ಕನ್ನಡ ಕಾವ್ಯದಲ್ಲಿ ಜನಪರವಾದ ಕಾವ್ಯವೆಂದರೆ ವಚನ ಸಾಹಿತ್ಯವು ಹನ್ನೆರಡನೆ ಶತಮಾನದಿಂದ ಇಪ್ಪತ್ತನೆ ಶತಮಾನದವರೆಗೆ ಹುಟ್ಟಿಕೊಂಡು ಬಂದ ವಚನ ಸಾಹಿತ್ಯ ಅತ್ಯಂತ ಸರ್ವರ ಜೀವಕ್ಕೆ ಜೀವಂತವಾದುದ್ದು. ಇಂತಹ ಜೀವಂತ ಸಾಹಿತ್ಯವನ್ನು ಇಪ್ಪತ್ತೊಂದನೆ ಶತಮಾನದಲ್ಲಿ ವಚನ ಲಾವಣ್ಯ ಎಂಬ ಹೆಸರಿನಲ್ಲಿ ರಚಿಸಿರುವ ಕೊಟ್ರೇಶ್ ಎಸ್. ಉಪ್ಪಾರ್ ರ ಈ ಕೃತಿ ಕರ್ನಾಟಕದ ಸರ್ವ ಜನ ಓದುವಂತದ್ದಾಗಿದೆ. ಅದರಲ್ಲೂ ಅಲಂಕಾರದಲ್ಲಿ ಅತ್ಯಂತ ಮಹತ್ವದಾಗಿರುವ ರೂಪಕದ ಮೂಲಕ ಈ ಕೃತಿ ಓದುಗರ ಮನಸ್ಸನ್ನು ಸೆಳೆದಿರುವುದು ಗಮನಿಸುವಂತಾದಾಗಿದೆ. ನೂರಾ ಒಂದು ವಚನದಿಂದ ತುಂಬಿರುವ ಈ ಕೃತಿಯಲ್ಲಿ ಕೆಲವು ಮುಖ್ಯವಾದ ವಚನಗಳ ಕುರಿತು.
ಹಾಲು ಹುಣ್ಣಿಮೆ ಇರುಳಿನಲ್ಲಿ ಕೋಟಿ ಕೋಟಿ ತಾರೆಗಳು
ಮಿನು ಮಿನುಗಿ ಜಗಕೆ ಅಚ್ಚರಿಯ ಉಂಟುಮಾಡಿರುವೆವಯ್ಯ
ನೀ ಸೃಷ್ಟಿಸದ ಸ್ವಭಾವ ಅರಿಯದೆ ದಿಗ್ಬ್ರಮೆಯಾಗಿ
ನಿನ್ನ ಚಮತ್ಕಾರಕ್ಕೆ ಸೋತಿಹೆನಯ್ಯ ಶ್ರೀ ಗುರುಕೊಟ್ಟುರೇಶ
ಕಾಣದಾ ಕಂದ ಕಾರ್ಯವ ವರ್ಣಿಸಲು ಸಾಧ್ಯವೆ ಪ್ರಭುವೆ
ಪ್ರಕೃತಿಯ ಸತ್ವ ಶಕ್ತ ಸೊಬಗು ಎಲ್ಲವುಗಳಿಗಿಂತ ಮೀರಿ ನಿಂತಿರುವುದೆಂಬುವುದು ಈ ವಚನ ಮನಂಬುಗುವಂತೆ ಚಿತ್ರಿಸಿರುವುದು ಇಲ್ಲಿ ಬಂದಿದೆ. ಹಾಗೆಯೆ ಈ ಕೆಳಗಿರುವ ವಚನ ಇನ್ನೊಂದು ಪ್ರಕೃತಿಯ ವೈಚಿತ್ರ್ಯವನ್ನು ಕುರಿತು ಹೇಳಿದ್ದು ಇಲ್ಲಿ ಒಳ್ಳೆಯ ಕಾವ್ಯ ಆಗುವುದರ ಕಡೆಗೆ ಇದರ ದಾರಿ ಸಾಗಿರುವುದು ಕಾಣುತ್ತೇವೆ.
ಮೋಡದಿಂದ ಅಗಲಿದ ಮಳೆ ಹನಿ ಚಿಪ್ಪು ಸೇರಿದರೆ ಮುತ್ತಾಗುವುದಯ್ಯ
ನೀರು ಸೇರಿದರೆ ಅದು ಜಲವಾಗುವುದಯ್ಯ
ಮರುಭೂಮಿ ಸೇರಿದರೆ ವ್ಯಯವಾಗುವುದಯ್ಯ ಶ್ರೀಗುರು ಕೊಟ್ಟೂರೇಶ
ಅದರ ವ್ಯಕ್ತಿತ್ವ ನಿರ್ಮಾಣ ತಾವಿದ್ದ ಸ್ಥಳಾವಲಂಬಿತ ನೋಡಾ ಪ್ರಭುವೆ
ಹೀಗೆ ಪ್ರಕೃತಿ ಶಕ್ತಿ ಸಾಮಥ್ರ್ಯದಿಂದ ಆರಂಭಗೊಂಡ ವಚನಗಳು ಮುಂದೆ ಸಾಮಾಜಿಕದೆಡೆಗೆ ಸಾಗಿದ್ದು ಅಷ್ಟೆ ಮಹತ್ವದಿಂದ ಕೂಡಿವೆ.
ಮೆಟ್ಟಿನೊಳಗಿರುವ ಕಲ್ಲು ಪಾದವ ಚುಚ್ಚುವುದಯ್ಯ
ಕಿವಿಯೊಳಗಿನ ಕೀಟ ಜೀವ ಹಿಂಡುವುದಯ್ಯ
ಕಣ್ಣಿನೊಳಗಿನ ಕಸವು ಗಾಸಿಗೊಳಿಸುವುದಯ್ಯ
ಶ್ರೀ ಗುರು ಕೊಟ್ಟೂರೇಶ ಮನೆಯೊಳಗಿನ ಜಗಳ
ಮನವ ಕೊರೆಯುವುದು ಪ್ರಭುವೆ
ಹೀಗೆ ಸಾಗುತ್ತ ಕವಿ ಸಮಾಜಕ್ಕೆ ಜೀವಕ್ಕೆ ಕಂಠಕವಾಗಿದ್ದ ಜಾತಿ ಭೂತವನ್ನು ಕುರಿತು ಬರೆದದ್ದು ಅತೀ ಮಹತ್ವದಾಗಿದೆ.
ಗಲ್ಲಿಗಲ್ಲಿಗೂ ಜಾತಿಯ ಸೃಷ್ಟಿ ಮಾಡಿಹರಯ್ಯ
ಜಾತಿ ಹಾತಿಗೂ ಮತ್ತೊಬ್ಬ ಸ್ವಾಮಿ ಬಂದಿಹನಯ್ಯ
ಮತಕ್ಕೊಂದು ಮಠವಯ್ಯ ಪಥಕ್ಕೊಂದು ಪುರಾಣವಯ್ಯ
ಶ್ರೀಗುರು ಕೊಟ್ಟೂರೇಶ ಮಠಗಳು ಮಾನವ ಕುಲವ
ವಿಘಟಿಸುತ್ತಿವೆ ಪ್ರಭುವೆ.
ಹೀಗೆ ಸಾಗುವ ವಚನ ಬದುಕಿನ ಬೇರೆ ಬೇರೆ ವಿಷಗಳನ್ನು ಬಳಸಿಕೊಂಡು ಹೊಸ ಆಲೋಚನೆಗಳ ಕಡೆಗೆ ಆಲೋಚಿಸಲಿಕ್ಕೆ ಜನತೆಗೆ ಬಿಟ್ಟಿದ್ದ ಮತ್ತೆ ಮತ್ತೆ ಯೋಚಿಸುವ ಸಂಗತಿಯಾಗಿದೆ.
ಕೆಸರಲ್ಲೇ ಜನಿಸಿ ಕೆಸರ ಮೆತ್ತಿಕೊಳ್ಳದ
ನೀರಲ್ಲೇ ನಿಂತು ತಲೆ ನೆನೆಯದ
ತವರೆಯಂತಿರುವುದು ಎನ್ನ ಈ ಜಗವು
ಶ್ರೀಗುರು ಕೊಟ್ಟೂರೇಶ
ಈ ವಚನಗಳಿಗೆ ವಚನ ಲಾವಣ್ಯ ಎಂಬ ಹೆಸರಿಟ್ಟಂತೆ ಇಲ್ಲಿಯ ಹೆಚ್ಚಿನ ವಚನಗಳು ಲಾವಣ್ಯದಿಂದ ಕೂಡಿವೆ. ಹಾಗೆಯೆ ಅಲಂಕಾರದ ಗುರುವಾಗಿರುವ ರೂಪಕದಿಂದ ಕೂಡಿವೆ. ಆದರೆ ಕೊಟ್ರೇಶ್ ಎಸ್.ಉಪ್ಪಾರ್ ರವರು ಇಲ್ಲಿನ ಹೆಚ್ಚಿನ ವಚನಗಳು ಆಧುನಿಕ ಪದ್ಯದಂತೆ ಬರೆಯದೆ ಹನ್ನೆರಡನೆ ಶತಮಾನದ ವಚನದ ರೂಪದಲ್ಲಿ ಮೂರು ನಾಲ್ಕು ಸಾಲಿನಲ್ಲಿ ಬರೆದಿದ್ದರೆ ಈ ಕೃತಿಯ ಸೊಗಸು ಇನ್ನಷ್ಟು ಹೆಚ್ಚಾಗುತ್ತಿತ್ತು.
ಡಾ| ಚೆನ್ನಣ್ಣ ವಾಲಿಕಾರ
ಗುಲಬರ್ಗಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ