ಶನಿವಾರ, ನವೆಂಬರ್ 8, 2014

ಕನ್ನಡದ ಪ್ರಬುದ್ಧ ಪ್ರಬಂಧಕಾರ-ಪ್ರೊ.ಅ.ರಾ.ಮಿತ್ರ - ಕೊಟ್ರೇಶ್ ಎಸ್. ಉಪ್ಪಾರ್


   ಪ್ರಬುದ್ಧ ಪ್ರಬಂಧಕಾರರು, ಭಾಷಣಕಾರರು, ಮಾತಿನ ಮೋಡಿಗಾರರೂ ಆದ ಪ್ರೋ. ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರರು ಪ್ರೊ.ಅ.ರಾ. ಮಿತ್ರರೆಂದೆ ಖ್ಯಾತಿ ಪಡೆದವರು. ಅ.ರಾ. ಮಿತ್ರ ರವರು ಕ್ರಿ.ಶ 1935 ಫೆಬ್ರವರಿ 25 ರಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದರು. ಹುಟ್ಟಿದ್ದು ಬೇಲೂರಿನಲ್ಲಾದರೂ ಇವರು ಹಾಸನ, ಅರಸೀಕೆರೆ, ಕೋಲಾರ, ಮೈಸೂರುಗಳಲ್ಲಿ ತಮ್ಮ ವಿಧ್ಯಾಭ್ಯಾಸ ಪೂರೈಸಿದರು.
    ಪ್ರೌಢಶಾಲೆ ಶಿಕ್ಷಣ ಪಡೆದ ನಂತರ ಕೋಲಾರದ ಕಾಲೇಜಿಗೆ ಇಂಟರ್ ಮೀಡಿಯಟ್ ಸೇರಿದ ಇವರಿಗೆ ಪ್ರಸಿದ್ದ ಸಾಹಿತಿ ಹಾಗೂ ಬೋಧಕರಾದ ಪ್ರಭುಶಂಕರ್ ರವರು ಅಧ್ಯಾಪಕರಾಗಿ ದೊರೆತದ್ದು ಪುಣ್ಯವೇ ಸರಿ. ಓದಿನಲ್ಲಿ ಅಷ್ಟೊಂದು ಆಸಕ್ತಿ ಇರದ ಇವರು ಗುರುಗಳ ಪ್ರಭಾವದಿಂದ ಸಾಹಿತ್ಯ ಕ್ಷೇತ್ರದತ್ತ ಹೊರಳಿದರು, ಅಲ್ಲದೇ ಪ್ರಭುಶಂಕರ್ ರವರ ಉಪನ್ಯಾಸದ ಪರಿಣಾಮದಿಂದ ಓದಿನಲ್ಲಿಯೂ ಆಸಕ್ತಿ ಮೂಡಿದ್ದಲ್ಲದೇ ಹಾಸ್ಯ ಪ್ರಜ್ಞೆ ಬೆಳೆಯಲು ಕಾರಣವಾಯಿತೆನ್ನಬಹುದು.
    ಜನಪ್ರಗತಿಯ ಕಲ್ಲೇ ಶಿವೋತ್ತಮರಾವ್ ಹಾಗೂ ನಾಡಿಗೇರರಿಂದ ಹಾಸ್ಯ ಲೇಖನಗಳನ್ನು ಬರೆಯಲು ಪ್ರೇರಣೆ ಪಡೆದ ಇವರು ನಿತ್ಯ ಜೀವನದಲ್ಲಿನ ಅನೇಕ ಪ್ರಸಂಗಗಳನ್ನು ಹಾಸ್ಯ ಮಿಶ್ರಿತ ಲೇಖನಗಳನ್ನಾಗಿ ಬರೆಯುತ್ತಾ ಉತ್ತಮ ಹವ್ಯಾಸವಾಗಿಸಿಕೊಂಡರು.
    ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತ್ತರ ಪದವಿ ಪಡೆದ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಮಡಿಕೇರಿ, ತುಮಕೂರು, ಬೆಂಗಳೂರು ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪೂರೈಸಿ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
     ‘ಮಂತ್ರವಿಧÉ್ಯ’ ಇದು ಮಕ್ಕಳಿಗಾಗಿ ಬರೆದ ಆರೋಗ್ಯ ಗ್ರಂಥ ಇದನ್ನು ಅ.ರಾ. ಮಿತ್ರ ರವರು ತಮಿಳಿನಿಂದ ಅನುವಾದ ಮಾಡಿದ್ದಾರೆ. ಇವರ ಇನ್ನೊಂದು ಪ್ರಮುಖ ಕೃತಿ ‘ಛಂದೊಮಿತ್ರ’ , ಇದು ಛಂದಸ್ಸಿನ ಲಕ್ಷಣಗಳನ್ನು ಉದಾಹರಣೆಸಹಿತವಾಗಿ ಲಘು ಹಾಸ್ಯದ ಮೂಲಕ ಬರೆದ ಕೃತಿ . ‘ಪಂಪ ಭಾರತ ಸಂಗ್ರಹ’ ಇದು  ಇತರರೊಂದಿಗೆ ಸೇರಿ ಸಂಪಾದಿಸಿದ ಕೃತಿ.
    ‘ವಚನಕಾರರು ಮತ್ತು ಶಬ್ದಕಲ್ಪ’, ಒಳನೋಟಗಳು’ ಇವರ ಪ್ರಮುಖ ವಿಮರ್ಶಾಕೃತಿಗಳು. ‘ಅಜಿತ ಪುರಾಣ ಸಂಗ್ರಹ’ ಇದು ಇತರರೊಂದಿಗೆ ಸೇರಿ ತಂದ ಸಂಗ್ರಹ ಮತ್ತು ಗದ್ಯಾನುವಾದ ಕೃತಿಯಾಗಿದೆ.
    ಜರ್ಮನ್ ಸಂಪ್ರದಾಯ ದರ್ಪಣ, ಕಾಲಿಗುಲ ಮತ್ತು ತಪ್ಪಿದ ಎಳೆ, ‘ಶಿಕ್ಷಣ ಚಿಂತನ’ ಇವು ಇತರರೊಡಗೂಡಿ ಮಾಡಿದ ಪ್ರಮುಖ ಅನುವಾದ ಕೃತಿಗಳು. ‘ಬಾಲ್ಕಾನಿಯ ಬಂಧುಗಳು’ ಇದು 1968 ರಲ್ಲಿ ಎರಡನೆಯ ಮುದ್ರಣ ಕಂಡ ಪ್ರಬಂಧಗಳ ಸಂಗ್ರಹ ಕೃತಿಯಾಗಿದೆ. ಇದು ಒಳ್ಳೆಯ ಹೆಸರನ್ನು ತಂದು ಕೊಟ್ಟ ಕೃತಿ.
      ‘ಯಾರೋ ಬಂದಿದ್ದರು’ ಇವರು ಹಾಸ್ಯ ಮಿಶ್ರಿತ ಹರಟೆ ಲೇಖನಗಳ ಸಂಗ್ರಹವಾಗಿದೆ. ‘ಪುರಂದರ ಸಾಹಿತ್ಯ ದರ್ಶನ’ ಇವರ ಸಂಪಾದಿತ ಕೃತಿ. ‘ಕುಮಾರವ್ಯಾಸ ದರ್ಶನ’ , ‘ವಚನ ವ್ಯಾಖ್ಯಾನ’ ಇವು ಅ.ರಾ. ಮಿತ್ರ ರವರು ವಿವಿದೆಡೆ ಮಾಡಿದ ಉಪನ್ಯಾಸಗಳ ಸಂಗ್ರಹ ಮಾಲಿಕೆಗಳು.  ಅಲ್ಲದೆ ಇವರು ಮಾಡಿದ ವ್ಯಾಖ್ಯಾನ ಧ್ವನಿಸುರುಳಿಗಳೂ ಬಿಡುಗಡೆಗೊಂಡಿವೆ.
     ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕನ್ನಡ ನಾಡು-ನುಡಿ ಸೇವೆಗೈದ ಅ.ರಾ. ಮಿತ್ರರವರು ಕನ್ನಡ ಸಾರಸ್ವತ ಲೋಕಕ್ಕೆ ಅಗಾಧವಾದ ಕೃತಿ ರತ್ನಗಳನ್ನು ನೀಡಿದ್ದಾರೆ.
     ‘ಆರತಕ್ಷತೆ’  ಹಾಗೂ ‘ನಾನೇಕೆ ಕೊರೆಯುತ್ತೇನೆ’ ಇವು ಅ.ರಾ.ಮಿತ್ರ ರವರ ಸಮಗ್ರ ಪ್ರಬಂಧದ ಎರಡು ಸಂಪುಟಗಳು. ಪ್ರೇಮನದಿಯ ದಡಗಳಲ್ಲಿ ಇದು ಜಗತ್ತಿನ ಪ್ರಣಯ ಕಥೆಗಳ ಸಂಪುಟವಾಗಿದೆ. ಕುಮಾರವ್ಯಾಸ ಭಾರತ ಕಥಾಮಿತ್ರ ಇದು ಇತ್ತೀಚೆಗೆ ಬಿಡುಗಡೆಯಾದ ಬೃಹತ್ ಗದ್ಯಕೃತಿ.
     ಪ್ರೊ. ಅ.ರಾ. ಮಿತ್ರರವರು ಜನಿಸಿದ್ದು ಹಾಸನದಲ್ಲೆ ಆದರೂ ಅವರು ಓದಿದ್ದು, ಬೆಳೆದದ್ದು ಬೇರೆಡೆಯಲ್ಲಿ ನೆಲೆನಿಂತಿದ್ದು ಮಾತ್ರ ಬೆಂಗಳೂರಿನಲ್ಲಿ, ಇವರು ಪ್ರಬುದ್ಧ ಹಾಸ್ಯ ಪ್ರಬಂಧ ರಚನಕಾರರೆಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲದೆ ಅನುವಾದ ಹಾಗೂ ಸಂಪಾದಿತ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಇವರು ವಿಮರ್ಶಾ ಕ್ಷೇತ್ರದಲ್ಲಿಯೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. 80 ಆಸು ಪಾಸಿನ ವಯೋಮಾನದಲ್ಲಿರುವ ಇವರ ಪ್ರಬಂಧಗಳು ಇಂದಿಗೂ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರ ಪತ್ರಿಕೆ, ಪಾಕ್ಷ್ಷಿಕ ಪತ್ರಿಕೆ, ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾಗುತ್ತಿವೆ. ಇಳಿಯ ವಯಸ್ಸಿನಲ್ಲಿ ಇವರ ಮಾಗಿದ ಸಾಹಿತ್ಯ ನಮಗಿಂದು ದೊರೆಯುತ್ತಿರುವುದು ಪುಣ್ಯವೇ ಸರಿ. ಅಗಾಧವಾದ ಕೃತಿರತ್ನಗಳನ್ನು ಭುವನೇಶ್ವರಿ ಮಡಿಲಿಗೆ ನೀಡಿದ ಇವರಿಗೆ ಹಲವಾರು ಗೌರವ, ಪುರಸ್ಕಾರಗಳು ಹರಸಿ ಬಂದಿದೆ. ಅವುಗಳಲ್ಲಿ ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಧರ್ಮಶ್ರೀ ನಾಗರಾಜ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ನವರತ್ನರಾಂ ಪ್ರಶಸ್ತಿ ಪ್ರಮುಖವಾದವುಗಳು. ಈ ಹಿರಿಯ ಚೇತನದ ಸಾಹಿತ್ಯ ಮಾರ್ಗ ನಮಗಿಂದು ದೀವಿಗೆಯಾಗಿದೆ.

ಕೊಟ್ರೇಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ