ಕನ್ನಡ ಸಾಹಿತ್ಯ ಎರಡು ಸಾವಿರಕ್ಕಿಂತಲೂ ಅಧಿಕ ವರ್ಷಗಳ ಚರಿತೆಯಿರುವಂತದ್ದು. ವಿವಿಧ ಕಾಲಘಟ್ಟಗಳಲ್ಲಿ ಅರಳಿ, ಹೊರಳಿ, ಪ್ರಜ್ವಲಿಸಿ ಬಂದ ಸಾಹಿತ್ಯ ಇಲ್ಲಿ ಸಹಸ್ರಾರು ಕವಿ ಪುಂಗವರು, ಪಂಡಿತರು, ಸಾಹಿತ್ಯ ರತ್ನರು ತಮ್ಮ ಪಾಂಡಿತ್ಯ ಧೀಶಕ್ತಿಯನ್ನು ಧಾರೆಯೆರೆದಿದ್ದಾರೆ.
ಪಂಪಪೂರ್ವಯುಗ, ಪಂಪಯುಗ, ಬಸವಯುಗ, ಹಾಗೂ ದಾಸಯುಗಗಳು ಪ್ರಮುಖವಾಗಿ ನೆಲೆನಿಂತರೆ. ಇನ್ನು ಆಧುನಿಕ ಸಾಹಿತ್ಯದಲ್ಲಿ ಹಲವಾರು ಪ್ರಭೇದಗಳೇ ಜನ್ಮಾತಾಳಿದವು. 19 ನೆಯ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಆದಿಭಾಗದಲ್ಲಿ ಸಾಹಿತ್ಯ ಪ್ರಖರತೆಯನ್ನು ಕಂಡಿತೆನ್ನಬಹುದು. ಮಾಸ್ತಿ ಬೇಂದ್ರೆ, ಕುವೆಂಪುರಾದಿಯಾಗಿ ಸಾಹಿತ್ಯಕವಾಗಿ ಒಂದು ಸೈನ್ಯವೇ ನಮ್ಮೆದುರಿಗೆ ನಿಲ್ಲುತ್ತದೆ. ಇವರಲ್ಲಿ ಸಿ.ಆರ್. ಶ್ರೀನಿವಾಸ ಅಯ್ಯಂಗಾರ್ ರವರೂ ಒಬ್ಬರೂ.
ಶ್ರೀಯುತ ಸಿ.ಆರ್. ಶ್ರೀನಿವಾಸರು ಕ್ರಿ.ಶ 1914 ರ ಸೆಪ್ಷಂಬರ್ 02 ರಂದು ಹಾಸನ ಜಿಲ್ಲಾ ಚನ್ನರಾಯಪಟ್ಟಣದಲ್ಲಿ ಜನಿಸಿದರು.
1934 ರಿಂದ 1944 ರ ಸಂದರ್ಭದಲ್ಲಿ ಕರ್ನಾಟಕ ಸಂಘ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಸ್ವಾತಂತ್ರ್ಯ ಚಳವಳಿಯಲ್ಲಿಯೂ ಭಾಗವಹಿಸಿದರು. ನಂತರ 1944 ರಿಂದ ತನ್ನ ಹುಟ್ಟೂರಾದ ಚನ್ನರಾಯಪಟ್ಟಣಕ್ಕೆ ಋಣ ತೀರಿಸುವ ಸದುದ್ದೇಶದಿಂದ ಸಮಾಜ ತಿಳಿಗೊಳ್ಳಲು ಅಗತ್ಯವಾಗಿದ್ದ ಶಿಕ್ಷಣವನ್ನು ಪಸರಿಸುವ ಹಿನ್ನೆಯಲ್ಲಿ ಸ್ವತಃ ನವೋದಯ ಪ್ರೌಢ ಶಾಲೆ ಆರಂಭಿಸಿ ತಮ್ಮ ಸಂಸ್ಥೆಯಲ್ಲಿಯೇ ಕನ್ನಡ ಪಂಡಿತರಾಗಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದರು. ಹೀಗೆ ವಿದ್ಯಾಭಿವೃದ್ಧಿಯಲ್ಲಿ ಹಗಲಿರುಳು ಪರಿಶ್ರಮವಹಿಸಿ ಶಿಕ್ಷಣ ಜ್ಞಾನ ಪಸರಿಸಿದ ಕೀರ್ತಿ ಶ್ರೀನಿವಾಸ ಅಯ್ಯಂಗಾರ್ರದು ಎಂದರೆ ಅತಿಶಯೋಕ್ತಿಯಾಗಲಾರದು.
ಉತ್ತಮ ವಾಗ್ಮಿಗಳೂ, ಪಂಡಿತರೂ, ಭಾಷಕಾರರು ಆಗಿದ್ದ ಶ್ರೀನಿವಾಸ ಅಯ್ಯಂಗಾರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ಸಾಕಷ್ಟು ಕೆಲಸ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡಿ ಶ್ರೀಮಂತಗೊಳಿಸಿದ್ದಾರೆ.
‘ಶ್ರವಣ ಬೆಳಗುಳದ ಕೈಪಿಡಿ’ ‘ಮಿರ್ಜಾ ಇಸ್ಮಾಯಿಲ್’ ‘ಚಿಕ್ಕ ದೇವರಾಜ ಒಡೆಯರು’ ‘ಮಹಾಭಾರತದ ಸೂತ್ರಧಾರ’ ‘ಸಾರ್ಥಕ ಜೀವಿಗಳು’ ‘ಸಣ್ಣ ಕಥೆಗಳು’ ಮುಂತಾದ ಕೃತಿ ರತ್ನಗಳನ್ನು ನೀಡುವುದರ ಮೂಲಕ ಶ್ರೀನಿವಾಸ ಅಯ್ಯಂಗರರು ಶ್ರೇಷ್ಠ ಸಾಹಿತಿಯಾಗಿಯೂ ನೆಲೆ ನಿಲ್ಲುತ್ತಾರೆ.
ಇವರ ‘ಶ್ರವಣ ಬೆಳಗೊಳದ ಕೈಪಿಡಿ’ ಕೃತಿಯನ್ನು 1940 ರಲ್ಲಿ ಶ್ರವಣ ಬೆಳಗೊಳದಲ್ಲಿ ನಡೆದ ಮಹಾಮಸ್ತಕಭಿಷೇಕ ಸಂದರ್ಭದಲ್ಲಿ ಸಮಿತಿಯವರು ಪ್ರಕಟಿಸಿದ್ದಾರೆ. ಹಾಗೆಯೇ ಇವರು ಬರೆದ ಹಾಗೂ ಸಂಗ್ರಹಿಸಿದ ಕಿರುಕಥೆಗಳನ್ನೆಲ್ಲಾ ಸೇರಿಸಿ ‘ಸಣ್ಣ ಕಥೆಗಳು’ ಎಂಬ ಹೆಸರಿನ ನಡಿ ಕರ್ನಾಟಕ ಸಂಘವು ಪ್ರಕಟಿಸಿದೆ. ಇದು ಐದಾರು ಜನರು ಬರೆದ ಸಂಯುಕ್ತ ಕಥಾ ಸಂಕಲನವಾಗಿದೆ.
1954 ರಲ್ಲಿ ಮೊದಲ ಮುದ್ರಣವಾಗಿ ಬಂದ ಇವರು ನೀಡಿದ ಉಪನ್ಯಾಸಗಳ ಸಂಕಲನ ‘ಮಹಾಭಾರತದ ಸೂತ್ರಧಾರ’ ಬಹಳವೇ ಹೆಸರು ಮಾಡಿದ ಕೃತಿಯಾಗಿದೆ. ತಳುಕಿನ ವೆಂಕಣ್ಣಯ್ಯ ನವರ ಸ್ಮಾರಕ ಗ್ರಂಥಮಾಲೆಯ ಪ್ರಕಾಶಕರಾಗಿದ್ದ ತ.ಸು. ಶಾಮರಾಯರು ಹೊರ ತಂದ ಈ ಕೃತಿಯು 1955 ರಲ್ಲಿ ಎರಡನೇ ಮುದ್ರಣ ಕಂಡು ಹೆಚ್ಚು ಜನ ಪ್ರಿಯವಾಯಿತು.
‘ಚಿಕ್ಕದೇವರಾಜ ಒಡೆಯರ್’ ಕೃತಿಯ ಅಂದಿನ ಸಾಮಾಜಿಕ ಹಾಗೂ ಸಾಂಸ್ಕøತಿಕ ನೆಲೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆಯೇ ಚಿಕ್ಕದೇವರಾಜ ಒಡೆಯರ ವ್ಯಕ್ತತ್ವಕ್ಕಿಡಿದ ಕನ್ನಡಿಯಾಗಿದೆ ಎನ್ನಬಹುದು.
‘ಮಿರ್ಜಾ ಇಸ್ಮಾಯಿಲ್’ ಕೃತಿ ಅವರು ಮೈಸೂರು ಸಾಮ್ರಾಜ್ಯದಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಜನಕಲ್ಯಾಣ ಕಾರ್ಯಕ್ರಮಗಳು, ಹಾಗೂ ಇಸ್ಮಾಯಿಲ್ ರ ಸರಳ ಘನಪೂರ್ಣ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ.
ಒಟ್ಟಾರೆ ಹೇಳುವುದಾದರೆ ಶ್ರೀನಿವಾಸ ಅಯ್ಯಂಗಾರರು ಶಿಕ್ಷಣ ಹರಿಕಾರರಾಗಿ, ಪ್ರಖ್ಯಾತ ವಾಗ್ಮಿಗಳಾಗಿ, ಉದ್ಧಾಮ ಪಂಡಿತರಾಗಿ ಮೌಲಿತ ಸಾಹಿತಿಯಾಗಿ ಕನ್ನಡ ನಾಡು ನುಡಿಗೆ ಸಾಕಷ್ಟು ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತ ಸುಂದರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಹೋರಾಟ ನಡೆಸಿದ್ದಾರೆ. ಮೇರು ವ್ಯಕ್ತಿತ್ವಗಳನ್ನು ಸಾಮಾನ್ಯರಿಗೆ ಪರಿಚಯಿಸಿದ್ದಾರೆ.
ಶ್ರೀನಿವಾಸ ಅಯ್ಯಂಗಾರರು ಹಾಸನ ಜಿಲ್ಲೆ ಕಂಡಂತಹ ಉತ್ತಮ ಪ್ರತಿಭಾನ್ವಿತ ವ್ಯಕ್ತಿತ್ವದ ಖಣಿಯಾಗಿದ್ದರು. ಅವರು ಬಿಟ್ಟು ಹೋದ ತತ್ವದರ್ಶಗಳು ನಮ್ಮೊಡನೆ ಜೀವಾಂತವಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ