ಮಂಗಳವಾರ, ಮೇ 27, 2014

ವೈಚಾರಿಕ ಮನೋಧರ್ಮಿ ಜ.ಹೊ.ನಾರಾಯಣಸ್ವಾಮಿ- ಕೊಟ್ರೇಶ್ ಎಸ್.ಉಪ್ಪಾರ್

        ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು.
     ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
    ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.
    'ಮಾನವ ಕುಲಂ ತಾನೋಂದೇ' ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚಚರ್್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ.
   ಜ.ಹೊ.ನಾ ಎಂದೇ ಪ್ರಸಿದ್ಧಿ ಪಡೆದ ನಾರಾಯಣ ಸ್ವಾಮಿಯವರು 1941 ಜುಲೈ 13 ರಂದು ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಶ್ರೀ ಹೊನ್ನಯ್ಯ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಗಭರ್ಾಂಬುದಿಯಲ್ಲಿ ಜನಿಸಿದರು.
     ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದ ಇವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿನ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಲಿ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ, ಹಾಗೂ ಅರ್ಥಮೂವರ್ಸ್ ಲಿಮಿಟೆಡ್ಗಳಲ್ಲಿ ಸೇವೆ ಮಡುತ್ತಲೇ ಬಿ.ಕಾಂ; ಬಿ.ಎಲ್; ಎಂ.ಎ; ಡಿಪ್ಲಾಮೋ ಇನ್ ಡ್ರಾಮಾ ಪದವಿಗಳನ್ನು ಮುಗಿಸಿದರು. ಅನಂತರ ಪುನಃ ತವರಿಗೆ ಹಿಂದಿರುಗಿ 1977 ರಿಂದ ವಕೀಲಿ ವೃತ್ತಿ ನಡೆಸಿ ನಂತರ ಎರಡು ಅವಧಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಜ.ಹೊ.ನಾ ಅವರದ್ದು.
    ಹಾಗೆಯೇ ಇತಿಹಾಸ ಪುಟಗಳನ್ನು ಅವಲೋಕಿಸಿ ಕೊಂಕು, ಅಸಂಬದ್ಧವಾಗಿ ಕಂಡು ಬಂದ ವಿಷಯಗಳನ್ನು ಜಾಲಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಬುದ್ಧ ಪ್ರಬಂಧಗಳ ರೂಪದಲ್ಲಿ ಸಾಹಿತ್ಯ ನೀಡಿದ್ದಾರೆ. ಎಲ್ಲೋ ಹುದುಗಿದ್ದ ಅಂತರ್ಚಕ್ಷನ್ನು ತೆರೆಸಿದ್ದಾರೆ. ಸಾಮಾಜಿಕ, ಪ್ರಗತಿಪರ ಚಿಂತನೆಗಳೆಡೆಗೆ ಮನ ತೆರೆದುಕೊಳ್ಳುವಂತೆ ಹುರಿದುಂಬಿಸಿದ್ದಾರೆ.
     ಹಲವರು ಜ.ಹೊ.ನಾ ಎಡ ಪಂಥೀಯ ಎಂದು ಅಭಿಪ್ರಾಯ ಪಡುವುದುಂಟು, ಆದರೆ ನಾನು ಬಹು ಹತ್ತಿರವಾಗಿ ಗಮನಿಸಿರುವಂತೆ  ಅವರು ಯಾವ ಪಂಥಕ್ಕೂ ಮೀಸಲಾಗದೆ ಮಾನವೀಯ ಮೌಲ್ಯಗಳಿಗೆ ಬದ್ಧರಾದರು. ವಿಚಾರವಾದಿಗಳು ಅಂತೆಯೇ ನಿಷ್ಠುರವಾದಿಗಳು. ಜ.ಹೊ.ನಾ ಅವರು ವಿವೇಕಾನಂದರ ಆಚಾರ, ಕುವೆಂಪುರವರ ವಿಚಾರಗಳ ಸಮ್ಮಿಲನವಾಗಿದ್ದಾರೆ.
    ಒಂದು ಕಡೆ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ 'ಬ್ರಾಹ್ಮಣರು ಸಾಮಾಜಿಕವಾಗಿ ಜಾತಿವಾದಿಗಳಾದರೆ, ಶೂದ್ರರು ವೈಯಕ್ತಿಕವಾಗಿ ಜಾತಿವಾದಿಗಳು' ಎಂದಿದ್ದಾರೆ. ಅದು ಅಕ್ಷರ ಸಹ ಸತ್ಯ . ತಮ್ಮ ಕೋಮಿನ ಹಿತಕ್ಕಾಗಿ ಬ್ರಾಹ್ಮಣರು ತ್ಯಾಗ ಮಾಡಿದರೆ, ಸ್ವಂತ ಪ್ರತಿಷ್ಠೆಗಾಗಿ ಶೂದ್ರರು ತಮ್ಮ ಜನಾಂಗವನ್ನು ಬಲಿಕೊಡುತ್ತಾರೆ. ಅಧಿಕಾರದ ಆಸೆ ಆಮಿಷಗಳಿಗೆ ಒಳಗಾದ ಜನರು ಎಂಥ ಪ್ರತಿಗಾಮಿ ಕಾರ್ಯಕ್ಕೂ ಇಳಿಯುತ್ತಾರೆ. ಇದನ್ನೇಕೆ ಇಲ್ಲಿ  ಪ್ರಸ್ತಾಪಿಸಿದೆನೆಂದರೆ ಈ ಮೇಲಿನ ಎರಡೂ ಅಂಶಗಳನ್ನು ಹೊರತು ಪಡಿಸಿ ಜ.ಹೊ.ನಾ ಸಾಹಿತ್ಯ ನಮ್ಮೆದುರಿಗೆ ನಿಲ್ಲುತ್ತದೆ.
    'ಹರಿಯುವ ನದಿಗಳು ಹೇಗೆ ತಮ್ಮ ಹೆಸರು, ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೋ ಹಾಗೆಯೇ ಜ್ಞಾನಿ ನಾಮ ರೂಪಗಳಿಂದ ಬಿಡುಗಡೆ ಪಡೆದು ಪರಾತ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ' ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ಮಾನವ ವೈಶಾಲ್ಯತೆಯಡೆಗೆ ಸಾಗಬೇಕು, ವೈಚಾರಿಕ ಪ್ರಗತಿ ಹೊಂದಬೇಕೆಂಬ ಮಹದಾಶಯ ಜ.ಹೊ.ನಾ ಅವರದ್ದು.
    ಇವರು ಈಗಾಗಲೇ 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವುಗಳಲ್ಲಿ ನನ್ನ ಅತ್ಯಾಕರ್ಷಣೆ ಮಾಡಿದ ಕೃತಿಗಳು  ಮೊದಲನೆಯದು 'ಅಧಮ್ಯ'ವಾದರೆ ಎರಡನೆಯದಾಗಿ 'ವಿವೇಕಾನಂದರು ಮತ್ತು ಕ್ರಾಂತಿಕಾರಕ ವಿಚಾರಗಳು'.
    ಪ್ರಕೃತಿಯಿಂದಲೇ ಬರುವ ಇಂಥ ಅಪರೂಪದ ಹೃದಯ ವೈಶಾಲ್ಯತೆಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬೆಳೆಸಿಕೊಳ್ಳುವುದೇ ಜೀವನದ ಪರಮಗಂತವ್ಯ. ಮನೋಹೃದಯ ವೈಶಲ್ಯತೆಯ ಇಂಥ ಅದ್ಭುತ ಚಿತ್ರಣ ಜಗತ್ತಿನ ಬೇರಾವ ಸಾಹಿತ್ಯದಲ್ಲೂ ಲಭ್ಯವಾಗಿಲ್ಲ ಎನ್ನಬಹುದು. ನಾನು ಓದಿದಂತೆ ಅದಮ್ಯ ಕನ್ನಡ ಸಾಹಿತ್ಯದ ಸರ್ವಶ್ರೇಷ್ಠ ಕೃತಿಯಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದ ಪುಸ್ತಕ. ಇಲ್ಲಿ ಜ.ಹೊ.ನಾ ಕುವೆಂಪುರವರ ಶಿಷ್ಯರಾದರೂ ಇವರೀರ್ವರಲ್ಲಿನ ಅಜ್ಞಾತ ಶಕ್ತಿ ವಿಶಿಷ್ಠ ಹಾಗೂ ವಿಭಿನ್ನವಾದುದೆನ್ನಿಸಿತು. ಏಕಲವ್ಯನನ್ನು ಕುವೆಂಪು ತಮ್ಮ 'ಬೆರಳ್ಗೆ ಕೊರಳ್' ಕೃತಿಯಲ್ಲಿ ನೋಡಿದ್ದು ಅದ್ಭುತವೆನಿಸಿದ್ದು ನಿಜ. ಅಂತಿಮವಾಗಿ ಏಕಲವ್ಯನ ಉಂಗುಲಿಯ ಬಲಿದಾನ ನಡೆಯುತ್ತದೆ. ಆದರೆ ಜ.ಹೊ.ನಾ ಕುವೆಂಪುರವರಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಕೃತಿಕ ಶಾಂತಿ ಬಯಸಿದ್ದು, ಮನಪರಿವತರ್ಿಸಿದ ಬಗೆ ಅತ್ಯದ್ಭುತ ಹಾಗೂ ಅಮೋಘವಾದುದೆಂದರೆ ಅತಿಶಯೋಕ್ತಿಯಾಗಲಾರದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜ.ಹೊ.ನಾ ನೀಡಿದ ಅಪೂರ್ವ ಕೊಡುಗೆ ಎನಿಸುತ್ತದೆ. ಇಲ್ಲಿ ವೈಚಾರಿಕ ಪ್ರವಾಹವೇ ಹರಿದಿದೆ ಎನ್ನಬಹುದು. ಈ ರಚನಾ ಸಂದರ್ಭದಲ್ಲಿ ಸಂಯಮ, ವಿವೇಕಗಳು ಜ.ಹೊ.ನಾ ರನ್ನು ಆವಿರ್ಭವಿಸಿಕೊಂಡು ಅಂತರ್ಮುಖಿ ಚಿಂತನೆ ಹರಿಯಬಿಟ್ಟಿವೆ.  ಆದ್ದರಿಂದ ಈ ಕೃತಿ ಓದುಗನ ಹೃದಯದಂತರಾಳಕ್ಕಿಳಿದು ಹೊಸ ಜಗತ್ತಿನ ಚಿತ್ರಣವನ್ನು, ಮಾನವೀಯ ಸಂವೇದನೆಯನ್ನು ಪ್ರಜ್ವಲಿಸುತ್ತದೆ.
     ಜಾತಿ, ಧರ್ಮ, ದೇವರುಗಳೆಂಬ ಮೌಢ್ಯದಲ್ಲಿ ಸಿಕ್ಕು ಭಾರತ ನಲುಗುತ್ತಿರುವುದನ್ನು ಜ.ಹೊ.ನಾ ತಮ್ಮ ಅನೇಕ ಕೃತಿಗಳಲ್ಲಿ ವೈಚಾರಿಕವಾಗಿ ಮಂಡಿಸಿದ್ದಾರೆ. ಇವರ ಕೃತಿಗಳನ್ನು ಓದುವಾಗಲೆಲ್ಲಾ ಥಟ್ಟನೇ ನಮ್ಮೆದುರಿಗೆ ಬುದ್ಧ, ವಿವೇಕಾನಂದ, ಮಹಾತ್ಮಾ ಪುಲೆ, ಓಶೋ, ಕುವೆಂಪು, ಪೆರಿಯಾರ್, ಲೋಹಿಯ ಮುಂತಾದವರು ಒಂದು ಕ್ಷಣ ಸುಳಿದು ಹೋಗುತ್ತಾರೆ. ಇವರೆಲ್ಲರಾದಿಯಾಗಿ ಭಾರತದಲ್ಲಿ ವೈಚಾರಿಕ ಕ್ರಾಂತಿಯೇ ಹರಿದಿದೆ. ಆದರೂ ಸಮಾಜ ಸಂಪ್ರದಾಯದ ಹೊಲಸಿನಿಂದ ಮುಕ್ತವಾಗುತ್ತಿಲ್ಲ. ಆದ್ದರಿಂದಲೇ ವಿವೇಕಾನಂದರು ಒಂದು ಕಡೆ ...... ಎಲ್ಲಾ ಮೂಢ ನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರು ಇಲ್ಲ. ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು ಕೊನೆಗೆ ದೇವರನ್ನೇ ಧ್ವಂಸ ಮಾಡಿ, ನಾನೇ ದೇವರು. ಬೇರೇನೂ ಇಲ್ಲ ತತ್ತ್ವಜ್ಞಾನಿಗಳೇ ಎದ್ದು ನಿಲ್ಲಿ ಭಯಬೇಡ. ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು... ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ.... ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಠಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ... ಎಂದು ಕರೆ ಕೊಟ್ಟಿದ್ದಾರೆ
      ಈ ಕರೆಗೆ ಕಿವಿಕೊಟ್ಟು ಕಾರ್ಯತತ್ಪರರಾದವರು ಮಾತ್ರ ಕೇಲವೆ ಕೆಲವರು. ಕುವೆಂಪುರಾದಿಯಾಗಿ ಲೋಹಿಯಾ, ಲಂಕೇಶ್, ಪೆರಿಯಾರ್, ದೇ. ಜ. ಗೌ, ಜ.ಹೊ. ನಾ, ಸಿ.ಪಿ.ಕೆ, ಭಗವಾನ್ ಮುಂತಾದವರು ನಮ್ಮೆದುರಿಗೆ ನಿಲ್ಲುತ್ತಾರೆ.
     ಅದರಲ್ಲು ಜ.ಹೊ.ನಾ ತಮ್ಮ ಬದುಕಿನ ಬಹುಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ವೈಚಾರಿಕ ಮನೋಧಮರ್ಿಯಾಗಿ ಬಾಳಿದ್ದಾರೆ. ಇವರ ವಿಚಾರ ಲಹರಿಗಳನ್ನು ಅರಿಯಬೇಕಾದರೆ ಇವರ ಕೃತಿಗಳ ಅಧ್ಯಯನ ಮಾಡಲೇಬೇಕು.
      ಒಬ್ಬ ವ್ಯಕ್ತಿಯು ಒಂದು ಮಹಾನ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಅನೇಕ ಚೇತನಗಳ ಸ್ಫೂತರ್ಿ ಆದರ್ಶಗಳು ಸಹಕಾರಿಯಾಗಿರುತ್ತದೆ. ಅಂತಹ ಒಂದು ಸ್ಫೂರ್ತಿ ಕುವೆಂಪುರಾದಿಯಾಗಿ ಅನೇಕರ ಸಹಕಾರ ಜ.ಹೊ.ನಾ ರವರಿಗೆ ಸಿಕ್ಕಿದೆ. ಆದ್ದರಿಂದಲೇ ನಮ್ಮೆದುರಿಗೆ ವೈಚಾರಿಕ ಕ್ರಾಂತಿಯ ಮಹಾನ್ ಶಕ್ತಿಯಾಗಿ ಇವರು ಗೋಚರಿಸುತ್ತಾರೆ. ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ. ಶೋಷಣೆ, ಹಸಿವು, ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಕಂಟಕಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಹರಿತವಾದ ಭಾವಲಹರಿ ಮಿಳಿತಗೊಳಿಸಿದ್ದಾರೆ. ಮಾರ್ಗೋಪಾಯ ಸೂಸಿದ್ದಾರೆ. ಮಾನವತ್ತ್ವದ ನೆಲೆ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
    ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಹಾಸನ ಜಿಲ್ಲಾ ಬಿ.ಜಿ.ವಿ.ಎಸ್. ಸಂಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶರ್ಿಯಾಗಿ, 'ಸಂವೇದನಾ ಕಲಾವಿದರು' ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜ.ಹೊ.ನಾ ನಾಡಿನಾದ್ಯಾಂತ ಪ್ರಖ್ಯಾತರಾದವರು, ಇವರ ಅನೇಕ ಕೃತಿಗಳು ವಿವಿಧ ವಿಶ್ವವಿದ್ಯಾನಿಲಯಗಳಿಂದ, ಕನ್ನಡ ಪ್ರಾಧಿಕಾರಗಳಿಂದ ಪ್ರಕಟಗೊಂಡಿವೆ, ರೈತ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಇವರು ಅನೇಕ ಸಮಾಜ ಪರ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
      ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಗೋಷ್ಠಿ, ಕವಿಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕವಿತೆ ವಾಚಿಸಿದ್ದಾರೆ. ಅದ್ಭುತ ನಟ ಹಾಗೂ ನಾಟಕಕಾರರೂ ಆದ ಇವರು ಸಂಕ್ರಾತಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ 'ಜೇನುಗೂಡು' ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
       ಜಗದ ತೊಟ್ಟಿಲು-ಕವನ ಸಂಕಲನ ; ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು ; ನರಬಲಿ,-ನಾಟಕ, ; ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು ; ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಹೆಚ್.ಎಸ್.ಎಂ. ; ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದ ಜೀವನ ಚರಿತ್ರೆಗಳು ; ಹರ್ಮನ್ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
    ಇವರ 'ವೇದ ಕುರಾನ್ ಆಚೆಗೆ' ಕೃತಿಗೆ ಡಾ|| ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೇ ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯಿಕ ಅಹರ್ನಿಶಿ ಸೇವೆಗಾಗಿ ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆ ಇವರನ್ನಲಂಕರಿಸಿತ್ತು.
     ಮೌಢ್ಯದ ಕಂದಾಚಾರದಲ್ಲಿ ಮುಳುಗಿದ್ದ ಅನೇಕ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತಾ ಯುವ ಬರಗಾರರಿಗೆ ವೈಚಾರಿಕ ತಳಹದಿ ಹಾಕಿಕೊಟ್ಟು ಮಾರ್ಗದರ್ಶನ ನೀಡುತ್ತಿರುವ ಜ.ಹೊ.ನಾ ಕನ್ನಡದ ಪ್ರತಿಭಾನ್ವಿತ ದಿಗ್ಗಜ ಸಾಹಿತ್ಯ ವಲಯದ ಪ್ರಮುಖರು. ನೂರಾರು ಕವಲು ದಾರಿಗಳು ಜ.ಹೊ. ನಾ. ಎಂಬ ಹೆದ್ದಾರಿಯಲ್ಲಿ ಸೇರಬೇಕಿದೆ.

 ಕೊಟ್ರೇಶ್ ಎಸ್.ಉಪ್ಪಾರ್.ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ