇಲೂರು ತಾಲೂಕಿಗೆ ಸೇರಿದ್ದು ಮತಿಘಟ್ಟ. 6ಕಿಲೋಮೀಟರ್ ದೂರದಲ್ಲಿರುವ ಹಳೆಬೀಡು ಹಾಗೆಯೇ ಅದಕ್ಕೆ ಹೊಂದಿಕೊಂಡಂತ್ತಿರುವ ಬೇಲೂರು ವಿಶ್ವ ಪ್ರಸಿದ್ಧಿ ಪಡೆದಂತೆ ಈ ಹಳ್ಳಿಯೂ ಸಹ ಕನ್ನಡ ಜಾನಪದ ಕ್ಷೇತ್ರದಲ್ಲಿ ತನ್ನದೇ ಮುದ್ರೆಯೊತ್ತಿದೆ. ಅದರ ರುವಾರಿಗಳೇ ನಮ್ಮ ಕೃಷ್ಣಮೂರ್ತಿಯವರು. ಈ ಹಳ್ಳಿಯಲ್ಲಿ ಕ್ರಿ.ಶ.1912ರ ಜುಲೈ 12ರಂದು ಜನಿಸಿದರು. ತಂದೆ ಲಿಂಗಣಯ್ಯ ತಾಯಿ ಚೆನ್ನಮ್ಮ.
ಬಾಲ್ಯದಿಂದಲೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡ ಕೃಷ್ಣಮೂರ್ತಿಯವರದು ದೇಶ-ಭಾಷೆ, ನಾಡು-ನುಡಿಗಾಗಿ ಹಾತೊರೆದ ಜೀವ. ಪ್ರಾಥಮಿಕ ಹಂತದಲ್ಲಿದ್ದಾಗಲೇ ಆಗ ಭಾರತದಾದ್ಯಂತ ಸ್ವಾತಂತ್ರ್ಯ ಚಳುವಳಿಗಳ ತೀವ್ರತೆ ಎಲ್ಲೆಂದರಲ್ಲಿ ಹಬ್ಬಿ ಶಾಲಾ-ಕಾಲೇಜು ಮಕ್ಕಳನ್ನು ತನ್ನಡೆಗೆ ಸೆಳೆದಿತ್ತು.
ಕೃಷ್ಣಮೂತರ್ಿಯವರ ಮನಸ್ಸು ಅದರೆಡೆ ಆತೊರೆದಿತ್ತು. ಕೂಲಿಮಠದಲ್ಲಿ ಮರಳಿನ ಮೆಲೆ ಅಕ್ಷರಾಭ್ಯಾಸ ಮಾಡಿ ಶಿಕ್ಷಣ ಪಡೆದರು. ಮತಿಘಟ್ಟ ಓಚೋ ದೊಡ್ಡಯ್ಯನವರು ಕೃಷ್ಣಮೂರ್ತಿಗಳ ಗುರುಗಳು. ಬೆಳವಾಡಿ, ಬೇಲೂರು, ಚಿಕ್ಕಮಗಳೂರಿನಲ್ಲಿ ಹಂತ ಹಂತವಾಗಿ ಶಿಕ್ಷಣ ಪಡೆದರು.
ಬೇಲೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಮಹಾತ್ಮಗಾಂಧೀಜಿ ಸ್ವಾತಂತ್ರ್ಯ ಹೋರಾಟ ಚಳವಳಿ ನಿಮಿತ್ತ ಬಂದಾಗ ಅವರನ್ನು ಖುದ್ದಾಗಿ ಭೇಟಿ ಮಾಡಿದರು. ನಂತರ ಅವರ ತತ್ತ್ವಗಳಿಗೆ ಮಾರು ಹೋಗಿ, ಸಾಂಪ್ರದಾಯಿಕ ಶಿಕ್ಷಣದಿಂದ ವಿಮುಖಗೊಂಡು ಹೋರಾಟ ಚಳವಳಿಗಳತ್ತ ಮುಖ ಮಾಡಿದರು. ಖಾದಿ ಧರಿಸಿ ದೇಶಭಕ್ತಿಯ ಬಗ್ಗೆ ಎಲ್ಲರಲ್ಲೂ ಬೀಜ ಬಿತ್ತನೆ ತೊಡಗಿದರು. ಹಳ್ಳಿಗೆ ಹಿಂದಿರುಗಿ ಮರಳಿ ಮೂಲಕಾಯಕವಾದ ವ್ಯವಸಾಯ ಮಾಡುತ್ತಾ ಖಾದಿ ಪ್ರಚಾರ ಮಾಡುತ್ತಾ ಅನಕ್ಷರಸ್ತರಿಗೆ ವಯಸ್ಕರ ಶಿಕ್ಷಣ ನೀಡ ತೊಡಗಿದರು.
1926 ರಲ್ಲಿ  ಚಿಕ್ಕಮಗಳೂರಿನಲ್ಲಿ ಇವರು    ಪ್ರೌಢಾಶಿಕ್ಷಣ ಪಡೆಯುವ ಸಂಬರ್ಧದಲ್ಲಿ   ಅಲ್ಲಿಗೆ ಮಾಸ್ತಿ ಮತ್ತು ಬೇಂದ್ರೆಯವರು ಆಗಮಿಸಿದ್ದರು.
ಅವರೀರ್ವ ಕವಿ ದಿಗ್ಗಜರು ಭಾರತೀಯ ಮೂಲ ಸಂಸ್ಕೃತಿಯ ಪಡಿನೆಳಲಾದ ಗರತಿಯ ಹಾಡು, ಜನಪದ ಹಾಡುಗಳ ಬಗ್ಗೆ ನೀಡಿದ ಜಾಗೃತಿ ಉಪನ್ಯಾಸ ಕೃಷ್ಣಮೂರ್ತಿಯವರ ಮೇಲೆ ತೀವ್ರ ಪ್ರಭಾವ ಬೀರಿತೆನ್ನಬಹುದು.
ಬಾಲ್ಯದಿಂದಲೇ ತನ್ನ ತಾಯಿ ಹೇಳುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಆಸಕ್ತಿಯಿಂದ ಆಲಿಸುತ್ತಾ ಹಲವಾರು ಪದಗಳನ್ನು ಕಂಠಪಾಠ ಮಾಡಿದ್ದರು ಕೃಷ್ಣಮೂರ್ತಿ ಮಾಸ್ತಿ-ಬೇಂದ್ರೆಯವರ ಮಾತಿನಂತೆ ಒಸಗೆ, ಸೋಬಾನ, ಬೀಸುವ ಕಲ್ಲಿನ ಪದ ಮುಂತಾದ ಪದಗಳನ್ನು ಹಳ್ಳಿ ಮಹಿಳೆಯರಿಂದ ಹಾಡಿಸಿ, ಬರೆದು ದಾಖಲಿಸುತ್ತಾ ಸಂಗ್ರಹ ಮಾಡ ತೊಡಗಿದರು.
ಬೀಸುವ ಕಲ್ಲಿಗೆ ದೇಶಾವ ತಿರುಗ್ಯಾರೇ
ಸಕಲ ಸಂಪನರಾ ಮಗಳಿಗೇ-ರಾಜ ಬಣ್ಣದ ಹಕ್ಕಿ
ಸಕಲ ಸಂಪನರಾ ಮಗಳು ನೀಲವ್ವಾಗೇ
ದೇಶ ತಿರುಗ್ಯಾರೇ ಬಸವಯ್ಯ ರಾಜ ಬಣ್ಣದ ಹಕ್ಕಿ
 *  *  *
ಶಿವನೇ ಗುರುವೆಂದು ಹಿಡಿದೇವು ರಾಗೀಕಲ್ಲಾ
ಶಿವನೇ ಕೊಡು ನಮಗೆ ಮತಿಯ ಸಂಗನ ಬಸವಾ
ಗುರುವೇ ಕೊಡು ನಮಗೆ ಸುಖಗಳ.
 *  *  *
ಬಾಲವ್ವ ಮೈ ನೆರೆತು ಬಾಗಿಲಾದಗೈದಾಳೆ
ದೂರ ಎದ್ದಾವೆ ಮಳಿಮಾಡ-ಅವರಣ್ಣ
ಮುತ್ತಿನ ಡೇರ್ಯಾವ ಹೊಡಿಸ್ಸಾನೆ.
ಹೀಗೆ ಕೃಷ್ಣಮೂರ್ತಿಯವರು ಕನ್ನಡ ನಾಡಿನ ಜನಪದ ಸಂಸ್ಕೃತಿ ಕ್ಷೀಣಿಸುವ ಸಂದರ್ಭದಲ್ಲಿ ನೂರಾರು ಕಿಲೋಮೀಟರ್ಗಳ ಕಾಲುದಾರಿ ಸವೆಸಿ, ಹಳ್ಳಿಗಳನ್ನು ಸುತ್ತಿ.ಹಾಡುಗಾರರನ್ನು ಹುಡುಕಿ ಅವರಿಂದ ಹಾಡಿಸಿ ಬರೆದು ಸಂಗ್ರಹಿಸಿ ನಮಗಿಂದು ಜನಪದ ರಾಶಿಯನ್ನು ನೀಡಿ ಹೋಗಿದ್ದಾರೆ.
1929 ರಿಂದ 31 ರ ವರೆಗೆ ಅಣ್ಣ ಎಲ್. ಗುಂಡಪ್ಪನವರು ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಅಣ್ಣನ ಮನೆಯಲ್ಲೇ ಉಳಿದು ಇಂಟರ್ಮೀಡಿಯೇಟ್ ಮುಗಿಸಿದ ಕೃಷ್ಣಮೂರ್ತಿಯವರಿಗೆ ಪ್ರೊ. ಎಸ್.ವಿ. ಪರಮೇಶ್ವರಭಟ್ಟರು ಸಹಪಾಠಿಯಾಗಿದ್ದರು. ಅವರು ಕಾಲೇಜು ಹಂತದಲ್ಲೇ ಹಲವಾರು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು. ಅಂದೇ ಇವರಿಗೂ ಸಾಹಿತ್ಯದ ಘೀಳು ಅಂಟಿತೆನ್ನಬಹುದು.
ಸೃಜನಾತ್ಮಕ ಮತ್ತು ಸೃಜನೇತರ ಸಾಹಿತ್ಯ ಪ್ರಕಾರಗಳೆರಡರಲ್ಲೂ ತೊಡಗಿಸಿಕೊಂಡು ಕೃಷ್ಣಮೂರ್ತಿಯವರು ಪತ್ರಿಕಾ ರಂಗದಲ್ಲಿಯೂ ಸ್ಮರಣೀಯ ಕಾಯಕ ಮಾಡಿದ್ದಾರೆ. ಎಲ್. ಗುಂಡಪ್ಪನವರ ಮಾರ್ಗದರ್ಶನದಲ್ಲಿ ಮಾಸ್ತಿ, ಬಿ.ಎಂ.ಶ್ರೀ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರ ಪ್ರಭಾವಕ್ಕೊಳಗಾದ ಕೃಷ್ಣಾಮೂರ್ತಿ ಜನಪದ ಸಾಹಿತ್ಯದಲ್ಲಿ ಸಕ್ರಿಯರಾಗಿ ಸಂಗ್ರಹ ಕಾರ್ಯದಲ್ಲಿ ಕ್ರಿಯಾಶೀಲರಾದರು. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪ್ರಾದೇಶಿಕ ಭಿನ್ನತೆಗನುಗುಣವಾಗಿ ಸಂಗ್ರಹಿಸ ತೊಡಗಿದರು. ಬೆಂಗಳೂರಿನ ತಿರುಮಲೆ ತಾತಾಚಾರ್ಯರ ವಿಶ್ವಕರ್ನಾಟಕ ವಾರಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಜಿ.ವಿ.ದೊಡ್ಡವೀರಪ್ಪನವರ ಮೈಸೂರು ಇನ್ಷೂರೆನ್ಸ್ ಕಂಪನಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದ ಕೃಷ್ಣಮೂತರ್ಿಯವರು 1940ರಲ್ಲಿ ಮಯೂರ ಮಾಸಪತ್ರಿಕೆ ಪ್ರಾರಂಭಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು.
ಇಷ್ಟಕ್ಕೆ ಸುಮ್ಮನಾಗದ ಇವರು ತಾಯಿನಾಡು, ಕೈಲಾಸ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಜೊತೆಗೆ ತಾವು ಸಂಗ್ರಹಿಸಿದ ಸಂಪ್ರದಾಯದ ಹಾಡುಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದರು.
1944ರಲ್ಲಿ ಪ್ರಕಟಿಸಿದ 'ನಾಡಪದಗಳು' ಕೃತಿ ಜನಮನ್ನಣೆಗಳಿಸಿದ್ದಲ್ಲದೆ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಮೆಚ್ಚುಗೆಯ ಬಹುಮಾನ ಗಳಿಸಿತು. 1948ರಲ್ಲಿ ಪ್ರಕಟವಾದ ಕಳಸಪುರದ ಹುಡುಗರು ಎಂಬ ಮಕ್ಕಳ ಕಾದಂಬರಿಯು ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಭಧ್ರವಾಗಿ ನೆಲೆನಿಲ್ಲುವಂತೆ ಮಾಡಿತೆನ್ನಬಹುದು. ಆದ್ದರಿಂದ ಆಕ್ರತಿಯ ಸುಮಾರು ಒಂಬತ್ತು ಮುದ್ರಣ ಕಂಡಿದೆ.ಹಾಗೆಯೇ ಚಲನ ಚಿತ್ರವಾಗಿದೆ.
ಮರಗಿ,ಸವರ್ೂದಯ ಇತರ ಕಾದಂಬರಿಗಳು; 'ಪಚ್ಚೇತೆನೆ'-ಕಥಾಸಂಕಲನ; 'ಭರತೆಪ್ಪ ಸೊಂಟಕ್ಕೆ ಘಂಟೆ'-ಪೌರಾಣಿಕ ನಾಟಕ; ಗಂಡನ ಪೂಜೆ, ಹೊಂಬಾಳೆ, ಕಲ್ಯಾಣಿ, ಹೊಸಹಳ್ಳಿ-ನಾಟಕಗಳು; 1958ರಲ್ಲಿ ಬಂದ 'ನಮ್ಮ ಹಳ್ಳಿಯ ಹಾಡುಗಳು', 1975ರಲ್ಲಿ ಬಂದ ಸಾವಿರ ಪುಟದ ಜನಪದ, 1981 ರಲ್ಲಿ ಬಂದ 'ಗೃಹಿಣಿ ಗೀತೆಗಳು': 1991ರಲ್ಲಿ ಪ್ರಕಟಿಸಿದ 'ಹೊನ್ನ ಹೊತ್ತಿಗೆ'- ಜನಪದ ಸಂಗ್ರಹಗಳು; 2002ರಲ್ಲಿ ಬಂದ ಹಾಸನ ಜಿಲ್ಲೆಯ ಕೋಲಾಟ ಪದಗಳು ಎಂಬ ಪುಸ್ತಕ ಇಡೀ ಹಾಸನ ಜಿಲ್ಲೆಯ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುತ್ತದೆ. 'ಏಳುಕೊಳ್ಳದ ಎಲ್ಲಮ್ಮ', 'ಶಕುನದಹಕ್ಕಿ ಮತ್ತು ಇತರ ಜನಪದ ಕಥೆಗಳು', 'ಕೆಲವು ಕಿರುಲಾವಣಿಗಳು', 'ಪಂಚತಂತ್ರದ ಕಥೆಗಳು', 'ನಾಲ್ಕು ಪತ್ರಗಳು', 'ದೇಶಾಂತರದ ನೀತಿ ಕಥೆಗಳು' ಇವು ಕೃಷ್ಣಮೂರ್ತಿಯವರ ಇತರ ಕೃತಿಗಳು.
ಬೇಲೂರು ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿಯವರಿಗೆ 2002ರಲ್ಲಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಅಲ್ಲದೇ 'ಜನಪದ ಭೀಷ್ಮ' 'ಜನಪದ ರತ್ನ' ಬಿರುದುಗಳೂ ಸಹ ಸಂದಿವೆ. ಇವರ 'ಹೊಸಹಳ್ಳಿ' ನಾಟಕಕ್ಕೆ ಕೇಂದ್ರ ಸರ್ಕಾರದ ಬಹುಮಾನವೂ ದೊರೆತಿದೆ.
ಇಡೀ ತಮ್ಮ ಬದುಕನ್ನು ಜನಪದ ಸಾಹಿತ್ಯಕ್ಕಾಗಿ ಮೀಸಲಿಟ್ಟು ಅದಕ್ಕಾಗಿಯೇ ಸಮರ್ಪಿಸಿಕೊಂಡಿದ್ದ ಜನಪದ ಭೀಷ್ಮ ಮತಿಘಟ್ಟ ಕೃಷ್ಣಮೂರ್ತಿಯವರು 2006 ಜುಲೈ 27 ರಂದು ಇನ್ನಿಲ್ಲವಾದರು. ಆದರೆ ಅವರು ಸಂಗ್ರಹಿಸಿ ಕೊಟ್ಟ ರಾಶಿ ರಾಶಿ ಜನಪದ ನಮ್ಮ ಕಣ್ಣೆದುರಿಗೆ ಅರಗಿಸಿಕೊಳ್ಳಲಾಗದಷ್ಟಿದೆ. ಅವರ ತತ್ತ್ವಾದರ್ಶಗಳು ನಮ್ಮೊಟ್ಟಿಗೆ ಸದಾ ಜೀವಂತವಾಗಿರುತ್ತದೆ.

1 ಕಾಮೆಂಟ್‌: