ಶನಿವಾರ, ಅಕ್ಟೋಬರ್ 18, 2014

ಹೆತ್ತೂರು ನಾಗರಾಜರ “ಕಪ್ಪು ಕವಿತೆಗಳು”- ಕೊಟ್ರೇಶ್ ಎಸ್.ಉಪ್ಪಾರ್


       ಕನ್ನಡ ಸಾಹಿತ್ಯದಲ್ಲಿ ಬಂಡಾಯದ ಧ್ವನಿ ಪಂಪನಿಂದ ಆರಂಭವಾಯಿತು. ನಂತರ ಮೌನವಾಗಿಯೇ ಬೆಳೆದು ಅಮೂರ್ತದಲ್ಲಿದ್ದ ಬಂಡಾಯವು ಮೂರ್ತರೂಪಕ್ಕೆ ಬಂದು ಒಂದು ವುಕ್ತಿತ್ವವನ್ನು ಬೆಳೆಸಿಕೊಂಡು ಸಾಹಿತ್ಯ ಘಟ್ಟವಾಗಿ ಬೆಳೆದು ನಿಲ್ಲಲು 1970ರ ತನಕ ಹಿಂಸೆ, ನೋವು, ದುಃಖ, ಕ್ರೌರ್ಯ, ಅವಮಾನ, ಸಿಟ್ಟುಗಳನೆಲ್ಲವನ್ನು ನುಂಗಿಕೊಂಡು ತಾಳ್ಮೆಯಿಂದ ತಪಸ್ಸು ಮಾಡುತ್ತಲೇ ಇತ್ತು. ಕಣ್ಣಿಬಿಟ್ಟು ಲೋಕವನ್ನು ನೋಡಿದ್ದು ಈ ಶತಮಾನದ ಕೊನೆಭಾಗದಲ್ಲಿ ಎನ್ನಬಹುದು. ತನ್ನ ಹೊಟ್ಟೆಯಲ್ಲಿ ಅಡಗಿಸಿಟ್ಟ ಸಿಟ್ಟನ್ನು ಒಮ್ಮೆಯೇ ಸ್ಪೋಟಿಸಿದಾಗ ಮೇಲು ವರ್ಗ ಬೆಚ್ಚಿ ಬಿದ್ದಿದ್ದು ಉಂಟು. ಈ ಬಂಡಾಯ ಸಾಹಿತ್ಯವು ನವ್ಯದ ನಂತರ ಬೆಳೆದು ಬಂದ ಸಾಹಿತ್ಯದ ನಾಲ್ಕ್ಕನೆಯ ಘಟ್ಟವಾಗಿದೆ. ಈ ಘಟ್ಟದ ಮೂಲಕವೇ ಮತ್ತೊಂದು ದಾರಿ ಹಿಡಿದು ಹೊರಟದ್ದು ದಲಿತ ಸಾಹಿತ್ಯ.
ಶೋಷಣೆ ಮತ್ತು ಕ್ರೌರ್ಯದ ವಿರುದ್ದ ಬಂಡೆದ್ದು ಹೋರಾಡುವುದೇ ಇಲ್ಲಿಯ ಪ್ರಮುಖ ಲಕ್ಷಣ. ಮನುಷ್ಯ-ಮನುಷ್ಯರ ನಡುವೆ ಕಲ್ಲಿನಕೋಟೆ ಕಟ್ಟಿದÀ, ಅಮಾನವೀಯ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆ ಇಲ್ಲಿ ಕಂಡು ಬರುತ್ತದೆ.
ಈ ದಿಶೆಯಲ್ಲಿ ಅನೇಕ ಯುವ ಬರಹಗಾಗರರು ತಮ್ಮ ಒಡಲಾಳದ ತುಮುಲಗಳನ್ನು ನೇರ ದಿಟ್ಟವಾಗಿ ಹೊರಹಾಕುತ್ತಿರುವುದು ಶ್ಲಾಘನೀಯ. ಅಂತಹ ಯುವ ಲೇಖಕರಲ್ಲಿ ನಾಗರಾಜ್ ಹೆತ್ತೂರು, ಬಿ.ಆರ್.ಭಾಸ್ಕರ್ ಪ್ರಸಾದ್ ಹಾಗೂ ಅಪ್ಪಗೆರೆ ಡಿ.ಟಿ.¯ಂಕೇಶ್‍ರವರು ಪ್ರಮುಖರು. ಈ ಮೂರು ಯುವ ಕವಿಗಳು ತಮ್ಮ ತಮ್ಮ ಫೇಸ್‍ಬುಕ್‍ನಲ್ಲಿ ಬರೆಯುವ ಹವ್ಯಾಸದಿಂದ ಪರಿಚಿತರಾಗಿ, ಸ್ನೇಹ ಆತ್ಮೀಯತೆಗೆ ತಿರುಗಿ ಇವರೆಲ್ಲಾ ಕವಿತೆಗಳು ‘ಬೆವರ ದನಿಗಳು’ ಎಂಬ ಸಂಯುಕ್ತ ಕವನ ಸಂಕಲನದಲ್ಲಿ ಪ್ರಕಟಗೊಂಡಿವೆ.
ಸಿರಿವರ ಪ್ರಕಾಶನ ಹೊರತಂದಿರುವ 96 ಪುಟಗಳ 70 ರೂಪಾಯಿ ಮುಖಬೆಲೆ ಹೊಂದಿರುವ ಈ ಕೃತಿಗೆ ಯೋಗೇಶ್ ಮಾಸ್ಟರ್‍ರವರ ಮುನ್ನುಡಿ ಕಳೆಕಟ್ಟಿದಂತಿದೆ. ಇದರಲ್ಲಿ ನಾನು ಇಲ್ಲಿ ಚರ್ಚಿಸ ಹೊರಟಿರುವುದು ನಾಗರಾಜ್ ಹೆತ್ತೂರರ ಕವಿತೆಗಳನ್ನು ಮಾತ್ರ. ಆದ್ದರಿಂದ ಭಾಸ್ಕರ್ ಪ್ರಸಾದ್ ಹಾಗೂ ಅಪ್ಪಗೆರೆ ಲಂಕೇಶ್ ಕವಿತೆಗಳನ್ನು ಬದಿಗಿಡುತ್ತಿದ್ದೇನೆ. ‘ಕಪ್ಪು ಕವಿತೆಗಳು’ ಎಂಬ ಶೀರ್ಷಿಕೆಯಡಿ ‘ನಾ ಹೊಲೆದ ಜೋಡಿ ಚಪ್ಪಲಿಗಳು’ ಕವಿತೆಯಿಂದ ‘ಬಿಡಿ ಪದ್ಯಗಳು’ ಕವಿತೆಗಳ ವರೆಗೆ ಪುಟ ಸಂಖ್ಯೆ 25 ರಿಂದ 64 ರ ವರೆಗೆ 19 ಕವಿತೆಗಳಿವೆ.
ಇಲ್ಲಿನ ಎಲ್ಲಾ ಕವಿತೆಗಳಲ್ಲಿ ನಾಗರಾಜ್‍ರವರು ಸಹಜವಾಗಿಯೇ ಬಂಡಾಯದ ಧ್ವನಿಯನ್ನು ಪ್ರತಿಧ್ವನಿಸಿದ್ದಾರೆ. ಬಂಡಾಯ ಹಾಗೂ ದಲಿತ ಕಾವ್ಯಗಳ ಮುಗ್ಗುಲುಗಳನ್ನು ಅರಿತ ಸ್ನೇಹಿತ ನಾಗರಾಜ್ ಹೆತ್ತೂರು ಶೋಷಣೆಯ ವಿರುದ್ದ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಸಾಮಾಜಿಕ ಪಿಡುಗುಗಳು ಹೀಗೆ ಹಲವಾರು ವಿಷಯಗಳ ಸುತ್ತಲೇ ಕಾವ್ಯ ಕಟ್ಟುತ್ತಾ ಹೋಗಿದ್ದಾರೆ.
ವ್ಯಾಕರಣ, ಛಂದಸ್ಸುಗಳಿಂದ ಮುಕ್ತತೆ ಪಡೆದ ಇವರ ಕವಿತೆಗಳು ನೇರ ನುಡಿಗಳಿಂದ, ಸರಳ ಪದಗುಚ್ಚಗಳಿಂದ ಹೆಣೆದ ಮಾನವೀಯ ಮೌಲ್ಯಗಳು


ನಾ ಬರೆದ
ಕಪ್ಪು ಕವಿತೆಗಳು
ಚರಂಡಿಗಿಳಿಯುತ್ತವೆ, ಪೊರಕೆಗಳಲ್ಲಿ ಚಿತ್ತಾರ ಬಿಡಿಸುತ್ತವೆ
ಸ್ಮಶಾನವ ಕಾಯುತ್ತವೆ, ದಲಿತ ಕೇರಿಗಳಲ್ಲಿ ಬೀದಿ ದೀಪವಾಗುತ್ತವೆ.
[ಕಪ್ಪು ಕವಿತೆಗಳು]
ಅವರೇ ಹೇಳುವಂತೆ ಸಮಾಜದ ನೀಚ ಸ್ತರ ಎಂದು ಕರೆಯಿಸಿಕೊಳ್ಳುವ ಮನಗಳ, ದಮನಿತ ಸ್ಥಿತಿಗಳ ಧ್ವನಿಗಳಾಗಿವೆ. ಶೋಷಣೆಯಿಂದ ಹೊಮ್ಮಿಬಂದ ಆಶಾಕಿರಣವಾಗುವುದನ್ನು ಉಲ್ಲೇಖಿಸುತ್ತಾರೆ.
ಸ್ವತಃ ಶೋಷಣೆಯಲ್ಲಿ ಸಿಲುಕಿ ಬೆಳೆದ ನಾಗರಾಜ್ ಹೋರಾಟಗಾರ. ಆದ್ದರಿಂದಲೇ ಅವರ ಲೇಖನಿಯಿಂದ ಶತಮಾನಗಳಿಂದಲೂ ಮಡುಗಟ್ಟಿದ್ದ ಭಾವನೆಗಳು ಜೀವ ಪಡೆದುಕೊಂಡಿವೆ.
ಸಹೋದರ ಕಬೀರ್
ಎದೆಗೆ ಹೊಡೆದವನು ರಾಮನ ಭಕ್ತನಾದರೂ
ಅಲ್ಲಾಹುವಿನ ಪ್ರಾರ್ಥನೆ ಸುಮ್ಮನೆ ಬಿಡದು
ನಮ್ಮವ್ವ ಚೌಡಿಗೂ ಹರಕೆ ಹೊತ್ತಿದ್ದಾಳೆ
ಕಬೀರನ ಕೊಂದವನ ರಕ್ತ ಕಾರಿಸು ಎಂದು
ಆಕೆಯ ಶಾಪಕ್ಕೆ ತಪ್ಪಿಸಿಕೊಂಡವರಿಲ್ಲ ....
[ಕ್ಷಮಿಸು ಕಬೀರ್ ನಮ್ಮವ್ವ ಚೌಡಿಗೆ ಹರಕೆ ಹೊತ್ತದ್ದಾಳೆ]
ಅಸಮಾನತೆ ಮತ್ತು ಅನ್ಯಾಯಗಳನ್ನು ಪ್ರತಿಭಟಿಸುವುದೇ ಬಂಡಾಯವೆಂದು ಕರೆದರೂ, ಶತಶತಮಾನಗಳಿಂದ ಮೇಲ್ವರ್ಗಗಳ ದಬ್ಬಾಳಿಕೆಯ ನಾಲಿಗೆ ಎಂಬ ಕತ್ತಿಗೆ ಹೆದರಿ ಕಾಲಗರ್ಭದಡಿಯಲ್ಲಿ ಹೂತು ಹೋಗುತ್ತಿರುವ ಜನತೆಯನ್ನು ಮೇಲೆತ್ತಿ ನಾಲಿಗೆ, ಮಾತು, ಧೈರ್ಯ ತುಂಬಿ ಪ್ರತಿಭಟಿಸಲು ಹೊರಟ ಸಾಹಿತ್ಯ ಮಾರ್ಗದಲ್ಲಿ ಸಾಗುತ್ತಿರುವ ನಾಗರಾಜ್ ಸ್ನೇಹಿತ ಕಬೀರನು ನಕ್ಸಲನೆಂದೋ ಎಂಬ ಅನುಮಾನದಿಂದ ಗುಂಡಿಗೆ ಬಲಿಯಾದಾಗ ತಮ್ಮೊಡಲಲ್ಲಿ ಎದ್ದ ಬಾವನಾ ತರಂಗಗಳನ್ನು ಕಾವ್ಯದ ರೂಪದಲ್ಲಿ ಪಡಿಮೂಡಿವೆ. ನಾವು ಮಾನವರು ನಮ್ಮೆಲ್ಲಾ ಧಮನಿಗಳಲ್ಲಿ ಹರಿಯುವ ರಕ್ತದ್ವರ್ಣ ಒಂದೇ. ಆದರೆ ಜಾತಿ, ಉಪಜಾತಿ, ಧರ್ಮ ಗೋಡೆಗಳ ಕಂದಕಗಳನ್ನು ಸೃಷ್ಟಿಸಿಕೊಂಡು ವೈಷಮ್ಯದ ಉಸಿರಾಡುತ್ತಿದ್ದೇವೆ. ಆದರಿಲ್ಲಿ ಕಬೀರ, ನಾಗರಾಜ್ ಪರಧರ್ಮಿಯರೆಂಬ ಭಾವ ಮೂಡುವುದಿಲ್ಲ, ಮಾನವೀಯತೆ ಅರಳುವುದನ್ನು ಕಾಣುತ್ತೇವೆ. ಇನ್ನೊಬ್ಬರ ಒಳಿತಿಗಾಗಿ ತಮ್ಮ ತಾಯಿಗೆ ಚೌಡಿಗೆ ಹರಕೆ ಹೊರುವುದರ ಮೂಲಕ ಹೃದಯ ವೈಶಾಲ್ಯತೆ ಮೆರೆಯುವುದನ್ನು ಕಾಣುತ್ತೇವೆ.
ಆಸ್ಪತ್ರೆಯ ಹೆರಿಗೆ ಕೋಣೆಯ
ಪ್ರತಿ ಅವ್ವಂದಿರ ಚೀರಾಟ ಕೇಳಿದಾಗ ನನ್ನವ್ವ ನೆನಪಾಗುತ್ತಾಳೆ....
[ಅವ್ವ ಎಂದರೆ ಜೀವ ಜಲ]
ಈ ಕವಿತೆಯನ್ನು ನಾಗರಾಜ್‍ರವರು ತಾಯಿಯ ಮಾತೃವಾತ್ಸಲ್ಯವನ್ನು ನೆನೆಯುವ ರೀತಿ ಅಮೋಘವಾದುದು. ಒಬ್ಬ ತಾಯಿ ಹೆರಿಗೆ ಸಂದರ್ಭದಲ್ಲಿ ಪಡುವ ಯಾತನೆ, ಸಂಕಟಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ವರ್ಣಭೇದ ನೀತಿಯ ಬಗ್ಗೆ ಹೋರಾಟ ನಡೆಸಿ, ಸಾಧಿಸಿ ತೋರಿಸಿದ ಛಲಗಾರ ನೆಲ್ಸನ್ ಮಂಡೇಲಾ ಕುರಿತು ಬರೆಯುವಾಗ ಅವರ ಆದರ್ಶಗಳನ್ನು ಹೊಳಪಾಗಿಸುತ್ತಾ
ನನ್ನ ಜನಗಳಿಗೀಗ
ಬಣ್ಣದ ಭಯವಿಲ್ಲ
ಕಪ್ಪು ಈಗ ಗಟ್ಟಿತನದ ಸಂಕೇತ
ಎಂದು ದಮನಿತರ ಪರವಾಗಿ ನಿಲ್ಲುವ ಭಾವ ಪ್ರತಿಧ್ವನಿಸಿದೆ.
ನೀವು ನಿದ್ರೆಗೆ ಜಾರಿದ್ದೀರಿ
ನಮ್ಮಗಳ ಮುಖ ಕಪ್ಪುಗಟ್ಟುತ್ತಿದೆ..
[ಮುಖ ಕಪ್ಪುಗಟ್ಟುತ್ತಿದೆ ಮಂಡೇಲಾ]
ಅಂತಹ ಒಬ್ಬ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡ ನಾವೀಗ ಕಪ್ಪಾಗಿದ್ದೇವೆ ಎನ್ನುವಲ್ಲಿ ಬಾಹ್ಯ ಬಣ್ಣಕ್ಕಿಂತಲೂ ಆಂತರಿಕ ವರ್ಣಕ್ಕೆ, ಮಾನವೀಯ ಮೌಲ್ಯಗಳಿಗೆ ಜೀವತುಂಬಿರುವುದನ್ನು ಕಾಣುತ್ತೇವೆ.
ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ವೈಚಾರಿಕತೆ ಎಷ್ಟೇ ಬೆಳೆದಿದ್ದರೂ ಜಾತಿ-ವ್ಯವಸ್ಥೆ ಮಾತ್ರ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ದುರಂತ. ಜಾತಿಪದ್ದತಿಯಿಂದ ಸಾಮಾಜಿಕ ಅಸಮಾನತೆ ಏರ್ಪಟ್ಟು ಮನಸ್ಸುಗಳು ಹೇಗೆ ಛಿದ್ರಗೊಳ್ಳುತ್ತವೆ ಎಂಬುದು ಅರಿವಾಗದಿರದು.
ಅಂದು ಅಗ್ರಹಾರದ ಬೀದಿ, ದೀಪಗಳು ಬೆಳಗಿದ್ದವು
ಶ್ಲೋಕಗಳು ಶುರುವಾಗಿದ್ದವು
ಬ್ರಾಹ್ಮಣನೊಬ್ಬ
ಸ್ನಾನ ಮುಗಿಸಿ ಪಠಿಸುತ್ತಾ ಹೊರಬಂದ
ನನ್ನ ನೋಡಿದವನೇ
ಬೆಳ್ಳಂಬೆಳಗ್ಗೆ ಪ್ರಾರಬ್ದ, ಸಿಂಡರಿಸಿದ
ಮುಖ ತಗ್ಗಿಸಿಕೊಂಡು ನಿಂತೆ
ಆತ ಇಟ್ಟಿದ್ದ ಕಸದ
ಬುಟ್ಟಿಯನ್ನು ಟ್ರ್ಯಾಕ್ಟರ್ಗೆ ಎಸೆದೆ
ಕಸದ ಮಧ್ಯೆ ಹೆಂಡದ ಖಾಲಿ ಬಾಟಲಿಗಳು ಬಿದ್ದಿದ್ದವು.
[ನಾನು ಜಗದ ಜಾಡಮಾಲಿ]
ಇಲ್ಲಿನ ಪದ್ಯಗಳು ಸಹಜವಾಗಿ ಎಲ್ಲರಿಗೂ ಸರಳವಾಗಿ ಅರ್ಥವಾಗಿಬಿಡುತ್ತವೆ. ಮೇಲ್ಜಾತಿ ಒಬ್ಬ ಬ್ರಾಹ್ಮಣ ಒಬ್ಬ ಕೆಳಜಾತಿಯವನನ್ನು ಕಂಡಾಗ ಸಿಂಡರಿಸುವನು ಆದರೆ ರಾತ್ರಿಯಿಡೀ ಕುಡಿದು ತೂರಾಡಿ, ಬೆಳಗ್ಗೆ ಬಾಟಲಿ ಬಿಸಾಡುವ ಸನ್ನಿವೇಶ ಬಿಂದಿಗೆಯಲ್ಲಿ ಶರಾಬು ತುಂಬಿ ಮೇಲೆ ಉಜ್ಜಿ ಉಜ್ಜಿ ತೊಳೆದು ಹೊಳೆಯುವಂತೆ ಮಾಡುವ ಘಟನೆ ನೆನಪಿಗೆ ತಂತು. ಒಳಗೆ ಕೊಳಕು ತುಂಬಿದ್ದರೂ ಮೇಲ್ವರ್ಗದವರ ಬಡಿವಾರ ಈ ಪಂಕ್ತಿಯಲ್ಲಿ ಅರಿವಾಗದಿರದು.
ದೇವರು ನಮ್ಮ ಹುಟ್ಟಿಸಿರುವನು ಎಂಬ ಮಿಥ್ಯಕ್ಕಿಂತಲೂ ನಾವೇ ದೇವರುಗಳನ್ನು ಸೃಷ್ಠಿಸಿದ್ದೇವೆ. ಗುಡಿ, ಚರ್ಚ್, ಮಸೀದಿಗಳನ್ನು ಕಟ್ಟಿದ್ದೇವೆ, ಮೂರ್ತಿಗಳನ್ನು ಕೆತ್ತ್ಟಿದ್ದೇವೆ, ಸ್ಥಾಪಿಸಿ ಪೂಜಿಸಿದ್ದೇವೆ. ಆದರೆ ಅಂತಹ ದೇವರ ಗುಡಿಗೆ ಪ್ರವೇಶ ನಿರ್ಬಂಧವಾದಾಗ..
ಇದೇ ಕಲ್ಲಿನ ದೇವರಿಗೆ ಅಲ್ಲವಾ
ತೋರಣ ಕಟ್ಟಿದ್ದು
ಅದೆಷ್ಟು ಮಣ್ಣು ಹೊತ್ತೆವು, ಇಟ್ಟಿಗೆ ಕೂಯ್ದೆವು
ಗುಡಿ ಕಟ್ಟಲು....
ಆ ದಿನ ಗುಡಿಗೆ ಕಾಲಿಟ್ಟ ಘಳಿಗೆ
ಜೀವಂತ ಸತ್ತು ಹೋದೆವು ದೇವರೆ
ಊರಿನ ಅದೆಷ್ಟು ಜನ ಕಣ್ಣೀರಿಟ್ಟರು ನಿನ್ನ ಮುಂದೆ!
ನಮ್ಮವರು ಸತ್ತಾಗಲೂ, ಅಷ್ಟು ಕಣ್ಣೀರು ಸುರಿಸಿದ್ದು ನಾ ನೋಡಿಲ್ಲ....
[ಜಗತ್ತೇ ಕೊಚ್ಚಿಕೊಂಡು ಹೋಗುವ ಕಣ್ಣೀರು ಬರಿಸು ದೇವರೆ?]
ನಾಗರಾಜ್‍ರವರು ಈ ಕಾವ್ಯವನ್ನು ಬರೆದದ್ದು ಬಹುಶಃ ಹಾಸನದ ಗಂಗೂರಿನಲ್ಲಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧ ಹೇರಿದಾಗ. ಈ ಅಮಾನವೀಯ ಘಟನೆಯನ್ನು ಖಂಡಿಸಿ, ಅದೇ ಗುಡಿಯನ್ನು ನಿರ್ಮಿಸಲು ಬೇಕಾದ ಇಟ್ಟಿಗೆ ಕೂಯ್ದಿದ್ದು, ಕಟ್ಟಡ ನಿರ್ಮಿಸಿದ್ದು, ಶ್ರಮಿಸಿದ ವ್ಯಕ್ತಿಗಳಿಗೆ ಮೂರ್ತಿ ಸ್ಥಾಪನೆಯ ನಂತರ ಅದೇ ದಲಿತರಿಗೆ ನಿರ್ಬಂಧ ಹೇರುವುದು ಎಷ್ಟು ಸರಿ?. ಇಡೀ ಊರಿಗೆ ಅಪವಿತ್ರವಾದಂತೆ ಭಾಸವಾಗಿ ಶೋಷಣೆ ಸ್ಪೋಟಗೊಂಡಿರುವುದನ್ನು ದೇವರಲ್ಲಿಯೇ ಪ್ರಶ್ನಿಸುವ ಕವಿಯ ಭಾವ ಸೊಗಸಾಗಿದೆ.
ನಾಗರಾಜ್‍ರವರು ಸಮಾಜವನ್ನು ಶೋಷಣಾ ರಹಿತವಾಗಿ ಕಾಣಲು ಬಯಸುತ್ತಾರೆ. ಇವರ ಕವಿತೆಗಳಲ್ಲಿ ಜೀತ ಪದ್ದತಿಯೂ ವ್ಯಕ್ತವಾಗಿರುವುದನ್ನು ಕಾಣುತ್ತೇವೆ.
ನಮ್ಮಜ್ಜ ದನ ಕಾಯುತ್ತಿದ್ದರಂತೆ
ಗೋವು ದೇವರೆಂದಲ್ಲ
ಅವರಜ್ಜ ಮಾಡಿದ ಕುಲುವಾಡಿಕೆÀಯಿಂದ
ನಮ್ಮಜ್ಜಿÀ ಸಗಣಿ ಬಾಚುತ್ತಿದ್ದಳಂತೆ
ಗೋವಿನ ಸಗಣಿ ಪವಿತ್ರ ಎಂದಲ್ಲ
ಅವರಜ್ಜಿ ಸಗಣಿ ಬಾಚಿದ ನೆನಪಾಗಿ
ಎರಡು ರೊಟ್ಟಿ, ಹಿಡಿ ಅನ್ನಕ್ಕಾಗಿ....
[ನಾವು ಹುಲ್ಲು ಮೇಯುತ್ತೇವೆ ರಕ್ತವನ್ನಲ್ಲ]
ಇಲ್ಲಿನ ಎಲ್ಲಾ ಕವಿತೆಗಳಲ್ಲಿ ಬಂಡಾಯದ ಧ್ವನಿ ಮೊಳೆದಿರುವುದನ್ನು ಕಾಣುತ್ತೇವೆ. ನಾಗರಾಜ್‍ರವರು ಸಾಮಾಜಿಕ ತಲ್ಲಣಗಳನ್ನು, ಶೋಷಣೆಗಳನ್ನು ನೇರಮಾತುಗಳಲ್ಲಿ ಒಡಮೂಡಿಸಿದ್ದಾರೆ. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ್‍ರವರು ದಮನಿತರ, ತುಳಿತಕ್ಕೊಳಗಾದವರ ಧ್ವನಿಯಾಗಿ ಕಾವ್ಯ ಕುಂಚದಲ್ಲರಳಿದ್ದಾರೆ. ಇವರ ಕವಿತೆಗಳಲ್ಲಿ ಮಾನವೀಯ ಮೌಲ್ಯಗಳ ಝೇಂಕಾರವಿದೆ. ಉಳ್ಳವರ ದರ್ಪಕ್ಕೆ ದಿಕ್ಕಾರವಿದೆ. ಶೋಷಿತರಿಗೆ ಸಾಂತ್ವಾನವಿದೆ. ಇಲ್ಲಿನ ಬಹುತೇಕ ಪದ್ಯಗಳು ಗದ್ಯದ ತೆರನಾಗಿವೆ. ಭಾಷೆಯ ಬಳಕೆ, ಪದ ಬಳಕೆ ಇನ್ನೂ ಸ್ವಲ್ಪ ಪುಷ್ಠಿದಾಯಕವಾದರೆ ಕಾವ್ಯ ಮನೋಹರವಾಗುತ್ತದೆ. ಗೆಳೆಯ ನಾಗರಾಜ್ ನೇರನುಡಿಯ ವ್ಯಕ್ತಿ ಅನ್ನಿಸಿದಂತೆಯೇ ಬರೆದಿದ್ದಾರೆ. ಆದರೆ ಕಾವ್ಯದ ಶೀರ್ಷಿಕೆಗಳು ಸ್ವಲ್ಪ ಉದ್ದವಾದವೇನೋ ಅನ್ನಿಸಿತು. ಅವುಗಳನ್ನು ಸಂಕ್ಷೀಪ್ತಗೊಳಿಸಬಹುದಿತ್ತು. ಒಟ್ಟಾರೆ ಹೇಳುವುದಾದರೆ ಪ್ರಸ್ತುತ ಸಮಾಜದ ಕನ್ನಡಿಯಂತೆ ಇಲ್ಲಿನ ಕವಿತೆಗಳು ಕಾಣುತ್ತವೆ. ಇವರ ಅನೇಕ ಕವಿತೆಗಳನ್ನು ನಾನು ಫೇಸ್‍ಬುಕ್‍ನಲ್ಲಯೇ ಓದಿದ್ದೇನೆ, ಪ್ರತಿಕ್ರಿಯಿಸಿದ್ದೇನೆ. ಅವುಗಳೀಗ ಪುಸ್ತಕದ ರೂಪದಲ್ಲಿ ಬಂರಿರುವುದು ಸ್ವಾಗತಾರ್ಹ. ಬಂಡಾಯದ ಧ್ವನಿಗಳು ಕ್ಷೀಣಿಸಿದವೇನೋ ಅನ್ನುವ ಸಂದರ್ಭದಲ್ಲಿ ನಾಗರಾಜ್‍ರವರು ನಮ್ಮೆದುರಿಗೆ ಭರವಸೆಯ ಬೆಳಕಿನಂತೆ ನಿಂತಿದ್ದಾರೆ. ಅವರ ಮನೋವಾಂಛಲ್ಯ ಇನ್ನಷ್ಟು ಸಧೃಡಗೊಳ್ಳಲಿ, ಉತ್ತಮೋತ್ತಮ ಕವಿತೆಗಳು ಅವರ ಲೇಖನಿಯಿಂದ ಮೂಡಿಬರಲಿ, ಧೀನ ದಲಿತರ, ದಮನಿತರ ಬಾಳಿಗೆ ಬೆಳಕಾಗಲಿ ಎಂದು ಮನಸಾರೆ ಆಶಿಸುತ್ತೇನೆ.


                 ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ 
ಹಾಸನ- 573201
ಮೋ: 9483470794, 9739878197 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ