ಶನಿವಾರ, ಅಕ್ಟೋಬರ್ 18, 2014

ಸಂಶೋಧನಾ ಸಾಹಿತಿ- ‘ಪಂಡಿತ್ ಸ್ವಾಮಿಗೌಡ”-ಕೊಟ್ರೇಶ್ ಎಸ್.ಉಪ್ಪಾರ್


ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಭವ್ಯಾವಾದ ಶಿಲ್ಪಕಲೆಗೆ ಎಷ್ಟು ಖ್ಯಾತಿವೆತ್ತಿದೆಯೋ ಅಷ್ಟÉ್ಟೀ ಇನ್ನೂ ಹೆಚ್ಚಾಗಿ ಕನ್ನಡ ಸಾರಸ್ವತ ಲೋಕಕ್ಕೆ ಬಹುಮುಖವಾಗಿ ಸಲ್ಲಿಸಿರುವ ಖ್ಯಾತಿ ಸಂಪಾದನೆಯಿಂದ ಘನತೆ ಹೆಚ್ಚಿಸಿಕೊಂಡಿದೆ. ಇದಕ್ಕೆ ಪುಂಖಾನುಪುಂಖವಾದ ಆಧಾರಗಳು ನಮಗೆ ದೊರಕುವುದರಲ್ಲಿ ಎರಡು ಮಾತಿಲ್ಲ.
ಕನ್ನಡ ಸಾಹಿತ್ಯಾಕ್ಕೆ ಹಾಸನ ಜಿಲ್ಲೆಯ ಕೊಡುಗೆಯನ್ನು ಸಂಶೋಧನಾತ್ಮಕವಾಗಿ, ವಿವರಣಾತ್ಮಾಕವಾಗಿ ಇಲ್ಲಿನ ಸಾಹಿತ್ಯ ದಿಗ್ಗಜರನ್ನು, ಅವರ ಸಾಹಿತ್ಯ ಸಿರಿಯನ್ನು ಒಂದೆಡೆ ಕಟ್ಟಿ ಕೊಟ್ಟವರೆಂದರೆ ಆಲೂರಿನ ಪಂಡಿತ್ ಸ್ವಾಮಿಗೌಡರು.
ಸ್ವಾಮಿಗೌಡರು ಆಲೂರು ತಾಲ್ಲೂಕಿನ ಕುಂದೂರು ಹೋಬಳಿಯ ದಾಸೇಗೌಡನಕೊಪ್ಪಲಿನಲ್ಲಿ 1926 ಮೇ3 ರಂದು ಜನಿಸಿದರು. ವಿದ್ಯಾರ್ಥಿದೇಸೆಯಿಂದಲೇ ಜನಪದ ಗೀತೆಗಳ ಸ್ವಾರಸ್ಯವÀರಿತ ಸ್ವಾಮಿಗೌಡರ ಮನಸ್ಸು ಸಾಹಿತ್ಯ ಹಾಗೂ ಸಂಸ್ಕøತಿಯತ್ತ ಆಕರ್ಷಣೆಗೊಂಡಿತು, ಕನ್ನಡ ಸಾಹಿತ್ಯ ಸೇವೆ ಮಾಡಬೇಕೆಂಬ ಹಿರಿದಾಸೆ ಹೊಂದಿದ್ದ ಸ್ವಾಮಿಗೌಡರು ಮಾಧ್ಯಮಿಕ ಶಾಲಾ ಉಪಧ್ಯಾಯರಾಗಿ ವೃತ್ತಿ ಆರಂಭಿಸಿದರು. ಶಿಕ್ಷಕ ವೃತ್ತಿಯ ಜೊತೆ ಜೊತೆಗೆ 1949 ರಿಂದ 1952 ರ ವರೆಗೆ ಜನಪದ ಗೀತೆಗಳನ್ನು ಸಂಗ್ರಹಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ಅಗಾಧ ಜನಪದ ಸಂಪತ್ತನ್ನು ಕ್ರೂಢೀಕರಿಸಿದರು.
ಆಗ ‘ಬೆಳಕು' ಪತ್ರಿಕೆ, ಒಕ್ಕಲಿಗರ ಪತ್ರಿಕೆ ಮತ್ತು ಶಾಲಾ ಕಾಲೇಜು ವಾರ್ಷಿಕ ಸಂಚಿಕೆಗಳಲ್ಲಿ ಪ್ರಕಟವಾದವು. 'ಮೈದುನ ರಾಮಯ್ಯನ ಸುಟ್ಟಿ' ಮತ್ತು 'ಶಂಕರ ಲಿಂಗನ ಸೋದರ ಪ್ರೇಮ' ಎಂಬೆರಡು ಜಾನಪದ ಲೇಖನಗಳು ಪ್ರಸಿದ್ಧಿ ಪಡೆದವು. ಅಲ್ಲದೇ ‘ತರೀಕೆರೆ ರಂಗಪ್ಪ ನಾಯಕ' ಹಾಗೂ ‘ಕುಣಿಗಲು ಕೆರೆ' ಎಂಬೆರಡು ಜಾನಪದ ಕಥನ ಗೀತೆಗಳು ಅನೇಕ ವಿದ್ವಾಂಸರ ಪ್ರಶಂಸೆಗೆ ಪಾತ್ರವಾದವು.
ಶ್ರೀಯುತ ಸ್ವಾಮಿಗೌಡರು ಶಾಂತಿಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುವಾಗಲೇ ಸಾಹಿತ್ಯ ಸಂಶೋಧನೆಯಲ್ಲಿ ಆಸ್ಥೆ ತಾಳಿ ಕಾರ್ಯೋನ್ನುಖರಾದರು.
ಶ್ರೀಯುತ ಸ್ವಾಮಿಗೌಡರು ‘ಕತ್ತರಿಘಟ್ಟ ಮತ್ತು ಹರಿಸೇವೆ', ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ', ಜನಪದ ಸಾಹಿತ್ಯ ಸುಧೆ, ‘ವೈಷ್ಣವ ಶಿರೋಮಣಿ ಚಂದ್ರಹಾಸ' ಕೃತಿಗಳು ಸೇರಿದಂತೆ ಅನೇಕ ಕವಿತೆಗಳು ಹಾಗೂ ಸಣ್ಣ ಕಥೆಗಳನ್ನು ಬರೆಯುವುದರ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಅಮೂಲ್ಯ ಕೊಡುಗೆ ನೀಡಿದ್ದಾರೆ.
1960 ರಲ್ಲಿ ಬಂದ ‘28 ಹಳ್ಳಿಯ ಕತ್ತರಿಘಟ್ಟ ಮತ್ತು ಹರಿಸೇವೆ' ಕೃತಿ ಸ್ವಾಮಿ ಗೌಡರಿಗೆ ಬಹಳವೇ ಹೆಸರು ತಂದುಕೊಟ್ಟಿತೆನ್ನಬಹುದು. ಇದು ಆಲೂರು ತಾಲ್ಲೂಕಿನ ಸಾಂಸ್ಕøತಿಕ ಬದುಕಿನ ಮೇಲೆ, ಪುರಾತನ ಸಾಂಸ್ಕøತಿಕ ಮಜಲುಗಳ ಮೇಲೆ ಬೆಳಕು ಚಲ್ಲುತ್ತದೆ. ಈ ಕೃತಿಯ ಬಗ್ಗೆ ಹಾಸನದ ಹೆಸರಾಂತ ಪತ್ರಿಕೆಯಾಗಿದ್ದ ‘ಪ್ರತಿನಿಧಿ' ಪತ್ರಿಕೆಯಲ್ಲಿ 1966 ಜನವರಿ 29 ರಂದು ಸಂಪಾದಕರಾಗಿದ್ದ ಎಸ್.ಎಸ್. ಅಯ್ಯಂಗಾರ್ ರವರು ಹೀಗೆ ಬರೆದಿದ್ದಾರೆ...
‘ಈ ಕಿರು ಹೊತ್ತಿಗೆಯಲ್ಲಿ ಶ್ರೀಯುತರು ಆಲೂರು ತಾಲ್ಲೂಕಿನ ಇಪ್ಪತ್ತೆಂಟು ಹಳ್ಳಿಗಳ ಜನರು ತಿರುಪತಿ ವೆಂಕಟರಮಣ ಸ್ವಾಮಿಯ ನಾಮಾಂಕಿತದಲ್ಲಿ ನಡೆಸುವ ಪೂಜೆ, ಸಲ್ಲಿಸುವ ಸೇವೆ, ಮಾಡುವ ಪ್ರಾರ್ಥನೆ ಇವುಗಳನ್ನು ಹೃದಯಂಗಮವಾಗಿ ಉಲ್ಲೇಖಿಸಿ ಗ್ರಾಮಾಂತರಗಳ ನಾಡಿಯಲ್ಲಡಗಿರುವ ಧರ್ಮಶ್ರದ್ಧೆ ಮತ್ತು ದೈವಭಕ್ತಿಗಳನ್ನು ತೋರಿಸಿದ್ದಾರೆ'.
1969 ರಲ್ಲಿ ಹೊರಬಂದ ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ' ಎಂಬ ಗ್ರಂಥವು ಸಂಶೋಧನಾತ್ಮಾಕದಿಂದ ಕೂಡಿದ ಒಂದು ಅತ್ಯಮೂಲ್ಯ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು, 190 ಪುಟಗಳಿರುವ ಈ ಕೃತಿಯು ಹಾಸನ ಜಿಲ್ಲೆಯ ಪಾಲಿಗೆ ಒಂದು ರೀತಿಯ ಸಾಹಿತ್ಯ ಚರಿತ್ರೆಯೆಂದೇ ಹೇಳಬಹುದು.
ಐದು ಪ್ರಮುಖ ಅಧ್ಯಾಯಗಳನ್ನು ಒಳಗೊಂಡ ಈ ಕೃತಿಯು ಮೊದಲನೇ ಅಧ್ಯಾಯದಲ್ಲಿ ‘ಶಾಸನಾಧಾರ' ಎಂಬ ಶೀರ್ಷಿಕೆಯಡಿಯಲ್ಲಿ ಹಲ್ಮಿಡಿ ಶಾಸನ, ಬೇಲೂರಿನ 202 ನೆಯ ಶಾಸನ, ಶ್ರವಣ ಬೆಳಗೊಳದ 344 ನೆಯ ಶಾಸನ, ಭರತೂರು ಶಾಸನ, ಶಾಂತಿ ಗ್ರಾಮದ ಶಾಸನ, ಹಾಸನದ 58 ನೆಯ ಶಾಸನ, ಬೇಲೂರಿನ 72 ನೆಯ ಶಾಸನ, ಚನ್ನರಾಯಪಟ್ಟಣದ 205 ನೆಯ ವೀರಗಲ್ಲು ಮುಂತಾದವುಗಳ ವಿವರಣೆ, ಪ್ರಾಮುಖ್ಯತೆ ಹಾಗೂ ಐತಿಹಾಸಗಳ ಬಗ್ಗೆ ಕೂಲಂಕುಷವಾಗಿ ವಿಶ್ಲೇಷಿಸಿದ್ದಾರೆ.
ಅಧ್ಯಾಯ-2 ರಲ್ಲಿ ಕೆಲವು ಶಾಸನ ಕವಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇದು ಸಾಹಿತ್ಯ ಚರಿತ್ರೆ ಅಧ್ಯಯನಕಾರರಿಗೆ ಮಾರ್ಗದೀವಿಗೆಯಾಗಿದೆ. ದೇವ ಪಾರ್ಯ, ಬಾಚಣ್ಣ, ಬೊಪ್ಪಣ್ಣ ಪಂಡಿತ, ತ್ರಿವಿಕ್ರಮ ಪಂಡಿತ, ಸೋಮರಾಜ, ಪೋಲಾಳ್ವ-ದಂಡನಾಥ ರವರುಗಳ ಸಾಹಿತ್ಯ, ಕೊಡುಗೆಗಳ ಬಗ್ಗೆ ವಿಶ್ಲೇಷಿಸಿದ್ದಾರೆ.
ಮೂರನೆಯ ಅಧ್ಯಾಯದಲ್ಲಿ ರಾಜಾಶ್ರಯಗಳಲ್ಲಿ ಬೆಳೆದ ಸಾಹಿತ್ಯದ ಬಗ್ಗೆ ತಿಳಿಸುತ್ತಾ ಗಂಗರ ಆಶ್ರಯದಲ್ಲಿ- ಚಾವುಂಡರಾಯ, ಮೊದಲನೆಯ ನಾಗವರ್ಮ; ಹೊಯ್ಸಳರ ಆಶ್ರಯದಲ್ಲಿ ಅಭಿನವ ಪಂಪ, ಕಂತಿ, ರಾಜಾದಿತ್ಯಾ, ಸುಮನೋಬಾಣ, ಕವಿ ಚಕ್ರವರ್ತಿ ಜನ್ನ, ಮಲ್ಲಿಕಾರ್ಜುನ, ದರ್ಪಣಕಾರ ಕೇಶಿರಾಜ; ವೀರಶೈವ ಕವಿಗಳಾದ- ಕ್ರಾಂತಿಕಾರ ಹರಿಹರ, ಷಟ್ಟದಿಯ ಜನಕ ರಾಘವಾಂಕ, ಕೆರೆಯ ಪದ್ಮರಸ, ಕುಮಾರ ಪದ್ಮರಸ; ಹಾಗೆಯೇ ಇತರ ಕವಿಗಳ ವರ್ಗದಲ್ಲಿ ಎರಡನೆಯ ನಾಗವರ್ಮ, ನೇಮಿಚಂದ್ರ, ರುದ್ರಭಟ್ಟ, ಪದ್ಮಣಾಂಕ, ನರಹರಿ ಮುಂತಾದ ಕವಿವರ್ಯರ ಸಾಹಿತ್ಯ ಕೊಡುಗೆಗಳನ್ನು ಉಲ್ಲೇಖಿಸಿದ್ದಾರೆ, ವ್ಯಕ್ತಿತ್ವಗಳನ್ನು ಪರಿಚಯಿಸಿದ್ದಾರೆ.
ಅಧ್ಯಾಯ ನಾಲ್ಕರಲ್ಲಿ ಹತ್ತೊಂಬತ್ತನೆಯ ಶತಮಾನದ ಕೊಡುಗೆ ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀನಿವಾಸ, ಗೊರೂರು ನರಸಿಂಹಾಚಾರ್ಯ, ನಂಜುಂಡಾಚಾರ್ಯ, ಶಿವನಂಜೇಗೌಡ, ಯಜಮಾನ ಸಿದ್ದಲಿಂಗಪ್ಪ ಅವರ ಸಾಹಿತ್ಯ ಹಾಗೂ ಸಾಂಸ್ಕøತಿಕ ಕೊಡುಗೆಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ.
ಇದರಲ್ಲಿ ಕೊನೆಯ ಅಧ್ಯಾಯ ಇಪ್ಪತ್ತನೆಯ ಶತಮಾನದ ಕೊಡುಗೆ ಎಂಬ ಶೀರ್ಷಿಕೆಯಡಿಯಲ್ಲಿ ಬೇಲೂರು ಕೇಶವದಾಸರಿಂದ ಶ್ರೀ ಎಚ್.ಆರ್. ಷಣ್ಮುಖಯ್ಯ ನವರವರೆಗೆ ಸುಮಾರು 63 ವಿವಿಧ ಸಾಹಿತ್ಯ ದಿಗ್ಗಜರನ್ನು, ಅವರ ಸಾಹಿತ್ಯಿಕ ಮೌಲ್ಯಗಳನ್ನು ಪರಿಚಯಿಸಿದ್ದಾರೆ.
ಹೀಗೆ ಪಂಡಿತ್ ಸ್ವಾಮಿಗೌಡರು ಕನ್ನಡ ಸಾಹಿತ್ಯಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಇವರು ಆಲೂರು ತಾಲ್ಲೂಕಿನ ಹಿರಿಯ ತಲೆಮಾರಿನ ಕವಿಗಳೂ ಹೌದು. ಸಂಶೋಧಕರು ಹೌದು. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯಾಗಿ ಬದುಕಿ ಬಾಳಿದ್ದ ಧೀಮಂತ ವ್ಯಕ್ತಿ ಸ್ವಾಮಿಗೌಡರು.

,
ಕೊಟ್ರೇಶ್ ಎಸ್.ಉಪ್ಪಾರ್

 ಆಲೂರು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ