ವಿಶ್ವಮಟ್ಟದಲ್ಲಿ ಕನ್ನಡ ಸಾಹಿತ್ಯದ ಘನತೆಯನ್ನು ಹೆಚ್ಚಿಸಿದ ಕೀರ್ತಿ ವಚನ ಸಾಹಿತ್ಯದ ವೈಶಿಷ್ಟ್ಯವೆ ಸರಿ. ವಚನ ಎಂದರೆ ಕೇವಲ ಮಾತಲ್ಲ. ಮಾತನ್ನು ಮೀರಿನಿಂತ ಅನುಭಾವಿಕ ಸಂಪತ್ತು. ತಾವು ಸಾಹಿತಿಗಳೆಂಬ ಕಿಂಚಿತ್ ಅರಿವೂ ಇಲ್ಲದ ಅನುಭವಗಳನ್ನು ಅನುಭಾವಿಕ ನೆಲೆಯಲ್ಲಿ ನಿಂತು ಬರೆದ ಅಂತರಾಳದ ಅದ್ಭುತ ಚಿಂತನ ಮಂಥನಗಳು. ಎಂದೆಂದಿಗೂ ಬತ್ತದ ಸೆಲೆಗಳು. ಈ ವಚನಗಳ ಸ್ವರೂಪವನ್ನೆ ಅನುಕರಿಸಿ ಬಂದ ಆಧುನಿಕ ವಚನಗನ್ನು ನಾವಿಂದು ಕಾಣುತ್ತೇವೆ. 12ನೇ ಶತಮಾನದ ವಚನಗಳು ಅಂದಿನ ಸಾಮಾಜಿಕ ಹುಳುಕುಗಳನ್ನು ಎತ್ತಿ ತೋರುತ್ತವೆ. ಅಂತೆಯೆ ಆ ಸಮಸ್ಯೆಗಳಿಗೆ ಪರಿಹಾರವನ್ನು ವಚನಕಾರರು ತಾವು ಬಾಳಿದ ರೀತಿಯಿಂದ ತೋರಿಸಿಕೊಟ್ಟಿದ್ದಾರೆ. ಆಧುನಿಕ ವಚನಗಳು ಕೂಡ ಪ್ರಸ್ತುತದಲ್ಲಿರುವ ಸಾಮಾಜಿಕ ವಿವೆಚನೆಯನ್ನು ಒಳಗೊಂಡಿವೆ.
ನಮ್ಮ ಹಾಸನ ಜಿಲ್ಲೆಯಲ್ಲಿ ಎಸ್.ವಿ. ರಂಗಣ್ಣನವರಿಂದ ಆರಂಭಗೊಂಡಿರುವ ಆಧುನಿಕ ವಚನ ಕ್ಷೇತ್ರಕ್ಕೆ ಹತ್ತು ಹಲವು ಮಂದಿ ತಮ್ಮದೇ ಆದ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಅವರಲ್ಲಿ ಕೊಟ್ರೆಶ್ ಎಸ್.ಉಪ್ಪಾರ್ ಅವರು ಪ್ರಮುಖರು. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಕೊಟ್ರೆಶ್ ಎಸ್.ಉಪ್ಪಾರ್ ಅವರು ನಮ್ಮ ಹಾಸನ ಜಿಲ್ಲೆಯ ಕವಿ ಬಳಗಕ್ಕೊಂದು ಸ್ಪೂರ್ತಿ. ಸಹನೆ, ವಿನಯ, ನಮ್ರತೆ, ಹಿರಿಯರ ಬಗ್ಗೆ ಗೌರವಾದರದ ಗುಣ ಹೊಂದಿರುವ ಕೊಟ್ರೆಶ್ ಎಸ್.ಉಪ್ಪಾರ್ ಅವರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ವೈಚಾರಿಕತೆ, ಶೈಕ್ಷಣಿಕ, ವಿಜ್ಞಾನ, ವ್ಯಕ್ತಿ ಚಿತ್ರಣ, ಕಥೆಗಳು ಹೀಗೆ ಹಲವು ವಿಷಯಗಳನ್ನೊಳಗೊಂಡ 24 ಕೃತಿಗಳನ್ನು ಸಾಹಿತ್ಯ ಶ್ರೀದೇವಿಯ ಮಡಿಲಿಗಿಟ್ಟಿದ್ದಾರೆ. ಉಳಿದಂತೆ 10 ಕೃತಿಗಳು ಮುದ್ರಣದ ಹಂತದಲ್ಲಿದ್ದರೆ ಇದೀಗ ವಚನ ಸಾನಿಕ, ಮತ್ತು ವಚ ಮಾಣಿಕ್ಯ ಬಿಡುಗಡೆಯ ಹಂತದಲ್ಲಿವೆ. ಈ ಎರಡು ಕೃತಿಗಳನ್ನು ನನ್ನ ಕೈಗಿಟ್ಟಾಗ ವಚನ ಸಾನಿಕಾದ ಪುಟಗಳನ್ನು ತೆರೆದು ನೋಡಿದೆ. ಸುಂದರ ಮುಖಪುಟವುಳ್ಳ ಈ ಕೃತಿ ನೂರಾ ಒಂದು ಆಧುನಿಕ ವಚನ ಗುಚ್ಚವೆ ಸರಿ. “ಶ್ರ್ರೀಗುರು ಕೊಟ್ಟೂರೇಶ” ಎಂಬುದು ಇವರ ವಚನಗಳ ಅಂಕಿತ.
ನೋವಿನಲಿ ಸಾಂತ್ವನ ಕಾಣುವ
ಭಾವ ಉತ್ತಮವಯ್ಯಾ, ನೊಂದ ಹೃದಯದಲ್ಲಿಯೂ
ಕಾವ್ಯ ಹೊರಹೊಮ್ಮುವುದಯ್ಯ,
ನೋವು ನಲಿವುಗಳೆರಡು
ನಮ್ಮ ನಿತ್ಯ ಜೀವನದ
ಕ್ಷಣದ ಚಕ್ರಗಳು ಕಾಣಾ
ಶ್ರೀ ಗುರು ಕೊಟ್ಟೂರೇಶ
ಬೆಂದು ಬೇಂದ್ರೆಯಾದರು ಎನ್ನುತ್ತಾರೆ. ಕಾವ್ಯವೆಂಬುದು ನಲಿವಿನಲ್ಲಿ ಹೊರಹೊಮ್ಮುವಂತೆ ನೋವಿನಿಂದಲೂ ಭಾವ ಉಕ್ಕುತ್ತವೆ. ನೋವು ಅಂತಿಮವಲ್ಲ. ಅಂತೆಯೆ ನಲಿವು ಕೂಡ ಅಂತಿಮವಲ್ಲ. ಇವೆರಡನ್ನು ಒಳಗೊಂಡ ಮತ್ತೊಂದು ಅದೃಶ್ಯ ಕ್ರಿಯೆಯಿದೆಯಲ್ಲ ಅದೇ ನಿಜವಾದ ಬದುಕು. ಆ ಬದುಕಿಗೆ ಅಂತ:ಸಾಕ್ಷಿ ಮುಖ್ಯ. ಹೃದಯಾಂತರಾಳದಿಂದ ಚಿಮ್ಮಿ ಬಂದ ಭಾವಗಳೆಲ್ಲವು ಅಮೂಲ್ಯವೇ. ಈ ಸ್ವಾಂತನವೆಂಬುದು ಎಷ್ಟೋ ಕಷ್ಟಗಳನ್ನು ನೀಗಬಲ್ಲದು. ಏರುವಾಸೆಗಳಿಲ್ಲ ಬೀಳುವಳುಕಿಲ್ಲ. ಎನ್ನುವ ಬಿ.ಎಂ.ಶ್ರೀಯವರ ಮಾತು ಇಲ್ಲಿ ನೆನಪಾಗುತ್ತದೆ. ಸುಖ-ದುಃಖಗಳೆರಡು ನಮ್ಮ ಜೀವನದ ಕ್ಷಣದ ಚಕ್ರಗಳು ಎಂಬ ಕವಿಯ ಈ ಮಾತು ಸಮಚಿತ್ತತೆಯ ಮೌಲ್ಯವನ್ನು ತೋರುತ್ತಿವೆ. ಆದರೂ ಸಾಂತ್ವಾನವೆಂಬುದು ಬರೀ ನಟನೆಯ ಅಂಶವಾಗಬಾರದು.

ಧರ್ಮ ಸಹಿಷ್ಣುತೆ ಸೂಸಬೇಕಯ್ಯಾ
ಜಗದಲಿ ಇಂಥ ಗುಣ ಸಂತತಿಯ
ದಿನೆ ದಿನೇ ಹೆಚ್ಚಿಸಾ ಪ್ರಭುವೆ.
ಜಾತಿಯೆಂಬ ಪೆಡಂಭೂತ ಒಂದು ಶಾಪದಂತೆ ಸಮಾಜಕ್ಕಂಟಿದೆ. ಜಾತಿ, ಕುಲ, ಧರ್ಮಗಳ ಕಟ್ಟುಕಟ್ಟಳೆಯನ್ನು ದಾಟಿ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯ ಪ್ರೀತಿಯ ಬೆಸುಗೆಯಿರಲೆಂಬ ಹಂಬಲ ಕವಿಯದು. ವಿಶ್ವ ಬಾಂಧವ್ಯದ ಕನಸನ್ನು ಕಾಣುತ್ತಿರುವ ಒಳತೋಟಿ ಇಲ್ಲಿದೆ. ಜಾತಿಗಿಂತ ಗುಣ ಮುಖ್ಯವಲ್ಲವೇ. ಮೇಲು ಕೀಳು ಎಂಬ ಜಾತಿಯನೆ ಕೀಳು ಕೀಳು ಎಂದು ಸಿದ್ದಯ್ಯಪುರಾಣಿಕರು ಹೇಳಿದ್ದಾರೆ.
ಅನ್ಯಾಯ ಅನೀತಿಗಳ
ನಿತ್ಯ ರಾಜ್ಯ ಭಾರವಯ್ಯಾ
ಶೋಷಣೆ, ವಂಚನೆಗಳ
ನಿತ್ಯ ಅಟ್ಟಹಾಸವಯ್ಯಾ......
ಅಧರ್ಮದಾಡಳಿತಕ್ಕೆ
ಶಿರಬಾಗಿದೆ ಜನ-ಮನ
ನಾವೆಲ್ಲರು ಪ್ರಜಾಪ್ರಭುತ್ವದ ನೆರಳಿನಲ್ಲಿದ್ದೇವೆ ನಿಜ. ಆದರೆ ಆ ನೆರಳು ಯಾರಿಗೆ ದಕ್ಕುತ್ತಿದೆ. ಅಧಿಕಾರ ಬಲ, ಹಣಬಲ, ಜನಬಲ ರಾಜಕೀಯ ಬಲಕ್ಕೆ ಸಿಲುಕದ ಶ್ರಮಿಕರ ಬದುಕು ಶೋಷಣೆಗೆ ಒಳಗಾಗುತ್ತಿದೆ. ಇಲ್ಲಿ ವಿಡಂಬನೆಯ ಮೊನಚಿದೆ. ಅನ್ಯಾಯ ಅನೀತಿಯ ಕಾರುಬಾರಿನಲ್ಲಿ ಮಾನವೀಯ ಮೌಲ್ಯಗಳು ನಲುಗುತ್ತಿವೆಯೆಂಬ ಕೊರಗಿದೆ.
“ಮೂರ್ತಿ ಪೂಜೆ ಭಜನೆಗಳು
ತಾತ್ಕಾಲಿಕ ಆನಂದದ ಮಾರ್ಗಗಳಯ್ಯಾ”
ಎಂಬಲ್ಲಿ ಬಾಹ್ಯಾಡಂಬರದ ಪೂಜೆ-ಪುನಸ್ಕಾರ, ವ್ರತ, ನೇಮ, ನಿಷ್ಠೆಗಳು ಶಾಶ್ವತ ಆನಂದಕ್ಕೆ ಆತ್ಮಾನ್ವೇಷಣೆ ಬೇಕು. ಅಂತರಂಗದ ಬೆಳಕಿದ್ದಲ್ಲಿ ಮಾನವತೆ ಮೊಳಗುತ್ತದೆ. ಪ್ರೀತಿ, ದಯೆ ಕರುಣೆಗಳು ಪರಸ್ಪರ ಬದುಕನ್ನು ಗೌರವಿಸಬಲ್ಲವು.
ಬಿದ್ದವರ ಎತ್ತುವ
ಬುದ್ದಿ ನೀಡಯ್ಯಾ

ಶೋಷಿತರ ನೋವಿಗೆ ದನಿಯಾಗಿಸಯ್ಯಾ
ಇಡೀ ಜಗತ್ತೆ ಕಷ್ಟದಲ್ಲಿರುವಾಗ ನಾನೊಬ್ಬ ಸುಖದಿಂದಿರಲು ಹೇಗೆ ಸಾಧ್ಯ...? ಇಲ್ಲಿ ತಾನು ಬದುಕುವುದಷ್ಟೆ ಶ್ರೇಷ್ಠವಲ್ಲ. ಕಷ್ಟ ಸುಖಗಳನ್ನು ಅನುಭವಿಸುವುದರಲ್ಲಿ ಮನುಕುಲದ ಸಾರ್ಥಕತೆಯಿದೆ. ಬದುಕಿ ಬದುಕಿಸುವ ಕಲೆಯನ್ನು ಹುರಿದುಂಬಿಸುವ ಈ ವಚನ ಬಹಳ ಮಹತ್ವವಾದುದು. ‘ಬಳಲಿದವರ ಬಾಯಿಗೆ ನೀರಾಗಿಸಯ್ಯಾ’ ಈ ಸಾಲು ಬಹು ಎತ್ತರದ ಆಲೋಚನೆಯುಳ್ಳದ್ದು. ನೀರು ಜೀವಂತಿಕೆಯ ಮೂಲ. ತಂಪು ಬದುಕಿಗೆ ಸಾಕ್ಷಿ. ದೇಹ ಮನಸ್ಸಿನ ಸ್ವಾಸ್ಥ್ಯಕ್ಕೆ ನೀರು ಬೇಕೆ ಬೇಕು. ನೀರಿಲ್ಲದೆ ಜಗವಿಲ್ಲ. ನೀರಡಿಕೆಯನ್ನು ನೀಗಲು ನೀರಿನಿಂದಲೇ ಸಾಧ್ಯ. ಈ ಲೋಕದಲ್ಲಿ ಬದುಕಿರುವವರ ಜೊತೆ ಜೊತೆಯಲಿ ಬಳಲಿದವರು ಇದ್ದಾರೆ. ಜೀವಂತಿಕೆಯಿಂದ ನಳನಳಿಸುತ್ತಿರುವವರು ಬಳಲಿದವರ ಬಾಯಿಗೆ ತಂಪಾಗಬೇಕೆ ವಿನಃ ಬಳಲಿದವರ ಬಾಳನ್ನು ಬೆಂಡಾಗಿಸಬಾರದು. ತಂಪೆರೆಯುವ ಮನೋಭಾವ ಮೂಡುವುದು ಹೃದಯವೈಶಾಲ್ಯವಿದ್ದವರಲ್ಲಿ ಮಾತ್ರ. ಅಂತಹ ಮನೋವೈಶಾಲ್ಯ ಬೆಳೆಯಬೇಕಾದರೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಬೆಳಕು ಕತ್ತಲನ್ನು ದೂಡಬಹುದು.
ದುಂಭಿ ಪ್ರತಿ ಕುಸುಮದಿಂದ
ಮಕರಂದ ಹೀರುವಂತೆ
ಜ್ಞಾನಿಯಾದವನು ಪ್ರತಿಯೊಬ್ಬನಿಂದಲೂ
ಒಂದೊಂದ ಕಲಿಯುತ್ತಾನೆ
ಈ ವಚನ ಜ್ಞಾನ ಗಳಿಕೆಯ ಮಾರ್ಗವನ್ನು ತಿಳಿಸುತ್ತದೆ. ಕಲಿಕೆಗೆ ಇತಿಮಿತಿಯಿಲ್ಲ. ಈ ಲೋಕವೆ ಅನುಭವದ ಆಗರ. ಎಲ್ಲರಲ್ಲೂ ಗುರುತ್ವವಿರುತ್ತದೆ. ಆ ಗುರುತ್ವದೊಳಗೆ ಜ್ಞಾನವನ್ನು ಬಗೆದು ನೋಡುವ ತಾಳ್ಮೆ ಬೇಕಷ್ಟೆ. ಆಗ ಮಾತ್ರ ಸರ್ವಜ್ಞ ಹೇಳುವಂತೆ ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯದ ಪರ್ವತವೆ ಆಗಲು ಸಾಧ್ಯವಾದೀತು.
ಹೀಗೆ ಇವರ ವಚನಗಳಲ್ಲಿ ಕಾವ್ಯದ ಸೊಗಡಿದೆ. ಸಂವಾದಿತ ಸ್ವರೂಪದ ವಚನಗಳನ್ನು ಬಹುಮಟ್ಟಿಗೆ ಕಾಣುತ್ತೇವೆ. ಸರ್ವರ ಒಳಿತಿನ ಜೀವನ ಪರ ಧ್ವನಿಯು ಇಲ್ಲಿದೆ. ಆಚಾರ-ವಿಚಾರಗಳ ಮಂಥನವಿದೆ. ವರ್ತಮಾನದ ವಿವಿಧ ಮುಖಗಳನ್ನು ಇಲ್ಲಿಯ ಆಧುನಿಕ ವಚನಗಳು ದರ್ಶನ ಮಾಡಿಸುತ್ತವೆ. ಸಮಕಾಲೀನ ಜೀವನ ಚಿತ್ರಣವಿದೆ.
ಸಾಂಪ್ರದಾಯಿಕ ವಚನ ಸಾಹಿತ್ಯದಿಂದ ಪ್ರಭಾವಿತರಾಗಿರುವ ಕೊಟ್ರೇಶ್ ಅವರ ಆಧುನಿಕ ವಚನಗಳಲ್ಲಿ ಅಂತರಂಗ ಶುದ್ಧಿಯ ಹಂಬಲಿಕೆಯಿದೆ. ಇವರು ತಮ್ಮ ಅನೇಕ ವಚನಗಳಲ್ಲಿ ರೂಪಕಗಳನ್ನು ಸಮರ್ಥವಾಗಿ ಬಳಸಿದ್ದಾರೆ. ಕಿರಿದರಲ್ಲಿ ಹಿರಿಯರ್ಥ ನೀಡುವ ಇವರ ವಚನ ಸಾನಿಕ ಒಳ್ಳೆಯ ಕೃತಿ. ಪದಬಂಧÀಗಳ ಕಡೆ ಕವಿಮನ ಇನ್ನೂ ಹೆಚ್ಚು ವಾಲಲಿ. ಇವರಿಂದ ಇನ್ನೂ ಹೆಚ್ಚು ಸಾಹಿತ್ಯ ಕೃಷಿ ಸಾಗುತ್ತಿರಲಿ.
ಸುಶೀಲಾ ಸೋಮಶೇಖರ್, ಹಾಸನ
ಮೊ-9448997084
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ