ಪ್ರೌಡಶಾಲಾ ಮುಖ್ಯಸ್ಥರಾಗಿ, ಕವಿಯಾಗಿ, ಗದ್ಯ ಲೇಖಕರಾಗಿ, ಆಕಾಶವಾಣಿ ಚಿಂತನಕಾರÀರಾಗಿ, ನಾಟಕಕಾರರಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಚಾಲಾಕಿತನದ ಸಂಘಟಕರಾಗಿ, ಶೈಕ್ಷಣಿಕ ಆಡಳಿತಗಾರರಾಗಿ ಈಗಾಗಲೇ ಪರಿಚಿತರಾಗಿರುವ ಚಂದ್ರಕಾಂತ ಪಡೆಸೂರರವರು ‘ಭಾವದೇಹ’ ಎಂಬ ಕವನ ಸಂಕಲನದ ಮೂಲಕ ಎದುರಾಗಿದ್ದಾರೆ. ಸೂಕ್ಷ್ಮ ಸಂವೇದನೆಯ ಬರಹಗಾರರಾದ ಇವರು ಸಮಾಜದ ಎಲ್ಲಾ ತವಕ, ತಲ್ಲಣ, ಆತಂಕಗಳನ್ನು ಜೈವಿಕ ಪ್ರೀತಿಯ ಎಳೆಗಳನ್ನು ಗೇಯತೆಯ, ಛಂದಸ್ಸುಗಳಲ್ಲಿ ಸುಂದರವಾಗಿ ಕಟ್ಟಿಕೊಟ್ಟಿರುವುದು ಆಪ್ಯಯಮಾನವಾದುದು. ಸಾಮಾಜಿಕ ಮೌಡ್ಯತೆ, ಬದುಕಿನ ವಿರೋಧಾಬಾಸಗಳು ಇವರ ಕವಿತೆಗಳಲ್ಲಿ ಅಲ್ಲಲ್ಲಿ ಮೇಳೈಸಿವೆ.
ಪ್ರಸ್ತುತ ಪ್ರಾಪಂಚಿಕ ಮೌಲ್ಯಗಳು, ದಮನಿತರ ವ್ಯಥೆಗಳು, ಅಜ್ಞಾನದ ಅಟ್ಟಹಾಸಗಳು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತಿಬಿಂಬಿತವಾಗಿರುವುದು ಸ್ತುತ್ಯಾರ್ಹ. ಈ ಕವಿತೆಗಳ ಸಂಕಲನದಲ್ಲಿ ಪ್ರತಿಯೊಂದು ಕವನವನ್ನು ಓದುತ್ತಾ ಹೋದಂತೆಲ್ಲಾ ರಸಾನಂದದ ಆಳಕ್ಕೆ ಇಳಿಯುತ್ತಾ ರಸ ಸ್ವಾದದ ಮಧುರತೆಯನ್ನು ಹೆಚ್ಚು ಹೆಚ್ಚು ಕಂಡುಕೊಳ್ಳುತ್ತಾ ಹೋಗಬಹುದು.
ಕನ್ನಡದ ಪೂಜಾರಿಯೆಂದೇ ಮನೆ ಮಾತಾಗಿರುವ ಹಿರೇಮಗಳೂರು ಕಣ್ಣನ್ ಅವರ ಮುನ್ನುಡಿಯ ತೋರಣ ಪ್ರತಿಯೊಬ್ಬ ಕವಿಯು ಸವಿಯಬೇಕಾದ, ಮನನ ಮಾಡಿಕೊಳ್ಳಬೇಕಾದ ರಸಪಾಕ. ನಿಜವಾದ ಕಾವ್ಯ ಮಿಡಿತ, ಹಿಡಿತ ಹೇಗಿರಬೇಕು ? ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ವಿವರಿಸಿದ್ದಾರೆ.
‘ಪ್ರಾರ್ಥನೆ’ಯಿಂದ ಆರಂಭಗೊಂಡು ‘ಕೆಂಡ ಕೋಳಿ’ ಕವಿತೆವರೆಗಿನ ಐವತ್ತು ಉತ್ತಮೋತ್ತಮ ಕಾವ್ಯ ಹಂದರಗಳನ್ನೊಳಗೊಂಡ ‘ಭಾವದೇಹ’ ಕೃತಿಯು ಎಂಬತ್ತು ಪುಟಗಳನ್ನೊಳಗೊಂಡಂತೆ ಸುಂದರವಾಗಿ ಮೂಡಿಬಂದಿದೆ. ಐವತ್ತೈದು ರೂಪಾಯಿ ಮುಖ ಬೆಲೆಯ ಈ ಕಾವ್ಯ ಸಂಕಲನ 2013ರಲ್ಲಿ ಪ್ರಥಮ ಮುದ್ರಣಗೊಂಡಿದೆ.

ನುಡಿ-ಗಡಿಯ ಧಗೆ ತಾ ದಹಿಸುತಿದೆ ಎದೆಯೊಳಗೆ
ಮನೆ ಹತ್ತಿ ಉರಿಯುತಿದೆ, ಮನ ಮುರಿದು ಬೀಳುತಿದೆ
ಭಾವೈಕ್ಯದಲ್ಲಿ ಬೆಸೆದು ಕಾಪಾಡು ತಾಯೆ…..[ ಪ್ರಾರ್ಥನೆ]
ಕೇವಲ ಭಾರತವಷ್ಟೇ ಅಲ್ಲ, ಇಡಿ ಪ್ರಪಂಚವೆ ಮತಾಂಧತೆಯಲ್ಲಿ ಮುಳುಗಿಹೋಗಿದೆ, ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿಗಳೆಂಬ ಮನೋಭಾವಗಳು ಕಾರತೊಡಗಿವೆ. ಅಸಮಾನತೆಯ ಗೂಡುಸೇರಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಅಟ್ಟಹಾಸದ ಮನೆಯಲಿ ವೈಷಮ್ಯ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ಕವಿಯಿಲ್ಲಿ ಹೀಗಾಗದಂತೆ, ನುಡಿ-ಗಡಿಗಳ ನಿತ್ಯ ಸಂಘರ್ಷಗಳಲ್ಲಿ ನರ ತನ್ನನ್ನೇ ಬಲಿಕೊಟ್ಟು, ದಹಿಸಿಕೊಳ್ಳುತ್ತಿದ್ದಾನೆ. ಇಂಥವರಿಗೆ ಸನ್ಮತಿ ನೀಡಿ, ಭಾವೈಕ್ಯತೆಯ ಬೆಸೆದು ಈ ಜಗವ ಕಾಪಾಡು ತಾಯೆ ಎಂದು ಪಾಕೃತಿಕ ಶಕ್ತಿಯಲ್ಲಿ ಮೊರೆಯಿಟ್ಟಿದ್ದಾರೆ.
ಮೋಡದಾನೆಯ ಏರಿ ಚಂದಿರ
ಆಡುತಿರುವನು ನೋಡು ಬಾ|
ನಾಡ ಚಿಂತೆಯ ಮರೆತು ಜೀವವೆ
ಕೂಡಿ ಅವನ ಆಡು ಬಾ [ತಂಪು ಚಂದಿರ]
ಕವಿಯ ಭಾವಕ್ಕೆ ಪ್ರತಿಯೊಂದು ವಸ್ತುವು ವೈವಿಧ್ಯಮಯವಾಗಿ ಕಾಣುತ್ತದೆ. ಚಂದಿರನ ವರ್ಣನೆ ಮಾಡುವಾಗ ಮೋಡವನ್ನೆ ಆನೆಗೆ ಹೋಲಿಸಿ, ಅದರ ಮೇಲೇರಿ ಚಂದಿರ ಸವಾರಿ ಬಂದಿದ್ದಾನೆ. ಐಹಿಕ ಜಂಜಾಟಗಳ ತೊರೆದು ಆ ಸೌಂದರ್ಯ ಕಣ್ತುಂಬಿಕೋ, ಆನಂದಿಸು ಬಾ ಎಂದು ಕವಿ ಕರೆಕೊಡುವುದರೊಂದಿಗೆ ಪ್ರಾಕೃತಿಕ ಚೆಲುವಿಗೆ ಹೊಸ ಮೆರಗನ್ನು ಕೊಟ್ಟಿದ್ದಾರೆ.
ಬಾನಿನ ಬಯಲಾಗ ಕೂಡ್ಯಾವ ಮೋಡ
ಓ ಗೆಳೆಯ ನೀ ಒಮ್ಮೆ ಹೊರ ಬಂದು ನೋಡ
ಬಿಡಿಸ್ಯಾವ ತರತರದ ಚಿತ್ತಾರ ಮೋಡ
ಅದ ನೋಡಿ ಎದಿಯಾಗ ಮೂಡ್ಯಾವ ಹಾಡ [ಮಳೆಗಾಲ]
ಈ ಕವಿತೆಯ ಸಾಲುಗಳನ್ನು ಓದಿದೊಡನೆ ಥಟ್ಟಂತಹ ನೆನಪಾಗುವುದು ಕನ್ನಡದ ವರಕವಿ ದ. ರಾ. ಬೇಂದ್ರೆಯವರು. ಅವರ ಶೈಲಿಯನ್ನು ನೆನಪಿಸುತ್ತದೆ. ಬೇಂದ್ರೆಯವರ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿ ಅವರ ಪ್ರಭಾವಕೊಳಗಾಗಿರುವ ಪಡೆಸೂರರ ಅನೇಕ ಕವಿತೆಗಳಲ್ಲಿ ಬೇಂದ್ರೆ ಛಾಪನ್ನು ರಿಂಗಣಿಸಿದ್ದಾರೆ. ಮೋಡಗಳು ತಿಳಿಬಾನಿನಲ್ಲಿ ತೇಲಿ ತೇಲಿ ಹೋಗುವಾಗ ಒಂದೊಂದು ಆಕಾರವಾಗಿ ಕಾಡುತ್ತವೆ. ಬೆಳ್ಳಕ್ಕಿಯ ಸಾಲಿನಂತೆ, ಕಾಡಿನಂತೆ, ಪಶು-ಪಕ್ಷಿಗಳಂತೆ ಇನ್ಯಾವುದೋ ರೀತಿಯಲ್ಲಿ ಕಂಡದ್ದನ್ನು ಕವಿಗಳು ತಮ್ಮ ಭಾವಗುಚ್ಛದೊಂದಿಗೆ ಕವಿತೆ ರೂಪದಲ್ಲಿ ಸೂಸುತ್ತಾರೆ.
ಪ್ರಸ್ತುತ ಪದ್ಯದಲ್ಲಿ ಪಡೆಸೂರರು ಬಾನೆಂಬ ಬಯಲಿನಲ್ಲಿ ಮೋಡ ಮೊಡಗಳು ಕೂಡಿಕೊಂಡು ಚಿತ್ತಾರಗಳನ್ನು ಬಿಡಿಸಿವೆ, ಗೆಳೆಯಾ ನೀನು ಅದರ ಸವಿಯ ಸವಿಯು ಬಾ, ಅವು ನನ್ನೆದೆಯೊಳಗೆ ಹಾಡುಗಳನ್ನು ಮೂಡಿಸಿವೆ, ನನ್ನೊಳಗಿನ ಭಾವಗಳನ್ನು ಕೆರಳಿಸಿವೆ ಎಂದು ನಿಸರ್ಗ ವರ್ಣನೆ ಮಾಡಿರುವುದು ಸೊಗಸಾಗಿ ಮೂಡಿಬಂದಿದೆ.
ಸೆರಗ ಹಿಡಿದು ತಾನಿಳೆಯುತಿಹುದು
ಆ ಪ್ರೇಮಿ ಕಡಲ ಮೋಹ|
ಮನವ ತಡೆದು ಸುಳಿ-ಸುಳಿಯುತಿಹುದು
ಈ ಭೂಮಿಯೊಡಲು ಸ್ನೇಹ || [ಮಿಲನ]
ನನ್ನನ್ನು ಬಹಳ ಪ್ರಭಾವಿತನನ್ನಾಗಿ ಮಾಡಿದ್ದು ‘ಮಿಲನ’ ಕವಿತೆ. ಕವಿ ತೆಗೆದುಕೊಂಡ ‘ಭಾವ’ ಅಮೋಘ. ನದಿಯನ್ನು ಅಂಕು, ಡೊಂಕಿನ ಟೊಂಕದ ಹೆಣ್ಣಿಗೆ ಹೋಲಿಸಿ, ತಾ ಬರುವಾಗ ಜುಳು ಜುಳು ಶಬ್ದವನ್ನು ಗೆಜ್ಜೆಯ ದನಿಗೆ ಹೋಲಿಸಿರುವುದು ಮೋಹಕವಾಗಿ ಮೂಡಿಬಂದಿದೆ. ಕಡಲೆಂಬ ಪ್ರೇಮಿ ನೀರ ಸೆರಗ ಹಿಡಿದು ಮೋಹದಿ ಎಳೆಯುತಿಹ, ಇತ್ತ ಭೂಮಿಯ ಅಗಾಧ ಸ್ನೇಹವನ್ನು ಕಳಚಿ ಕೊಳ್ಳಬೇಕಾದ ಪ್ರಸಂಗ. ನಿಸರ್ಗದ ರಮಣೀಯತೆಯಲ್ಲೂ ಪ್ರೀತಿಯ ಮಿಲನ ಬೆಸೆದು ಸಾಗುವ ಪರಿಯನ್ನು ಪಡೆಸೂರರು ವಿಭಿನ್ನವಾಗಿ ಚಿತ್ರಿಸಿದ್ದಾರೆ.
ಸಾಗರನು ಅಲ್ಲಿ ತೆರೆಕುದುರೆಯೇರಿ
ನೋಡುವನು ದಡಕೆ ಬಂದು
ಬಳಿ ಸಾರಿ ಬರುವ ನದಿ ನಲ್ಲೆಗೆಂದು
ನೊರೆ ಹೂವ ಹಾರ ತಂದು [ಮಿಲನ]
ಸಾಗರ ತನ್ನ ಪ್ರಿಯತಮೆಯಾದ ‘ನದಿ’ ಬರುವಿಕೆಯನ್ನು ತೆರೆಗಳೆಂಬ ಕುದುರೆಗಳನ್ನೇರಿ ದಡಕ್ಕೆ ಬಂದು ತವಕದಿಂದ ನೋಡುತ್ತಾ... ಬರುವ ನಲ್ಲೆಯನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ನೊರೆ ಹೂವಿನ ಹಾರದೊಂದಿಗೆ ಕಾಯುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ‘ನದಿ’ ತಾನು ಹರಿದು ಸನಿಹ ಬಂದು ಸಂತಸದಿ ಉಬ್ಬಿ, ನಾಚಿಕೆಯಿಂದ ನೊರೆ ನವಿರುಗೊಂಡು ಸಾಗರವ ತಬ್ಬಿ ನೀರಾಗುವಳು.
ಭುವಿಯ ಮಣ್ಣ ಉಂಡು ನಾನು
ಸಿಹಿಯ ಹಣ್ಣ ಕೊಟ್ಟೆ ಜಗಕೆ
ಹಣ್ಣ ತಿಂದು ಬೆಳೆದ ಮನುಜ
ನೀನು ಏನು ಕೊಟ್ಟೆಯೋ [ವೃಕ್ಷ ಪ್ರಶ್ನೆ]
ಮಾನವನು ತನ್ನ ಸ್ವಾರ್ಥಕ್ಕೆ ನಿಸರ್ಗದ ಸಂಪತ್ತನ್ನು ಬಳಸಿಕೊಂಡು ನಿರಂತರವಾಗಿ ವಿಷ ಕಕ್ಕುತ್ತಾನೆ. ಆದರೆ ಆ ವಿಷವನ್ನು ಸೇವಿಸಿ, ಶೋಧಿಸಿ ಸಕಲ ಜೀವ ರಾಶಿಗಳಿಗೆ ಜೀವಾನಿಲ ನೀಡೋ ಮರದ ಒಳತುಡಿತವನ್ನು ಕವಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಕೊಳೆಯ ನೀರನ್ನು ಕುಡಿದು ಜೀವಿಗಳಿಗೆ ನೆÀರಳು ನೀಡುವ ಮರ ಮನುಜನನ್ನು ನೀನೇನು ಜಗಕ್ಕೆ ಕೊಟ್ಟಿರುವೆ ಎಂದು ಪ್ರಶ್ನಿಸುವ ಪ್ರಸಂಗ ಪ್ರತಿಯೊಬ್ಬರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.
ಮೈಯ ಮರದ ತುದಿಯಲೊಂದು
ಮರುಳ ಮಂಗ ಕೂತಿದೆ
ಆಸೆಯಿಂದ ಜಿಗಿದು, ಜಿಗಿದು
ಎಲ್ಲ ಮರವು ಆಲುಗಿದೆ || [ಮನ ಮಂಗ]
ಇಲ್ಲಿ ಕವಿ ಮಾನವನ ದೇಹವನ್ನು ವೃಕ್ಷಕ್ಕೆ ಹೋಲಿಸಿ, ಚಂಚಲ ಮನವನ್ನು ಕೋತಿಗೆ ಹೋಲಿಸಿದ್ದಾರೆ. ತನ್ನ ಆಸೆಗಾಗಿ ಮಾಡಬಾರದ ಕಾರ್ಯಗಳ ಮಾಡಿ ಉಳಿದವರ ನೆಮ್ಮದಿ ಕೆಡಿಸುವ ದೂರ್ತನಾಗುತ್ತಿದ್ದಾನೆ. ಯಾವ ಭಯ- ಬಂಧವಿಲ್ಲದೆ ಸ್ವಚ್ಛಂಧವಾಗಿ ಹಾರಾಡುತಿದ್ದಾನೆ. ಛಂದ ಮೀರಿ ನೆಗೆದು ನೆಗೆದು ಮರದ ಅಂದ ಕೆಡೆಸಿದೆ. ಅಂದರೆ ನಿಯಮಗಳನ್ನೆಲ್ಲಾ ಗಾಳಿಗೆ ತೋರಿ ಸಾಮಾಜಿಕ ವ್ಯವಸ್ಥೆಯನ್ನು ನಕಾರಾತ್ಮಕ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಸಂಗ ಬಂದಾಗಿದೆ. ಹೆಣ್ಣು, ಮಣ್ಣು, ಹೊನ್ನಿಗಾಗಿ ಸದಾ ತುಡಿಯುತ್ತ ಇವೆಲ್ಲವನ್ನು ಕೊಟ್ಟ ದೀಶಕ್ತಿಯನ್ನೇ ಮರೆತು ಸುಮ್ಮನಾಗುವ ಮೂರ್ಖತನದ ಪರಮಾವಧಿಯನ್ನು ನೋಡುತ್ತಿದ್ದೇವೆ. ಕವಿ ಮರದ ತುಡಿತ, ತುಮುಲಗಳನ್ನು ನೈತಿಕ ನೆಲೆಗಟ್ಟಿನಲ್ಲಿ ಅನಾವರಣಗೊಳಿಸಿದ್ದಾರೆ.
ಹಿಂದೆಂದು ಕಂಡು ಕೇಳರಿಯದಂತ
ರೋಗೊಂದು ಬಂದೈತಿ ಜಗದಾಗ
ಮಾರೆಲ್ಲ- ಮಸಣ್ಯಲ್ಲ, ಪ್ಲೇಗಲ್ಲ, ಅಮ್ಮಲ್ಲ
ತಳಮಳ ಎದ್ದೈತಿ ಜಗದಾಗ || [ಏಡ್ಸ್]
ಪ್ರಾಪಂಚಿಕ ಆಧುನಿಕ ಭರಾಟೆಯಲ್ಲಿ ಏನನ್ನೊ ಪಡೆಯುವ ಧಾವಂತದಲ್ಲಿ, ಮತ್ತೇನನ್ನೋ ಕಳೆದುಕೊಂಡು ಬಿಡುತ್ತೇವೆ. ಕ್ಷಣದ ಸುಖಕ್ಕೆ ಆತೊರೆದು ಅವಿವೇಕತನದಿ ದುಡುಕಿ ದುರಂತ ಬದುಕನ್ನು ಆಹ್ವಾನಿಸಿಬಿಡುತ್ತೇವೆ. ಏಡ್ಸ್ಗಳಿಲ್ಲದ ಊರುಗಳಿಲ್ಲ ಎಂಬ ಮಟ್ಟಿಗೆ ಬಂದು ನಿಂತಿದ್ದೇವೆ. ಅನೈತಿಕ ಹಾಗೂ ಅಜಾಗರೂಕತೆಯಿಂದ ಬದುಕನ್ನು ಸರ್ವನಾಶ ಮಾಡಿಕೊಂಡವರು ಲಕ್ಷಾಂತರ ಜನ ಇದ್ದಾರೆ. ಎಂತೆಂಥ ಮಾರಕ ರೋಗಗಳಿಗೆ ಔಷಧಿ ಕಂಡು ಹಿಡಿದರೂ ಈ ಏಡ್ಸ್ ಎಂಬ ಭಯಂಕರಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೂ ಮೂರ್ಖಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಆದ್ದರಿಂದಲೆ ಕವಿ ಪಡೆಸೂರರು ಪ್ರಸ್ತುತ ಕವಿತೆಯಲ್ಲಿ ಇದರ ದುರಂತದ ಜೊತೆಗೆ ಬದುಕು ಹೇಗಿರಬೇಕೆಂಬ ನೈತಿಕ ಮೌಲ್ಯವನ್ನು ತುಂಬಿದ್ದಾರೆ.
ಅವರೇ ಹೇಳುವಂತೆ ಗೊರಲಿಯ ಹುಳದಂಗ ಒಳಗೊಳಗ ಕಡಿತೈತಿ, ಮೇಲೆದ್ದು ಕಾಣದು ನಿಜಬಣ್ಣ ಬೇರೆಲ್ಲ ಕೊರೆ ಕೊರೆದು ಮರ ಒಣಗಿ ಬಿದ್ದಂಗ ಬಿದ್ದಿತೊ ದೇಹ ತೆರಿಕಣ್ಣ. ಏಡ್ಸ್ ಎಂಬ ಮಾರಕ ರೋಗ ಮೇಲ್ನೋಟಕ್ಕೆ ಇತರರಿಗೆ ಗೋಚರಿಸದಿದ್ದರೂ, ಬೇರು ಕೊಳೆತು ಮರ ಒಣಗುವಂತೆ ಅಂತರಂಗ ಸುಡುತ್ತಾ, ದೇಹ ಬಡಕಲಾಗಿ ಸಾವನಪ್ಪುತ್ತಾನೆ ಎಂಬ ಮಾರ್ಮಿಕ ಸತ್ಯವನ್ನು ಸೊಗಸಾಗಿ ಪಲ್ಲವಿಸಿದ್ದಾರೆ.
ಮನಿಯೊಳಗ ಮುದ್ದಿನ ಮಡದಿ ತಾ ಇರುವಾಗ
ಪರಸಂಗ ಬ್ಯಾಡೊ ನನ್ನ ಅಣ್ಣ
ಪರಸಂಗ ಮಾಡಿದರ ಅಂಟಂಟಿ ಬರತೈತಿ
ಹಾರಿ ಹೋದಿತೋ ನಿನ ಪ್ರಾಣ || [ಏಡ್ಸ್]
ಮನೆಯೊಳಗ ಪ್ರೀತಿಯ ಹೆಂಡತಿ ಇರುವಾಗ ಬೇರೊಂದು ಹೆಣ್ಣಿನ ಹುಚ್ಯಾಕ ಅದು ಸಲ್ಲದು, ಅದೇ ಚಂದ ಎಂದು ಅಲೆದು ಹೋದರೆ ಏಡ್ಸ್ ಎಂಬ ಬಹುಮಾನ ಅಂಟಂಟಿ ಬಂದು ಜೀವಕ್ಕೆ ಕುತ್ತು ತಂದು ಜಗದೊಳಗೆ ಇನ್ನಿಲ್ಲವಾಗುತಿ ಎಂದು ನೈತಿಕ ಮೌಲ್ಯಗಳನ್ನು ಕವಿ ಇಲ್ಲಿ ಬಿಂಬಿಸಿರುವುದು ಸ್ತುತ್ಯಾರ್ಹ.
ಹೀಗೆ ಈ ಕೃತಿಯಲ್ಲಿ ಹಕ್ಕಿ ಹಾರುತ್ತಿದೆ ನೋಡಿದಿರಾ?, ಕನ್ನಡ ರಕ್ಷಕರು, ನೌಕರ ಸತಿ, ಮಳೆಗಾಲ, ಪಂಜರದ ಹಕ್ಕಿಗಳು, ಶಾಂತಲೆಯ ತೋಟ ಮುಂತಾದ ಕವಿತೆಗಳು ಗಮನ ಸೆಳೆಯುತ್ತವೆ.
ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳ ಮೇಲೆ ಹಿಡಿತವಿರುವ ಪಡೆಸೂರರು ಬಹುಭಾಷಾ ಪಂಡಿತರೆನ್ನಬಹುದು. ಅದರಲ್ಲೂ ಕನ್ನಡ ವ್ಯಾಕರಣ ಹಾಗೂ ಛಂದಸ್ಸನ್ನು ಆಳವಾಗಿ ಅಧ್ಯಯನ ಮಾಡಿದ ಇವರು ಛಂದೋಬದ್ದ ಪದ್ಯಗಳನ್ನು ರಚಿಸಿದ್ದಾರೆ. ರಗಳೆ, ಪಟ್ಪದಿ, ಕಂದ ಹಾಗೆಯೇ ಕಥನ ಕಾವ್ಯಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಶಿರದಲಿ ಕಮಲವು ಉರದಲಿ ಚಕ್ರವು
ಕರವನು ಎತ್ತಿದ ಅಭಯದ ಹಸ್ತವು
ಸುರನರ ವೇಶದ ವಾನರ ಭೂಪನು
ಕರವನು ಮುಗಿಯುತ ಬರುವುದ ಕಂಡೆನು || [ಮತಭಿಕ್ಷ]
ಪ್ರಸ್ತ್ತುತ ಸಂದರ್ಭದಲ್ಲಿ ಮತಯಾಚನೆಗೆ ಬರುವ ರಾಜಕಾರಣಿಗಳ ಪ್ರಸಂಗವನ್ನು ಕವಿ ಪಡೆಸೂರರು ಮಂದಾನಿಲ ರಗಳೆಯಲ್ಲಿ ಬರೆದಿದ್ದಾರೆ. ಪ್ರತಿ ಪಾದವು ನಾಲ್ಕು ಮಾತ್ರೆಯ ನಾಲ್ಕು ಗಣಗಳನ್ನು ಹೊಂದಿದ್ದು, ಆದಿ ಹಾಗೂ ಅಂತ್ಯ ಪ್ರಸಂಗಳನ್ನೊಳಗೊಂಡಿದೆ.
ನೀರ ನೆವದಿ ಓರ್ವ ನೀರೆ
ನೀರ ಕೊಡವ ಹೊತ್ತು ಬಂದು
ನೀರ ದಡದಿ ನೀರ ಬರುವ ದಾರಿ ಕಾಯ್ದಳೊ
ನೀರ ಬಂದ ಬಾರೆ ಎಂದ
ಏರಿ ಹೋಗಿ ಕೈಯ ಹಿಡಿದ
ನೀರಿನೊಳಗೆ ನೀರೆ ಸೇರಿ ನೀರೆ ಆದಳೊ || [ನೀರೆ]
ಇದು ಭಾಮಿನಿ ಷಟ್ಪದಿಯಲ್ಲಿರುವ ಪದ್ಯ. ಒಂದು, ಎರಡು, ನಾಲ್ಕು, ಐದನೇ ಪಾದಗಳು ಮೂರು ಮಾತ್ರೆಯ ನಾಲ್ಕು ಗಣಗಳನ್ನು ಹೊಂದುದ್ದು ಆದಿ ಪ್ರಾಸವನ್ನು ಹೊಂದಿವೆ. ಹಾಗೆಯೇ ಮೂರು ಮತ್ತು ಆರನೆಯ ಪಾದಗಳು ಮೂರು ಮಾತ್ರೆಯ ಆರು ಗಣ ಮೇಲೊಂದು ಗುರುವನ್ನು ಹೊಂದಿದ್ದು ಆದಿ ಪ್ರಾಸದಲ್ಲಿದೆ.
ಇಲ್ಲಿ ನೀರೆ ಎಂದರೆ ಯುವತಿ, ನೀರ ಎಂದರೆ ಯುವಕ. ಯುವತಿ ನೀರು ತರುವ ನೆವದಿ ನದಿಗೆ ಬಂದು ನೀರ(ಗೆಳೆಯ)ನಿಗಾಗಿ ಕಾತರದಿ ಕಾದು ಒಂದಾಗುವ ಪರಿಯನ್ನು ಪಡೆಸೂರರು ಛಂದೋಬದ್ಧವಾಗಿ ಒಡಮೂಡಿಸಿದ್ದಾರೆ. ಹೀಗೆ ವಾರ್ಧಕ ಷಟ್ಪದಿ, ಉತ್ಪಲಮಾಲೆ ಮುಂತಾದ ಛಂದಸ್ಸಿನಲ್ಲಿ ರಚಿಸಿದ ಪದ್ಯಗಳು ಈ ಕೃತಿಯಲ್ಲಿವೆ.
ಒಟ್ಟಾರೆ ಹೇಳುವುದಾದರೆ ಪಡೆಸೂರರ ಕವಿತೆಗಳಲ್ಲಿ ಕಸುವಿದೆ, ಕಾಂತಿಯಿದೆ, ನಾದವಿದೆ, ಬನಿ ತುಂಬಿದೆ, ಭಾಷೆಗೆ ಎದೆ ತುಂಬಿದ ಭಾವ
ದ ಹೆಪ್ಪು ಇದೆ. ಶೈಲಿ ಸರಳ ಆದರೆ ತುಂಬಾ ಪರಿಣಾಮಕಾರಿಯಾಗಿ ಮನಸೂರೆಗೊಳ್ಳುತ್ತದೆ. ಅವರ ಆಶಯ ಫಲಕಾರಿಯಾಗಲಿ. ಅವರ ಸಹೃದಯ ಸದಾ ಸದೃಢವಾಗಿರಲಿ, ಅವರಿಂದ ಅಪಾರ ಕೊಡುಗೆ ಸಾರಸ್ವತ ಲೋಕಕ್ಕೆ ಒದಗಿಬರಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್. ಎಸ್ ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ