ವಸಂತ ವನದಲಿ ಕೂಗುವ ಕೋಗಿಲೆ
ರಾಜನ ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ... (ಪಾಂಚಜನ್ಯ – ಕುವೆಂಪು)
ಶ್ರೀಯುತ ಸಾ.ಶಿ. ಮರಳಯ್ಯನವರು ಕ್ರಿ.ಶ 1931 ಜನವರಿ 28 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದ ಶ್ರಿ ಶಿವರುದ್ರಯ್ಯ ಮತ್ತು ಶ್ರಿಮತಿ ಸಿದ್ದಮ್ಮ ದಂಪತಿಗಳ ಪುಣ್ಯ ಗರ್ಭಾಂಬುದಿಯಲ್ಲಿ ಜನಿಸಿದರು.
ಶೆಟ್ಟಿಕೆರೆಯಲ್ಲಿ ಮಾಧ್ಯಮಿಕ ಶಿಕ್ಷಣ, ತಿಪಟೂರಿನಲ್ಲಿ ಪ್ರೌಢಶಿಕ್ಷಣ, ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ಇವರು ಆರ್ಥಿಕ ದುಸ್ಥಿತಿಯಿಂದ ಮುಂದೆ ಓದಲಾಗದೆ ಮ್ಯಾಂಗನಿಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತ ಹುದ್ದೆ ಸೇರಿ. ಬಂದ ಪಗಾರವನ್ನು ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡರು. ಅಲ್ಲಿ ಡಿ.ಎಲ್.ಎನ್, ದೇಜಗೌ, ತ.ಸು ಶಾಮರಾಯರು, ಎಸ್.ವಿ ರಂಗಣ್ಣ, ಎಸ್.ವಿ ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ ದೊರೆತರೂ ಪೂರ್ಣ ಮುಗಿಸಲಾಗದೇ ಪುನಃ ಚಾಮರಾಜನಗರ ಕಾಲೇಜಿನಲ್ಲಿ ಅರೆಕಾಲಿಕ ಉಪಾಧ್ಯಾಯ ವೃತ್ತಿ ಆರಂಭಿಸಿ, ವಿದ್ಯಾಭ್ಯಾಸ ಮುಂದುವರೆಸಿ 1956 ರಲ್ಲಿ ಎಂ.ಎ ಪದವಿ ಪಡೆದರು. ನಂತರ ಬೋಧನೆ ವೃತ್ತಿ ಆರಂಭಿಸಿದ ಇವರು ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರಿಗೆ ವರ್ಗಾವಣೆಯಾದ ಇವರು ಅಲ್ಲಿಯೂ ಆದರ್ಶವಾಗಿಯೇ ಬದುಕು ಕಟ್ಟಿಕೊಂಡರು. ಮುಂದೆ ಬಡ್ತಿ ಹೊಂದಿ ತುಮಕೂರು ನಂತರ ಚನ್ನಪಟ್ಟಣಗಳಲ್ಲಿ ಪ್ರಾಂಶುಪಾಲರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಅಲ್ಲಿಂದ ಮಂಗಳೂರಿಗೆ ವರ್ಗವಾಗಿ ಪುನಃ ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕಗೊಂಡು ಬೆಂಗಳೂರಿಗೆ ಬಂದರು.
1971 ರಲ್ಲಿ ಇವರು ಬರೆದ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ.
ಡಾ. ಸಾ.ಶಿ. ಮರಳಯ್ಯನವರು ಉತ್ತಮ ಬೋಧಕರಾಗಿ ಖ್ಯಾತಿವೆತ್ತವರು. ಇವರು ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮಾದರಿ ಸೇವೆಗೈದಿದ್ದಾರೆ.
ಬೋಧನೆಯು ವೃತ್ತಿಯ ಜೊತೆ ಜೊತೆಗೆ ಸಾಹಿತ್ಯವೆಂಬ ಗೀಳನ್ನು ಅಂಟಿಸಿಕೊಂಡು ಡಾ. ಸಾ.ಶಿ ಮರಳಯ್ಯನವರು 1989 -90ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಗಳಾದರು. ನಂತರ 1995 ಜೂನ್ ನಲ್ಲಿ ಅಧ್ಯಕ್ಷ ಹುದ್ದೇಗೆರಿ 1998ರವರೆಗೆ ದಕ್ಷತೆಯಿಂದ ನಾಡು ನುಡಿಯ ಹಿತಕ್ಕಾಗಿ ದುಡಿದರು.
ಹಲವಾರು ಗ್ರಂಥಗಳ ಸಂಪಾದನೆ, ಕಾವ್ಯ, ಕಾದಂಬರಿ ವಿಮರ್ಶಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಇವರು ಸಾಕಷ್ಟು ಕೃತಿ ರತ್ನಗಳನ್ನು ಕನ್ನಡ ಸಾರಸ್ವತ ಕಣಜಕ್ಕೆ ನೀಡಿದ್ದಾರೆ. ಬನವಾಸಿ, ಬಾದಾಮಿ, ಉಡುಪಿ ಮುಂತಾದ ವಿಷಯಗಳ ಕುರಿತ ಅತ್ಯುತ್ತಮ ನೃತ್ಯ ರೂಪಕಗಳನ್ನು ರಚಿಸಿದ್ದಾರೆ. ಇವರ ‘ಸ್ನೋವೈಟ್’ ಪ್ರಖ್ಯಾತಿ ಪಡೆದ ನೃತ್ಯ ರೂಪಕವಾಗಿದೆ.
ಬೃಂದಾವನ ಲೀಲೆ, ವಿಪರ್ಯಾಸ, ಶಿವತಾಂಡವ, ರಾಸಲೀಲೆ, ಕೆಂಗನಕಲ್ಲು ರೂಪಸಿ ಕಾವ್ಯಕೃತಿಗಳು. ಇವುಗಳಲ್ಲಿ ‘ಕೆಂಗನಕಲ್ಲು’ ಎಂಬ ಕವನ ಸಂಕಲನ ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದಿದೆ. ಇವರ ‘ಬಾರೋ ಮೈಲಾರಕ್ಕೆ’ ಸಂಕಲನದಲ್ಲಿನ ಗೀತೆಗಳನ್ನು ವರನಟ ಡಾ. ರಾಜಕುಮಾರ್ ಹಾಡಿದ್ದಾರೆ.
ಮನಿಷಾ, ಪುರುಷ ಸಿಂಹ, ಹೇಮಕೂಟ ಸಾಮರಸ್ಯದ ಶಿಲ್ಪಿ ಮುಂತಾದ ಕಾದಂಬರಿಗಳು; ವಿಜಯವಾತಾಪಿ ಎರಡು ನಾಟಕಗಳು, ಮರಿಬೇಡಿ-ಮುಂತಾದ ನಾಟಕಗಳು. ‘ನೆಲದ ಸೊಗಡು’ ಇವರ ಪ್ರಖ್ಯಾತ ಕಥಾ ಸಂಕಲನ.
‘ಬಾಸನ ಮಕ್ಕಳು’, ಮಾಸ್ತಿಯವರ ಕಾವ್ಯ ಸಮೀಕ್ಷೆ, ಅಭಿವ್ಯಕ್ತÀ, ‘ಅನುಶೀಲನ’ ಮುಂತಾದ ವಿಮರ್ಶಾ ಕೃತಿಗಳು. ಇವುಗಳಲ್ಲಿ ‘ಬಾಸನ ಮಕ್ಕಳು’ ವಿಮರ್ಶಾ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಲಭಿಸಿದೆ.
‘ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತರು’ ಇವರ ಬೃಹತ್ ಕೃತಿಯಾಗಿದೆ. ಸುಮಾರು 630 ಪುಟಗಳ ಎ 4 ಅಳತೆಯ ಈ ಕೃತಿಯು 1965 ರಿಂದ 2002ರ ವರೆಗಿನ ಭಾರತೀಯ ಜ್ಞಾನಪೀಠ ಪುರಸ್ಕøತರ ಸಕಲ ಮಾಹಿತಿಗಳನ್ನು ತಿಳಿಸಿಕೊಡುವುದರ ಜೊತೆಗೆ, ಆ ಸಂಸ್ಥೆಯ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಕೃತಿ ಕುರಿತು 1994 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಯು.ಆರ್. ಅನಂತಮೂರ್ತಿಯವರು ಬೆನ್ನುಡಿಯಲ್ಲಿ ಕೃತಿ ಕುರಿತು ಹೀಗೆ ಹೇಳಿದ್ದಾರೆ.-“ಗೆಳೆಯರಾದ ಡಾ. ಸಾ.ಶಿ ಮರಳಯ್ಯನವರು ಭಾರತದ ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ತರುತ್ತಿರುವ ಈ ಪುಸ್ತಕ ಅಗಾಧವಾದ ಪರಿಶ್ರಮ ಮತ್ತು ಪ್ರೀತಿಯಿಂದ ಹೊರಬಂದಿದೆ. ಎಲ್ಲ ಭಾಷೆಗಳ ಪ್ರಶಸ್ತಿ ವಿಜೇತರು ಆಡಿರುವ ಮಾತುಗಳನ್ನು ಓದುತ್ತಹೋದರೆ ಅವರ ಬಗ್ಗೆ ಪ್ರಶಸ್ತಿಯ ಸಂದರ್ಭದಲ್ಲಿ ಮಾಡಿರುವ ವ್ಯಾಖ್ಯಾನವನ್ನು ಗಮನಿಸಿದರೆ ಇಡೀ ಭಾರತೀಯ ಸಾಹಿತ್ಯದ ಒಂದು ರಸವತ್ತಾದ, ಸಂಕ್ಷಿಪ್ತವಾದ ಚರಿತ್ರೆ ದೊರೆತಂತೆ ಆಗುತ್ತದೆ. ಯಾವ ವಿವೇಕಶಾಲಿಯಾದ ಓದುಗನೂ ಆಯಾ ಸಾಹಿತ್ಯದ ದೊಡ್ಡ ಲೇಖಕರು ಈ ಪ್ರಶಸ್ತಿ ವಿಜೇತರಷ್ಟೇ ಎಂದು ತಿಳಿಯಲಾರರು. ಕನ್ನಡದಲ್ಲಂತೂ ಪ್ರಶಸ್ತಿ ವಿಜೇತನಾದ ನಾನೇ ಹೇಳಬಹುದಾದ ಸತ್ಯದ ಮತೊಂದಿದೆ. ನನಗಿಂತ ಹಿರಿಯರಲ್ಲೂ, ನನ್ನ ಸಮಕಾಲೀನರಲ್ಲೂ ಈ ಪ್ರಶಸ್ತಿಗೆ ಅರ್ಹರಾದ, ನಾನು ಬಹುವಾಗಿ ಮೆಚ್ಚುವ, ನನಗೆ ಬರೆಯುವುದನ್ನು ಕಲಿಸಿರುವ ದೊಡ್ಡ ಲೇಖಕರು ಇದ್ದಾರೆ. ಈ ವ್ಯಾಪಕತೆಯನ್ನು ಪ್ರತಿ ಸಾಹಿತ್ಯದಲ್ಲೂ ಕಲ್ಪಿಸಿಕೊಂಡು ಓದಿದಲ್ಲಿ ಡಾ ಮರುಳಯ್ಯನವರ ಪರಿಶ್ರಮದಿಂದಲೂ, ಪ್ರೀತಿಯಿಂದಲೂ ಹೊಮ್ಮಿರುವ ಈ ಕೃತಿ ತೌಲನಿಕ ಸಾಹಿತ್ಯ ವಿಮರ್ಶೆಗೆ ಅಗತ್ಯವಾದ ಗ್ರಂಥವಾಗಿ ಕಾಣುತ್ತದೆ. ಭಾರತದ ಸಾಹಿತ್ಯದ ಅಗಾಧಕತೆಗೂ, ವೈವಿಧ್ಯಕ್ಕೂ ಕನ್ನಡಿಯಾಗುತ್ತದೆ’.
ಈ ಕೃತಿ ರಚನೆಯಲ್ಲಿ ಡಾ. ಸಾ. ಶಿ ಮರುಳಯ್ಯನವರು ವಹಿಸಿದ ಪರಿಶ್ರಮ ಅಗಾಧವಾದದ್ದು. ನಿಜಕ್ಕೂ ಹತ್ತಾರು ಕೃತಿಗಳಿಗೆ ಇದೊಂದು ಸಮವಾಗಿ ನಿಲ್ಲಬಲ್ಲುದು. ನನಗೆ ಮೊದಲು ಇವರ ಕೃತಿಗಳಲ್ಲಿ ಓದಲು ದೊರಕಿದ್ದೇ ಈ ಕೃತಿ. ತದನಂತರ ಇವರ ಇತÀರ ಕೃತಿಗಳೆಡೆ ನನ್ನ ಗಮನ ಹರಿದದ್ದು. ಇವರ ಭಾರತೀಯ ಜ್ಞಾನ ಪೀಠ ಪುರಸ್ಕøತಿಯ ಕೃತಿಯನ್ನು ಸುಮಾರು ನಾಲ್ಕೈದು ಬಾರಿ ತಿರುವಿಹಾಕಿದ್ದೇನೆ. ಇನ್ನು ಓದಬೇಕೆನಿಸುತ್ತದೆ. ಅಷ್ಟೊಂದು ಅಗಾಧ ಜ್ಞಾನ ತುಂಬಿರುವ ಕೃತಿ ರತ್ನವಿದು. ಪ್ರತಿಯೊಬ್ಬ ಸಾಹಿತಿ ಓದಲೇಬೇಕಾದ ಕೃತಿ ಇದು ಎಂದರೆ ಅತಿಶಯೋಕ್ತಿಯಾಗಲಾರದು. ನನ್ನ ಗಮನ ಸೆಳೆದ ಕೆಲವೇ ಕೆಲವು ಕನ್ನಡ ಕೃತಿಗಳಲ್ಲಿ ಇದೂ ಒಂದು.
ಇವರ ಅನುಪಮ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಚ್. ನರಸಿಂಹಯ್ಯ ಪ್ರಶಸ್ತಿ ಪ್ರಮುಖವಾವುಗಳು, ಇವರ ಹಿತೈಷಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಇವರಿಗೆ ‘ಇಷಾಂಶು ಮತ್ತು ಅಭಿಜ್ಞ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಹಂಪಿನಗರದಲ್ಲಿರುವ ‘ರಾಗಿಣಿ’ ನಿಲಯದಲ್ಲಿ ವೃತ್ತಿಯಿಂದ ನಿವೃತ್ತಿ ಜೀವನ ಸಾಗಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಸದಾ ನಿರತರಾಗಿರುವುದು ಶ್ಲಾಘನೀಯ. 84 ರ ವಯೋಮಾನದ ಈ ಹಿರಿಯ ದಿಗ್ಗಜ ಸಾಹಿತಿ ಕನ್ನಡವೇ ನಮ್ಮ ಶಕ್ತಿ, ಕನ್ನಡದಿಂದಲೇ ಮುಕ್ತಿ, ಕನ್ನಡವೇ ನಮ್ಮ ನಾಡಿ, ನಮ್ಮ ಹೃದಯ ಧಮನಿ ದುಡಿ ಎಂದು ನಿತ್ಯ ಪಲ್ಲವಿಸುವಂತೆ ಪ್ರೇರೇಪಿಸುತ್ತಾ, ಕಿರಿಯರಿಗೆ ಮಾರ್ಗ ದೀವಿಗೆಯಾಗಿ, ಸಮಕಾಲೀನರಿಗೆ ಆದರ್ಶಮಯವಾಗಿ, ಹಿರಿಯರಿಗೆ ಕೃತಜ್ಞಾ ಚೇತನದ ಚಿಲುಮೆಯಾಗಿರುವ ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಅಜಾತಶತೃವಾಗಿ ನಿಲ್ಲುತ್ತಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ