ವಿಶ್ವ ಸಿಡಿಯುವುದನ್ನು ತಡೆಯುವುದೊಂದೆ ಮಾನವೀಯತೆ ಎಂಬ ಮಾನವೀಯ ಮೌಲ್ಯಗಳನ್ನು ಸಾರಿದ ಧೀಮಂತ ವ್ಯಕ್ತಿ ಅ.ನ.ಕೃರವರು. ‘ಕಾದಂಬರಿ ಲೋಕದ ಸಾರ್ವಭೌಮ’ ಎಂದೇ ಬಿಂಬಿತವಾದ ಇವರು ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಿ ಬಾಳಿದ ಉತ್ಕøಷ್ಟ ಚೇತನ. ಕನ್ನಡ ಭಾಷಿಗರಲ್ಲಿ ಓದುವ ಸದಭಿರುಚಿಯನ್ನು ಬೆಳೆಸಿ ಕನ್ನಡ ಸಾಹಿತ್ಯಕ್ಕೆ ಮೌಲ್ಯವರ್ಧಿಸಿದ ಕೀರ್ತಿ ಅನಕೃರವರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.
ಅ.ನ.ಕೃ ರವರ ಪೂರ್ಣ ಹೆಸರು ಅರಕಲಗೂಡು ನರಸಿಂಗರಾಯ ಕೃಷ್ಣರಾಯರು. ಇವರು 1908 ಮೇ9ರಂದು ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಶ್ರೀನರಸಿಂಹರಾವ್ ಮತ್ತು ಶ್ರೀ ಮತಿ ಅನ್ನಪೂರ್ಣಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಕನ್ನಡ ಸಾಹಿತ್ಯ ಕಾದಂಬರಿ ಲೋಕದಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಅನಕೃ ಕನ್ನಡ ಚಲನ ಚಿತ್ರ ರಂಗಕ್ಕೂ ಅದ್ವಿತೀಯ ಕೊಡುಗೆ ನೀಡಿದ್ದಾರೆ.
1934ರಲ್ಲಿ ಬಂದ ‘ಜೀವನ ಯಾತ್ರೆ’ ಇವರ ಮೊದಲ ಕಾದಂಬರಿ. ನಂತರ ಬಂದ ಅಗ್ರ ತಾಂಬೂಲ, ಅಪರಾಜಿತೆ, ಅಭಿಮಾನ, ಅಣ್ಣ ತಂಗಿ, ಈಚಲು ಮರದವ್ವ, ನಟಸಾರ್ವಭೌಮ, ಉದಯರಾಗ, ಕಲಾವಿದ, ಗಾಜಿನ ಮನೆ, ಕನ್ನಡಮ್ಮನ ಗುಡಿಯಲ್ಲಿ, ಸಂಗ್ರಾಮ, ಚಿತ್ರ ವಿಚಿತ್ರ, ಕಂಕಣ ಬಲ, ಕಾಂಚನ ಗಂಗಾ, ತಾಯಿಯ ಕರಳು, ಕೀರ್ತಿ ಕಳಸ, ಸಂಧ್ಯಾರಾಗ, ಮುಯ್ಯಿಗೆ ಮುಯ್ಯಿ, ಗೃಹಲಕ್ಷ್ಮಿ, ಹೃದಯ ಸಾಮ್ರಾಜ್ಯ, ಹೊಸಲು ದಾಟಿದ ಹೆಣ್ಣು, ನರಬಲಿ, ಮಣ್ಣಿನ ದೋಣಿ, ಅಮೃತ ಮಂಥನ, ಭೂಮಿಗಿಳಿದು ಬಂದ ಭಗವಂತ ಪ್ರಮುಖ ಕಾದಂಬರಿಗಳಾಗಿವೆ. ಇಲ್ಲಿನ ಕಾದಂಬರಿಗಳು ಸಾಮಾಜಿಕ ವ್ಯವಸ್ಥೆ, ಧರ್ಮ, ಸಂಪ್ರದಾಯ, ಪ್ರೀತಿ, ಪ್ರೇಮ ರಾಜಕೀಯ ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತವೆ.
ನಗ್ನ ಸತ್ಯ, ಸತಿ ಸಂತಾನ, ಸಂಜೆಗತ್ತಲು, ಕಳಂಕಿನಿ, ಅಪರಂಜಿ, ‘ಕಬ್ಬಿಣದ ಕಾಗೆ’, ಮುಂತಾದ ಕಾದಂಬರಿಗಳು ವೇಶ್ಯೆಯರ ಬದುಕಿನ ಒಳ ತುಮುಲಗಳನ್ನು ಅನಾವರಣಗೊಳಿಸುತ್ತವೆ. ಬಹುಷಃ ಕನ್ನಡದಲ್ಲಿ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ ಎನ್ನಬಹುದಾಗಿದೆ.
ಗರಡು ಮಚ್ಚೆ, ಯಲಹಂಕ ಭೂಪಾಲ, ರಣವಿಕ್ರಮ, ಸಂಗ್ರಾಮ ಧುರೀಣ, ವಿಜಯ ವಿದ್ಯಾರಣ್ಯ, ತಪೋಬಲ, ಪ್ರೌಢ ಪ್ರತಾಪಿ, ಅಳಿಯ ರಾಮರಾಯ, ಭುವನ ಮೋಹಿನಿ, ಮೋಹನ ಮುರಾರಿ ಮುಂತಾದ ಕಾದಂಬರಿಗಳು ಐತಿಹಾಸಿಕವಾಗಿ ಮುಖಾಮುಖಿಯಾಗಿ ನಿಲ್ಲುತ್ತವೆ.
ಒಂದು ಇಡೀ ರಾತ್ರಿ ಕುಳಿತು ಒಂದು ಸಾಮಾಜಿಕ ನಾಟಕನ್ನು ಬರೆದು ವರದಾಚಾರ್ ಅವರಂತಹ ರಂಗಭೂಮಿಯ ದಿಗ್ಗಜರು ತಬ್ಬಿಬ್ಬಾಗುವಂತೆ ಮಾಡಿದ ಕೀರ್ತಿ ಅನಕೃರವರದು. ‘ಮದುವೆಯೋ ಮನೆ ಹಾಳೋ’ ಎಂಬ ಈ ನಾಟಕವನ್ನು ಬರೆದದ್ದು ಇವರ ಹದಿನಾರನೇ ವಯಸ್ಸಿನಲ್ಲೆಂಬುದು ವಿಶೇಷ.
ಮುಂದೆ ‘ಕಥಾಂಜಲಿ’ ಮಾಸ ಪತ್ರಿಕೆಯನ್ನು ಆರಂಭಿಸಿದ ಇವರು. ನಂತರ ದಿನಗಳಲ್ಲಿ ‘ಬಾಂಬೆ ಕ್ರಾನಿಕಲ್ನಲ್ಲಿ’ ಕೆಲ ದಿನ ಕೆಲಸ ಮಾಡಿ ತದನಂತರ ‘ವಿಶ್ವವಾಣಿ’ ಎಂಬ ಪತ್ರಿಕೆಗೆ ಸಂಪಾದಕರಾಗಿ ದುಡಿದರು. ಪತ್ರಿಕಾ ರಂಗದಲ್ಲಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲೂ ಅಪರಿಮಿತವಾಗಿ ಶ್ರಮಿಸಿದರು. ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕ ಬೆಳೆಸಿಕೊಂಡ ಅನಕೃ ‘ಕನ್ನಡ ನುಡಿ’ ಮಾಸ ಪತ್ರಿಕೆಗೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇವರು ಕಾದಂಬರಿ, ನಾಟಕ, ಪ್ರಬಂಧ, ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ, ಸಂಶೋಧನಾ ಗ್ರಂಥಗಳು, ವ್ಯಕ್ತಿ ಚಿತ್ರಣ ಮುಂತಾದವುಗಳ ಪ್ರಕಾರಗಳಲ್ಲಿ ಕೃತಿಗೈದಿದ್ದಾರೆ. ಅಸಂಖ್ಯಾತ ಗ್ರಂಥಗಳನ್ನು ರಚಿಸಿರುವ ಇವರು ತಮ್ಮ ಲೇಖನಿಯಿಂದ ವೈವಿಧ್ಯಮಯವಾದ ರಸಾತ್ಮಕ ಸಾಹಿತ್ಯವನ್ನೇ ಸೃಜಿಸಿದ್ದಾರೆ.
1943-44ರಲ್ಲಿ ಆರಂಭವಾದ ಪ್ರಗತಿಶೀಲ ಸಾಹಿತ್ಯ ಚಳವಳಿಯ ನೇತಾರರಾಗಿದ್ದರು. ಅದೇ ಸಂದರ್ಭದಲ್ಲಿ ಚಿತ್ರೋದ್ಯಮ ಪ್ರವೇಶಿಸಿದರಾದರೂ ಹೆಚ್ಚು ದಿನ ನೆಲೆ ನಿಲ್ಲಿಲಿಲ್ಲ. ಕಾದಂಬರಿ ಕ್ಷೇತ್ರಗಳಲ್ಲಿ ಬಹಳವಾಗಿಯೇ ನಿಷ್ಣಾತರಾದರು. ಅಲ್ಲದೇ ಅಗ್ನಿಕನ್ಯೆ, ಕಣ್ಣಾ ಮುಚ್ಚಾಲೆ, ಕಾಮನ ಸೋಲು, ಕಿಡಿ, ಪಾಪಪುಣ್ಯ, ಮಿಂಚು, ಶಿಲ್ಪಿ ಸಮರ ಸುಂದರಿ, ‘ತೋರಣ’ ಮುಂತಾದ ಕಥಾ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಹಾಗೆಯೇ ಆದದ್ದೇನು, ಆಹುತಿ, ಜೀವದಾಸೆಯ ಸಮಸ್ಯೆ, ಧರ್ಮ ಸಂಕಟ, ರಾಜ ನರ್ತಕಿ, ಸೂತಪುತ್ರ ಕರ್ಣ, ಜಗಜ್ಯೋತಿ ಬಸವೇಶ್ವರ, ರಾಷ್ಟ್ರ ಧುರೀಣ ಬೆಂಗಳೂರು ಕೆಂಪೇಗೌಡ, ‘ಮಾಗಡಿ ಕೆಂಪೇಗೌಡ’ ಮುಂತಾದ ನಾಟಕಗಳನ್ನು ನೀಡಿದ್ದಾರೆ.
“ಪಂಡಿತ್ ಸ್ವಾಮಿಗೌಡರು ಉಲ್ಲೇಖಿಸುವಂತೆ..............
“ನಟಸಾರ್ವಭೌಮ: ಶೃಂಗಾರ ತುಚ್ಛ-ಉಚ್ಛ ಸ್ವರೂಪದ ಎರಡು ಮುಖಗಳು ನಟಸಾರ್ವಭೌಮ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿವೆ. ‘ಸಾಹಿತ್ಯದಲ್ಲಿ ಸತ್ಯಪ್ರೀಯತೆ ಇರಬೇಕೆಂದು ವಾದಿಸುವವರಿಗೆ ಈ ಬಗೆಯ ನಿರೂಪಣೆ ಅಹಿತವಾಗಲಾರದು ಎಂದಿದ್ದಾರೆ ಅ.ನ.ಕೃ
ಮಿಯಾಮಲ್ಹಾರ್: ಈ ಕಾದಂಬರಿಯಲ್ಲಿ ಒಬ್ಬ ನಾದೋಪಾಸಕನ ಜೀವನದ ಏರುಪೇರುಗಳು ಮನಸ್ಸಿನ ಹೊಯ್ದಾಟವನ್ನು ಅ.ನ.ಕೃರವರು ಚಿತ್ರಿಸಿದ್ದಾರೆ.
ಹುಲಿಯುಗುರು: ಮನೋವೈಜ್ಞಾನಿಕ ಕಾದಂಬರಿ ಶ್ರೇಣಿಯಲ್ಲಿ ಗೌರಿಶಂಕರರಂತೆ ನಿಲ್ಲುವ ಕೃತಿ ’ಹುಲಿಯುಗುರು’. ಜೀವನ ಸುಲಭವಾಗಲು ವ್ಯಕ್ತಿಯ ಮನಸ್ಸು ಪರಿಶುದ್ದವೂ, ವಿಶಾಲವೂ ಆಗಬೇಕಂಬ ತತ್ವದ ಸಮರ್ಥ ಚಿತ್ತಾಕರ್ಷಕ ಪ್ರತಿಪಾದನೆ ಈ ಕಾದಂಬರಿಯ ಜೀವನಾಡಿ.
ಅಮರ್ ಆಗಷ್ಟ್: ಈ ಕಾದಂಬರಿಯಲ್ಲಿ ಒಂದು ಕುಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಆಗಷ್ಟ್ ಕ್ರಾಂತೀಯ ಕಥೆಯನ್ನು ಹೆಣೆದಿದ್ದಾರೆ.
ಅರಳು ಮರಳು: ಇದೊಂದು ಸಾಮಾಜಿಕ ಕಾದಂಬರಿ,ಇದರಲ್ಲಿ ಕಾದಂಬರಿಯ ಕಲೆಯ ವ್ಯಕ್ತಿಯ ವಿವರಣೆ ಇದೆ. ಅನಕೃರವರ ಕಾದಂಬರಿ ಕಲೆ, ಕಾದಂಬರಿ ‘ರಸ ಜ್ಞಾನಂ ಆಹಾರೋಪಿನ ರೋಚತೆ’ ಎಂಬ ಮಾತನ್ನು ನಿತ್ಯ ಸತ್ಯಗೊಳಿಸಿದೆ.
‘ಕನ್ನಡ ಕುಲರಸಿಕರು’: 1951ರಲ್ಲಿ ಬಂದ ಈ ಕಾದಂಬರಿಯಲ್ಲಿ ಮೂವತ್ತೆರಡು ಜನ ಕನ್ನಡ ಸಾಹಿತಿಗಳ ಜೀವನ ಪರಿಚಯವಿದೆ. ಇದನ್ನು ಕನ್ನಡ ಸಾಹಿತಿಗಳ ಹಿರಿಯ ಆಚಾರ್ಯರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಿಗೆ ವಿಶ್ವಾಸ ಪೂರ್ವಕವಾಗಿ ಅರ್ಪಿಸಿದ್ದಾರೆ.”
ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ, ಸಂಸ್ಕøತಿಯ ವಿಶ್ವರೂಪ, ಸಾಹಿತ್ಯ ಮತ್ತು ಕಾಮ ಪ್ರಚೋದನೆ, ಸಾಹಿತ್ಯ ಸಮಾರಾಧನೆ ಮುಂತಾದ ವಿಮರ್ಶಾ ಕೃತಿಗಳನ್ನು ಅ.ನ.ಕೃ ನಮ್ಮ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
‘ಪೊರಕೆ’ ಎಂಬುದು ಇವರ ಹರಟೆ ಸಂಕಲನವಾಗಿದೆ. ಅಲ್ಲಮ ಪ್ರಭು, ಕನ್ನಡ ಕುಲರಸಿಕರು, ‘ಕೈಲಾಸಂ’ ಮುಂತಾದ ಜೀವನ ಚರಿತ್ರೆಗಳನ್ನು ನೀಡಿದ್ದಾರೆ.
‘ಬರಹಗಾರನ ಬದುಕು’, ‘ನನ್ನನ್ನು ನಾನೇ ಕಂಡೆ’ ಇವೆರಡು ಆತ್ಮ ಚರಿತ್ರೆಗಳು. 1970ರಲ್ಲಿ ಗೋವಾ ಕನ್ನಡ ಸಂಘದವರು ಇವರಿಗೆ ‘ರಸ ಚೇತನ’ ಎಂಬ ಗೌರವ ಗ್ರಂಥ ಅರ್ಪಿಸಿದೆ. 1970 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
1960ರಲ್ಲಿ ಮಣಿಪಾಲದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಅ.ನ.ಕೃ ರವರು 190ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ಕಾದಂಬರಿ ಎಂದರೆ ಅನಕೃ ಎನ್ನುವುದನ್ನು ಪ್ರಸಿದ್ಧವಾದ ಧೀಮಂತ ವ್ಯಕ್ತಿ ಅವರು.
ಅನಕೃ ಪ್ರತಿಷ್ಠಾನ ಕಳೆದ ಒಂದುವರೆ ದಶಕದಿಂದಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ಮೌಲ್ಯದ ಅನಕೃ ಪ್ರಶಸ್ತಿ ನೀಡುತ್ತಿದೆ.
1971 ರಲ್ಲಿ ನಮ್ಮನ್ನಗಲಿದ ಈ ಮಹಾ ಚೇತನದ ಸ್ಥೂಲ ದೇಹ ನಮ್ಮೊಂದಿಗಿಲ್ಲದಿದ್ದರೂ ಅವರು ಅಗಾಧವಾಗಿ ಬಿಟ್ಟುಹೋದ ಸೂಕ್ಷ ಸಾಹಿತ್ಯಿಕ ದೇಹ ಸದಾ ನಮ್ಮೊಂದಿಗೆ ಸಂವಾದಿಸುತ್ತಲೇಯಿರುತ್ತದೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ,
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ