ಡಾ|| ಮಳಲಿ ವಸಂತಕುಮಾರ್ ರವರ ಸಮಗ್ರ ಸಾಹಿತ್ಯವನ್ನು ಅವಲೋಕಿಸಿದಾಗ ಅವರು ನಾಟಕ ಸಾಹಿತ್ಯಕ್ಕೆ ವಿಶೇಷ ಒಲವು ತೋರಿರುವುದು ಮನನವಾಗುತ್ತದೆ, ಕನ್ನಡ ನಾಟಕ ಪರಂಪರೆಯನ್ನು ಕುರಿತು ಚರ್ಚಿಸುವಾಗಲೂ ಮಳಲಿಯವರ ನಾಟಕಗಳು ಮಹತ್ವವನ್ನು ಪಡೆದು ಕೊಳ್ಳುತ್ತವೆ.
ಡಾ|| ಮಳಲಿಯವರು ಈಗಾಗಲೇ ‘ಯಮಧರ್ಮ’, ‘ಲಂಕೇಶ್ವರ’, ‘ಶರ್ಮಿಷ್ಠೆ’ ಯಂತಹ ಉತ್ಕøಷ್ಟ ನಾಟಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಶ್ರೀಮಂತಗೊಳಿಸಿದ್ದಾರೆ. ಇವರ ‘ಲಂಕೇಶ್ವರ’ ಹಾಗೂ ‘ಶರ್ಮಿಷ್ಠೆ’ ನಾಟಕಗಳ ರಂಗ ಪ್ರಯೋಗಗಳನ್ನು ವಿಶ್ಲೇಷಿಸಿದ್ದೇನೆ. ಅವುಗಳಲ್ಲಿ ‘ಶರ್ಮಿಷ್ಠೆ’ ನಾಟಕದ ಕುರಿತು ವಿಶ್ಲೇಷಣೆಯನ್ನೂ ಮಧ್ಯಮಗಳಿಗೆ ಮಾಡಿದ್ದೆ. ಇವರ ನಾಟಕಗಳು ಪುರಾಣ ಮತ್ತು ಇತಿಹಾಸಗಳನ್ನೊಳಗೊಂಡ ವೈಚಾರಿಕ ನೆಲೆಗಟ್ಟಿನಲ್ಲಿ ರಚಿತವಾದವುಗಳೆಂದು ಹೇಳಬಹುದು, ಇತ್ತೀಚೆಗೆ ಬಿಡುಗಡೆಯಾದ ಇವರ ಇನ್ನೊಂದು ನಾಟಕ ‘ಕಚ ಸಂಜೀವಿನಿ’.
‘ಶರ್ಮಿಷ್ಠೆ’ ಹಾಗೂ ‘ಕಚ ಸಂಜೀವಿನಿ’ ನಾಟಕಗಳು ಒಂದೇ ಕಥಾ ಹಂದರವನ್ನು ಒಳಗೊಂಡರೂ ಪಾತ್ರಗಳ ವೈಶಿಷ್ಟವು ಭಿನ್ನವಾಗಿವೆ. ರನ್ನನ ‘ಸಾಹಸಭೀಮ ವಿಜಯ’ ಹಾಗೂ ಪಂಪನ ‘ವಿಕ್ರಮಾರ್ಜುನ ವಿಜಯ’ ಕೃತಿಗಳ ಕಥಾ ಹಂದರ ಮಹಾಭಾರತವೇ ಆದರೂ ರನ್ನನಿಗೆ “ಭೀಮ’ ನಾಯಕನಾಗಿ ಕಂಡರೆ, ಪಂಪನಿಗೆ ‘ಅರ್ಜುನ’ ನಾಯಕನಾಗಿ ಗೋಚರಿಸುತ್ತಾನೆ. ಅಲ್ಲಿ ಲೇಖಕರೂ ಭಿನ್ನ, ದೃಷ್ಠಿಕೋನವೂ ಭಿನ್ನವಾಗಿತ್ತು. ಆದರೆ ಇಲ್ಲಿ ಲೇಖಕರೊಬ್ಬರೆ ದೃಷ್ಟಿಕೋನಗಳು ಮಾತ್ರ ಭಿನ್ನವಾಗಿರುವುದನ್ನು ಕಾಣುತ್ತೇವೆ. ಇದೇ ಕಥೆಯನ್ನು ಆಯ್ದುಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ|| ಗಿರೀಶ್ ಕಾರ್ನಾಡರಿಗೆ ‘ಯಯಾತಿ’ ನಾಯಕರಾಗಿ ಕಾಣುವುದು ವಿಶೇಷ. ಆದರೆ ಡಾ. ಮಳಲಿಯವರು ಪ್ರತಿ ಪಾತ್ರಗಳಲ್ಲೂ ಒಳಗಿಳಿದು ಭಿನ್ನತೆ ಕಾಣುವ ವೈಶಿಷ್ಟ್ಯತೆ ಹಾಗೂ ಆ ಪಾತ್ರಗಳನ್ನು ಮೇರುಸ್ತರದಲ್ಲಿ ನಿಲ್ಲಿಸುವ ಪರಿ ಅಮೋಘವಾದುದು. ಆದ್ದರಿಂದಲೆ ಅವರ ನಾಟಕಗಳಿಗೆ ಕನ್ನಡ ನಾಟಕ ಚರಿತ್ರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಮಳಲಿಯವರ ಪ್ರಗತಿಪರ ವೈಚಾರಿಕ ಪ್ರಜ್ಞೆ ದಟ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ‘ಶರ್ಮಿಷ್ಠೆ’ ಹಾಗೂ ‘ಕಚ ಸಂಜೀವಿನಿಯಲ್ಲಿ’ ವೈದಿಕ ಧರ್ಮದ ಪುರೋಹಿತಶಾಹಿ ಹಾಗೂ ಶೂದ್ರರ ನಡುವಿನ ಪ್ರಾಸಂಗಿಕತೆಗಳನ್ನು ಲೇಖಕರು ಸೊಗಸಾಗಿ ರೂಪುಗೊಳಿಸಿದ್ದಾರೆ.
84 ಪುಟಗಳ, 70 ರೂಪಾಯಿ ಮುಖ ಬೆಲೆಯ ಈ ಕೃತಿಯನ್ನು ಮೈಸೂರಿನ ‘ವಿದ್ಯುತ್ ಪ್ರಕಾಶನ’ ಹೊರತಂದಿದ್ದು ಮುಖ ಪುಟ ಸುಂದರವಾಗಿ ಮೂಡಿಬಂದಿದೆ.
ದೇವದಾನವ ರಣರಂಗ ಮಾನವಹೃದಯ|
ಭಾವರಾಗ ಹಟಂಗಳವರ ಸೇನೆಗಳು||
ಭೂಮಿಭವಜಯಗಳ ಬ್ರಾಂತಿಯಲಿ ಮರೆಯುವರು|
ಜೀವನಾಮೃತವನವರು ಮಂಕುತಿಮ್ಮ||
ಅಂದರೆ ಮಾನವ ಹೃದಯ ದೇವದಾನವ ರಣರಂಗವಗಿದೆ. ಭಾವ ಹಗೆ ಛಲಗಳೇ ಅವರ ಸೇನೆಯಾಗಿವೆ; ಭೂಮಿ, ಭವಜಯಗಳ ಬ್ರಾಂತಿಯಲ್ಲಿ ಜೀವನಕ್ಕೆ ಅಗತ್ಯವಾದ ಅಮೃತವನ್ನೇ ಮರೆಯುವರು ಎನ್ನುವಂತೆ ಈ ನಾಟಕವೂ ಸಹ ಸಾಕ್ಷಿಯಾಗಿ ನಿಲ್ಲುತ್ತದೆ.
ಶುಕ್ರಾಚಾರ್ಯರೆ ಹೇಳುವಂತೆ “ನೇರ ನಡೆ-ನುಡಿಯೇ ಕಚನ ವಿಶೇಷ! ಆದರೆ ಕಚ ಸ್ವಹಿತ ಸಾಧಕನಲ್ಲ. ದೇವದಾನವ-ಮಾನವರೆಲ್ಲರಿಗೂ ಒಳಿತಾಗಬೇಕೆಂಬುದು ಅವನ ಬಯಕೆ! ಅವನು ಸರ್ವಹಿತಕರ ಮನೋಧರ್ಮಿ”.
‘ಶರ್ಮಿಷ್ಠೆ’ ನಾಟಕದಲ್ಲಿ ಶರ್ಮಿಷ್ಠೆ ಹಾಗೂ ದೇವಯಾನಿಯರು ಸಂಧಿಸುವ ಪ್ರಸಂಗಗಳು ಪ್ರಧಾನವಾಗಿ ಬರುವುದರೊಂದಿಗೆ ರಾಜಕುಮಾರಿಯಾದ ‘ಶರ್ಮಿಷ್ಠೆ’ ಕಾಲಸನ್ನಿವೇಶಕ್ಕೆ ತುತ್ತಾಗಿ ದೇವಯಾನಿಯ ದಾಸಿಯಾಗಿ ಪರಿತಪಿಸಿ, ಮಾನವಿಯ ಮೌಲ್ಯಗಳಲ್ಲರಳಿ ನಾಯಕಿಯಾದರೆ, ಇಲ್ಲಿ ಅವರೀರ್ವರ ಪ್ರಸಂಗಗಳು ಗೌಣವಾಗಿ ಗುರು-ಶಿಷ್ಯರ ಹಾಗೂ ದೇವಯಾನಿಯನ್ನು ಸರಿದಾರಿಗೆ ತರುವಲ್ಲಿ ಹೋರಾಡುವುದರ ಜೊತೆಗೆ, ‘ಶರ್ಮಿಷ್ಠೆಗೆ ಸುಂದರ ಬದುಕನ್ನು ದೊರಕಿಸಿಕೊಡುವ ಹೊಣೆಗಾರಿಕೆಯನ್ನು ನಿರ್ವಹಿಸುವ ‘ಕಚ’ ನೇ ನಾಯಕನಾಗಿ ನಿಲ್ಲುತ್ತಾನೆ.
‘ಶರ್ಮಿಷ್ಠೆ’ ಹಾಗೂ ‘ದೇವಯಾನಿ’ ಗೆ ‘ಯಯಾತಿ’ ಒಬ್ಬನೇ ಪತಿಯಾದರೂ ರಕ್ಕಸಮನಸ್ಸಿನ ‘ದೇವಯಾನಿ’, ರಾಜಗುಣದ ‘ಶರ್ಮಿಷ್ಠೆ’ ನಡುವೆ ಬಾಳದೋಣಿಯನ್ನು ಸಾಗಿಸುವ ಪರಿಯನ್ನು ಲೇಖಕರು ಸೊಗಸಾಗಿ ಚಿತ್ರಿಸಿದ್ದಾರೆ.
ಡಾ.ಮಳಲಿಯವರೇ ತಮ್ಮ ಪ್ರಸ್ತಾವನೆಯಲ್ಲಿ ಹೇಳಿರುವಂತೆ- “ವಸ್ತು ಸ್ಥಿತಿಯಲ್ಲಿ ಕಚನ ವ್ಯಕ್ತಿತ್ವ ಇಲ್ಲಿನ ಎಲ್ಲಾ ಪಾತ್ರಗಳಿಗಿಂತ ಉನ್ನತವಾದುದು; ಆವನೊಬ್ಬ ಸಮದರ್ಶಿ; ದೂರದರ್ಶಿತ್ವವುಳ್ಳ ದಿವ್ಯಜ್ಞಾನಿ ಹೃದಯವಂತಿಕೆ, ಮಾನವೀಯತೆ, ಪ್ರೀತಿ, ಅನುಕಂಪಗಳುಳ್ಳ ಅವನು ನೊಂದವರ ಬಗ್ಗೆ ಕರುಣಾಮೂರ್ತಿ ಅಸಾಧಾರಣ ಬ್ರಹ್ಮಚಾರಿ. ಸಕಲ ಸದ್ಗುಣಶೀಲ ಸಂಪನ್ನ, ಅನುಪಮ ತ್ಯಾಗಿ, ಅವನು ಮಹಾನ್ ತಪಸ್ವಿಯೂ ಹೌದು ಮೇಲಾಗಿ ಲೌಕಿಕ ಚಿಂತಕನೂ ಹೌದು. ಅವನು ಸದಾ ಜಾಗೃತ ಮನಸ್ಸು, ಪಾವಿತ್ರ್ಯದ ತೇಜಸ್ಸು”.
ಈ ಮಾತನ್ನು ಬಹುಶ: ಇವರ ‘ಶರ್ಮಿಷ್ಠೆ’ನಾಟಕ ರಚನೆಯ ನಂತರ ಹೇಳಿದ್ದು ಅನ್ನಿಸುತ್ತದೆ. ಕರ್ನಾಡರ ‘ಯಯಾತಿ’ಯಲ್ಲಿ ಅಷ್ಟೇನೂ ಪ್ರಮುಖವಾಗದ ‘ಕಚ’ ಮಳಲಿಯವರ ‘ಶರ್ಮಿಷ್ಠೆ’ಯಲ್ಲಿ ಗೋಚರಿಸುತ್ತಾರೆ. ಅವರ ವ್ಯಕ್ತಿತ್ವಕ್ಕೆ ಮಾರುಹೋದ ಲೇಖಕರು ‘ಕಚ’ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ- “ಇಷ್ಟಾದರೂ ನಮ್ಮ ಲೇಖಕರು ಸಾಹಿತ್ಯ ರಚನೆಯಲ್ಲಿ ಯಯಾತಿ, ದೇವಯಾನಿ ಮತ್ತು ಶರ್ಮಿಷ್ಠೆಯರನ್ನು ಕೇಂದ್ರೀಕರಿಸಿ ವಿಜೃಂಭಣೆಗೊಳಿಸಿದಷ್ಟು ಕಚನನ್ನು ವೈಭವೀಕರಿಸಲಿಲ್ಲ. ಇದು ಏಕೆಂದು ಅರ್ಥವಾಗಲಿಲ್ಲ. ನಾನು ಶರ್ಮಿಷ್ಠೆ ನಾಟಕದ ರಚನೆಯಲ್ಲಿ ತೊಡಗಿದಾಗ ಈ ವಿಷಯ ಸ್ಪಷ್ಠವಾಯಿತು. ನಾನೂ ಸಹ ಕಚನನ್ನು ಒಂದು ಉಪಪಾತ್ರವಾಗಿ ಚಿತ್ರಿಸುವ ತಪ್ಪು ಮಾಡುತ್ತಿದ್ದೇನಲ್ಲ ಎನಿಸಿತು”.
ಈ ಆಲೋಚನೆಯೇ ಇಲ್ಲಿನ ‘ಕಚಸಂಜೀವಿನಿ’ ಹುಟ್ಟಿಗೆ ಕಾರಣವಾಯಿತೆನ್ನಬಹುದು ಮುನ್ನುಡಿಕಾರರಾದ ಡಾ. ಲೀಲಾಪ್ರಕಾಶ್ ರವರು ಹೇಳುವಂತೆ – “ಡಾ. ವಸಂತಕುಮಾರರು ಈ ಪುಟ್ಟನಾಟಕದಲ್ಲಿ ಅತ್ಯಂತ ಎಲ್ಲ ಭಾವಗಳನ್ನು ಮೂಡಿಸಿದ್ದಾರೆ. ಈ ನಾಟಕವು ಸಾರ್ವಕಾಲಿಕವಾಗಿಯೂ ಮೆಚ್ಚಾಗುವಂತೆ ರಚಿಸಿರುವುದು ಅವರ ನಾಟಕ ರಚನೆಯ ಪ್ರೌಢಿಮೆಯನ್ನು ನಿರೂಪಿಸುತ್ತದೆ. ಕೇವಲ ಎಂಟು ಪಾತ್ರಗಳಿಂದ ಅತ್ಯಂತ ಚಿತ್ತಾಕರ್ಷಕವಾಗಿ ಮಾನವರೆಲ್ಲರೂ ತಮ್ಮ ಅಂತರಂಗಶುದ್ದಿಯನ್ನು ಅವಲೋಕನ ಮಾಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ”.
ಒಟ್ಟಾರೆ ಹೇಳುವುದಾದರೆ ಡಾ. ಮಳಲಿ ವಸಂತಕುಮಾರ್ ರವರು ವಿಚಾರ ಹಾಗೂ ಹೃದಯ ಶ್ರೀಮಂತಿಕೆಯನ್ನು ಪ್ರಸ್ತುತ ನಾಟಕದಲ್ಲಿ ಪಲ್ಲವಿಸಿದ್ದಾರೆ. ಶರ್ಮಿಷ್ಠೆ ಹೃದಯ ವಿಸ್ತಾರದ ಗುಣೊತ್ಕಾರ್ಷದಿಂದ ಪ್ರಜ್ವಲಿಸಿದರೆ, ದೇವಯಾನಿ ಗರ್ವ, ದುರಭಿಮಾನದ ವಿಪ್ರಕನ್ಯೆಯಾಗಿ ಬಿಂಬಿತವಾಗುತ್ತಾಳೆ. ಇನ್ನು ‘ಕಚ’ ದೇವದಾನವರನ್ನೆಲ್ಲ ಮೀರಿ ಸಕಲ ಜೀವಸಂಕುಲಗಳ ಹಿತೈಷಿಯಾಗಿ, ಸದ್ವಿನಯ ಸಂಪನ್ನನಾಗಿ, ಸಕಲ ಪಾರಂಗತನಾಗಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಮಾನವೀಯ ಮೌಲ್ಯಾಧಾರಕನಾಗಿ ಕಂಗೊಳಿಸುತ್ತಾನೆ.
ಪ್ರಗತಿಪರ ಹಾಗೂ ವೈಚಾರಿಕ ಚಿಂತಕರಾದ ಡಾ. ಮಳಲಿ ವಸಂತಕುಮಾರ್ರವರು ಹಳೆಯ ಕಥಾ ಹಂದರವನ್ನೆ ಆಯ್ದುಕೊಂಡು ಪುರಾಣೇತಿಹಾಸಗಳ ಸಮ್ಮಿಲನಗೊಳಿಸಿ, ನಾವಿನ್ಯತೆಯ ಮೂಸೆಯಲ್ಲಿ ‘ಕಚ’ನನ್ನು ನಾಯಕನನ್ನಾಗಿ ಬಿಂಬಿತಗೊಳಿಸಿ ಹೊಸ ಆಲೋಚನೆಗಳತ್ತ ಕನ್ನಡ ಸಾಹಿತ್ಯದ ನಾಟಕಕಾರರು ಹಾಗೂ ಓದುಗ, ವಿಮರ್ಶಕರ ಮನಸ್ಸನ್ನು ಹರಿಸಿದ್ದಾರೆ. ಅವರು ಪಾತ್ರಗಳೊಂದಿಗೆ ಲೀಲಾಜಾಲವಾಗಿ ವ್ಯವಹರಿಸುವ ಪರಿ, ಆಧುನಿಕ ಭಾವ-ಭವ್ಯತೆಗಳೊಂದಿಗೆ ಸಮೀಕರಿಸುವ ಚಕ್ಯತೆ ಅಗಮ್ಯ.
ಈ ಕೃತಿಯ ಬೆನ್ನುಡಿಯಲ್ಲಿ ಖ್ಯಾತ ಅಷ್ಟಾವಧಾನಿಗಳಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಉಲ್ಲೇಖಿಸಿದಂತೆ- “ಜಗದಗಲ ವೈರವೆಂಬ ವೈರಾಣುವೇ ತುಂಬಿಕೊಂಡು ಪ್ರಕ್ಷುಬ್ಧಗೊಳ್ಳುತ್ತಿರುವ ಸಮಕಾಲೀನ ಸಂದರ್ಭಕ್ಕೂ ಈ ಸಂಜೀವಿನಿಯ ಸಂಪ್ರೋಷಣೆಯಾಗಬೇಕಾಗಿದೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ‘ಕಚನ’ಕಾಂಕ್ಷೆ ಮತ್ತೆ ನಮ್ಮಲ್ಲಿ ಮೊಳಕೆಯೊಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಉತ್ತಮ ನಾಟಕ ಕೃತಿ. ಮತ್ತೆ ಮತ್ತೆ ಓದಿಸಿಕೊಂಡು ಅಂತರಂಗದಲ್ಲಿ ಅಭಿನೀತಗೊಳ್ಳುವ ಆರ್ಷೇಯ ಮೌಲ್ಯದ ಆಚಾರ್ಯಕೃತಿ”.
ಅಂತೆಯೇ ಇವರ ಲೇಖನಿಯಿಂದ ಇನ್ನೂ ಉತ್ತಮೊತ್ತಮ ನಾಟಕರತ್ನಗಳನ್ನು ಕನ್ನಡ ಸಾಹಿತ್ಯ ಕಣಜಕ್ಕೆ ಹರಿದುಬರಲೆಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ,
ಹಾಸನ-573201
ಮೊ-9483470794,9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ