ಸೋಮವಾರ, ನವೆಂಬರ್ 3, 2014

ಹಾಸನ ರಂಗಭೂಮಿಯ ಐತಿಹ್ಯಗಳ ಹೊಳವು ‘ರಂಗ ಪ್ರಯೋಗ’- ಕೊಟ್ರೇಶ್ ಎಸ್. ಉಪ್ಪಾರ್


  ಭಾರತೀಯ ಚರಿತ್ರೆಯಲ್ಲಿ ಕ್ರಿ.ಶ.1756 ರಿಂದ 1946 ರ ವರೆಗಿನ ಎರಡು ಶತಮಾನಗಳ ಅವಧಿಯನ್ನು ಬ್ರಿಟೀಷ್ ವಸಾಹತುಶಾಹಿಯ ಕಾಲವೆಂದು ಗುರ್ತಿಸುತ್ತೇವೆ. ಬ್ರಿಟೀಷರು ನಮ್ಮ ಮೇಲೆ ಕೇವಲ ರಾಜಕೀಯ ಆಕ್ರಮಣವನ್ನು ಮಾತ್ರ ಮಾಡಲಿಲ್ಲ ! ಸಾಂಸ್ಕøತಿಕ ದಾಳಿಯನ್ನು ಮಾಡಿದರು. ಆಗ ಭಾರತೀಯ ಸಾಮಾಜಿಕ ರಚೆನೆಯ ವಿನ್ಯಾಸದಲ್ಲೇ ಪಲ್ಲಟವುಂಟಾಯಿತು.
   ಕಳೆದ ಶತಮಾನದ ಆರಂಭದಲ್ಲಿ ಕನ್ನಡ ಸಂಸ್ಕøತಿ ವಸ್ತು, ಆಕೃತಿ, ಆಲೋಚನಾ ಕ್ರಮ ಎಲ್ಲದರಲ್ಲಿಯೂ ಹೊಸತನ ಪಡೆಯಲು ಹವಣಿಸುತಿತ್ತು. ನವೋದಯದ ಈ ಸಂದರ್ಭ ರಂಗಭೂಮಿಯಲ್ಲೂ ಹೊಸತನ ತಂದಿತು. ಜಾಗತಿಕವಾಗಿ ಉಂಟಾಗಿದ್ದ ಪಲ್ಲಟಕ್ಕೆ ಕನ್ನಡ ಮನಸ್ಸೂ ತನ್ನನ್ನು ತೆರೆದುಕೊಂಡಿತ್ತು.
    ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಪಾಶ್ಚಾತ್ಯ ರಂಗಭೂಮಿಯ ನಿಕಟ ಸಂಪರ್ಕದ ಮೂಲಕ ಕೈಲಾಸಂ, ಶ್ರೀರಂಗರು ಒಂದು ಮಾದರಿಯನ್ನು ರೂಪಿಸಿದರೆ, ಮಹಾಕವಿ ಕುವೆಂಪು ಅದಕ್ಕಿಂತ ಭಿನ್ನವಾದ ಮತ್ತೊಂದು ಮಾದರಿಯನ್ನು ಕನ್ನಡಕ್ಕೆ ನೀಡಿದರೆಂದು ಖ್ಯಾತ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.
    ನಮ್ಮ ಹಾಸನ ಜಿಲ್ಲೆಯ ಸಂದರ್ಭದಲ್ಲಿ ಗೊರೂರು, ಬೇಲೂರು ಕೃಷ್ಣಮೂರ್ತಿ, ಅನಕೃ, ಮಳಲಿ ವಸಂತಕುಮಾರ್ ಮುಂತಾದ ವೈವಿಧ್ಯಮಯವಾದ, ಎತ್ತರದ ಅನೇಕ ಸೃಜನಶೀಲ ಪ್ರತಿಭೆಗಳನ್ನು ನಾವು ಕಾಣಬಹುದಾದರೂ ಇತ್ತೀಚೆಗೆ ಈ ರಂಗದಲ್ಲಿ ಗೊರೂರು ಅನಂತರಾಜುರವರು ಸಾಂಸ್ಕøತಿಕವಾಗಿ ಮಹತ್ವವೆನಿಸಿದ್ದಾರೆ.
   ವ್ಯವಸ್ಥೆ, ವೀರಪ್ಪನ್ ಭೂತ, ನಾರಿ ಹೆಜ್ಜೆ ನರಿ ಕಣ್ಣು ಮುಂತಾದ ನಾಟಕಗಳು ಹಲವಾರು ಪ್ರದರ್ಶನಗಳನ್ನು ಕಂಡು ಅನಂತರಾಜುರವರಿಗೆ ಯಶಸ್ವೀ ತಂದು ಕೊಟ್ಟಿವೆ. ಇವಲ್ಲದೇ ಇವರು ರಂಗಭೂಮಿಗೆ ಯಾರೇ, ಯಾವುದೇ ಕಾರ್ಯಕ್ರಮ ನೀಡಲಿ ಅದನ್ನು ದಾಖಲಿಸುತ್ತಾರೆ. ರಂಗಪ್ರಯೋಗಗಳು, ಕಲಾವಿದರನ್ನು, ಪಾತ್ರ ಪರಿಕಲ್ಪನೆಗಳನ್ನು ವಿಮರ್ಶಿಸಿ ಪತ್ರಿಕೆಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ತ್ಯಾರ್ಹವಾದುದು.
   ಅಂತೆಯೇ ಇತ್ತೀಚೆಗೆ ಬಿಡುಗಡೆಯಾದ ಇವರ ‘ರಂಗ ಪ್ರಯೋಗ’ ಎಂಬ ಕೃತಿಯನ್ನು ನೀಡಿ ಗುರುಗಳೇ ಇದನ್ನು ಪರಿಚಯಿಸಿ ಎಂದು ಕೈಗಿತ್ತರು. ತತ್ಪರಿಣಾಮವಾಗಿಯೇ ಈ ವಿಶ್ಲೇಷಣೆ.
   178 ಪುಟಗಳ, 108 ರೂಪಾಯಿಗಳ ಮುಖ ಬೆಲೆಯ ಈ ಕೃತಿಯು ಲೇಖಕರ ಸ್ವಂತ ಪ್ರಕಾಶನದಿಂದ ಪ್ರಕಟಿತಗೊಂಡ ಈ ಕೃತಿಗೆ ಚಂದ್ರು ಕಾಳೇನಹಳ್ಳಿಯವರ ಮುನ್ನುಡಿ, ಎಚ್,ಎಸ್.ಗೋವಿಂದೇಗೌಡÀರ ಬೆನ್ನುಡಿಗಳು ಕಳೆಕಟ್ಟಿದ್ದರೆ, ತಿ.ರಾಮಕೃಷ್ಣಯ್ಯನವರು ಬರೆದ ಅನಂತರಾಜು ಕುರಿತ ಪರಿಚಯಾತ್ಮಕ ಲೇಖನ ಸೊಗಸಾಗಿದೆ.
   76 ನಾಟಕಗಳು, 10 ಕಿರು ನಾಟಕಗಳು, 05 ಮಕ್ಕಳ ನಾಟಕಗಳು, 03 ಶೈಕ್ಷಣಿಕ ಜಾಗೃತಿ ನಾಟಕಗಳನ್ನೊಳಗೊಂಡ 56 ನಾಟಕಕಾರರ ಸುಮಾರು 94 ನಾಟಕಗಳ ರಂಗ ಪ್ರಯೋಗ ಕುರಿತ ಒಟ್ಟು 49 ಲೇಖನಗಳು ಈ ‘ರಂಗ ಪ್ರಯೋಗ’ ದಲ್ಲಿ ಆವಿರ್ಭವಿಸಿವೆ.
   ಇಲ್ಲಿ ಮೌಡ್ಯ, ಜಾಗೃತಿ, ಶಿಕ್ಷಣ, ಇತಿಹಾಸ, ಪುರಾಣ, ವಾಸ್ತÀವ, ಧಾರ್ಮಿಕ ಮುಂತಾದ ವಿಷಯಗಳ ಹೊತ್ತ ನಾಟಕಗಳ ಕಿರು ಪರಿಚಯಗಳನ್ನು ಗೆಳೆಯ ಅನಂತರಾಜುರವರು ಮಾಡಿದ್ದಾರೆ.
   ಡಾ|| ಗಿರೀಶ್ ಕಾರ್ನಾಡರ ‘ಹಯವದನ’, ‘ತಲೆದಂಡ’, ‘ಅಂಜುಮಲ್ಲಿಗೆ’, ‘ಯತಾತಿ’; ಚಂದ್ರಕಾಂತ ಕುಸನೂರರ ‘ಮನೆ’; ಪಿ.ಲಂಕೇಶರ ‘ತೆರೆಗಳು’, ‘ಸಂಕ್ರಾಂತಿ’; ಕುವೆಂಪುರವರ ‘ಸ್ಮಶಾನ ಕುರುಕ್ಷೇತ್ರ’, ‘ಜಲಗಾರ’, ‘ರಕ್ತಾಕ್ಷಿ’, ‘ಬಿರುಗಾಳಿ’; ಪರ್ವತವಾಣಿಯವರ ‘ಉಂಡಾಡಿ ಗುಂಡ’ ಯಿಂದ ಹಿಡಿದು ಡಾ || ಚಂದ್ರಶೇಖರ ಕಂಬಾರ, ರಾಜೇಂದ್ರ ಕಾರಂತ, ಭಾಸ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಪೂಚಂತೆ, ಚಂಪಾ, ರಾಜಪ್ಪ ದಳವಾಯಿ, ಎಚ್.ಎಸ್.ಶಿವಪ್ರಕಾಶ್, ಜಯಂತ್ ಕಾಯ್ಕಿಣಿ ಹಾಗೆಯೇ ಇತ್ತೀಚಿನ ಹಾಸನ ಜಿಲ್ಲೆಯ ನಾಟಕಕಾರರಾದ ಎಚ್.ಬಿ.ರಮೇಶ್, ಬೇಲೂರು ಕೃಷ್ಣಮೂರ್ತಿ, ನಂಜುಂಡಮೈಮ್, ಚಂದ್ರಕಾಂತ ಪಡೆಸೂರು, ಎಚ್.ಎಸ್.ಪ್ರಭಾಕರ, ನಾಗರಾಜ್ ಕೋಟೆ, ಗೊರೂರು ಅನಂತರಾಜು ಹೀಗೆ ಐವತ್ತಾರು ನಾಟಕಕಾರರ ನಾಟಕಗಳು ಸೂಕ್ಷ್ಮವಾಗಿ ಅನಾವರಣಗೊಂಡಿವೆ.
   ಇಲ್ಲಿ ನಾಟಕ, ನಾಟಕಕಾರರ ಜೊತೆಗೆ ಅದಕ್ಕೆ ಜೀವ ನೀಡಿದ ನಿರ್ದೇಶಕ ಹಾಗೂ ಪಾತ್ರದಾರಿಗಳ ಮೇಲೂ ಅನಂತರಾಜು ಬೆಳಕು ಚೆಲ್ಲಿದ್ದಾರೆ. ಪ್ರದರ್ಶನಗೊಂಡ ದಿನಾಂಕ, ಸ್ಥಳಗಳನ್ನು ನಮೂದಿಸುವುದರ ಜೊತೆಗೆ ಜೀವಂತಿಕೆ ತುಂಬಲು ಪ್ರಯತ್ನಿಸಿದ್ದಾರೆ.
   ಹಾಸನ ಜಿಲ್ಲೆಯಲ್ಲಿ ಎಲ್ಲೇ ರಂಗಪ್ರಯೋಗ ನಡೆದರೂ ಅಲ್ಲಿ ಅನಂತರಾಜುರವರು ಇರುತ್ತಾರೆ. ನಾಟಕ ನೋಡಿ ಖುಷಿ ಪಟ್ಟರಷ್ಟೇ ಸಾಲದು ಅದನ್ನು ದಾಖಲಿಸುವ ಕಾರ್ಯವಾಗಬೇಕು. ಅಂತಹ ಕಾರ್ಯವನ್ನು ಕಾಯ, ವಾಚಾ, ಮನಸಾ ಶ್ರದ್ಧೆಯಿಂದ ಸ್ನೇಹಿತರಾದ ಅನಂತರಾಜುರವರು ಮಾಡುತ್ತಾ ಬಂದಿದ್ದಾರೆ. ಹಾಸನದ ಸಾಂಸ್ಕøತಿಕ ಸೊಬಗನ್ನು ಬಣ್ಣಿಸಿ ದಾಖಲೀಕರಣ ಮಾಡಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕಲಾವಿದರು ತಿಂಗಳುಗಟ್ಟಲೇ ತರಬೇತಿ, ಅಭ್ಯಾಸ ಪಡೆದು ರಂಗಪ್ರಯೋಗ ಮಾಡಿ ಒಂದು ವಾರದಲ್ಲಿಯೇ ಮರೆತುಬಿಡುತ್ತಾರೆ. ಅಲ್ಲಿಗೆ ಆ ರಂಗ ಪ್ರಯೋಗ ಮುಗಿಯಿತು. ಆದರೆ ಇಂತಹ ಅವಿಸ್ಮರಣೀಯ ಸಂದರ್ಭಗಳನ್ನು ಕೂಲಂಕುಷವಾಗಿ ವಿಮರ್ಶಿಸಿ ದಾಖಲಿಕರಿಸಿ, ಕೃತಿರೂಪದಲ್ಲಿ ತರುವುದರ ಮೂಲಕ ರಂಗಕಲೆ, ಕಲಾವಿದರನ್ನು ಶಾಶ್ವತವಾಗಿ ಜೀವಂತವಾಗಿಡುವ ಸುಕಾರ್ಯವನ್ನು ‘ರಂಗ ಪ್ರಯೋಗ’ ಎಂಬ ಕೃತಿಯ ಮೂಲಕ ಅನಂತರಾಜುರವರು ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
   ಪ್ರೌಢ ಹಾಗೂ ಕಿರು ನಾಟಕಗಳಿಗೆ ಮಾತ್ರ ಸೀಮಿತವಾಗದೆ ಮೂರ್ತಿ ದೇರಾಜೆಯವರ ‘ಬಾರಯ್ಯ ಬೆಳದಿಂಗಳೆ’; ವಾಸುದೇವ ಗಂಗೇರ ಅವರ ‘ಪಂಜರ’; ಕೃಷ್ಣಪ್ರಸಾದ್ ಅವರ ‘ಪಂಡಿತ ಕಳ್ಳರು ಮತ್ತು ಜನಪದಜೋಗಿ’ ಮುಂತಾದ ಮಕ್ಕಳ ನಾಟಕಗಳು ಚಿಣ್ಣರ ಮೇಳದಲ್ಲಿ ನಡೆದ ಸಂದರ್ಭದಲ್ಲಿ ಅಲ್ಲಿಗೆ ದಾವಿಸಿದ ಅನಂತರಾಜುರವರು ಮಕ್ಕಳ ಅಭಿನಯಗಳನ್ನು ವೀಕ್ಷಿಸಿ ಪ್ರೋತ್ಸಾಹಿತವಾಗಿ ವಿಮರ್ಶಿಸಿದ್ದಾರೆ.
    ‘ಬಾರಯ್ಯ ಬೆಳದಿಂಗಳೇ’ ಕುರಿತು ಲೇಖಕರಿಲ್ಲಿ ಅವರೇ ಹೇಳುವಂತೆ- “ ಹುಣ್ಣಿಮೆಯಂದು ಕಥೆ ಹೇಳುವ ಅಜ್ಜ ಇಲ್ಲಿ ಹೇಳಿದ ಕಥೆ ಪಂಚತಂತ್ರದ್ದು. ರೈತನ ಬಲೆಯಿಂದ ತಪ್ಪಿಸಿಕೊಳ್ಳುವ ಹಕ್ಕಿಯ ಕಥೆ ಇಲ್ಲಿ ಬೇರೆಯೇ ಆದ ಧ್ವನಿ ಮೂಡಿಸಿತು. ಪ್ರೀತಿಯಿಂದ ದ್ವೇಷವನ್ನು ಗೆಲ್ಲುವ ಕಾಗೆ ಇಲ್ಲಿ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ. ಚಿಣ್ಣರ ಮೇಳದ ಅತಿ ಚಿಕ್ಕ ವಯಸ್ಸಿನ ಮಕ್ಕಳ ತಂಡದ ಈ ನಾಟಕದ ಮಾತುಗಳು, ಹಾಡುಗಳು ಎಲ್ಲ ಆ ವಯಸ್ಸಿನ ಮಕ್ಕಳ ತುಂಟಾಟ, ಮುಗ್ದತೆ, ಬೆರಗುಗಳನ್ನು ಎತ್ತಿ ತೋರಿದವು.”
    ಇವುಗಳಲ್ಲದೆಯೇ ಶೈಕ್ಷಣಿಕ ಹಾಗೂ ಸಾಮಾಜಿಕ ಜನಜಾಗೃತಿ ಮೂಡಿಸುವ ಬೀದಿ ನಾಟಕಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಕೃತಿಯು ಹಾಸನ ಜಿಲ್ಲೆಯ ಸಾಂಸ್ಕøತಿಕ ಲೋಕದ ಇತಿಹಾಸಕ್ಕೆ ಹಿಡಿದ ಕನ್ನಡಿಯಂತೆ ಮೂಡಿ ಬಂದಿದೆ. ಇವರಿಂದ ಇನ್ನೂ ಉತ್ತಮೋತ್ತಮ ಸಾಹಿತ್ಯಿಕ ಕಾರ್ಯಗಳು ಜರುಗಲಿ ಎಂದು ಆಶಿಸುತ್ತೇನೆ.

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ಪೂಜನ್ ನಿಲಯ
ತೇಜೂರು ರಸ್ತೆ, ಶಾಂತಿ ನಗರ,
ಹಾಸನ-573201
ಮೊ=-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ