ಮಂಗಳವಾರ, ಡಿಸೆಂಬರ್ 9, 2014

‘ಛದ್ಮವೇಷ’ ವೆಂಬ ಕಾವ್ಯ ಪ್ರಪಂಚದೊಳಗೆ


ಕಾವ್ಯ ಒಂದು ಸ್ವಯಂಪೂರ್ಣದರ್ಶನ. ‘ದರ್ಶನ’ ಎಂದಾಕ್ಷಣಾ ಆಧ್ಯಾತ್ಮಿಕತೆಯ ಸಂಕೇತ ಎಂದು ಭಾವಿಸಬೇಕಿಲ್ಲ, ‘ದರ್ಶನ’ ಎಂದರೆ ಕವಿಯ ಅಂತರ್ ಶಕ್ತಿ, ಪ್ರತಿಭೆ, ಆಂತರಿಕ ಸೌಂದರ್ಯ ಎನ್ನಬಹುದು. ಕಾವ್ಯ ನಾವು ಜಗತ್ತನ್ನು ಹೊಸ ರೀತಿಯಲ್ಲಿ ಆಣುವಂತೆ ಮಾಡತ್ತದೆ. ನಮ್ಮ ವಾಸ್ತವಿಕ ಜಗತ್ತನ್ನು ಬಿಡದೆ, ಕನಸಿನ ಲೋಕಕ್ಕೆ ಹಾರದೇ ನಮ್ಮ ಸಂವೇದನೆಗಳನ್ನು ಸೂಕ್ಷ್ಮಗೊಳಿಸಿ ಹೊಸ ಪ್ರಾಪಂಚಿಕ ಅನುಭವವನ್ನು ತಂದೊಡ್ಡುತ್ತದೆ, ಭಾಷೆ, ಪದಗಳ ನಾದ, ಪ್ರತಿಮೆ, ಸಂಕೇತ, ಛಂದಸ್ಸು ಎಲ್ಲಾ ಕೂಡಿ ಕವನದ ಅವತಾರವಾಗುತ್ತದೆ. ಕಾವ್ಯದೊಡಲ ಬಸಿರಲ್ಲಿ ಭಾವನಾತ್ಮಕದ ನವೀನ ಒತ್ತಡ ನೆಲೆಸಿರುತ್ತದೆ.
ಒಂದು ಕಡೆ ಬೇಂದ್ರೆ ಹೀಗೆನ್ನುತ್ತಾರೆ.....
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿನಮರ ಸಾಕ!
ಹೀಗೆ ಕವಿಯು ಕಂಡುಂಡ ಆಕಸ್ಮಿಕ ಅನುಭವಗಳು, ಹೊಸ ಹೊಳಪುಗಳು ಭಾವನೆಯ ಲಯದಲ್ಲಿ ಸಿಲುಕಿ ಕಾವ್ಯವಾಗಿ ಲಿಖಿತಗೊಳ್ಳುತ್ತವೆ.
ಆದ್ದರಿಂದಲೇ ಅಸಗನಿಂದ ಪ್ರಾರಂಭವಾದ ಕಾವ್ಯಾ ಪ್ರಭೆ, ಪಂಪನಿಂದ ಪಕ್ವಗೊಂಡು ರನ್ನ, ಪೊನ್ನ, ನಾಗವರ್ಮ, ಮೂಲಕ ಹೊಳೆದು; ನಯಸೇನ, ನೇಮಿಚಂದ್ರ, ರುದ್ರಭಟ್ಟರ ಮೂಲಕ ಬೆಳೆದು; ಹನ್ನೆರಡನೇ ಶತಮಾನದ ದೇವರ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಸಿದ್ದರಾಮ, ಅಕ್ಕಮಹಾದೇವಿಯರ ಕಾವ್ಯದಲ್ಲಿ ಹೊಸರೂಪತಾಳಿ, ಹರಿಹರ, ರಾಘವಾಂಕ, ಜನ್ನ, ಆಂಡಯ್ಯ, ಕೇಶಿರಾಜರ ಮೂಲಕ ಮಗದೊಂದು ಪ್ರಬೇಧಗಳು ಜನಿಸಿ, ಕುಮಾರವ್ಯಾಸ, ಬೊಮ್ಮರಸ, ನಿಜಗುಣ ಶಿವಯೋಗಿಗಳಿಂದ ಕಾವ್ಯಾ ಪ್ರಖರತೆ ಕಂಡು; ಕನಕದಾಸ, ಪುರಂದರದಾಸ, ರಾಮದಾಸರಿಂದ ಸರಳೀಕರಣಗೊಂಡ; ಭಟ್ಟಾಕಳಂಕ, ಲಕ್ಷ್ಮೀಶ, ಷಡಕ್ಷರದೇವ, ತಿರುಮಲಾರ್ಯ, ಸರ್ವಜ್ಞರಿಂದ ಜನಮನಕ್ಕಿಳಿದು; ಸಂಚಿಹೊನ್ನಮ್ಮ, ಶೃಂಗಾರಮ್ಮ, ಹೆಳವನಕಟ್ಟೆ ಗಿರಿಯಮ್ಮ, ಚೆಲುವಾಂಬೆಯರ ಮೂಲಕ ಮಹಿಳಾ ಹೃದಯದ ಪಡಿಗನ್ನಡಿಯಾಗಿ ಅರಳಿನಿಂತಿದೆ. ಇನ್ನು ಆಧುನಿಕ ಕನ್ನಡ ಸಾಹಿತ್ಯದ ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ ಕಾಲಘಟ್ಟಗಳಲ್ಲಿ ಕಾವ್ಯ ಮಿಂದೆದ್ದು ಬಂದಿದೆ.
ಕಾವ್ಯ ನಿಂತ ನೀರಲ್ಲ ಸದಾ ಹರಿಯುವ ಜಲದಂತೆ ನಿತ್ಯಚಲನ ಶೀಲವಾದುದು. ಇಂತಹ ಕಾವ್ಯ ಕಟ್ಟುವ ನಿಟ್ಟಿನಲ್ಲಿ ಸಾಂದ್ರವಾದ ಅನುಭವವನ್ನು ಸಂಕೀರ್ಣವಾದ ಅಭಿವ್ಯಕ್ತಿಯಲ್ಲಿ ಇಡಿಕಿರಿದ ಅರ್ಥ ಪರಂಪರೆಗಳೊಂದಿಗೆ ಹೇಳುತ್ತಾ ಹೋಗುವ ಗೂಢ ರಚನೆಗಳನ್ನು ಕೊಡುವುದು ಸುಲಭದ ಕೆಲಸವೇನೂ ಅಲ್ಲ. ಇಂತಹ ಕಾವ್ಯ ಪ್ರಭೆ ಮೈಗೂಡಿಸಿಕೊಂಡು ಸೃಜನಾತ್ಮಕ ಕವಿತೆಗಳನ್ನು ಬರೆಯುವಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಎಂ.ಕುಸುಮರವರು ಈ ದಿಶೆಯಲ್ಲಿ ಸಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಇವರ ಎರಡನೇ ಕವನ ಸಂಕಲನವಾದ ‘ಛದ್ಮವೇಷ’ ಕೃತಿಯನ್ನು ನನ್ನ ಕಪಾಟಿನಿಂದ ಓದಲು ಕೈಗೆತ್ತಿಕೊಂಡೆ. ಮೈಸೂರಿನ ರಚನ ಪ್ರಕಾಶನ ಹೊರತಂದಿರುವ ಈ ಕೃತಿಗೆ ವಿಚಾರವಾದಿ ಹಾಗೂ ಗಣ್ಯವಾಗ್ಮಿಗಳಾದ ಡಾ|| ರಾಜಶೇಖರಯ್ಯ ಮಠಪತಿಯವರು ಉಡಿಯಲ್ಲಿದ್ದ ಕಾವ್ಯದ ಕಿಡಿಯನ್ನು ಪ್ರಖರ ಗೊಳಿಸಿ ಹೊಳಪು ನೀಡಿ ಮುನ್ನುಡಿಯ ಮೂಲಕ ಕವಯಿತ್ರಿಗೆ ಪ್ರೋತ್ಸಾಹಿತ ನುಡಿಗಳನಿತ್ತಿದ್ದಾರೆ. ಇಲವಾಲದ ಕಿರಣ್‍ರವರಿಂದ ಮುಖಪುಟ ಸೊಗಸಾಗಿ ಮೂಡಿಬಂದಿದೆ.
‘ಛದ್ಮವೇಷವು’ ‘ದಂಡಯಾತ್ರೆಯಿಂದ’ ‘ತುತ್ತತುದಿ’ದಿಯವರೆಗೆ ಎಪ್ಪತ್ತೈದು ಕವಿತೆಗಳನ್ನು ಗರ್ಭೀಕರಿಸಿಕೊಂಡಿದೆ. ಕೃತಿಯ ಶೀರ್ಷಿಕೆಯೇ ಅರ್ಥೈಸುವಂತೆ ಸಾಮಾಜಿಕ ತುಮುಲಗಳು. ಮುಖವಾಡಗಳು ಸಮಸ್ಯೆಯ ಸುಳಿಗಳು, ವೈರುಧ್ಯಗಳು, ವಿಡಂಬನೆಗಳು, ಭ್ರಷ್ಟಚಾರ ಅನೇಕ ವಿಚಾರಗಳನ್ನು ತೆರೆದಿಡುವಲ್ಲಿ ಸಫಲವಾಗಿದೆ.
ಇವರ ಹಲವಾರು ಕವಿತೆಗಳಲ್ಲಿ ಮೌಢ್ಯದಿಕ್ಕರಿಸಲ್ಪಟ್ಟಿದೆ, ವೈಚಾರಿಕತೆ ಮೊಳೆದಿದೆ ಎನ್ನುವುದಕ್ಕೆ ಈ ಕೆಳಗಿನ ಉದಾಹರಣೆಗಳನ್ನು ಕಾಣಬಹುದು.
ದಿನನಿತ್ಯದ ಪೂಜೆ, ಮಂತ್ರಗಳೆಲ್ಲಾ
ದಿಕ್ಕೆಟ್ಟಿ, ಓಟಕಿತ್ತಾಗ
ಬಟಾಬಯಲಾಗಿ ನಿಂತಿತವನ
ಆಷಾಢಭೂತಿ ತಿಕ್ಕಲುತನ.(ವಿಪರ್ಯಾಸ)
*
ದೇವರ ನೀಲಾಂಜನಕೆ
ಬೆಳ್ಳಿ-ಕವಚ ಹೊದಿಸಿ,
ಮನದ ಅಳುಕ ಮೀರಿದ
‘ಆಧುನಿಕ’ ಜನ. (ಈ ಜನರು)
ಇವರ ಕವಿತೆಗಳಲ್ಲಿ ಜೀವನ ಸಂಪ್ರೀತಿ ಹೆಚ್ಚೆಚ್ಚು ಪಲ್ಲವಿಸಿದೆ. ತಂದೆ, ತಾಯಿ, ಬಂಧು, ಬಳಗ, ಸಂಸಾರ, ಸಮಾಜ ಹೀಗೆ ಸಂಕುಚಿತತೆಯಿಂದ ವಿಶಾಲತೆಯೆಡೆಗೆ ಕವಯಿತ್ರಿಯ ಮನ ತುಡಿತಗೊಳ್ಳುತ್ತಾ ಸಾಗಿದೆ. ಉಳಿ ಏಟಿನಿಂದ ಕಗ್ಗಲ್ಲು ಶಿಲೆಯಾಗಿ ರೂಪುಗೊಂಡಂತೆ ಅನುಭವದ ತಿದಿಯೊತ್ತಿ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಜೀವನ ಪಾಠ ಕಲಿಸುತ್ತದೆ ಎಂಬುದನ್ನು ತಮ್ಮನ್ನೇ ತಾವು..........
ಅಮ್ಮನಾಗದೇ ಅಮ್ಮನನ್ನು 
ಅರ್ಥೈಸಿಕೊಳ್ಳುವುದು
ಅಸಹಜವಲ್ಲವೇ? (ಕೊಂಡಿ)
ಎಂದು ಗೆಳತಿಯ ಪ್ರಶ್ನೆಗೆ ಮರು ಪ್ರಶ್ನಿಸಿ. ಉತ್ತರವಾಗಿಸುತ್ತಾ ಸಾಗುವ ರೀತಿ ಸೋಜಿಗದ ಸೊಗಸು.
ತನ್ನ ಮಗುವಿಗೋಸ್ಕರ ಮಾತೃ ಮಡಿಲಿನ ತ್ಯಾಗ ಅನನ್ಯವಾದುದು. ಹೆತ್ತ ಕರುಳಿನ ಸಂತಸಕ್ಕೋಸ್ಕರ ಎಷ್ಟೆಲ್ಲಾ ಕಷ್ಟ-ಕೋಟಲೆಗಳನ್ನು ಅನುಭವಿಸಿ ಮಗುವಿನ ಒಂದು ಚಿಕ್ಕ ಮುದ್ದಾದ ನಗುವಿನ ಅಲೆಯಲ್ಲಿ ತೇಲಿ ಎಲ್ಲವನ್ನು ಮರೆತು ಬಿಡುತ್ತಾಳೆ. ಅದಕ್ಕಾಗಿಯೇ, ಹಿರಿಯರು ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ್ತ ತಾಯಿಯನ್ನು ಪೂಜಿಸು, ತಾಯಿಗಿಂತ ಬಂಧುವಿಲ್ಲ. ಜನನಿ ತಾನೆ ಮೊದಲ ಗುರು ಎಂದು ಸ್ತುತಿಸಿದ್ದಾರೆ. ಹೀಗೆ ಅವಳ ಹೊರ-ಒಳವುಗಳ ಲೀಲೆ ಅತ್ಯದ್ಭುತವಾದುದು.
ಮುದ್ದು ಮಗು
ಸ್ನಿಗ್ದ ನಗು
ನನ್ನೆಲ್ಲಾ ಒಲವಧಾರೆ
ನಿನ್ನ ಬಾಲಲೀಲೆಗಳಿಗೆ. (ಹಾರೈಕೆ)
‘ಕಿಚ್ಚು’ ಕವಿತೆಯ ಅಂಧಕಾರದೊಳಗಿನ ಬೆಳಕನ್ನು, ನಿದ್ರೆಯೊಳಗಿನ ಎಚ್ಚರವನ್ನು, ಸೋಲಿನಲ್ಲಡಗಿದ ಗೆಲುವನ್ನು ಎನ್ನುವ ಸಾಲುಗಳು ಮರದೊಳಡಗಿದ ಕಿಚ್ಚಿನಂತೆ, ಹಾಲನೊರೆಯೊಳಡಗಿದ ತುಪ್ಪದಂತೆ, ಎಂಬ ಶರಣರ ವಚನದ ಪಂಕ್ತಿಯನ್ನು ನೆನಪಿಸುತ್ತದೆ.
ಛದ್ಮ ಲೋಕವ ಛೇದಿಸುತ್ತಾ..ಎಂಬ ಅವರದೇ ಋಣಭಾರದ ನುಡಿಗಳನ್ನಾಡಿದ ಪುಟಗಳ ಕೊನೆಯಲ್ಲಿ ಸಹೃದಯ ಓದುಗರ ವಿಮರ್ಶೆಗಾಗಿ ಸದಾ ಸ್ವಾಗತ ಎಂದು ಹೇಳುವ ಕವಯಿತ್ರಿ ತಮ್ಮ ಹದಿನೇಳನೇ ಕವಿತೆ ‘ಕೋರಿಕೆ’ ಯಲ್ಲಿ
ಆಚೆ ದಡದಲ್ಲಿ ನಿಂತು
ಎನ್ನ ವಿಮರ್ಶಿಸುವ
ಯಾತ್ರಿಯೇ, ತೀರಾ ಕಟುವಾಗಬೇಡ
ನನ್ನ ಈಜಾಟದ ಮೊದಲ
ಭಂಗಿಗಳಿಗೆ....’
.ಎಂದು ಎಚ್ಚರಿಕೆ ನೀಡುವ ಕವಯಿತ್ರಿ ಮುಂದುವರೆದು ನೆನಪಿರಲಿ ನೀನೂ ಹೀಗೆ ತಿಣುಕಾಡಿ, ಮುಳುಗಿ, ನಂತರವೇ ಕಲಿತೆ ಆ ದಡಕ್ಕೆ ಸರಾಗವಾಗಿ ಸಾಗಿಹೋಗುವುದನ್ನು ಎನ್ನುತ್ತಾ ವಿಮರ್ಶಕನನ್ನು ಪ್ರಾರಂಭಿಕ ಬರವಣೆಗೆಯ ಹಂತಕ್ಕೆ ಕರೆದೊಯ್ದು ಮತ್ತೆ ವಿನಯದಿಂದ....
ನಾನಿನ್ನೂ  ಕಲಿಕೆಯ ಮೊದಲ
ಪಾಠದಲ್ಲಿದ್ದೇನೆ.
ಏಳು-ಬೀಳು ಸಹಜವಲ್ಲವೇನು?
ಎಂದು ಪ್ರಶ್ನಿಸುತ್ತಾ ಪ್ರೋತ್ಸಾಹಿತ ಮೆಚ್ಚುಗೆಯ ಮಾತುಗಳನ್ನು ನಿರೀಕ್ಷಿಸುತ್ತಾರೆ.
ಕಾವ್ಯ ಬದುಕಿನ ಪ್ರತಿಬಿಂಬ, ಬದುಕು-ಸಮಾಜ ಬದಲಾದಂತೆ ಅದೂ ಬದಲಾಗುತ್ತಲೇ ಸಾಗುತ್ತದೆ. ನವ್ಯ ಕಾವ್ಯ ತನ್ನ ಸಂಕೀರ್ಣತೆ ಹಾಗೂ ಕ್ಲಿಷ್ಟತೆಗಳಿಂದಾಗಿ ಜನರಿಂದ ದೂರ ಉಳಿಯುವಂತಾದಾಗ ಇತ್ತ ನವ್ಯವೂ ಅಲ್ಲದ ಅತ್ತ ರಮ್ಯವೂ ಅಲ್ಲದ ಇವೆರಡೂ ಕಾವ್ಯಾಮಾರ್ಗಗಳ ಉತ್ತಮಗುಣಗಳನ್ನು ಒಳಗೊಂಡ ಸಮನ್ವಯ ಮನೋಧರ್ಮದ ಕಾವ್ಯ ಮಾರ್ಗವೊಂದು ಮೂಡಿ ಬಂದಿತು. ಅದೇ ‘ಸಮನ್ವಯ ಕಾವ್ಯ’ ಪ್ರಸ್ತುತ ಕೃತಿಯಲ್ಲಿನ ಬಹುತೇಕ ಕವಿತೆಗಳು ಈ ಸಾಲಿಗೆ ಸೇರುತ್ತವೆ.
‘ಛದ್ಮವೇಷ’ ದಲ್ಲಿ ಕವÀಯಿತ್ರಿ ಬದುಕಿನ ವಾಸ್ತವತೆಗೆ ಮಿಮುಖರಾಗದೆ ನಿಸರ್ಗ ಪ್ರೇಮವನ್ನು ಕೈಬಿಡದೆ ಕ್ಲಿಷ್ಟತೆ, ಸಂಕೀರ್ಣತೆಗಳನ್ನು ತ್ಯಜಿಸಿ ಕಾವ್ಯ ರಚಿಸಿದ್ದಾರೆ. ಇಲ್ಲಿನ ಕವಿತೆಗಳ ಧ್ವನಿ, ಮಾಧುರ್ಯವನ್ನು ನಾಚಿಸುವಷ್ಟು ಗಾಢವೋ ಗಟ್ಟಿಯೋ ಎಂಬ ದ್ವಂದ್ವವನ್ನು ಮುಂದಿಡುತ್ತದೆ. ಇಲ್ಲಿನ ಪ್ರತಿಯೊಂದು ಕವಿತೆಗಳಲ್ಲಿ ಏನೋ ಒಂದು ರೀತಿಯ ದಾವಂತ, ಹಾರಿ ಕುಪ್ಪಳಿಸುವ ಗತಿ, ನಿಂತು, ಕುಳಿತು, ಆನಂದಿಸುವ ವ್ಯವಧಾನದಿಂದ ದೂರವೆನ್ನುವ ಹೊಳವು. ಶಬ್ದಗಳನ್ನು ಎಳೆದೆಳೆದು ರಾಶಿಮಾಡುತ್ತಾ ಬೊಗಸೆಯಲ್ಲಿಟ್ಟು ಚಿಮ್ಮುತ್ತ, ಅವುಗಳೊಂದಿಗೆ ಆಟವಾಡುವ ಕವಯತ್ರಿಯ ಮನೋಧರ್ಮ ಶ್ಮಾಘನೀಯ. ವಸ್ತುವಿನ ಸುತ್ತ ಗಿರಕಿ ಹೊಡೆದು ಶಬ್ಧಗಳು ಸುಸ್ತಾದ ಅನುಭವ ಆಗದೇಯಿರದು. ಎಂ. ಕುಸುಮ ರವರ ಪ್ರಯೋಗಶೀಲ ಮನಸ್ಸು ನವ ನವೀನ ತುಡಿತಗಳೆಡೆ ಮಿಡಿತಗೊಳ್ಳುತ್ತಾ ವಿಜೃಂಭಿಸಲಿ ಎಂದು ಆಶಿಸುತ್ತೇನೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ಮೊ-9483470794

ಸೋಮವಾರ, ನವೆಂಬರ್ 17, 2014

ಗ್ರಂಥಾಲಯ ಚಳವಳಿಯ ಜನಕ ಡಾ.ಎಸ್. ಆರ್. ರಂಗನಾಥನ್ - ಕೊಟ್ರೇಶ್ ಎಸ್.ಉಪ್ಪಾರ್




    ಯಾವುದೇ ಒಂದು ಕ್ಷೇತ್ರ ಸಮಾಜದಲ್ಲಿ ಗಟ್ಟಿಯಾಗಿ ನಿಂತು, ತನ್ನ ನಿರಂತರ ಸೇವೆಯನ್ನು ಸಾರ್ವಜನಿಕರಿಗೆ ಕೊಡಬೇಕೆಂದರೆ, ಅಲ್ಲಿ ಒಂದು ಜೀವಿಯ, ವ್ಯಕ್ತಿಯ ತ್ಯಾಗ, ಪರಿಶ್ರಮ, ಬಲಿದಾನ ಮತ್ತು ನಿಸ್ವಾರ್ಥ ಭಾವಗಳು ಪ್ರಮುಖವಾಗುತ್ತವೆ. ಅದೇ ರೀತಿ ಭಾರತ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಒಂದು ನಿರ್ಧಿಷ್ಠ ರೂಪ ಕೊಟ್ಟು ಇಡಿ ಸಾರಸ್ವತ ಲೋಕಕ್ಕೆ ಅದ್ಭುತ ಕೊಡುಗೆ ನೀಡುವುದರ ಮೂಲಕ ಈ ಕ್ಷೇತ್ರದಲ್ಲಿ ಸದಾ ಧೃವತಾರೆಯಾಗಿ ಪ್ರಜ್ವಲಿಸುತ್ತಿತುವವರು ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಎಂದರೆ ಅತಿಶಯೊಕ್ತಿಯಾಗಲಾರದು.
    ಡಾ. ಎಸ್. ಆರ್ ರಂಗನಾಥನ್ ಕೇವಲ ಗ್ರಂಥಾಲಯ ವಿಜ್ಞಾನ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ, ಗ್ರಂಥಾಲಯ ವಿಜ್ಞಾನವನ್ನು ವೃತ್ತಿಯಾಗಿಸಿಕೊಂಡ ಶಿಕ್ಷಕರಿಗಾಗಲಿ ಇಲ್ಲವೇ ಗ್ರಂಥಪಾಲಕರಿಗೆ ಮಾತ್ರ ಪರಿಚಿತರಲ್ಲ! ಗ್ರಂಥಾಲಯ ಕುರಿತು ಆಸಕ್ತಿಯುಳ್ಳ ಎಲ್ಲರಿಗೂ ರಂಗನಾಥನ್ ಗೊತ್ತು.
     ಸಿಗ್ಮಾಂಡ್ ಫಾಯ್ಡ್ ಮನೋವಿಜ್ಞಾನಕ್ಕೆ ಮತ್ತು ಹೆರೋಡೇಟಸ್ ಇತಿಹಾಸಕ್ಕೆ ಹೇಗೋ ಹಾಗೆಯೇ ರಂಗನಾಥನ್ ಗ್ರಂಥಾಲಯ ವಿಜ್ಞಾನಕ್ಕೆ ಪಿತಾಮಹರು. ಅಲ್ಲದೆ ಇವರನ್ನು ಗ್ರಂಥಾಲಯ ಚಳವಳಿಯ ಜನಕ ಎಂದು ಕರೆದಿರುವುದು ಅವರ ವ್ಯಕ್ತಿತ್ವದ ಘನತೆಗೆ ಹಿಡಿದ ಕನ್ನಡಿಯಾಗಿದೆ.
    ಶಿಯ್ಯಾಳಿ ರಾಮಾಮೃತ ರಂಗನಾಥನ್ ಅವರು 1892 ಆಗಸ್ಟ್ 12 ರಂದು ತಮಿಳುನಾಡಿನ (ಆಗಿನ ಮದ್ರಾಸ್ ರಾಜ್ಯ) ತಾಂಜಾವೂರು ಜಿಲ್ಲೆಯ ಶಿಯ್ಯಾಳಿ ಗ್ರಾಮದ ಶ್ರೀರಾಮಾಮೃತ ಅಯ್ಯರ್ ಮತ್ತು ಶ್ರೀಮತಿ ಸೀತಾಲಕ್ಷ್ಮಿ ದಂಪತಿಗಳ ಪುತ್ರರಾಗಿ ಜನಿಸಿದರು. ದುರಾದೃಷ್ಟ ವಶಾತ್ ರಂಗನಾಥನ್ ಆರು ವರ್ಷ ವಯೋಮಾನದಲ್ಲಿಯೆ ಪಿತೃವಿಯೋಗ ಹೊಂದಬೇಕಾಯಿತು. ನಂತರ ಅಜ್ಜ ಸುಬ್ಬಾ ಅಯ್ಯರ್ ಅವರÀ ಪೋಷಣೆಯಲ್ಲಿ ಬೆಳೆದ ರಂಗನಾಥನ್ ಗಣಿತದಲ್ಲಿ ಇನ್ನಿಲ್ಲದ ಆಸಕ್ತಿ ತಳೆದಿದ್ದರು. ಮುಂದೆ ಗಣಿತದಲ್ಲಿಯೇ ಸ್ನಾತಕೋತ್ತರ ಪದವಿ ಪಡೆದ ಅವರು ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದರು. ಕರ್ನಾಟಕದ ಮಂಗಳೂರಿನಲ್ಲಿ ಉಪನ್ಯ್ಯಾಸಕರಾಗಿ ಕೆಲ ತಿಂಗಳು ಕರ್ತವ್ಯ ಸಲ್ಲಿಸಿದ್ದಾರೆ. ಅರೆಕಾಲಿಕ ಉಪನ್ಯಾಸಕ ವೃತ್ತಿಯ ಪಗಾರದಿಂದ ಬದುಕು ಸಾಗಿಸುವುದು ಕಷ್ಟಕರವೆನಿಸಿದ ಸಂದರ್ಭದಲ್ಲಿ ಬೇರೆ ಉತ್ತಮ ಪಗಾರ ದೊರೆಯುವ ವೃತ್ತಿ ಹುಡುಕುವ ಕಾಲದಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಪೂರ್ಣಕಾಲಿಕ ಗ್ರಂಥಪಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಅಲ್ಲಿನ ಉಪನ್ಯಾಸಕ ಮಿತ್ರರು ಹಾಗೂ ಪ್ರಾಂಶುಪಾಲರಾದ ಮಿ. ಡಂಕನ್ ಅವರು ಅರ್ಜಿ ಸಲ್ಲಿಸಲು ಒತ್ತಾಯಿಸಿದರು. ಇದರ ಫಲವಾಗಿ 1924 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ನೇಮಕಗೊಂಡÀರು. ಬಡತನದಲ್ಲಿದ್ದ ಅವರಿಗೆ ಈ ಹೆಚ್ಚಿನ ಪಗಾರದ ಪೂರ್ಣಕಾಲಿಕ ಹುದ್ದೆ ಆಸರೆಯಾಯಿತು. ಆದರೆ ಕೆಲವೇ ದಿನಗಳಲ್ಲಿ ಆ ವೃತ್ತಿ ರಂಗನಾಥನ್ ಅವರಲ್ಲಿ ಬೇಸರತರಿಸಿತು. ಏಕೆಂದರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಬೊಧನೆಯಲ್ಲಿ ಕಾಲ ಕಳೆಯುತ್ತಾ ಸದಾ ಮಾತುಕತೆಯ ಮಧ್ಯೆ ಇರುತ್ತಿದ್ದ ಅವರಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಕೂತ ಜಾಗದಲ್ಲಿಯೇ ದಿನವಿಡೀ ಒಬ್ಬಂಟಿಯಾಗಿ  ಕುಳಿತುಕೊಳ್ಳುವುದು ಶಿಕ್ಷೆಯಂತೆ ಭಾಸವಾಗುತ್ತದೆ.
  ಪುನ ಕೆಲಸ ತ್ಯಜಿಸಿ ಅದೆ ಅರೆಕಾಲಿಕ ಉಪನ್ಯಾಸ ವೃತ್ತಿ ಮರುಸೇರ್ಪಡೆಗೆಂದು ಬಂದಾಗ ಪ್ರಾಂಶುಪಾಲರಾದ ಮಿ. ಡಂಕನ್ ಅವರು ರಂಗನಾಥನ್ ಅವರಿಗಿದ್ದ ಓದಿನ ಅಭಿರುಚಿ ಹಾಗೂ ಸಂಶೋಧನಾ ಮನೋಭಾವ ಮನಗಂಡು ಪುನಃ ಮನವೊಲಿಸಿ ಹಿಂತಿರುಗಿ ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಕಳಿಸುವಲ್ಲಿ ಸಫಲರಾಗುತ್ತಾರೆ. ಮುಂದೆ ಇಂಗ್ಲೆಂಡ್‍ಗೆ ಗ್ರಂಥಾಲಯ ತರಬೇತಿಗೆಂದು ಹೋಗಿಬಂದ ಮೇಲೆ ಭಾರತೀಯ ಗ್ರಂಥಾಲಯದ ದಿಕ್ಕೆ ಬದಲಾಗುತ್ತದೆ.
    ಮಾಹಿತಿ ತಂತ್ರಜ್ಞಾನ ಇನ್ನು ಕಣ್ಣು ಬಿಡದಿದ್ದ ಸಂದರ್ಭದಲ್ಲಿ ಗ್ರಂಥಾಲಯಗಳನ್ನು ಉತ್ಕøಷ್ಟ ಮಟ್ಟಕ್ಕೇರಿಸಿದ ರಂಗನಾಥನ್ ತಮ್ಮೊಳಗಿನ ದೂರ ದೃಷ್ಟಿತ್ವ ಹಾಗೂ ಅವರ ಅನುಭವದಿಂದ ಗ್ರಂಥಾಲಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಖಾಮುಖಿಯಾಗಿ ನಿಲ್ಲಿಸಿದರು. ಈ ನಾಗಾಲೋಟದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ರಂಗನಾಥನ್ ಅವರ ವಿಚಾರಧಾರೆಗಳು ಗ್ರಂಥಾಲಯ ಬೆಳೆವಣಿಗೆಗೆ ಅತಿ ಅವಶ್ಯಕವಾಗಿರುವುದು ಅವರ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ.
   ಇಂಗ್ಲೆಂಡಿಗೆ ತರಬೇತಿಗೆಂದು ಹೋದ ಸಂದರ್ಭದಲ್ಲಿ ಒಂಬತ್ತು ತಿಂಗಳಲ್ಲಿ ಸುಮಾರು 100 ಗ್ರಂಥಾಲಯಗಳಿಗೆ ಬೇಟಿ ನೀಡಿದ ಅವರು ಅಲ್ಲಿ ಅಳವಡಿಸಿಕೊಂಡಿದ್ದ ನವ ನವೀನ ಸಂಗತಿಗಳನ್ನು ಅರಿತುಕೊಳ್ಳುವರು. ಆಗಲೇ ಅವರು ಭಾರತೀಯ ಹಾಗೂ ಬ್ರಿಟನ್ ಗ್ರಂಥಾಲಯಗಳಲ್ಲಿನ ಸಮಸ್ಯೆಗಳು ಬಗ್ಗೆ ಯೋಚಿಸುತ್ತಾರೆ. ಓದುಗರಿಗೆ ಗ್ರಂಥಾಲಯಗಳು ಕೊಡಮಾಡುವ ಸೇವೆಗಳು, ಅಲ್ಲಿ ಬಳಸಿದ ತಂತ್ರಜ್ಞಾನ, ಅತ್ಯಾಕರ್ಷಕ ಕಟ್ಟಡಗಳು, ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಅಲ್ಲಿನ ಸಿಬ್ಬಂದಿಯ ಸೇವಾ ಮನೋಭಾವ ಈ ಎಲ್ಲಾ ಅಂಶಗಳು ರಂಗನಾಥನ್ ಅವರ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರುತ್ತವೆ.
   ಲಂಡನ್ನಿನಿಂದ ಭಾರತಕ್ಕೆ ಮರಳಿದ ನಂತರ ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ಕಾಯಕ ಭೂಮಿಯನ್ನಾಗಿ ಮಾಡಿಕೊಂಡು, ಹೊಸ ಪ್ರಯೋಗಳನ್ನು ಮಾಡುವುದರ ಮೂಲಕ ಬದಲಾವಣೆಯ ಗಾಳಿ ಬೀಸಲು ಕಾರಣರಾಗುತ್ತಾರೆ. ಹೀಗೆ ಮುಂದಿನ ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯವನ್ನೇ ತಮ್ಮ ಜೀವಿತದ ಉಸಿರಾಗಿಸಿಕೊಂಡು ಕಾಯಕ ಮಾಡಿ ಇಡಿ ಜಗತ್ತೇ ಭಾರತದ ಗ್ರಂಥಾಲಯಗಳ ಕಡೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಇವರದು. ಡಾ. ಎಸ್. ಆರ್. ರಂಗನಾಥನ್ ಅವರು ಗ್ರಂಥಪಾಲಕರಾಗಿ, ಗ್ರಂಥಾಲಯ ವಿಜ್ಞಾನದ ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಮತ್ತು ಸಂಶೋಧಕರಾಗಿ ಕೆಲಸಗಳನ್ನು ಮಾಡಿದ್ದಾರೆ.

ಗ್ರಂಥಾಲಯದ ಐದು ಸೂತ್ರಗಳು

   ವಿದೇಶಿ ಪ್ರವಾಸದಿಂದ ಹಿಂತಿರುಗಿದ ನಂತರ ಭಾರತೀಯ ಗ್ರಂಥಾಲಯಗಳು ಏಕಕಾಲಿಕ ಅಭಿವೃದ್ಧಿಗಾಗಿ, ಗ್ರಂಥಾಲಯ ಉತ್ತಮ ಆಡಳಿತಕ್ಕಾಗಿ ವೈಜ್ಞಾನಿಕ ತಳಹದಿಯನ್ನು ಗಟ್ಟಿಗೊಳಿಸಲು ಡಾ. ಎಸ್. ಆರ್. ರಂಗನಾಥನ್ ಅವರು 1931ರಲ್ಲಿ ರಚಿಸಿದ ಪಂಚ ಸೂತ್ರಗಳು ಸಾರ್ವಕಾಲಿಕ ಮೌಲ್ಯ ಬಿಂಬಿತವಾದಂಥವು.

* ಗ್ರಂಥಗಳು ಉಪಯೋಗಕ್ಕಾಗಿವೆ.
* ಪ್ರತಿಯೊಬ್ಬ ಓದುಗನಿಗೆ ಅವನದೇ ಗ್ರಂಥ.
* ಪ್ರತಿಯೊಂದು ಗ್ರಂಥಕ್ಕೆ ಒಬ್ಬ ಓದುಗ.
* ಓದುಗನ ಸಮಯ ಉಳಿಸಿ.
*    ಗ್ರಂಥಾಲಯ ಬೆಳೆಯುವ ಸಂಸ್ಥೆ

    ಗ್ರಂಥಾಲಯ ಎಂಬುದು ಶಿಕ್ಷಣ ಸಂಸ್ಥೆಯ ಮೆದುಳಿನಂತೆ, ಪುಸ್ತಕಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಗೆ ಯಾವುದೇ ವಿಷಯಗಳಿಗೆ ನಾವು ಗ್ರಂಥಾಲಯವನ್ನೆ ಅವಲಂಬಿಸುತ್ತೇವೆ. ಈ ಹಿಂದೆ ಗ್ರಂಥಾಲಯಗಳಲ್ಲಿ ಹೊತ್ತಿಗೆಗಳನ್ನು ಹುಡುಕಲು, ಅವುಗಳನ್ನು ಸಂರಕ್ಷಿಸಲು ಕಷ್ಟಪಡಬೇಕಾದ ಕಾಲಘಟ್ಟದಲ್ಲಿ ರಂಗನಾಥನ್ ಅವರು ಮಾಡಿದ ಪರಿವರ್ತನೆ ಅವಿಸ್ಮರಣೀಯವಾದುದು. ಆದ್ದರಿಂದಲೇ ನಾವಿಂದು ಅವರನ್ನು ಸದಾ ನೆನಪಿಸುತ್ತ್ತಿದ್ದೇವೆ. ಆದರೆ ಇಂದು ಗ್ರಂಥಾಲಯಗಳು ಬದಲಾಗಿವೆ. ಗ್ರಂಥಪಾಲಕರಿಗೆ ಕಂಪ್ಯೂಟರಿನಿಂದ ಸುಲಭವಾಗಿ ಪುಸ್ತಕಗಳ ಪಟ್ಟಿ ಮಾಡಬಹುದಾಗಿದೆ. ಅಯವ್ಯಯ, ವಿಲೇವಾರಿಗಳನ್ನು ಸರಳವಾಗಿ ಮಾಡಬಹುದು. ಇದಕ್ಕೆಲ್ಲ ಸ್ಫೂರ್ತಿಯ ಚಿಲುಮೆ ಡಾ. ಎಸ್. ಆರ್. ರಂಗನಾಥನ್ ಅವರು.
     1984 ರಲ್ಲಿ ಬೆಂಗಳೂರಿನ ಡಿ. ಆರ್. ಓ.ಸಿ.ಗೆ ರಂಗನಾಥನ್ ಕುರಿತು ಉಪನ್ಯಾಸ ನೀಡಲು ಬಂದ ಅಮೇರಿಕಾದ ಮಾಹಿತಿ ವಿಜ್ಞಾನಿ ಯುಜೀನ್ ಗೆರ್ಫಿಲ್ಟ್ ಹೀಗೆ ಹೇಳುತ್ತಾರೆ. “ರಂಗನಾಥನ್ ಭಾರತ ಮಾತ್ರವಲ್ಲ ಇಡೀ ಜಗತ್ತಿನ ಚಿತ್ರಣವನ್ನೇ ಬದಲಿಸಿದ ಸಾಧಕ. ತಮ್ಮ ಬದುಕಿನ ಕೊನೆಯ ದಿನದವರೆಗೂ ಗ್ರಂಥಾಲಯಗಳ ಬೆಳವಣಿಗೆಯನ್ನು ಕುರಿತು ಚಿಂತಿಸಿದ ಚಿಂತಕ. ವೃತ್ತಿ ಬದುಕಿನಲ್ಲಿ ದುಡಿದು ಗಳಿಸದ್ದೆಲ್ಲವನ್ನು ಗ್ರಂಥಾಲಯಗಳ ಪ್ರಗತಿಗಾಗಿ ವಿನಿಯೋಗಿಸಿದ ದಾರ್ಶನಿಕ. ಅದಕ್ಕೆಂದೇ ಅವರು ಗ್ರಂಥಾಲಯ ವಿಜ್ಞಾನಿ ಮಾತ್ರವಲ್ಲ, ಅವರೊಬ್ಬ ಯೋಗಿ, ಸಂತ, ದಾರ್ಶನಿಕನಾಗಿ ನನಗೆ ಕಾಣುತ್ತಾರೆ. ನಾಲ್ಕುವರೆ ದಶಕಗಳ ಕಾಲ ಗ್ರಂಥಾಲಯಗಳಲ್ಲಿ ಬರಿಗಾಲಿನಲ್ಲಿ ನಡೆದಾಡಿದ ಈ ಸಾಧಕ ತನ್ನ ಹೆಜ್ಜೆ ಗುರುತನ್ನು ಅಜರಾಮರಗೊಳಿಸಿದವರು. ಈ ಮಾತಿನಲ್ಲಿ ಯಾವ ಒಣ ಹೊಗಳಿಕೆಯಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇಲ್ಲ. ಜನರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಕ್ಷೇತ್ರವನ್ನು ರಂಗನಾಥನ್ ತಮ್ಮ ಸೇವಾ ಮನೋಭಾವ ಮತ್ತು ಸಂಶೋಧನಾತ್ಮಕ ಗುಣದಿಂದ ಸಮಾಜದ ಮೂಖ್ಯವಾಹಿನಿಗೆ ತಂದು ನಿಲ್ಲಿಸಿದರು. ಜನ ಸಾಮಾನ್ಯರಿಗೂ ಪುಸ್ತಕಗಳು ಉಚಿತವಾಗಿ ದೊರೆಯುವಂತೆ ಮಾಡಿ ಆ ಮೂಲಕ ಸ್ವಾಸ್ತ್ಯ ಮತ್ತು ಸಾಂಸ್ಕøತಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದರು ದುಡಿದು ಗಳಿಸದ್ದೆಲ್ಲವನ್ನು ಸಮಾಜಕ್ಕೆ ಅರ್ಪಿಸಿದ ಅವರ ಸರಳ ಬದುಕು ಮತ್ತು ಸಾಮಾಜಿಕ ಕಾಳಜಿಯ ಗುಣ ನಂತರದ ಪೀಳಿಗೆಗೆ ದಾರಿ ದೀಪವಾಯಿತು.
 
 ಪ್ರಶಸ್ತಿ, ಗೌರವಗಳು:

ಗ್ರಂಥಾಲಯಗಳ ಪ್ರಗತಿ ಸಾಧಕ ಜ್ಯೋತಿಯಾದ ಡಾ. ಎಸ್. ಆರ್. ರಂಗನಾಥನ್ ಅವರ ಅದ್ಭುತ ಸಾಧನೆಗೆ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಗ್ರಂಥಾಲಯ ವಿಜ್ಞಾನದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಎಂದು ಮನ್ನಣೆ. 1948-1953ರ ವರೆಗೆ ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷರಾಗಿದ್ದರು. 1992ರಲ್ಲಿ ರಂಗನಾಥನ್ ಕುರಿತ 'ರಂಗನಾಥನ್ ಸಂಸ್ಮರಣ' ಎಂಬ ಬೃಹತ್ ಗ್ರಂಥ ಬಿಡುಗಡೆಗೊಂಡಿದೆ.
     ಗ್ರಂಥ ಭಂಡಾರಗಳು ಜ್ಞಾನದ ದೇಗುಲವಿದ್ದಂತೆ, ಅವು ನಮ್ಮ ಜ್ಞಾನಕ್ಕೆ ಪ್ರೇರಕ ಶಕ್ತಿಗಳು. ಪ್ರತಿಯೊಬ್ಬರ ಬದುಕಿನ ಬೆಳಕಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಪ್ರತಿಯೊಬ್ಬರೂ ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಒಂದಿಲ್ಲೊಂದು ಗ್ರಂಥಕ್ಕೆ ಮೊರೆ ಹೊಗುತ್ತಾರೆ. ಗ್ರಂಥಾಲಯಗಳು ಅಥವಾ ಗ್ರಂಥ ಭಂಡಾರಗಳು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪ್ರಸಾರ ಮಾಡುವ ವಾಹಕಗಳಿದ್ದಂತೆ. ಇವುಗಳೆಲ್ಲವುಗಳಿಗೆ ಒಂದು ಶೋಭೆ ತಂದು ಕೊಡುವುದರ ಮೂಲಕ, ಮೌಲ್ಯ ವರ್ಧಿಸಿದ ಕೀರ್ತಿ ರಂಗನಾಥನ್ ಅವರದು. ತಮ್ಮ ಜೀವಿತದ ಬಹುಪಾಲು ಕಾಲವನ್ನು ಗ್ರಂಥಾಲಕ್ಕಾಗಿಯೇ ಮೀಸಲಿರಿಸಿದ್ದ ಈ ದಿವ್ಯ ಚೇತನ 1972 ರಲ್ಲಿ ದೈಹಿಕವಾಗಿ ದೂರವಾಯಿತು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197

ಬಹುಭಾಷಾ ಪ್ರಾಜ್ಞರು ಆರ್. ಶಾಮಾಶಾಸ್ತ್ರಿ -ಕೊಟ್ರೇಶ್ ಎಸ್.ಉಪ್ಪಾರ್



    ಹಾಸನ ಸಾಹಿತ್ಯ, ಸಂಗೀತ, ಜ್ಯೋತಿಷ್ಯ, ರಂಗಭೂಮಿ, ಹಾಗೆಯೇ ರಾಜಕೀಯ ಕ್ಷೇತ್ರಕ್ಕೂ ಗಣ್ಯಾತಿಗಣ್ಯರನ್ನು ನೀಡಿದ ಜಿಲ್ಲೆ. ಸಾಹಿತ್ಯ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಸಾಕಷ್ಟು ಕಾಯಕ ಮಾಡಿದ ಆರ್. ಶಾಮಾಶಾಸ್ತ್ರಿಗಳು ಬಹುಬಾಷಾ ಪಂಡಿತರಾಗಿದ್ದರು.
      ಕನ್ನಡ, ಇಂಗ್ಲೀಷ್, ಸಂಸ್ಕøತ ಭಾಷೆಗಳ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಳವಾದ ಜ್ಞಾನ ಸಂಪಾದಿಸಿ ಜ್ಞಾನ ಕಣಜವಾಗಿದ್ದ ಶಾಮಾಶಾಸ್ತ್ರಿಗಳು 1868 ಜನವರಿ 12 ರಂದು ಹಾಸನ ಸಮೀಪದ ರುದ್ರಪಟ್ಟಣದಲ್ಲಿ ಜನಿಸಿದವರು. ಬಾಲ್ಯದಲ್ಲಿ ಪಿತೃವಿಯೋಗ ಹೊಂದಿದ ಅವರು ಸ್ವ-ಪ್ರಯತ್ನ ಶ್ರದ್ಧೆಗಳಿಂದ ಹಂತ - ಹಂತವಾಗಿ ಬೆಳೆದವರು.
      ಮೈಸೂರು ಸಂಸ್ಕøತ ಕಾಲೇಜಿನಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಇವರು ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರ ಗಮನ ಸೆಳೆದರು. ಇವರ ಪಾಂಡಿತ್ಯವನ್ನು ಮೆಚ್ಚಿಕೊಂಡ ಅಯ್ಯರ್ ಅವರು ಶಾಮಾಶಾಸ್ತ್ರಿಗಳನ್ನು ತಮ್ಮ ಮನೆಯಲ್ಲಿ ಉಳಿದು ಕೊಳ್ಳಲು ಹೇಳಿ, ಊಟ-  ವಸತಿಗಳಿಗೆ ಏರ್ಪಾಟು ಮಾಡಿ ಇಂಗ್ಲೀಷ್ ಕಲಿಯಲು ಪ್ರೇರೇಪಿಸಿದರು.
       ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್, ಸಂಸ್ಕøತದ ಜೊತೆಗೆ ಭೌತಶಾಸ್ತ್ರವನ್ನು ಕಲಿತ ಶಾಮಾಶಾಸ್ತ್ರಿಗಳು ಮುಂದೆ ಮದರಾಸು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದರು. ಓದಿನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಇವರಿಗೆ 1918ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ಉದ್ಯೋಗ ದೊರಕಿತು. ಈ ಕಾಲಘಟ್ಟವೇ ಶಾಮಾಶಾಸ್ತ್ರಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ತರಲು ಕಾರಣವಾಗಿದ್ದು ಎನ್ನಬಹುದು ಏಕೆಂದರೆ ಅಲ್ಲಿ ನೂರಾರು ಅಳಿವಿನಂಚಿನಲ್ಲಿದ್ದ ಹಸ್ತಪ್ರತಿಗಳನ್ನು ಸಿದ್ಧಗೊಳಿಸಬೇಕಾಗಿತ್ತು. ಅದೇ ಸಮಯದಲ್ಲಿ ದೊರೆತ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪರಿಷ್ಕರಿಸಿ ಅದನ್ನು ಸಂಸ್ಕøತ ವiತ್ತು ಇಂಗ್ಲೀಷಿನಲ್ಲಿ ಪ್ರಕಟಿಸಿದ ಕೀರ್ತಿ ಆರ್. ಶಾಮಾಶಾಸ್ತ್ರಿಗಳದ್ದು. ಅವರು ಪ್ರಾಚ್ಯ ಪುಸ್ತಕ ಇಲಾಖೆಗೆ ಬರುವ ಮುನ್ನವೆ ಅಂದರೆ 1912 ರಿಂದ 1918ರ ವರೆಗೆ ಬೆಂಗಳೂರಿನ ಸಂಸ್ಕøತ ಮಹಾಪಾಠ ಶಾಲೆಯ ಅಧ್ಯಕ್ಷರಾಗಿ ಸಂಸ್ಕøತದ ಭಾಷಾವೃದ್ಧಿ, ಸಾಹಿತ್ಯ ಅಭಿವೃದ್ಧಿಗಾಗಿ ದುಡಿದಿದ್ದರು. ಸಂಸ್ಕøತದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಅವರಿಗೆ ಆಂಗ್ಲ ಭಾಷೆಯ ಕಲಿಕೆಯೂ ವರವಾಗಿ ಪರಿಣಮಿಸಿತು. ಕನ್ನಡ ಮಾತೃಭಾಷೆಯಾಗಿದ್ದರಿಂದ ತ್ರಿಭಾಷಾ ಪಂಡಿತರಾಗಿ ಶಾಮಾಶಾಸ್ತ್ರಿಗಳು ನಮ್ಮೆದುರಿಗೆ  ನಿಲ್ಲುತ್ತಾರೆ.
    1918ರಲ್ಲಿ ಮೈಸೂರಿನ ಪ್ರಾಚ್ಯಾ ಪುಸ್ತಕ ಕ್ಯೂರೇಟರ್ ಆಗಿ ನೇಮಕಗೊಂಡಿದ್ದ ಅವರು 1922ರಲ್ಲಿ ಪ್ರಾಚ್ಯ ಸಂಶೋಧನಾ ಇಲಾಖೆಯ ನಿರ್ದೇಶಕರಾದರು. 1918-1922ರ ಅವಧಿಯಲ್ಲಿ ಅಳಿವಿನಂಚಿನಲ್ಲಿದ್ದ ಅನೇಕ ಸಂಸ್ಕøತ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದ ಕೀರ್ತಿ ಇವರದು.
     ಬ್ರಹ್ಮಸೂತ್ರ ಭಾಷ್ಯ, ಬೋಧಾಯನ ಗೃಹಸೂತ್ರ, ಸ್ಮøತಿ ಚಂದ್ರಿಕಾ, ತೈತ್ತರೀಯ ಬ್ರಾಹ್ಮಣ, ತೈತ್ತರೀಯ ಬ್ರಾಹ್ಮಣ (ಅಷ್ಟಕ) ಭಾಗ -2, ಭಟ್ಟ ಭಾಸ್ಕರ ಮತ್ತು ಸಾಲಿನ ಭಾಷ್ಯಗಳೊಡನೆ ಅಲಂಕಾರ ಭಾಗ, ಮಣಿಹಾರ ಭಾಗ  2, ಬ್ರಹ್ಮಸೂತ್ರ ಭಾಷ್ಯ (ಆನಂದತೀರ್ಥರು) ತಾತ್ಪರ್ಯಚಂದ್ರಿಕೆಯೊಡನೆ ಭಾಗ-4, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪದಸೂಚಿ, ಸರಸ್ವತಿ ವಿಲಾಸ ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಅದೇ ರೀತಿ ಸಂಸ್ಕøತ ಮಾತ್ರವಲ್ಲದೆ ಅಳಿವಿನಂಚಿನಲ್ಲಿದ್ದ ಕನ್ನಡದ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪನ್ನು ತಂದ ಕೀರ್ತಿ ಶಾಮಾಶಾಸ್ತ್ರಿಗಳದ್ದು.
      ರುದ್ರಭಟ್ಟನ ಜಗನ್ನಾಥ ವಿಜಯ, ಕಂಠೀರವ ನರಸರಾಜ ವಿಜಯ, ಕುಮಾರವ್ಯಾಸನ ಮಹಾಭಾರತ (ವಿರಾಟ ಪರ್ವ), ಲಿಂಗಣ್ಣನ ಕೆಳದಿಯ ನೃಪವಿಜಯ, ಸೋಮನಾಥನ ಅಕ್ರೂರ ಚರಿತೆ, ಕುಮಾರವ್ಯಾಸ ಮಹಾಭಾರತದ ಉದ್ಯೋಗ ಪರ್ವ, ಸೋಮರಾಜನ ಉದ್ಭಟ ಕಾವ್ಯ, ನಯಸೇನನ ಧರ್ಮಾಮೃತ ಭಾಗ -1, ನಯಸೇನನ ಧರ್ಮಾಮೃತ ಭಾಗ-2 ಹೀಗೆ ಹತ್ತಾರು ಶ್ರೇಷ್ಠ ಕೃತಿಗಳನ್ನು ಬೆಳಕಿಗೆ ತಂದಿದ್ದಾರೆ.
     ಮೈಸೂರಿನ ಮಹಾರಾಜ ಸಂಸ್ಕøತ ಮಹಾ ಪಾಠ ಶಾಲೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಇವರು ಸಂಸ್ಕøತ ಭಾಷಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಯಶಸ್ವಿಯಾದವರು. ಹಾಗೆಯೇ ಸಂಸ್ಕøತ ವಿದ್ವತ್ಪರೀಕ್ಷಾ ಮಹಾಸಭೆಯ ಸದಸ್ಯರಾಗಿ ಕಾರ್ಯಮಾಡಿ ಸಂಸ್ಕøತ ಭಾಷಾ ವ್ಯಾಸಂಗದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಹಲವಾರು ಸಮಿತಿಗಳೊಂದಿಗೆ ನಿಕಟ ಸಂಪರ್ಕಹೊಂದಿದ್ದ ಇವರು ಬಹುಭಾಷಾ ಪಂಡಿತರಾಗಿದ್ದರು.
     ಸಂಸ್ಕøತ ಭಾಷೆಯ ಅಭಿವೃದ್ಧಿಗಾಗಿ 'ಆರ್ಯ ಧರ್ಮೋಜೀವಿನಿ ಸಭಾ' ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿಯೂ ಧಕ್ಷತೆಯಿಂದ ಕಾರ್ಯನಿರ್ವಹಿಸಿದ ಕೀರ್ತಿ ಶಾಮಾಶಾಸ್ತ್ರಿಗಳದ್ದು.
      ಶಾಮಾ ಶಾಸ್ತ್ರಿಗಳು ಭಾಷಾಭಿವೃದ್ಧಿಗಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಮನಗಂಡ ಅಮೇರಿಕದ ವಾಷಿಂಗ್‍ಟನ್ ವಿಶ್ವವಿದ್ಯಾಲಯಕ್ಕೆ ಸೇರಿದ ಓರಿಯಂಟಲ್ ಯೂನಿವರ್ಸಿಟಿಯ ಫಿಲಾಸಫಿಕಲ್ ಎಂಬ ಸಂಸ್ಥೆ 1919 ರಲ್ಲಿ ಪಿ.ಎಚ್.ಡಿ. ಪದವಿ ಕೊಟ್ಟು ಗೌರವಿಸಿದೆ. 1921ರಲ್ಲಿ ಮುಂಬೈನ ರಾಯಲ್ ಏಷಿಯಾಟಿಕ್ ಸೊಸೈಟಿ ಯುಕಾಂಪ್‍ಬೆಲ್ ಸ್ಮಾರಕ ಚಿನ್ನದ ಪದಕ ಕೊಟ್ಟು ಗೌರವಿಸಿದೆ. 1921ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯವು ಡಾಕ್ಟರ್ ಫಿಲಾಸಫಿ ಪದವಿ ನೀಡಿ ಗೌರವಿಸಿದೆ.
     ಮೈಸೂರು ಮಹಾರಾಜರಿಂದ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಪಡೆದ ಶಾಮಾಶಾಸ್ತ್ರಿಗಳಿಗೆ ಆಗಿನ ಬ್ರಿಟೀಷ್ ಸರಕಾರ ಮಹಾಮಹೋಪದ್ಯಾಯ ಪ್ರಶಸ್ತಿ ನೀಡಿತು. ಹಾಗೆಯೇ ಕಾಶಿಯ ಭಾರತ ಧರ್ಮ ಮಹಾಮಂಡಲದಿಂದ ವಿದ್ಯಾಲಂಕಾರ ಬಿರುದು, ಪಂಡಿತ ರಾಜ ಬಿರುದು ಪಡೆದ ಇವರು ಇವುಗಳಲ್ಲದೇ ಅನೇಕ ಗೌರವ, ಪ್ರಶಸ್ತಿ, ಪುರಸ್ಕಾರ, ಬಿರುದು, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
    ಬಹುಭಾಷಾ ಪ್ರಾಬಲ್ಯರಾಗಿ ಸಾಹಿತ್ಯ ಕೀರ್ತಿ ಸಂಪಾದಿಸಿದ್ದ ಆರ್. ಶಾಮಾಶಾಸ್ತ್ರಿಗಳು 1944 ಜನವರಿ 23ರಂದು ಇಹಲೋಕ ತ್ಯಜಿಸಿದರು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197

ಪಡೆಸೂರರ ‘ಭಾವದೇಹ’ ದೂಳಗೊಂದು ಸುತ್ತು -ಕೊಟ್ರೇಶ್. ಎಸ್ ಉಪ್ಪಾರ್,


     ಪ್ರೌಡಶಾಲಾ ಮುಖ್ಯಸ್ಥರಾಗಿ, ಕವಿಯಾಗಿ, ಗದ್ಯ ಲೇಖಕರಾಗಿ, ಆಕಾಶವಾಣಿ ಚಿಂತನಕಾರÀರಾಗಿ, ನಾಟಕಕಾರರಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಚಾಲಾಕಿತನದ ಸಂಘಟಕರಾಗಿ, ಶೈಕ್ಷಣಿಕ ಆಡಳಿತಗಾರರಾಗಿ ಈಗಾಗಲೇ ಪರಿಚಿತರಾಗಿರುವ ಚಂದ್ರಕಾಂತ ಪಡೆಸೂರರವರು ‘ಭಾವದೇಹ’ ಎಂಬ ಕವನ ಸಂಕಲನದ ಮೂಲಕ ಎದುರಾಗಿದ್ದಾರೆ. ಸೂಕ್ಷ್ಮ ಸಂವೇದನೆಯ ಬರಹಗಾರರಾದ ಇವರು ಸಮಾಜದ ಎಲ್ಲಾ ತವಕ, ತಲ್ಲಣ, ಆತಂಕಗಳನ್ನು ಜೈವಿಕ ಪ್ರೀತಿಯ ಎಳೆಗಳನ್ನು ಗೇಯತೆಯ, ಛಂದಸ್ಸುಗಳಲ್ಲಿ ಸುಂದರವಾಗಿ ಕಟ್ಟಿಕೊಟ್ಟಿರುವುದು ಆಪ್ಯಯಮಾನವಾದುದು. ಸಾಮಾಜಿಕ ಮೌಡ್ಯತೆ, ಬದುಕಿನ ವಿರೋಧಾಬಾಸಗಳು ಇವರ ಕವಿತೆಗಳಲ್ಲಿ ಅಲ್ಲಲ್ಲಿ ಮೇಳೈಸಿವೆ.
   ಪ್ರಸ್ತುತ ಪ್ರಾಪಂಚಿಕ ಮೌಲ್ಯಗಳು, ದಮನಿತರ ವ್ಯಥೆಗಳು, ಅಜ್ಞಾನದ ಅಟ್ಟಹಾಸಗಳು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತಿಬಿಂಬಿತವಾಗಿರುವುದು ಸ್ತುತ್ಯಾರ್ಹ. ಈ ಕವಿತೆಗಳ ಸಂಕಲನದಲ್ಲಿ ಪ್ರತಿಯೊಂದು ಕವನವನ್ನು ಓದುತ್ತಾ ಹೋದಂತೆಲ್ಲಾ ರಸಾನಂದದ ಆಳಕ್ಕೆ ಇಳಿಯುತ್ತಾ ರಸ ಸ್ವಾದದ ಮಧುರತೆಯನ್ನು ಹೆಚ್ಚು ಹೆಚ್ಚು ಕಂಡುಕೊಳ್ಳುತ್ತಾ ಹೋಗಬಹುದು.
    ಕನ್ನಡದ  ಪೂಜಾರಿಯೆಂದೇ ಮನೆ ಮಾತಾಗಿರುವ ಹಿರೇಮಗಳೂರು ಕಣ್ಣನ್ ಅವರ ಮುನ್ನುಡಿಯ ತೋರಣ ಪ್ರತಿಯೊಬ್ಬ ಕವಿಯು ಸವಿಯಬೇಕಾದ, ಮನನ ಮಾಡಿಕೊಳ್ಳಬೇಕಾದ ರಸಪಾಕ. ನಿಜವಾದ ಕಾವ್ಯ ಮಿಡಿತ, ಹಿಡಿತ ಹೇಗಿರಬೇಕು ? ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ವಿವರಿಸಿದ್ದಾರೆ.
   ‘ಪ್ರಾರ್ಥನೆ’ಯಿಂದ ಆರಂಭಗೊಂಡು ‘ಕೆಂಡ ಕೋಳಿ’ ಕವಿತೆವರೆಗಿನ ಐವತ್ತು ಉತ್ತಮೋತ್ತಮ ಕಾವ್ಯ ಹಂದರಗಳನ್ನೊಳಗೊಂಡ ‘ಭಾವದೇಹ’ ಕೃತಿಯು ಎಂಬತ್ತು ಪುಟಗಳನ್ನೊಳಗೊಂಡಂತೆ ಸುಂದರವಾಗಿ ಮೂಡಿಬಂದಿದೆ. ಐವತ್ತೈದು ರೂಪಾಯಿ ಮುಖ ಬೆಲೆಯ ಈ ಕಾವ್ಯ ಸಂಕಲನ 2013ರಲ್ಲಿ ಪ್ರಥಮ ಮುದ್ರಣಗೊಂಡಿದೆ.

ಜಾತಿ ಮತಗಳ ಬೆಂಕಿ ಹೊತ್ತಿಹುದು ನರನೊಳಗೆ
ನುಡಿ-ಗಡಿಯ ಧಗೆ ತಾ ದಹಿಸುತಿದೆ ಎದೆಯೊಳಗೆ
ಮನೆ ಹತ್ತಿ ಉರಿಯುತಿದೆ, ಮನ ಮುರಿದು ಬೀಳುತಿದೆ
ಭಾವೈಕ್ಯದಲ್ಲಿ ಬೆಸೆದು ಕಾಪಾಡು ತಾಯೆ…..[ ಪ್ರಾರ್ಥನೆ]

    ಕೇವಲ ಭಾರತವಷ್ಟೇ ಅಲ್ಲ, ಇಡಿ ಪ್ರಪಂಚವೆ ಮತಾಂಧತೆಯಲ್ಲಿ ಮುಳುಗಿಹೋಗಿದೆ, ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿಗಳೆಂಬ ಮನೋಭಾವಗಳು ಕಾರತೊಡಗಿವೆ. ಅಸಮಾನತೆಯ ಗೂಡುಸೇರಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಅಟ್ಟಹಾಸದ ಮನೆಯಲಿ ವೈಷಮ್ಯ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ಕವಿಯಿಲ್ಲಿ ಹೀಗಾಗದಂತೆ, ನುಡಿ-ಗಡಿಗಳ ನಿತ್ಯ ಸಂಘರ್ಷಗಳಲ್ಲಿ ನರ ತನ್ನನ್ನೇ ಬಲಿಕೊಟ್ಟು, ದಹಿಸಿಕೊಳ್ಳುತ್ತಿದ್ದಾನೆ. ಇಂಥವರಿಗೆ ಸನ್ಮತಿ ನೀಡಿ, ಭಾವೈಕ್ಯತೆಯ ಬೆಸೆದು ಈ ಜಗವ ಕಾಪಾಡು ತಾಯೆ ಎಂದು ಪಾಕೃತಿಕ ಶಕ್ತಿಯಲ್ಲಿ ಮೊರೆಯಿಟ್ಟಿದ್ದಾರೆ.

ಮೋಡದಾನೆಯ ಏರಿ ಚಂದಿರ
ಆಡುತಿರುವನು ನೋಡು ಬಾ|
ನಾಡ ಚಿಂತೆಯ ಮರೆತು ಜೀವವೆ
ಕೂಡಿ ಅವನ ಆಡು ಬಾ [ತಂಪು ಚಂದಿರ]

    ಕವಿಯ ಭಾವಕ್ಕೆ ಪ್ರತಿಯೊಂದು ವಸ್ತುವು ವೈವಿಧ್ಯಮಯವಾಗಿ ಕಾಣುತ್ತದೆ. ಚಂದಿರನ ವರ್ಣನೆ ಮಾಡುವಾಗ ಮೋಡವನ್ನೆ ಆನೆಗೆ ಹೋಲಿಸಿ, ಅದರ ಮೇಲೇರಿ ಚಂದಿರ ಸವಾರಿ ಬಂದಿದ್ದಾನೆ. ಐಹಿಕ ಜಂಜಾಟಗಳ ತೊರೆದು ಆ ಸೌಂದರ್ಯ ಕಣ್ತುಂಬಿಕೋ, ಆನಂದಿಸು ಬಾ ಎಂದು ಕವಿ ಕರೆಕೊಡುವುದರೊಂದಿಗೆ ಪ್ರಾಕೃತಿಕ ಚೆಲುವಿಗೆ ಹೊಸ ಮೆರಗನ್ನು ಕೊಟ್ಟಿದ್ದಾರೆ.

ಬಾನಿನ ಬಯಲಾಗ ಕೂಡ್ಯಾವ ಮೋಡ
ಓ ಗೆಳೆಯ ನೀ ಒಮ್ಮೆ ಹೊರ ಬಂದು ನೋಡ
ಬಿಡಿಸ್ಯಾವ ತರತರದ ಚಿತ್ತಾರ ಮೋಡ
ಅದ ನೋಡಿ ಎದಿಯಾಗ ಮೂಡ್ಯಾವ ಹಾಡ [ಮಳೆಗಾಲ]

    ಈ ಕವಿತೆಯ ಸಾಲುಗಳನ್ನು ಓದಿದೊಡನೆ ಥಟ್ಟಂತಹ ನೆನಪಾಗುವುದು ಕನ್ನಡದ ವರಕವಿ ದ. ರಾ. ಬೇಂದ್ರೆಯವರು. ಅವರ ಶೈಲಿಯನ್ನು ನೆನಪಿಸುತ್ತದೆ. ಬೇಂದ್ರೆಯವರ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿ ಅವರ ಪ್ರಭಾವಕೊಳಗಾಗಿರುವ ಪಡೆಸೂರರ ಅನೇಕ ಕವಿತೆಗಳಲ್ಲಿ ಬೇಂದ್ರೆ ಛಾಪನ್ನು ರಿಂಗಣಿಸಿದ್ದಾರೆ. ಮೋಡಗಳು ತಿಳಿಬಾನಿನಲ್ಲಿ  ತೇಲಿ ತೇಲಿ ಹೋಗುವಾಗ ಒಂದೊಂದು ಆಕಾರವಾಗಿ ಕಾಡುತ್ತವೆ. ಬೆಳ್ಳಕ್ಕಿಯ ಸಾಲಿನಂತೆ, ಕಾಡಿನಂತೆ, ಪಶು-ಪಕ್ಷಿಗಳಂತೆ ಇನ್ಯಾವುದೋ ರೀತಿಯಲ್ಲಿ ಕಂಡದ್ದನ್ನು ಕವಿಗಳು ತಮ್ಮ ಭಾವಗುಚ್ಛದೊಂದಿಗೆ ಕವಿತೆ ರೂಪದಲ್ಲಿ ಸೂಸುತ್ತಾರೆ.
    ಪ್ರಸ್ತುತ ಪದ್ಯದಲ್ಲಿ ಪಡೆಸೂರರು ಬಾನೆಂಬ  ಬಯಲಿನಲ್ಲಿ ಮೋಡ ಮೊಡಗಳು ಕೂಡಿಕೊಂಡು ಚಿತ್ತಾರಗಳನ್ನು ಬಿಡಿಸಿವೆ, ಗೆಳೆಯಾ ನೀನು ಅದರ ಸವಿಯ ಸವಿಯು ಬಾ, ಅವು ನನ್ನೆದೆಯೊಳಗೆ ಹಾಡುಗಳನ್ನು ಮೂಡಿಸಿವೆ, ನನ್ನೊಳಗಿನ ಭಾವಗಳನ್ನು ಕೆರಳಿಸಿವೆ ಎಂದು ನಿಸರ್ಗ ವರ್ಣನೆ ಮಾಡಿರುವುದು ಸೊಗಸಾಗಿ ಮೂಡಿಬಂದಿದೆ.


ಸೆರಗ ಹಿಡಿದು ತಾನಿಳೆಯುತಿಹುದು
ಆ ಪ್ರೇಮಿ   ಕಡಲ ಮೋಹ|
ಮನವ ತಡೆದು ಸುಳಿ-ಸುಳಿಯುತಿಹುದು
ಈ ಭೂಮಿಯೊಡಲು ಸ್ನೇಹ || [ಮಿಲನ]

    ನನ್ನನ್ನು ಬಹಳ ಪ್ರಭಾವಿತನನ್ನಾಗಿ ಮಾಡಿದ್ದು ‘ಮಿಲನ’ ಕವಿತೆ. ಕವಿ ತೆಗೆದುಕೊಂಡ ‘ಭಾವ’ ಅಮೋಘ. ನದಿಯನ್ನು ಅಂಕು, ಡೊಂಕಿನ ಟೊಂಕದ ಹೆಣ್ಣಿಗೆ ಹೋಲಿಸಿ, ತಾ ಬರುವಾಗ ಜುಳು ಜುಳು ಶಬ್ದವನ್ನು ಗೆಜ್ಜೆಯ ದನಿಗೆ ಹೋಲಿಸಿರುವುದು ಮೋಹಕವಾಗಿ ಮೂಡಿಬಂದಿದೆ. ಕಡಲೆಂಬ ಪ್ರೇಮಿ ನೀರ ಸೆರಗ  ಹಿಡಿದು ಮೋಹದಿ ಎಳೆಯುತಿಹ, ಇತ್ತ ಭೂಮಿಯ ಅಗಾಧ ಸ್ನೇಹವನ್ನು ಕಳಚಿ ಕೊಳ್ಳಬೇಕಾದ ಪ್ರಸಂಗ. ನಿಸರ್ಗದ ರಮಣೀಯತೆಯಲ್ಲೂ ಪ್ರೀತಿಯ ಮಿಲನ ಬೆಸೆದು ಸಾಗುವ ಪರಿಯನ್ನು ಪಡೆಸೂರರು ವಿಭಿನ್ನವಾಗಿ ಚಿತ್ರಿಸಿದ್ದಾರೆ.

ಸಾಗರನು ಅಲ್ಲಿ ತೆರೆಕುದುರೆಯೇರಿ
ನೋಡುವನು ದಡಕೆ ಬಂದು
ಬಳಿ ಸಾರಿ ಬರುವ ನದಿ ನಲ್ಲೆಗೆಂದು
ನೊರೆ ಹೂವ ಹಾರ ತಂದು [ಮಿಲನ]

    ಸಾಗರ ತನ್ನ ಪ್ರಿಯತಮೆಯಾದ ‘ನದಿ’ ಬರುವಿಕೆಯನ್ನು ತೆರೆಗಳೆಂಬ ಕುದುರೆಗಳನ್ನೇರಿ ದಡಕ್ಕೆ ಬಂದು ತವಕದಿಂದ ನೋಡುತ್ತಾ... ಬರುವ ನಲ್ಲೆಯನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ನೊರೆ ಹೂವಿನ ಹಾರದೊಂದಿಗೆ ಕಾಯುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ‘ನದಿ’ ತಾನು ಹರಿದು ಸನಿಹ ಬಂದು ಸಂತಸದಿ ಉಬ್ಬಿ, ನಾಚಿಕೆಯಿಂದ ನೊರೆ ನವಿರುಗೊಂಡು ಸಾಗರವ ತಬ್ಬಿ ನೀರಾಗುವಳು.

ಭುವಿಯ ಮಣ್ಣ ಉಂಡು ನಾನು
ಸಿಹಿಯ ಹಣ್ಣ ಕೊಟ್ಟೆ ಜಗಕೆ
ಹಣ್ಣ ತಿಂದು ಬೆಳೆದ ಮನುಜ
ನೀನು ಏನು ಕೊಟ್ಟೆಯೋ [ವೃಕ್ಷ ಪ್ರಶ್ನೆ]

    ಮಾನವನು ತನ್ನ ಸ್ವಾರ್ಥಕ್ಕೆ ನಿಸರ್ಗದ ಸಂಪತ್ತನ್ನು ಬಳಸಿಕೊಂಡು ನಿರಂತರವಾಗಿ ವಿಷ ಕಕ್ಕುತ್ತಾನೆ. ಆದರೆ ಆ ವಿಷವನ್ನು ಸೇವಿಸಿ, ಶೋಧಿಸಿ ಸಕಲ ಜೀವ ರಾಶಿಗಳಿಗೆ ಜೀವಾನಿಲ ನೀಡೋ ಮರದ ಒಳತುಡಿತವನ್ನು ಕವಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಕೊಳೆಯ ನೀರನ್ನು  ಕುಡಿದು ಜೀವಿಗಳಿಗೆ ನೆÀರಳು ನೀಡುವ ಮರ ಮನುಜನನ್ನು ನೀನೇನು ಜಗಕ್ಕೆ ಕೊಟ್ಟಿರುವೆ ಎಂದು ಪ್ರಶ್ನಿಸುವ ಪ್ರಸಂಗ ಪ್ರತಿಯೊಬ್ಬರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.

ಮೈಯ ಮರದ ತುದಿಯಲೊಂದು
ಮರುಳ ಮಂಗ ಕೂತಿದೆ
ಆಸೆಯಿಂದ ಜಿಗಿದು, ಜಿಗಿದು
ಎಲ್ಲ ಮರವು ಆಲುಗಿದೆ || [ಮನ ಮಂಗ]

    ಇಲ್ಲಿ ಕವಿ ಮಾನವನ ದೇಹವನ್ನು ವೃಕ್ಷಕ್ಕೆ ಹೋಲಿಸಿ, ಚಂಚಲ ಮನವನ್ನು ಕೋತಿಗೆ ಹೋಲಿಸಿದ್ದಾರೆ. ತನ್ನ ಆಸೆಗಾಗಿ ಮಾಡಬಾರದ ಕಾರ್ಯಗಳ ಮಾಡಿ ಉಳಿದವರ ನೆಮ್ಮದಿ ಕೆಡಿಸುವ ದೂರ್ತನಾಗುತ್ತಿದ್ದಾನೆ. ಯಾವ ಭಯ- ಬಂಧವಿಲ್ಲದೆ ಸ್ವಚ್ಛಂಧವಾಗಿ ಹಾರಾಡುತಿದ್ದಾನೆ. ಛಂದ ಮೀರಿ ನೆಗೆದು ನೆಗೆದು ಮರದ ಅಂದ ಕೆಡೆಸಿದೆ. ಅಂದರೆ ನಿಯಮಗಳನ್ನೆಲ್ಲಾ ಗಾಳಿಗೆ ತೋರಿ ಸಾಮಾಜಿಕ ವ್ಯವಸ್ಥೆಯನ್ನು ನಕಾರಾತ್ಮಕ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಸಂಗ ಬಂದಾಗಿದೆ. ಹೆಣ್ಣು, ಮಣ್ಣು, ಹೊನ್ನಿಗಾಗಿ ಸದಾ ತುಡಿಯುತ್ತ ಇವೆಲ್ಲವನ್ನು ಕೊಟ್ಟ ದೀಶಕ್ತಿಯನ್ನೇ ಮರೆತು ಸುಮ್ಮನಾಗುವ ಮೂರ್ಖತನದ ಪರಮಾವಧಿಯನ್ನು ನೋಡುತ್ತಿದ್ದೇವೆ. ಕವಿ ಮರದ ತುಡಿತ, ತುಮುಲಗಳನ್ನು ನೈತಿಕ ನೆಲೆಗಟ್ಟಿನಲ್ಲಿ ಅನಾವರಣಗೊಳಿಸಿದ್ದಾರೆ.

ಹಿಂದೆಂದು ಕಂಡು ಕೇಳರಿಯದಂತ
ರೋಗೊಂದು ಬಂದೈತಿ ಜಗದಾಗ
ಮಾರೆಲ್ಲ- ಮಸಣ್ಯಲ್ಲ, ಪ್ಲೇಗಲ್ಲ, ಅಮ್ಮಲ್ಲ
ತಳಮಳ ಎದ್ದೈತಿ ಜಗದಾಗ ||  [ಏಡ್ಸ್]

      ಪ್ರಾಪಂಚಿಕ ಆಧುನಿಕ ಭರಾಟೆಯಲ್ಲಿ ಏನನ್ನೊ ಪಡೆಯುವ ಧಾವಂತದಲ್ಲಿ, ಮತ್ತೇನನ್ನೋ ಕಳೆದುಕೊಂಡು ಬಿಡುತ್ತೇವೆ. ಕ್ಷಣದ ಸುಖಕ್ಕೆ ಆತೊರೆದು ಅವಿವೇಕತನದಿ ದುಡುಕಿ ದುರಂತ ಬದುಕನ್ನು ಆಹ್ವಾನಿಸಿಬಿಡುತ್ತೇವೆ. ಏಡ್ಸ್‍ಗಳಿಲ್ಲದ ಊರುಗಳಿಲ್ಲ ಎಂಬ ಮಟ್ಟಿಗೆ ಬಂದು ನಿಂತಿದ್ದೇವೆ. ಅನೈತಿಕ ಹಾಗೂ ಅಜಾಗರೂಕತೆಯಿಂದ ಬದುಕನ್ನು ಸರ್ವನಾಶ ಮಾಡಿಕೊಂಡವರು ಲಕ್ಷಾಂತರ ಜನ ಇದ್ದಾರೆ. ಎಂತೆಂಥ ಮಾರಕ ರೋಗಗಳಿಗೆ ಔಷಧಿ ಕಂಡು ಹಿಡಿದರೂ ಈ ಏಡ್ಸ್ ಎಂಬ ಭಯಂಕರಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೂ ಮೂರ್ಖಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಆದ್ದರಿಂದಲೆ ಕವಿ ಪಡೆಸೂರರು ಪ್ರಸ್ತುತ ಕವಿತೆಯಲ್ಲಿ ಇದರ ದುರಂತದ ಜೊತೆಗೆ ಬದುಕು ಹೇಗಿರಬೇಕೆಂಬ ನೈತಿಕ ಮೌಲ್ಯವನ್ನು ತುಂಬಿದ್ದಾರೆ.
      ಅವರೇ ಹೇಳುವಂತೆ ಗೊರಲಿಯ ಹುಳದಂಗ ಒಳಗೊಳಗ ಕಡಿತೈತಿ, ಮೇಲೆದ್ದು ಕಾಣದು ನಿಜಬಣ್ಣ ಬೇರೆಲ್ಲ ಕೊರೆ ಕೊರೆದು ಮರ ಒಣಗಿ ಬಿದ್ದಂಗ ಬಿದ್ದಿತೊ ದೇಹ ತೆರಿಕಣ್ಣ. ಏಡ್ಸ್ ಎಂಬ ಮಾರಕ ರೋಗ ಮೇಲ್ನೋಟಕ್ಕೆ ಇತರರಿಗೆ ಗೋಚರಿಸದಿದ್ದರೂ, ಬೇರು ಕೊಳೆತು ಮರ ಒಣಗುವಂತೆ ಅಂತರಂಗ ಸುಡುತ್ತಾ, ದೇಹ ಬಡಕಲಾಗಿ ಸಾವನಪ್ಪುತ್ತಾನೆ ಎಂಬ ಮಾರ್ಮಿಕ ಸತ್ಯವನ್ನು ಸೊಗಸಾಗಿ ಪಲ್ಲವಿಸಿದ್ದಾರೆ.

ಮನಿಯೊಳಗ ಮುದ್ದಿನ ಮಡದಿ ತಾ ಇರುವಾಗ
ಪರಸಂಗ ಬ್ಯಾಡೊ ನನ್ನ ಅಣ್ಣ
ಪರಸಂಗ ಮಾಡಿದರ ಅಂಟಂಟಿ ಬರತೈತಿ
ಹಾರಿ ಹೋದಿತೋ ನಿನ ಪ್ರಾಣ ||  [ಏಡ್ಸ್]

     ಮನೆಯೊಳಗ ಪ್ರೀತಿಯ ಹೆಂಡತಿ ಇರುವಾಗ ಬೇರೊಂದು ಹೆಣ್ಣಿನ ಹುಚ್ಯಾಕ ಅದು ಸಲ್ಲದು, ಅದೇ ಚಂದ ಎಂದು ಅಲೆದು ಹೋದರೆ ಏಡ್ಸ್ ಎಂಬ ಬಹುಮಾನ ಅಂಟಂಟಿ ಬಂದು ಜೀವಕ್ಕೆ ಕುತ್ತು ತಂದು ಜಗದೊಳಗೆ ಇನ್ನಿಲ್ಲವಾಗುತಿ ಎಂದು ನೈತಿಕ ಮೌಲ್ಯಗಳನ್ನು ಕವಿ ಇಲ್ಲಿ ಬಿಂಬಿಸಿರುವುದು ಸ್ತುತ್ಯಾರ್ಹ.
     ಹೀಗೆ ಈ ಕೃತಿಯಲ್ಲಿ ಹಕ್ಕಿ ಹಾರುತ್ತಿದೆ ನೋಡಿದಿರಾ?, ಕನ್ನಡ ರಕ್ಷಕರು, ನೌಕರ ಸತಿ, ಮಳೆಗಾಲ, ಪಂಜರದ ಹಕ್ಕಿಗಳು, ಶಾಂತಲೆಯ ತೋಟ ಮುಂತಾದ ಕವಿತೆಗಳು ಗಮನ ಸೆಳೆಯುತ್ತವೆ.
    ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳ ಮೇಲೆ ಹಿಡಿತವಿರುವ ಪಡೆಸೂರರು ಬಹುಭಾಷಾ ಪಂಡಿತರೆನ್ನಬಹುದು. ಅದರಲ್ಲೂ ಕನ್ನಡ ವ್ಯಾಕರಣ ಹಾಗೂ ಛಂದಸ್ಸನ್ನು ಆಳವಾಗಿ ಅಧ್ಯಯನ ಮಾಡಿದ ಇವರು ಛಂದೋಬದ್ದ ಪದ್ಯಗಳನ್ನು ರಚಿಸಿದ್ದಾರೆ. ರಗಳೆ, ಪಟ್ಪದಿ, ಕಂದ ಹಾಗೆಯೇ ಕಥನ ಕಾವ್ಯಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಶಿರದಲಿ ಕಮಲವು ಉರದಲಿ ಚಕ್ರವು
ಕರವನು ಎತ್ತಿದ ಅಭಯದ ಹಸ್ತವು
ಸುರನರ ವೇಶದ ವಾನರ ಭೂಪನು
ಕರವನು ಮುಗಿಯುತ ಬರುವುದ ಕಂಡೆನು ||  [ಮತಭಿಕ್ಷ]

    ಪ್ರಸ್ತ್ತುತ ಸಂದರ್ಭದಲ್ಲಿ ಮತಯಾಚನೆಗೆ ಬರುವ ರಾಜಕಾರಣಿಗಳ ಪ್ರಸಂಗವನ್ನು ಕವಿ ಪಡೆಸೂರರು ಮಂದಾನಿಲ ರಗಳೆಯಲ್ಲಿ ಬರೆದಿದ್ದಾರೆ. ಪ್ರತಿ ಪಾದವು ನಾಲ್ಕು ಮಾತ್ರೆಯ ನಾಲ್ಕು ಗಣಗಳನ್ನು ಹೊಂದಿದ್ದು, ಆದಿ ಹಾಗೂ ಅಂತ್ಯ ಪ್ರಸಂಗಳನ್ನೊಳಗೊಂಡಿದೆ.

ನೀರ ನೆವದಿ ಓರ್ವ ನೀರೆ
ನೀರ ಕೊಡವ ಹೊತ್ತು ಬಂದು
ನೀರ ದಡದಿ ನೀರ ಬರುವ ದಾರಿ ಕಾಯ್ದಳೊ
ನೀರ ಬಂದ ಬಾರೆ ಎಂದ
ಏರಿ ಹೋಗಿ ಕೈಯ ಹಿಡಿದ
ನೀರಿನೊಳಗೆ ನೀರೆ ಸೇರಿ ನೀರೆ ಆದಳೊ || [ನೀರೆ]

    ಇದು ಭಾಮಿನಿ ಷಟ್ಪದಿಯಲ್ಲಿರುವ ಪದ್ಯ. ಒಂದು, ಎರಡು, ನಾಲ್ಕು, ಐದನೇ ಪಾದಗಳು ಮೂರು ಮಾತ್ರೆಯ ನಾಲ್ಕು ಗಣಗಳನ್ನು ಹೊಂದುದ್ದು ಆದಿ ಪ್ರಾಸವನ್ನು ಹೊಂದಿವೆ. ಹಾಗೆಯೇ ಮೂರು ಮತ್ತು ಆರನೆಯ ಪಾದಗಳು ಮೂರು ಮಾತ್ರೆಯ ಆರು ಗಣ ಮೇಲೊಂದು ಗುರುವನ್ನು ಹೊಂದಿದ್ದು ಆದಿ ಪ್ರಾಸದಲ್ಲಿದೆ.
    ಇಲ್ಲಿ ನೀರೆ ಎಂದರೆ ಯುವತಿ, ನೀರ ಎಂದರೆ ಯುವಕ. ಯುವತಿ ನೀರು ತರುವ ನೆವದಿ ನದಿಗೆ ಬಂದು ನೀರ(ಗೆಳೆಯ)ನಿಗಾಗಿ ಕಾತರದಿ ಕಾದು ಒಂದಾಗುವ ಪರಿಯನ್ನು ಪಡೆಸೂರರು ಛಂದೋಬದ್ಧವಾಗಿ ಒಡಮೂಡಿಸಿದ್ದಾರೆ. ಹೀಗೆ ವಾರ್ಧಕ ಷಟ್ಪದಿ, ಉತ್ಪಲಮಾಲೆ ಮುಂತಾದ ಛಂದಸ್ಸಿನಲ್ಲಿ ರಚಿಸಿದ ಪದ್ಯಗಳು ಈ ಕೃತಿಯಲ್ಲಿವೆ.
      ಒಟ್ಟಾರೆ ಹೇಳುವುದಾದರೆ ಪಡೆಸೂರರ ಕವಿತೆಗಳಲ್ಲಿ ಕಸುವಿದೆ, ಕಾಂತಿಯಿದೆ, ನಾದವಿದೆ, ಬನಿ ತುಂಬಿದೆ, ಭಾಷೆಗೆ ಎದೆ ತುಂಬಿದ ಭಾವ
ದ ಹೆಪ್ಪು ಇದೆ. ಶೈಲಿ ಸರಳ ಆದರೆ ತುಂಬಾ ಪರಿಣಾಮಕಾರಿಯಾಗಿ ಮನಸೂರೆಗೊಳ್ಳುತ್ತದೆ. ಅವರ ಆಶಯ ಫಲಕಾರಿಯಾಗಲಿ. ಅವರ ಸಹೃದಯ ಸದಾ ಸದೃಢವಾಗಿರಲಿ, ಅವರಿಂದ ಅಪಾರ ಕೊಡುಗೆ ಸಾರಸ್ವತ ಲೋಕಕ್ಕೆ ಒದಗಿಬರಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್. ಎಸ್ ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197


ಶನಿವಾರ, ನವೆಂಬರ್ 8, 2014

ಕನ್ನಡದ ಪ್ರಬುದ್ಧ ಪ್ರಬಂಧಕಾರ-ಪ್ರೊ.ಅ.ರಾ.ಮಿತ್ರ - ಕೊಟ್ರೇಶ್ ಎಸ್. ಉಪ್ಪಾರ್


   ಪ್ರಬುದ್ಧ ಪ್ರಬಂಧಕಾರರು, ಭಾಷಣಕಾರರು, ಮಾತಿನ ಮೋಡಿಗಾರರೂ ಆದ ಪ್ರೋ. ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರರು ಪ್ರೊ.ಅ.ರಾ. ಮಿತ್ರರೆಂದೆ ಖ್ಯಾತಿ ಪಡೆದವರು. ಅ.ರಾ. ಮಿತ್ರ ರವರು ಕ್ರಿ.ಶ 1935 ಫೆಬ್ರವರಿ 25 ರಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದರು. ಹುಟ್ಟಿದ್ದು ಬೇಲೂರಿನಲ್ಲಾದರೂ ಇವರು ಹಾಸನ, ಅರಸೀಕೆರೆ, ಕೋಲಾರ, ಮೈಸೂರುಗಳಲ್ಲಿ ತಮ್ಮ ವಿಧ್ಯಾಭ್ಯಾಸ ಪೂರೈಸಿದರು.
    ಪ್ರೌಢಶಾಲೆ ಶಿಕ್ಷಣ ಪಡೆದ ನಂತರ ಕೋಲಾರದ ಕಾಲೇಜಿಗೆ ಇಂಟರ್ ಮೀಡಿಯಟ್ ಸೇರಿದ ಇವರಿಗೆ ಪ್ರಸಿದ್ದ ಸಾಹಿತಿ ಹಾಗೂ ಬೋಧಕರಾದ ಪ್ರಭುಶಂಕರ್ ರವರು ಅಧ್ಯಾಪಕರಾಗಿ ದೊರೆತದ್ದು ಪುಣ್ಯವೇ ಸರಿ. ಓದಿನಲ್ಲಿ ಅಷ್ಟೊಂದು ಆಸಕ್ತಿ ಇರದ ಇವರು ಗುರುಗಳ ಪ್ರಭಾವದಿಂದ ಸಾಹಿತ್ಯ ಕ್ಷೇತ್ರದತ್ತ ಹೊರಳಿದರು, ಅಲ್ಲದೇ ಪ್ರಭುಶಂಕರ್ ರವರ ಉಪನ್ಯಾಸದ ಪರಿಣಾಮದಿಂದ ಓದಿನಲ್ಲಿಯೂ ಆಸಕ್ತಿ ಮೂಡಿದ್ದಲ್ಲದೇ ಹಾಸ್ಯ ಪ್ರಜ್ಞೆ ಬೆಳೆಯಲು ಕಾರಣವಾಯಿತೆನ್ನಬಹುದು.
    ಜನಪ್ರಗತಿಯ ಕಲ್ಲೇ ಶಿವೋತ್ತಮರಾವ್ ಹಾಗೂ ನಾಡಿಗೇರರಿಂದ ಹಾಸ್ಯ ಲೇಖನಗಳನ್ನು ಬರೆಯಲು ಪ್ರೇರಣೆ ಪಡೆದ ಇವರು ನಿತ್ಯ ಜೀವನದಲ್ಲಿನ ಅನೇಕ ಪ್ರಸಂಗಗಳನ್ನು ಹಾಸ್ಯ ಮಿಶ್ರಿತ ಲೇಖನಗಳನ್ನಾಗಿ ಬರೆಯುತ್ತಾ ಉತ್ತಮ ಹವ್ಯಾಸವಾಗಿಸಿಕೊಂಡರು.
    ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತ್ತರ ಪದವಿ ಪಡೆದ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮಡಿಕೇರಿ, ತುಮಕೂರು, ಬೆಂಗಳೂರು ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪೂರೈಸಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
     ‘ಮಂತ್ರವಿಧÉ್ಯ’ ಇದು ಮಕ್ಕಳಿಗಾಗಿ ಬರೆದ ಆರೋಗ್ಯ ಗ್ರಂಥ ಇದನ್ನು ಅ.ರಾ. ಮಿತ್ರ ರವರು ತಮಿಳಿನಿಂದ ಅನುವಾದ ಮಾಡಿದ್ದಾರೆ. ಇವರ ಇನ್ನೊಂದು ಪ್ರಮುಖ ಕೃತಿ ‘ಛಂದೊಮಿತ್ರ’ , ಇದು ಛಂದಸ್ಸಿನ ಲಕ್ಷಣಗಳನ್ನು ಉದಾಹರಣೆಸಹಿತವಾಗಿ ಲಘು ಹಾಸ್ಯದ ಮೂಲಕ ಬರೆದ ಕೃತಿ . ‘ಪಂಪ ಭಾರತ ಸಂಗ್ರಹ’ ಇದು  ಇತರರೊಂದಿಗೆ ಸೇರಿ ಸಂಪಾದಿಸಿದ ಕೃತಿ.
    ‘ವಚನಕಾರರು ಮತ್ತು ಶಬ್ದಕಲ್ಪ’, ಒಳನೋಟಗಳು’ ಇವರ ಪ್ರಮುಖ ವಿಮರ್ಶಾಕೃತಿಗಳು. ‘ಅಜಿತ ಪುರಾಣ ಸಂಗ್ರಹ’ ಇದು ಇತರರೊಂದಿಗೆ ಸೇರಿ ತಂದ ಸಂಗ್ರಹ ಮತ್ತು ಗದ್ಯಾನುವಾದ ಕೃತಿಯಾಗಿದೆ.
    ಜರ್ಮನ್ ಸಂಪ್ರದಾಯ ದರ್ಪಣ, ಕಾಲಿಗುಲ ಮತ್ತು ತಪ್ಪಿದ ಎಳೆ, ‘ಶಿಕ್ಷಣ ಚಿಂತನ’ ಇವು ಇತರರೊಡಗೂಡಿ ಮಾಡಿದ ಪ್ರಮುಖ ಅನುವಾದ ಕೃತಿಗಳು. ‘ಬಾಲ್ಕಾನಿಯ ಬಂಧುಗಳು’ ಇದು 1968 ರಲ್ಲಿ ಎರಡನೆಯ ಮುದ್ರಣ ಕಂಡ ಪ್ರಬಂಧಗಳ ಸಂಗ್ರಹ ಕೃತಿಯಾಗಿದೆ. ಇದು ಒಳ್ಳೆಯ ಹೆಸರನ್ನು ತಂದು ಕೊಟ್ಟ ಕೃತಿ.
      ‘ಯಾರೋ ಬಂದಿದ್ದರು’ ಇವರು ಹಾಸ್ಯ ಮಿಶ್ರಿತ ಹರಟೆ ಲೇಖನಗಳ ಸಂಗ್ರಹವಾಗಿದೆ. ‘ಪುರಂದರ ಸಾಹಿತ್ಯ ದರ್ಶನ’ ಇವರ ಸಂಪಾದಿತ ಕೃತಿ. ‘ಕುಮಾರವ್ಯಾಸ ದರ್ಶನ’ , ‘ವಚನ ವ್ಯಾಖ್ಯಾನ’ ಇವು ಅ.ರಾ. ಮಿತ್ರ ರವರು ವಿವಿದೆಡೆ ಮಾಡಿದ ಉಪನ್ಯಾಸಗಳ ಸಂಗ್ರಹ ಮಾಲಿಕೆಗಳು.  ಅಲ್ಲದೆ ಇವರು ಮಾಡಿದ ವ್ಯಾಖ್ಯಾನ ಧ್ವನಿಸುರುಳಿಗಳೂ ಬಿಡುಗಡೆಗೊಂಡಿವೆ.
     ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕನ್ನಡ ನಾಡು-ನುಡಿ ಸೇವೆಗೈದ ಅ.ರಾ. ಮಿತ್ರರವರು ಕನ್ನಡ ಸಾರಸ್ವತ ಲೋಕಕ್ಕೆ ಅಗಾಧವಾದ ಕೃತಿ ರತ್ನಗಳನ್ನು ನೀಡಿದ್ದಾರೆ.
     ‘ಆರತಕ್ಷತೆ’  ಹಾಗೂ ‘ನಾನೇಕೆ ಕೊರೆಯುತ್ತೇನೆ’ ಇವು ಅ.ರಾ.ಮಿತ್ರ ರವರ ಸಮಗ್ರ ಪ್ರಬಂಧದ ಎರಡು ಸಂಪುಟಗಳು. ಪ್ರೇಮನದಿಯ ದಡಗಳಲ್ಲಿ ಇದು ಜಗತ್ತಿನ ಪ್ರಣಯ ಕಥೆಗಳ ಸಂಪುಟವಾಗಿದೆ. ಕುಮಾರವ್ಯಾಸ ಭಾರತ ಕಥಾಮಿತ್ರ ಇದು ಇತ್ತೀಚೆಗೆ ಬಿಡುಗಡೆಯಾದ ಬೃಹತ್ ಗದ್ಯಕೃತಿ.
     ಪ್ರೊ. ಅ.ರಾ. ಮಿತ್ರರವರು ಜನಿಸಿದ್ದು ಹಾಸನದಲ್ಲೆ ಆದರೂ ಅವರು ಓದಿದ್ದು, ಬೆಳೆದದ್ದು ಬೇರೆಡೆಯಲ್ಲಿ ನೆಲೆನಿಂತಿದ್ದು ಮಾತ್ರ ಬೆಂಗಳೂರಿನಲ್ಲಿ, ಇವರು ಪ್ರಬುದ್ಧ ಹಾಸ್ಯ ಪ್ರಬಂಧ ರಚನಕಾರರೆಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲದೆ ಅನುವಾದ ಹಾಗೂ ಸಂಪಾದಿತ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಇವರು ವಿಮರ್ಶಾ ಕ್ಷೇತ್ರದಲ್ಲಿಯೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. 80 ಆಸು ಪಾಸಿನ ವಯೋಮಾನದಲ್ಲಿರುವ ಇವರ ಪ್ರಬಂಧಗಳು ಇಂದಿಗೂ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರ ಪತ್ರಿಕೆ, ಪಾಕ್ಷ್ಷಿಕ ಪತ್ರಿಕೆ, ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾಗುತ್ತಿವೆ. ಇಳಿಯ ವಯಸ್ಸಿನಲ್ಲಿ ಇವರ ಮಾಗಿದ ಸಾಹಿತ್ಯ ನಮಗಿಂದು ದೊರೆಯುತ್ತಿರುವುದು ಪುಣ್ಯವೇ ಸರಿ. ಅಗಾಧವಾದ ಕೃತಿರತ್ನಗಳನ್ನು ಭುವನೇಶ್ವರಿ ಮಡಿಲಿಗೆ ನೀಡಿದ ಇವರಿಗೆ ಹಲವಾರು ಗೌರವ, ಪುರಸ್ಕಾರಗಳು ಹರಸಿ ಬಂದಿದೆ. ಅವುಗಳಲ್ಲಿ ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಧರ್ಮಶ್ರೀ ನಾಗರಾಜ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ನವರತ್ನರಾಂ ಪ್ರಶಸ್ತಿ ಪ್ರಮುಖವಾದವುಗಳು. ಈ ಹಿರಿಯ ಚೇತನದ ಸಾಹಿತ್ಯ ಮಾರ್ಗ ನಮಗಿಂದು ದೀವಿಗೆಯಾಗಿದೆ.

ಕೊಟ್ರೇಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಬಾಲ್ಯ ಬಿಂಬದ ಅನಾವರಣ ‘ನಗುವ ನಕ್ಷತ್ರಗಳು’ - ಕೊಟ್ರೇಶ್ ಎಸ್.ಉಪ್ಪಾರ್


     ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ, ಮತ್ತೇನನ್ನೋ ಹಂಬಲಿಸುವ ದಾವಂತದಲ್ಲಿ ಅನುಭವಿಸಿ, ಆನಂದಿಸಬಹುದಾದ ಬಾಲ್ಯವೆಂಬ ಸುವರ್ಣಕಾಲವನ್ನು ಬಹುತೇಕ ಮಕ್ಕಳು ಸಾಕಾರಗೊಳಿಸಿಕೊಳ್ಳದೇ ಹೋಗಿಬಿಡುತ್ತಾರೆ. ಕುಣಿದು ಕುಪ್ಪಳಿಸುವ ವಯೋಮಾನದಲ್ಲಿ ಚಿಂತಿಸುವ ತುರ್ತನ್ನು, ಮಾನಸಿಕ ತೊಳಲಾಟಗಳನ್ನು ತಂದುಕೊಂಡು ಜೀವನ ಪ್ರೀತಿಗಾಗಿ ಹಲುಬುತ್ತಿದ್ದಾರೆ. ಇದಕ್ಕೆಲ್ಲಾ ಜಾಗತಿಕ ಪ್ರಗತಿ, ವಿಜ್ಞಾನ ಅನ್ವೇಷಣೆಗಳ ನಾಗಾಲೋಟ ಎಷ್ಟು ಕಾರಣವೆಂದು ದೂರುತ್ತೇವೆಯೋ ಅಷ್ಟೇ ಪೋಷಕರ ನಿರಾಸಕ್ತಿ, ಮನೆಯಲ್ಲಿನ ಬಂಧಿತ ವಾತಾವರಣ, ಇಂಥದ್ದೇ ಕಲಿಯ ಬೇಕೆಂಬ ಕುರುಡು ಪ್ರೀತಿಯಲ್ಲಿ ಅರಳುವ ಕುಸುಮಗಳ ಆಸೆ-ಆಕಾಂಕ್ಷೆಗಳೆಲ್ಲಾ ಮುರುಟಿಹೋಗುತ್ತವೆ.
     ಇಂತಹ ಸಂದರ್ಭದಲ್ಲಿ ಬಾಲ್ಯದ ನೆನಪುಗಳನ್ನು, ನಲಿದಾಟಗಳನ್ನು, ಮನಸಿನ ತೊಳಲಾಟಗಳನ್ನು ಸರಳ ಪದ್ಯಗಳಲ್ಲಿ ಎಳೆಯರಿಗಾಗಿಯೇ ಕಳೆದ ಹಲವು ವರ್ಷಗಳಿಂದ ರಾಜ್ಯ ಮಟ್ಟದ ಹತ್ತಾರು ಪತ್ರಿಕೆಗಳಿಗೆ ಬರೆಯುತ್ತಾ ಶ್ಲಾಘನೆಗೆ ಪಾತ್ರರಾದವರು ಶ್ರೀಮತಿ ಸುಶೀಲಾ ಸೋಮಶೇಖರ್ ರವರು.
     ಸುಶೀಲಾ ಸೋಮಶೇಖರ್‍ರವರೆಂದರೆ ಪ್ರಬುದ್ಧ ಭಾಷಣಕಾರ್ತಿಯೆಂದೇ ಬಿಂಬಿತವಾದವರು. ಅಲ್ಲದೇ ಕವಯತ್ರಿಯಾಗಿಯೂ, ಲೇಖಕಿಯಾಗಿಯೂ, ಚಿಂತಕರಾಗಿಯೂ ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಶಿಕ್ಷಕಿಯಾಗಿ ಖ್ಯಾತಿವೆತ್ತವರು.
     ಇತ್ತೀಚಗೆ ಬಿಡುಗಡೆಯಾದ ಇವರ ‘ನಗುವ ನಕ್ಷತ್ರಗಳು’ ಮಕ್ಕಳ ಕಾವ್ಯಗುಚ್ಚ 60 ಪದ್ಯಗಳಿಂದ ಕೂಡಿದ 104 ಪುಟಗಳ, ಸುಂದರ ಮುಖಪುಟವುಳ್ಳ 60 ರೂ ಮುಖ ಬೆಲೆ ಹೊಂದಿದ ಈ ಕೃತಿಯನ್ನು ಬೆಂಗಳೂರಿನ ನಿರಂತರ ಪ್ರಕಾಶನವು ಹೊರತಂದಿದೆ.
    ಮಕ್ಕಳ ಭಾವಕ್ಕಿಳಿದು, ಮಿಂದೆದ್ದು ಅಲ್ಲಿನ ನಲಿದಾಟಗಳನ್ನು ಕಾವ್ಯದ ರೂಪದಲ್ಲಿ ಮನಮೋಹಕವಾಗಿ ಚಿತ್ರಿಸಿದ್ದಾರೆ. ಅಲ್ಲದೇ ಪ್ರ್ರಾಕೃತಿಕ ಸೌಂದರ್ಯಗಳಾದ ಪ್ರಾಣಿ, ಪಕ್ಷಿ, ತರು-ಲತೆ, ಆಗಸ, ನಕ್ಷತ್ರ, ಹಬ್ಬ, ಸಂಪ್ರದಾಯಗಳು ಮುಂತಾದ ಹಲವು ಒಲವುಗಳೊಂದಿಗೆ ಮಕ್ಕಳಾಳಕ್ಕಿಳಿದು ಸಂವಾದಿಸಿದ್ದಾರೆ.
ಗುಡು-ಗುಡು ಗುಡುಗನು ನೀನಿಳಿಸಿ
ಫಳ-ಫಳ ಮಿಂಚನು ನೀ ಕುಣಿಸಿ
ಕಾಮನ ಬಿಲ್ಲನ್ನು ನೀನೆಳೆಸಿ
ಟಪ ಟಪ ಹನಿಗಳ ಭವಿಗಿಳಿಸಿ [ಮೋಡ]
     ಹೀಗೆ ಮಗು ಮೋಡದೊಂದಿಗೆ ಸಂವಾದಿಸುವ ಕ್ರಿಯೆಯನ್ನು ಈ ಪದ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅನುಕರಣ ವ್ಯಯಗಳನ್ನು ಬಳಸುವುದರ ಮೂಲಕ ಪದ್ಯಕ್ಕೆ ಛಂದಸ್ಸಿನ ಶೋಭೆಯನ್ನು ಹೆಚ್ಚಿಸಿದ್ದಾರೆ. ಪ್ರಾಸಯುಕ್ತ ಪದಗಳ ಬಳಕೆ ಪದ್ಯದ ಸೌಂದರ್ಯವನ್ನು ವೃದ್ಧ್ದಿಸಿದೆ. ಗುಡು-ಗುಡು, ಫಳ-ಫಳ, ಟಪ-ಟಪ ಪ್ರಯೋಗ ಲಾಲಿತ್ಯವನ್ನು ವೃದ್ಧಿಸಿದೆ.

ಮೋಡವು ಕಟ್ಟತು ಆಗಸ ಬಿರಿಯಿತು
ಟಪ ಟಪಗುಡುತ ಹನಿಯು ಬಿದ್ದಿತು
ಮೂಡಿತು ಬಣ್ಣದ ಕಾಮನ ಬಿಲ್ಲು
ಜತೆಯಲೆ ಇಳಿದವು ಆವಿಯ ಕಲ್ಲು [ಆವಿಯ ಕಲ್ಲು]
     ಇಲ್ಲಿ ಕವಯತ್ರಿ ಬಿಸಿಲ್ಮಳೆಗಳ ಮಧ್ಯೆ ಮೂಡುವ ಸುಂದರ ಕಾಮನ ಬಿಲ್ಲು, ಮಳೆ ಮೂಡಿ ಬರುವ ಪ್ರಸಂಗವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಪ್ರಾಸವಿದ್ದರೆ ಕವಿತೆ ಪಾಯಸ, ಇಲ್ಲದಿರೆ ಪ್ರ್ರಾಯಾಸ ಎನ್ನುವಂತೆ ಇಲ್ಲಿ ಕವಿಯತ್ರಿ ಅಂತ್ಯ ಪ್ರಾಸಕ್ಕೆ ಒತ್ತು ಕೊಟ್ಟು ಕಾವ್ಯದ ಘನತೆ ಹೆಚ್ಚಿಸಿದ್ದಾರೆ. ಬಿರಿಯಿತು-ಬಿದ್ದಿತು, ಬಿಲ್ಲು-ಕಲ್ಲು ಇಲ್ಲಿ ಬಳಸಿದ ಪ್ರಾಸದಗಳಾಗಿವೆ. ಇಲ್ಲಿನ ಪ್ರಾಸಪದಗಳಲ್ಲಿ ಬಂದಿರುವುದರಿಂದ ಗೇಯತೆಯ ಸೌಂದರ್ಯದ ಒಲವು ಚೆಲ್ಲಿ ಸೊಸಿದೆ ಎನ್ನಬಹುದು.
ಮೋಡವೆ ಮೋಡವೆ ಬಣ್ಣವ ಬದಲಿಸು
ಚಂದದ ಬಿಳಿಯನು ಒಮ್ಮೆಗೆ ಕರಗಿಸು[ಮೋಡ ಮತ್ತು ಮಳೆ]
     ಕಪ್ಪು ರಂಗಿನ ದಟ್ಟವಾದ ಮೋಡ ಬಣ್ಣವ ಬದಲಿಸಿ ಅಂದ ಬಿಳಿಯಾಗುವಂತೆ ಕರೆ ಕೊಡುವ ಹಿನ್ನಲೆಯಲ್ಲಿ ಕರಗಿ ನೀರಾಗಿ ಭುಮಿಗಿಳಿದು ಬರುವಂತೆ ಮೋಡಕ್ಕೆ ಕೋರಿಕೆ ಸಲ್ಲಿಸುವ ಕವಯತ್ರಿ ಛಂದಸ್ಸಿಗೂ ಗಮನ ನೀಡಿದ್ದಾರೆ.
     ಈ ಪದ್ಯದ ಮೊದಲೆರಡು ಪದಗಳನ್ನು ಗಮನಿಸುವುದಾದರೆ ನಾಲ್ಕು ಮಾತ್ರೆಯ ನಾಲ್ಕು ಗಣಗಳು, ಆದಿ ಹಾಗೂ ಅಂತ್ಯ ಪ್ರಾಸ ಒಳಗೊಂಡಂತೆ ಪರಿವರ್ಧಿನಿ ಷಟ್ಪದಿಯನ್ನು ನಿನಪಿಗೆ ತರುತ್ತದೆ.
     ವ್ಯಾಕರಣ, ಛಂದಸ್ಸು, ಲಯ, ಗೇಯತೆಗಷ್ಟೇ ಮೀಸಲಾಗದೆ ಅದರಾಚೆಗೂ ಚಾಚಿ ಸಾಮಾಜಿಕ ಅಸಮಾನತೆಯನ್ನು ಕಾವ್ಯದಲ್ಲಿ ಸೊಗಸಾಗಿ ಕಟ್ಟಕೊಟ್ಟಿದ್ದಾರೆ.
ಅಮ್ಮನು ಮಾಡುವ ಕೆಲಸದ
ಜೊತೆಗೆ ನನ್ನನು ಕರೆಯುವಳು
ಪಾತ್ರೆ ಪಗಡ ತೊಳೆಯಲು ಅವಳು
ನನಗೇ ಹೇಳುವಳು [ಮಗಳ ನೋವು]
*
ಬ್ಯಾಟು ಬಾಲು ಹಿಡಿದ ತಮ್ಮನು
ಆಡಲು ಓಡುವನು
ಕಸವನು ಗುಡಿಸಿ ನೀರನು
ತರಲು ನನ್ನನೆ ದೂಡುವಳು [ಮಗಳ ನೋವು]
    ಇಲ್ಲಿ ಕವಯಿತ್ರಿ ಪ್ರಸ್ತುತ ಸಾಮಾಜಿಕ ಮನೋಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಗಂಡು-ಹೆಣ್ಣುಗಳ ಮಧ್ಯೆ ಪೋಷಕರು ತೋರುವ ಅಂತರತೆಯನ್ನು, ಭಿನ್ನತೆಯನ್ನು, ಶೋಷಣೆಯನ್ನು ಬಾಲೆಯ ಮನೋಸ್ಥಿತಿಯಲ್ಲಿಯೇ ನಿಂತು ಅವಲೋಕಿಸಿದ್ದಾರೆ.
ತಿಂಡಿಯ ಕೇಳದ ಮುದ್ದಿನ ಗೊಂಬೆ
ಹಠವನು ಹೂಡದ ಈ ಗೊಂಬೆ
ಡಿಕ್ಕಿ ಹೊಡೆದರೂ ಅಳದ ಗೊಂಬೆ
ಬಿದ್ದರೂ ಒಡೆಯದ ಚಂದದ ಗೊಂಬೆ [ಬಣ್ಣದ ಗೊಂಬೆ]
      ಈ ಪದ್ಯದಲ್ಲಿ ಕವಯತ್ರಿ ಮಾರ್ಮಿಕವಾಗಿ ಜಗತ್ತಿನ ಎಲ್ಲಾ ಮಕ್ಕಳಿಗೆ ನೈತಿಕ ಬುದ್ದಿಯನ್ನು ತಿಳಿ ಹೇಳಿದ್ದಾರೆ. ಮುಗ್ದತೆ, ಸಹನೆ, ಪ್ರೀತಿಯ ಚಲವು-ಒಲವುಗಳನ್ನು ಸೂಸಿದ್ದಾರೆ. ಬನ್ನಿರಿ ಕೊಳ್ಳಿರಿ ಬಣ್ಣದ ಗೊಂಬೆ, ಕೀಲಿ ಕೊಟ್ಟರೆ ಕುಣಿಯುವ ಗೊಂಬೆ, ಕಿಲ ಕಿಲ ಸದ್ದನು ಮಾಡುವ ಗೊಂಬೆ, ಕೊಳ್ಳಿರಿ ಕೊಳ್ಳಿರಿ ಚಂದದ ಗೊಂಬೆ ಎನ್ನುವ ಸಾಲುಗಳು ಪ್ರೌಢರನ್ನೂ ಬಾಲ್ಯಾವಸ್ಥೆಗೆ, ಜಾತ್ರೆಗಳ ಅನ್ನಿವೇಶಕ್ಕೆ ಕೊಂಡೊಯ್ದು ಒಂದು ಕ್ಷಣ ಮೈಮರೆಯುವಂತೆ ಮಾಡಿ ಬಿಡುತ್ತವೆ.
ನನ್ನ ಚಿನ್ನ ಮನೆಗೆ ರನ್ನ
ತುಂಬಿ ನಿಂತೆ ಜಗದ ಕಣ್ಣ
ನಿನ್ನ ಕಣ್ಣ ನೋಟದಲ್ಲೆ
ತುಂಬಿ ಬಂದ ಒಲವಿನಲ್ಲೆ
ಬದುಕ ಗೆಲುವ ಕಂಡೆನು [ ಮುದ್ದು ಕಂದ]
       ಇಡೀ ಪದ್ಯ ತಾಯಿ ಮಗುವಿನ ಪ್ರೀತಿ ವಾತ್ಸಲ್ಯವನ್ನು ಚಿಮ್ಮಿಸುತ್ತಾ ಸಾಗುವ ಪರಿ ಅನನ್ಯ. ಮಗುವಿನ ಆ ಮುಗ್ದ ನಯನಗಳಲ್ಲಿ ಜಾಗತಿಕ ಪ್ರೀತಿ ಕಾಣುವ ತಾಯಿ, ತಾಯಿ ಪ್ರೀತಿ ಮೂಸೆಯಲ್ಲಿ ಎಲ್ಲ ಮರೆವ ಕಂದ, ಅವರೀರ್ವರ ಪ್ರೀತಿಯ ಸಗ್ಗ ನಿನಾದವನ್ನು ಕವಯತ್ರಿ ಸೊಗಸಾಗಿ ಚಿತ್ರಿಸಿ ಕೊಟ್ಟಿದ್ದಾರೆ. ಹೃದಯಂಗಮ ಎದ್ದು ಕಾಣುತ್ತದೆ. ವಾತ್ಸಲ್ಯ ಚಿಲುಮೆಯಾಗಿ ಪಲ್ಲವಿಸಿದೆ ಎಂದರೆ ಅತಿಶಯೋಕ್ತಿಯಾಗ
ಲಾರದು.
ಅ ಆ, ಇ ಈ ಕಲಿಯೋಣ
ಲೋಕದ ಜ್ಞಾನ ತಿಳಿಯೋಣ
ಉ ಊ, ಋ ಕಲಿಯೋಣ
ಉದ್ಧಾರದ ಹಾದಿಯ ಹಿಡಿಯೋಣ [ ಅಕ್ಷರದಾಟ]
           ‘ಅಕ್ಷರದಾಟ’ ಕವಿತೆಯು ಅಕ್ಷರ ಕಲಿಕಾ ಹಂತದ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ. ಅಕ್ಷರ ಕಲಿಯುವುದರ ಜೊತೆ ಜೊತೆಗೆ ಜೀವನ ಮೌಲ್ಯಗಳನ್ನು, ನೈತಿಕ ಹೊಣೆಗಳನ್ನು, ಬದುಕಿನ ಪಾಠಗಳನ್ನು ಅರ್ಥಮಾಡಿಕೊಳ್ಳುವ ಪರಿಯನ್ನು ಕವಯತ್ರಿ ಮನ ಮುಟ್ಟುವಂತೆ ಹೆಣೆದಿದ್ದಾರೆ. ಇಲ್ಲಿನ 60 ಪದ್ಯಗಳಲ್ಲಿಯೂ ವಿವಿಧ ಪ್ರಸಂಗಗಳನ್ನು ನೆನಪಿಸಿದ್ದಾರೆ. ಮಕ್ಕಳ ಹೃದಯ ಮಿಡಿತವರಿತ ಕವಯತ್ರಿ ಉತ್ತಮೋತ್ತಮ ಕಾವ್ಯ ಗುಚ್ಛವನ್ನು ನಮಗೆ ನೀಡಿದ್ದಾರೆ.
ಮುಳ್ಳಿನ ಮೇಲೆ ಹೆಜ್ಜೆಯನಿರಿಸಿ
ಟಿಕ್ ಟಿಕ್ ಎನುತ ಕಾಲವಸರಿಸಿ
ಒಂದೇ ಓಟದಿ ಓಡುವನು
ನಮ್ಮನು ಹಿಂದೆ ದೂಡುವನು [ ಗಡಿಯಾರ ]
    ಈ ಪದ್ಯ ಮೇಲ್ನೋಟಕ್ಕೆ ಗಡಿಯಾರ, ಸಮಯವೆಂದು ಬಾಸವಾದರೂ, ಕಾಲದ ಪ್ರಜ್ಞೆ ಅಂದರೆ ಬದುಕಿನ ನಿರಂತರತೆಯ ಸತ್ಯ ಗೋಚರಿಸದೇ ಇರದು. ಜೀವನವೆಂದ ಮೇಲೆ ಕಷ್ಟ-ಕಾರ್ಪಣ್ಯಗಳ ಮುಳ್ಳಿನ ಬೇಲಿ ಇರುವುದು ಸಹಜ. ಅವುಗಳನ್ನೆಲ್ಲಾ ಮೀರಿ ಸಾಗಬೇಕು, ಈಸಬೇಕು, ಜಯಿಸಬೇಕು. ಆದರೂ ಕಾಲ ನಮ್ಮನ್ನು ತುಳಿದು ಮುಂದೆ ಸಾಗಿ ಬಿಡುತ್ತದೆ ಎಂಬ ಆಂತರಿಕ ಸತ್ಯವನ್ನು ಕವಯತ್ರಿ ಪ್ರಜ್ವಲಿಸಿದ್ದಾರೆ. ಆದ್ದರಿಂದಲೇ ಅವರು ಕೊನೆಯ ಚರಣದಲ್ಲಿ ಯಾರೇ ಕರೆದರೂ ಕೇಳದ ಇವನ, ಯಾರೇ ನಿಂತರೂ ನಿಲ್ಲದ ಇವನ ಓಟದ ಆಟಕೆ ಸಮನಾರು ? ಇವನನು ನಿಲ್ಲಿಸೋ ದೊರೆ ಯಾರು ಎಂದು ಪ್ರಶ್ನಿಸುವುದರ ಮೂಲಕ ಕಾಲನ ಮಹಿಮೆಯನ್ನು ಎತ್ತಿ ತೋರಿಸಿದ್ದಾರೆ.
...ಅಮ್ಮಾ ಅಮ್ಮಾ ಹೇಳಮ್ಮಾ
ವೈದ್ಯರ ಕಾಣುವೆ ಏಕಮ್ಮಾ
ಹೆಣ್ಣೋ ಗಂಡೋ ಎಂಬುದ
ತಿಳಿಯುವ ಕುತೂಹಲ ನಿನಗೆ ಬೇಡಮ್ಮಾ...[ಭ್ರೂಣದ ಕೂಗು]
     ಎಳೆಯರಧ್ವನಿ ಮಿಡಿಸುವುದರ ಜೊತೆಗೆ ಕವಯತ್ರಿ ಈ ಸಂಕಲನದಲ್ಲಿ ಸಾಮಾಜಿಕ ಅನಿಷ್ಟಗಳ ವಿರುದ್ದ ಧ್ವನಿ ಎತ್ತಿದ್ದಾರೆ. ಪ್ರತಿಯೊಬ್ಬ ದಂಪತಿಗಳೂ ಮಗು ಭ್ರೂಣ ವ್ಯವಸ್ಥೆಯಲ್ಲಿರುವಾಗಲೇ ಹೇಣ್ಣೋ ಗಂಡೋ ಎಂದು ಪರೀಕ್ಷಿಸುವುದರ ಮೂಲಕ ಹೆಣ್ಣಿದ್ದರೆ ಕರುಳ ಕತ್ತರಿಸಿ ಹಾಕುವ ನೀಚತನಕ್ಕೆ ಮುಂದಾಗುವುದನ್ನು ಸಾಕಷ್ಟು ಕಂಡಿದ್ದೇವೆ. ಅದೆ ಹೆಣ್ಣು ಭ್ರೂಣದ ಅಂತರಾಳದ ತುಮುಲ, ದಾವಂತಗಳಿಗೆ ಕವಯತ್ರಿಯಿಲ್ಲಿ ಜೀವ ತುಂಬಿದ್ದಾರೆ. ಅದು ತಾಯಿಯನ್ನು ಪ್ರಶ್ನಿಸುವ ಸನ್ನಿವೇಶ ಕರುಳು ಹಿಂಡುವಂಥದ್ದು. ನನ್ನನ್ನೂ ಹೊರ ಜಗತ್ತಿಗೆ ಬರಲು  ಅವಕಾಶ ಮಾಡಿಕೊಡಿ, ನಿನ್ನಂತೆ ನಾನೂ ಒಂದು ಜೀವ. ಹಾಗೆಯೇ ಮುಂದುವರಿದು ಬೆಳವಣಿಗೆ ಹಂತದಲ್ಲಿ ಅಡಿಗೆ ಮನೆಗೆ ದೂಡದಿರಮ್ಮಾ, ಜಗಲಿಯ ಬೆಳಕನು ನೀಡಮ್ಮಾ, ಎಲ್ಲರ ಕೂಡ ನಾನೂ ಬೆರೆಯುವೆ, ನನ್ನಯ ಹೆಜ್ಜೆಯ ಜಗದಲಿ ಉಳಿಸುವೆ ಎಂಬ ಆಶ್ವಾಸನೆಯನ್ನು ನೀಡುವುದರ ಮೂಲಕ ಆ ಭ್ರೂಣ ತನ್ನ ಇರುವಿಕೆಯನ್ನು ತೋರಿಸುವ ಹಂಬಲವನ್ನು ಕವಯತ್ರಿ ಸೊಗಸಾಗಿ, ಮನ ಮಿಡಿಯುವಂತೆ ಚಿತ್ರಿಸಿದ್ದಾರೆ.
ಹಾಗೆಯೇ ಹಲವಾರು ಸಾಮಾಜಿಕ ಸಮಸ್ಯೆ-ಸವಾಲುಗಳನ್ನು ತರಲು ಪ್ರಯತ್ನಿಸಿದ್ದಾರೆ. ಅವುಗಳಲ್ಲಿ ಕುಡಿತವೂ ಒಂದು.
ಅಪ್ಪ ಏಕೆ ಕುಡಿದು ಬರುವೆ
ನಮ್ಮನ್ನೇಕೆ ಹಾಗೆ ಬಡಿವೆ
ಅಮ್ಮನನ್ನು ಒದ್ದು ಬಿಡುವೆ
ಮನೆ-ಮಗಳನು ಅಳಿಸಿ ಬಿಡುವೆ...[ಅಪ್ಪ ಅಪ್ಪ ಕೇಳಪ್ಪ]
      ಕುಡಿತದಿಂದ ಒಂದು ಕುಟುಂಬ, ಮನೆ, ಮನೆಯೊಳಗಿನ ಮನಸ್ಸುಗಳಿಗಾಗುವ ನೋವು, ಸಂಕಷ್ಟಗಳು ಎಂಥವು ಎಂಬುದನ್ನು ಮಗುವಿನ ಮೂಲಕ ಸಾಕಾರಗೊಳಿಸುವ ರೀತಿ ಸೊಗಸಾಗಿದೆ. ಓದು ಬರಹಕ್ಕೆಂದು ನೀನು ನಮಗೆ ಹಣವ ನೀಡಲಿಲ್ಲ, ಅಮ್ಮ ಕೂಲಿಗೈದ ಹಣವ ನೀನು ನಮಗೆ ಬಿಡಲೇ ಇಲ್ಲ ಎಂದು ನೈತಿಕವಾಗಿ ಬುದ್ಧಿ ಹೇಳುತ್ತಾ.. ಕುಡುಕ ಅಪ್ಪನೆಂದು ನಿನ್ನ ಗೆಳಯರೆಲ್ಲಾ ಜರಿಯುವಾಗ, ನನ್ನ ನೋವ ದೇವನೆ ಬಲ್ಲ ನಿನಗಿದೇಕೆ ತಿಳಿಯಲಿಲ್ಲ ? ಎಂದು ತನ್ನ ಸಹಪಾಠಿಗಳಿಂದ ಆಗುವ ಅವಮಾನವನ್ನು ನಿವೇದಿಸಿಕೊಳ್ಳುವುದು ಓದುಗರ ಮನವನ್ನು ಒಂದು ಕ್ಷಣ ಕಲಕುವುದರಲ್ಲಿ ಎರಡು ಮಾತಿಲ್ಲ.
     ಒಟ್ಟಾರೆ ಹೇಳುವುದಾದರೆ ಇವರ ಕವಿತೆಗಳಲ್ಲಿ ಸಂಬಂಧಗಳು, ಪ್ರೀತಿ-ವಾತ್ಸಲ್ಯಗಳು, ನ್ಯಾಯ-ಧರ್ಮಗಳು, ಪ್ರಕೃತಿ ಪ್ರೀತಿ, ಪ್ರಾಣಿ-ಪಕ್ಷಿಗಳ ಕಾಳಜಿ, ಸಾಮಾಜಿಕ ಅನಿಷ್ಟಗಳ ವಿಡಂಬನೆ, ಕಾಳಜಿ, ಸೂರ್ಯ-ಚಂದ್ರ, ನಕ್ಷತ್ರ, ಮೋಡ-ಮಳೆಗಳ ಸೊಬಗು, ಸೌಂದರ್ಯ, ಭಿನ್ನಾಣಗಳು ಆವಿರ್ಭವಿಸಿವೆ. ಇಲ್ಲಿನ ಕವಿತೆಗಳಲ್ಲಿ ಮಾನವೀಯ ಸೆಲೆಗಳಿವೆ.
      ಜೀವನ ಪ್ರೀತಿಯ ಹೊಳವಿದೆ. ಪ್ರತಿ ಮಗುವಿನ ಒಳ ತುಮುಲಗಳಿವೆ. ಇಂತಹ ಅಮೂಲ್ಯ ಕೃತಿಯನ್ನು ನೀಡಿದ ಸಹೋದರಿ ಸುಶೀಲಾಸೋಮಶೇಖರ್‍ರವರು ನಿಜಕ್ಕೂ ಅಭಿನಂದಾರ್ಹರು. ಇವರ ಸಾಹಿತ್ಯ ಪ್ರಭೆ ನಿರಂತರವಾಗಿ ಪ್ರಜ್ವಲಿಸಲಿ ಎಂದು ಆಶಿಸುವೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197 


ಶುಕ್ರವಾರ, ನವೆಂಬರ್ 7, 2014

ಭಾರತದ ಪ್ರಥಮ ‘ನೊಬೆಲ್’ ವಿಜ್ಞಾನಿ ಸರ್.ಸಿ.ವಿ. ರಾಮನ್ - ಕೊಟ್ರೇಶ್ ಎಸ್. ಉಪ್ಪಾರ್


     ಆಧುನಿಕವಾಗಿ ಭಾರತ ವಿಶ್ವಪಂಕ್ತಿಯಲ್ಲಿ ಪ್ರಜ್ವಲಿಸಲು ಕಾರಣವಾದದ್ದು ‘ರಾಮನ್ ಪರಿಣಾಮ’. ಇದು ಜಾಗತಿಕ ವಿಜ್ಞಾನ ಲೋಕದಲ್ಲಿ ಮೈಲುಗಲ್ಲಾಯಿತು. ಇದಕ್ಕೆಲ್ಲಾ ಕಾರಣ ಭಾರತದ ಹೆಸರಾಂತ ವಿಜ್ಞಾನಿ ಡಾ ಸರ್.ಸಿ.ವಿ. ರಾಮನ್’ ರವರು. ‘ಚಂದ್ರಶೇಖರ್ ವೆಂಕಟರಾಮನ್ ಇದು ಅವರ ಪೂರ್ಣ ಹೆಸರು.
    ಇವರು 1888 ನವಂಬರ್ 07 ರಂದು ತಮಿಳುನಾಡಿನ ‘ತಿರುಚಿನಾಪಳ್ಳಿ' ಸಮೀಪದ ‘ತಿರುವನೈಕಾವಲ್' ಎಂಬ ಊರಿನ ಶ್ರೀ ಚಂದ್ರಶೇಖರ್ ಹಾಗೂ ಶ್ರೀಮತಿ ಪಾರ್ವತಿ ಅಮ್ಮಾಳ್ ದಂಪತಿಗಳ ಪುಣ್ಯ ಗರ್ಭಾಂಬುದಿಯಲ್ಲಿ ಜನಿಸಿದರು. ಚಂದ್ರಶೇಖರ್ ರವರು ಭೌತಶಾಸ್ತ್ರ ಪ್ರಧ್ಯಾಪಕರಾಗಿದ್ದರು. ಇವರದು ಅವಿಭಕ್ತ ಕುಟುಂಬವಾದ್ದರಿಂದ ಜೀವನ ಅಷ್ಟೊಂದು ಸುಸ್ಥಿತಿಯಲ್ಲಿರಲಿಲ್ಲ. ‘ರಾಮನ್' ಅವರ ತುಡಿತ, ಮನೋಕಾಂಕ್ಷೆಗಳಿಗೆ ತಕ್ಕಂತಹ ಶೈಕ್ಷಣಿಕ ಸೌಕರ್ಯಗಳನ್ನು
    ಪೂರೈಸುವ ಶಕ್ತಿ ಕುಟುಂಬಕ್ಕಿರಲಿಲ್ಲ, ಚಿಕ್ಕವಯಸ್ಸಿನಲ್ಲಿಯೇ ಜ್ಞಾನದಾಹಿಯಾಗಿದ್ದ ‘ರಾಮನ್' ಬಡತನದಲ್ಲಿಯೇ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರು. ತಮ್ಮ 12ನೆಯ ವಯಸ್ಸಿಗೆ ‘ಮೆಟ್ರಿಕ್ಯೂಲೇಶನ್' ಮುಗಿಸಿದರು. ಇವರ ಆಸಕ್ತಿ ಕಂಡ ತಂದೆ ಚಂದ್ರಶೇಖರ್ ರವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎಸ್ಸಿಗೆ ಸೇರಿಸಿದರು. ತಂದೆಯ ಆಶೋತ್ತರಗಳಂತೆ ‘ರಾಮನ್' 1904 ಬಿ.ಎಸ್ಸಿ, 1907 ರಲ್ಲಿ ಎಂ. ಎಸ್ಸಿ ಪದವಿಗಳನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಇವರಿಗೆ ವೈಜ್ಞಾನಿಕ ಅದರಲ್ಲೂ ಭೌತಶಾಸ್ತ್ರದ ಪ್ರಯೋಗಗಳಲ್ಲಿ ಎಲ್ಲಿಲ್ಲದ ಆಸಕ್ತಿ. ವಿದ್ಯಾಭ್ಯಾಸ ಪೂರೈಸಿದ ನಂತರವೂ ಅವರ ಮನಸ್ಸು ನವ-ನವೀನ ಆವಿಷ್ಕಾರಗಳತ್ತ ತುಡಿಯುತ್ತಲಿತ್ತು. ಯಾವುದೋ ಹೊಸತನಕ್ಕೆ ಹಂಬಲಿಸುತ್ತಿತ್ತು.
   1907 ರಲ್ಲಿ ನಡೆದ ‘ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆ' ಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತಾದಲ್ಲಿ 'ಡೆಪ್ಯೂಟಿ ಅಕೌಂಟೆಂಟ್ ಜನರಲ್' ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆದರೂ ಇವರ ಭೌತಶಾಸ್ತ್ರದ ಅಧ್ಯಯನದ ಕಡೆಗೆ ತುಡಿಯುತ್ತಲಿತ್ತು. ಇವರಿಗೆ ಸಂಶೋಧನೆ ಮಾಡಲು ಸಮಯವಕಾಶದ ತೊಂದರೆಯೂ ಆಯಿತು. ವೃತ್ತಿ ಹಾಗೂ ಪ್ರವೃತ್ತಿಗಳೆರಡೂ ಭಿನ್ನವಾಗಿ ಕೆಲಕಾಲ ಮೌನ ತಾಳಿದ ‘ರಾಮನ್' ಅವರು 1917 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು. ಇದುವೇ ಅವರ ಬದುಕಿನ ದಿಕ್ಕನ್ನು ಬದಲಿಸಿದ ಕಾಲ ಘಟ್ಟವೆನ್ನಬಹುದು. ಅಲ್ಲಿಗೆ ಅವರ ವೃತ್ತಿ, ಪ್ರವೃತ್ತಿಗಳೆರಡೂ ಸಂಗಮವಾದವು. ಮುಂದೆ 1924 ರಲ್ಲಿ ‘ಲಂಡನ್ನಿನ ಫೆಲೋ ಆಫ್ ರಾಯಲ್ ಸೊಸೈಟಿಗೆ ರಾಮನ್ ಆಯ್ಕೆಯಾದರು. ಈ ಅವಕಾಶ ಅವರ ಆವಿಷ್ಕಾರದ ಹೆಬ್ಬಾಗಿಲನ್ನು ತೆರೆಯಿತು.
      ಸತತ ಮೂರ್ನಾಲ್ಕು ವರ್ಷಗಳು ಸಂಶೋಧನೆಯ ಆಳಕ್ಕೆ ಇಳಿದ ರಾಮನ್‍ರಿಗೆ ಕಾಡಿದ್ದು ‘ಆಕಾಶದ ನೀಲಿಬಣ್ಣ ಅವರನ್ನು ಸ್ಥಬ್ದರನ್ನಾಗಿ ಮಾಡಿತ್ತು, ಅದು ಹೇಗೆ ಸಾಧ್ಯ? ಎಂಬ ಪ್ರಶ್ನೆ! ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಂಡ ಕಡಲಿನ ನೀಲಿ ಬಣ್ಣದ ಕಾರಣವನ್ನು ತಿಳಿಯಲು ಸಾಕಷ್ಟು ಪ್ರಯೋಗ ಮಾಡಿದರು. ಆಕಾಶದ ನೀಲಿ ಬಣ್ಣ, ಹಾಗೆಯೇ ಬಗೆಬಗೆಯ ಹೂಗಳ ಬಣ್ಣಗಳಿಂದಲೂ ಆಶ್ಚರ್ಯ ಚಕಿತರಾದ ಅವರು ಈ ವಿಸ್ಮಯವನ್ನು ಕಂಡು ಹಿಡಿಯಲು ಪಣತೊಟ್ಟರು.
      ಸುದೀರ್ಘವಾದ ಅಧ್ಯಯನದಾಳಕ್ಕಿಳಿದ ರಾಮನ್ ವಾತಾವರಣದಲ್ಲಿರುವ ಧೂಳಿನ ಕಣಗಳು ಭಾಗಶಃ ಚದುರುವಿಕೆಯಿಂದ ಅದರ ಎಲ್ಲಾ ಬಣ್ಣಗಳು ಚದುರುವವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯ ಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು, ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುವುದು, ಎನ್ನುವ ವಿಚಾರ ಬೆಳಕಿಗೆ ಬಂದಿತು.
     1928 ರ ಫೆಬ್ರವರಿ 28 ರಂದು ಈ ಸಂಶೊಧನೆಯ ವರದಿಯನ್ನು ‘ರಾಮನ್ ಎಫೆಕ್ಟ್' ಎಂಬ ಹೆಸರಲ್ಲಿ ಜಾಗತಿಕವಾಗಿ ಸ್ವತಃ ರಾಮನ್ ಬಹಿರಂಗ ಪಡಿಸಿದರು. ನಂತರ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಸಂಪೂರ್ಣ ವಿವರವನ್ನು ಪ್ರಸ್ತುತ ಪಡಿಸಿದರು.
     ‘ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ' ಎಂದು ಧೃಡಪಡಿಸಿದರು. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಪ್ರತಿವರ್ಷ ಫೆಬ್ರವರಿ 28 ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಇಂದಿಗೂ ಆಚರಿಸುತ್ತಿದ್ದೇವೆ. ಈ ಅಪರೂಪದ ಆವಿಷ್ಕಾರ ಗಮನಿಸಿದ ವಿಶ್ವ ವಿಜ್ಞಾನ ಸಂಸ್ಥೆ 1930 ರಲ್ಲಿ ರಾಮನ್‍ರ ‘ರಾಮನ್ ಎಫೆಕ್ಟ್' ಸಂಶೋಧನೆಗೆ ಪ್ರತಿಷ್ಠಿತ ನೊಬೆಲ್  ಪ್ರಶಸ್ತಿ ಘೋಷಿಸಿತು. ಈ ಮೂಲಕ ರಾಮನ್ ಅವರು ಭಾರತಕ್ಕೆ ವಿಜ್ಞಾನ ವಿಭಾಗದಲ್ಲಿ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿಗೆ ಭಾಜನರಾದರು.
     ಬಾಲ್ಯದಿಂದಲೂ ಭೌತಶಾಸ್ತ್ರದಲ್ಲಿ ಎಲ್ಲಿಲ್ಲದ ಆಸಕ್ತಿ ಹೊಂದಿದ್ದ ರಾಮನ್ ಅದೇ ವಿಷಯದಲ್ಲಿ ಜಗತ್ತು ತನ್ನೆಡೆಗೆ ನೋಡುವಂತೆ ಮಾಡಿದ್ದು ಅತ್ಯದ್ಬುತ ಸಾಧನೆ.
    1934 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತೀಯರಲ್ಲಿ ಸಂಶೋಧನಾ ಮನೋಪ್ರವೃತ್ತಿಗಳನ್ನು ಅಭಿವೃದ್ದಿಪಡಿಸಲು ಬಹಳ ಶ್ರಮವಹಿಸಿದರು. ತದನಂತರ 1943 ರಲ್ಲಿ ‘ರಾಮನ್' ಸಂಶೋಧನಾ ಕೇಂದ್ರ'ವನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಿದರು.
     ಬಾಲ್ಯ ಹಾಗೂ ಶಿಕ್ಷಣವನ್ನು ತಮಿಳುನಾಡಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ವೃತ್ತಿಯನ್ನು ಆರಂಭಿಸಿ, ಸಂಶೋಧನೆಯನ್ನು ಕರ್ನಾಟಕದಲ್ಲಿ ಮಾಡಿದ ಅವರು ಬೆಂಗಳೂರನ್ನು ಆವಿಷ್ಕಾರದ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡರು. ಅವರು ಭಾವಿ ಸಂಶೋಧಕರಿಗಾಗಿಯೇ ಸ್ಥಾಪಿಸಿದ ಈ ಸಂಸ್ಥೆ ಅನೇಕ ವಿಜ್ಞಾನಿಗಳನ್ನು ನೀಡಿದೆ. ಸಿ.ವಿ. ರಾಮನ್ ಅವರ ಇನ್ನೊಂದು ಅಭೂತ ಪೂರ್ವ ಕೊಡುಗೆ ಎಂದರೆ ‘ಸ್ಟ್ರೊಕ್ಟ್ರೋಸ್ಕೊಪಿ'.
ಇವರ ಅವಿಸ್ಮರಣಿಯ ಸಂಶೋಧನೆಗಳಿಗಾಗಿ ಹಲವಾರು ಗೌರವ ಪುಸ್ಕಾರಗಳು ದೊರೆತಿವೆ.
1. 1924 ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ
2. 1929 ರಲ್ಲಿ ‘ನೈಟ್ ಹುಡ್' ಪ್ರಶಸ್ತಿ
3. 1930 ರಲ್ಲಿ ಪ್ರತಿಷ್ಟಿತ ‘ನೊಬೆಲ್ ಪ್ರಶಸ್ತಿ'
4. 1935 ರಲ್ಲಿ ಮೈಸೂರು ಮಹಾರಾಜರಿಂ 'ರಾಜ ಸಭಾ ಭೂಷಣ ಗೌರವ'
5. 1954 ರಲ್ಲಿ ‘ಭಾರತ ರತ್ನ ಪ್ರಶಸ್ತಿ' ಪ್ರಮುಖವಾದವುಗಳು.
ಭಾರತೀಯಕ್ಕಷ್ಟೇ ಮೀಸಲಾಗದೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಧೃವತಾರೆಯಾಗಿ ಪ್ರಜ್ವಲಿಸಿದ ಡಾ|| ಸರ್.ಸಿ.ವಿ ರಾಮನ್‍ರ ಕೊಡುಗೆ ಅಪಾರ, ಅನನ್ಯ. ಅವರ ಆವಿಷ್ಕಾರಗಳು ಸಾವಿರಾರು ಯುವ ವಿಜ್ಞಾನಿಗಳಿಗೆ ದಾರಿ ದೀಪಗಳಾಗಿವೆ. ಇಂತಹ ಒಂದು ಅಮೂಲ್ಯ ರತ್ನ 1970 ನವೆಂಬರ್ 20 ರಂದು ಬೆಂಗಳೂರಿನಲ್ಲಿ ಇನ್ನಿಲ್ಲವಾಯಿತು.

ಕೊಟ್ರೇಶ್ ಎಸ್. ಉಪ್ಪಾರ್, 
ಭಾಷಾ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಳೂರು
ಆಲೂರು ತಾ||, ಹಾಸನ ಜಿ||
ಮೊ-9483470794

ಸೋಮವಾರ, ನವೆಂಬರ್ 3, 2014

ಹಾಸನ ರಂಗಭೂಮಿಯ ಐತಿಹ್ಯಗಳ ಹೊಳವು ‘ರಂಗ ಪ್ರಯೋಗ’- ಕೊಟ್ರೇಶ್ ಎಸ್. ಉಪ್ಪಾರ್


  ಭಾರತೀಯ ಚರಿತ್ರೆಯಲ್ಲಿ ಕ್ರಿ.ಶ.1756 ರಿಂದ 1946 ರ ವರೆಗಿನ ಎರಡು ಶತಮಾನಗಳ ಅವಧಿಯನ್ನು ಬ್ರಿಟೀಷ್ ವಸಾಹತುಶಾಹಿಯ ಕಾಲವೆಂದು ಗುರ್ತಿಸುತ್ತೇವೆ. ಬ್ರಿಟೀಷರು ನಮ್ಮ ಮೇಲೆ ಕೇವಲ ರಾಜಕೀಯ ಆಕ್ರಮಣವನ್ನು ಮಾತ್ರ ಮಾಡಲಿಲ್ಲ ! ಸಾಂಸ್ಕøತಿಕ ದಾಳಿಯನ್ನು ಮಾಡಿದರು. ಆಗ ಭಾರತೀಯ ಸಾಮಾಜಿಕ ರಚೆನೆಯ ವಿನ್ಯಾಸದಲ್ಲೇ ಪಲ್ಲಟವುಂಟಾಯಿತು.
   ಕಳೆದ ಶತಮಾನದ ಆರಂಭದಲ್ಲಿ ಕನ್ನಡ ಸಂಸ್ಕøತಿ ವಸ್ತು, ಆಕೃತಿ, ಆಲೋಚನಾ ಕ್ರಮ ಎಲ್ಲದರಲ್ಲಿಯೂ ಹೊಸತನ ಪಡೆಯಲು ಹವಣಿಸುತಿತ್ತು. ನವೋದಯದ ಈ ಸಂದರ್ಭ ರಂಗಭೂಮಿಯಲ್ಲೂ ಹೊಸತನ ತಂದಿತು. ಜಾಗತಿಕವಾಗಿ ಉಂಟಾಗಿದ್ದ ಪಲ್ಲಟಕ್ಕೆ ಕನ್ನಡ ಮನಸ್ಸೂ ತನ್ನನ್ನು ತೆರೆದುಕೊಂಡಿತ್ತು.
    ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಪಾಶ್ಚಾತ್ಯ ರಂಗಭೂಮಿಯ ನಿಕಟ ಸಂಪರ್ಕದ ಮೂಲಕ ಕೈಲಾಸಂ, ಶ್ರೀರಂಗರು ಒಂದು ಮಾದರಿಯನ್ನು ರೂಪಿಸಿದರೆ, ಮಹಾಕವಿ ಕುವೆಂಪು ಅದಕ್ಕಿಂತ ಭಿನ್ನವಾದ ಮತ್ತೊಂದು ಮಾದರಿಯನ್ನು ಕನ್ನಡಕ್ಕೆ ನೀಡಿದರೆಂದು ಖ್ಯಾತ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.
    ನಮ್ಮ ಹಾಸನ ಜಿಲ್ಲೆಯ ಸಂದರ್ಭದಲ್ಲಿ ಗೊರೂರು, ಬೇಲೂರು ಕೃಷ್ಣಮೂರ್ತಿ, ಅನಕೃ, ಮಳಲಿ ವಸಂತಕುಮಾರ್ ಮುಂತಾದ ವೈವಿಧ್ಯಮಯವಾದ, ಎತ್ತರದ ಅನೇಕ ಸೃಜನಶೀಲ ಪ್ರತಿಭೆಗಳನ್ನು ನಾವು ಕಾಣಬಹುದಾದರೂ ಇತ್ತೀಚೆಗೆ ಈ ರಂಗದಲ್ಲಿ ಗೊರೂರು ಅನಂತರಾಜುರವರು ಸಾಂಸ್ಕøತಿಕವಾಗಿ ಮಹತ್ವವೆನಿಸಿದ್ದಾರೆ.
   ವ್ಯವಸ್ಥೆ, ವೀರಪ್ಪನ್ ಭೂತ, ನಾರಿ ಹೆಜ್ಜೆ ನರಿ ಕಣ್ಣು ಮುಂತಾದ ನಾಟಕಗಳು ಹಲವಾರು ಪ್ರದರ್ಶನಗಳನ್ನು ಕಂಡು ಅನಂತರಾಜುರವರಿಗೆ ಯಶಸ್ವೀ ತಂದು ಕೊಟ್ಟಿವೆ. ಇವಲ್ಲದೇ ಇವರು ರಂಗಭೂಮಿಗೆ ಯಾರೇ, ಯಾವುದೇ ಕಾರ್ಯಕ್ರಮ ನೀಡಲಿ ಅದನ್ನು ದಾಖಲಿಸುತ್ತಾರೆ. ರಂಗಪ್ರಯೋಗಗಳು, ಕಲಾವಿದರನ್ನು, ಪಾತ್ರ ಪರಿಕಲ್ಪನೆಗಳನ್ನು ವಿಮರ್ಶಿಸಿ ಪತ್ರಿಕೆಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ತ್ಯಾರ್ಹವಾದುದು.
   ಅಂತೆಯೇ ಇತ್ತೀಚೆಗೆ ಬಿಡುಗಡೆಯಾದ ಇವರ ‘ರಂಗ ಪ್ರಯೋಗ’ ಎಂಬ ಕೃತಿಯನ್ನು ನೀಡಿ ಗುರುಗಳೇ ಇದನ್ನು ಪರಿಚಯಿಸಿ ಎಂದು ಕೈಗಿತ್ತರು. ತತ್ಪರಿಣಾಮವಾಗಿಯೇ ಈ ವಿಶ್ಲೇಷಣೆ.
   178 ಪುಟಗಳ, 108 ರೂಪಾಯಿಗಳ ಮುಖ ಬೆಲೆಯ ಈ ಕೃತಿಯು ಲೇಖಕರ ಸ್ವಂತ ಪ್ರಕಾಶನದಿಂದ ಪ್ರಕಟಿತಗೊಂಡ ಈ ಕೃತಿಗೆ ಚಂದ್ರು ಕಾಳೇನಹಳ್ಳಿಯವರ ಮುನ್ನುಡಿ, ಎಚ್,ಎಸ್.ಗೋವಿಂದೇಗೌಡÀರ ಬೆನ್ನುಡಿಗಳು ಕಳೆಕಟ್ಟಿದ್ದರೆ, ತಿ.ರಾಮಕೃಷ್ಣಯ್ಯನವರು ಬರೆದ ಅನಂತರಾಜು ಕುರಿತ ಪರಿಚಯಾತ್ಮಕ ಲೇಖನ ಸೊಗಸಾಗಿದೆ.
   76 ನಾಟಕಗಳು, 10 ಕಿರು ನಾಟಕಗಳು, 05 ಮಕ್ಕಳ ನಾಟಕಗಳು, 03 ಶೈಕ್ಷಣಿಕ ಜಾಗೃತಿ ನಾಟಕಗಳನ್ನೊಳಗೊಂಡ 56 ನಾಟಕಕಾರರ ಸುಮಾರು 94 ನಾಟಕಗಳ ರಂಗ ಪ್ರಯೋಗ ಕುರಿತ ಒಟ್ಟು 49 ಲೇಖನಗಳು ಈ ‘ರಂಗ ಪ್ರಯೋಗ’ ದಲ್ಲಿ ಆವಿರ್ಭವಿಸಿವೆ.
   ಇಲ್ಲಿ ಮೌಡ್ಯ, ಜಾಗೃತಿ, ಶಿಕ್ಷಣ, ಇತಿಹಾಸ, ಪುರಾಣ, ವಾಸ್ತÀವ, ಧಾರ್ಮಿಕ ಮುಂತಾದ ವಿಷಯಗಳ ಹೊತ್ತ ನಾಟಕಗಳ ಕಿರು ಪರಿಚಯಗಳನ್ನು ಗೆಳೆಯ ಅನಂತರಾಜುರವರು ಮಾಡಿದ್ದಾರೆ.
   ಡಾ|| ಗಿರೀಶ್ ಕಾರ್ನಾಡರ ‘ಹಯವದನ’, ‘ತಲೆದಂಡ’, ‘ಅಂಜುಮಲ್ಲಿಗೆ’, ‘ಯತಾತಿ’; ಚಂದ್ರಕಾಂತ ಕುಸನೂರರ ‘ಮನೆ’; ಪಿ.ಲಂಕೇಶರ ‘ತೆರೆಗಳು’, ‘ಸಂಕ್ರಾಂತಿ’; ಕುವೆಂಪುರವರ ‘ಸ್ಮಶಾನ ಕುರುಕ್ಷೇತ್ರ’, ‘ಜಲಗಾರ’, ‘ರಕ್ತಾಕ್ಷಿ’, ‘ಬಿರುಗಾಳಿ’; ಪರ್ವತವಾಣಿಯವರ ‘ಉಂಡಾಡಿ ಗುಂಡ’ ಯಿಂದ ಹಿಡಿದು ಡಾ || ಚಂದ್ರಶೇಖರ ಕಂಬಾರ, ರಾಜೇಂದ್ರ ಕಾರಂತ, ಭಾಸ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಪೂಚಂತೆ, ಚಂಪಾ, ರಾಜಪ್ಪ ದಳವಾಯಿ, ಎಚ್.ಎಸ್.ಶಿವಪ್ರಕಾಶ್, ಜಯಂತ್ ಕಾಯ್ಕಿಣಿ ಹಾಗೆಯೇ ಇತ್ತೀಚಿನ ಹಾಸನ ಜಿಲ್ಲೆಯ ನಾಟಕಕಾರರಾದ ಎಚ್.ಬಿ.ರಮೇಶ್, ಬೇಲೂರು ಕೃಷ್ಣಮೂರ್ತಿ, ನಂಜುಂಡಮೈಮ್, ಚಂದ್ರಕಾಂತ ಪಡೆಸೂರು, ಎಚ್.ಎಸ್.ಪ್ರಭಾಕರ, ನಾಗರಾಜ್ ಕೋಟೆ, ಗೊರೂರು ಅನಂತರಾಜು ಹೀಗೆ ಐವತ್ತಾರು ನಾಟಕಕಾರರ ನಾಟಕಗಳು ಸೂಕ್ಷ್ಮವಾಗಿ ಅನಾವರಣಗೊಂಡಿವೆ.
   ಇಲ್ಲಿ ನಾಟಕ, ನಾಟಕಕಾರರ ಜೊತೆಗೆ ಅದಕ್ಕೆ ಜೀವ ನೀಡಿದ ನಿರ್ದೇಶಕ ಹಾಗೂ ಪಾತ್ರದಾರಿಗಳ ಮೇಲೂ ಅನಂತರಾಜು ಬೆಳಕು ಚೆಲ್ಲಿದ್ದಾರೆ. ಪ್ರದರ್ಶನಗೊಂಡ ದಿನಾಂಕ, ಸ್ಥಳಗಳನ್ನು ನಮೂದಿಸುವುದರ ಜೊತೆಗೆ ಜೀವಂತಿಕೆ ತುಂಬಲು ಪ್ರಯತ್ನಿಸಿದ್ದಾರೆ.
   ಹಾಸನ ಜಿಲ್ಲೆಯಲ್ಲಿ ಎಲ್ಲೇ ರಂಗಪ್ರಯೋಗ ನಡೆದರೂ ಅಲ್ಲಿ ಅನಂತರಾಜುರವರು ಇರುತ್ತಾರೆ. ನಾಟಕ ನೋಡಿ ಖುಷಿ ಪಟ್ಟರಷ್ಟೇ ಸಾಲದು ಅದನ್ನು ದಾಖಲಿಸುವ ಕಾರ್ಯವಾಗಬೇಕು. ಅಂತಹ ಕಾರ್ಯವನ್ನು ಕಾಯ, ವಾಚಾ, ಮನಸಾ ಶ್ರದ್ಧೆಯಿಂದ ಸ್ನೇಹಿತರಾದ ಅನಂತರಾಜುರವರು ಮಾಡುತ್ತಾ ಬಂದಿದ್ದಾರೆ. ಹಾಸನದ ಸಾಂಸ್ಕøತಿಕ ಸೊಬಗನ್ನು ಬಣ್ಣಿಸಿ ದಾಖಲೀಕರಣ ಮಾಡಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕಲಾವಿದರು ತಿಂಗಳುಗಟ್ಟಲೇ ತರಬೇತಿ, ಅಭ್ಯಾಸ ಪಡೆದು ರಂಗಪ್ರಯೋಗ ಮಾಡಿ ಒಂದು ವಾರದಲ್ಲಿಯೇ ಮರೆತುಬಿಡುತ್ತಾರೆ. ಅಲ್ಲಿಗೆ ಆ ರಂಗ ಪ್ರಯೋಗ ಮುಗಿಯಿತು. ಆದರೆ ಇಂತಹ ಅವಿಸ್ಮರಣೀಯ ಸಂದರ್ಭಗಳನ್ನು ಕೂಲಂಕುಷವಾಗಿ ವಿಮರ್ಶಿಸಿ ದಾಖಲಿಕರಿಸಿ, ಕೃತಿರೂಪದಲ್ಲಿ ತರುವುದರ ಮೂಲಕ ರಂಗಕಲೆ, ಕಲಾವಿದರನ್ನು ಶಾಶ್ವತವಾಗಿ ಜೀವಂತವಾಗಿಡುವ ಸುಕಾರ್ಯವನ್ನು ‘ರಂಗ ಪ್ರಯೋಗ’ ಎಂಬ ಕೃತಿಯ ಮೂಲಕ ಅನಂತರಾಜುರವರು ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
   ಪ್ರೌಢ ಹಾಗೂ ಕಿರು ನಾಟಕಗಳಿಗೆ ಮಾತ್ರ ಸೀಮಿತವಾಗದೆ ಮೂರ್ತಿ ದೇರಾಜೆಯವರ ‘ಬಾರಯ್ಯ ಬೆಳದಿಂಗಳೆ’; ವಾಸುದೇವ ಗಂಗೇರ ಅವರ ‘ಪಂಜರ’; ಕೃಷ್ಣಪ್ರಸಾದ್ ಅವರ ‘ಪಂಡಿತ ಕಳ್ಳರು ಮತ್ತು ಜನಪದಜೋಗಿ’ ಮುಂತಾದ ಮಕ್ಕಳ ನಾಟಕಗಳು ಚಿಣ್ಣರ ಮೇಳದಲ್ಲಿ ನಡೆದ ಸಂದರ್ಭದಲ್ಲಿ ಅಲ್ಲಿಗೆ ದಾವಿಸಿದ ಅನಂತರಾಜುರವರು ಮಕ್ಕಳ ಅಭಿನಯಗಳನ್ನು ವೀಕ್ಷಿಸಿ ಪ್ರೋತ್ಸಾಹಿತವಾಗಿ ವಿಮರ್ಶಿಸಿದ್ದಾರೆ.
    ‘ಬಾರಯ್ಯ ಬೆಳದಿಂಗಳೇ’ ಕುರಿತು ಲೇಖಕರಿಲ್ಲಿ ಅವರೇ ಹೇಳುವಂತೆ- “ ಹುಣ್ಣಿಮೆಯಂದು ಕಥೆ ಹೇಳುವ ಅಜ್ಜ ಇಲ್ಲಿ ಹೇಳಿದ ಕಥೆ ಪಂಚತಂತ್ರದ್ದು. ರೈತನ ಬಲೆಯಿಂದ ತಪ್ಪಿಸಿಕೊಳ್ಳುವ ಹಕ್ಕಿಯ ಕಥೆ ಇಲ್ಲಿ ಬೇರೆಯೇ ಆದ ಧ್ವನಿ ಮೂಡಿಸಿತು. ಪ್ರೀತಿಯಿಂದ ದ್ವೇಷವನ್ನು ಗೆಲ್ಲುವ ಕಾಗೆ ಇಲ್ಲಿ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ. ಚಿಣ್ಣರ ಮೇಳದ ಅತಿ ಚಿಕ್ಕ ವಯಸ್ಸಿನ ಮಕ್ಕಳ ತಂಡದ ಈ ನಾಟಕದ ಮಾತುಗಳು, ಹಾಡುಗಳು ಎಲ್ಲ ಆ ವಯಸ್ಸಿನ ಮಕ್ಕಳ ತುಂಟಾಟ, ಮುಗ್ದತೆ, ಬೆರಗುಗಳನ್ನು ಎತ್ತಿ ತೋರಿದವು.”
    ಇವುಗಳಲ್ಲದೆಯೇ ಶೈಕ್ಷಣಿಕ ಹಾಗೂ ಸಾಮಾಜಿಕ ಜನಜಾಗೃತಿ ಮೂಡಿಸುವ ಬೀದಿ ನಾಟಕಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಕೃತಿಯು ಹಾಸನ ಜಿಲ್ಲೆಯ ಸಾಂಸ್ಕøತಿಕ ಲೋಕದ ಇತಿಹಾಸಕ್ಕೆ ಹಿಡಿದ ಕನ್ನಡಿಯಂತೆ ಮೂಡಿ ಬಂದಿದೆ. ಇವರಿಂದ ಇನ್ನೂ ಉತ್ತಮೋತ್ತಮ ಸಾಹಿತ್ಯಿಕ ಕಾರ್ಯಗಳು ಜರುಗಲಿ ಎಂದು ಆಶಿಸುತ್ತೇನೆ.

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ಪೂಜನ್ ನಿಲಯ
ತೇಜೂರು ರಸ್ತೆ, ಶಾಂತಿ ನಗರ,
ಹಾಸನ-573201
ಮೊ=-9483470794, 9739878197

ಶನಿವಾರ, ನವೆಂಬರ್ 1, 2014

ವಿಶಿಷ್ಟ ವ್ಯಕ್ತಿತ್ವದ ಬಹುಮುಖ ಪ್ರತಿಭೆ-ಪ್ರೊ.ಎಸ್.ಕೆ. ರಾಮಚಂದ್ರರಾವ್- ಕೊಟ್ರೇಶ್ ಎಸ್.ಉಪ್ಪಾರ್,


   ಕಲಾ ತಜ್ಞರು, ಲೇಖಕರು, ವಿಮರ್ಶಕರು, ಸಂಗೀತಜ್ಞರು, ಮೀಮಾಂಸಕರು, ದಾರ್ಶನಿಕರು ಎಲ್ಲಕ್ಕಿಂತ ಹೆಚ್ಚಾಗಿ ಬಹುಭಾಷಾ ಪಂಡಿತರಾಗಿದ್ದ, ಅಪರೂಪಗಳಲ್ಲಿನ ಅಪರೂಪ ವ್ಯಕ್ತಿ ಪ್ರೊ.ಎಸ್.ಕೆ. ರಾಮಚಂದ್ರರಾವ್.
    ಇವರು ಕ್ರಿ.ಶ. 1928 ಫೆಬ್ರವರಿ 09 ರಂದು ಹಾಸನದ ಶ್ರೀಕೃಷ್ಣರಾವ್ ಮತ್ತು ಶ್ರೀಮತಿ ಕಮಲಾಬಾಯಿಯವರ ಪುಣ್ಯ ಗರ್ಭಾಂಬುಧಿಯಲ್ಲಿ ಜನಿಸಿದರು. ಹುಟ್ಟಿದ್ದು ಹಾಸನದಲ್ಲಾದರೂ ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಾದರೆ, ಪ್ರೌಡಶಿಕ್ಷಣವನ್ನು ನಂಜನಗೂಡಿನಲ್ಲಿ ಪಡೆಯುತ್ತಾರೆ. ಬಾಲ್ಯದಿಂದಲೇ ವಿಶಿಷ್ಟ ಆಲೋಚನಾ ಶಕ್ತಿ, ತಾರ್ಕಿಕ ಚಿಂತನೆ, ಜ್ಞಾನದ ಹಂಬಲ ಇವರನ್ನು ಬಹು ಎತ್ತರದ ಮಟ್ಟಕ್ಕೆ ಕೊಂಡೊಯ್ದಿತೆನ್ನಬಹುದು. ವೈದಿಕ ಮೂಲದವರಾದ ರಾಮಚಂದ್ರರಾಯರು ತಮ್ಮ ತಂದೆ ಕೃಷ್ಣರಾವ್‍ರಿಂದಲೇ ಸಂಸ್ಕøತ ಕಲಿತರು. ಮೈಸೂರಿನ ಯವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿದ ಇವರು ಮೈಸೂರು ವಿ.ವಿ ಯಲ್ಲಿ 1947 ರಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.
    ಕನ್ನಡ, ಸಂಸ್ಕøತ, ಪಾಳಿ, ತೆಲಗು,ತಮಿಳು, ಬಂಗಾಳಿ, ಪ್ರಾಕೃತ, ಗ್ರೀಕ್, ಪ್ರೆಂಚ್, ಇಂಗ್ಲೀಷ್ ಹೀಗೆ ಹತ್ತಾರು ಭಾಷಾ ಪ್ರೌಢಿಮೆ ಹೊಂದಿದ್ದ ರಾಮಚಂದ್ರರಾಯರು ಸಹಜವಾಗಿಯೇ ಜ್ಞಾನ ಖಣಜವಾಗಿದ್ದರು.
     ಕ್ರಿ.ಶ 1949 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ ರಾಮಚಂದ್ರರಾಯರು ನಂತರದ ದಿನಗಳಲ್ಲಿ 1954 ರಲ್ಲಿ ಬೆಂಗಳೂರಿನ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ (ಪ್ರಸ್ತುತದಲ್ಲಿನ ನಿಮ್ಹಾನ್ಸ್) ಕ್ಲಿನಿಕಲ್ ಸೈಕಾಲಜಿ ಮುಖ್ಯಸ್ಥರಾಗಿ ಕೆಲ ಕಾಲ ಕಾರ್ಯ ನಿರ್ವಹಿಸಿದರು. ಕಾರಣಾಂತರಗಳಿಂದ ಈ ಹುದ್ದೆಗೆ ರಾಜಿನಾಮೆ ನೀಡಿ 1965 ರಲ್ಲಿ  ಆರ್.ವಿ ಟೀಚರ್ ಕಾಲೇಜು ಮತ್ತು ನ್ಯಾಷನಲ್ ಇನ್‍ಸ್ಟಿಟೂಟ್ ಆಫ್ ಸೈನ್ಸ್‍ಗಳಲ್ಲಿ ಮನಃಶಾಸ್ತ್ರ ವಿಭಾಗದ ಬೋಧಕರಾಗಿಯೂ ಕಾರ್ಯನಿರ್ವಹಿಸಿದರು. ಇದೇ ಅವಧಿಯಲ್ಲಿ ಕಾಲೇಜು ಆಫ್ ಓರಿಯಂಟಲ್ ಸ್ಟಡೀಸ್ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ  ಕಾರ್ಯ ನಿರ್ವಹಿಸಿದರು.
    ಇವರ ಅಗಾಧ ಜ್ಞಾನ ಭಂಡಾರಕ್ಕೆ ಆಗಿನ ಎಲ್ಲಾ ಶೈಕ್ಷಣಿಕ ಹಾಗೂ ತಂತ್ರಜ್ಞಾನದ ಸಂಸ್ಥೆಗಳು ಕೈ ಬೀಸಿ ಕರೆಯುತ್ತಿದ್ದರೂ ಇವರು ಮಾತ್ರ ತಮ್ಮ ಬದ್ದತೆಯನ್ನು ಬಿಟ್ಟುಕೊಟ್ಟವರಲ್ಲ, ಹಣ ಮತ್ತು ಸಂಪತ್ತಿನ ಹಿಂದೆ ಹೋಗದೆ ಉತ್ತಮ ಸಾಮಾಜಿಕ ಕಾರ್ಯದತ್ತ ಗಮನಹರಿಸಿದರು.
ಸಾಹಿತ್ಯ ಕ್ಷೇತ್ರ
   ಬಹುಭಾಷಾ ಪಂಡಿತರಾಗಿದ್ದ ರಾಮಚಂದ್ರರಾಯರು ಹಲವಾರು ಭಾಷೆಗಳಲ್ಲಿಯೂ ತಮ್ಮ ಪ್ರಬುದ್ಧವಾದ ಚಿಂತನೆಗಳನ್ನು   ಕೃತಿ ರೂಪದಲ್ಲಿ ಓದುಗರಿಗೆ ನೀಡಿದ್ದಾರೆ.
   ‘ಪೌರವ ದಿಗ್ವಿಜಯಂ’ ಎಂಬುದು ಇವರ ಸಂಸ್ಕøತ ನಾಟಕ. ಇದು ಗ್ರೀಕ್‍ವೀರ ಅಲೆಕ್ಸಾಂಡರ್ ಹಾಗೂ ಕೆಚ್ಚೆದೆಯ ವೀರ ಪೌರವನ ಕುರಿತಾದ ಕಥೆಯನ್ನೊಳಗೊಂಡಿದೆ. ‘ಸುಮಂಗಲ ಗಾಥಾ’ ಹಾಗೂ ‘ವಿಸುದ್ಧ ಮಗ್ಗ ವಿಭಾವನೀ’ ಇವೆರಡೂ ಗ್ರಂಥಗಳು ಪಾಳಿ ಭಾಷೆಯ ಠೀಕಾ ಗ್ರಂಥÀಗಳಾಗಿವೆ.
    ರಾಮಚಂದ್ರ ರಾಯರು ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲಾಗಿರದೆ ಸಣ್ಣಕಥೆ, ಕಾದಂಬರಿ, ಜೀವನ ಚರಿತ್ರೆ, ಮನಃಶಾಸ್ತ್ರ, ಸಮಾಜಶಾಸ್ತ್ರ, ದೇವಾಲಯಗಳ ಇತಿಹಾಸ, ಲಲಿತ ಕಲೆ, ವೇದಾಂತ ಆಗಮ ಕೋಶಗಳು, ಶಿಲ್ಪಶಾಸ್ತ್ರ, ವೇದಾಂಗಳು, ಆಯುರ್ವೇದ, ತತ್ತ್ವ ಮೀಮಾಂಸೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಹಿತ್ಯ ಲಹರಿ ಹರಿಸಿದವರು.
‘ತ್ಯಾಗರಾಜರು’, ‘ಕನಕದಾಸರು’, ‘ಪುರಂದರ ದಾಸರು’ ಮುಂತಾದ ಹನ್ನೆರಡು ಮಕ್ಕಳ ಕೃತಿಗಳನ್ನು ನೀಡಿದ್ದಾರೆ. ಆಂಗ್ಲ ವಿದ್ವಾಂಸರಾಗಿದ್ದ ಇವರು ಕೆ. ವೆಂಕಟಪ್ಪನವರನ್ನು ಕುರಿತಾದ ‘ಣhe mಚಿಟಿ ಚಿಟಿಜ his ಚಿಡಿಣ’,  ‘ರಿeಟಿ ಚಿಟಿಜ ಜhಥಿಚಿಟಿಚಿ’ ಸೇರಿದಂತೆ 77 ಕೃತಿಗಳನ್ನು ಆಂಗ್ಲಭಾಷೆಯಲ್ಲಿಯೇ ರಚಿಸಿದ್ದಾರೆ.
     ತಿರುಪತಿ ತಿಮ್ಮಪ್ಪನನ್ನು ಕುರಿತಂತೆ ‘ತಿರುಪತಿ ತಿಮ್ಮಪ್ಪ’ ಹಾಗೂ ‘he hiಟಟ shಡಿiಟಿe oಜಿ veಟಿgಚಿಜum’ ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ಬರೆದಿದ್ದಾರೆ. ಶ್ರೀ ಚಂದ್ರಶೇಖರ್ ಭಾರತೀ ಸ್ವಾಮಿಗಳ ಬದುಕಿನ ಕುರಿತಾಗಿ ‘ಶಾರದ ಪೀಠದ ಮಾಣಿಕ್ಯ’, ತಂದೆ ಕೃಷ್ಣರಾವ್ ರಿಂದ ವೈದ್ಯಾಶಾಸ್ತ್ರ ಕುರಿತು ರಚಿಸಿದ ಆಯುರ್ವೇದ ಕೃತಿ ‘ಆಯುರ್ವೇದದಲ್ಲಿ ನಾಡಿ ವಿಜ್ಞಾನ’, ಭಗವದ್ಗೀತೆಯನ್ನು ಕುರಿತಾದ ‘ಗೀತೆಗೊಂದು ಕೈಪಿಡಿ’. ಮನಶಾಸ್ತ್ರದ ಕುರಿತಾದ ‘ನಗೆಯ ನೆಲೆ’, ಮಧ್ವಾಚಾರ್ಯರನ್ನು ಕುರಿತಾದ ‘ಪೂರ್ಣ ಪ್ರಜ್ಞಾ ಪ್ರಶಸ್ತಿ’ ಇವರ ಸಂಗೀತ ಗುರುಗಳಾದ ಅನಂತ ಕೃಷ್ಣ  ಕುರಿತಾದ ‘ಪುರುಷ ಸರಸ್ವತಿ’, ಸುಧಾ ಪತ್ರಿಕೆಗೆ ‘ದಾಸಯ್ಯ’ ಎಂಬ ಕಾವ್ಯನಾಮದಿಂದ ಬರೆದ ಲೇಖನಗಳ ಸಂಗ್ರಹ ‘ವಿಚಾರ ಲಹರಿ’ ಕೃತಿ, ಪ್ರಜಾವಣಿ ಪತ್ರಿಕೆಗೆ ಬರೆದ ಅಂಕಣ ಸಂಗ್ರಹ ‘ಹಣ ಪ್ರಪಂಚ’, ಕರ್ನಾಟಕದಲ್ಲಿ ಹಿರಿಯ ಸಂಗೀತ ಕರ್ಮಿಗಳ ಪರಿಚಯ ಕುರಿತು ಬರೆದ ‘ಹಿರಿಯ ಹೆಜ್ಜೆಗಳು’, ಪುರಂದರ ದಾಸರ ಐದನೆಯ ಶತಮಾನೋತ್ಸವ ಸಂದರ್ಭದಲ್ಲಿ ಕ್ನನಡ ಮತ್ತು ಸಂಸ್ಕøತಿ ಇಲಾಖೆಗಾಗಿ ಸಂಪಾದಿಸಿಕೊಟ್ಟ ‘ಪುರಂದರ ಸಾಹಿತ್ಯದರ್ಶನ’ ನಾಲ್ಕು ಸಂಪುಟಗಳಲ್ಲಿ ಬಂದಿರುವುದು ಇವರ ವ್ಯಕ್ತಿತ್ವದ ಘನತೆಗೆ ಹಿಡಿದ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
   ಕನ್ನಡ, ಆಂಗ್ಲ, ಗ್ರೀಕ್, ಸಂಸ್ಕøತ ಇತರೆ ಭಾಷೆಗಳಲ್ಲಿ ಇವರು ಸುಮಾರು 170 ಕೃತಿಗಳನ್ನು ನೀಡಿ ಸಾಹಿತ್ಯ ಲೋಕಕ್ಕೆ  ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಒಂದು ಕಡೆ ವೈ.ಎನ್. ಗಂಡೂರಾವ್ ಉಲ್ಲೇಖಿಸುವಂತೆ-‘ಪ್ರೊ. ಎಸ್.ಕೆ ರಾಮಚಂದ್ರರಾಯರು ನಂಜನಗೂಡಿನ ಕನ್ನಂಬಾಡಿ ಶಾಸ್ತ್ರಿಗಳಿಂದ ಸಂಸ್ಕøತ ಕಾವ್ಯ ನಾಟಕಗಳು, ಉತ್ತರಾಧಿಮಠದ ದಿವಾನರಾಗಿದ್ದ ಅಗ್ನಿಹೋತ್ರಿ ಯಜ್ಞ, ವಿಠಲಾಚಾರ್ಯರಿಂದ ತರ್ಕಶಾಸ್ತ್ರ, ಬೆಂಗಳೂರಿನ ಕೇಶವ ಶಿವಘನ ಪಾಠಿಗಳಲ್ಲಿ ಯಜುರ್ವೇದ, ನಂಜನಗೂಡಿನ ವೆಂಕಟೇಶ ಸೋಮಾಯಾಜಿಗಳಿಂದ ಪೂರ್ವ ಮೀಮಾಂಸೆ, ತಲಕಾಡು ಕೃಷ್ಣ ದೀಕ್ಷಿತರ ಮೂಲಕ ಶೈವ-ಶಾಕ್ತ-ಆಗಮಗಳ ಪಾಠ, ಶ್ರೀನಿವಾಸ ಭಟ್ಟಾಚಾರ್ಯರಿಂದ ವೈಖಾನಸ ಆಗಮ-ಹೀಗೆ ಕಲಿತದ್ದು ಹಲವಾರು ಶಾಸ್ತ್ರಾಭ್ಯಾಸಗಳು’.
    ಗುಂಡುರಾಯರ ಹೇಳಿಕೆಯನ್ನೇ ಗಮನಿಸುವುದಾದರೆ ರಾಮಚಂದ್ರರಾಯರಿಗಿದ್ದ ಜ್ಞಾನದ ಹಸಿವು ಓದುಗರಿಗೆ ಅರಿವಾಗದೇಯಿರದು. ಹತ್ತಾರು ಉತ್ತಮೋತ್ತಮ ಗುರುದಿಗ್ಗಜರಿಂದ ಹತ್ತಾರು ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದ ಇವರು ಸಾವಿರಾರು ಮೌಲಿಕ ಚಿಂತನೆಗಳನ್ನು ನಾಡಿಗೆ ನೀಡುವಲ್ಲಿ ಯಶಸ್ವೀಯಾದರು.
    ಕನ್ನಡದ ಪ್ರಬುದ್ಧ ಸಾಹಿತಿ ಜಿ.ಪಿ. ರಾಜರತ್ನಂ ಅವರ ಆತ್ಮೀಯ ಶಿಷ್ಯರೂ ಆಗಿದ್ದ ರಾಮಚಂದ್ರರಾಯರು ಅವರಿಂದ ಬೌದ್ಧ ಧರ್ಮದ ಬಗ್ಗೆ ತಿಳಿದು ಕೊಂಡರು. ಆಗ ಹಿಂದೂ ಧರ್ಮಕ್ಕಷ್ಟೇ ಮೀಸಲಾಗದೇ ಬೌದ್ಧ, ಜೈನ, ಪಾರ್ಸಿ ಮುಂತಾದ ಧರ್ಮಗಳ ಬಗ್ಗೆ ಅಧ್ಯಯನ ನಡೆಸಿದರು.
ಸಂಗೀತ ಶಿಲ್ಪಿ ಮತ್ತು ಚಿತ್ರಕಲೆ
    ಮೈಸೂರಿನ ಮಹಾರಾಜ ಕಾಲೇಜಿನ ಅಧ್ಯಾಪಕರಾದ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ ರವರಲ್ಲಿ ಸಂಗೀತ ಅಬ್ಯಾಸ ಮಾಡಿದ ರಾಮಚಂದ್ರರಾಯರು ಮುಂದೆ ಖ್ಯಾತ ಕಲಾವಿದ  ಕೆ. ವೆಂಕಟಪ್ಪನವರಿಂದ ಚಿತ್ರಕಲೆ ಕಲಿತುಕೊಂಡರು.
ಸಂಗೀತ, ನೃತ್ಯ, ಚಿತ್ರಕಲೆ ಹೀಗೆ ಸಮಸಮ ಚಿತ್ತಹರಿಸಿ ಅಭ್ಯಾಸ ನಡೆಸಿದ ರಾಮಚಂದ್ರರಾಯರು ಆಳವಾದ ಜ್ಞಾನವನ್ನು ತಮ್ಮದಾಗಿಸಿಕೊಂಡರು. ಸ್ವತಃ ವೀಣಾವಾದಕರಾಗಿದ್ದ ಇವರು ಹಲವಾರು ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ನೀಡಿ ಯಶಸ್ವೀಯಾದವರು.
   ಪ್ರತಿಷ್ಠಿತ ಕಲಾನಿಧಿಗಳಾದ ಮುಸುರಿ ಸುಬ್ರಹ್ಮಣ್ಯ ಅಯ್ಯರ್, ರವೀಂದ್ರನಾಥ ಠ್ಯಾಗೋರ್, ಚೆಂಬೈವೈದ್ಯನಾಥ ಭಾಗವತರ್, ವೀಣೆ ಶೇಷಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಮುಂತಾದವರ ಆಳೆತ್ತರ ಶಿಲ್ಪಗಳನ್ನು ಕಲಾಕಾರ ಪ್ರವೀಣರಾಗಿದ್ದ ರಾಮಚಂದ್ರರಾಯರು ಜೇನುಮೇಣ, ಪಲ್ಪ್, ಟೆರಾಕೋಟಾ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳನ್ನು ಉಪಯೋಗಿಸಿ ರಚಿಸಿದ ಕಲಾಕೃತಿಗಳು ಜನಮನ್ನಣೆಗಳಿಸಿದ್ದವು.
    ಚಿತ್ರಕಲೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದ ರಾಮಚಂದ್ರ ರಾಯರು ರಾಜ್ಯದ ವಿವಿದೆಡೆ ಏಕವ್ಯಕ್ತಿ ಪ್ರದರ್ಶನ ನಡೆಸಿ ಜನಪ್ರ್ರಿಯವಾದ ವ್ಯಕ್ತಿ  ಇವರು ಬಹುಮುಖ್ಯವಾಗಿ ಜಲವರ್ಣ, ಬಾಟಿಕ್, ತೈಲವರ್ಣ, ರೇಖಾಚಿತ್ರ ಪ್ರಕಾರಗಳಲ್ಲಿ ಅದ್ವಿತೀಯ ಪಾಂಡಿತ್ಯ ಪಡೆದಿದ್ದರು.
   ಓಟ್ಟಾರೆ ಹೇಳುವುದಾದರೆ ವೈವಿಧ್ಯ ಭಾಷಾ ಪ್ರೌಢಿಮೆ, ಅದ್ಭುತ ಚಿತ್ರ ಕೈ ಚಳಕ, ಅದ್ವಿತೀಯ ಶಿಲ್ಪ ಕಲತ್ವ, ಸಾಹಿತ್ಯ ಚೈತನ್ಯ, ವಾಕ್‍ಝರಿ, ಸಂಗೀತ ಪ್ರಜ್ಞೆ ಇವೆಲ್ಲವೂ ಮೇಳೈಸಿರುವ ಜ್ಞಾನ ಸಾಗರ ರಾಮಚಂದ್ರರಾಯರು ಎಂದರೆ ಅತಿಶಯೋಕ್ತಿಯಾಗಲಾರದು.
ಗೌರವ ಪುರಸ್ಕಾರಗಳು
    ಸಾಧನಾ ಶಿಖರದ ಉತ್ತುಂಗದಲ್ಲಿ ಪ್ರಜ್ಚಲಿಸಿದ ಪ್ರೋ. ಎಸ್.ಕೆ ರಾಮಚಂದ್ರ ರಾಯರಿಗೆ ಅವರ ಪಾಂಡಿತ್ಯ ಪ್ರತಿಭೆಗೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ. ಸಂಗೀತ ಕಲಾ ರತ್ನ ಪ್ರಶಸ್ತಿ, ಶಾಸ್ತ್ರ ಚೂಡಾಮಣಿ ಪ್ರಶಸ್ತಿ, ಸೇಡಿಯಾವು ಪ್ರಶಸ್ತಿ, ಡಿ.ವಿ.ಜಿ ಪ್ರಶಸ್ತಿ, ಅ.ನ.ಕೃ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ  ಹೀಗೆ ಹಲವಾರು ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ಇವರ ಸರ್ವಾಂಗೀಣ ಸಾಧನೆ ಪರಿಗಣಿಸಿ ತಿರುಪತಿ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಸತ್ಕರಿಸಿವೆ.
ಇಷ್ಟೆಲ್ಲ ಅತ್ಯುನ್ನತ ಸಾಧನೆಗೈದ ರಾಮಚಂದ್ರರಾಯರು ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿ. ಈ ಸುಸಂಸ್ಕøತ ಹಿರಿಯ ಜೀವ 2006 ಫೆಬ್ರವರಿ 2 ರಂದು ಇಹಲೋಕ ತ್ಯಜಿಸಿದÀರೂ ಅವರು ನಮಗೆ ಬಿಟ್ಟು ಹೋದ ಜ್ಞಾನ ಸಾಗರ ಅಪಾರವಾದುದು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ,
ಹಾಸನ-573201
ಮೊ-9483470794, 9739878197


ನವಂಬರ್ ತಿಂಗಳ 'ಕರ್ನಾಟಕ ವಿಕಾಸ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ






ಸೋಮವಾರ, ಅಕ್ಟೋಬರ್ 27, 2014

ಕನ್ನಡದ ಕಾಯಕಯೋಗಿ - ಡಾ. ಸಾ.ಶಿ ಮರಳಯ್ಯ :: ಕೊಟ್ರೇಶ್ ಎಸ್.ಉಪ್ಪಾರ್


ವಸಂತ ವನದಲಿ ಕೂಗುವ ಕೋಗಿಲೆ
ರಾಜನ ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ... (ಪಾಂಚಜನ್ಯ – ಕುವೆಂಪು)

ಹೀಗೆ ಯಾವ ಪದವಿ, ಪ್ರಶಸ್ತಿಗಳ ಹಿಂದರಿಸಿ ಹೋಗದೆ ಕನ್ನಡ ಸಾಹಿತ್ಯ ರಚನೆಯಲ್ಲಿ ನಿಷ್ಣಾತರಗಿ ಉತ್ಕøಷ್ಟ ಕೃತಿ ರತ್ನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುತ್ತಾ, ಕಳೆದ ಆರೇಳು ದಶಕಗಳಿಂದ ಕಾಯ ವಾಚಾ, ಮನಸ ಸಮರ್ಪಿಸಿಕೊಂಡು ಕಾಯಕಯೋಗಿಯಂತೆ ಮಾನವೀಯ ನೆಲೆಯಲ್ಲಿ ಕೃಷಿಗೈಯುತ್ತಿರುವ ಸಾಸಲು ಶಿವರುದ್ರಯ್ಯ ಮರಳಯ್ಯ ನಾಡಿನ ಶ್ರೇಷ್ಠ ಲೇಖಕರಲ್ಲೊಬ್ಬರು.
ಶ್ರೀಯುತ ಸಾ.ಶಿ. ಮರಳಯ್ಯನವರು ಕ್ರಿ.ಶ 1931 ಜನವರಿ 28 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದ ಶ್ರಿ ಶಿವರುದ್ರಯ್ಯ ಮತ್ತು ಶ್ರಿಮತಿ ಸಿದ್ದಮ್ಮ ದಂಪತಿಗಳ ಪುಣ್ಯ ಗರ್ಭಾಂಬುದಿಯಲ್ಲಿ ಜನಿಸಿದರು.
ಶೆಟ್ಟಿಕೆರೆಯಲ್ಲಿ ಮಾಧ್ಯಮಿಕ ಶಿಕ್ಷಣ, ತಿಪಟೂರಿನಲ್ಲಿ ಪ್ರೌಢಶಿಕ್ಷಣ, ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ಇವರು ಆರ್ಥಿಕ ದುಸ್ಥಿತಿಯಿಂದ ಮುಂದೆ ಓದಲಾಗದೆ ಮ್ಯಾಂಗನಿಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತ ಹುದ್ದೆ ಸೇರಿ. ಬಂದ ಪಗಾರವನ್ನು ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡರು. ಅಲ್ಲಿ ಡಿ.ಎಲ್.ಎನ್, ದೇಜಗೌ, ತ.ಸು ಶಾಮರಾಯರು, ಎಸ್.ವಿ ರಂಗಣ್ಣ, ಎಸ್.ವಿ ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ ದೊರೆತರೂ ಪೂರ್ಣ ಮುಗಿಸಲಾಗದೇ ಪುನಃ ಚಾಮರಾಜನಗರ ಕಾಲೇಜಿನಲ್ಲಿ ಅರೆಕಾಲಿಕ ಉಪಾಧ್ಯಾಯ ವೃತ್ತಿ ಆರಂಭಿಸಿ, ವಿದ್ಯಾಭ್ಯಾಸ ಮುಂದುವರೆಸಿ 1956 ರಲ್ಲಿ ಎಂ.ಎ ಪದವಿ ಪಡೆದರು. ನಂತರ ಬೋಧನೆ ವೃತ್ತಿ ಆರಂಭಿಸಿದ ಇವರು ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರಿಗೆ ವರ್ಗಾವಣೆಯಾದ ಇವರು ಅಲ್ಲಿಯೂ ಆದರ್ಶವಾಗಿಯೇ ಬದುಕು ಕಟ್ಟಿಕೊಂಡರು. ಮುಂದೆ ಬಡ್ತಿ ಹೊಂದಿ ತುಮಕೂರು ನಂತರ ಚನ್ನಪಟ್ಟಣಗಳಲ್ಲಿ ಪ್ರಾಂಶುಪಾಲರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಅಲ್ಲಿಂದ ಮಂಗಳೂರಿಗೆ ವರ್ಗವಾಗಿ ಪುನಃ ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕಗೊಂಡು ಬೆಂಗಳೂರಿಗೆ ಬಂದರು.
1971 ರಲ್ಲಿ ಇವರು ಬರೆದ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ.
ಡಾ. ಸಾ.ಶಿ. ಮರಳಯ್ಯನವರು ಉತ್ತಮ ಬೋಧಕರಾಗಿ ಖ್ಯಾತಿವೆತ್ತವರು. ಇವರು ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮಾದರಿ ಸೇವೆಗೈದಿದ್ದಾರೆ.
ಬೋಧನೆಯು ವೃತ್ತಿಯ ಜೊತೆ ಜೊತೆಗೆ ಸಾಹಿತ್ಯವೆಂಬ ಗೀಳನ್ನು ಅಂಟಿಸಿಕೊಂಡು ಡಾ. ಸಾ.ಶಿ ಮರಳಯ್ಯನವರು 1989 -90ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಗಳಾದರು. ನಂತರ 1995 ಜೂನ್ ನಲ್ಲಿ ಅಧ್ಯಕ್ಷ ಹುದ್ದೇಗೆರಿ 1998ರವರೆಗೆ ದಕ್ಷತೆಯಿಂದ ನಾಡು ನುಡಿಯ ಹಿತಕ್ಕಾಗಿ ದುಡಿದರು.
ಹಲವಾರು ಗ್ರಂಥಗಳ ಸಂಪಾದನೆ, ಕಾವ್ಯ, ಕಾದಂಬರಿ ವಿಮರ್ಶಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಇವರು ಸಾಕಷ್ಟು ಕೃತಿ ರತ್ನಗಳನ್ನು ಕನ್ನಡ ಸಾರಸ್ವತ ಕಣಜಕ್ಕೆ ನೀಡಿದ್ದಾರೆ. ಬನವಾಸಿ, ಬಾದಾಮಿ, ಉಡುಪಿ ಮುಂತಾದ ವಿಷಯಗಳ ಕುರಿತ ಅತ್ಯುತ್ತಮ ನೃತ್ಯ ರೂಪಕಗಳನ್ನು ರಚಿಸಿದ್ದಾರೆ. ಇವರ ‘ಸ್ನೋವೈಟ್’ ಪ್ರಖ್ಯಾತಿ ಪಡೆದ ನೃತ್ಯ ರೂಪಕವಾಗಿದೆ.
ಬೃಂದಾವನ ಲೀಲೆ, ವಿಪರ್ಯಾಸ, ಶಿವತಾಂಡವ, ರಾಸಲೀಲೆ, ಕೆಂಗನಕಲ್ಲು ರೂಪಸಿ ಕಾವ್ಯಕೃತಿಗಳು. ಇವುಗಳಲ್ಲಿ ‘ಕೆಂಗನಕಲ್ಲು’ ಎಂಬ ಕವನ ಸಂಕಲನ ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದಿದೆ. ಇವರ ‘ಬಾರೋ ಮೈಲಾರಕ್ಕೆ’ ಸಂಕಲನದಲ್ಲಿನ ಗೀತೆಗಳನ್ನು ವರನಟ ಡಾ. ರಾಜಕುಮಾರ್ ಹಾಡಿದ್ದಾರೆ.
ಮನಿಷಾ, ಪುರುಷ ಸಿಂಹ, ಹೇಮಕೂಟ ಸಾಮರಸ್ಯದ ಶಿಲ್ಪಿ ಮುಂತಾದ ಕಾದಂಬರಿಗಳು; ವಿಜಯವಾತಾಪಿ ಎರಡು ನಾಟಕಗಳು, ಮರಿಬೇಡಿ-ಮುಂತಾದ ನಾಟಕಗಳು. ‘ನೆಲದ ಸೊಗಡು’ ಇವರ ಪ್ರಖ್ಯಾತ ಕಥಾ ಸಂಕಲನ.
‘ಬಾಸನ ಮಕ್ಕಳು’, ಮಾಸ್ತಿಯವರ ಕಾವ್ಯ ಸಮೀಕ್ಷೆ, ಅಭಿವ್ಯಕ್ತÀ, ‘ಅನುಶೀಲನ’ ಮುಂತಾದ ವಿಮರ್ಶಾ ಕೃತಿಗಳು. ಇವುಗಳಲ್ಲಿ ‘ಬಾಸನ ಮಕ್ಕಳು’ ವಿಮರ್ಶಾ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಲಭಿಸಿದೆ.
‘ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತರು’ ಇವರ ಬೃಹತ್ ಕೃತಿಯಾಗಿದೆ. ಸುಮಾರು 630 ಪುಟಗಳ ಎ 4 ಅಳತೆಯ ಈ ಕೃತಿಯು 1965 ರಿಂದ 2002ರ ವರೆಗಿನ ಭಾರತೀಯ ಜ್ಞಾನಪೀಠ ಪುರಸ್ಕøತರ ಸಕಲ ಮಾಹಿತಿಗಳನ್ನು ತಿಳಿಸಿಕೊಡುವುದರ ಜೊತೆಗೆ, ಆ ಸಂಸ್ಥೆಯ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಕೃತಿ ಕುರಿತು 1994 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಯು.ಆರ್. ಅನಂತಮೂರ್ತಿಯವರು ಬೆನ್ನುಡಿಯಲ್ಲಿ ಕೃತಿ ಕುರಿತು ಹೀಗೆ ಹೇಳಿದ್ದಾರೆ.-“ಗೆಳೆಯರಾದ ಡಾ. ಸಾ.ಶಿ ಮರಳಯ್ಯನವರು ಭಾರತದ ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ತರುತ್ತಿರುವ ಈ ಪುಸ್ತಕ ಅಗಾಧವಾದ ಪರಿಶ್ರಮ ಮತ್ತು ಪ್ರೀತಿಯಿಂದ ಹೊರಬಂದಿದೆ. ಎಲ್ಲ ಭಾಷೆಗಳ ಪ್ರಶಸ್ತಿ ವಿಜೇತರು ಆಡಿರುವ ಮಾತುಗಳನ್ನು ಓದುತ್ತಹೋದರೆ ಅವರ ಬಗ್ಗೆ ಪ್ರಶಸ್ತಿಯ ಸಂದರ್ಭದಲ್ಲಿ ಮಾಡಿರುವ ವ್ಯಾಖ್ಯಾನವನ್ನು ಗಮನಿಸಿದರೆ ಇಡೀ ಭಾರತೀಯ ಸಾಹಿತ್ಯದ ಒಂದು ರಸವತ್ತಾದ, ಸಂಕ್ಷಿಪ್ತವಾದ ಚರಿತ್ರೆ ದೊರೆತಂತೆ ಆಗುತ್ತದೆ. ಯಾವ ವಿವೇಕಶಾಲಿಯಾದ ಓದುಗನೂ ಆಯಾ ಸಾಹಿತ್ಯದ ದೊಡ್ಡ ಲೇಖಕರು ಈ ಪ್ರಶಸ್ತಿ ವಿಜೇತರಷ್ಟೇ ಎಂದು ತಿಳಿಯಲಾರರು. ಕನ್ನಡದಲ್ಲಂತೂ ಪ್ರಶಸ್ತಿ ವಿಜೇತನಾದ ನಾನೇ ಹೇಳಬಹುದಾದ ಸತ್ಯದ ಮತೊಂದಿದೆ. ನನಗಿಂತ ಹಿರಿಯರಲ್ಲೂ, ನನ್ನ ಸಮಕಾಲೀನರಲ್ಲೂ ಈ ಪ್ರಶಸ್ತಿಗೆ ಅರ್ಹರಾದ, ನಾನು ಬಹುವಾಗಿ ಮೆಚ್ಚುವ, ನನಗೆ ಬರೆಯುವುದನ್ನು ಕಲಿಸಿರುವ ದೊಡ್ಡ ಲೇಖಕರು ಇದ್ದಾರೆ. ಈ ವ್ಯಾಪಕತೆಯನ್ನು ಪ್ರತಿ ಸಾಹಿತ್ಯದಲ್ಲೂ ಕಲ್ಪಿಸಿಕೊಂಡು ಓದಿದಲ್ಲಿ ಡಾ ಮರುಳಯ್ಯನವರ ಪರಿಶ್ರಮದಿಂದಲೂ, ಪ್ರೀತಿಯಿಂದಲೂ ಹೊಮ್ಮಿರುವ ಈ ಕೃತಿ ತೌಲನಿಕ ಸಾಹಿತ್ಯ ವಿಮರ್ಶೆಗೆ ಅಗತ್ಯವಾದ ಗ್ರಂಥವಾಗಿ ಕಾಣುತ್ತದೆ. ಭಾರತದ ಸಾಹಿತ್ಯದ ಅಗಾಧಕತೆಗೂ, ವೈವಿಧ್ಯಕ್ಕೂ ಕನ್ನಡಿಯಾಗುತ್ತದೆ’.
ಈ ಕೃತಿ ರಚನೆಯಲ್ಲಿ ಡಾ. ಸಾ. ಶಿ ಮರುಳಯ್ಯನವರು ವಹಿಸಿದ ಪರಿಶ್ರಮ ಅಗಾಧವಾದದ್ದು. ನಿಜಕ್ಕೂ ಹತ್ತಾರು ಕೃತಿಗಳಿಗೆ ಇದೊಂದು ಸಮವಾಗಿ ನಿಲ್ಲಬಲ್ಲುದು. ನನಗೆ ಮೊದಲು ಇವರ ಕೃತಿಗಳಲ್ಲಿ ಓದಲು ದೊರಕಿದ್ದೇ ಈ ಕೃತಿ. ತದನಂತರ ಇವರ ಇತÀರ ಕೃತಿಗಳೆಡೆ ನನ್ನ ಗಮನ ಹರಿದದ್ದು. ಇವರ ಭಾರತೀಯ ಜ್ಞಾನ ಪೀಠ ಪುರಸ್ಕøತಿಯ ಕೃತಿಯನ್ನು ಸುಮಾರು ನಾಲ್ಕೈದು ಬಾರಿ ತಿರುವಿಹಾಕಿದ್ದೇನೆ. ಇನ್ನು ಓದಬೇಕೆನಿಸುತ್ತದೆ. ಅಷ್ಟೊಂದು ಅಗಾಧ ಜ್ಞಾನ ತುಂಬಿರುವ ಕೃತಿ ರತ್ನವಿದು. ಪ್ರತಿಯೊಬ್ಬ ಸಾಹಿತಿ ಓದಲೇಬೇಕಾದ ಕೃತಿ ಇದು ಎಂದರೆ ಅತಿಶಯೋಕ್ತಿಯಾಗಲಾರದು. ನನ್ನ ಗಮನ ಸೆಳೆದ ಕೆಲವೇ ಕೆಲವು ಕನ್ನಡ ಕೃತಿಗಳಲ್ಲಿ ಇದೂ ಒಂದು.
ಇವರ ಅನುಪಮ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಚ್. ನರಸಿಂಹಯ್ಯ ಪ್ರಶಸ್ತಿ ಪ್ರಮುಖವಾವುಗಳು, ಇವರ ಹಿತೈಷಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಇವರಿಗೆ ‘ಇಷಾಂಶು ಮತ್ತು ಅಭಿಜ್ಞ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಹಂಪಿನಗರದಲ್ಲಿರುವ ‘ರಾಗಿಣಿ’ ನಿಲಯದಲ್ಲಿ ವೃತ್ತಿಯಿಂದ ನಿವೃತ್ತಿ ಜೀವನ ಸಾಗಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಸದಾ ನಿರತರಾಗಿರುವುದು ಶ್ಲಾಘನೀಯ. 84 ರ ವಯೋಮಾನದ ಈ ಹಿರಿಯ ದಿಗ್ಗಜ ಸಾಹಿತಿ ಕನ್ನಡವೇ ನಮ್ಮ ಶಕ್ತಿ, ಕನ್ನಡದಿಂದಲೇ ಮುಕ್ತಿ, ಕನ್ನಡವೇ ನಮ್ಮ ನಾಡಿ, ನಮ್ಮ ಹೃದಯ ಧಮನಿ ದುಡಿ ಎಂದು ನಿತ್ಯ ಪಲ್ಲವಿಸುವಂತೆ ಪ್ರೇರೇಪಿಸುತ್ತಾ, ಕಿರಿಯರಿಗೆ ಮಾರ್ಗ ದೀವಿಗೆಯಾಗಿ, ಸಮಕಾಲೀನರಿಗೆ ಆದರ್ಶಮಯವಾಗಿ, ಹಿರಿಯರಿಗೆ ಕೃತಜ್ಞಾ ಚೇತನದ ಚಿಲುಮೆಯಾಗಿರುವ ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಅಜಾತಶತೃವಾಗಿ ನಿಲ್ಲುತ್ತಾರೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಭಾನುವಾರ, ಅಕ್ಟೋಬರ್ 26, 2014

ಶೂದ್ರ ಸಂಜೀವಿನಿ- ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’

(ಕನ್ನಡ ನಾಡಿನ ಸುಪ್ರಸಿದ್ಧ ಸಾಹಿತಿ ಪ್ರೊ. ಕೆ. ಎಸ್. ಭಗವಾನ್‍ರವರ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’  ಕೃತಿ ಕುರಿತು ಒಂದು ವಿಶ್ಲೇಷಣೆ ,)
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಶೂದ್ರ ಸಂಜೀವಿನಿ- ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’
      ‘ Iಣ shಚಿಟಟ be ಣhe ಜuಣಥಿ oಜಿ eveಡಿಥಿ ಛಿiಣizeಟಿ oಜಿ iಟಿಜiಚಿ ಣo ಜeveಟoಠಿ ಣhe sಛಿieಟಿಣiಜಿiಛಿ ಣemಠಿeಡಿ, humಚಿಟಿism ಚಿಟಿಜ ಣhe sಠಿiಡಿiಣ oಜಿ eಟಿquiಡಿಥಿ ಚಿಟಿಜ ಡಿeಜಿoಡಿm.’
(ಣhe ಛಿoಟಿsಣiಣuಣioಟಿ oಜಿ iಟಿಜiಚಿ, ಠಿಚಿಡಿಣ 4ಚಿ ಜಿuಟಿಜಚಿmeಟಿಣಚಿಟ ಜuಣies, 51ಚಿ/h)
     ವೈಜ್ಞಾನಿಕ ಮನೋಭಾವ, ಮಾನವತಾವಾದ, ಶೋಧನಾತ್ಮಕ ಚೈತನ್ಯ ಮತ್ತು ಸುಧಾರಣೆ ಇವುಗಳನ್ನು ಬೆಳೆಸುವುದು ಪ್ರತಿ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ’ ಎಂದು ಸಂವಿಧಾನವೇ ನಿರ್ದೇಶಿಸುತ್ತದೆ.
     ಪ್ರತಿಭಟನೆ ಮನುಷ್ಯನ ಜೀವಂತಿಕೆಯ ಸಂಕೇತ. ಜಾತಿ ವ್ಯವಸ್ಥೆ, ಶೋಷಣೆ, ಬಂಡವಾಳ ಶಾಹಿ, ಜಮಿನ್ದಾರ ಪದ್ದತಿ, ಜೀತ ಪದ್ದತಿ, ಭ್ರಷ್ಟ ರಾಜಕೀಯ ವ್ಯವಸ್ಥೆಗಳಂತಹ ಸಾಮಾಜಿಕ ಅನಿಷ್ಟಗಳ ವಿರುದ್ದ ಪ್ರತಿಭಟಿಸುವುದು ಪ್ರತಿಯೊಬ್ಬ ಮಾನವ ಜೀವಿಯ ಆದ್ಯ ಕರ್ತವ್ಯ.
    ಶತ-ಶತಮಾನಗಳಿಂದ ಅಟ್ಟಹಾಸ ಮೆರೆಯುತ್ತಾ ಬಂದಿರುವ ಪುರೋಹಿತಶಾಹಿ ಮನಸ್ಸುಗಳು, ಹಾಗೆಯೇ ಅವರು ಸೃಷ್ಟಿಸಿದ ಸಾಹಿತ್ಯಗಳ ಬಗ್ಗೆ ಆಧಾರ ಸಹಿತವಾಗಿ ವಿಮರ್ಶೆಗೈದು ಓದುಗರ ಮುಂದಿಟ್ಟು, ಶೂದ್ರರ ಕಣ್ತೆರೆಸಿದವರು ವೈಜ್ಞಾನಿಕ ಪರಂಪರೆಯ ಮಾನವೀಯ ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‍ರವರೆಂದರೆ ಅತಿಶಯೋಕ್ತಿಯಾಗಲಾರದು.
    ನಾನು ಮೂಲತಃ ಕೆಲವು ಮಠದ ವ್ಯವಸ್ಥೆಗಳಡಿಯಲ್ಲಿಯೇ ಶಿಕ್ಷಣ ಪಡೆದವನು. ಅಲ್ಲಿನ ಎಷ್ಟೋ ಸಂದರ್ಭಗಳನ್ನು ವೈಚಾರಿಕವಾಗಿ ಆಲೋಚಿಸಿ, ಪ್ರಶ್ನಿಸಿ ಶಿಕ್ಷೆಗೂ ಗುರಿಯಾಗಿದ್ದೆನೆ. ಮಠ ಎಂದರೆ ಶೂದ್ರರೊಳಗೇ ಬರುವ ಮೇಲ್ಪಂಕ್ತಿಯ ಪಂಗಡದ್ದು!
    ಇನ್ನೂ ಶತಮಾನಗಳುದ್ದಕ್ಕೂ ಈ ಶೂದ್ರ ಪಂಗಡದ ಹೆಣಗಳ ರಾಶಿಯ ಮೇಲೆ ಸುಪ್ಪತ್ತಿಗೆಯರಮನೆ ನಿರ್ಮಿಸಿಕೊಂಡು ಭೋಗ ಜೀವನಗೈದ ವರ್ಣ ವ್ಯವಸ್ಥೆಯ ಮೇಲುಸ್ತರದವರ ಮನೋಸ್ಥಿತಿಯನ್ನು ಊಹಿಸಲು ಸಾಧ್ಯವೇ?
    ಶಂಕರಾಚಾರ್ಯರಂತಹ ಸ್ವಯಂ ಘೋಷಿತ ಯುಗಾವತಾರಿಗಳು ಆಚಾರ್ಯರೆಂದು, ಸಮಾಜ ಸುಧಾರಕರೆಂದು ಬಿಂಬಿತಗೊಂಡು ತಮ್ಮ ಭಾಷ್ಯಗಳಲ್ಲಿ ಜಾತಿ ವ್ಯವಸ್ಥೆಯನ್ನು ಅದ್ಹೇಗೆ ಗಟ್ಟಿಗೊಳಿಸುತ್ತಾ ಸಂಕುಚಿತಮತಿಗಳಾದರು ಎಂಬುದನ್ನು ಸಾಕಷ್ಟು ಪಾರಾಯಣ ಮಾಡಿ, ಸಾಕ್ಷ್ಯಾಧಾರ ಸಮೇತ ಎಳೆ ಎಳೆಯಾಗಿ ವ್ಯಾಘ್ರ ಮುಖವಾಡಗಳನ್ನು ಭಗವಾನ್ ರವರು ಈ ಕೃತಿಯಲ್ಲಿ ಕಳಚಿದ್ದಾರೆ.
     ಸಮಾಜಕ್ಕೂ ನಮಗೂ ಸಂಬಂಧವೇ ಇಲ್ಲ. ಸಮಾಜ ಪರಿವರ್ತನೆ ನಮಗ್ಯಾಕೆ ಎಂದುಕೊಂಡು ಎಲ್ಲೋ ಕಳೆದುಹೋಗಿದ್ದ ಶೂದ್ರ ಮನಸ್ಸುಗಳಲ್ಲಿ ಹೊಸ ಚಿಂತನೆ, ಹೊಸ ಸ್ಫೂರ್ತಿ ತುಂಬಿ ಗೊಡ್ಡು ಸಂಪ್ರದಾಯದ ವಿರುದ್ದ ಸಿಡಿದೇಳಲು ಆತ್ಮವಿಶ್ವಾಸ ನೀಡಿದ ಪ್ರೊ. ಕೆ.ಎಸ್ ಭಗವಾನ್‍ರವರಿಗೆ ಗೌರವಪೂರ್ವಕವಾದ ಸಲಾಂ. ಇತಿಹಾಸದ ಪುಟಗಳಲ್ಲಿ ಹುಡುಕಿ ಹೆಕ್ಕಿ, ಆವಿಷ್ಕರಿಸಿ, ಸಂಗ್ರಹಿಸಿ, ಶೂದ್ರರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಜಾಲಾಡಿ ಸಾಕ್ಷಿ ಸಮೇತವಾಗಿ ಪೌರೋಹಿತ್ಯ ಸಂಚು ಸಾಹಿತ್ಯವನ್ನು ಅನಾವರಣಗೊಳಿಸಿ ಪ್ರಬುದ್ದ ಪ್ರಬಂಧಗಳನ್ನು ಕಟ್ಟಿಕೊಡುವುದರ ಮೂಲಕ ಕೃತಿರೂಪದಲ್ಲಿ ಹೊರತಂದು ಶಂಕರಾಚಾರ್ಯರ ಗೂಂಡಾಗಿರಿ ಪ್ರವೃತ್ತಿಯ ಮುಖವಾಡ ಕಳಚಿ ಬೀಳಿಸುವುದರ ಮೂಲಕ ನವ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ.
    ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಕೃತಿಯ 1982 ರಲ್ಲಿ ಪ್ರಥಮ ಮುದ್ರಣ ಕಂಡ ಈ ವೈಜ್ಞಾನಿಕ ಕನ್ನಡಿ 2014ರ ಹೊತ್ತಿಗೆ 17 ಮುದ್ರಣಗಳನ್ನು ಕಂಡಿರುವುದು ಇದರ ಶ್ರೇಷ್ಟತೆಯನ್ನು ಸಾರಿ ಹೇಳುತ್ತದೆ. ಈ ಕೃತಿ ಮೊದಲ ಮುದ್ರಣಗೊಂಡಾಗ ಬಹುಷಃ ನಾನು ಎರಡು ವರ್ಷದ ಹಸುಳೆ.
     ಆದಿ ಶಂಕರಾಚಾರ್ಯನ ಜನವಿರೋಧಿ ತತ್ವಜ್ಞಾನ, ಶಂಕರಾಚಾರ್ಯನ ಗೂಂಡಾಗಿರಿ ಮತ್ತು ಹಿಂದೂ ಸಂಸ್ಕøತಿ, ಶಂಕರಾಚಾರ್ಯನ ಬಗ್ಗೆ ವಿವೇಕಾನಂದರ ಟೀಕೆ, ದೋಷಯುಕ್ತ ದೃಷ್ಟಿಕೋನ, ಹಿಂದೂ ಧರ್ಮ-ಹಾಗೆಂದರೇನು?, ಮೀಸಲಾತಿ ಮತ್ತು ಜಾತಿ ವಿನಾಶ ಶಾಸನ, ಭಾರತೀಯ ಬದುಕಿನ ಮೇಲೆ ಬ್ರಾಹ್ಮಣರ ಬಿಗಿ ಹಿಡಿತ, ಬ್ರಾಹ್ಮಣರ ಬಲ, ನ್ಯಾಯಾಲಯದಲ್ಲೇ ಅನ್ಯಾಯ! ಮದುವೆಯಲ್ಲಿ ಹೇಳುವ ಅನಿಷ್ಟ ಮಂತ್ರಗಳು, ಸಪ್ತಪದಿ ಎಂದರೇನು?, ವಿವಾಹ ಒಂದು ಮಾದರಿ, ಸರಳ ಮದುವೆಯ ಸೂತ್ರಗಳು, ಪಂಚಾಂಗ ಕೇಳಬೇಡಿ, ಎಚ್ಚರ! ಮಾದರಿ ಸಾಮಾಜಿಕ ಮದುವೆ ಮುಂತಾದ 18 ವಿಚಾರಪೂರಿತ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
     ಪ್ರತಿಯೊಂದು ಲೇಖನದ ಹಿಂದೆ ಲೇಖಕರ ಪರಿಶ್ರಮ, ಅವರು ನೀಡುವ ಅಡಿಟಿಪ್ಪಣಿಗಳು, ಮೂಲಗಳು, ಸಾಕ್ಷ್ಯಗಳು ಓದುಗನನ್ನು ದಿಗ್ಬ್ರಮೆಗೊಳಿಸುತ್ತವೆ.
     ತನು, ಮನ ಚಿಂತನೆಗಳಲ್ಲಿ ಬುದ್ದ, ಬಸವ, ಪುಲೆ, ವಿವೇಕಾನಂದರನ್ನು ಆವಿರ್ಭವಿಸಿಕೊಂಡು ವೈಚಾರಿಕ ನೆಲೆಗಟ್ಟಿನಲ್ಲಿ ವಿವೇಚಿಸಿ, ಚಿಂತಿಸಿ, ಮಂಥಿಸಿ ಈ ಅಮೂಲ್ಯ ಕೃತಿಯನ್ನು ಹೊರತಂದಾಗ ಅನೇಕ ಪುರೋಹಿತಶಾಹಿಗಳಿಗೆ ಪ್ರೊ. ಕೆ. ಎಸ್ ಭಗವಾನರು ಒಬ್ಬ, ಧರ್ಮವಿರೋಧಿಯಾಗಿ, ಬಂಡಾಯಗಾರನಾಗಿ ಕಂಡುದುದೇ ಅಧಿಕ, ಆದರೆ ಅವರೊಳಗಿನ ಸರ್ವಸಮಾನತೆಯ ಮಾನವೀಯ ತುಮುಲಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದದ್ದು ಮಾತ್ರ ದುರಂತ.
     ಇಷ್ಟು ವರ್ಷಗಳುದ್ದಕ್ಕೂ ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ, ಶೋಷಣೆ ದಿಕ್ಕುತಪ್ಪಿದ ಅಲೆದಾಟ, ಹಸಿವು, ಹಾಹಾಕಾರ ಇವುಗಳಡಿಯಲ್ಲೇ ಹೇಗೆ ತೊಳಲಾಡಿದೆವು. ಹೀಗಿರಲು ಮೇಲ್ವರ್ಗದಿಂದಾದ ಸಂಚುಕಾರಗಳೇನೆಂಬುದನ್ನು ಲೇಖಕರು ಮನಮುಟ್ಟುವಂತೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅಥರ್ವಣವೇದ 12.4.2 ರಲ್ಲಿ ಹೇಳಿರುವಂತೆ “ಪರಮ ಋಷಿಯಾದ ಪರಮಾತ್ಮನ ಮಕ್ಕಳಾದ ಮಾನವರು ಜ್ಞಾನ ಭಿಕ್ಷೆ ಬೇಡುವಾಗ ಅವರಿಗೆ ವೇದವಾಣಿಯನ್ನು ಕೊಡಲು ಯವಾತ ಅಪೇಕ್ಷಿಸುವುದಿಲ್ಲವೋ ಅವನು ಮಕ್ಕಳು ಮರಿಗಳೊಂದಿಗೆ ಪತಿತನಾಗುತ್ತಾನೆ, ಸಕಲ ಭೋಗಭಾಗ್ಯಗಳನ್ನು ಕಳೆದುಕೊಳ್ಳುತ್ತಾನೆ”. ಹೀಗೆ ಮೂಲವೇದಗಳು ಸಾವ್ರರ್ತಿಕವಾಗಿ ಬೆಳಕು ಚೆಲ್ಲಿದರೆ.. ನಂತರದಲ್ಲಿ ಅವು ಹೇಗೆ ತಿರುಚಿಸಲ್ಪಟ್ಟವು ಎಂಬುದನ್ನು ಲೇಖಕರು ಮಾರ್ಮಿಕವಾಗಿ ವಿವರಿಸಿದ್ದಾರೆ.
       ಕೃತಿಯ 20ನೆಯ ಪುಟದಲ್ಲಿ ಲೇಖಕರೇ ಈ ರೀತಿ ಹೇಳುತ್ತಾರೆ-‘ಅದ್ವೈತಿಯಾದ ಶಂಕರಾಚಾರ್ಯ ಶೂದ್ರರಿಗೆ ವೇದಾಧ್ಯಯನಕ್ಕೆ ಅಧಿಕಾರವಿಲ್ಲ ಎಂದು ತನ್ನ ಹೊಲಸು ಬುದ್ಧಿಯನ್ನೆಲ್ಲ ಖರ್ಚು ಮಾಡಿ ವಾದಿಸಿದ್ದಾನೆ! ಸನ್ಯಾಸಿಯಾದ ತನಗೆ ಯಾವ ನಷ್ಟವೂ ಆಗುವುದಿಲ್ಲವೆಂದು ತಿಳಿದು ಶಂಕರ ಧೂರ್ತನಾಗಿ ಈ ಮಾತನ್ನು ದಿಕ್ಕರಿಸಿರಬೇಕು. ಅವನು ವೇದ ಪ್ರಾಮಾಣ್ಯವನ್ನು ತಿರಸ್ಕರಿಸಿದ ವೇದ ವಿರೋಧಿ! ಆದರೆ ಅಂಥವರನ್ನೇಕೆ ಬ್ರಾಹ್ಮಣಧರ್ಮ ಖಂಡಿಸಲಿಲ್ಲ ಎಂದರೆ ಅವನು ಬ್ರಾಹ್ಮಣರ ಸರ್ವ ಸಾಮ್ಯತೆಗಾಗಿ ಹೋರಾಡಿದ್ದರಿಂದ, ಇಷ್ಟೇ ಅಲ್ಲದೇ ಅವನು ‘ಭಾವದಲ್ಲಿ ಅದ್ವೈತವಿರಬೇಕು. ಕ್ರಿಯೆಯಲ್ಲಿ ಅಲ್ಲ’ ಎಂದು ಹೇಳಿರುವುದು ಘೋರ ಪಾತಕವಾಗಿದೆ. ನಿಜವಾಗಿ ಸಂತನಾದ ಆಚಾರ್ಯ ಈ ರೀತಿ ಬೇಧಭಾವ ಎಣಿಸುವುದಿಲ್ಲ. ಸ್ಮøತಿಗಿಂತ ಶ್ರುತಿ ಶ್ರೇಷ್ಠ ಎಂಬುದನ್ನು ಅವನು ಬೇಕೆಂದೇ ಮರೆಮಾಚಿ ಬೌದ್ದಿಕ ಅಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಅವನು ಶ್ರುತಿಯನ್ನು ಬೆಂಬಲಿಸುವುದಕ್ಕೆ ಬದಲಾಗಿ ಸ್ಮøತಿಯನ್ನು ಬೆಂಬಲಿಸುವುದು ನಿಜಕ್ಕೂ ದುರಂತಕಾರಿ. ಶೂದ್ರರು ವಿದ್ಯಾವಂತರಾದರೆ ತಮಗೆ ದುಡಿದು ಅನ್ನ ಹಾಕುವವರಿಲ್ಲದೆ, ಅಡ್ಡ ಪಲ್ಲಕ್ಕಿ ಹೊತ್ತು ತಮ್ಮ ಸೇವೆ ಮಾಡುವವರು ಸಿಗದೆ ಹೊಗುತ್ತಾರೆಂಬ ಭಾರೀ ದಿಗಿಲಿನಿಂದ ಸ್ವಾರ್ಥಪರವಾದ ಪಟ್ಟಭದ್ರ ಹಿತಾಸಕ್ತಿಯಿಂದ ಶೂದ್ರರಿಗೆ ವಿದ್ಯಾದಾನ ಮಾಡಲು ಅವನು ಇಷ್ಟ ಪಡಲಿಲ್ಲ. ಹಾಗೂ ತಾನು ಸನ್ಯಾಸಿಯಾದುದರಿಂದ ತನ್ನ ವಂಶ ಎಕ್ಹುಟ್ಟಿ ಹೋಗುವುದಿಲ್ಲವೆಂದೂ ಅವನು ಭಾವಿಸಿರಬೇಕು!”
     ತಮ್ಮ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಇತಿಹಾಸ ತಿರುಚಿದವರೆಷ್ಟೋ ಭ್ರಷ್ಟ ಸಂತರು, ಆಚಾರ್ಯರು, ಸಾಹಿತಿಗಳು ಇದ್ದಾರೆ. ಇವುಗಳೆಲ್ಲವನ್ನವಲೋಕಿಸಿದ ಡಾ. ಬಾಬಾ ಸಾಹೆಬ್ ಅಂಬೇಡ್ಕರರು ತಮ್ಮ ‘ಬರಹಗಳು ಮತ್ತು ಭಾಷಣಗಳು’ ಮೂರನೇ ಸಂಪುಟದ ಪುಟ ಸಂಖ್ಯೆ 151 ರಲ್ಲಿ ಈ ರೀತಿ ಹೇಳಿದ್ದಾರೆ-“ಭಾರತದ ಪ್ರಾಚೀನ ಇತಿಹಾಸದ ಬಹುಭಾಗವು ಇತಿಹಾಸವೇ ಅಲ್ಲ. ಇದರ ಅರ್ಥ ಪ್ರಾಚೀನ ಭಾರತಕ್ಕೆ ಇತಿಹಾಸವಿಲ್ಲ ಎಂಬುದಲ್ಲ. ಬ್ರಾಹ್ಮಣ ಲೇಖಕರು ಉದ್ದೇಶಪೂರ್ವಕವಾಗಿಯೇ ಪ್ರಾಚೀನ ಭಾರತದ ಇತಿಹಾಸವನ್ನು ವಿರೂಪಗೊಳಿಸಿ, ಅದನ್ನು ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಪುರಾಣ ಕಥೆಗಳನ್ನಾಗಿ ಮಾಡಿದ್ದಾರೆ.
     ಮೂಲ ವೇದವನ್ನು ತಿರುಚಿ ಬಂದ ‘ಮನುಸ್ಮøತಿ’ಯು ಬ್ರಾಹ್ಮಣರಿಗೆ ವಿದ್ಯೆ, ಆಸ್ತಿ ಮತ್ತು ಅಧಿಕಾರಿಗಳ ಮೇಲೆ ನೂರಕ್ಕೆ ನೂರರಷ್ಟು ಮಿಸಲಾತಿಯನ್ನು ನೀಡಿತು. ಶೂದ್ರರಿಗೆ ವಿದ್ಯೆ, ಆಸ್ತಿ ಮತ್ತು ಅಧಿಕಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಮಾತ್ರ ಮಹಾಜಾತಿವಾದಿ ಕೃತಿಯಾಗಿ ಹೊರಹೊಮ್ಮುತ್ತದೆ.
ಶೂದ್ರನಿಗೆ ವಿದ್ಯೆಯನ್ನು ಅರ್ಜಿಸಬಾರದು ಎಂಬ ಕಟ್ಟಳೆ ಮನುಸ್ಮøತಿಯಲ್ಲಿದೆ. ವೇದವನ್ನು ನೆನಪಿಟ್ಟುಕೊಳ್ಳಲು ಶೂದ್ರನು ಕೇಳಿದ್ದೇ ಆದರೆ ಅವನ ಕಿವಿಗಳಿಗೆ ಸೀಸವನ್ನು, ಅರಗನ್ನು ಕರಗಿಸಿ ಹುಯ್ಯಬೇಕು. ಅವನು ವೇದವನ್ನು ಉಚ್ಛರಿಸಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು.
      ಶೂದ್ರನು ಸೇವೆಯಲ್ಲದೇ ಬೇರೆ ಏನನ್ನೂ ಮಾಡಕೂಡದು. ದೇವರು ಶೂದ್ರನಿಗೆ ವಹಿಸಿದ ಒಂದೇ ಕರ್ತವ್ಯವೆಂದರೆ, ಅತ್ಯಂತ ವಿನಯದಿಂದ ಇತರ ಮೂರು ವರ್ಣಗಳಿಗೆ ಸೇವೆ ಮಾಡುವುದು. ಶೂದ್ರನು ಸೇವೆ ಮಾಡಲು ತಿರಸ್ಕರಿಸಿದರೆ ಅವನನ್ನು ಬಲಾತ್ಕರಿಸಬೇಕೆಂದು ಮನುಸ್ಮøತಿ ಕಟ್ಟಾಜ್ಞೆ ಮಾಡಿದೆ. ಬ್ರಾಹ್ಮಣನು ಅವಿದ್ಯಾವಂತನಾಗಿದ್ದರೂ ಅವನು ಇಷ್ಟಪಟ್ಟರೆ ನ್ಯಾಯಾಧಿಪತಿಯೂ ಆಗಬಹುದೆಂದು ಸ್ವಘೋಷಿತ ನಿಯಮಾವಳಿಗಳು ಜಾರಿಯಾದವು”.
      ಪ್ರೊ. ಕೆ.ಎಸ್ ಭಗವಾನರು ತಮ್ಮ ಈ ಸಂಶೋಧನಾತ್ಮಕ ವೈಚಾರಿಕ ಕೃತಿಯಲ್ಲಿ ರಾಷ್ಟ್ರಕಂಟಕರೂ, ಸಮಾಜದ್ರೋಹಿಗಳು, ಮಹಾಜಾತಿವಾದಿಗಳೂ ಆದ ಗೌತಮ, ಮನು, ಶಂಕರ, ರಾಮಾನುಜ, ಮಧ್ವ ಮುಂತಾದ ಸ್ಮøತಿಕಾರರ ಅವಿವೇಕದ ಅತಿರೇಕಗಳನ್ನು ಬಿಡಿಸಿಟ್ಟಿದ್ದಾರೆ. ಶಂಕರರ ಉದ್ದಟತನವನ್ನು ‘ಬ್ರಹ್ಮ ಸೂತ್ರ ಭಾಷ್ಯ’ ದಲ್ಲಿರುವ ಮಾನವ ವಿರೋಧಿ ಸಂಹಿತೆ ಸೂತ್ರಗಳನ್ನು ವಿಶ್ಲೇಷಿಸಿದ್ದಾರೆ.
      ಲೇಖಕರೇ ಪು.ಸಂ. 23, 24 ರಲ್ಲಿ ಉಲ್ಲೇಖಿಸಿರುವಂತೆ “ಶೂದ್ರರಿಗೆ ಜ್ಞಾನ ಪಡೆಯಲು ಹಕ್ಕಿಲ್ಲವೆಂದು ವಾದಿಸಿರುವುದು ಅವನ ಅದ್ವೈತ ತತ್ವಕ್ಕೆ ವಿರುದ್ದವಾಗಿದೆ. ಆದ್ದರಿಂದ ಅವನು ಬಹಳ ಪೊಳ್ಳು ತತ್ವಜ್ಞಾನಿಯಾಗಿ ಕಾಣಿಸುತ್ತಾನೆ. ಅವನದು ಜನವಿರೋಧಿ ತತ್ವಜ್ಞಾನ. ತನಗೆ ಮಾನವೀಯತೆ ಇಲ್ಲವೆಂಬುದನ್ನು ಅವನೇ ಪ್ರಸ್ಥಾಪಿಸಿದ್ದಾನೆ. ಹಿಂದೂ ಧರ್ಮ ಶಾಸ್ತ್ರವಲ್ಲ. ಒಂದು ದೃಷ್ಟಿಯಲ್ಲಿ, ಕ್ರೂರ ಕೋಮುವಾದ ಮತ್ತು ಉಪಯೋಗವಿಲ್ಲದ ವೇದಾಂತ. ಬ್ರಾಹ್ಮಣ ಧರ್ಮ ದೃಷ್ಟಿಗೋಚರವಾದ ಸಾಮಾಜಿಕ ಅಸಮಾನತೆಯನ್ನು ಆಚರಿಸುತ್ತದೆ; ವೇದಾಂತ ಕಣ್ಣಿಗೆ ಕಾಣದ ಆಧ್ಯಾತ್ಮಿಕ ಸಮಾನತೆಯನ್ನು ನಂಬುತ್ತದೆ. ಬ್ರಾಹ್ಮಣ ಧರ್ಮ ಜಾತಿ ಪಾರಮ್ಯವನ್ನು ಹೇಳಿದರೆ ವೇದಾಂತ ದರ್ಶನ ಅಹಂಕಾರ ಮರ್ದನವನ್ನು ತಿಳಿಸುತ್ತದೆ. ಜಾತಿ ವ್ಯವಸ್ಥೆ ಎಂದರೆ ಗುಲಾಮಗಿರಿ. ಇಂಥ ಗುಲಾಮಗಿರಿಯನ್ನು ಒಂದು ಪ್ರತ್ಯಕ್ಷವಾಗಿ ವಿಧಿಸಿದರೆ, ಇನ್ನೊಂದು ಪರೋಕ್ಷವಾಗಿ ಬೋಧಿಸುತ್ತದೆ, ಒಟ್ಟಿನಲ್ಲಿ ಎರಡೂ ಸಾಮಾಜಿಕವಾಗಿ ವ್ಯಕ್ತಿಯನ್ನು ದಮನ ಮಾಡುವ ಸಾಧನಗಳಾಗಿವೆ.”
      ಈ ಜಾತಿ ಶೋಷಣೆ ಇಂದು ನಿನ್ನೆಯದಲ್ಲ. ಸನಾತನವಾಗಿ ಬಂದ ಕ್ರೂರ ಪರಂಪರೆ! ಆರ್ಯರ ದುರಾಡಳಿತದಿಂದಾಗಿ ನೀತಿಗೆಟ್ಟು, ಮತಿಗೆಟ್ಟಿದ್ದ ಸಮಾಜಕ್ಕೆ ಚಿಕಿತ್ಸೆ ನೀಡಲು ಒಳಗಿನಿಂದ ಗೌತಮಬುದ್ದ ಉದಿಸಿದನು. ಮನುಷ್ಯ-ಮನುಷ್ಯರ ನಡುವೆ ಭೇದವನ್ನು ಸೃಷ್ಟಿ ಮಾಡಿ, ಅನೀತಿ ಅಧರ್ಮ, ಮೂಢ ನಂಬಿಕೆ, ಯಜ್ಞ-ಯಾಗಾದಿಗಳನ್ನೊಳಗೊಂಡ ಆರ್ಯರ ವೈದಿಕ ವ್ಯವಸ್ಥೆಯ ವಿರುದ್ದ ಪ್ರಥಮ ಬಾರಿಗೆ ಕ್ರಿ.ಪೂ 500 ರಲ್ಲಿ ಗೌತಮ ಬುದ್ಧ ಬಂಡಾಯ ಹೂಡಿದರು.
      “ವೈದಿಕ ವ್ಯವಸ್ಥೆಯ ಶೋಷಣೆಯ ಮಾರ್ಗವಾದ ದೇವರು, ಆತ್ಮ, ಪುರೋಹಿತರನ್ನು ದಿಕ್ಕರಿಸಿ” ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಬ್ರಾಹ್ಮಣ ಶಾಹಿ ಸಾಮಾಜಿಕ ವ್ಯವಸ್ಥೆಗೆ ಸಿಲುಕಿ ಜರ್ಜರಿತವಾಗಿದ್ದ ಜನತೆ, ಆರ್ಯರ ಅನೀತಿಯುತ ವ್ಯವಸ್ಥೆಯನ್ನು ಸಾರಾಸಗಟವಾಗಿ ತಿರಸ್ಕರಿಸಿ, ಬೌದ್ದ ಧರ್ಮದ ಅನುಯಾಯಿಗಳಾಗಿ ನೆಮ್ಮದಿ ಹಾಗೂ ಸಂತಸದ ಬದುಕನ್ನು ಕಂಡುಕೊಂಡರು. ಈ ಬೌದ್ದ ಕ್ರಾಂತಿಯ ಪರಿಣಾಮವಾಗಿ ಬ್ರಾಹ್ಮಣಶಾಹಿ ವ್ಯವಸ್ಥೆಯು ಬುಡಮೇಲಾಯಿತು. ಮೌರ್ಯರ ಆಳ್ವಿಕೆಯಲ್ಲಿನ ಯಜ್ಞ-ಯಾಗಗಳ ನಿಷೇಧದಿಂದಾಗಿ ಅದನ್ನೇ ಕಸುಬಾಗಿಸಿಕೊಂಡಿದ್ದ ಬ್ರಾಹ್ಮಣರು ದಿವಾಳಿತನದತ್ತ ಸಾಗಿದರು. ತದನಂತರ ಪುನಃ ತಮ್ಮ ಅಸ್ತಿತ್ವ ಕಂಡುಕೊಳ್ಳುವಲ್ಲಿ ಚಾಣಾಕ್ಷ ಬುದ್ದಿಯನ್ನುಪಯೋಗಿಸಿಕೊಂಡು ಸಫಲರಾಗಿ 6,7,8 ನೆಯ ಶತಮಾನದ ಹೊತ್ತಿಗೆ ಮತ್ತೆ ವಿಜೃಂಭಿಸಿ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದನ್ನು ಗಮನಿಸಿದ್ದೇವೆ.
     ಲೇಖಕರು ತಮ್ಮ ಕೃತಿಯ 33 ನೆಯ ಪುಟದಲ್ಲಿ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಎ.ಎಚ್ ಲಾಂಗ್‍ಹಸ್ಟ್‍ರ ಒಂದು ಸಂಶೋಧನಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಇದು ಲೇಖಕರೇ ಹೇಳುವಂತೆ ಶಂಕರಾಚಾರ್ಯರ ಗುಂಡಾಗಿರಿ ವರ್ತನೆಯನ್ನು ಸಾಬೀತುಪಡಿಸುತ್ತದೆ. ಆ ಹೇಳಿಕೆ ಈ ಕೆಳಗಿನಂತಿದೆ-“ನಾಗಾರ್ಜುನಕೊಂಡದಲ್ಲಿ ಎಲ್ಲಾ ಕಟ್ಟಡಗಳೂ ಕ್ರೂರ ರೀತಿಯಲ್ಲಿ ಧ್ವಂಸವಾಗಿರುವುದನ್ನು ನೋಡಿದರೆ ಎದೆ ನಡುಗುತ್ತದೆ. ಅದು ಕೇವಲ ನಿಧಿ ಅನ್ವೇಷಕರ ಕೆಲಸವೆಂದು ಹೇಳುವಂತಿಲ್ಲ; ಏಕೆಂದರೆ ಬಹುಪಾಲು ಸ್ತಂಭಗಳು, ವಿಗ್ರಹಗಳು ಮತ್ತು ಶಿಲ್ಪಿಗಳನ್ನು ಮನಸೇಚ್ಛೆ ಒಡೆದು ಚೂರು ಚೂರು ಮಾಡಿದ್ದಾರೆ. ಅಮರಾವತಿಯಲ್ಲಿ ಇರುವಂತೆ ಅದರ ಸನಿಹದಲ್ಲಿ ಪಟ್ಟಣ ಇದ್ದಿದ್ದರೆ ಆಧುನಿಕ ನಿರ್ಮಾಪಕರು ಈ ಜಾಗವನ್ನು, ಭಾರತದಲ್ಲಿ ಬಹುತೇಕ ಆಗಿರುವಂತೆ, ಲೂಟಿ ಮಾಡಿದ್ದರೆಂದು ಭಾವಿಸಬಹುದಿತ್ತು. ಆದರೆ ಇದು ನಾಗಾರ್ಜುನಕೊಂಡದಲ್ಲಿ ಎಂದೂ ನಡೆಯಲಿಲ್ಲ; ಏಕೆಂದರೆ, ಅದರ ಆಜುಬಾಜಿನಲ್ಲಿ ಯಾವ ಪಟ್ಟಣಗಳಿಲ್ಲ. ಆ ಕಣಿವೆಯೊಳಕ್ಕೆ  ಹೋಗಿ ಬರಲು ಗಾಡಿ ದಾರಿಗಳಿರಲಿಲ್ಲ. ಮಧ್ಯಯುಗದ ಮಹಾ ಹಿಂದೂ ತತ್ವಜ್ಞಾನಿ ಗುರು ಶಂಕರಾಚಾರ್ಯ ತನ್ನ ಹಿಂಬಾಲಕರ ಹಿಂಡಿನೊಡನೆ ಬಂದು ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಐಹಿತ್ಯ ಹೇಳುತ್ತದೆ. ಇದು ಹಾಗಿರಲಿ; ಹಾಳಾದ ಕಟ್ಟಡಗಳಿರುವ ಈ ಕಣಿವೆಯ ಸಾಗುವಳಿ ಜಮೀನನ್ನು ಶಂಕರಾಚಾರ್ಯನಿಗೆ ಉಂಬಳಿಯಾಗಿ ಕೊಟ್ಟ ವಾಸ್ತವ ಸಂಗತಿ ಇಂದಿಗೂ ಉಳಿದಿದೆ. ಆ ಮಹಾ ಗುರುವಿನ ಅನುಯಾಯಿಗಳ ಧಾರ್ಮಿಕ ಮುಖಂಡನ ಅನುಮತಿಯಿಂದ ನಾನು ಇಲ್ಲಿ ಭೂಶೋಧನೆಗಳನ್ನು ಮಾಡಲು ಸಾಧ್ಯವಾಯಿತು. ಗುಂಟೂರು ಜಿಲ್ಲೆ ಪುಷ್ಪಗಿರಿಯಲ್ಲಿ ವಾಸಿಸುವ ಬ್ರಾಹ್ಮಣ ಜಗದ್ಗುರು ನಲ್ಲಮಲೈನಲ್ಲಿರುವ ಶ್ರೀಶೈಲಂ ದೇವಾಲಯದ ವಾರಸುದಾರನಾಗಿದ್ದಾನೆ. ಮೂಲತಃ ಒಂದು ಬೌದ್ಧ ತಾಣವಾಗಿದ್ದಂತೆ ಕಾಣುವ ಈ ದೇವಸ್ಥಾನವನ್ನು ಅದೇ ರೀತಿಯಲ್ಲಿ ನಿಸ್ಸಂದೇಹವಾಗಿ ವಶಪಡಿಸಿಕೊಳ್ಳಲಾಯಿತು”.
      ಈ ಉಲ್ಲೇಖವನ್ನು ವಿಶ್ಲೇಷಿಸಿ ಮಾಡುವ ಅಗತ್ಯವೇಯಿಲ್ಲ. ತಮಗಿಂತ ಯಾರೇ ಪ್ರಬಲರಾದರೂ ಅವರನ್ನೂ ಹೇಗೆ ದಮನಿಸಬೇಕೆಂದು ಪುರೋಹಿತ ಕೊಳಕು ಮನಸ್ಸುಗಳು ಸದಾ ಸಂಚಿನ ಗುಂಗಿನಲ್ಲೇ ತೇಲಾಡಿ ಅದ್ಯಾವುದೇ ಮಾರ್ಗವಾದರೂ ಸರಿ ಸಾಧಿಸಿಬಿಡುತ್ತವೆಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿ ನಿಲ್ಲುತ್ತದೆ. ಇಂತಹ ಅದೆಷ್ಟೋ ಸಾಕ್ಷಾಧಾರಗಳನ್ನು ಪ್ರೊ. ಕೆ.ಎಸ್ ಭಗವಾನ್ ಅವರು ಈ ಕೃತಿಯಲ್ಲಿ ನೀಡಿದ್ದಾರೆ.
ಇದರಲ್ಲಿ ಬರುವ ಮೂರನೆಯ ಅಧ್ಯಾಯ ‘ಶಂಕರಾಚಾರ್ಯನ ಬಗ್ಗೆ ವಿವೇಕಾನಂದರ ಟೀಕೆ’. ಸ್ವಾಮಿ ವಿವೇಕಾನಂದ ದಿವ್ಯ ವಾಣಿ ಕುರಿತು ರಾಷ್ಟ್ರ ಕವಿ ಕುವೆಂಪುರವರು ಹೀಗೆ ಹೇಳಿದ್ದಾರೆ. “.. ಅದು ಒಂದು ವ್ಯಕ್ತಿಯ ವಾಣಿಯಲ್ಲ; ಒಂದು ಕಣ್ಣಿನ ಕಾಂತಿಯಲ್ಲ. ಅನೇಕ ಮಹಾಪುರುಷರ ಜೀವಜ್ಯೋತಿಗಳ ಸೂತ್ರ ಸಮಷ್ಟಿಯಾಗಿದೆ; ಬಹುಜೀವನಗಳ ದರ್ಶನಗಳ ಗೋಷ್ಠಿಯಾಗಿದೆ. ಅದರಲ್ಲಿ ಪ್ರಾಚ್ಯ, ಪಾಶ್ಚಾತ್ಯ, ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಮತ, ತತ್ತ್ವ, ವಿಜ್ಞಾನ, ಕಲಾ, ಇಹ, ಪರ, ದೇಹ, ಆತ್ಮ, ನೂತನ, ಪುರಾತನ ಎಲ್ಲವೂ ಸಮನ್ವಯಗೊಂಡಿದೆ. ಅದು ಯಾವುದೊಂದು ಮತಕ್ಕಾಗಲಿ, ಪಥಕ್ಕಾಗಲಿ ಸೇರಿಲ್ಲ. ಅದು ಒಂದು ಜನಾಂಗದ್ದಲ್ಲ; ಸರ್ವಕಾಲ ದೇಶಗತವಾದುದು.
ಆ ದಿವ್ಯದರ್ಶನದ ಕಾಮನಬಿಲ್ಲಿನಲ್ಲಿ ಉಪನಿಷತ್ತುಗಳಂತೆಯೆ ಯವನ ದಾರ್ಶನಿಕರ ತತ್ತ್ವಜ್ಞಾನವೂ ಒಂದು ಬಣ್ಣವಾಗಿ ಸೇರಿ ರಂಜಿಸುತ್ತಿದೆ. ವೇದದಂತೆಯೆ ಬೈಬಲ್ಲೂ, ಪ್ರಾಚೀನ ಶ್ರದ್ಧೆಯಂತೆಯೆ ಅರ್ವಾಚೀನ ವಿಜ್ಞಾನ ಬುದ್ಧಿಯೂ, ಅದರ ಮನೋಹರತೆಗಳಿಗೆ ಅಂಗಗಳಾಗಿವೆ. ರಾಮಮೋಹನರಾಯ ಮತ್ತು ಕೇಶವಚಂದ್ರಸೇನರ ವ್ಯಕ್ತಿತ್ತ್ವಗಳಂತೆಯೆ ನಾರಾಯಣ ಗುರು ಮತ್ತು ದಯಾನಂದ ಸರಸ್ವತಿಯರ ವ್ಯಕ್ತಿತ್ತ್ವಗಳೂ ವರ್ಣಜಾಲದಲ್ಲಿ ಹಾಸು ಹೊಕ್ಕಾಗಿವೆ. ನ್ಯೂಟನ್, ಡಾರ್ವಿನ್, ಫ್ರಾಯ್ಡ್, ಐನ್‍ಸ್ಟೈನರುಗಳಂತೆಯೆ ಲೆನಿನ್, ಗಾಂಧಿ, ಟಾಲ್ ಸ್ಟಾಯ್, ಠಾಕೂರರೂ ಅಲ್ಲಿ ಮನೆ ಮಾಡಿದ್ದಾರೆ. ಆ ದರ್ಶನ ನಿರಂಕುಶ ಮತಿಗಳನ್ನು ಸರ್ವದಾ ಆಹ್ವಾನಿಸುತ್ತದೆ. ದಾಸ್ಯ ಬುದ್ಧಿಯಿಂದ ಪಾರಾಗುವ ಮುಕ್ತ ಮತಿಗಳಿಗೆ ಅಲ್ಲಿ ಮಹಾಲಿಂಗನ ಸೌಖ್ಯವಿದೆ. ಅದು ಸ್ವತಂತ್ರಮತಿಗಳ ಧೀರ ಸಾಮ್ರಾಜ್ಯ. ಅಲ್ಲಿ ಸಾಕ್ಷಾತ್ಕಾರವಲ್ಲದೆ ಬಲತ್ಕಾರವಿಲ್ಲ. ಅಲ್ಲಿಯ ಹಾದಿ ಬುದ್ಧಿ; ಅಲ್ಲಿಯ ಗುರಿ ಸಿದ್ಧಿ”
- [ ಸ್ವಾಮಿ ವಿವೇಕಾನಂದ-ಕುವೆಂಪು; ಪು.ಸಂ.243-244]
ಈ ರೀತಿ ಮಹಾನವಮಿಯ ಮೌಲ್ಯಗಳ ಆಗರವಾಗಿರುವ ವಿವೇಕಾನಂದರು ಧರ್ಮಗುರುವೆಂದು ಬಿಂಬಿತವಾಗಿದ್ದ ಶಂಕರಾಚಾರ್ಯರ ತತ್ತ್ವಗಳನ್ನು ದಿಕ್ಕರಿಸಿದ್ದು ಮಾತ್ರ ದಿಗ್ಭ್ರಮೆಯುಂಟುಮಾಡಿದರೂ ಆಶ್ಚರ್ಯವಿಲ್ಲ. ಕುಶಲಮತಿಯಾದ ವಿವೇಕಾನಂದರು ಕಪಟಮತಿಯಾದ ಶಂಕರಾಚಾರ್ಯರ ತತ್ತ್ವಗಳ ಅಧ್ಯಾಯನಗೈದು, ಮಾನವ ವಿರೋಧಿ ನೀತಿಗಳನ್ನು ಹೇಗೆ ಎತ್ತಿ ಹಿಡಿದರೆಂಬುದನ್ನು ಫ್ರೊ.ಕೆ.ಎಸ್.ಭಗವಾನರು ಸಾಕ್ಷಾಧಾರಗಳ ಮೂಲಕ ತೆರೆದಿಟ್ಟಿದ್ದಾರೆ.
ಲೇಖಕರೇ ತಮ್ಮ ಕೃತಿಯ ಪು.ಸಂ.51 ಮತ್ತು 52 ರಲ್ಲಿ ಉಲ್ಲೇಖಿಸಿದಂತೆ-“ಶಂಕರನಿಗೆ ಕ್ಷೌರದ ಕತ್ತಿಯಂತಹ ನಿಶಿತಮತಿಯಿತ್ತು. ಅವನು ಒಳ್ಳೆಯ ವಾದಪಟು ಮತ್ತು ವದ್ವಾಂಸ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಔದಾರ್ಯವಿರಲಿಲ್ಲ; ಅವನ ಹೃದಯವೂ ಹಾಗೆಯೇ ಇದ್ದಂತೆ ಕಾಣುತ್ತದೆ. ಜೊತೆಗೆ ಅವನು ತನ್ನ ಬ್ರಾಹ್ಮಣ್ಯದ ಬಗ್ಗೆ ಭಾರಿ ಹೆಮ್ಮೆ ಪಡುತ್ತಿದ್ದನು. ದಕ್ಷಿಣ ಭಾರತದ ಪುರೋಹಿತವರ್ಗದ ಹಾರುವನ ಹಾಗೆ ತುಂಬಾ ಗರ್ವ ಪಡುತ್ತಿದ್ದನು”.-[ ಒಔಓIಇಖ WIಐಐIಂಒS : ಊIಓಆUSIಒ, P-96 ]
ಮುಂದುವರೆದು... “ಬ್ರಾಹ್ಮಣೇತರ ಜಾತಿಯವರಿಗೆ ಬ್ರಹ್ಮಜ್ಞಾನ ಸಿದ್ದಿಸುವುದಿಲ್ಲ ಎಂದು “ವೇದಾಂತ ಸೂತ್ರಗಳ ಭಾಷ್ಯ”ದಲ್ಲಿ ಹೇಗೆ ಸಮರ್ಥಿಸಿಬಿಟ್ಟಿದ್ದಾನೆ! ಎಂಥ ಡಾಂಭಿಕ ವಾದಸರಣಿ! ಹಿಂದಿನ ಜನ್ಮದಲ್ಲಿ ವಿದುರ ಬ್ರಾಹ್ಮಣ ದೇಹವನ್ನು ಧರಿಸಿದ್ದರಿಂದ ಅವನಿಗೆ ಬ್ರಹ್ಮಜ್ಞಾನ ಸಿದ್ದಿಸಿದರೆ, ಅವನು ಹಿಂದೆ ಹಾರುವನಾಗಿ ಹುಟ್ಟಿದ್ದರಿಂದ ಬ್ರಹ್ಮಜ್ಞಾನ ಸಿದ್ದಿಸಿತೆಂಬ ನಿಮ್ಮ ಶಂಕರನವಾದವನ್ನು ನಾವು ಒಪ್ಪಬೇಕಲ್ಲವೇ? ತ್ರೈವರ್ಣಿಕರಲ್ಲಿ ಪ್ರತಿಯೊಬ್ಬನಿಗೂ ವೇದಾಧ್ಯಯನ ಮತ್ತು ಬ್ರಹ್ಮ ಸಾಕ್ಷಾತ್ಕಾರದ ಹಕ್ಕುಂಟು ಎಂದು ವೇದಗಳೇ ಹೇಳುವುದಿಲ್ಲವೇ? ಆದ್ದರಿಂದ ವೇದಕ್ಕೆ ವಿರುದ್ದವಾದ ಈ ವಿಷಯದ ಬಗ್ಗೆ ಶಂಕರ ತನ್ನ ಪಾಂಡಿತ್ಯದ ಒಂದು ವಿಚಿತ್ರ ತುಣುಕನ್ನು ಪ್ರದರ್ಶಿಸುವ ಅಗತ್ಯವೇ ಇರಲಿಲ್ಲ. ಆತನ ಹೃದಯ ಎಂಥಾದ್ದು ಎಂದರೆ ಅಸಂಖ್ಯಾತ ಬೌದ್ಧ ಭಿಕ್ಷುಗಳನ್ನು ಬೆಂಕಿಗೆ ಹಾಕಿ ಸುಟ್ಟುಬಿಟ್ಟನು, ಅವರನ್ನು ವಾದದಲ್ಲಿ ಸೋಲಿಸಿ! ಆ ಬೌದ್ಧರು ಕೂಡ ತಮ್ಮನ್ನೆ ಸುಟ್ಟುಕೊಂಡು ಸಾಯುವಷ್ಟು ಮೂರ್ಖರಾಗಿದ್ದರು, ತಾವು ವಾದದಲ್ಲಿ ಸುಮ್ಮನೆ ಸೋತಿದ್ದರಿಂದ! ಶಂಕರನ ಇಂಥ ಕೆಲಸವನ್ನು ಮತಾಂಧತೆ (ಜಿಚಿಟಿಚಿಣiಛಿism) ಎನ್ನದೇ ಬೇರೇನೆಂದು ಕರೆಯುವುದು?”
sತಿಚಿmi ಗಿiveಞಚಿಟಿಚಿಟಿಜಚಿ: ಣhe ಛಿomಠಿಟeಣe ತಿoಡಿಞs ಸಂ.7 ಪು.116-8
ಲೇಖಕರಾದ ಪ್ರೊ. ಭಗವಾನರು ವಿವೇಕಾನಂದ ಈ ಹೇಳಿಕೆಯನ್ನು ಉದ್ಧರಿಸುವುದರ ಜೊತೆಗೆ ವಿವೇಕಾನಂದರು ಬಳಸಿದ ‘ತ್ರೈವರ್ಣಿಕ’ ಎಂಬ ಶಬ್ದಕ್ಕೆ ಬದಲಾಗಿ ‘ಪ್ರತಿಯೊಂದು ಮಾನವ ಜೀವಿಗೂ ಉಂಟು, ಎಂದು ವಿವೇಕಾನಂದ ಸ್ವಾಮಿಗಳು ಹೇಳಬೇಕಿತ್ತು’ ಎಂದು ವಿವೇಚನೆಯುಕ್ತವಾಗಿ ದಾರ್ಶನಿಕರನ್ನೇ ಪ್ರಶ್ನಿಸಿರುವದು ಲೇಖಕರ ಅಂತಃಪ್ರಜ್ಞೆಯ ದ್ಯೋತಕವಾಗಿದೆ.
ಖ್ಯಾತ ವೈಚಾರಿಕ ಚಿಂತಕರಾದ ಜ.ಹೊ ನಾರಾಯಣ ಸ್ವಾಮಿಯವರು ಒಂದು ಕಡೆ ಹೀಗೆ ಉಲ್ಲೇಖಿಸಿದ್ದಾರೆ- “ನೀಚರು ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲಿ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನೂರಾರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನು ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನ ಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ದ ಜನರನ್ನು ಆ ದೇವರೇ ಕಾಪಾಡಬೇಕು”. (‘ಸಂಪ್ರದಾಯದ ನೇಣುಗಂಬ’ –ಜಹೊನಾ ಪು. ಸಂ. 149, 150)
ವೈಚಾರಿಕ ಚಿಂತಕಿಯಾದ ಶ್ರೀಮತಿ ವಿಜಯ ಮಹೇಶ್‍ರವರು ಒಂದು ಕಡೆ ಶಂಕರನ ಸಂಕುಲದ ಮನೋಸ್ಥಿತಿಯ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ. “ಮಹಾನ್ ಮಾನವತಾವಾದಿ, ಬೌದ್ಧಿಕ ಭಿಕ್ಷು ಶಾಂತಿಧೂತ, ಸಂಗೀತ ಚಕ್ರವರ್ತಿ ಸಾಮ್ರಾಟ್ ರಾವಣಾಸುರನನ್ನು, ಧ್ಯಾನಿ ಬುದ್ದ ಕುಂಭಕರ್ಣನನ್ನು, ರಾವಣನ ಮಗನಾದ (ಇಂದ್ರಜೀತ್) ಅವರುಗಳ ‘ಪ್ರಕೃತಿಗಳನ್ನು ಸುಟ್ಟು ರಾಮಲೀಲಾವೆಂಬ ಅನಾಗರಿಕ, ಅಸಹ್ಯ, ಕೀಳು ಅಭಿರುಚಿಯನ್ನು ಜಗಜ್ಜಾಹಿರು ಮಾಡಿಕೊಂಡು ಕುಣಿದಾಡಿದ ಸನಾತನಿಗಳು ಮತ್ತು ಅವರ ಜೊತೆ ಇತಿಹಾಸದ ಪ್ರಜ್ಞೆಯಿಲ್ಲದ ಹಿಂದೂಗಳ ಇತರೆ ಜಾತಿ ಜನಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ಆಟಗಳನ್ನು ಆಡುತ್ತಾರೋ ಅದು ಬೇರೆಯದೇ ಮಾತು. ಆದರೆ ಹೀಗೆ ಮಾಡುವ ಮೂಲಕ ಈ ಘನಂದಾರಿಗಳು ಅದೆಂತಹ ಸತ್ಯ, ಎಲ್ಲೆಲ್ಲೂ ತುಂಬಿ ತುಳುಕಾಡುವವಂತಹ ಸಮಾಜ ನಿರ್ಮಾಣ ಮಾಡಿದ್ದಾರೋ ಗೊತ್ತಿಲ್ಲ! ಅದ್ಯಾವ ಊರುಗಳಲ್ಲಿ, ರಾಜ್ಯಗಳಲ್ಲಿ ಹೆಂಗಸರ ಮೇಲಿನ ಅತ್ಯಾಚಾರಗಳು ನಿಂತಿದ್ದಾವೋ ಗೊತ್ತಿಲ್ಲ! ಆದರೆ ರಾವಣ, ಕುಂಭಕರ್ಣ, ಇಂದ್ರಜಿತ್‍ರ ಪ್ರಕೃತಿಗಳನ್ನು ವರ್ಷ ವರ್ಷವೂ ಸುಟ್ಟು ಬೂದಿ ಮಾಡಿ ವಿಕೃತಿ ಆನಂದ ಪಡೆಯುವ ತೀಟೆಗಳು ಮಾತ್ರ ನಿಂತಿಲ್ಲ! ದುಷ್ಟ ಶಿಕ್ಷಣೆ ಶಿಷ್ಟರಕ್ಷಣೆ ಎಂದು ಹೇಳಿಕೊಂಡು ತಾವೊಬ್ಬರೆ ಶಿಷ್ಟಾಚಾರದ ಪೇಟೆಂಟ್‍ಗಳನ್ನು ಪಡೆದಿರುವವರು ಎಂದು ಭಾವಿಸಿಕೊಂಡು ರಾವಣ, ಕುಂಭಕರ್ಣ, ಇಂದ್ರಜಿತ್‍ರನ್ನು ಸುಡುವುದೇ ಜಗತ್ತಿನನಲ್ಲಿ ಮಾಡಬಹುದಾದ ಮಾಹಾನ್ ಕಾರ್ಯ ಎನ್ನುವ ಸನಾತಿಗಳು ಇದಕ್ಕಿಂತ ಕಪಟನಾಟಕ ಢೋಂಗಿ ವೇಷಗಳನ್ನು ಹಾಕಲುಂಟೆ? ಆಡಲುಂಟೆ? ಇವರ ಮೂರ್ಖತನಕ್ಕೆ ಮಿತಿ ಬೇಡವೆ? ಅಸಲು ಸೀತಾ ಅಪಹರಣ ಎಂಬುದೇ ಸುಳ್ಳಿನ ಮೂಟೆ ಆಗಿರುವಾಗ ರಾವಣನನ್ನು ಕೊಲ್ಲುವ ಮಾತು ಎಲ್ಲಿಯದು ಅಂತ? ಬಹುಶಃ ರಾವಣನ ಪ್ರಖರ ಪ್ರತಿಭೆ ದಿವ್ಯ ತೇಜಸ್ಸು ರಾಜಗಾಂಭಿರ್ಯ, ಅವನ ಗುಣ ವಿಶೇಷಗಳು ಆರ್ಯರಿಗೆ ತಡೆಯಲು ಅಸಾಧ್ಯವಾದ ಈರ್ಷೆಯನ್ನು ತುಂಬಿಸಿರÀಬೇಕು! ಈ ಕಾರಣಕ್ಕೇನೆ ಇವರಿಗೆ ರಾವಣನನ್ನು ಮರೆಯಲು ಸಾಧ್ಯವಾಗುತ್ತಿಲ್ಲ! ರಾವಣ ಚಕ್ರವರ್ತಿ ಕೇವಲ ತನ್ನ ತುಟಿಯಂಚಿನ ನಗುವಿನಿಂದಲೇ ಇವರನ್ನು ತಿರಸ್ಕರಿಸಿರÀಬೇಕು! ಈ ಅವಮಾನವನ್ನು ತಡೆಲಾಗದೆಯೇ ರಾವಣನನ್ನು ಚಚ್ಚಿ ಹಾಕುವಂತೆಯೇ, ಸುಟ್ಟುಹಾಕುವಂತಲೋ ಒಟ್ಟಿನಲ್ಲಿ ತಮ್ಮ ಇಂದ್ರಿಯಗಳನ್ನು ತಣಿಸಿಕೊಳ್ಳುತ್ತಿರಬೇಕು! ಇಲ್ಲದಿದ್ದರೆ ಇವರುಗಳು ಅದ್ಯಾಕೆ ರಾವಣ, ಕುಂಭಕರ್ಣರನ್ನು ಮರೆಯಲು ಸಾಧ್ಯವಾಗುತ್ತಿಲ್ಲ? ರಾವಣನೊಬ್ಬನೇ ಅಲ್ಲ, ಇತರ ಅಸುರ ಚಕ್ರವರ್ತಿಗಳಾದ ಬಲಿ, ನರಕಾಸುರ, ಮಹಿಷಾಸುರ, ಗಜಾಸುರ, ಮೂಕಾಸುರ, ಹಿರಣ್ಯ ಕಶಿಪು ಮುಂತಾದವರು ಆರ್ಯರಿಗೆ ಸರಿಯಾದ (!) ಪ್ರತಿರೋಧವನ್ನೇ ಒಡ್ಡಿರಬೇಕು! ಆದ್ದರಿಂದಲೇ ಇವರುಗಳು ಅವರನ್ನು ಸಂಹಾರ ಮಾಡಿದ್ದೇವೆಂದು ಹಬ್ಬದೂಟಗಳನ್ನು ಜಡೆಯುತ್ತಿರಬೇಕು! ಸೇಡನ್ನು ತೀರಿಸಿಕೊಳ್ಳುತ್ತಿರುವ ಪರಿಯಿದು! ಆದರೆ ಇಲ್ಲಿ ನನ್ನ ಪ್ರಶ್ನೆ ಏನೆಂದರೆ ಅದ್ಹೇಗೆ ಅಷ್ಟೊಂದು ಸಿಟ್ಟಿನಿಂದ ರೋಷದಿಂದ ರಾವಣನನ್ನು ಸುಟ್ಟು ಬೂದಿ ಮಾಡಿ ತಮ್ಮ ತಮ್ಮ ಮನೆಗಳಿಗೆ ಇಂತಿರುಗುವಷ್ಟರಲ್ಲಿ ಮತ್ತೆ ರಾವಣ, ಕುಂಭಕರ್ಣ, ಇಂದ್ರಜಿತ್‍ರುಗಳು ಹುಟ್ಟಿಬಿಡುತ್ತಾರೆ? ಅಂದಮೇಲೆ ವರ್ಷ ವರ್ಷವೂ ರಾವಣ ಸೀತೆಯನ್ನು ಅಪಹರಿಸುತ್ತಾನೆ! ವರ್ಷ ವರ್ಷವೂ ರಾಮನ ಗ್ಯಾಂಗು ಲಂಕಾದೇಶವನ್ನು ಸುಡುತ್ತದೆ!
(ಬಹುಜನ ವಿಚಾರ ಲಹರಿ ಸಂ- ಡಾ. ಕೃಷ್ಣಮೂರ್ತಿ ಚಮರಂ; ಪು.ಸಂ. 106)…
“... ಉಪನಿಷತ್ತಿನ ಮೇಲೆಯೆ ಬೌದ್ಧ ಧರ್ಮ ಬೆಳೆದಿದೆ; ಶಂಕರನ ತತ್ವಶಾಸ್ತ್ರಕ್ಕೂ ಅದೇ ಮೂಲ, ಬುದ್ದನ ಮಹಾದ್ಬುತ ಅನುಕಂಪ ಹೃದಯದ ತಿಲಾಂಶವೂ ಶಂಕರನಿಗೆ ಇರಲಿಲ್ಲ; ಅವನದು ಬರಿಯ ಬುದ್ದಿಯ ಒಣ ಪಾಂಡಿತ್ಯ. ತಂತ್ರಗಳಿಗೆ ಹೆದರಿ, ಜನ ಸಮುದಾಯಕ್ಕೆ ಹೆದರಿ, ಒಂದು ಕುರವನ್ನು ವಾಸಿ ಮಾಡಲು ಹೋಗಿ ಅದಿದ್ದ ತೋಳನ್ನೆ ಕತ್ತರಿಸಿ ಹಾಕಿದನು. ಅವುಗಳನ್ನೆಲ್ಲ ಬರೆಯಲು ಒಂದು ದೊಡ್ಡ ಪುಸ್ತಕವೆ ಬೇಕಾಗುತ್ತದೆ. ಆದರೆ ಅದನ್ನು ಬರೆಯಲು ಬೇಕಾದ ಪಾಂಡಿತ್ಯವಾಗಲೀ ಸಮಯವಾಗಲೀ ನನಗೆ ಇಲ್ಲ”.
(Sತಿಚಿmi viveಞಚಿಟಿಚಿಟಿಜ: ಣhe ಛಿomಠಿಟeಣe ತಿoಡಿಞs ಸಂ -6, ಪು. 223)
ಪ್ರಸ್ತುತ ಲೇಖನದಲ್ಲಿ ಲೇಖಕರು ವಿವೇಕಾನಂದ ವಿಚಾರಧಾರೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಶಂಕರಾಚಾರ್ಯರನ್ನು ವಿಮರ್ಶಿಸಿದ್ದಾರೆ.
ಇದಕ್ಕೆ ಪೂರಕವಾದ ಇತರೆ ಲೇಖಕರ, ವಿಚಾರವಂತರ ಅಭಿಪ್ರಾಯಗಳನ್ನು ನಾನಿಲ್ಲಿ ಉಲ್ಲೇಖಿಸಿದ್ದೇನೆ.
ಇದರಲ್ಲಿನ ನಾಲ್ಕನೇ ಅಧ್ಯಾಯ ‘ದೋಷಯುಕ್ತ ದೃಷ್ಟಿಕೋನ’ ಇಲ್ಲಿ ಪ್ರೊ. ಕೆ.ಎಸ್.ಭಗವಾನ್‍ರವರ ಲೇಖನಗಳಿಗೆ ಕೆಲ ವಿದ್ವಾಂಸರು ಒಡ್ಡಿದ ಆಕ್ಷೇಪಣೆಗಳಿಗೆ ಸ್ವಾಮಿ ವಿವೇಕಾನಂದರ ಹೆಳಿಕೆಗಳನ್ನೇ ಉಲ್ಲೇಖಿಸುತ್ತಾ ಜವಾಬು ನೀಡಿದ ಪರಿ ಪ್ರಶಂಶನೀಯ. ಇದಕ್ಕೆಲ್ಲ ಕಾರಣವಾದದ್ದು ಇವರು ಬರೆದ ಜಾತಿ, ಭಾಷೆ ಮತ್ತು ಉನ್ನತಿ’ ಎಂಬ ಲೇಖನ.
ಇದಕ್ಕೆ ಪೂರಕವಾದ ಬಾಬಾ ಸಾಹೇಬರ ಒಂದು ಹೇಳಿಕೆ ನೆನಪಿಗೆ ಬರುತ್ತದೆ. “ಇತಿಹಾಸವನ್ನು ಮರೆಯಬೇಡಿ.. ಇತಿಹಾಸವನ್ನು ಮರೆತರೆ ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ” ಅದರರ್ಥ ಇತಿಹಾಸದೊಳಗೆ ಕಣ್ಣಾಡಿಸಿ.. ಅಲ್ಲೇನೋ ಮಹತ್ಸಂಗತಿ ಅಡಗಿದೆ. ಅಲ್ಲಿ ನನ್ನ ಹೋರಾಟದ ಹೆಜ್ಜೆಗಳಿವೆ.. ಅಲ್ಲಿ ನಮ್ಮ ಪೂರ್ವಿಕರ ಶ್ರಮದ, ತ್ಯಾಗದ, ಬಲಿದಾನದ ನೂರಾರು ಘಟನೆಗಳಿವೆ. ಅವುಗಳಿಂದ ಪಾಠ ಕಲಿಯಿರಿ. ಅದುವೇ ನಿಮ್ಮ ಮುಂದಿನ ಹೆಜ್ಜೆಗೆ ದಾರಿದೀಪ ಎನ್ನುವುದೇ ಆಗಿದೆ. ಯಾವುದೇ ಓರ್ವ ಪ್ರಗತಿಪರನಿಗೆ .. ಸ್ಪಷ್ಟವಾದ ಭೂತ.. ನಿಖರವಾದ ವರ್ತಮಾನ.. ನಿರ್ದಿಷ್ಟ ಭವಿಷ್ಯದ ಗುರಿ ಇರಲೇಬೇಕು. ಹಾಗಿದ್ದಾಗ ಮಾತ್ರ ವ್ಯಕ್ತಿ ಒಂದು ಶಕ್ತಿಯಾಗಲು ಸಾಧ್ಯ”.
ಈ ಬಾಬಾ ಸಾಹೇಬರ ವಾಣಿ ದಮನಿತರಿಗೆ, ಶೋಷಿತರಿಗೆ ಸ್ಪೂರ್ತಿದಾಯಕವಾದರೂ ಬಿಗಿಯಾದ ಜಾತಿ ವ್ಯವಸ್ಥೆ, ರಾಜ್ಯಶಾಹಿ ಅಡ್ಡಿಯಾಗುವುದು ತಪ್ಪುವುದಿಲ್ಲ.
ಲೇಖಕರು ಪ್ರಸ್ತುತ ಲೇಖನದಲ್ಲಿ ಪು.ಸಂ-55ರಲ್ಲಿ ಉಲ್ಲೇಖಿಸಿರುವಂತೆ “ಹಿಂದೂ ಧರ್ಮದಲ್ಲಿ ಸಮಾನತೆಯಿಲ್ಲ, ಅದು ಅಸಮಾನತೆಯ ಮೇಲೆ ನಿಂತಿದೆ. ಜಾತಿ ವ್ಯವಸ್ಥೆಯೇ ಅದರ ತಳಹದಿ. ಈ ವ್ಯವಸ್ಥೆಯಲ್ಲ್ಲಿ ಮನುಷ್ಯನಿಗೆ ಬೆಲೆಯಿಲ್ಲ. ಅವನ ಜಾತಿಯಿಂದ ಅವನ ವ್ಯಕ್ತಿತ್ವ ನಿರ್ಧಾರವಾಗುವ ಪರಿಸ್ಥಿತಿ ಇದೆ”
ಜಾತಿ ಎಂದಾಕ್ಷಣ ಉಚ್ಛ ಕುಲಜರು, ಹೀನ ಕುಲಜರು; ಮಾಂಸಾಹಾರಿ, ಸಸ್ಯಾಹಾರಿಗಳೆಂಬ ಮನೋಧೋರಣೆಗಳು ಸುಳಿದಾಡಿಬಿಡುತ್ತವೆ. ಜಾತಿ ಮತ್ತು ಆಹಾರ ವಿಷಯದಲ್ಲಿ ವಿವೇಕಾನಂದರು ಹೀಗೆ ಹೇಳಿದ್ದಾರೆ.
“ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುತ್ತಿರಲಿಲ್ಲ. ಸನ್ಯಾಸಿ, ರಾಜ, ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮ ಗೂಳಿಯನ್ನು ಕೊಂದು ಅಡುಗೆ ಮಾಡುತ್ತಿದ್ದರು. ಹಿಂದೂ ಧರ್ಮದಲ್ಲಿರುವ ಎಲ್ಲ ಉಚ್ಚವಾದ ಮತ್ತು ಅತ್ಯಂತ ಶ್ಲಾಘನೀಯವಾದ ಮಹದಾಲೋಚನೆಗಳ ಮೂಲ ಕ್ಷತ್ರಿಯರು. ಉಪನಿಷತ್ತುಗಳನ್ನು ಬರೆದವರು ಕ್ರತ್ರೀಯರು. ರಾಮಯಾರು? ಕೃಷ್ಣಯಾರು? ಬುದ್ಧ ಯಾರು? ಜೈನ ಧರ್ಮದ ತೀರ್ಥಂಕರರು ಯಾರು? ಕ್ಷತ್ರಿಯರು!.”
(ಸಂಪ್ರದಾಯದ ನೇಣುಗಂಬ-ಜಹೊನಾ, ಪು.ಸಂ 117)
ಈ ಲೇಖನದಲ್ಲಿ ಪ್ರೊ ಭಗವಾನರು ಕೊಡುವ ಸ್ವಾಮಿ ವಿವೇಕಾಂದರ ಎರಡು ಹೇಳಿಕೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. 1. “ಧೂರ್ತರೂ ಠಕ್ಕರೂ ಆದ ಪುರೋಹಿತರು ಎಲ್ಲಾ ಬಗೆಯ ಮೂಢನಂಬಿಕೆಗಳನ್ನೂ ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಜನರಿಗೆ ಬೋಧಿಸುತ್ತಾರೆ.
ಈ ಖದೀಮ ಪುರೋಹಿತರಾಗಲಿ ಅವರ ತಾತ ಮುತ್ತಾತಂದಿರಾಗಲೀ ಕಳೆದ ನೂರಾರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ಕೂಡ ನೋಡಿಲ್ಲ. ಅವರು ಮೂಢಾಚಾರಗಳನ್ನು ಅನುಸರಿಸಿ ತಮ್ಮನ್ನೇ ಹೀನ ಸ್ಥಿತಿಗೆ ತಂದು ಕೊಳ್ಳುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣರ ವೇಷದಲ್ಲಿ ಇರುವ  ಈ ರಾಕ್ಷಸರಿಂದ ಜನರನ್ನು ಆ ದೇವರೇ ಕಾಪಾಡಬೇಕು”.
2. “ಬನ್ನಿ, ಮನುಷ್ಯರಾಗಿ. ಪುರೋಹಿತರನ್ನು ಒದ್ದೋಡಿಸಿ. ಅವರು ಎಲ್ಲ ಪ್ರಗತಿಗೂ ವಿರೋಧವಾಗಿದ್ದಾರೆ. ಅವರೆಂದೂ ಬದಲಾಗುವುದಿಲ್ಲ. ಅವರ ಹೃದಯವೆಂದೂ ವಿಶಾಲವಾಗುವುದಿಲ್ಲ. ಅವರು ಶತ ಶತಮಾನಗಳ ಮೂಢನಂಬಿಕೆಯ ದಬ್ಬಾಳಿಕೆಯ ಸಂತಾನ. ಮೊದಲು ಪುರೋಹಿತ ಶಾಹಿಯನ್ನು ಮೂಲೋತ್ಪಾಟನೆ ಮಾಡಿ. ಬನ್ನಿ, ಮನುಷ್ಯರಾಗಿ!”
1. (ಖಿhe ಛಿomಟeಣe ತಿoಡಿಞs ಠಿಚಿge ಟಿo-290)
2. (ಖಿhe ಛಿomಠಿಟeಣe ತಿoಡಿಞs ಠಿಚಿge ಟಿo- 11)
ಲೇಖಕರು ಇಲ್ಲಿ ಪ್ರಸ್ತಾಪಿಸಿರುವ ವಿವೇಕಾನಂದರ ಈ ಎರಡು ಹೇಳಿಕೆಗಳೇ ಸಾಕು ಹಾರುವರಿಂದ ಜಾತಿ ವ್ಯವಸ್ಥೆ ಅದೆಷ್ಟು ಬಲಿಷ್ಟಗೊಂಡಿತ್ತೆಂದು ತಿಳಿದುಕೊಳ್ಳಲು ಹೀಗೆ ಹಲವಾರು ನಿದರ್ಶನಗಳ ಮೂಲಕ ಪ್ರೊ. ಭಗವಾನರು ನಮ್ಮಗಳ ಕಣ್ ತೆರೆಸುತ್ತಾರೆ. ಅಧ್ಯಯನಕ್ಕೆ ಸಜ್ಜಾಗುವಂತೆ ಪ್ರೇರೆಪಿಸುತ್ತಾರೆ.
ಇದಕ್ಕೆ ಪೂರಕವಾಗುವಂತೆ ಖ್ಯಾತ ವಿಚಾರವಾದಿ ಜಹೊನಾರವರ ಹೇಳಿಕೆ ನೆನಪಿಗೆ ಬರುತ್ತದೆ. “ಶಂಕರನಿಗೆ ಶ್ವಪಚನ ಮೂಲಕ ಬ್ರಹ್ಮಜ್ಞಾನವಾಯತು ಎಂದು ಹೇಳುವುದು, ಈಶ್ವರ ಶ್ವಪಚನ ರೂಪದಲ್ಲಿ ಬಂದು ಜ್ಞಾನವನ್ನು ಬೋಧಿಸಿದ ಎನ್ನುವುದು ಕಟ್ಟುಕಥೆ. ಒಂದು ಪಕ್ಷ ಶ್ವಪಚನ ಮೂಲಕ ಬ್ರಹ್ಮಜ್ಞಾನವಾದುದೇ ನಿಜವಾದರೆ ಆನಂತರ ಶಂಕರರು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದು ವೇದ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು , ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಬೇಕು( ಬ್ರಹ್ಮಸೂತ್ರ ಭಾಷ್ಯ: ಅಧ್ಯಾಯ 1, ಸೂತ್ರ38) ಮುಂತಾದ ಮಾನವ ವಿರೋಧಿಯಾದ ಮಾತುಗಳಿಂದ ಜಾತಿಪ್ರೇಮವನ್ನು ಏಕೆ ಮೆರೆದರು?”
(ಆವರಣ ಅನಾವರಣ-ಜ.ಹೊ. ನಾರಾಯಣಸ್ವಾಮಿ, ಪು.ಸಂ. 72 )
ಹೀಗೆ ಪ್ರೊ.ಕೆ.ಎಸ್.ಭಗವಾನರು ಮಾನವನ ಸರ್ವತೋಮುಖ ಏಳಿಗೆಗಾಗಿ ಚಿಂತಿಸಿ ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ, ಪರಾಮರ್ಶಿಸಿ, ಅಧ್ಯಾಯನಗೈದು ಕೊಟ್ಟ ಈ ವಿಚಾರಪೂರಿತ ವೈಚಾರಿಕ ಕೃತಿ ಶೂದ್ರರಿಗೆ ಸಂಜೀವಿನಿಯಾಗಿದೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಶನಿವಾರ, ಅಕ್ಟೋಬರ್ 25, 2014

ಬಹುಮುಖ ಪ್ರತಿಭೆಯ ಬರಹಗಾರ- ಡಿ.ಆರ್. ಚನ್ನೇಗೌಡರು - ಕೊಟ್ರೇಶ್ ಎಸ್.ಉಪ್ಪಾರ್


    ‘ದೊರೆ ಚೆನ್ನಿಗರಾಯ’ ಎಂಬ ಕಾವ್ಯನಾಮದಲ್ಲಿ ನೂರಾರು ಉತ್ಕøಷ್ಟ ಕವಿತೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿ ಡಿ.ಆರ್.ಚನ್ನೇಗೌಡರದು. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಜೀವನ ಚರಿತ್ರೆÉ, ಇತಿಹಾಸ, ಕಾವ್ಯ, ಸಂಪಾದನೆ, ನಿಬಂಧ, ಲೇಖನಗಳು, ಸಂಶೋಧನೆ ಮುಂತಾದ ಸಾಹಿತ್ಯ ವಿಭಾಗಗಳಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸಿರುವ ಶ್ರೀಯುತ ಡಿ.ಆರ್. ಚನ್ನೇಗೌಡರು ಕ್ರಿ.ಶ 1906 ಜೂನ್ 16 ಹಾಸನ ಜಿಲ್ಲಾ ಬೂವನಹಳ್ಳಿಯ ದೊಂದೇಗೌಡರ ಜೇಷ್ಠ ಪುತ್ರರಾಗಿ ಜನಿಸಿದರು.
     ಚಿಕ್ಕ ವಯಸ್ಸಿನಿಂದಲೇ ಬಹುಮುಖ ಪ್ರತಿಭೆಯ ಗಣಿಯಾಗಿದ್ದ ಚನ್ನೇಗೌಡರು ಸಾಹಿತ್ಯ, ಕಲೆ, ಸಂಶೋಧನೆ ಮುಂತಾದ ಕ್ಷೇತ್ರಗಳತ್ತ ಆಕರ್ಷಣೆಗೊಂಡರು. ಸ್ಥಳಪುರಾಣ, ಇತಿಹಾಸಗಳ ಹಿಂದೆ ಬೆನ್ನಟ್ಟಿದ ಇವರು ಆ ದಿಸೆಯಲ್ಲಿ ಅನೇಕ ಕೃತಿಗಳನ್ನು ನೀಡಿದ್ದಾರೆ. ಆಗಿನ ಮೈಸೂರು ಸರ್ಕಾರದ ಸೆಕ್ರೆಟರಿಯೇಟ್ ನಲ್ಲಿ ರಿಕಾರ್ಡ್‍ಸ್ ಸೂಪರಿಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.
   ಇವರ ಸಾಹಿತ್ಯ ದೀವಿಗೆಗೆ ಇವರ ಸತಿಯಾದ ಶ್ರೀಮತಿ ಕೌಸಲ್ಯಾದೇವಿ ಯವರು ತೈಲವಾಗಿ ಸದಾ ಸ್ಫೂರ್ತಿ ನೀಡಿದವರು. ಡಿ.ಆರ್.ಸಿ ಯವರು ಕನ್ನಡ ಸಹಿತ್ಯ ರಾಶಿಗೆ ಹಲವಾರು ಗ್ರಂಥಾರ್ಪಣೆ ಮಾಡಿದ್ದಾರೆ. ಅವುಗಳಲ್ಲಿ ಯುವಕರ ಶಕ್ತಿ, ಜೋಸೆÀಫ್ ಆಡಿಸÀನ್, ಅಶೋಕ ಚಕ್ರವರ್ತಿ, ದಿನಚರಿ ಧ್ಯಾನ, ನಮ್ಮ ಮಹಾರಾಜರು, ಕೆಲವು ಪ್ರಬಂಧಗಳು, ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ ದೇವ, ಕಾಡು ಕುಸುಮಗಳು, ಗೋಪಾಲಕೃಷ್ಣ ಗೋಖಲೆ, ವಲ್ಲಭಬಾಯಿ ಪಟೇಲ್, ಜೀವನದ ಹಾಳೆಗಳು, ಶಿವಾಜಿ ಮಹಾರಾಜ, ವೀರ ಹನುಮಂತ, ಶ್ರೀಗುರು ವಚನಗಳು, ನೀತಿಕೋಶ, ಕೆ.ಎಚ್. ರಾಮಯ್ಯನವರ ಭಾಷಣ ಮುಂತಾದ ಕೃತಿಗಳು ಪ್ರಮುಖವಾಗಿವೆ. ಇವುಗಳಲ್ಲಿ ‘ದಿನಚರಿ ಧ್ಯಾನ’ ಬಹಳ ಹೆಸರು ಮಾಡಿದ ಕೃತಿಯಾಗಿದೆ. ಇದೊಂದು ಪ್ರಾರ್ಥನಾ ಗೀತೆಗಳ ಸಂಗ್ರಹವಾಗಿದ್ದು. ಜನವರಿ ಒಂದರಿಂದ ಡಿಸೆಂಬರ್ ಮೂವತ್ತೊಂದರವರೆಗೆ ದಿನಕ್ಕೊಂದು ಪ್ರಾರ್ಥನೆಯಂತೆ 366 ದಿನಗಳಿಗೂ ಸಂಬಂಧಿಸಿದವುಗಳಾಗಿವೆ.
     ಈ ಗ್ರಂಥದ ಪ್ರಸ್ತಾವನೆಯಲ್ಲಿ ಲೇಖಕರೇ ಹೇಳುವಂತೆ ‘ಈ ಗ್ರಂಥದಲ್ಲಿರುವ ಭಾವನೆಗಳು ನಾನಾ ದೇಶದ ನಾನಾ ಭಾಷೆಗಳಿಂದ ಸಂಗ್ರಹಿಸಲ್ಪಟ್ಟಿದೆ. ಮಹಾಪುರುಷರು ಯಾವದೇಶದವರೇ ಆಗಿರಲಿ ಅವರು ಯಾವ ಕಾಲಕ್ಕೆ ಸೇರಿದವರೇ ಆಗಿರಲಿ ಅಂತಹರ ಪ್ರೇರಣೆಯಿಂದ ಅವರು ನುಡಿದಿರತಕ್ಕ ವಾಣಿಯು ಕಾಲ ದೇಶಗಳ ಪರಿಮಿತಿಗೆ  ಒಳಪಡೆದೆ ಅಮರತ್ವವನ್ನು ಪಡೆದಿರುವುದು. ಭಾವಾವೇಶದ ಆನಂದ ಲಹರಿಯು ಅದು. ಈ ಗ್ರಂಥದಲ್ಲಿ ವೇದಾಂತದ ಜೊತೆಗೆ ಲೌಕಿಕ ವಿಚಾರಗಳ ವಾಣಿಯೂ ಅಲ್ಲಲ್ಲಿ ಇದೆ.... ಅಮೃತ ವಾಣಿಗಳೆಂಬ ಈ ಆಣಿಮುತ್ತುಗಳಲ್ಲಿ ಕರ್ನಾಟಕ ಬಂಧುಗಳಿಗೆ ಒಂದೆರಡು ನಲ್ನುಡಿಗಳು ದೊರೆತು ಅವರ ಜೀವೀತದ ಒಂದು ಅರೆಗಳಿಗೆಯಾದರೂ ಉಲ್ಲಾಸವಾಗುವುದಾದರೆ ಇದರ ಮನನದಿಂದ ನಮ್ಮೆಲ್ಲರಿಗೂ ನಮ್ಮ ಜನನಿ, ಜನ್ಮಭೂಮಿ, ಜನಾರ್ಧನ ಇವರ ಸೇವೆಯಲ್ಲಿ ಮಮತೆ ಮಾಡುವುದಾದರೆ ಈ ಅಳಿಲ ಮಳಲ ಸೇವೆಯು ಸಾರ್ಥಕವಾಯಿತೆಂದು ನಾನು ಹರ್ಷಿಸುವೆನು. ಈ ಉತ್ತಮ ಗ್ರಂಥವನ್ನು ನಮ್ಮೆಲ್ಲರ ತಾಯಿ ತಂದೆಯಾದ ಜಗದೀಶ್ವರನಿಗೆ ಸಮರ್ಪಣೆ ಮಾಡಿದ್ದೇನೆ’ ಎಂದಿದ್ದಾರೆ.
     ಪಂಡಿತ್ ಸ್ವಾಮಿಗೌಡರು ತಮ್ಮ ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ’ ಎಂಬ ಗ್ರಂಥದ ಪು.ಸಂ.90 ರಲ್ಲಿ ಡಿ.ಆರ್. ಚನ್ನೇಗೌಡರ ದಂಪತಿಗಳ ಬಗ್ಗೆ ಈ ರೀತಿ ಉಲ್ಲೇಖಿಸಿದ್ದಾರೆ- ‘ಶ್ರೀಮತಿ ಮತ್ತು ಶ್ರೀಯುತ ಚನ್ನೇಗೌಡರವರು ತಮ್ಮದೇ ಆದ ‘ಜ್ಞಾನವೇ ಜೀವನದ ಜ್ಯೋತಿ’ (ಞಟಿoತಿಟeಜge is ಟiಜಿe’s ಟighಣ) ಎಂಬ ದಿವ್ಯ ಲಾಂಛನನಿಂದ ತಮ್ಮ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ‘ಶ್ರೀ ರಾಮಕೃಷ್ಣ ಪುಸ್ತಕ ಭಂಡಾರ’ ಎಂಬ ತಮ್ಮ ಪ್ರಕಾಶನದಲ್ಲಿಯೇ ಎಲ್ಲಾ ಗ್ರಂಥಗಳನ್ನೂ ಬೆಳಕಿಗೆ ತಂದು ಯಶೋಮತಿಗಳಾದಿದ್ದಾರೆ. ಈ ದಂಪತಿಗಳಿಂದ ಕನ್ನಡ ಸಾಹಿತ್ಯಶ್ರೀಗೆ ನಾನಾ ಬಗೆಯ ಕಾವ್ಯ ಕುಸುಮಗಳು ಸಮರ್ಪಿಸಲ್ಪಟ್ಟಿವೆ.’
   ‘ನೀತಿಕೋಶ’ ಎಂಬ ಕೃತಿಯನ್ನು ದಂಪತಿಗಳಿಬ್ಬರೂ ಸೇರಿ ಹೊರತಂದಿದ್ದಾರೆ. ಈ ಕೃತಿಯ ಮುನ್ನುಡಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಮಾಸ್ತಿ ವೆಂಕಟೇಶ್ ಅಯ್ಯಂಗರ್ ಅವರು ‘ಈ ಪುಸ್ತಕದ ಲೇಖಕರಾದ ದಂಪತಿಗಳು ಕನ್ನಡಕ್ಕಾಗಿ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಈಸೋಪನ ಇತರ ಕಥೆಗಳನ್ನು ಇವರು ಮಕ್ಕಳಿಗಾಗಿ ಮುದ್ರಿಸುವರೆಂದು ನನ್ನ ಆಶೆ, ಹಾಗೆಯೇ ಅವರು ಮಕ್ಕಳಲ್ಲದವರಿಗಾಗಿಯೂ ಪ್ರಕಟಿಸಲೆಂದು ಆಶಿಸುತ್ತೇನೆ’ ಎಂದು ಮನದುಂಬಿ ಹಾರೈಸಿದ್ದಾರೆ.
   ಇವÀರ ‘ಅಶೋಕ ಚಕ್ರವರ್ತಿ’ ಎಂಬ ಕೃತಿಯು ಆಗಿನ ಕಾಲದಲ್ಲಿಯೇ ಉದ್ರಾಸಿನ ಎಸ್.ಎಸ್.ಎಲ್.ಸಿ ಗೆ, ಬೊಂಬಾಯಿ ಹೈಸ್ಕೂಲ್ ತರಗತಿಗೆ ಪಠ್ಯ ವಸ್ತುವಾಗಿ ಆಯ್ಕೆಗೊಂಡದ್ದು ಚನ್ನೇಗೌಡರ ಗಟ್ಟಿತನ ಬರವಣಿಗೆಗೆ ಹಿಡಿದ ಕನ್ನಡಿಯಾಗಿದೆ.
   ಇನ್ನು ಯುವಕರಿಗಾಗಿಯೇ ಜಾಗೃತೆಯ ದೃಷ್ಠಿಕೋನವಿಟ್ಟು ಬರೆದ ಗ್ರಂಥ ‘ಯುವಕರ ಶಕ್ತಿ’ ವಿವೇಕಾನಂದÀರ ದಿಟ್ಟ ಹೆಜ್ಜೆ, ಗಟ್ಟಿ ನಿರ್ಧಾರಗಳು ಈ ಕೃತಿಯಲ್ಲಿ ಪಲ್ಲವಿಸಿವೆ. ಗಾಂಧೀಜಿಯವರ ತತ್ತ್ವ್ವಾದರ್ಶಗಳು, ಕವಿ ರವೀಂದ್ರರ ಕಾವ್ಯ ದೀಮಂತಿಕೆಗಳು ಅರಳಿನಿಂತಿವೆ. ತಾರುಣ್ಯ ಜೀವನದ ಹಲವಾರು ಮಗ್ಗಲುಗಳಿಗೆ ನಿದರ್ಶನವಾಗಿರುವ ಈ ಕೃತಿಯು ಯುವಕರ ಜೀವನ ಸಾಕ್ಷತ್ಕಾರ್ಯಕ್ಕೆ ದಾರಿದೀಪದಂತಿದೆ.
   ಹೀಗೆ ಡಿ.ಆರ್. ಚನ್ನೇಗೌಡರ ಪ್ರತಿಯೊಂದು ಕೃತಿಗಳು ಸಹ ತಮ್ಮದೇಯಾದ ಮೌಲ್ಯಗಳನ್ನೊಳಗೊಂಡಿವೆÉ. ವ್ಯಕ್ತಿಚಿತ್ರಣ, ಕಾವ್ಯ, ಚರಿತ್ರೆ, ಸಂಶೋಧನೆ, ಸಂಪಾದನೆ ಹೀಗೆ ವಿಭಿನ್ನ ರೀತಿಯ ಸಾಹಿತ್ಯ ಕೃಷಿಗೈದು ಧೀಮಂತ ಸಾಹಿತಿ ಚನ್ನೇಗೌಡರು.
   ಇವಲ್ಲದೆ shivಚಿರಿi mಚಿhಚಿಡಿಚಿರಿಚಿ ಮತ್ತು sಡಿi ಟಿಚಿಟಿರಿuಟಿಜಚಿ shಚಿಣಚಿಞಚಿ ಎಂಬ ಆಂಗ್ಲ ಗ್ರಂಥಗಳನ್ನು ನೀಡಿದ್ದಾರೆ. ಪ್ರಬುದ್ದ ಭಾಷಣಕಾರರೂ ಆಗಿದ್ದ ಚನ್ನೇಗೌಡರು ಸಾಹಿತ್ಯವನ್ನು, ಸಮಾಜವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದವರು. ಅಂದುಕೊಂಡಂತೆ ಬಾಳಿ ಬದುಕಿದವರು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197

ಗುರುವಾರ, ಅಕ್ಟೋಬರ್ 23, 2014

ಸಾತ್ವಿಕ ಸತ್ವದ ಮೌಲಿಕ ಕೃತಿ- 'ಕಚ ಸಂಜೀವಿನಿ'- ಕೊಟ್ರೇಶ್ ಎಸ್. ಉಪ್ಪಾರ್


      ಡಾ|| ಮಳಲಿ ವಸಂತಕುಮಾರ್ ರವರ ಸಮಗ್ರ ಸಾಹಿತ್ಯವನ್ನು ಅವಲೋಕಿಸಿದಾಗ ಅವರು ನಾಟಕ ಸಾಹಿತ್ಯಕ್ಕೆ ವಿಶೇಷ ಒಲವು ತೋರಿರುವುದು ಮನನವಾಗುತ್ತದೆ, ಕನ್ನಡ ನಾಟಕ  ಪರಂಪರೆಯನ್ನು ಕುರಿತು ಚರ್ಚಿಸುವಾಗಲೂ ಮಳಲಿಯವರ ನಾಟಕಗಳು ಮಹತ್ವವನ್ನು ಪಡೆದು ಕೊಳ್ಳುತ್ತವೆ.
      ಡಾ|| ಮಳಲಿಯವರು ಈಗಾಗಲೇ ‘ಯಮಧರ್ಮ’, ‘ಲಂಕೇಶ್ವರ’, ‘ಶರ್ಮಿಷ್ಠೆ’ ಯಂತಹ ಉತ್ಕøಷ್ಟ ನಾಟಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಶ್ರೀಮಂತಗೊಳಿಸಿದ್ದಾರೆ. ಇವರ ‘ಲಂಕೇಶ್ವರ’ ಹಾಗೂ ‘ಶರ್ಮಿಷ್ಠೆ’ ನಾಟಕಗಳ ರಂಗ ಪ್ರಯೋಗಗಳನ್ನು ವಿಶ್ಲೇಷಿಸಿದ್ದೇನೆ. ಅವುಗಳಲ್ಲಿ ‘ಶರ್ಮಿಷ್ಠೆ’ ನಾಟಕದ ಕುರಿತು ವಿಶ್ಲೇಷಣೆಯನ್ನೂ ಮಧ್ಯಮಗಳಿಗೆ ಮಾಡಿದ್ದೆ. ಇವರ ನಾಟಕಗಳು ಪುರಾಣ ಮತ್ತು ಇತಿಹಾಸಗಳನ್ನೊಳಗೊಂಡ ವೈಚಾರಿಕ ನೆಲೆಗಟ್ಟಿನಲ್ಲಿ ರಚಿತವಾದವುಗಳೆಂದು ಹೇಳಬಹುದು, ಇತ್ತೀಚೆಗೆ ಬಿಡುಗಡೆಯಾದ ಇವರ ಇನ್ನೊಂದು ನಾಟಕ ‘ಕಚ ಸಂಜೀವಿನಿ’.
      ‘ಶರ್ಮಿಷ್ಠೆ’ ಹಾಗೂ ‘ಕಚ ಸಂಜೀವಿನಿ’ ನಾಟಕಗಳು ಒಂದೇ ಕಥಾ ಹಂದರವನ್ನು ಒಳಗೊಂಡರೂ ಪಾತ್ರಗಳ ವೈಶಿಷ್ಟವು ಭಿನ್ನವಾಗಿವೆ. ರನ್ನನ ‘ಸಾಹಸಭೀಮ ವಿಜಯ’ ಹಾಗೂ ಪಂಪನ ‘ವಿಕ್ರಮಾರ್ಜುನ ವಿಜಯ’ ಕೃತಿಗಳ ಕಥಾ ಹಂದರ ಮಹಾಭಾರತವೇ ಆದರೂ ರನ್ನನಿಗೆ “ಭೀಮ’ ನಾಯಕನಾಗಿ ಕಂಡರೆ, ಪಂಪನಿಗೆ ‘ಅರ್ಜುನ’ ನಾಯಕನಾಗಿ ಗೋಚರಿಸುತ್ತಾನೆ. ಅಲ್ಲಿ ಲೇಖಕರೂ ಭಿನ್ನ, ದೃಷ್ಠಿಕೋನವೂ ಭಿನ್ನವಾಗಿತ್ತು. ಆದರೆ ಇಲ್ಲಿ ಲೇಖಕರೊಬ್ಬರೆ ದೃಷ್ಟಿಕೋನಗಳು ಮಾತ್ರ ಭಿನ್ನವಾಗಿರುವುದನ್ನು ಕಾಣುತ್ತೇವೆ. ಇದೇ ಕಥೆಯನ್ನು  ಆಯ್ದುಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ|| ಗಿರೀಶ್ ಕಾರ್ನಾಡರಿಗೆ ‘ಯಯಾತಿ’ ನಾಯಕರಾಗಿ ಕಾಣುವುದು ವಿಶೇಷ. ಆದರೆ ಡಾ. ಮಳಲಿಯವರು ಪ್ರತಿ ಪಾತ್ರಗಳಲ್ಲೂ ಒಳಗಿಳಿದು ಭಿನ್ನತೆ ಕಾಣುವ ವೈಶಿಷ್ಟ್ಯತೆ ಹಾಗೂ ಆ ಪಾತ್ರಗಳನ್ನು ಮೇರುಸ್ತರದಲ್ಲಿ ನಿಲ್ಲಿಸುವ ಪರಿ ಅಮೋಘವಾದುದು. ಆದ್ದರಿಂದಲೆ ಅವರ ನಾಟಕಗಳಿಗೆ ಕನ್ನಡ ನಾಟಕ ಚರಿತ್ರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಮಳಲಿಯವರ ಪ್ರಗತಿಪರ ವೈಚಾರಿಕ ಪ್ರಜ್ಞೆ ದಟ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ‘ಶರ್ಮಿಷ್ಠೆ’ ಹಾಗೂ ‘ಕಚ ಸಂಜೀವಿನಿಯಲ್ಲಿ’ ವೈದಿಕ ಧರ್ಮದ ಪುರೋಹಿತಶಾಹಿ ಹಾಗೂ ಶೂದ್ರರ ನಡುವಿನ ಪ್ರಾಸಂಗಿಕತೆಗಳನ್ನು ಲೇಖಕರು ಸೊಗಸಾಗಿ ರೂಪುಗೊಳಿಸಿದ್ದಾರೆ.
84 ಪುಟಗಳ, 70 ರೂಪಾಯಿ ಮುಖ ಬೆಲೆಯ ಈ ಕೃತಿಯನ್ನು ಮೈಸೂರಿನ ‘ವಿದ್ಯುತ್ ಪ್ರಕಾಶನ’ ಹೊರತಂದಿದ್ದು ಮುಖ ಪುಟ ಸುಂದರವಾಗಿ ಮೂಡಿಬಂದಿದೆ.
ದೇವದಾನವ ರಣರಂಗ ಮಾನವಹೃದಯ|
ಭಾವರಾಗ ಹಟಂಗಳವರ ಸೇನೆಗಳು||
ಭೂಮಿಭವಜಯಗಳ ಬ್ರಾಂತಿಯಲಿ ಮರೆಯುವರು|
ಜೀವನಾಮೃತವನವರು ಮಂಕುತಿಮ್ಮ||
ಅಂದರೆ ಮಾನವ ಹೃದಯ ದೇವದಾನವ ರಣರಂಗವಗಿದೆ. ಭಾವ ಹಗೆ ಛಲಗಳೇ ಅವರ ಸೇನೆಯಾಗಿವೆ; ಭೂಮಿ, ಭವಜಯಗಳ ಬ್ರಾಂತಿಯಲ್ಲಿ ಜೀವನಕ್ಕೆ ಅಗತ್ಯವಾದ ಅಮೃತವನ್ನೇ ಮರೆಯುವರು ಎನ್ನುವಂತೆ ಈ ನಾಟಕವೂ ಸಹ ಸಾಕ್ಷಿಯಾಗಿ ನಿಲ್ಲುತ್ತದೆ.
    ಲೇಖಕರೇ ಹೇಳುವಂತೆ “ಮಹಾಭಾರತದ ಉಪಖ್ಯಾನದಲ್ಲಿ ಕಚನದು ಮಹತ್ವದ ಪಾತ್ರ. ಯಾಯಾತಿ, ದೇವಯಾನಿ, ಶರ್ಮಿಷ್ಠೆ, ಶುಕ್ರಾಚಾರ್ಯ, ವೃಷಪರ್ವ, ಬೃಹಸ್ಪತಿ ಮುಂತಾದವು ಪರಸ್ವರ ಆವೃತ ಪಾತ್ರಗಳು” ಹೌದು ಮೂಲ ಮಹಾಭಾರತದಲ್ಲಿ ಪಾಂಡವರ ಹಾಗೂ ಕೌರವರ ನಡುವೆ  ಶ್ರೀಕೃಷ್ಣನ ಪಾತ್ರ ಮಹತ್ವ ಪಡೆಯುವಂತೆ ಪ್ರಸ್ತುತ ‘ಕಚ’ ಸಂಜೀವಿನಿಯಲ್ಲಿ ‘ಕಚ’ ಮಹತ್ವ ಪಡೆಯುತ್ತಾನೆ. ದೇವಗುರು ಬೃಹಸ್ಪತಿಯ ಮಗನಾದ ‘ಕಚ’ ವಿಧ್ಯೆಗಾಗಿ ರಾಕ್ಷಸ ಗುರು ಶುಕ್ರಾಚಾರ್ಯರಲ್ಲಿ ವಿಧ್ಯೆ ಕಲಿಯುವ ಪ್ರಸಂಗವೆ ಪ್ರಧಾನವಾದ ಅಂಶವಾಗಿ ಪರಿಣಮಿಸುವ ಈ ನಾಟಕದಲ್ಲಿ ಗುರುವಿನ ಮಗಳಾದ ದೇವಯಾನಿಯ ಮನಸ್ಸು ಪ್ರೇಮ ಪಾಶದಲ್ಲಿ ಸಿಲುಕಿ ‘ಕಚ’ ನ ಮೇಲೆ ಮೋಹಗೊಳ್ಳುವ ಪರಿಯನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ದಾನವರ ಕೃತ್ಯಕ್ಕೆ ಸಿಲುಕಿ ‘ಕಚ’ ಮೃತ್ಯುಹೊಂದಿದರೂ ದೇವಯಾನಿಯ ಒತ್ತಾಸೆಯಿಂದಲೇ ಶುಕ್ರಾಚಾರ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ಮೃತ ಸಂಜೀವಿನಿ ವಿಧ್ಯೆಯಿಂದ ಬದುಕಿಸುವರು. ಕಚನ ವಿಷಯದಲ್ಲಿ ದೇವಯಾನಿ ಕಾಮುಕವಾಗಿಯೇ ವರ್ತಿಸಿದ್ದೆ ಅಧಿಕ ಆದರೆ ಗುರಿವಿನ ಪುತ್ರಿ ಸ್ವಂತ ಸಹೋದರಿಯ ಸಮಾನವೆಂದರಿತ ‘ಕಚ’ ನೈತಿಕ ಬುದ್ದಿ ಹೇಳಿ ನಯವಾಗಿಯೇ ತಳ್ಳಿಹಾಕುತ್ತಾನೆ.
    ಶುಕ್ರಾಚಾರ್ಯರೆ ಹೇಳುವಂತೆ “ನೇರ ನಡೆ-ನುಡಿಯೇ ಕಚನ ವಿಶೇಷ! ಆದರೆ ಕಚ ಸ್ವಹಿತ ಸಾಧಕನಲ್ಲ. ದೇವದಾನವ-ಮಾನವರೆಲ್ಲರಿಗೂ ಒಳಿತಾಗಬೇಕೆಂಬುದು ಅವನ ಬಯಕೆ! ಅವನು ಸರ್ವಹಿತಕರ ಮನೋಧರ್ಮಿ”.
    ‘ಶರ್ಮಿಷ್ಠೆ’ ನಾಟಕದಲ್ಲಿ ಶರ್ಮಿಷ್ಠೆ ಹಾಗೂ ದೇವಯಾನಿಯರು ಸಂಧಿಸುವ ಪ್ರಸಂಗಗಳು ಪ್ರಧಾನವಾಗಿ ಬರುವುದರೊಂದಿಗೆ ರಾಜಕುಮಾರಿಯಾದ ‘ಶರ್ಮಿಷ್ಠೆ’ ಕಾಲಸನ್ನಿವೇಶಕ್ಕೆ ತುತ್ತಾಗಿ ದೇವಯಾನಿಯ ದಾಸಿಯಾಗಿ ಪರಿತಪಿಸಿ, ಮಾನವಿಯ ಮೌಲ್ಯಗಳಲ್ಲರಳಿ ನಾಯಕಿಯಾದರೆ, ಇಲ್ಲಿ ಅವರೀರ್ವರ ಪ್ರಸಂಗಗಳು ಗೌಣವಾಗಿ ಗುರು-ಶಿಷ್ಯರ ಹಾಗೂ ದೇವಯಾನಿಯನ್ನು ಸರಿದಾರಿಗೆ ತರುವಲ್ಲಿ ಹೋರಾಡುವುದರ ಜೊತೆಗೆ, ‘ಶರ್ಮಿಷ್ಠೆಗೆ ಸುಂದರ ಬದುಕನ್ನು ದೊರಕಿಸಿಕೊಡುವ ಹೊಣೆಗಾರಿಕೆಯನ್ನು ನಿರ್ವಹಿಸುವ ‘ಕಚ’ ನೇ ನಾಯಕನಾಗಿ ನಿಲ್ಲುತ್ತಾನೆ.
‘ಶರ್ಮಿಷ್ಠೆ’ ಹಾಗೂ ‘ದೇವಯಾನಿ’ ಗೆ ‘ಯಯಾತಿ’ ಒಬ್ಬನೇ ಪತಿಯಾದರೂ ರಕ್ಕಸಮನಸ್ಸಿನ ‘ದೇವಯಾನಿ’, ರಾಜಗುಣದ ‘ಶರ್ಮಿಷ್ಠೆ’ ನಡುವೆ ಬಾಳದೋಣಿಯನ್ನು ಸಾಗಿಸುವ ಪರಿಯನ್ನು ಲೇಖಕರು ಸೊಗಸಾಗಿ ಚಿತ್ರಿಸಿದ್ದಾರೆ.

     ಡಾ.ಮಳಲಿಯವರೇ ತಮ್ಮ ಪ್ರಸ್ತಾವನೆಯಲ್ಲಿ ಹೇಳಿರುವಂತೆ- “ವಸ್ತು ಸ್ಥಿತಿಯಲ್ಲಿ ಕಚನ ವ್ಯಕ್ತಿತ್ವ ಇಲ್ಲಿನ ಎಲ್ಲಾ ಪಾತ್ರಗಳಿಗಿಂತ ಉನ್ನತವಾದುದು; ಆವನೊಬ್ಬ ಸಮದರ್ಶಿ; ದೂರದರ್ಶಿತ್ವವುಳ್ಳ ದಿವ್ಯಜ್ಞಾನಿ ಹೃದಯವಂತಿಕೆ, ಮಾನವೀಯತೆ, ಪ್ರೀತಿ, ಅನುಕಂಪಗಳುಳ್ಳ ಅವನು ನೊಂದವರ ಬಗ್ಗೆ ಕರುಣಾಮೂರ್ತಿ ಅಸಾಧಾರಣ ಬ್ರಹ್ಮಚಾರಿ. ಸಕಲ ಸದ್ಗುಣಶೀಲ ಸಂಪನ್ನ, ಅನುಪಮ ತ್ಯಾಗಿ, ಅವನು ಮಹಾನ್ ತಪಸ್ವಿಯೂ ಹೌದು ಮೇಲಾಗಿ ಲೌಕಿಕ ಚಿಂತಕನೂ ಹೌದು. ಅವನು ಸದಾ ಜಾಗೃತ ಮನಸ್ಸು, ಪಾವಿತ್ರ್ಯದ ತೇಜಸ್ಸು”.
      ಈ ಮಾತನ್ನು ಬಹುಶ: ಇವರ ‘ಶರ್ಮಿಷ್ಠೆ’ನಾಟಕ ರಚನೆಯ ನಂತರ ಹೇಳಿದ್ದು ಅನ್ನಿಸುತ್ತದೆ. ಕರ್ನಾಡರ ‘ಯಯಾತಿ’ಯಲ್ಲಿ ಅಷ್ಟೇನೂ ಪ್ರಮುಖವಾಗದ ‘ಕಚ’ ಮಳಲಿಯವರ ‘ಶರ್ಮಿಷ್ಠೆ’ಯಲ್ಲಿ ಗೋಚರಿಸುತ್ತಾರೆ. ಅವರ ವ್ಯಕ್ತಿತ್ವಕ್ಕೆ ಮಾರುಹೋದ ಲೇಖಕರು ‘ಕಚ’ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ- “ಇಷ್ಟಾದರೂ ನಮ್ಮ ಲೇಖಕರು ಸಾಹಿತ್ಯ ರಚನೆಯಲ್ಲಿ ಯಯಾತಿ, ದೇವಯಾನಿ ಮತ್ತು ಶರ್ಮಿಷ್ಠೆಯರನ್ನು ಕೇಂದ್ರೀಕರಿಸಿ ವಿಜೃಂಭಣೆಗೊಳಿಸಿದಷ್ಟು ಕಚನನ್ನು ವೈಭವೀಕರಿಸಲಿಲ್ಲ. ಇದು ಏಕೆಂದು ಅರ್ಥವಾಗಲಿಲ್ಲ. ನಾನು ಶರ್ಮಿಷ್ಠೆ ನಾಟಕದ ರಚನೆಯಲ್ಲಿ ತೊಡಗಿದಾಗ ಈ ವಿಷಯ ಸ್ಪಷ್ಠವಾಯಿತು. ನಾನೂ ಸಹ ಕಚನನ್ನು ಒಂದು ಉಪಪಾತ್ರವಾಗಿ ಚಿತ್ರಿಸುವ ತಪ್ಪು ಮಾಡುತ್ತಿದ್ದೇನಲ್ಲ ಎನಿಸಿತು”.
      ಈ ಆಲೋಚನೆಯೇ ಇಲ್ಲಿನ ‘ಕಚಸಂಜೀವಿನಿ’ ಹುಟ್ಟಿಗೆ ಕಾರಣವಾಯಿತೆನ್ನಬಹುದು ಮುನ್ನುಡಿಕಾರರಾದ ಡಾ. ಲೀಲಾಪ್ರಕಾಶ್ ರವರು ಹೇಳುವಂತೆ – “ಡಾ. ವಸಂತಕುಮಾರರು ಈ ಪುಟ್ಟನಾಟಕದಲ್ಲಿ ಅತ್ಯಂತ ಎಲ್ಲ ಭಾವಗಳನ್ನು ಮೂಡಿಸಿದ್ದಾರೆ. ಈ ನಾಟಕವು ಸಾರ್ವಕಾಲಿಕವಾಗಿಯೂ ಮೆಚ್ಚಾಗುವಂತೆ ರಚಿಸಿರುವುದು ಅವರ ನಾಟಕ ರಚನೆಯ ಪ್ರೌಢಿಮೆಯನ್ನು ನಿರೂಪಿಸುತ್ತದೆ. ಕೇವಲ ಎಂಟು ಪಾತ್ರಗಳಿಂದ ಅತ್ಯಂತ ಚಿತ್ತಾಕರ್ಷಕವಾಗಿ ಮಾನವರೆಲ್ಲರೂ ತಮ್ಮ ಅಂತರಂಗಶುದ್ದಿಯನ್ನು ಅವಲೋಕನ ಮಾಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ”.
     ಒಟ್ಟಾರೆ ಹೇಳುವುದಾದರೆ ಡಾ. ಮಳಲಿ ವಸಂತಕುಮಾರ್ ರವರು ವಿಚಾರ ಹಾಗೂ ಹೃದಯ ಶ್ರೀಮಂತಿಕೆಯನ್ನು ಪ್ರಸ್ತುತ ನಾಟಕದಲ್ಲಿ ಪಲ್ಲವಿಸಿದ್ದಾರೆ. ಶರ್ಮಿಷ್ಠೆ ಹೃದಯ ವಿಸ್ತಾರದ ಗುಣೊತ್ಕಾರ್ಷದಿಂದ ಪ್ರಜ್ವಲಿಸಿದರೆ, ದೇವಯಾನಿ ಗರ್ವ, ದುರಭಿಮಾನದ ವಿಪ್ರಕನ್ಯೆಯಾಗಿ ಬಿಂಬಿತವಾಗುತ್ತಾಳೆ. ಇನ್ನು ‘ಕಚ’ ದೇವದಾನವರನ್ನೆಲ್ಲ ಮೀರಿ ಸಕಲ ಜೀವಸಂಕುಲಗಳ ಹಿತೈಷಿಯಾಗಿ, ಸದ್ವಿನಯ ಸಂಪನ್ನನಾಗಿ, ಸಕಲ ಪಾರಂಗತನಾಗಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಮಾನವೀಯ ಮೌಲ್ಯಾಧಾರಕನಾಗಿ ಕಂಗೊಳಿಸುತ್ತಾನೆ.
      ಪ್ರಗತಿಪರ ಹಾಗೂ ವೈಚಾರಿಕ ಚಿಂತಕರಾದ ಡಾ. ಮಳಲಿ ವಸಂತಕುಮಾರ್‍ರವರು ಹಳೆಯ ಕಥಾ ಹಂದರವನ್ನೆ ಆಯ್ದುಕೊಂಡು ಪುರಾಣೇತಿಹಾಸಗಳ ಸಮ್ಮಿಲನಗೊಳಿಸಿ, ನಾವಿನ್ಯತೆಯ ಮೂಸೆಯಲ್ಲಿ ‘ಕಚ’ನನ್ನು ನಾಯಕನನ್ನಾಗಿ ಬಿಂಬಿತಗೊಳಿಸಿ ಹೊಸ ಆಲೋಚನೆಗಳತ್ತ ಕನ್ನಡ ಸಾಹಿತ್ಯದ ನಾಟಕಕಾರರು ಹಾಗೂ ಓದುಗ, ವಿಮರ್ಶಕರ ಮನಸ್ಸನ್ನು ಹರಿಸಿದ್ದಾರೆ. ಅವರು ಪಾತ್ರಗಳೊಂದಿಗೆ ಲೀಲಾಜಾಲವಾಗಿ ವ್ಯವಹರಿಸುವ ಪರಿ, ಆಧುನಿಕ ಭಾವ-ಭವ್ಯತೆಗಳೊಂದಿಗೆ ಸಮೀಕರಿಸುವ ಚಕ್ಯತೆ ಅಗಮ್ಯ.
      ಈ ಕೃತಿಯ ಬೆನ್ನುಡಿಯಲ್ಲಿ ಖ್ಯಾತ ಅಷ್ಟಾವಧಾನಿಗಳಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಉಲ್ಲೇಖಿಸಿದಂತೆ- “ಜಗದಗಲ ವೈರವೆಂಬ ವೈರಾಣುವೇ ತುಂಬಿಕೊಂಡು ಪ್ರಕ್ಷುಬ್ಧಗೊಳ್ಳುತ್ತಿರುವ ಸಮಕಾಲೀನ ಸಂದರ್ಭಕ್ಕೂ ಈ ಸಂಜೀವಿನಿಯ ಸಂಪ್ರೋಷಣೆಯಾಗಬೇಕಾಗಿದೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ‘ಕಚನ’ಕಾಂಕ್ಷೆ ಮತ್ತೆ ನಮ್ಮಲ್ಲಿ ಮೊಳಕೆಯೊಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಉತ್ತಮ ನಾಟಕ ಕೃತಿ. ಮತ್ತೆ ಮತ್ತೆ ಓದಿಸಿಕೊಂಡು ಅಂತರಂಗದಲ್ಲಿ ಅಭಿನೀತಗೊಳ್ಳುವ ಆರ್ಷೇಯ ಮೌಲ್ಯದ ಆಚಾರ್ಯಕೃತಿ”.
ಅಂತೆಯೇ ಇವರ ಲೇಖನಿಯಿಂದ ಇನ್ನೂ ಉತ್ತಮೊತ್ತಮ ನಾಟಕರತ್ನಗಳನ್ನು ಕನ್ನಡ ಸಾಹಿತ್ಯ ಕಣಜಕ್ಕೆ ಹರಿದುಬರಲೆಂದು ಆಶಿಸುತ್ತೇನೆ.

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ,
 ಹಾಸನ-573201
ಮೊ-9483470794,9739878197