ಯಾವುದೇ ಒಂದು ಕ್ಷೇತ್ರ ಸಮಾಜದಲ್ಲಿ ಗಟ್ಟಿಯಾಗಿ ನಿಂತು, ತನ್ನ ನಿರಂತರ ಸೇವೆಯನ್ನು ಸಾರ್ವಜನಿಕರಿಗೆ ಕೊಡಬೇಕೆಂದರೆ, ಅಲ್ಲಿ ಒಂದು ಜೀವಿಯ, ವ್ಯಕ್ತಿಯ ತ್ಯಾಗ, ಪರಿಶ್ರಮ, ಬಲಿದಾನ ಮತ್ತು ನಿಸ್ವಾರ್ಥ ಭಾವಗಳು ಪ್ರಮುಖವಾಗುತ್ತವೆ. ಅದೇ ರೀತಿ ಭಾರತ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಒಂದು ನಿರ್ಧಿಷ್ಠ ರೂಪ ಕೊಟ್ಟು ಇಡಿ ಸಾರಸ್ವತ ಲೋಕಕ್ಕೆ ಅದ್ಭುತ ಕೊಡುಗೆ ನೀಡುವುದರ ಮೂಲಕ ಈ ಕ್ಷೇತ್ರದಲ್ಲಿ ಸದಾ ಧೃವತಾರೆಯಾಗಿ ಪ್ರಜ್ವಲಿಸುತ್ತಿತುವವರು ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಎಂದರೆ ಅತಿಶಯೊಕ್ತಿಯಾಗಲಾರದು.
ಡಾ. ಎಸ್. ಆರ್ ರಂಗನಾಥನ್ ಕೇವಲ ಗ್ರಂಥಾಲಯ ವಿಜ್ಞಾನ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ, ಗ್ರಂಥಾಲಯ ವಿಜ್ಞಾನವನ್ನು ವೃತ್ತಿಯಾಗಿಸಿಕೊಂಡ ಶಿಕ್ಷಕರಿಗಾಗಲಿ ಇಲ್ಲವೇ ಗ್ರಂಥಪಾಲಕರಿಗೆ ಮಾತ್ರ ಪರಿಚಿತರಲ್ಲ! ಗ್ರಂಥಾಲಯ ಕುರಿತು ಆಸಕ್ತಿಯುಳ್ಳ ಎಲ್ಲರಿಗೂ ರಂಗನಾಥನ್ ಗೊತ್ತು.
ಸಿಗ್ಮಾಂಡ್ ಫಾಯ್ಡ್ ಮನೋವಿಜ್ಞಾನಕ್ಕೆ ಮತ್ತು ಹೆರೋಡೇಟಸ್ ಇತಿಹಾಸಕ್ಕೆ ಹೇಗೋ ಹಾಗೆಯೇ ರಂಗನಾಥನ್ ಗ್ರಂಥಾಲಯ ವಿಜ್ಞಾನಕ್ಕೆ ಪಿತಾಮಹರು. ಅಲ್ಲದೆ ಇವರನ್ನು ಗ್ರಂಥಾಲಯ ಚಳವಳಿಯ ಜನಕ ಎಂದು ಕರೆದಿರುವುದು ಅವರ ವ್ಯಕ್ತಿತ್ವದ ಘನತೆಗೆ ಹಿಡಿದ ಕನ್ನಡಿಯಾಗಿದೆ.
ಶಿಯ್ಯಾಳಿ ರಾಮಾಮೃತ ರಂಗನಾಥನ್ ಅವರು 1892 ಆಗಸ್ಟ್ 12 ರಂದು ತಮಿಳುನಾಡಿನ (ಆಗಿನ ಮದ್ರಾಸ್ ರಾಜ್ಯ) ತಾಂಜಾವೂರು ಜಿಲ್ಲೆಯ ಶಿಯ್ಯಾಳಿ ಗ್ರಾಮದ ಶ್ರೀರಾಮಾಮೃತ ಅಯ್ಯರ್ ಮತ್ತು ಶ್ರೀಮತಿ ಸೀತಾಲಕ್ಷ್ಮಿ ದಂಪತಿಗಳ ಪುತ್ರರಾಗಿ ಜನಿಸಿದರು. ದುರಾದೃಷ್ಟ ವಶಾತ್ ರಂಗನಾಥನ್ ಆರು ವರ್ಷ ವಯೋಮಾನದಲ್ಲಿಯೆ ಪಿತೃವಿಯೋಗ ಹೊಂದಬೇಕಾಯಿತು. ನಂತರ ಅಜ್ಜ ಸುಬ್ಬಾ ಅಯ್ಯರ್ ಅವರÀ ಪೋಷಣೆಯಲ್ಲಿ ಬೆಳೆದ ರಂಗನಾಥನ್ ಗಣಿತದಲ್ಲಿ ಇನ್ನಿಲ್ಲದ ಆಸಕ್ತಿ ತಳೆದಿದ್ದರು. ಮುಂದೆ ಗಣಿತದಲ್ಲಿಯೇ ಸ್ನಾತಕೋತ್ತರ ಪದವಿ ಪಡೆದ ಅವರು ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದರು. ಕರ್ನಾಟಕದ ಮಂಗಳೂರಿನಲ್ಲಿ ಉಪನ್ಯ್ಯಾಸಕರಾಗಿ ಕೆಲ ತಿಂಗಳು ಕರ್ತವ್ಯ ಸಲ್ಲಿಸಿದ್ದಾರೆ. ಅರೆಕಾಲಿಕ ಉಪನ್ಯಾಸಕ ವೃತ್ತಿಯ ಪಗಾರದಿಂದ ಬದುಕು ಸಾಗಿಸುವುದು ಕಷ್ಟಕರವೆನಿಸಿದ ಸಂದರ್ಭದಲ್ಲಿ ಬೇರೆ ಉತ್ತಮ ಪಗಾರ ದೊರೆಯುವ ವೃತ್ತಿ ಹುಡುಕುವ ಕಾಲದಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಪೂರ್ಣಕಾಲಿಕ ಗ್ರಂಥಪಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಅಲ್ಲಿನ ಉಪನ್ಯಾಸಕ ಮಿತ್ರರು ಹಾಗೂ ಪ್ರಾಂಶುಪಾಲರಾದ ಮಿ. ಡಂಕನ್ ಅವರು ಅರ್ಜಿ ಸಲ್ಲಿಸಲು ಒತ್ತಾಯಿಸಿದರು. ಇದರ ಫಲವಾಗಿ 1924 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ನೇಮಕಗೊಂಡÀರು. ಬಡತನದಲ್ಲಿದ್ದ ಅವರಿಗೆ ಈ ಹೆಚ್ಚಿನ ಪಗಾರದ ಪೂರ್ಣಕಾಲಿಕ ಹುದ್ದೆ ಆಸರೆಯಾಯಿತು. ಆದರೆ ಕೆಲವೇ ದಿನಗಳಲ್ಲಿ ಆ ವೃತ್ತಿ ರಂಗನಾಥನ್ ಅವರಲ್ಲಿ ಬೇಸರತರಿಸಿತು. ಏಕೆಂದರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಬೊಧನೆಯಲ್ಲಿ ಕಾಲ ಕಳೆಯುತ್ತಾ ಸದಾ ಮಾತುಕತೆಯ ಮಧ್ಯೆ ಇರುತ್ತಿದ್ದ ಅವರಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಕೂತ ಜಾಗದಲ್ಲಿಯೇ ದಿನವಿಡೀ ಒಬ್ಬಂಟಿಯಾಗಿ ಕುಳಿತುಕೊಳ್ಳುವುದು ಶಿಕ್ಷೆಯಂತೆ ಭಾಸವಾಗುತ್ತದೆ.
ಪುನ ಕೆಲಸ ತ್ಯಜಿಸಿ ಅದೆ ಅರೆಕಾಲಿಕ ಉಪನ್ಯಾಸ ವೃತ್ತಿ ಮರುಸೇರ್ಪಡೆಗೆಂದು ಬಂದಾಗ ಪ್ರಾಂಶುಪಾಲರಾದ ಮಿ. ಡಂಕನ್ ಅವರು ರಂಗನಾಥನ್ ಅವರಿಗಿದ್ದ ಓದಿನ ಅಭಿರುಚಿ ಹಾಗೂ ಸಂಶೋಧನಾ ಮನೋಭಾವ ಮನಗಂಡು ಪುನಃ ಮನವೊಲಿಸಿ ಹಿಂತಿರುಗಿ ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಕಳಿಸುವಲ್ಲಿ ಸಫಲರಾಗುತ್ತಾರೆ. ಮುಂದೆ ಇಂಗ್ಲೆಂಡ್ಗೆ ಗ್ರಂಥಾಲಯ ತರಬೇತಿಗೆಂದು ಹೋಗಿಬಂದ ಮೇಲೆ ಭಾರತೀಯ ಗ್ರಂಥಾಲಯದ ದಿಕ್ಕೆ ಬದಲಾಗುತ್ತದೆ.
ಮಾಹಿತಿ ತಂತ್ರಜ್ಞಾನ ಇನ್ನು ಕಣ್ಣು ಬಿಡದಿದ್ದ ಸಂದರ್ಭದಲ್ಲಿ ಗ್ರಂಥಾಲಯಗಳನ್ನು ಉತ್ಕøಷ್ಟ ಮಟ್ಟಕ್ಕೇರಿಸಿದ ರಂಗನಾಥನ್ ತಮ್ಮೊಳಗಿನ ದೂರ ದೃಷ್ಟಿತ್ವ ಹಾಗೂ ಅವರ ಅನುಭವದಿಂದ ಗ್ರಂಥಾಲಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಖಾಮುಖಿಯಾಗಿ ನಿಲ್ಲಿಸಿದರು. ಈ ನಾಗಾಲೋಟದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ರಂಗನಾಥನ್ ಅವರ ವಿಚಾರಧಾರೆಗಳು ಗ್ರಂಥಾಲಯ ಬೆಳೆವಣಿಗೆಗೆ ಅತಿ ಅವಶ್ಯಕವಾಗಿರುವುದು ಅವರ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ.
ಇಂಗ್ಲೆಂಡಿಗೆ ತರಬೇತಿಗೆಂದು ಹೋದ ಸಂದರ್ಭದಲ್ಲಿ ಒಂಬತ್ತು ತಿಂಗಳಲ್ಲಿ ಸುಮಾರು 100 ಗ್ರಂಥಾಲಯಗಳಿಗೆ ಬೇಟಿ ನೀಡಿದ ಅವರು ಅಲ್ಲಿ ಅಳವಡಿಸಿಕೊಂಡಿದ್ದ ನವ ನವೀನ ಸಂಗತಿಗಳನ್ನು ಅರಿತುಕೊಳ್ಳುವರು. ಆಗಲೇ ಅವರು ಭಾರತೀಯ ಹಾಗೂ ಬ್ರಿಟನ್ ಗ್ರಂಥಾಲಯಗಳಲ್ಲಿನ ಸಮಸ್ಯೆಗಳು ಬಗ್ಗೆ ಯೋಚಿಸುತ್ತಾರೆ. ಓದುಗರಿಗೆ ಗ್ರಂಥಾಲಯಗಳು ಕೊಡಮಾಡುವ ಸೇವೆಗಳು, ಅಲ್ಲಿ ಬಳಸಿದ ತಂತ್ರಜ್ಞಾನ, ಅತ್ಯಾಕರ್ಷಕ ಕಟ್ಟಡಗಳು, ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಅಲ್ಲಿನ ಸಿಬ್ಬಂದಿಯ ಸೇವಾ ಮನೋಭಾವ ಈ ಎಲ್ಲಾ ಅಂಶಗಳು ರಂಗನಾಥನ್ ಅವರ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರುತ್ತವೆ.
ಲಂಡನ್ನಿನಿಂದ ಭಾರತಕ್ಕೆ ಮರಳಿದ ನಂತರ ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ಕಾಯಕ ಭೂಮಿಯನ್ನಾಗಿ ಮಾಡಿಕೊಂಡು, ಹೊಸ ಪ್ರಯೋಗಳನ್ನು ಮಾಡುವುದರ ಮೂಲಕ ಬದಲಾವಣೆಯ ಗಾಳಿ ಬೀಸಲು ಕಾರಣರಾಗುತ್ತಾರೆ. ಹೀಗೆ ಮುಂದಿನ ನಾಲ್ಕೂವರೆ ದಶಕಗಳ ಕಾಲ ಗ್ರಂಥಾಲಯವನ್ನೇ ತಮ್ಮ ಜೀವಿತದ ಉಸಿರಾಗಿಸಿಕೊಂಡು ಕಾಯಕ ಮಾಡಿ ಇಡಿ ಜಗತ್ತೇ ಭಾರತದ ಗ್ರಂಥಾಲಯಗಳ ಕಡೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಇವರದು. ಡಾ. ಎಸ್. ಆರ್. ರಂಗನಾಥನ್ ಅವರು ಗ್ರಂಥಪಾಲಕರಾಗಿ, ಗ್ರಂಥಾಲಯ ವಿಜ್ಞಾನದ ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಮತ್ತು ಸಂಶೋಧಕರಾಗಿ ಕೆಲಸಗಳನ್ನು ಮಾಡಿದ್ದಾರೆ.
ಗ್ರಂಥಾಲಯದ ಐದು ಸೂತ್ರಗಳು
ವಿದೇಶಿ ಪ್ರವಾಸದಿಂದ ಹಿಂತಿರುಗಿದ ನಂತರ ಭಾರತೀಯ ಗ್ರಂಥಾಲಯಗಳು ಏಕಕಾಲಿಕ ಅಭಿವೃದ್ಧಿಗಾಗಿ, ಗ್ರಂಥಾಲಯ ಉತ್ತಮ ಆಡಳಿತಕ್ಕಾಗಿ ವೈಜ್ಞಾನಿಕ ತಳಹದಿಯನ್ನು ಗಟ್ಟಿಗೊಳಿಸಲು ಡಾ. ಎಸ್. ಆರ್. ರಂಗನಾಥನ್ ಅವರು 1931ರಲ್ಲಿ ರಚಿಸಿದ ಪಂಚ ಸೂತ್ರಗಳು ಸಾರ್ವಕಾಲಿಕ ಮೌಲ್ಯ ಬಿಂಬಿತವಾದಂಥವು.
* ಗ್ರಂಥಗಳು ಉಪಯೋಗಕ್ಕಾಗಿವೆ.
* ಪ್ರತಿಯೊಬ್ಬ ಓದುಗನಿಗೆ ಅವನದೇ ಗ್ರಂಥ.
* ಪ್ರತಿಯೊಂದು ಗ್ರಂಥಕ್ಕೆ ಒಬ್ಬ ಓದುಗ.
* ಓದುಗನ ಸಮಯ ಉಳಿಸಿ.
* ಗ್ರಂಥಾಲಯ ಬೆಳೆಯುವ ಸಂಸ್ಥೆ
ಗ್ರಂಥಾಲಯ ಎಂಬುದು ಶಿಕ್ಷಣ ಸಂಸ್ಥೆಯ ಮೆದುಳಿನಂತೆ, ಪುಸ್ತಕಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಗೆ ಯಾವುದೇ ವಿಷಯಗಳಿಗೆ ನಾವು ಗ್ರಂಥಾಲಯವನ್ನೆ ಅವಲಂಬಿಸುತ್ತೇವೆ. ಈ ಹಿಂದೆ ಗ್ರಂಥಾಲಯಗಳಲ್ಲಿ ಹೊತ್ತಿಗೆಗಳನ್ನು ಹುಡುಕಲು, ಅವುಗಳನ್ನು ಸಂರಕ್ಷಿಸಲು ಕಷ್ಟಪಡಬೇಕಾದ ಕಾಲಘಟ್ಟದಲ್ಲಿ ರಂಗನಾಥನ್ ಅವರು ಮಾಡಿದ ಪರಿವರ್ತನೆ ಅವಿಸ್ಮರಣೀಯವಾದುದು. ಆದ್ದರಿಂದಲೇ ನಾವಿಂದು ಅವರನ್ನು ಸದಾ ನೆನಪಿಸುತ್ತ್ತಿದ್ದೇವೆ. ಆದರೆ ಇಂದು ಗ್ರಂಥಾಲಯಗಳು ಬದಲಾಗಿವೆ. ಗ್ರಂಥಪಾಲಕರಿಗೆ ಕಂಪ್ಯೂಟರಿನಿಂದ ಸುಲಭವಾಗಿ ಪುಸ್ತಕಗಳ ಪಟ್ಟಿ ಮಾಡಬಹುದಾಗಿದೆ. ಅಯವ್ಯಯ, ವಿಲೇವಾರಿಗಳನ್ನು ಸರಳವಾಗಿ ಮಾಡಬಹುದು. ಇದಕ್ಕೆಲ್ಲ ಸ್ಫೂರ್ತಿಯ ಚಿಲುಮೆ ಡಾ. ಎಸ್. ಆರ್. ರಂಗನಾಥನ್ ಅವರು.
1984 ರಲ್ಲಿ ಬೆಂಗಳೂರಿನ ಡಿ. ಆರ್. ಓ.ಸಿ.ಗೆ ರಂಗನಾಥನ್ ಕುರಿತು ಉಪನ್ಯಾಸ ನೀಡಲು ಬಂದ ಅಮೇರಿಕಾದ ಮಾಹಿತಿ ವಿಜ್ಞಾನಿ ಯುಜೀನ್ ಗೆರ್ಫಿಲ್ಟ್ ಹೀಗೆ ಹೇಳುತ್ತಾರೆ. “ರಂಗನಾಥನ್ ಭಾರತ ಮಾತ್ರವಲ್ಲ ಇಡೀ ಜಗತ್ತಿನ ಚಿತ್ರಣವನ್ನೇ ಬದಲಿಸಿದ ಸಾಧಕ. ತಮ್ಮ ಬದುಕಿನ ಕೊನೆಯ ದಿನದವರೆಗೂ ಗ್ರಂಥಾಲಯಗಳ ಬೆಳವಣಿಗೆಯನ್ನು ಕುರಿತು ಚಿಂತಿಸಿದ ಚಿಂತಕ. ವೃತ್ತಿ ಬದುಕಿನಲ್ಲಿ ದುಡಿದು ಗಳಿಸದ್ದೆಲ್ಲವನ್ನು ಗ್ರಂಥಾಲಯಗಳ ಪ್ರಗತಿಗಾಗಿ ವಿನಿಯೋಗಿಸಿದ ದಾರ್ಶನಿಕ. ಅದಕ್ಕೆಂದೇ ಅವರು ಗ್ರಂಥಾಲಯ ವಿಜ್ಞಾನಿ ಮಾತ್ರವಲ್ಲ, ಅವರೊಬ್ಬ ಯೋಗಿ, ಸಂತ, ದಾರ್ಶನಿಕನಾಗಿ ನನಗೆ ಕಾಣುತ್ತಾರೆ. ನಾಲ್ಕುವರೆ ದಶಕಗಳ ಕಾಲ ಗ್ರಂಥಾಲಯಗಳಲ್ಲಿ ಬರಿಗಾಲಿನಲ್ಲಿ ನಡೆದಾಡಿದ ಈ ಸಾಧಕ ತನ್ನ ಹೆಜ್ಜೆ ಗುರುತನ್ನು ಅಜರಾಮರಗೊಳಿಸಿದವರು. ಈ ಮಾತಿನಲ್ಲಿ ಯಾವ ಒಣ ಹೊಗಳಿಕೆಯಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇಲ್ಲ. ಜನರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಕ್ಷೇತ್ರವನ್ನು ರಂಗನಾಥನ್ ತಮ್ಮ ಸೇವಾ ಮನೋಭಾವ ಮತ್ತು ಸಂಶೋಧನಾತ್ಮಕ ಗುಣದಿಂದ ಸಮಾಜದ ಮೂಖ್ಯವಾಹಿನಿಗೆ ತಂದು ನಿಲ್ಲಿಸಿದರು. ಜನ ಸಾಮಾನ್ಯರಿಗೂ ಪುಸ್ತಕಗಳು ಉಚಿತವಾಗಿ ದೊರೆಯುವಂತೆ ಮಾಡಿ ಆ ಮೂಲಕ ಸ್ವಾಸ್ತ್ಯ ಮತ್ತು ಸಾಂಸ್ಕøತಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದರು ದುಡಿದು ಗಳಿಸದ್ದೆಲ್ಲವನ್ನು ಸಮಾಜಕ್ಕೆ ಅರ್ಪಿಸಿದ ಅವರ ಸರಳ ಬದುಕು ಮತ್ತು ಸಾಮಾಜಿಕ ಕಾಳಜಿಯ ಗುಣ ನಂತರದ ಪೀಳಿಗೆಗೆ ದಾರಿ ದೀಪವಾಯಿತು.
ಪ್ರಶಸ್ತಿ, ಗೌರವಗಳು:
ಗ್ರಂಥಾಲಯಗಳ ಪ್ರಗತಿ ಸಾಧಕ ಜ್ಯೋತಿಯಾದ ಡಾ. ಎಸ್. ಆರ್. ರಂಗನಾಥನ್ ಅವರ ಅದ್ಭುತ ಸಾಧನೆಗೆ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಗ್ರಂಥಾಲಯ ವಿಜ್ಞಾನದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಎಂದು ಮನ್ನಣೆ. 1948-1953ರ ವರೆಗೆ ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷರಾಗಿದ್ದರು. 1992ರಲ್ಲಿ ರಂಗನಾಥನ್ ಕುರಿತ 'ರಂಗನಾಥನ್ ಸಂಸ್ಮರಣ' ಎಂಬ ಬೃಹತ್ ಗ್ರಂಥ ಬಿಡುಗಡೆಗೊಂಡಿದೆ.
ಗ್ರಂಥ ಭಂಡಾರಗಳು ಜ್ಞಾನದ ದೇಗುಲವಿದ್ದಂತೆ, ಅವು ನಮ್ಮ ಜ್ಞಾನಕ್ಕೆ ಪ್ರೇರಕ ಶಕ್ತಿಗಳು. ಪ್ರತಿಯೊಬ್ಬರ ಬದುಕಿನ ಬೆಳಕಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಪ್ರತಿಯೊಬ್ಬರೂ ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಒಂದಿಲ್ಲೊಂದು ಗ್ರಂಥಕ್ಕೆ ಮೊರೆ ಹೊಗುತ್ತಾರೆ. ಗ್ರಂಥಾಲಯಗಳು ಅಥವಾ ಗ್ರಂಥ ಭಂಡಾರಗಳು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪ್ರಸಾರ ಮಾಡುವ ವಾಹಕಗಳಿದ್ದಂತೆ. ಇವುಗಳೆಲ್ಲವುಗಳಿಗೆ ಒಂದು ಶೋಭೆ ತಂದು ಕೊಡುವುದರ ಮೂಲಕ, ಮೌಲ್ಯ ವರ್ಧಿಸಿದ ಕೀರ್ತಿ ರಂಗನಾಥನ್ ಅವರದು. ತಮ್ಮ ಜೀವಿತದ ಬಹುಪಾಲು ಕಾಲವನ್ನು ಗ್ರಂಥಾಲಕ್ಕಾಗಿಯೇ ಮೀಸಲಿರಿಸಿದ್ದ ಈ ದಿವ್ಯ ಚೇತನ 1972 ರಲ್ಲಿ ದೈಹಿಕವಾಗಿ ದೂರವಾಯಿತು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ