ಶನಿವಾರ, ನವೆಂಬರ್ 1, 2014

ವಿಶಿಷ್ಟ ವ್ಯಕ್ತಿತ್ವದ ಬಹುಮುಖ ಪ್ರತಿಭೆ-ಪ್ರೊ.ಎಸ್.ಕೆ. ರಾಮಚಂದ್ರರಾವ್- ಕೊಟ್ರೇಶ್ ಎಸ್.ಉಪ್ಪಾರ್,


   ಕಲಾ ತಜ್ಞರು, ಲೇಖಕರು, ವಿಮರ್ಶಕರು, ಸಂಗೀತಜ್ಞರು, ಮೀಮಾಂಸಕರು, ದಾರ್ಶನಿಕರು ಎಲ್ಲಕ್ಕಿಂತ ಹೆಚ್ಚಾಗಿ ಬಹುಭಾಷಾ ಪಂಡಿತರಾಗಿದ್ದ, ಅಪರೂಪಗಳಲ್ಲಿನ ಅಪರೂಪ ವ್ಯಕ್ತಿ ಪ್ರೊ.ಎಸ್.ಕೆ. ರಾಮಚಂದ್ರರಾವ್.
    ಇವರು ಕ್ರಿ.ಶ. 1928 ಫೆಬ್ರವರಿ 09 ರಂದು ಹಾಸನದ ಶ್ರೀಕೃಷ್ಣರಾವ್ ಮತ್ತು ಶ್ರೀಮತಿ ಕಮಲಾಬಾಯಿಯವರ ಪುಣ್ಯ ಗರ್ಭಾಂಬುಧಿಯಲ್ಲಿ ಜನಿಸಿದರು. ಹುಟ್ಟಿದ್ದು ಹಾಸನದಲ್ಲಾದರೂ ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಾದರೆ, ಪ್ರೌಡಶಿಕ್ಷಣವನ್ನು ನಂಜನಗೂಡಿನಲ್ಲಿ ಪಡೆಯುತ್ತಾರೆ. ಬಾಲ್ಯದಿಂದಲೇ ವಿಶಿಷ್ಟ ಆಲೋಚನಾ ಶಕ್ತಿ, ತಾರ್ಕಿಕ ಚಿಂತನೆ, ಜ್ಞಾನದ ಹಂಬಲ ಇವರನ್ನು ಬಹು ಎತ್ತರದ ಮಟ್ಟಕ್ಕೆ ಕೊಂಡೊಯ್ದಿತೆನ್ನಬಹುದು. ವೈದಿಕ ಮೂಲದವರಾದ ರಾಮಚಂದ್ರರಾಯರು ತಮ್ಮ ತಂದೆ ಕೃಷ್ಣರಾವ್‍ರಿಂದಲೇ ಸಂಸ್ಕøತ ಕಲಿತರು. ಮೈಸೂರಿನ ಯವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿದ ಇವರು ಮೈಸೂರು ವಿ.ವಿ ಯಲ್ಲಿ 1947 ರಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.
    ಕನ್ನಡ, ಸಂಸ್ಕøತ, ಪಾಳಿ, ತೆಲಗು,ತಮಿಳು, ಬಂಗಾಳಿ, ಪ್ರಾಕೃತ, ಗ್ರೀಕ್, ಪ್ರೆಂಚ್, ಇಂಗ್ಲೀಷ್ ಹೀಗೆ ಹತ್ತಾರು ಭಾಷಾ ಪ್ರೌಢಿಮೆ ಹೊಂದಿದ್ದ ರಾಮಚಂದ್ರರಾಯರು ಸಹಜವಾಗಿಯೇ ಜ್ಞಾನ ಖಣಜವಾಗಿದ್ದರು.
     ಕ್ರಿ.ಶ 1949 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ ರಾಮಚಂದ್ರರಾಯರು ನಂತರದ ದಿನಗಳಲ್ಲಿ 1954 ರಲ್ಲಿ ಬೆಂಗಳೂರಿನ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ (ಪ್ರಸ್ತುತದಲ್ಲಿನ ನಿಮ್ಹಾನ್ಸ್) ಕ್ಲಿನಿಕಲ್ ಸೈಕಾಲಜಿ ಮುಖ್ಯಸ್ಥರಾಗಿ ಕೆಲ ಕಾಲ ಕಾರ್ಯ ನಿರ್ವಹಿಸಿದರು. ಕಾರಣಾಂತರಗಳಿಂದ ಈ ಹುದ್ದೆಗೆ ರಾಜಿನಾಮೆ ನೀಡಿ 1965 ರಲ್ಲಿ  ಆರ್.ವಿ ಟೀಚರ್ ಕಾಲೇಜು ಮತ್ತು ನ್ಯಾಷನಲ್ ಇನ್‍ಸ್ಟಿಟೂಟ್ ಆಫ್ ಸೈನ್ಸ್‍ಗಳಲ್ಲಿ ಮನಃಶಾಸ್ತ್ರ ವಿಭಾಗದ ಬೋಧಕರಾಗಿಯೂ ಕಾರ್ಯನಿರ್ವಹಿಸಿದರು. ಇದೇ ಅವಧಿಯಲ್ಲಿ ಕಾಲೇಜು ಆಫ್ ಓರಿಯಂಟಲ್ ಸ್ಟಡೀಸ್ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ  ಕಾರ್ಯ ನಿರ್ವಹಿಸಿದರು.
    ಇವರ ಅಗಾಧ ಜ್ಞಾನ ಭಂಡಾರಕ್ಕೆ ಆಗಿನ ಎಲ್ಲಾ ಶೈಕ್ಷಣಿಕ ಹಾಗೂ ತಂತ್ರಜ್ಞಾನದ ಸಂಸ್ಥೆಗಳು ಕೈ ಬೀಸಿ ಕರೆಯುತ್ತಿದ್ದರೂ ಇವರು ಮಾತ್ರ ತಮ್ಮ ಬದ್ದತೆಯನ್ನು ಬಿಟ್ಟುಕೊಟ್ಟವರಲ್ಲ, ಹಣ ಮತ್ತು ಸಂಪತ್ತಿನ ಹಿಂದೆ ಹೋಗದೆ ಉತ್ತಮ ಸಾಮಾಜಿಕ ಕಾರ್ಯದತ್ತ ಗಮನಹರಿಸಿದರು.
ಸಾಹಿತ್ಯ ಕ್ಷೇತ್ರ
   ಬಹುಭಾಷಾ ಪಂಡಿತರಾಗಿದ್ದ ರಾಮಚಂದ್ರರಾಯರು ಹಲವಾರು ಭಾಷೆಗಳಲ್ಲಿಯೂ ತಮ್ಮ ಪ್ರಬುದ್ಧವಾದ ಚಿಂತನೆಗಳನ್ನು   ಕೃತಿ ರೂಪದಲ್ಲಿ ಓದುಗರಿಗೆ ನೀಡಿದ್ದಾರೆ.
   ‘ಪೌರವ ದಿಗ್ವಿಜಯಂ’ ಎಂಬುದು ಇವರ ಸಂಸ್ಕøತ ನಾಟಕ. ಇದು ಗ್ರೀಕ್‍ವೀರ ಅಲೆಕ್ಸಾಂಡರ್ ಹಾಗೂ ಕೆಚ್ಚೆದೆಯ ವೀರ ಪೌರವನ ಕುರಿತಾದ ಕಥೆಯನ್ನೊಳಗೊಂಡಿದೆ. ‘ಸುಮಂಗಲ ಗಾಥಾ’ ಹಾಗೂ ‘ವಿಸುದ್ಧ ಮಗ್ಗ ವಿಭಾವನೀ’ ಇವೆರಡೂ ಗ್ರಂಥಗಳು ಪಾಳಿ ಭಾಷೆಯ ಠೀಕಾ ಗ್ರಂಥÀಗಳಾಗಿವೆ.
    ರಾಮಚಂದ್ರ ರಾಯರು ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲಾಗಿರದೆ ಸಣ್ಣಕಥೆ, ಕಾದಂಬರಿ, ಜೀವನ ಚರಿತ್ರೆ, ಮನಃಶಾಸ್ತ್ರ, ಸಮಾಜಶಾಸ್ತ್ರ, ದೇವಾಲಯಗಳ ಇತಿಹಾಸ, ಲಲಿತ ಕಲೆ, ವೇದಾಂತ ಆಗಮ ಕೋಶಗಳು, ಶಿಲ್ಪಶಾಸ್ತ್ರ, ವೇದಾಂಗಳು, ಆಯುರ್ವೇದ, ತತ್ತ್ವ ಮೀಮಾಂಸೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಹಿತ್ಯ ಲಹರಿ ಹರಿಸಿದವರು.
‘ತ್ಯಾಗರಾಜರು’, ‘ಕನಕದಾಸರು’, ‘ಪುರಂದರ ದಾಸರು’ ಮುಂತಾದ ಹನ್ನೆರಡು ಮಕ್ಕಳ ಕೃತಿಗಳನ್ನು ನೀಡಿದ್ದಾರೆ. ಆಂಗ್ಲ ವಿದ್ವಾಂಸರಾಗಿದ್ದ ಇವರು ಕೆ. ವೆಂಕಟಪ್ಪನವರನ್ನು ಕುರಿತಾದ ‘ಣhe mಚಿಟಿ ಚಿಟಿಜ his ಚಿಡಿಣ’,  ‘ರಿeಟಿ ಚಿಟಿಜ ಜhಥಿಚಿಟಿಚಿ’ ಸೇರಿದಂತೆ 77 ಕೃತಿಗಳನ್ನು ಆಂಗ್ಲಭಾಷೆಯಲ್ಲಿಯೇ ರಚಿಸಿದ್ದಾರೆ.
     ತಿರುಪತಿ ತಿಮ್ಮಪ್ಪನನ್ನು ಕುರಿತಂತೆ ‘ತಿರುಪತಿ ತಿಮ್ಮಪ್ಪ’ ಹಾಗೂ ‘he hiಟಟ shಡಿiಟಿe oಜಿ veಟಿgಚಿಜum’ ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ಬರೆದಿದ್ದಾರೆ. ಶ್ರೀ ಚಂದ್ರಶೇಖರ್ ಭಾರತೀ ಸ್ವಾಮಿಗಳ ಬದುಕಿನ ಕುರಿತಾಗಿ ‘ಶಾರದ ಪೀಠದ ಮಾಣಿಕ್ಯ’, ತಂದೆ ಕೃಷ್ಣರಾವ್ ರಿಂದ ವೈದ್ಯಾಶಾಸ್ತ್ರ ಕುರಿತು ರಚಿಸಿದ ಆಯುರ್ವೇದ ಕೃತಿ ‘ಆಯುರ್ವೇದದಲ್ಲಿ ನಾಡಿ ವಿಜ್ಞಾನ’, ಭಗವದ್ಗೀತೆಯನ್ನು ಕುರಿತಾದ ‘ಗೀತೆಗೊಂದು ಕೈಪಿಡಿ’. ಮನಶಾಸ್ತ್ರದ ಕುರಿತಾದ ‘ನಗೆಯ ನೆಲೆ’, ಮಧ್ವಾಚಾರ್ಯರನ್ನು ಕುರಿತಾದ ‘ಪೂರ್ಣ ಪ್ರಜ್ಞಾ ಪ್ರಶಸ್ತಿ’ ಇವರ ಸಂಗೀತ ಗುರುಗಳಾದ ಅನಂತ ಕೃಷ್ಣ  ಕುರಿತಾದ ‘ಪುರುಷ ಸರಸ್ವತಿ’, ಸುಧಾ ಪತ್ರಿಕೆಗೆ ‘ದಾಸಯ್ಯ’ ಎಂಬ ಕಾವ್ಯನಾಮದಿಂದ ಬರೆದ ಲೇಖನಗಳ ಸಂಗ್ರಹ ‘ವಿಚಾರ ಲಹರಿ’ ಕೃತಿ, ಪ್ರಜಾವಣಿ ಪತ್ರಿಕೆಗೆ ಬರೆದ ಅಂಕಣ ಸಂಗ್ರಹ ‘ಹಣ ಪ್ರಪಂಚ’, ಕರ್ನಾಟಕದಲ್ಲಿ ಹಿರಿಯ ಸಂಗೀತ ಕರ್ಮಿಗಳ ಪರಿಚಯ ಕುರಿತು ಬರೆದ ‘ಹಿರಿಯ ಹೆಜ್ಜೆಗಳು’, ಪುರಂದರ ದಾಸರ ಐದನೆಯ ಶತಮಾನೋತ್ಸವ ಸಂದರ್ಭದಲ್ಲಿ ಕ್ನನಡ ಮತ್ತು ಸಂಸ್ಕøತಿ ಇಲಾಖೆಗಾಗಿ ಸಂಪಾದಿಸಿಕೊಟ್ಟ ‘ಪುರಂದರ ಸಾಹಿತ್ಯದರ್ಶನ’ ನಾಲ್ಕು ಸಂಪುಟಗಳಲ್ಲಿ ಬಂದಿರುವುದು ಇವರ ವ್ಯಕ್ತಿತ್ವದ ಘನತೆಗೆ ಹಿಡಿದ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
   ಕನ್ನಡ, ಆಂಗ್ಲ, ಗ್ರೀಕ್, ಸಂಸ್ಕøತ ಇತರೆ ಭಾಷೆಗಳಲ್ಲಿ ಇವರು ಸುಮಾರು 170 ಕೃತಿಗಳನ್ನು ನೀಡಿ ಸಾಹಿತ್ಯ ಲೋಕಕ್ಕೆ  ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಒಂದು ಕಡೆ ವೈ.ಎನ್. ಗಂಡೂರಾವ್ ಉಲ್ಲೇಖಿಸುವಂತೆ-‘ಪ್ರೊ. ಎಸ್.ಕೆ ರಾಮಚಂದ್ರರಾಯರು ನಂಜನಗೂಡಿನ ಕನ್ನಂಬಾಡಿ ಶಾಸ್ತ್ರಿಗಳಿಂದ ಸಂಸ್ಕøತ ಕಾವ್ಯ ನಾಟಕಗಳು, ಉತ್ತರಾಧಿಮಠದ ದಿವಾನರಾಗಿದ್ದ ಅಗ್ನಿಹೋತ್ರಿ ಯಜ್ಞ, ವಿಠಲಾಚಾರ್ಯರಿಂದ ತರ್ಕಶಾಸ್ತ್ರ, ಬೆಂಗಳೂರಿನ ಕೇಶವ ಶಿವಘನ ಪಾಠಿಗಳಲ್ಲಿ ಯಜುರ್ವೇದ, ನಂಜನಗೂಡಿನ ವೆಂಕಟೇಶ ಸೋಮಾಯಾಜಿಗಳಿಂದ ಪೂರ್ವ ಮೀಮಾಂಸೆ, ತಲಕಾಡು ಕೃಷ್ಣ ದೀಕ್ಷಿತರ ಮೂಲಕ ಶೈವ-ಶಾಕ್ತ-ಆಗಮಗಳ ಪಾಠ, ಶ್ರೀನಿವಾಸ ಭಟ್ಟಾಚಾರ್ಯರಿಂದ ವೈಖಾನಸ ಆಗಮ-ಹೀಗೆ ಕಲಿತದ್ದು ಹಲವಾರು ಶಾಸ್ತ್ರಾಭ್ಯಾಸಗಳು’.
    ಗುಂಡುರಾಯರ ಹೇಳಿಕೆಯನ್ನೇ ಗಮನಿಸುವುದಾದರೆ ರಾಮಚಂದ್ರರಾಯರಿಗಿದ್ದ ಜ್ಞಾನದ ಹಸಿವು ಓದುಗರಿಗೆ ಅರಿವಾಗದೇಯಿರದು. ಹತ್ತಾರು ಉತ್ತಮೋತ್ತಮ ಗುರುದಿಗ್ಗಜರಿಂದ ಹತ್ತಾರು ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದ ಇವರು ಸಾವಿರಾರು ಮೌಲಿಕ ಚಿಂತನೆಗಳನ್ನು ನಾಡಿಗೆ ನೀಡುವಲ್ಲಿ ಯಶಸ್ವೀಯಾದರು.
    ಕನ್ನಡದ ಪ್ರಬುದ್ಧ ಸಾಹಿತಿ ಜಿ.ಪಿ. ರಾಜರತ್ನಂ ಅವರ ಆತ್ಮೀಯ ಶಿಷ್ಯರೂ ಆಗಿದ್ದ ರಾಮಚಂದ್ರರಾಯರು ಅವರಿಂದ ಬೌದ್ಧ ಧರ್ಮದ ಬಗ್ಗೆ ತಿಳಿದು ಕೊಂಡರು. ಆಗ ಹಿಂದೂ ಧರ್ಮಕ್ಕಷ್ಟೇ ಮೀಸಲಾಗದೇ ಬೌದ್ಧ, ಜೈನ, ಪಾರ್ಸಿ ಮುಂತಾದ ಧರ್ಮಗಳ ಬಗ್ಗೆ ಅಧ್ಯಯನ ನಡೆಸಿದರು.
ಸಂಗೀತ ಶಿಲ್ಪಿ ಮತ್ತು ಚಿತ್ರಕಲೆ
    ಮೈಸೂರಿನ ಮಹಾರಾಜ ಕಾಲೇಜಿನ ಅಧ್ಯಾಪಕರಾದ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ ರವರಲ್ಲಿ ಸಂಗೀತ ಅಬ್ಯಾಸ ಮಾಡಿದ ರಾಮಚಂದ್ರರಾಯರು ಮುಂದೆ ಖ್ಯಾತ ಕಲಾವಿದ  ಕೆ. ವೆಂಕಟಪ್ಪನವರಿಂದ ಚಿತ್ರಕಲೆ ಕಲಿತುಕೊಂಡರು.
ಸಂಗೀತ, ನೃತ್ಯ, ಚಿತ್ರಕಲೆ ಹೀಗೆ ಸಮಸಮ ಚಿತ್ತಹರಿಸಿ ಅಭ್ಯಾಸ ನಡೆಸಿದ ರಾಮಚಂದ್ರರಾಯರು ಆಳವಾದ ಜ್ಞಾನವನ್ನು ತಮ್ಮದಾಗಿಸಿಕೊಂಡರು. ಸ್ವತಃ ವೀಣಾವಾದಕರಾಗಿದ್ದ ಇವರು ಹಲವಾರು ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ನೀಡಿ ಯಶಸ್ವೀಯಾದವರು.
   ಪ್ರತಿಷ್ಠಿತ ಕಲಾನಿಧಿಗಳಾದ ಮುಸುರಿ ಸುಬ್ರಹ್ಮಣ್ಯ ಅಯ್ಯರ್, ರವೀಂದ್ರನಾಥ ಠ್ಯಾಗೋರ್, ಚೆಂಬೈವೈದ್ಯನಾಥ ಭಾಗವತರ್, ವೀಣೆ ಶೇಷಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಮುಂತಾದವರ ಆಳೆತ್ತರ ಶಿಲ್ಪಗಳನ್ನು ಕಲಾಕಾರ ಪ್ರವೀಣರಾಗಿದ್ದ ರಾಮಚಂದ್ರರಾಯರು ಜೇನುಮೇಣ, ಪಲ್ಪ್, ಟೆರಾಕೋಟಾ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳನ್ನು ಉಪಯೋಗಿಸಿ ರಚಿಸಿದ ಕಲಾಕೃತಿಗಳು ಜನಮನ್ನಣೆಗಳಿಸಿದ್ದವು.
    ಚಿತ್ರಕಲೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದ ರಾಮಚಂದ್ರ ರಾಯರು ರಾಜ್ಯದ ವಿವಿದೆಡೆ ಏಕವ್ಯಕ್ತಿ ಪ್ರದರ್ಶನ ನಡೆಸಿ ಜನಪ್ರ್ರಿಯವಾದ ವ್ಯಕ್ತಿ  ಇವರು ಬಹುಮುಖ್ಯವಾಗಿ ಜಲವರ್ಣ, ಬಾಟಿಕ್, ತೈಲವರ್ಣ, ರೇಖಾಚಿತ್ರ ಪ್ರಕಾರಗಳಲ್ಲಿ ಅದ್ವಿತೀಯ ಪಾಂಡಿತ್ಯ ಪಡೆದಿದ್ದರು.
   ಓಟ್ಟಾರೆ ಹೇಳುವುದಾದರೆ ವೈವಿಧ್ಯ ಭಾಷಾ ಪ್ರೌಢಿಮೆ, ಅದ್ಭುತ ಚಿತ್ರ ಕೈ ಚಳಕ, ಅದ್ವಿತೀಯ ಶಿಲ್ಪ ಕಲತ್ವ, ಸಾಹಿತ್ಯ ಚೈತನ್ಯ, ವಾಕ್‍ಝರಿ, ಸಂಗೀತ ಪ್ರಜ್ಞೆ ಇವೆಲ್ಲವೂ ಮೇಳೈಸಿರುವ ಜ್ಞಾನ ಸಾಗರ ರಾಮಚಂದ್ರರಾಯರು ಎಂದರೆ ಅತಿಶಯೋಕ್ತಿಯಾಗಲಾರದು.
ಗೌರವ ಪುರಸ್ಕಾರಗಳು
    ಸಾಧನಾ ಶಿಖರದ ಉತ್ತುಂಗದಲ್ಲಿ ಪ್ರಜ್ಚಲಿಸಿದ ಪ್ರೋ. ಎಸ್.ಕೆ ರಾಮಚಂದ್ರ ರಾಯರಿಗೆ ಅವರ ಪಾಂಡಿತ್ಯ ಪ್ರತಿಭೆಗೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ. ಸಂಗೀತ ಕಲಾ ರತ್ನ ಪ್ರಶಸ್ತಿ, ಶಾಸ್ತ್ರ ಚೂಡಾಮಣಿ ಪ್ರಶಸ್ತಿ, ಸೇಡಿಯಾವು ಪ್ರಶಸ್ತಿ, ಡಿ.ವಿ.ಜಿ ಪ್ರಶಸ್ತಿ, ಅ.ನ.ಕೃ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ  ಹೀಗೆ ಹಲವಾರು ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ಇವರ ಸರ್ವಾಂಗೀಣ ಸಾಧನೆ ಪರಿಗಣಿಸಿ ತಿರುಪತಿ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಸತ್ಕರಿಸಿವೆ.
ಇಷ್ಟೆಲ್ಲ ಅತ್ಯುನ್ನತ ಸಾಧನೆಗೈದ ರಾಮಚಂದ್ರರಾಯರು ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿ. ಈ ಸುಸಂಸ್ಕøತ ಹಿರಿಯ ಜೀವ 2006 ಫೆಬ್ರವರಿ 2 ರಂದು ಇಹಲೋಕ ತ್ಯಜಿಸಿದÀರೂ ಅವರು ನಮಗೆ ಬಿಟ್ಟು ಹೋದ ಜ್ಞಾನ ಸಾಗರ ಅಪಾರವಾದುದು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ,
ಹಾಸನ-573201
ಮೊ-9483470794, 9739878197


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ