ಶನಿವಾರ, ಸೆಪ್ಟೆಂಬರ್ 20, 2014

ಕನ್ನಡ ‘ಕೀರ್ತನಾಚಾರ್ಯ’-ಬೇಲೂರು ಕೇಶವದಾಸರು- ಕೊಟ್ರೆಶ್ ಎಸ್. ಉಪ್ಪಾರ್,ಆಲೂರು


  ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಮುಖ ಘಟ್ಟ. ತಾವು ಹರಿದಾಸರೆಂದು ಕರೆದುಕೊಂಡವರು, ದೇವರ ಸೆÉೀವಕರೆಂದು ಭಾವಿಸಿದವರು ರಚಿಸಿದ ಸಾಹಿತ್ಯವೇ ದಾಸ ಸಾಹಿತ್ಯ.
  ಇದನ್ನು 13ನೆಯ ಶತಮಾನದಲ್ಲಿ ನರಹರಿ ತೀರ್ಥರು ಪ್ರಾರಂಭಿಸಿದರೆಂದು ಕಲ್ಪಿಸಿಕೊಳ್ಳಲಾಗಿದೆ. ತದನಂತರ ಶ್ರೀಪಾದರಾಜರು, ವ್ಯಾಸರಾಯರು ಇದರ ಘನತೆಯನ್ನು ಹೆಚ್ಚಿಸಿದರು. ದಾಸ ಶೇಷ್ಠರೆನಿಸಿಕೊಂಡ ಪುರಂದರ ದಾಸ ಮತ್ತು ಕನಕ ದಾಸರು ಗುರುಗಳಾದ ವ್ಯಾಸರಾಯರ ಮಾರ್ಗದರ್ಶನದಲ್ಲಿ ಈ ಸಾಹಿತ್ಯ ಪ್ರಕಾರವನ್ನು ಉನ್ನತ ಶಿಖರಕ್ಕೇರಿಸಿದರು.
    ವಾದಿರಾಜ, ವೈಕುಂಟದಾಸ, ಪ್ರಸನ್ನ ವೆಂಕಟದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥ ದಾಸ ಮೊದಲಾಗಿ ಅನೇಕರು ದಾಸ ಸಾಹಿತ್ಯವನ್ನು ರಚಿಸಿದರು ಹಾಗೂ ಬೆಳೆಸಿದರು. ಅಂತಹವರ ಸಾಲಿನಲ್ಲಿ ಬೇಲೂರು ಕೇಶವದಾಸರು ಪ್ರಮುಖವಾಗಿ ನಮ್ಮೆದುರಿಗೆ ನಿಲ್ಲುತ್ತಾರೆ.
   ಶ್ರೀಯುತರು ಸು 1807 ರಲ್ಲಿ ಬೇಲೂರಿನ ಶ್ರೀ ವೆಂಕಟಸುಬ್ಬುದಾಸÀರ ಸುಪುತ್ರರಾಗಿ ಜನಿಸಿದರು. ಚಿಕ್ಕಂದಿನಿಂದಲೆ ಉತ್ತಮ ಸಂಸ್ಕಾರದೊಂದಿಗೆ ಬೆಳೆದ ಕೇಶವದಾಸರು ಕೀರ್ತನ ಕ್ಷೇತ್ರದತ್ತ ಮನಹೊರಳಿಸಿ ಶ್ರದ್ಧಾಸಕ್ತಿಯಿಂದ ಕಾಯಕಗೈದವರು. ಕನ್ನಡ ಕೀರ್ತನ ಕ್ಷೇತ್ರಕ್ಕೆ ತಮ್ಮದೇ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನಾದ್ಯಾಂತ ಕಾಲು ನಡಿಗೆಯಲ್ಲಿಯೇ ಸಂಚರಿಸಿ, ಕೀರ್ತನೆಗಳ ಹಾಡುತ್ತಾ ಜನ ಸಾಮಾನ್ಯರಿಗೆ ಜ್ಞಾನದ ತಿರುಳ ಉಣಬಡಿಸುತ್ತಾ ನಡೆದಾಡುವ ಜ್ಞಾನಕೋಶದಂತೆ ಪಸರಿಸಿದರು.
   ಆದ್ದರಿಂದಲೇ ‘ಕೀರ್ತನಾಚಾರ್ಯ’ ಎಂಬ ಪ್ರಶಸ್ತಿಗೆ ಭಾಜನರಾದರು. ‘ಕರ್ನಾಟಕ ಭಕ್ತ ವಿಜಯ’ ಎರಡು ಭಾಗಗಳಲ್ಲಿ ಬಂದ ಕೇಶವ ದಾಸರ ಅತ್ಯಮೂಲ್ಯವಾದ ಕೃತಿ. ಕರ್ನಾಟಕದಲ್ಲಿ ಬಾಳಿ ಬದುಕಿದ ದಾಸರು, ಅವರ ಸಾಹಿತ್ಯ, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ. ಇದು ಸುಮಾರು 680 ಪುಟಗಳ ಬೃಹತ್ ಕೃತಿಯಾಗಿದೆ. ಇವರ ಮರಣಾನಂತರ ಈ ಕೃತಿಯು 1937ರಲ್ಲಿ ಪ್ರಥಮ ಮುದ್ರಣವಾಗಿ ಬಂದಿದ್ದು. ನಂತರ 1967ರಲ್ಲಿ ಪುನರ್‍ಮುದ್ರಣಗೊಂಡಿದೆ.
    ಕೀರ್ತನ ಸಾಹಿತ್ಯರೆಂದೇ ಖ್ಯಾತಿ ಪಡೆದಿದ್ದ ಬೇಲೂರಿನ ಹರಿಕಥಾ ವಿದ್ವಾನ್ ಉಪಾಧ್ಯಕೃಷ್ಣಮೂರ್ತಿಗಳು ಕೇಶವದಾಸರನ್ನು ಕುರಿತು ಈ ರಿತಿ ಹೆಳಿದ್ದಾರೆ. “ಶ್ರೀ ಬೇಲೂರು ಕೇಶವದಾಸರು ಬೇಲೂರಿನ ಒಂದು ಅಮೋಘ ‘ಕೀರ್ತನ ರತ್ನ’ ಎಂದರೆ ಅತಿಶಯೋಕ್ತಿಯಲ್ಲ; ಇವರು ಕೀರ್ತನೆಗೆ ನಿಲ್ಲುವ ಠೀವಿ, ಕಥಾ ನಿರೂಪಣೆ ಮಾಡುವಾಗ, ಭಕ್ತಿಯ ಆವೇಶ ಮುನ್ನುಗ್ಗಿ ಬಂದಾಗ ಹನಿಹನಿಯಾಗಿ ಮೈಮರೆಸುವಂತ ವಾಚಾಳತ್ವ, ಜನಾಕರ್ಷಣೆ ಮುಂತಾದವು ಇಂದಿಗೂ ಮರೆಯದಂತಿವೆ”.
   ಕೃಷ್ಣಮೂರ್ತಿಯವರ ಮಾತುಗಳಲ್ಲಿ ಕೇಶವದಾಸರ ವ್ಯಕ್ತಿತ್ವವೇ ರೂಪು ಪಡೆದುಕೊಂಡಿದೆ ಎನ್ನಬಹುದು. ಕೇಶವದಾಸರು ‘ಹರಿದಾಸ ಸಾಹಿತ್ಯ’, ‘ಕನ್ನಿಕಾ ಪುರಾಣ’, ‘ರಾಘವೇಂದ್ರ ವಿಜಯ’ ಮುಂತಾದ ಗ್ರಂಥಗಳನ್ನು ರಚಿಸಿ ಕನ್ನಡಿಗರಿಗೆ ದಾಸ ಸಾಹಿತ್ಯದ ರಸ ಸ್ವಾದಗಳನ್ನು ಉಣಬಡಿಸಿದ್ದಾರೆ.
  ಇವರನ್ನು ಒಳಗೊಂಡಂತೆ ಹರಿದಾಸರೆಲ್ಲ ದ್ವೈತ ಮತಸ್ಥಾಪನಾಚಾರ್ಯರಾದ ಮಧ್ವಾಚಾರ್ಯರ ಅನುಯಾಯಿಗಳು. ಹರಿಯೇ ಸರ್ವೋತ್ತಮ ಎಂದು ನಂಬಿದವರು. ಭಕ್ತಿ ಮಾರ್ಗವನ್ನು ಬೋಧಿಸಿದವರು. “ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವು” ಎಂದು ದಾಸರು ಹಾಡಿದರು. ತರ್ಕ ತಿಳಿಯದ ತಪಸ್ಸು ಮಾಡಲಾರೆ, ಜ್ಞಾನ ಮಾರ್ಗ ತಿಳಿಯದು ಎಂದೆಲ್ಲ ಚಿಂತಿಸಬೇಕಾಗಿಲ್ಲ ಶ್ರೀಹರಿಯಲ್ಲಿ ಮನಸ್ಸನ್ನು ನಿಲ್ಲಿಸಿದರೆ, ಭಕ್ತಿಯಿಂದ ಧ್ಯಾನ ಮಾಡಿದರೆ ಮುಕ್ತಿ ಲಭ್ಯವಾಗುವುದು ಎಂದು ಬೋಧಿಸಿದರು.
    ಬೇಲೂರಿನ ಕೇಶವದಾಸರು ಸಹ ಅಂತೆಯೇ ಬದುಕಿ ಬಾಳಿದವರು. ಇವರು ಕೀರ್ತನಾ ಸಾಹಿತ್ಯಕ್ಕಷ್ಟೆ ಮೀಸಲಾಗಿರದೇ ಸ್ವತ: ತಬಲ ನುಡಿಸುವುದರಲ್ಲಿ ಪ್ರಾವಿಣ್ಯಹೊಂದಿದ್ದರು. ಆದ್ದರಿಂಧಲೇ ಇವರಿಗೆ ‘ತಾಳಬ್ರಹ್ಮ’ ಎಂಬ ಬಿರುದು ಸಹ ಅನ್ವರ್ಥವಾಗಿ ಬಂದಿತ್ತು.
    ಕೀರ್ತನಾಕಾರರು ಸಹಜವಾಗಿಯೇ ಬಹುಭಾಷಾ ಪಾಂಡಿತ್ಯ ಹೊಂದಿದ್ದರೆನ್ನಬಹುದು. ಏಕೆಂದರೆ ಸಂಸ್ಕøತದಲ್ಲಿದ್ದ ಅನೇಕ ಅಂಶಗಳನ್ನು ಸರಳವಾಗಿ ಕನ್ನಡಿಕರಿಸಿದ್ದಾರೆ. ದಾಸರೆಲ್ಲರೂ ಮಹಾವಿದ್ವಾಂಸರಾಗಿದ್ದರು. ಹಿಂದೂಗಳ ಧರ್ಮಗ್ರಂಥಗಳೆಲ್ಲ ಸಂಸ್ಕøತದಲ್ಲಿದ್ದವು. ವೇದಗಳು, ಉಪನಿಷತ್ತುಗಳು, ಭಗವದ್ಗೀತೆ ಎಲ್ಲ ಸಂಸ್ಕøತ ಗ್ರಂಥಗಳು. ಸಂಸ್ಕøತ ಬಾರದ ಜನ ತಮ್ಮ ಧರ್ಮದ ಮೂಲಗಳಿಂದ ದೂರ ಉಳಿಯುವ ಸ್ಥಿತಿಯಲ್ಲಿದ್ದಾಗ ಶರಣರು ‘ವಚನ ಸಾಹಿತ್ಯ’ದ ಮೂಲಕ ಜೀವ ತುಂಬಿದಂತೆ ಮುಂದೆ ದಾಸರು ಕೀರ್ತನೆಗಳ ಮೂಲಕ ಸರಳವಾದ ಕನ್ನಡದಲ್ಲಿ ನಿರೂಪಿಸಿದರು.
   ಸಂಸ್ಕøತ ಹಾಗೂ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಸಾಧಿಸಿದ್ದ ಕೇಶವದಾಸರು ಕೀರ್ತನೆ ಮಾಡುವಾಗ ನಾನಾ ಭಾಷೆಗಳ ಪ್ರಯೋಗದಿಂದ ಎಲ್ಲಾ ವರ್ಗದವರನ್ನು ಆಕರ್ಷಿಸುವಲ್ಲಿ ಸಫಲರಗುತ್ತಿದ್ದರೆಂದು ಒಂದು ಕಡೆ ಪಂಡಿತ ಸ್ವಾಮಿಗೌಡ ಹೇಳುತ್ತಾರೆ.
ಇನ್ನೊಂದು ಕಡೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಹೀಗೆ ಹೇಳಿದ್ದಾರೆ-“ದಾಸ ಸಾಹಿತ್ಯದಲ್ಲಿ ಈ ಜಗತ್ತಿನ ಬದುಕನ್ನು ಕಾಣುವ ರೀತಿ ಆಧುನಿಕ ಮನಸ್ಸಿಗೆ ಹಿಡಿಸದೇ ಹೋಗಬಹುದು. ಆದರೆ ಅವರು ಡಂಭಾಚಾರವನ್ನು, ಕಪಟತನವನ್ನು ಖಂಡಿಸಿದ್ದು, ಮನುಷ್ಯನ ಬದುಕು ಶುಭ್ರವಾಗಿರಬೇಕು ಎಂದದ್ದು ಎಂದಿಗೂ ಸಲ್ಲುವ ಉಪದೇಶ. ಜೊತೆಗೆ ಅವರು ಕೃಷ್ಣನನ್ನು ವರ್ಣಿಸುವ ರೀತಿ, ಅವನೊಡನೆ ಅವರ ಸಲಿಗೆ-ಹಾಸ್ಯ-ಆಕ್ಷೇಪಣೆ ಇವೆಲ್ಲ ಅವರ ಕೀರ್ತನೆಗಳಿಗೆ ಮಾನವೀಯ ಲೇಪನವನ್ನು ಕೊಡುತ್ತವೆ.”
ಅಂತೆಯೇ ಕೇಶವದಾಸರು ಸುಸಮಾಜದ ನಿರ್ಮಾಣಕ್ಕಾಗಿ ತಮ್ಮ ಕೀರ್ತನ ಸಾಹಿತ್ಯದ ಮೂಲಕ ಶ್ರಮಿಸಿದ್ದಾರೆ. ತಮ್ಮ ಅತ್ಯುಪಯುಕ್ತ ಗ್ರಂಥಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕೊಟ್ರೆಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ