ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ, ಮತ್ತೇನನ್ನೋ ಹಂಬಲಿಸುವ ದಾವಂತದಲ್ಲಿ ಅನುಭವಿಸಿ, ಆನಂದಿಸಬಹುದಾದ ಬಾಲ್ಯವೆಂಬ ಸುವರ್ಣಕಾಲವನ್ನು ಬಹುತೇಕ ಮಕ್ಕಳು ಸಾಕಾರಗೊಳಿಸಿಕೊಳ್ಳದೇ ಹೋಗಿಬಿಡುತ್ತಾರೆ. ಕುಣಿದು ಕುಪ್ಪಳಿಸುವ ವಯೋಮಾನದಲ್ಲಿ ಚಿಂತಿಸುವ ತುರ್ತನ್ನು, ಮಾನಸಿಕ ತೊಳಲಾಟಗಳನ್ನು ತಂದುಕೊಂಡು ಜೀವನ ಪ್ರೀತಿಗಾಗಿ ಹಲುಬುತ್ತಿದ್ದಾರೆ. ಇದಕ್ಕೆಲ್ಲಾ ಜಾಗತಿಕ ಪ್ರಗತಿ, ವಿಜ್ಞಾನ ಅನ್ವೇಷಣೆಗಳ ನಾಗಾಲೋಟ ಎಷ್ಟು ಕಾರಣವೆಂದು ದೂರುತ್ತೇವೆಯೋ ಅಷ್ಟೇ ಪೋಷಕರ ನಿರಾಸಕ್ತಿ, ಮನೆಯಲ್ಲಿನ ಬಂಧಿತ ವಾತಾವರಣ, ಇಂಥದ್ದೇ ಕಲಿಯ ಬೇಕೆಂಬ ಕುರುಡು ಪ್ರೀತಿಯಲ್ಲಿ ಅರಳುವ ಕುಸುಮಗಳ ಆಸೆ-ಆಕಾಂಕ್ಷೆಗಳೆಲ್ಲಾ ಮುರುಟಿಹೋಗುತ್ತವೆ.
ಇಂತಹ ಸಂದರ್ಭದಲ್ಲಿ ಬಾಲ್ಯದ ನೆನಪುಗಳನ್ನು, ನಲಿದಾಟಗಳನ್ನು, ಮನಸಿನ ತೊಳಲಾಟಗಳನ್ನು ಸರಳ ಪದ್ಯಗಳಲ್ಲಿ ಎಳೆಯರಿಗಾಗಿಯೇ ಕಳೆದ ಹಲವು ವರ್ಷಗಳಿಂದ ರಾಜ್ಯ ಮಟ್ಟದ ಹತ್ತಾರು ಪತ್ರಿಕೆಗಳಿಗೆ ಬರೆಯುತ್ತಾ ಶ್ಲಾಘನೆಗೆ ಪಾತ್ರರಾದವರು ಶ್ರೀಮತಿ ಸುಶೀಲಾ ಸೋಮಶೇಖರ್ ರವರು.

ಇತ್ತೀಚಗೆ ಬಿಡುಗಡೆಯಾದ ಇವರ ‘ನಗುವ ನಕ್ಷತ್ರಗಳು’ ಮಕ್ಕಳ ಕಾವ್ಯಗುಚ್ಚ 60 ಪದ್ಯಗಳಿಂದ ಕೂಡಿದ 104 ಪುಟಗಳ, ಸುಂದರ ಮುಖಪುಟವುಳ್ಳ 60 ರೂ ಮುಖ ಬೆಲೆ ಹೊಂದಿದ ಈ ಕೃತಿಯನ್ನು ಬೆಂಗಳೂರಿನ ನಿರಂತರ ಪ್ರಕಾಶನವು ಹೊರತಂದಿದೆ.
ಮಕ್ಕಳ ಭಾವಕ್ಕಿಳಿದು, ಮಿಂದೆದ್ದು ಅಲ್ಲಿನ ನಲಿದಾಟಗಳನ್ನು ಕಾವ್ಯದ ರೂಪದಲ್ಲಿ ಮನಮೋಹಕವಾಗಿ ಚಿತ್ರಿಸಿದ್ದಾರೆ. ಅಲ್ಲದೇ ಪ್ರ್ರಾಕೃತಿಕ ಸೌಂದರ್ಯಗಳಾದ ಪ್ರಾಣಿ, ಪಕ್ಷಿ, ತರು-ಲತೆ, ಆಗಸ, ನಕ್ಷತ್ರ, ಹಬ್ಬ, ಸಂಪ್ರದಾಯಗಳು ಮುಂತಾದ ಹಲವು ಒಲವುಗಳೊಂದಿಗೆ ಮಕ್ಕಳಾಳಕ್ಕಿಳಿದು ಸಂವಾದಿಸಿದ್ದಾರೆ.
ಗುಡು-ಗುಡು ಗುಡುಗನು ನೀನಿಳಿಸಿ
ಫಳ-ಫಳ ಮಿಂಚನು ನೀ ಕುಣಿಸಿ
ಕಾಮನ ಬಿಲ್ಲನ್ನು ನೀನೆಳೆಸಿ
ಟಪ ಟಪ ಹನಿಗಳ ಭವಿಗಿಳಿಸಿ [ಮೋಡ]
ಹೀಗೆ ಮಗು ಮೋಡದೊಂದಿಗೆ ಸಂವಾದಿಸುವ ಕ್ರಿಯೆಯನ್ನು ಈ ಪದ್ಯದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅನುಕರಣ ವ್ಯಯಗಳನ್ನು ಬಳಸುವುದರ ಮೂಲಕ ಪದ್ಯಕ್ಕೆ ಛಂದಸ್ಸಿನ ಶೋಭೆಯನ್ನು ಹೆಚ್ಚಿಸಿದ್ದಾರೆ. ಪ್ರಾಸಯುಕ್ತ ಪದಗಳ ಬಳಕೆ ಪದ್ಯದ ಸೌಂದರ್ಯವನ್ನು ವೃದ್ಧ್ದಿಸಿದೆ. ಗುಡು-ಗುಡು, ಫಳ-ಫಳ, ಟಪ-ಟಪ ಪ್ರಯೋಗ ಲಾಲಿತ್ಯವನ್ನು ವೃದ್ಧಿಸಿದೆ.
ಮೋಡವು ಕಟ್ಟತು ಆಗಸ ಬಿರಿಯಿತು
ಟಪ ಟಪಗುಡುತ ಹನಿಯು ಬಿದ್ದಿತು
ಮೂಡಿತು ಬಣ್ಣದ ಕಾಮನ ಬಿಲ್ಲು
ಜತೆಯಲೆ ಇಳಿದವು ಆವಿಯ ಕಲ್ಲು [ಆವಿಯ ಕಲ್ಲು]
ಇಲ್ಲಿ ಕವಯತ್ರಿ ಬಿಸಿಲ್ಮಳೆಗಳ ಮಧ್ಯೆ ಮೂಡುವ ಸುಂದರ ಕಾಮನ ಬಿಲ್ಲು, ಮಳೆ ಮೂಡಿ ಬರುವ ಪ್ರಸಂಗವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಪ್ರಾಸವಿದ್ದರೆ ಕವಿತೆ ಪಾಯಸ, ಇಲ್ಲದಿರೆ ಪ್ರ್ರಾಯಾಸ ಎನ್ನುವಂತೆ ಇಲ್ಲಿ ಕವಿಯತ್ರಿ ಅಂತ್ಯ ಪ್ರಾಸಕ್ಕೆ ಒತ್ತು ಕೊಟ್ಟು ಕಾವ್ಯದ ಘನತೆ ಹೆಚ್ಚಿಸಿದ್ದಾರೆ. ಬಿರಿಯಿತು-ಬಿದ್ದಿತು, ಬಿಲ್ಲು-ಕಲ್ಲು ಇಲ್ಲಿ ಬಳಸಿದ ಪ್ರಾಸದಗಳಾಗಿವೆ. ಇಲ್ಲಿನ ಪ್ರಾಸಪದಗಳಲ್ಲಿ ಬಂದಿರುವುದರಿಂದ ಗೇಯತೆಯ ಸೌಂದರ್ಯದ ಒಲವು ಚೆಲ್ಲಿ ಸೊಸಿದೆ ಎನ್ನಬಹುದು.
ಮೋಡವೆ ಮೋಡವೆ ಬಣ್ಣವ ಬದಲಿಸು
ಚಂದದ ಬಿಳಿಯನು ಒಮ್ಮೆಗೆ ಕರಗಿಸು[ಮೋಡ ಮತ್ತು ಮಳೆ]
ಕಪ್ಪು ರಂಗಿನ ದಟ್ಟವಾದ ಮೋಡ ಬಣ್ಣವ ಬದಲಿಸಿ ಅಂದ ಬಿಳಿಯಾಗುವಂತೆ ಕರೆ ಕೊಡುವ ಹಿನ್ನಲೆಯಲ್ಲಿ ಕರಗಿ ನೀರಾಗಿ ಭುಮಿಗಿಳಿದು ಬರುವಂತೆ ಮೋಡಕ್ಕೆ ಕೋರಿಕೆ ಸಲ್ಲಿಸುವ ಕವಯತ್ರಿ ಛಂದಸ್ಸಿಗೂ ಗಮನ ನೀಡಿದ್ದಾರೆ.
ಈ ಪದ್ಯದ ಮೊದಲೆರಡು ಪದಗಳನ್ನು ಗಮನಿಸುವುದಾದರೆ ನಾಲ್ಕು ಮಾತ್ರೆಯ ನಾಲ್ಕು ಗಣಗಳು, ಆದಿ ಹಾಗೂ ಅಂತ್ಯ ಪ್ರಾಸ ಒಳಗೊಂಡಂತೆ ಪರಿವರ್ಧಿನಿ ಷಟ್ಪದಿಯನ್ನು ನಿನಪಿಗೆ ತರುತ್ತದೆ.
ವ್ಯಾಕರಣ, ಛಂದಸ್ಸು, ಲಯ, ಗೇಯತೆಗಷ್ಟೇ ಮೀಸಲಾಗದೆ ಅದರಾಚೆಗೂ ಚಾಚಿ ಸಾಮಾಜಿಕ ಅಸಮಾನತೆಯನ್ನು ಕಾವ್ಯದಲ್ಲಿ ಸೊಗಸಾಗಿ ಕಟ್ಟಕೊಟ್ಟಿದ್ದಾರೆ.
ಅಮ್ಮನು ಮಾಡುವ ಕೆಲಸದ
ಜೊತೆಗೆ ನನ್ನನು ಕರೆಯುವಳು
ಪಾತ್ರೆ ಪಗಡ ತೊಳೆಯಲು ಅವಳು
ನನಗೇ ಹೇಳುವಳು [ಮಗಳ ನೋವು]
*
ಬ್ಯಾಟು ಬಾಲು ಹಿಡಿದ ತಮ್ಮನು
ಆಡಲು ಓಡುವನು
ಕಸವನು ಗುಡಿಸಿ ನೀರನು
ತರಲು ನನ್ನನೆ ದೂಡುವಳು [ಮಗಳ ನೋವು]
ಇಲ್ಲಿ ಕವಯಿತ್ರಿ ಪ್ರಸ್ತುತ ಸಾಮಾಜಿಕ ಮನೋಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಗಂಡು-ಹೆಣ್ಣುಗಳ ಮಧ್ಯೆ ಪೋಷಕರು ತೋರುವ ಅಂತರತೆಯನ್ನು, ಭಿನ್ನತೆಯನ್ನು, ಶೋಷಣೆಯನ್ನು ಬಾಲೆಯ ಮನೋಸ್ಥಿತಿಯಲ್ಲಿಯೇ ನಿಂತು ಅವಲೋಕಿಸಿದ್ದಾರೆ.
ತಿಂಡಿಯ ಕೇಳದ ಮುದ್ದಿನ ಗೊಂಬೆ
ಹಠವನು ಹೂಡದ ಈ ಗೊಂಬೆ
ಡಿಕ್ಕಿ ಹೊಡೆದರೂ ಅಳದ ಗೊಂಬೆ
ಬಿದ್ದರೂ ಒಡೆಯದ ಚಂದದ ಗೊಂಬೆ [ಬಣ್ಣದ ಗೊಂಬೆ]
ಈ ಪದ್ಯದಲ್ಲಿ ಕವಯತ್ರಿ ಮಾರ್ಮಿಕವಾಗಿ ಜಗತ್ತಿನ ಎಲ್ಲಾ ಮಕ್ಕಳಿಗೆ ನೈತಿಕ ಬುದ್ದಿಯನ್ನು ತಿಳಿ ಹೇಳಿದ್ದಾರೆ. ಮುಗ್ದತೆ, ಸಹನೆ, ಪ್ರೀತಿಯ ಚಲವು-ಒಲವುಗಳನ್ನು ಸೂಸಿದ್ದಾರೆ. ಬನ್ನಿರಿ ಕೊಳ್ಳಿರಿ ಬಣ್ಣದ ಗೊಂಬೆ, ಕೀಲಿ ಕೊಟ್ಟರೆ ಕುಣಿಯುವ ಗೊಂಬೆ, ಕಿಲ ಕಿಲ ಸದ್ದನು ಮಾಡುವ ಗೊಂಬೆ, ಕೊಳ್ಳಿರಿ ಕೊಳ್ಳಿರಿ ಚಂದದ ಗೊಂಬೆ ಎನ್ನುವ ಸಾಲುಗಳು ಪ್ರೌಢರನ್ನೂ ಬಾಲ್ಯಾವಸ್ಥೆಗೆ, ಜಾತ್ರೆಗಳ ಅನ್ನಿವೇಶಕ್ಕೆ ಕೊಂಡೊಯ್ದು ಒಂದು ಕ್ಷಣ ಮೈಮರೆಯುವಂತೆ ಮಾಡಿ ಬಿಡುತ್ತವೆ.
ನನ್ನ ಚಿನ್ನ ಮನೆಗೆ ರನ್ನ
ತುಂಬಿ ನಿಂತೆ ಜಗದ ಕಣ್ಣ
ನಿನ್ನ ಕಣ್ಣ ನೋಟದಲ್ಲೆ
ತುಂಬಿ ಬಂದ ಒಲವಿನಲ್ಲೆ
ಬದುಕ ಗೆಲುವ ಕಂಡೆನು [ ಮುದ್ದು ಕಂದ]
ಇಡೀ ಪದ್ಯ ತಾಯಿ ಮಗುವಿನ ಪ್ರೀತಿ ವಾತ್ಸಲ್ಯವನ್ನು ಚಿಮ್ಮಿಸುತ್ತಾ ಸಾಗುವ ಪರಿ ಅನನ್ಯ. ಮಗುವಿನ ಆ ಮುಗ್ದ ನಯನಗಳಲ್ಲಿ ಜಾಗತಿಕ ಪ್ರೀತಿ ಕಾಣುವ ತಾಯಿ, ತಾಯಿ ಪ್ರೀತಿ ಮೂಸೆಯಲ್ಲಿ ಎಲ್ಲ ಮರೆವ ಕಂದ, ಅವರೀರ್ವರ ಪ್ರೀತಿಯ ಸಗ್ಗ ನಿನಾದವನ್ನು ಕವಯತ್ರಿ ಸೊಗಸಾಗಿ ಚಿತ್ರಿಸಿ ಕೊಟ್ಟಿದ್ದಾರೆ. ಹೃದಯಂಗಮ ಎದ್ದು ಕಾಣುತ್ತದೆ. ವಾತ್ಸಲ್ಯ ಚಿಲುಮೆಯಾಗಿ ಪಲ್ಲವಿಸಿದೆ ಎಂದರೆ ಅತಿಶಯೋಕ್ತಿಯಾಗ
ಲಾರದು.
ಅ ಆ, ಇ ಈ ಕಲಿಯೋಣ
ಲೋಕದ ಜ್ಞಾನ ತಿಳಿಯೋಣ
ಉ ಊ, ಋ ಕಲಿಯೋಣ
ಉದ್ಧಾರದ ಹಾದಿಯ ಹಿಡಿಯೋಣ [ ಅಕ್ಷರದಾಟ]
‘ಅಕ್ಷರದಾಟ’ ಕವಿತೆಯು ಅಕ್ಷರ ಕಲಿಕಾ ಹಂತದ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ. ಅಕ್ಷರ ಕಲಿಯುವುದರ ಜೊತೆ ಜೊತೆಗೆ ಜೀವನ ಮೌಲ್ಯಗಳನ್ನು, ನೈತಿಕ ಹೊಣೆಗಳನ್ನು, ಬದುಕಿನ ಪಾಠಗಳನ್ನು ಅರ್ಥಮಾಡಿಕೊಳ್ಳುವ ಪರಿಯನ್ನು ಕವಯತ್ರಿ ಮನ ಮುಟ್ಟುವಂತೆ ಹೆಣೆದಿದ್ದಾರೆ. ಇಲ್ಲಿನ 60 ಪದ್ಯಗಳಲ್ಲಿಯೂ ವಿವಿಧ ಪ್ರಸಂಗಗಳನ್ನು ನೆನಪಿಸಿದ್ದಾರೆ. ಮಕ್ಕಳ ಹೃದಯ ಮಿಡಿತವರಿತ ಕವಯತ್ರಿ ಉತ್ತಮೋತ್ತಮ ಕಾವ್ಯ ಗುಚ್ಛವನ್ನು ನಮಗೆ ನೀಡಿದ್ದಾರೆ.
ಮುಳ್ಳಿನ ಮೇಲೆ ಹೆಜ್ಜೆಯನಿರಿಸಿ
ಟಿಕ್ ಟಿಕ್ ಎನುತ ಕಾಲವಸರಿಸಿ
ಒಂದೇ ಓಟದಿ ಓಡುವನು
ನಮ್ಮನು ಹಿಂದೆ ದೂಡುವನು [ ಗಡಿಯಾರ ]
ಈ ಪದ್ಯ ಮೇಲ್ನೋಟಕ್ಕೆ ಗಡಿಯಾರ, ಸಮಯವೆಂದು ಬಾಸವಾದರೂ, ಕಾಲದ ಪ್ರಜ್ಞೆ ಅಂದರೆ ಬದುಕಿನ ನಿರಂತರತೆಯ ಸತ್ಯ ಗೋಚರಿಸದೇ ಇರದು. ಜೀವನವೆಂದ ಮೇಲೆ ಕಷ್ಟ-ಕಾರ್ಪಣ್ಯಗಳ ಮುಳ್ಳಿನ ಬೇಲಿ ಇರುವುದು ಸಹಜ. ಅವುಗಳನ್ನೆಲ್ಲಾ ಮೀರಿ ಸಾಗಬೇಕು, ಈಸಬೇಕು, ಜಯಿಸಬೇಕು. ಆದರೂ ಕಾಲ ನಮ್ಮನ್ನು ತುಳಿದು ಮುಂದೆ ಸಾಗಿ ಬಿಡುತ್ತದೆ ಎಂಬ ಆಂತರಿಕ ಸತ್ಯವನ್ನು ಕವಯತ್ರಿ ಪ್ರಜ್ವಲಿಸಿದ್ದಾರೆ. ಆದ್ದರಿಂದಲೇ ಅವರು ಕೊನೆಯ ಚರಣದಲ್ಲಿ ಯಾರೇ ಕರೆದರೂ ಕೇಳದ ಇವನ, ಯಾರೇ ನಿಂತರೂ ನಿಲ್ಲದ ಇವನ ಓಟದ ಆಟಕೆ ಸಮನಾರು ? ಇವನನು ನಿಲ್ಲಿಸೋ ದೊರೆ ಯಾರು ಎಂದು ಪ್ರಶ್ನಿಸುವುದರ ಮೂಲಕ ಕಾಲನ ಮಹಿಮೆಯನ್ನು ಎತ್ತಿ ತೋರಿಸಿದ್ದಾರೆ.
...ಅಮ್ಮಾ ಅಮ್ಮಾ ಹೇಳಮ್ಮಾ
ವೈದ್ಯರ ಕಾಣುವೆ ಏಕಮ್ಮಾ
ಹೆಣ್ಣೋ ಗಂಡೋ ಎಂಬುದ
ತಿಳಿಯುವ ಕುತೂಹಲ ನಿನಗೆ ಬೇಡಮ್ಮಾ...[ಭ್ರೂಣದ ಕೂಗು]
ಎಳೆಯರಧ್ವನಿ ಮಿಡಿಸುವುದರ ಜೊತೆಗೆ ಕವಯತ್ರಿ ಈ ಸಂಕಲನದಲ್ಲಿ ಸಾಮಾಜಿಕ ಅನಿಷ್ಟಗಳ ವಿರುದ್ದ ಧ್ವನಿ ಎತ್ತಿದ್ದಾರೆ. ಪ್ರತಿಯೊಬ್ಬ ದಂಪತಿಗಳೂ ಮಗು ಭ್ರೂಣ ವ್ಯವಸ್ಥೆಯಲ್ಲಿರುವಾಗಲೇ ಹೇಣ್ಣೋ ಗಂಡೋ ಎಂದು ಪರೀಕ್ಷಿಸುವುದರ ಮೂಲಕ ಹೆಣ್ಣಿದ್ದರೆ ಕರುಳ ಕತ್ತರಿಸಿ ಹಾಕುವ ನೀಚತನಕ್ಕೆ ಮುಂದಾಗುವುದನ್ನು ಸಾಕಷ್ಟು ಕಂಡಿದ್ದೇವೆ. ಅದೆ ಹೆಣ್ಣು ಭ್ರೂಣದ ಅಂತರಾಳದ ತುಮುಲ, ದಾವಂತಗಳಿಗೆ ಕವಯತ್ರಿಯಿಲ್ಲಿ ಜೀವ ತುಂಬಿದ್ದಾರೆ. ಅದು ತಾಯಿಯನ್ನು ಪ್ರಶ್ನಿಸುವ ಸನ್ನಿವೇಶ ಕರುಳು ಹಿಂಡುವಂಥದ್ದು. ನನ್ನನ್ನೂ ಹೊರ ಜಗತ್ತಿಗೆ ಬರಲು ಅವಕಾಶ ಮಾಡಿಕೊಡಿ, ನಿನ್ನಂತೆ ನಾನೂ ಒಂದು ಜೀವ. ಹಾಗೆಯೇ ಮುಂದುವರಿದು ಬೆಳವಣಿಗೆ ಹಂತದಲ್ಲಿ ಅಡಿಗೆ ಮನೆಗೆ ದೂಡದಿರಮ್ಮಾ, ಜಗಲಿಯ ಬೆಳಕನು ನೀಡಮ್ಮಾ, ಎಲ್ಲರ ಕೂಡ ನಾನೂ ಬೆರೆಯುವೆ, ನನ್ನಯ ಹೆಜ್ಜೆಯ ಜಗದಲಿ ಉಳಿಸುವೆ ಎಂಬ ಆಶ್ವಾಸನೆಯನ್ನು ನೀಡುವುದರ ಮೂಲಕ ಆ ಭ್ರೂಣ ತನ್ನ ಇರುವಿಕೆಯನ್ನು ತೋರಿಸುವ ಹಂಬಲವನ್ನು ಕವಯತ್ರಿ ಸೊಗಸಾಗಿ, ಮನ ಮಿಡಿಯುವಂತೆ ಚಿತ್ರಿಸಿದ್ದಾರೆ.
ಹಾಗೆಯೇ ಹಲವಾರು ಸಾಮಾಜಿಕ ಸಮಸ್ಯೆ-ಸವಾಲುಗಳನ್ನು ತರಲು ಪ್ರಯತ್ನಿಸಿದ್ದಾರೆ. ಅವುಗಳಲ್ಲಿ ಕುಡಿತವೂ ಒಂದು.
ಅಪ್ಪ ಏಕೆ ಕುಡಿದು ಬರುವೆ
ನಮ್ಮನ್ನೇಕೆ ಹಾಗೆ ಬಡಿವೆ
ಅಮ್ಮನನ್ನು ಒದ್ದು ಬಿಡುವೆ
ಮನೆ-ಮಗಳನು ಅಳಿಸಿ ಬಿಡುವೆ...[ಅಪ್ಪ ಅಪ್ಪ ಕೇಳಪ್ಪ]
ಕುಡಿತದಿಂದ ಒಂದು ಕುಟುಂಬ, ಮನೆ, ಮನೆಯೊಳಗಿನ ಮನಸ್ಸುಗಳಿಗಾಗುವ ನೋವು, ಸಂಕಷ್ಟಗಳು ಎಂಥವು ಎಂಬುದನ್ನು ಮಗುವಿನ ಮೂಲಕ ಸಾಕಾರಗೊಳಿಸುವ ರೀತಿ ಸೊಗಸಾಗಿದೆ. ಓದು ಬರಹಕ್ಕೆಂದು ನೀನು ನಮಗೆ ಹಣವ ನೀಡಲಿಲ್ಲ, ಅಮ್ಮ ಕೂಲಿಗೈದ ಹಣವ ನೀನು ನಮಗೆ ಬಿಡಲೇ ಇಲ್ಲ ಎಂದು ನೈತಿಕವಾಗಿ ಬುದ್ಧಿ ಹೇಳುತ್ತಾ.. ಕುಡುಕ ಅಪ್ಪನೆಂದು ನಿನ್ನ ಗೆಳಯರೆಲ್ಲಾ ಜರಿಯುವಾಗ, ನನ್ನ ನೋವ ದೇವನೆ ಬಲ್ಲ ನಿನಗಿದೇಕೆ ತಿಳಿಯಲಿಲ್ಲ ? ಎಂದು ತನ್ನ ಸಹಪಾಠಿಗಳಿಂದ ಆಗುವ ಅವಮಾನವನ್ನು ನಿವೇದಿಸಿಕೊಳ್ಳುವುದು ಓದುಗರ ಮನವನ್ನು ಒಂದು ಕ್ಷಣ ಕಲಕುವುದರಲ್ಲಿ ಎರಡು ಮಾತಿಲ್ಲ.
ಒಟ್ಟಾರೆ ಹೇಳುವುದಾದರೆ ಇವರ ಕವಿತೆಗಳಲ್ಲಿ ಸಂಬಂಧಗಳು, ಪ್ರೀತಿ-ವಾತ್ಸಲ್ಯಗಳು, ನ್ಯಾಯ-ಧರ್ಮಗಳು, ಪ್ರಕೃತಿ ಪ್ರೀತಿ, ಪ್ರಾಣಿ-ಪಕ್ಷಿಗಳ ಕಾಳಜಿ, ಸಾಮಾಜಿಕ ಅನಿಷ್ಟಗಳ ವಿಡಂಬನೆ, ಕಾಳಜಿ, ಸೂರ್ಯ-ಚಂದ್ರ, ನಕ್ಷತ್ರ, ಮೋಡ-ಮಳೆಗಳ ಸೊಬಗು, ಸೌಂದರ್ಯ, ಭಿನ್ನಾಣಗಳು ಆವಿರ್ಭವಿಸಿವೆ. ಇಲ್ಲಿನ ಕವಿತೆಗಳಲ್ಲಿ ಮಾನವೀಯ ಸೆಲೆಗಳಿವೆ.
ಜೀವನ ಪ್ರೀತಿಯ ಹೊಳವಿದೆ. ಪ್ರತಿ ಮಗುವಿನ ಒಳ ತುಮುಲಗಳಿವೆ. ಇಂತಹ ಅಮೂಲ್ಯ ಕೃತಿಯನ್ನು ನೀಡಿದ ಸಹೋದರಿ ಸುಶೀಲಾಸೋಮಶೇಖರ್ರವರು ನಿಜಕ್ಕೂ ಅಭಿನಂದಾರ್ಹರು. ಇವರ ಸಾಹಿತ್ಯ ಪ್ರಭೆ ನಿರಂತರವಾಗಿ ಪ್ರಜ್ವಲಿಸಲಿ ಎಂದು ಆಶಿಸುವೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ