ಸೋಮವಾರ, ನವೆಂಬರ್ 17, 2014

ಬಹುಭಾಷಾ ಪ್ರಾಜ್ಞರು ಆರ್. ಶಾಮಾಶಾಸ್ತ್ರಿ -ಕೊಟ್ರೇಶ್ ಎಸ್.ಉಪ್ಪಾರ್



    ಹಾಸನ ಸಾಹಿತ್ಯ, ಸಂಗೀತ, ಜ್ಯೋತಿಷ್ಯ, ರಂಗಭೂಮಿ, ಹಾಗೆಯೇ ರಾಜಕೀಯ ಕ್ಷೇತ್ರಕ್ಕೂ ಗಣ್ಯಾತಿಗಣ್ಯರನ್ನು ನೀಡಿದ ಜಿಲ್ಲೆ. ಸಾಹಿತ್ಯ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಸಾಕಷ್ಟು ಕಾಯಕ ಮಾಡಿದ ಆರ್. ಶಾಮಾಶಾಸ್ತ್ರಿಗಳು ಬಹುಬಾಷಾ ಪಂಡಿತರಾಗಿದ್ದರು.
      ಕನ್ನಡ, ಇಂಗ್ಲೀಷ್, ಸಂಸ್ಕøತ ಭಾಷೆಗಳ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಳವಾದ ಜ್ಞಾನ ಸಂಪಾದಿಸಿ ಜ್ಞಾನ ಕಣಜವಾಗಿದ್ದ ಶಾಮಾಶಾಸ್ತ್ರಿಗಳು 1868 ಜನವರಿ 12 ರಂದು ಹಾಸನ ಸಮೀಪದ ರುದ್ರಪಟ್ಟಣದಲ್ಲಿ ಜನಿಸಿದವರು. ಬಾಲ್ಯದಲ್ಲಿ ಪಿತೃವಿಯೋಗ ಹೊಂದಿದ ಅವರು ಸ್ವ-ಪ್ರಯತ್ನ ಶ್ರದ್ಧೆಗಳಿಂದ ಹಂತ - ಹಂತವಾಗಿ ಬೆಳೆದವರು.
      ಮೈಸೂರು ಸಂಸ್ಕøತ ಕಾಲೇಜಿನಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಇವರು ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರ ಗಮನ ಸೆಳೆದರು. ಇವರ ಪಾಂಡಿತ್ಯವನ್ನು ಮೆಚ್ಚಿಕೊಂಡ ಅಯ್ಯರ್ ಅವರು ಶಾಮಾಶಾಸ್ತ್ರಿಗಳನ್ನು ತಮ್ಮ ಮನೆಯಲ್ಲಿ ಉಳಿದು ಕೊಳ್ಳಲು ಹೇಳಿ, ಊಟ-  ವಸತಿಗಳಿಗೆ ಏರ್ಪಾಟು ಮಾಡಿ ಇಂಗ್ಲೀಷ್ ಕಲಿಯಲು ಪ್ರೇರೇಪಿಸಿದರು.
       ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್, ಸಂಸ್ಕøತದ ಜೊತೆಗೆ ಭೌತಶಾಸ್ತ್ರವನ್ನು ಕಲಿತ ಶಾಮಾಶಾಸ್ತ್ರಿಗಳು ಮುಂದೆ ಮದರಾಸು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದರು. ಓದಿನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಇವರಿಗೆ 1918ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ಉದ್ಯೋಗ ದೊರಕಿತು. ಈ ಕಾಲಘಟ್ಟವೇ ಶಾಮಾಶಾಸ್ತ್ರಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ತರಲು ಕಾರಣವಾಗಿದ್ದು ಎನ್ನಬಹುದು ಏಕೆಂದರೆ ಅಲ್ಲಿ ನೂರಾರು ಅಳಿವಿನಂಚಿನಲ್ಲಿದ್ದ ಹಸ್ತಪ್ರತಿಗಳನ್ನು ಸಿದ್ಧಗೊಳಿಸಬೇಕಾಗಿತ್ತು. ಅದೇ ಸಮಯದಲ್ಲಿ ದೊರೆತ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪರಿಷ್ಕರಿಸಿ ಅದನ್ನು ಸಂಸ್ಕøತ ವiತ್ತು ಇಂಗ್ಲೀಷಿನಲ್ಲಿ ಪ್ರಕಟಿಸಿದ ಕೀರ್ತಿ ಆರ್. ಶಾಮಾಶಾಸ್ತ್ರಿಗಳದ್ದು. ಅವರು ಪ್ರಾಚ್ಯ ಪುಸ್ತಕ ಇಲಾಖೆಗೆ ಬರುವ ಮುನ್ನವೆ ಅಂದರೆ 1912 ರಿಂದ 1918ರ ವರೆಗೆ ಬೆಂಗಳೂರಿನ ಸಂಸ್ಕøತ ಮಹಾಪಾಠ ಶಾಲೆಯ ಅಧ್ಯಕ್ಷರಾಗಿ ಸಂಸ್ಕøತದ ಭಾಷಾವೃದ್ಧಿ, ಸಾಹಿತ್ಯ ಅಭಿವೃದ್ಧಿಗಾಗಿ ದುಡಿದಿದ್ದರು. ಸಂಸ್ಕøತದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಅವರಿಗೆ ಆಂಗ್ಲ ಭಾಷೆಯ ಕಲಿಕೆಯೂ ವರವಾಗಿ ಪರಿಣಮಿಸಿತು. ಕನ್ನಡ ಮಾತೃಭಾಷೆಯಾಗಿದ್ದರಿಂದ ತ್ರಿಭಾಷಾ ಪಂಡಿತರಾಗಿ ಶಾಮಾಶಾಸ್ತ್ರಿಗಳು ನಮ್ಮೆದುರಿಗೆ  ನಿಲ್ಲುತ್ತಾರೆ.
    1918ರಲ್ಲಿ ಮೈಸೂರಿನ ಪ್ರಾಚ್ಯಾ ಪುಸ್ತಕ ಕ್ಯೂರೇಟರ್ ಆಗಿ ನೇಮಕಗೊಂಡಿದ್ದ ಅವರು 1922ರಲ್ಲಿ ಪ್ರಾಚ್ಯ ಸಂಶೋಧನಾ ಇಲಾಖೆಯ ನಿರ್ದೇಶಕರಾದರು. 1918-1922ರ ಅವಧಿಯಲ್ಲಿ ಅಳಿವಿನಂಚಿನಲ್ಲಿದ್ದ ಅನೇಕ ಸಂಸ್ಕøತ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದ ಕೀರ್ತಿ ಇವರದು.
     ಬ್ರಹ್ಮಸೂತ್ರ ಭಾಷ್ಯ, ಬೋಧಾಯನ ಗೃಹಸೂತ್ರ, ಸ್ಮøತಿ ಚಂದ್ರಿಕಾ, ತೈತ್ತರೀಯ ಬ್ರಾಹ್ಮಣ, ತೈತ್ತರೀಯ ಬ್ರಾಹ್ಮಣ (ಅಷ್ಟಕ) ಭಾಗ -2, ಭಟ್ಟ ಭಾಸ್ಕರ ಮತ್ತು ಸಾಲಿನ ಭಾಷ್ಯಗಳೊಡನೆ ಅಲಂಕಾರ ಭಾಗ, ಮಣಿಹಾರ ಭಾಗ  2, ಬ್ರಹ್ಮಸೂತ್ರ ಭಾಷ್ಯ (ಆನಂದತೀರ್ಥರು) ತಾತ್ಪರ್ಯಚಂದ್ರಿಕೆಯೊಡನೆ ಭಾಗ-4, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪದಸೂಚಿ, ಸರಸ್ವತಿ ವಿಲಾಸ ಮುಂತಾದ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಅದೇ ರೀತಿ ಸಂಸ್ಕøತ ಮಾತ್ರವಲ್ಲದೆ ಅಳಿವಿನಂಚಿನಲ್ಲಿದ್ದ ಕನ್ನಡದ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪನ್ನು ತಂದ ಕೀರ್ತಿ ಶಾಮಾಶಾಸ್ತ್ರಿಗಳದ್ದು.
      ರುದ್ರಭಟ್ಟನ ಜಗನ್ನಾಥ ವಿಜಯ, ಕಂಠೀರವ ನರಸರಾಜ ವಿಜಯ, ಕುಮಾರವ್ಯಾಸನ ಮಹಾಭಾರತ (ವಿರಾಟ ಪರ್ವ), ಲಿಂಗಣ್ಣನ ಕೆಳದಿಯ ನೃಪವಿಜಯ, ಸೋಮನಾಥನ ಅಕ್ರೂರ ಚರಿತೆ, ಕುಮಾರವ್ಯಾಸ ಮಹಾಭಾರತದ ಉದ್ಯೋಗ ಪರ್ವ, ಸೋಮರಾಜನ ಉದ್ಭಟ ಕಾವ್ಯ, ನಯಸೇನನ ಧರ್ಮಾಮೃತ ಭಾಗ -1, ನಯಸೇನನ ಧರ್ಮಾಮೃತ ಭಾಗ-2 ಹೀಗೆ ಹತ್ತಾರು ಶ್ರೇಷ್ಠ ಕೃತಿಗಳನ್ನು ಬೆಳಕಿಗೆ ತಂದಿದ್ದಾರೆ.
     ಮೈಸೂರಿನ ಮಹಾರಾಜ ಸಂಸ್ಕøತ ಮಹಾ ಪಾಠ ಶಾಲೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಇವರು ಸಂಸ್ಕøತ ಭಾಷಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಯಶಸ್ವಿಯಾದವರು. ಹಾಗೆಯೇ ಸಂಸ್ಕøತ ವಿದ್ವತ್ಪರೀಕ್ಷಾ ಮಹಾಸಭೆಯ ಸದಸ್ಯರಾಗಿ ಕಾರ್ಯಮಾಡಿ ಸಂಸ್ಕøತ ಭಾಷಾ ವ್ಯಾಸಂಗದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಹಲವಾರು ಸಮಿತಿಗಳೊಂದಿಗೆ ನಿಕಟ ಸಂಪರ್ಕಹೊಂದಿದ್ದ ಇವರು ಬಹುಭಾಷಾ ಪಂಡಿತರಾಗಿದ್ದರು.
     ಸಂಸ್ಕøತ ಭಾಷೆಯ ಅಭಿವೃದ್ಧಿಗಾಗಿ 'ಆರ್ಯ ಧರ್ಮೋಜೀವಿನಿ ಸಭಾ' ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿಯೂ ಧಕ್ಷತೆಯಿಂದ ಕಾರ್ಯನಿರ್ವಹಿಸಿದ ಕೀರ್ತಿ ಶಾಮಾಶಾಸ್ತ್ರಿಗಳದ್ದು.
      ಶಾಮಾ ಶಾಸ್ತ್ರಿಗಳು ಭಾಷಾಭಿವೃದ್ಧಿಗಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಮನಗಂಡ ಅಮೇರಿಕದ ವಾಷಿಂಗ್‍ಟನ್ ವಿಶ್ವವಿದ್ಯಾಲಯಕ್ಕೆ ಸೇರಿದ ಓರಿಯಂಟಲ್ ಯೂನಿವರ್ಸಿಟಿಯ ಫಿಲಾಸಫಿಕಲ್ ಎಂಬ ಸಂಸ್ಥೆ 1919 ರಲ್ಲಿ ಪಿ.ಎಚ್.ಡಿ. ಪದವಿ ಕೊಟ್ಟು ಗೌರವಿಸಿದೆ. 1921ರಲ್ಲಿ ಮುಂಬೈನ ರಾಯಲ್ ಏಷಿಯಾಟಿಕ್ ಸೊಸೈಟಿ ಯುಕಾಂಪ್‍ಬೆಲ್ ಸ್ಮಾರಕ ಚಿನ್ನದ ಪದಕ ಕೊಟ್ಟು ಗೌರವಿಸಿದೆ. 1921ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯವು ಡಾಕ್ಟರ್ ಫಿಲಾಸಫಿ ಪದವಿ ನೀಡಿ ಗೌರವಿಸಿದೆ.
     ಮೈಸೂರು ಮಹಾರಾಜರಿಂದ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಪಡೆದ ಶಾಮಾಶಾಸ್ತ್ರಿಗಳಿಗೆ ಆಗಿನ ಬ್ರಿಟೀಷ್ ಸರಕಾರ ಮಹಾಮಹೋಪದ್ಯಾಯ ಪ್ರಶಸ್ತಿ ನೀಡಿತು. ಹಾಗೆಯೇ ಕಾಶಿಯ ಭಾರತ ಧರ್ಮ ಮಹಾಮಂಡಲದಿಂದ ವಿದ್ಯಾಲಂಕಾರ ಬಿರುದು, ಪಂಡಿತ ರಾಜ ಬಿರುದು ಪಡೆದ ಇವರು ಇವುಗಳಲ್ಲದೇ ಅನೇಕ ಗೌರವ, ಪ್ರಶಸ್ತಿ, ಪುರಸ್ಕಾರ, ಬಿರುದು, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
    ಬಹುಭಾಷಾ ಪ್ರಾಬಲ್ಯರಾಗಿ ಸಾಹಿತ್ಯ ಕೀರ್ತಿ ಸಂಪಾದಿಸಿದ್ದ ಆರ್. ಶಾಮಾಶಾಸ್ತ್ರಿಗಳು 1944 ಜನವರಿ 23ರಂದು ಇಹಲೋಕ ತ್ಯಜಿಸಿದರು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ